ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ದಾರ್ಷ್ಟ್ಯ ಬಯಲು: ಶ್ರೀಯುತ ಶೇಖರ್ಪೂರ್ಣರ ಪ್ರತಿಕ್ರಿಯೆ
ಗೆಳೆಯರೆ,
ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ಧೋರಣೆಗೆ ಮತ್ತೊಂದು ಸ್ಪಷ್ಟ ನಿದರ್ಶನ.
http://thatskannada.oneindia.in/news/2006/12/07/citi_bank.html
ಇದಕ್ಕೆ, 'ಕನ್ನಡಸಾಹಿತ್ಯ.ಕಾಂ'ನ ಸಂಸ್ಥಾಪಕರಾದ ಶ್ರೀಯುತ ಶೇಖರ್ಪೂರ್ಣರವರ ಪ್ರತಿಕ್ರಿಯೆ ಇಲ್ಲಿದೆ.
--------------------------ಪ್ರತಿಕ್ರಿಯೆ---------------------------------
ಸ್ನೇಹಿತರೆ,
ಇಂಗ್ಲಿಷ್ ಭಾಷಾ ಒಲವಿನ ಧೋರಣೆ ಪ್ರಾದೇಶಿಕ-ಸ್ಥಳೀಯ ಭಾಷೆಗಳನ್ನು "ನಾನ್-ಫಂಕ್ಷನಲ್" ಮಾಡಲು ಹೊರಟಿವೆ ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳು ದೊರಕುತ್ತವೆ. ಇಂತಹವುಗಳ ವಿರುದ್ಧ ವೈಯಕ್ತಿಕವಾಗಿ ಧ್ವನಿ ಎತ್ತುವುದರಿಂದ ಯಾವುದೇ ಪ್ರಯೋಜನವಂತೂ ಆಗುವುದಿಲ್ಲ- ಅದನ್ನು ಕಿರಿಕಿರಿ ಎಂದೋ, ಗೊಣಗಾಟವೆಂದೋ ಉದಾಸೀನ ಮಾಡಿ ಬಿಡುತ್ತಾರೆ. ದೌರ್ಭಾಗ್ಯದ ಸಂಗತಿ ಎಂದರೆ, ಕನ್ನಡಿಗರೂ ಸಹ "ಇಂಗ್ಲಿಷ್ ಕಾರ್ಯಶೀಲತೆಯನ್ನು" ಒಪ್ಪುವ ಮಟ್ಟಿಗೆ ``ಕನ್ನಡದ ಕಾರ್ಯಶೀಲತೆಯ ಬಗೆಗೆ ಸಂದೇಹಗಳನ್ನು ತೋರಿಸಿಬಿಡುವ ಆತುರಗಾರಿಕೆಯನ್ನು ತೋರಿಸುತ್ತಾ-ಒಮ್ಮೊಮ್ಮೆ ತಮ್ಮ ವಾದವನ್ನು ``ಕನ್ನಡದಿಂದ ಏನೂ ಪ್ರಯೋಜನವಿಲ್ಲ" ಎನ್ನುವ ಮಟ್ಟಕ್ಕೆ ಒಯ್ದುಬಿಡುವುದು. ``ಭಾಷೆಯೊಂದು ಎಲ್ಲ ಕ್ಷೇತ್ರಗಳಲ್ಲಿ ಸ್ವೀಕಾರಾರ್ಹವಾದರೆ'' ಅದಕ್ಕೆ ``ತನ್ನಂತೆ ತಾನೇ ಸಾಂಸ್ಕೃತಿಕ-ಆರ್ಥಿಕವಾದ ಶಕ್ತಿ" ಒದಗಿ ಬಂದು ಬಿಡುತ್ತದೆ. ಇಂತಹ ಶಕ್ತಿ ಕೇವಲ ಸಾಂಘಿಕವಾದ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಅದನ್ನು ಒಂದು ಗಂಭೀರವಾದ ವಿಷಯ ಸೂಚಿಯನ್ನಾಗಿ ಮಾಡಿ ಜನರ ಬೆಂಬಲ ಗಳಿಸುವತ್ತ ಚಟುವಟಿಕೆಗಳನ್ನು ರೂಪಿಸಬೇಕು. ಇಲ್ಲದಿದ್ದರೆ ನಮ್ಮೆಲ್ಲ ಬರವಣಿಗೆ, ಚಟುವಟಿಕೆಗಳು ಕೇವಲ ಕೊರಗಾಗಿ ಮಾತ್ರ ಉಳಿಯುತ್ತದೆ.
ಕಲ್ಯಾಣರಾಮನ್ ಎತ್ತಿರುವ ಪ್ರಶ್ನೆ ಕೇವಲ ಸಿಟಿ ಬ್ಯಾಂಕೊಂದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಎಲ್ಲ ಬ್ಯಾಂಕುಗಳಿಗೂ (ಐಸಿಐಐ, ಹಾಂಗ್ಕಾಂಗ್ ಬ್ಯಾಂಕ್, ಎಸ್ಬಿಐ ಹೀಗೆ ಅನೇಕಾನೇಕ ಬ್ಯಾಂಕುಗಳಿವೆ) ಅನ್ವಯವಾಗುತ್ತದೆ. ಆದುದರಿಂದ ಕನ್ನಡವನ್ನು `ಕಾರ್ಯಶೀಲ ಸಾಧ್ಯತೆಯ (ಫಂಕ್ಷನಲ್) ಭಾಷೆ ಮಾಡಬೇಕಾದ ದೂರದೃಷ್ಟಿಯುಳ್ಳ ಯಾವುದೇ ಸಾಂಘಿಕ ಚಟುವಟಿಕೆಗೆ ಕನ್ನಡಸಾಹಿತ್ಯ.ಕಾಂನ ಬೆಂಬಲವಿದೆ. - ಈ ವಿಷಯವನ್ನು ಕನ್ನಡಸಾಹಿತ್ಯ.ಕಾಂ ಪರವಾಗಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸಾರ್ವಜನಿಕವಾದ ಯಾವುದೇ ವೇದಿಕೆಯಲ್ಲಾದರೂ ಪ್ರಾತಿನಿಧಿಕವಾಗಿ ತಿಳಿಸಬಹುದು.
ಈ ಮೇಲಿನ ಸಂಗತಿಯನ್ನು ಕನ್ನಡಸಾಹಿತ್ಯ.ಕಾಂ ಪರವಾಗಿ ನೀವು ಉಳಿದೆಲ್ಲ ವೇದಿಕೆಗಳಲ್ಲಿ ತಿಳಿಸಿ ಎಂದು ನಿಮ್ಮಲ್ಲಿ ನನ್ನ ಕೋರಿಕೆ.
ಶೇಖರ್ಪೂರ್ಣ
ksctanda@gmail.com