ಇಂದಿಗೂ ಪ್ರಸ್ತುತವಾಗಿರುವ ಬಸವಣ್ಣನವರ ವಚನಗಳು

ಇಂದಿಗೂ ಪ್ರಸ್ತುತವಾಗಿರುವ ಬಸವಣ್ಣನವರ ವಚನಗಳು

ಬರಹ

  (ಇಂದು ಬಸವ ಜಯಂತಿ. ತನ್ನಿಮಿತ್ತ ಈ ಲೇಖನ)  

  ಇಂದಿಗೆ ಒಂಬತ್ತು ಶತಮಾನಗಳ ಹಿಂದೆ ಬುವಿಯ ಭಾಗ್ಯವಾಗಿ ಬಂದವರು ಬಸವಣ್ಣನವರು. ಅವರು ಅಂದು ಸಾರಿದ ವಚನಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಅವು ಇಂದಿನ ಸಮಾಜಕ್ಕೂ ಹೇಗೆ ಅನ್ವಯವಾಗುತ್ತವೆನ್ನುವುದಕ್ಕೆ ಈ ಕೆಳಗಿನ ವಚನಗಳೇ ಸಾಕ್ಷಿ.

  ಸನ್ಯಾಸಿಯಾಗಿದ್ದುಕೊಂಡು ವಿಷಯಲಂಪಟನಾದ ನಿತ್ಯಾನಂದ, ಸ್ನೇಹಿತನ ಮಡದಿಯ ಮೈಮೇಲೆರಗಿದ ಆರೋಪ ಹೊತ್ತಿರುವ ಮಾಜಿ ಸಚಿವ ಹಾಲಪ್ಪ, ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದ ಹಾಲಿ ಸಚಿವ ರೇಣುಕಾಚಾರ್ಯ ಇಂಥವರು ಆತ್ಮಶುದ್ಧಿ ಹೊಂದಬೇಕಾದ ಅಗತ್ಯವನ್ನು ಈ ವಚನ ತಿಳಿಸುತ್ತದೆ.
  ಅಂದಣವನೇರಿದ ಸೊಣಗನಂತೆ
  ಕಂಡೊಡೆ ಬಿಡದು ತನ್ನ ಮುನ್ನಿನ ಸ್ವಭಾವವನು
  ಸುಡುಸುಡು ಮನವಿದು ವಿಷಯಕ್ಕೆ ಹರಿವುದು
  ಮೃಡ ನಿಮ್ಮನನುದಿನ ನೆನೆಯಲೀಯದು
  ಎನ್ನೊಡೆಯ ಕೂಡಲಸಂಗಮದೇವಾ
  ನಿಮ್ಮ ಚರಣವ ನೆನೆವಂತೆ ಕರುಣಿಸು
  ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.
  (ಅಂದಣ=ಪಲ್ಲಕ್ಕಿ; ಸೊಣಗ=ನಾಯಿ)

  ನಡೆ-ನುಡಿ ಭಿನ್ನವಾಗಿರುವ ಇಂಥ ಲಂಪಟರ ಬಗ್ಗೆ ಹಾಗೂ ಇವರನ್ನು ಸಮರ್ಥಿಸುವವರ ಬಗ್ಗೆ ಬಸವಣ್ಣನವರು ಹೇಳುವುದು ಹೀಗೆ.
  ಎನ್ನ ನಡೆಯೊಂದು ಪರಿ
  ಎನ್ನ ನುಡಿಯೊಂದು ಪರಿ
  ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ,
  ನುಡಿಗೆ ತಕ್ಕ ನಡೆಯ ಕಂಡೊಡೆ
  ಕೂಡಲಸಂಗಮದೇವನೊಳಗಿಪ್ಪನಯ್ಯಾ.

  ಪರಸ್ತ್ರೀ ವ್ಯಾಮೋಹ ಎಂಥದೆಂದು ಈ ಕೆಳಗಿನ ವಚನ ಮನಸ್ಸಿಗೆ ನಾಟುವಂತೆ ಹೇಳುತ್ತದೆ.
  ನೋಡಲಾಗದು ನುಡಿಸಲಾಗದು ಪರಸ್ತ್ರೀಯ,
  ಬೇಡ ಕಾಣಿರೋ!
  ತಗರ ಬೆನ್ನಲಿ ಹರಿವ ಸೊಣಗನಂತೆ,
  ಬೇಡ ಕಾಣಿರೋ!
  ಒಂದಾಶೆಗೆ ಸಾಸಿರ ವರುಷ ನರಕದೊಳದ್ದುವ
  ಕೂಡಲಸಂಗಮದೇವ.
  (ತಗರು=ಟಗರು; ಸೊಣಗ=ನಾಯಿ)

  ಭಾರತದ ನಾರಿಯಾಗಿ ಪಾಕಿಸ್ಥಾನಕ್ಕೆ ರಹಸ್ಯ ಮಾಹಿತಿ ಒದಗಿಸುತ್ತಿದ್ದ ಮಾತೃಭೂಮಿದ್ರೋಹಿ ಮಾಧುರಿ ಗುಪ್ತಾಳಿಗೆ ಈ ಕೆಳಗಿನ ವಚನ ಸರಿಯಾಗಿ ಅನ್ವಯವಾಗುತ್ತದೆ.
  ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ
  ಧರೆ ಹೊತ್ತಿ ಉರಿದೊಡೆ ನಿಲಲು ಬಾರದು
  ಏರಿ ನೀರುಣ್ಬೊಡೆ, ಬೇಲಿ ಕೆಯ್ಯ ಮೇವೊಡೆ
  ನಾರಿ ತನ್ನ ಮನೆಯಲ್ಲಿ ಕಳುವೊಡೆ,
  ತಾಯ ಮೊಲೆವಾಲು ನಂಜಾಗಿ ಕೊಲುವೊಡೆ
  ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
  (ಕೆಯ್ಯ=ಹೊಲ)

  ಇಂಥ ನೀತಿಗೆಟ್ಟವರ ಜೀವನ ಹೇಗಿರುತ್ತದೆಂದರೆ, ’ಪಂಚೇಂದ್ರಿಯಗಳ ಸುಖಕ್ಕೋಸ್ಕರ ಕಳಾಹೀನನಾದೆ; ಮನೋವಿಕಾರದಿಂದಾಗಿ ಮತಿಗೆಟ್ಟೆ; ದೇಹಸಂಪತ್ತು ಹಾಳಾಗಿ ಧೃತಿಗೆಟ್ಟೆ’ ಎಂಬಂತಿರುತ್ತದೆ. ಪಶ್ಚಾತ್ತಾಪ ಹೊಂದಿ ದೈವಕ್ಕೆ ಶರಣುಹೊಗುವ ಭಾವ ಬೆಳೆಸಿಕೊಳ್ಳುವ ಮೂಲಕವಷ್ಟೇ ಇಂಥವರು ಸರಿಹೋಗಲು ಸಾಧ್ಯ.
  ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ
  ಮತಿಗೆಟ್ಟೆನು ಮನದ ವಿಕಾರದಿಂದ
  ಧೃತಿಗೆಟ್ಟೆನು ಕಾಯವಿಕಾರದಿಂದ
  ಶರಣುವೊಕ್ಕೆನು ಕೂಡಲಸಂಗಮದೇವಾ.

  ಸರಿಯಿದ್ದವರಮೇಲೂ ಕೆಲವೊಮ್ಮೆ ಸುಳ್ಳು ಅಪವಾದ ಬಂದೆರಗಬಹುದು. ಕೊಳಕು ರಾಜಕಾರಣದ ಈ ದಿನಗಳಲ್ಲಿ ಇಂಥ ಚೋದ್ಯ ಸಾಮಾನ್ಯ. ಸುಳ್ಳು ಆರೋಪವನ್ನು ಸತ್ಯಸಂಗತಿಯೆಂಬಂತೆ ಬಿಂಬಿಸುವಲ್ಲಿ ಇಂದಿನ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಸನ್ನಿವೇಶದ ಲಾಭ ಪಡೆದು ಮತ್ತು ತಂತ್ರಜ್ಞಾನದ ನೆರವಿನಿಂದ ಸುಳ್ಳನ್ನು ಸತ್ಯವೆಂದು ಸಾರಬಹುದಾದ ದಿನಗಳಿವು. ಇಂಥ ಚೋದ್ಯದ ಬಗ್ಗೆ ದನಿಯೆತ್ತಿದೆ ಈ ವಚನ.
  ತಾಳ ಮರದ ಕೆಳಗೆ
  ಒಂದು ಹಾಲ ಹರವಿಯಿದ್ದೊಡೆ
  ಅದ ಹಾಲ ಹರವಿಯೆನ್ನರು
  ಸುರೆಯ ಹರವಿಯೆಂಬರು
  ಈ ಭಾವನಿಂದೆಯ ಮಾಣಿಸಾ
  ಕೂಡಲಸಂಗಮದೇವಾ.
  (ಹರವಿ=ಗಡಿಗೆ; ಮಾಣಿಸು=ಇಲ್ಲವಾಗಿಸು)

  ಅಧಿಕಾರದ ಅಮಲು, ಐಶ್ವರ್ಯದ ಅಮಲು ಇವು ಮನುಷ್ಯನನ್ನು ದುರ್ನಡತೆಗೆಳೆಯುತ್ತವೆ. ಇವು ಅವನನ್ನು ದುರಹಂಕಾರಿಯನ್ನಾಗಿಯೂ ಮಾಡುತ್ತವೆ. ಐಶ್ವರ್ಯದ ಅಮಲೇರಿದವರ ವರ್ತನೆ ಹೇಗಿರುತ್ತದೆಂಬುದನ್ನು ಈ ವಚನ ಅದ್ಭುತವಾಗಿ ಹೇಳಿದೆ.
  ಹಾವು ತಿಂದವರ ನುಡಿಸಬಹುದು
  ಗರ ಹೊಡೆದವರ ನುಡಿಸಬಹುದು
  ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ
  ಬಡತನವೆಂಬ ಮಂತ್ರವಾದಿ ಹೊಗಲು
  ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ.

  ಹಾಗಾದರೆ, ಮನುಷ್ಯ ತಾನು ಸರಿಹೋಗಬೇಕೆಂದರೆ ಏನು ಮಾಡಬೇಕು? ಹೇಗಿರಬೇಕು? ಈ ವಚನದಲ್ಲಿದೆ ಉತ್ತರ.
  ಕೊಲ್ಲೆನಯ್ಯಾ ಪ್ರಾಣಿಗಳ
  ಮೆಲ್ಲೆನಯ್ಯಾ ಬಾಯಿಚ್ಛೆಗೆ
  ಒಲ್ಲೆನಯ್ಯಾ ಪರಸತಿಯರ ಸಂಗವ
  ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ
  ಬಳ್ಳದ ಬಾಯಂತೆ ಒಂದೆ ಮನಮಾಡಿ
  ನಿಲ್ಲೆಂದು ನಿಲಿಸಯ್ಯಾ ಕೂಡಲಸಂಗಮದೇವಾ.
  (ಬಳ್ಳ=ಅಳತೆಯ ಪಾತ್ರೆ)

  ಒಂದೆ ಮನ ಮಾತ್ರವಲ್ಲ, ಮನದ ಶುದ್ಧಿಯೂ ಮನುಜನಿಗೆ ಅವಶ್ಯ. ಕಾಣುವವರ ಕಣ್ಣಿಗಷ್ಟೇ ಆತ ಶುದ್ಧನಾದರೆ ಸಾಲದು. ಶುದ್ಧಿಯೆಂಬುದು ಅಂತರಂಗದಲ್ಲೂ ಇರಬೇಕು. ಆತನ ಭಾವವು ಪರಿಶುದ್ಧವಾದುದಾಗಿರಬೇಕು.
  ಕೆಲಕ್ಕೆ ಶುದ್ಧನಾದೆನಲ್ಲದೆ
  ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ?
  ಕೈಮುಟ್ಟಿ ಪೂಜಿಸುವೊಡೆ
  ಎನ್ನ ಮನಶುದ್ಧವಲ್ಲವಯ್ಯಾ
  ಭಾವ ಶುದ್ಧವಾದೊಡೆ ಕೂಡಲ ಸಂಗಯ್ಯನು
  ಇತ್ತ ಬಾಯೆಂದೆತ್ತಿಕೊಳ್ಳನೇಕಯ್ಯಾ!
  (ಕೆಲಕ್ಕೆ=ನೆರೆಹೊರೆಯವರ ಕಣ್ಣಿಗೆ)

  ಅಂತರಂಗಶುದ್ಧಿ-ಆತ್ಮಶುದ್ಧಿ ಇಲ್ಲದೆ ಯಾವ ಜಪ-ತಪ ಮಾಡಿದರೇನು? ಸದಾ ಜಪಮಣಿ ಎಣಿಸುವ ನಿತ್ಯಾನಂದನಂತೆ ’ಇಲ್ಲೂ ಸಲ್ಲದವ ಅಲ್ಲೂ ಸಲ್ಲದವ’ ಆಗಿ ಅಧಃಪತನ ಹೊಂದುವುದೇ ಗತಿಯಾಗುತ್ತದೆ. ಈ ಸತ್ಯವನ್ನೇ ಬಸವಣ್ಣನವರು ಉಪಮೆಸಹಿತ ಹೀಗೆ ಬಣ್ಣಿಸಿದ್ದಾರೆ.
  ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ, ಅಯ್ಯಾ?
  ಅಘೋರ ತಪವ ಮಾಡಿದೊಡೇನು?
  ಅಂತರಂಗ-ಆತ್ಮ ಶುದ್ಧಿಯಿಲ್ಲದವರನೆಂತು ನಂಬುವನಯ್ಯ
  ಕೂಡಲಸಂಗಮದೇವ.

  ಮಾನವನ ಸಂಸಾರದ ಇತಿ-ಮಿತಿ, ಅರ್ಥ-ಸಾರ್ಥಕ್ಯ ಕುರಿತು ಬಸವಣ್ಣನವರು ಅತ್ಯಂತ ಸರಳವಾಗಿ ಹೇಳಿರುವುದು ಹೀಗೆ.
  ಸಂಸಾರವೆಂಬುದೊಂದು ಗಾಳಿಯ ಸೊಡರು
  ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ!
  ಇದ ನೆಚ್ಚಿ ಕೆಡಬೇಡ ಸಿರಿಯೆಂಬುದ!
  ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.

  ಹೀಗೆ, ಬಸವಣ್ಣನವರ ಪ್ರತಿಯೊಂದು ವಚನವೂ ಈ ಜಗತ್ತಿಗೆ ಸದಾ ಮಾರ್ಗದರ್ಶಿ. ಅವರ ವಚನಸಾಗರದಿಂದ ಹೆಕ್ಕಿ ತೆಗೆದ ಒಂದೆರೆಡು ಹನಿಗಳ ಸಿಂಚನವನ್ನಷ್ಟೇ ಇಲ್ಲಿ ಮಾಡಿದ್ದೇನೆ. ಬಸವಾದಿ ಶರಣರ ಒಂದೊಂದು ವಚನವನ್ನೂ ಅರಿತುಕೊಂಡು, ಅರಗಿಸಿಕೊಂಡು, ಆಚರಣೆಯಲ್ಲಿ ತಂದರೆ ನಮ್ಮ ಜೀವನ ಸಾರ್ಥಕ.