ಮಿತಿ ಮೀರಿದ ಜನಾರ್ದನ ರೆಡ್ಡಿ
’ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂಬ ಆರೋಪದ ಸತ್ಯಾಸತ್ಯ ಏನೇ ಇರಲಿ, ಗಣಿದಣಿ ಜನಾರ್ದನ ರೆಡ್ಡಿಗೆ ಅವರು ನೋಟೀಸ್ ಕೊಟ್ಟಿರುವುದರಲ್ಲಂತೂ ರೆಡ್ಡಿ ಆರೋಪಿಸಿರುವಂತೆ ರಾಜ್ಯಪಾಲರ ಅಧಿಕಾರಮಿತಿಯ ಉಲ್ಲಂಘನೆ ಆಗಿಲ್ಲ. ನಮ್ಮ ಸಂವಿಧಾನದ ಆರನೇ ಭಾಗದ ಎರಡನೇ ಅಧ್ಯಾಯದಲ್ಲಿ ’ಮಂತ್ರಿಮಂಡಲ’ ಉಪಶೀರ್ಷಿಕೆಯಡಿ ಪ್ರಣೀತ ೧೬೩.(೨)ನೇ ಅನುಚ್ಛೇದ ಈ ಕೆಳಗಿನಂತಿದೆ:
"ಯಾವುದೇ ವಿಷಯವು ಈ ಸಂವಿಧಾನದ ಮೂಲಕ ಅಥವಾ ಮೇರೆಗೆ ರಾಜ್ಯಪಾಲನು ತನ್ನ ವಿವೇಚನಾನುಸಾರವಾಗಿ ಕಾರ್ಯನಿರ್ವಹಿಸಬೇಕೆಂದು ಅಗತ್ಯಪಡಿಸಿರುವ ವಿಷಯವೇ ಅಥವಾ ಅಲ್ಲವೇ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ರಾಜ್ಯಪಾಲನು, ತನ್ನ ವಿವೇಚನಾನುಸಾರವಾಗಿ ಮಾಡಿದ ತೀರ್ಮಾನವೇ ಅಂತಿಮವಾದುದು ಆಗಿರತಕ್ಕುದು, ಮತ್ತು ರಾಜ್ಯಪಾಲನು ಮಾಡಿದ ಯಾವುದೇ ಕಾರ್ಯದ ಸಿಂಧುತ್ವವನ್ನು ಅವನು ತನ್ನ ವಿವೇಚನಾನುಸಾರವಾಗಿ ಕಾರ್ಯನಿರ್ವಹಿಸಬೇಕಾಗಿದ್ದಿತು ಎಂಬ ಅಥವಾ ಕಾರ್ಯನಿರ್ವಹಿಸಬಾರದಾಗಿತ್ತು ಎಂಬ ಕಾರಣದಮೇಲೆ ಪ್ರಶ್ನಿಸತಕ್ಕುದಲ್ಲ."
ಈ ಅನುಚ್ಛೇದದ ಪ್ರಕಾರ, ರಾಜ್ಯಪಾಲರು ರೆಡ್ಡಿಗೆ ನೋಟೀಸ್ ಕೊಟ್ಟಿರುವ ಕ್ರಮ ಸಂವಿಧಾನಬದ್ಧವೇ ಆಗಿದೆ. ಸಂವಿಧಾನದ ಸೂಕ್ತ ತಿಳಿವಳಿಕೆ ಇಲ್ಲದೆ ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡಿರುವ ರೆಡ್ಡಿಯ ಕ್ರಮವೇ ಅಸಿಂಧು ಮತ್ತು ಮಿತಿಮೀರಿದುದು. ಇದಕ್ಕಾಗಿ ರಾಜ್ಯಪಾಲರು ರೆಡ್ಡಿ ವಿರುದ್ಧ ಶಿಸ್ತುಕ್ರಮ ಕೈಕೊಳ್ಳಬಹುದಾಗಿದೆ. ಸಂವಿಧಾನದ ’ಮಂತ್ರಿಮಂಡಲ’ ಉಪಶೀರ್ಷಿಕೆಯಡಿ ಪ್ರಣೀತ ೧೬೪.(೧)ನೇ ಅನುಚ್ಛೇದದ ಮೊದಲ ಪ್ಯಾರಾವನ್ನೊಮ್ಮೆ ರೆಡ್ಡಿ ಓದಲಿ. ಆ ಪ್ಯಾರಾ ಇಂತಿದೆ:
"ಮುಖ್ಯಮಂತ್ರಿಯ ನೇಮಕಾತಿಯನ್ನು ರಾಜ್ಯಪಾಲನು ಮಾಡತಕ್ಕುದು ಮತ್ತು ಇತರ ಮಂತ್ರಿಗಳ ನೇಮಕಾತಿಯನ್ನು ಮುಖ್ಯಮಂತ್ರಿಯ ಸಲಹೆಯಮೇಲೆ, ರಾಜ್ಯಪಾಲನು ಮಾಡತಕ್ಕುದು ಮತ್ತು ಮಂತ್ರಿಗಳು, ರಾಜ್ಯಪಾಲನ ಇಷ್ಟಪರ್ಯಂತ ಪದಧಾರಣಮಾಡತಕ್ಕುದು."
ಅಂದರೆ, ರೆಡ್ಡಿಯನ್ನು ಮಂತ್ರಿಯನ್ನಾಗಿ ನೇಮಕ ಮಾಡಿದ್ದು ರಾಜ್ಯಪಾಲರು; ಮತ್ತು, ರಾಜ್ಯಪಾಲರು ಇಷ್ಟಪಡುವವರೆಗೆ (ಮಾತ್ರ) ರೆಡ್ಡಿಯು ಮಂತ್ರಿಯಾಗಿ ಮುಂದುವರಿಯಬಹುದು.
ಹೀಗಿರುವಾಗ, ಜನಾರ್ದನ ರೆಡ್ಡಿಯು ರಾಜ್ಯಪಾಲರ ಅಧಿಕಾರದ ಮಿತಿಯನ್ನು ಪ್ರಶ್ನಿಸುವ ಮೊದಲು ತನ್ನ ಅಧಿಕಾರದ ಮಿತಿಯನ್ನು ಅರಿತುಕೊಳ್ಳುವುದೊಳ್ಳಿತು.