ಕುಸ್ತಿ ಪೈಲ್ವಾನ್

ಕುಸ್ತಿ ಪೈಲ್ವಾನ್

ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ. ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿಗೆ ಕೆಟಿ ಹಾಕ್ತೀವ್ನಿ ಬನ್ರಲ್ಲಾ. ಮಾಮೂಲಿ ಗಬ್ಬುನಾಥ ಗೌಡಪ್ಪ, ನೋಡ್ರಲಾ ನಮ್ಮ ಊರ ಮರ್ವಾದೆ ಉಳಿಸಬೇಕು ಅಂತಿದ್ದ. ಅದಕ್ಕೆ ಚಾ ಅಂಗಡಿ ನಿಂಗ ನಾನು ತಯಾರಿ ತಗೋತೀನಿ ಅಂದಾ. ಸುಬ್ಬಾ ಎಂಗೈತೆ ನನ್ನ ಬಾಡಿ ಅಂತಾ ಸಲ್ಟು, ಚೆಡ್ಡಿ ತೆಗೆದು ಗೌಡಪ್ಪನ ಮುಂದೇ ನಿಂತೇ ಬಿಟ್ಟ. ಏ ಥೂ ಬಟ್ಟೆ ಹಾಕಳ್ಳಾ. ನಮ್ಮೂರು ಹೆಣ್ಣು ಐಕ್ಳು, ಇದ್ಯಾವಾ ಕಾಡು ಮನಸ ಅಂತಾ ಹೆದರು ಬಿಟ್ಟಾವು ಅಂದ. ಲೇ ಒಂದ್ ಕಾಲದಾಗೆ ನಾನು ಪೈಲ್ವಾನೆಯಾ ಅಂದಾ ಗೌಡಪ್ಪ.
ನೋಡ್ರಲಾ ನಾಳೆಯಿಂದ ಎಲ್ಲಾ ಗಲ್ಡಿ ಮನೆಗೆ ಬರಬೇಕು ಒಂದು ತಿಂಗ್ಳು ಪ್ರಾಕ್ಟೀಸ್. ಅಂಗೇ ನಮ್ಮ ಮನ್ಯಾಗೆ ನಿಮಗೆಲ್ಲಾ ಊಟದ ತಯಾರಿ ಅಂದ. ಸುಬ್ಬ ಒಂದು ತಿಂಗ್ಳು ಹಳಸಿದ್ದು ಪಳಸಿದ್ದು ತಿನ್ನದು ತಪ್ತು ಅಂತಾ ಒಳಗೆ ಖುಸಿಯಾಗಿದ್ದ. ಗೌಡ್ರೆ ನಿಮ್ಮ ಮೊದಲನೆ ಹೆಂಡರೂ ಮಗನೂ ಪೈಲ್ವಾನ್ ಅಲ್ವಾ. ಹೂಂ ಕನ್ಲಾ ಬಾರೀ ಪೈಲ್ವಾನ್ ಹತ್ತು ಬಾರಿ ಸೋತು ಒಂದು ದಪಾ ಸಣ್ಣ ಐಕ್ಳು ಮ್ಯಾಕೆ ಗೆದ್ದಾವ್ನೆ.
ಮಾರನೆ ದಿನ ಬೆಳಗ್ಗೆ ಗಲ್ಡಿ ಮನೆ ಪೂಜೆ ಮಾಡಿ ಕೆಂಪು ಮಣ್ಣಾಗೆ ಪ್ರಾಕ್ಟೀಸ್ ಸುರು ಹಸ್ಕೊಂಡ್ವು ನಮ್ಮೂರು ಐಕ್ಳು. ಕ್ರಿಕೆಟ್ನಾಗೆ ಮಧ್ಯ ಡ್ರಿಂಕ್ಸ್ ಮತ್ತೆ ಮುಖ ವರ್ಸೊಕೊಳ್ಳೋಕೆ ಟವಲ್ ಕೊಡೋರು ತರ ನಾನು ಮಧ್ಯ ಮಧ್ಯ ನೀರು, ಒಗಿಯದೆ ಇರೋ ಟವಲನ್ನ ಮುಖ ವರ್ಸೊಕೊಳ್ಳೋದಿಕ್ಕೆ ಕೊಡ್ತಾ ಇದ್ದೆ. ಬಡ್ಡೇ ಹತ್ತಾವು. ಸಾಮು ಮಾಡಿದ್ದೇ ಮಾಡಿದ್ದು. ಅಲ್ಲಿಗೆ ಗಲ್ಡಿ ಮನೆ ಪ್ರಾಕ್ಟೀಸ್ ಮುಗೀತು.
ಎಲ್ಲರಿಗೂ ತಾಕತ್ತು ಬರ್ಲಿ ಅಂತಾ ನಿಂಗಪ್ಪನ ಚಾ ಅಂಗಡೀಲಿ ಎಲ್ರಿಗೂ ಬೈಟೂ ಚಾ. ಈಗ ಎಲ್ಲರೂ ಗುಡ್ಡ ಹತ್ತವಾ ಅಂತಾ ಪಕ್ಕದ ದೊಡ್ಡ ಗುಡ್ಡ ಹತ್ಸಿದ. ಹೋಗೋಬೇಕ್ಯಾರೆ 10ಜನ ಇದ್ದೋರು ಬರೋಬೇಕಾದ್ರೆ 3ಜನ ಇದ್ವಿ. ಬಸ್ ಚಾರ್ಜ್ ಉಳಿತದೆ ಅಂತಾ ಬಡ್ಡೆ ಹತ್ತಾವು, ಗುಡ್ಡನಾ ಆ ಕಡೆಯಿಂದ ಇಳಿದು ಪಕ್ಕದ ಹಳ್ಯಾಗಿನ ಕಳ್ಳು ಬಳ್ಳಿ ಮನೇಗೆ ಹೋಗಿದ್ವು. ನಡೀರಲ್ಲಾ ನಮ್ಮನೇಗೆ ಊಟಕ್ಕೆ ಹೋಗವಾ, ಏನ್ ಮಾಡ್ಸೀದ್ದೀರಾ ಗೌಡ್ರೆ. ಬದನೆಕಾಯಿ ಸಾಂಬಾರು,ತೊಂಡೇಕಾಯಿ ಪಲ್ಯ, ಪಡವಲಕಾಯಿ ಚಿತ್ರಾನ್ನ, ಇನ್ನು ಸ್ಯಾನೆ ಚಟ್ನಿಪುಡಿ,ಉಪ್ಪಿನಕಾಯಿ. ಕಡಿಯೋದು, ಎಳೆಯೋದು ಇಲ್ವಾ. ಏನ್ ನುಗ್ಗೇಕಾಯಿನಾ. ಅಲ್ಲಾ ಚಿಕನ್,ಮಟನ್. ಲೇ ಸ್ರಾವಣ ಕನ್ರಲಾ ಅವೆಲ್ಲಾ ತಿನ್ ಬಾರದು. ಅವೆಲ್ಲಾ ಮಡಿದ್ರೆ ಮನೆ ರಣರಂಗ ಆಯ್ತದೆ ಕನ್ರಲಾ. ಅಂಗತ್ತಿದ್ದಾಗೆ ಸುಬ್ಬ ನನ್ನ ಮುಖ ನೋಡ್ದ. ಗೌಡಪ್ಪ ಕೊಟ್ನಲ್ಲೋ ಕೈಯಾ.

ಬರೀ ನಾವಲ್ದೆ ಊರ್ನೋರು ಎಲ್ಲಾ ಐಡಿಯಾ ಕೊಡೋ ನೆಪದ್ಯಾಗೆ, ಡಬರಿ ಗಟ್ಟಲೆ ತಿಂದು ಹೊಂಟ್ವು. ಇದೇನಿದು ಛತ್ರದ ಅಡುಗೆ ಮಾಡ್ದಂಗೆ ಆಗೈತೆ. ಏ ಮೂದೇವಿ ಬೇಗ ಮನೀಗೆ ಬಾ. ಸಬೀನಾ ಮಡಿಗಿರ್ತೀನಿ, ಪಾತ್ರೆ ತೊಳಿಬೇಕು ಅಂದ್ಲು ಗೌಡಪ್ಪನ ಎರಡನೇ ಹೆಂಡರು. ರಾತ್ರೀ ಗೌಡಪ್ಪ ಪಾತ್ರೆ ತೊಳೇಯೋ ಬೇಕಾದ್ರೆ, ಕುಸ್ತಿ ಬಗ್ಗೆ ಸ್ಯಾನೇ ಚರ್ಚೆ ಮಾಡಿದ್ವಿ. ಮೂದೇವಿ ಒಂದು ಗಂಟೆ ಆತು ಬಿದ್ಗ ಬಾ.
ಮಾರನೇ ಮಧ್ಯಾಹ್ನದೊತ್ತಿಗೆ ಎಲ್ಲಾವೂ ಅಂಗವಿಕಲರು ತರಾ ಚೆರಂಡಿ ಪಕ್ಕಾನೆ ನಡ್ಕೊಂಡು ಬತ್ತಾ ಇದ್ವು. ಏನ್ರಲಾ, ಕೈ ಕಾಲು ಅಂಗೇ ಸೆಟ್ಕಂಡ್ ಬಿಟ್ಟೈತೆ. ಅದೂ ಅಲ್ಲದೆ ಗೌಡಪ್ಪ ಅಡುಗೆಗೆ ಎಣ್ಣೆ ಹಾಕ್ಸಿರಲಿಲ್ಲ ಅಂತಾ ಕಾನ್ತದೆ. ಹೊಟ್ಟೆ ನೋಯ್ತದೆ ಕನ್ಲಾ ಅಂದ್ವು. ಬರ್ರಲಾ ಇವತ್ತು ಎರಡನೇ ದಿನ ಬಿಡಬಾರದು ಅಪಸಕುನ ಆಯ್ತದೆ ಅಂತಾ ಎಲ್ಲಾ ಗಲ್ಡಿ ಮನ್ಯಾಗೆ ಹೋದ್ವಿ. ಮತ್ತೆ ಅದೇ ಪೂಜೆ. ಮುಂಡೇವು ಒಡೆದ ಕಾಯಿಗೆ ಜಗಳ ಆಡೋವು. ಏ ಥೂ ಅಂದ ಗೌಡಪ್ಪ. ಎಲ್ಲಾವು ಲಂಗೋಟಿ ಮ್ಯಾಕೆ ನಿಂತ್ವು. ಲೇ ನಿಂಗಪ್ಪ ನಾಳೆಯಿಂದ ದೊಡ್ಡ ಲಂಗೋಟಿ ಹಾಕ್ಕಂಡ್ ಬಾರಲಾ. ಯಾಕ್ ಗೌಡ್ರೆ. ಏ ಥೂ. ಸುಬ್ಬ ಬಡ್ಡೀ ಮಗ ಮೈಗೆಲ್ಲಾ ಹರಳೆಣ್ಣೆ ಬಳ್ಕಂಡ. ಗೌಡಪ್ಪ ಎಲ್ರಿಗೂ ಪಟ್ಟು ಹೇಳ್ಕೊಡ್ತೀನಿ ಅಂತಾ ಪೋಸ್ ಕೊಡಕ್ಕೆ ಎತ್ತಿ ಬಿಸಾಕ್ತಿದ್ದ. ಸುಬ್ಬಾ ನೀ ಬರಾಲಾ ಅಂದ. ಈಗ್ ನೋಡ್ರಲಾ ಪಟ್ಟು, ಅಂದು ಸುಬ್ಬನ ಕೈ ಎಳೆದ. ಹರಳೆಣ್ಣೆ ಗೌಡಪ್ಪನ ಕೈನಾ ಅಂಗೇ ಜಾರ್ಸಿತ್ತು. ಎಲ್ಡೇ ನಿಮಿಸಕ್ಕೆ ಧಡ್ ಭಡ್ ಸೌಂಡ್, ಗೌಡಪ್ಪ ಗುಂಡು ಕಲ್ಲ ಮ್ಯಾಕೆ ಬಿದ್ದು, ಬಾಗಿಲ ಹತ್ತಿರ ಬಂದು ಕಿಸ್ಕಂಡಿದ್ದ. ಲೇ ಸುಬ್ಬ ನಿನಗೆ ಯಾರಲೇ ಎಣ್ಣೆ ಬಳ್ಕೊಳಕೇ ಏಳಿದ್ದು. ಮಗನೇ ನಿನಗೆ ಐತೆ ಅಂತಾ ಎದ್ದು ಕೂತ. ತಲ್ಯಾಗೆ ರಕ್ತ, ಅರಿಸಿನ ಇರ್ಲಿಲ್ಲ ಕೆಂಪು ಮಣ್ಣೇ ಬಳಿದ್ವಿ. ಲೇ ಇರುವೆ ಕನ್ರಲಾ.

ಸರೀ ಕುಸ್ತಿ ಪಂದ್ಯ ಹತ್ರಾ ಬಂದೇ ಬಿಡ್ತು. ಎಲ್ಲಾ ಕಡೆ ನಮ್ಮ ಐಕ್ಳುದು ವಾಲ್ ಪೋಸ್ಟ್. ಎಲ್ಲಾ ಕಾಚಾದ ಮ್ಯಾಕೆ ಬಾಡಿ ಸೋ, ಗೌಡನ್ನೂ ಸೇರಿ. ಊರ್ನಾಗಿನ ಎಣ್ಣು ಐಕ್ಳು, ಥೂ ದರ್ಬೇಸಿ ಮುಂಡೇವಕ್ಕೆ ಏನಾಗೈತೆ. ಯಾರೋ ಗೌಡಪ್ಪನ ಮುಖಕ್ಕೆ ಸಗಣಿ ಹೊಡೆದಿದ್ರು. ನಿಂಗಪ್ಪಂಗೆ ಮಾತ್ರ ಟವಲ್ ಉಡ್ಸಿ ಪೋಟೋ ತೆಗಿಸಿದ್ವಿ. ಇಲ್ಲಾ ಅಂದ್ರೆ ವಾಲ್ ಪೋಸ್ಟ್ ಮ್ಯಾಕೆ "ಎ" ಅಂತಾ ಆಕ್ಬೇಕಾಗ್ತದೆ ಅಂತಾ. ಸರಿ ಪಂದ್ಯ ಸುರುವಾಯ್ತು. ನಂದೇ ಪ್ರಾರ್ಥನೆ. " ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ, ಜಾರಿಣಿಯ ಮಗನೆ" , ಲೇ ಇದು ಬಬ್ರುವಾಹನ ಪಿಚ್ಚರಿಂದು ಅಲ್ವಾ. ಅದೇನ್ಲಾ ಜಾರಿಣಿಯ ಮಗನೇ ಅಂತಾ ನಂಗೇ ಕೈ ತೋರ್ಸಿದ್ಯಲಾ ಅಂದಾ ಗೌಡಪ್ಪ. ಅಂದ್ರೇ ನಿಮ್ಮಪ್ಪನ ಎರಡನೇ ಹೆಂಡರು ಮಗನೇ ಅಂತಾ ಅರ್ಥ. ಅಂಗಾ ನೀ ಏನೋ ಬೈಯ್ದೆ ಅಂತ ಅಂದ್ಕೊಂಡಿದ್ದೆ .
ಪಂದ್ಯ ಸುರುವಾಯ್ತು. ಈಗ ನಮ್ಮ ಹಳ್ಳಿಯ ಪೈಲ್ವಾನ್ ಸುಬ್ಬ ಮತ್ತು ಪಕ್ಕದ ಹಳ್ಳಿಯ ಪೈಲ್ವಾನ್ ಗಂಗನ ಜೊತೆ ಕುಸ್ತಿ. ಮೈಕ್ನಾಗೆ ಅನೌನ್ಸ್. ಗಂಗ ಕಾಡೆ ಎಮ್ಮೆ ತರಾ. ಸಿಳ್ಳೇ ಬಿದ್ದಿದ್ದೇ ಬಿದ್ದಿದ್ದು. ಗೌಡಪ್ಪ ಬಿಡಬೇಡಲಾ ಸುಬ್ಬ ಅಂದ. ಸುಬ್ಬನ ಮುಖಾ ಪೆಚ್ಚಾಗಿತ್ತು. ಕುಸ್ತಿ ಸುರುವಾಯ್ತು. ಸುಬ್ಬನ್ನ ಬಟ್ಟೆ ಒಗೆಯೋ ತರಾ ಎತ್ತಿ ಎತ್ತಿ ಬಿಸಾಕ್ತಿದ್ದ. ಒಂದು ದಪಾ ಬಂದು ಸ್ಟೇಜ್ನಾಗೆ ಇರೋ ಗೌಡ್ರು ಎರಡನೇ ಹೆಂಡರು ತೊಡೆ ಮ್ಯಾಕೆ ಬಂದು ಬಿದ್ದಿದ್ದ. ಏ ಥೂ ಅಂದಾ ಗೌಡಪ್ಪ. ಹೋಗಲಾ ಅಕಾಡಕ್ಕೆ. ಹೋದೋನೆ ಗಂಗನ ಉಡುದಾರ ಎಳ್ದೇ ಬಿಟ್ಟ. ಗಂಗ ಇದಕ್ಕಿದ್ದಂಗೆ ದಬ್ಬಾಕ್ಕೊಂಡು ಮಕ್ಕಂಡ. ಮಗನೇ ದಾರ ಕೊಡಲಾ. ಇಲ್ಲಾ ನಿಂಗೆ ಐತೆ. ಸುಬ್ಬ ಗೆದ್ದ ಅಂತಾ ಎತ್ಕೊತ್ತಿದ್ದಾಗೆನೇ ಅಂಗೇ ಹಿಂದಕ್ಕೆ ಮಕ್ಕೊಂಡಿದ್ದ. 108ರಾಗೆ ಆಸ್ಪತ್ರೆಗೆ ಕಳ್ಸಿದ್ವಿ. ಲೇ ಬಹುಮಾನ ನಮ್ಮ ಮನೇಗೆ ಕೊಡ್ರಲಾ. ಅದನ್ನೂ ಮಾರ್ಕಂಡ್ ಬಿಟ್ಟೀರಾ ಅಂದ ಸುಬ್ಬ.
ಈಗ ನಮ್ಮೂರಿನ ಚಾ ಅಂಗಡಿ ನಿಂಗ ಹಾಗೂ ರಂಗನ ನಡುವೆ ಕುಸ್ತಿ. ಅಂತಿದ್ದಾಗೆನೇ ನಿಂಗ ಮಾಯ. ಪ್ರೇಕ್ಸಕರು ಜೊತೆ ಕುಂತ್ ಬಿಟ್ಟಾವ್ನೆ. ಆಗಕ್ಕಿಲ್ಲಾ ಕನ್ಲಾ ಅಂದ. ಏ ಥೂ ಅಂದ ಗೌಡಪ್ಪ. ಮಗಂದು ಅಂಗಡಿ ಬುದ್ದಿ ಎಲ್ಲಿ ಓಯ್ತದೆ. ನಿಂಗ ಅಲ್ಲೂ ಚಾ ಅಂಗಡಿ ಮಡಗಿದ್ದ. ಈಗ ನಮ್ಮೂರಿನ ಗೌಡಪ್ಪ ಹಾಗೂ ಪಕ್ಕದೂರಿನ ಪಟೇಲ ರಾಜಪ್ಪನ ನಡುವೆ ಕುಸ್ತಿ. ಅಂಗೇ ಲಂಗೋಟಿಯಾಗೆ ಇಳಿದ ಗೌಡಪ್ಪ. ಜೈ ಭಜರಂಗಬಲಿ ಅಂದು ಮಣ್ಣನ್ನು ಹಣೆಗೆ ಹಚ್ಕೊಂಡ. ಹಚ್ಕಂತಿದ್ದಾಗೆನೇ ಹಣ್ಯಾಗೆ ರಕ್ತಾ ಬರಕ್ಕೆ ಸುರು ಆತು. ಯಾಕ್ ಗೌಡ್ರೆ, ಮಣ್ಣಾಗೆ ಗಾಜಿನ ಚೂರು ಇತ್ತು ಕನ್ಲಾ. ಅಂದು ನಿಂಗನ ನೋಡಿದ. ಮಗಾ ಅಲ್ಲೇ ಚಾ ಹುಯ್ತಾ ನಿಂತಿದ್ದ, ಅಕಾಡ ರೆಡಿ ಮಾಡಿದ್ದೇ ನಿಂಗ.
ಸರಿ ಪಟೇಲಂಗೂ ಗೌಡಂಗೂ ಸುರುವಾಯ್ತು. ಎಲ್ಡೇ ನಿಮಿಸಕ್ಕೆ ಪಟೇಲ ಸೋತಿದ್ದ. ಅಂಗೇ ಸೈಡಿಗೆ ಹೋಗಿ ವಾಂತಿ ಮಾಡಿದ್ದೇ ಮಾಡಿದ್ದು. ಒಂದ್ ಸರಿ ಕಂಕಳಾಗೆ ಹಿಡ್ಕಂಡೆ ನೋಡು. ಪಟೇಲ ಅಂಗೇ ಸೋತು ಹೋದ ಅಂದಾ ಗೌಡಪ್ಪ. ಪಟೇಲ ಓಡಿ ಹೋಗಿ ಸ್ಟೇಜ್ನಾಗೆ ಹಚ್ಚಿದ್ದ ಊದ್ ಬತ್ತಿಗೆ ಮುಖ ಕೊಟ್ಟು ನಿಂತಿದ್ದ. ಥೂ ಏನ್ ಹಂದಿ ಸತ್ತಿದ್ದ ವಾಸ್ನೆರೀ . ಕುಸ್ತಿ ಪಂದ್ಯ ಮುಗೀತು. ಊರ್ನಾಗೆಲ್ಲಾ ಗೌಡಪ್ಪನ ಕಾಚಾದಾಗೆ ಮೆರವಣಿಗೆ. ಸಿದ್ದೇಸನ ಗುಡಿ ಬತ್ತಿದಾಗನೇ ಗೌಡನ ಎತ್ತುಕೊಂಡು ಐಕ್ಳು ಮುಗ್ಗರಿಸಿದ್ವು ನೋಡಿ. ಗೌಡ ಅಂಗೇ ಕಲ್ ಮ್ಯಾಕೆ ಮಕಾಡೆ ಬಿದ್ದಿದ್ದ. ನಗು ಒಂಟೋಗಿತ್ತು. ಮುಖ ಬಾತ್ಕೊಂಡಿತ್ತು. ಕೋಮಲ ನನ್ನನ್ನ ಎತ್ಕೋಡೋರು ಹೆಸರು ಬರ್ಕಳಲ್ಲಾ. ವಿರೋಧ ಪಕ್ಸದೋರು ಕೈವಾಡ. ಮನೆಗೆ ಬಂದ್ ನೋಡ್ತಾನೆ. ಎರಡನೇ ಹೆಂಡರು ಇಲ್ಲಾ. ಪಕ್ಕದ ಹಳ್ಳಿ ಪಟೇಲ ಜೊತೆ ಓಡೋಗಿದ್ಲು. ಗಬ್ಬು ವಾಸ್ನೆ ತಡಿದೇ ಓಗ್ಯಾಳೆ ಬಿಡ್ರಿ. ಕುಸ್ತಿ ಅಂದ್ರೆ ಸಾಕು ಗೌಡಪ್ಪ ಅಂಗೇ ಹಲ್ಲು ಕಡಿತಾನೆ. ಅದಕ್ಕೆ ಈಗ ಕುಸ್ತಿ ಪಂದ್ಯ ನಡೆದ್ರೂ ಎಣ್ಣು ಐಕ್ಳಿಗೆ ನೋ ಎಂಟ್ರಿ ಬೋಲ್ಡು.

Rating
No votes yet

Comments