ನಲವತ್ತೊಂಭತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

ನಲವತ್ತೊಂಭತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ.
ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿನಿಂದಾಗಿ ಎಚ್ಚರವಾಯ್ತು. ಸಮಯ ನೋಡಿದರೆ ಮುಂಜಾವಿನ ಐದು ಘಂಟೆ.
ಆ ಅನಿರೀಕ್ಷಿತವಾದ ಬಾಗಿಲ ತಟ್ಟುವಿಕೆಯಿಂದ ಭಯ, ಆಶ್ಚರ್ಯ ಎರಡೂ ಆಯ್ತು.
ಬಾಗಿಲು ತೆರೆದು ನೋಡಿದರೆ ಕೈಯಲ್ಲಿ ಬಿಸಿ ಬಿಸಿ "ಕೇಕ್" ಒಂದನ್ನು ಹಿಡಿದು ಹೇಮಕ್ಕ ನಿಂತಿದ್ದಾರೆ.
ಜೊತೆಗೇ "ಹ್ಯಾಪಿ ಬರ್ತ್‍ಡೇ ಟು ಯೂ...ಸುರೇಶಣ್ಣಾ..." ಎನ್ನುವ ಹಾರೈಕೆ.
ಅಂದು ೧೬ ಜುಲಾಯಿ ೧೯೯೦. ನನ್ನ ೨೯ ನೇ ಜನ್ಮದಿನ. ಬಹುಷ: ನನ್ನ ಜೀವನದಲ್ಲಿ ತೀರ ಭಿನ್ನವಾಗಿ ಆಚರಿಸಲ್ಪಟ್ಟ ಮೊದಲ ಜನ್ಮದಿನ ಅದು. ಅಂದು ನಾನು ಅನುಭವಿಸಿದ ಆನಂದ ಬಣ್ಣಿಸಲಾಗದ್ದು.
ಆ ಹೇಮಕ್ಕ ಯಾರು ಅಂತೀರಾ? ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಂಗಳೂರಿನವರಾದ ಶ್ರೀಯುತ ಡಿ.ಸಿ. ನಾಣಯ್ಯನವರ ಧರ್ಮಪತ್ನಿ. ಅವರು ನಾವು ವಾಸವಾಗಿದ್ದ ಬಾಡಿಗೆ ಮನೆಯ, ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದರು.
ಮುಂಜಾನೆ ನಾಲ್ಕು ಘಂಟೆಗೆಲ್ಲಾ ಎದ್ದು, ಪತಿ ಪತ್ನಿಯರು ಸೇರಿ ತಯಾರು ಮಾಡಿದ್ದ ಕೇಕ್‍ನ ಸವಿಗಿಂತ ಅದರಲ್ಲಿ ಅಡಗಿದ್ದ ಅವರೀರ್ವರ ಪ್ರೀತಿ, ಅಭಿಮಾನ, ಆತ್ಮೀಯತೆಯೇ ಅಧಿಕವಾಗಿತ್ತು. ಸದ್ಯ ಉಡುಪಿಯಲ್ಲಿ ನೆಲೆಸಿರುವ ಅವರ ಮತ್ತು ನನ್ನ ನಡುವಣ ಸ್ನೇಹ, ಇಪ್ಪತ್ತು ವರುಷಗಳ ನಂತರವೂ, ಹಾಗೆಯೇ ಇದೆ.
* * * * *
ಸರಿಯಾಗಿ ಒಂಭತ್ತು ವರುಷಗಳ ನಂತರ ಅಂದರೆ ೧೬ ಜುಲಾಯಿ ೧೯೯೯. ಆಗ ನಾನು ಬೆಂಗಳೂರಿನಲ್ಲಿ ವಾಯುಸೇನೆಯ ಸೇವೆಯಲ್ಲಿ ಇದ್ದೆ ಅಲ್ಲದೇ ಸಂತ ಜೋಸೇಫ್ ಸಂಧ್ಯಾ ಕಾಲೇಜಿನಲ್ಲಿ "ಪಿಜಿಡಿಸಿಎ" ಅಭ್ಯಾಸ ನಡೆಸುತ್ತಿದ್ದೆ. ಅಂದು ಕಾಲೇಜಿಗೆ ಹೋಗುವಾಗ ಎರಡು ಕಿಲೋ ಸಿಹಿತಿಂಡಿ ತೆಗೆದುಕೊಂಡು ಹೋಗಿದ್ದೆ. ಅಂದು ನನ್ನ ಜನ್ಮದಿನವೆಂದು ಹೇಳಿ ಸಿಹಿತಿಂಡಿ ಹಂಚಿ ಎಲ್ಲರಿಗೂ ಅಶ್ಚರ್ಯಪಡಿಸೋಣ ಎನ್ನುವ ಉದ್ದೇಶ ನನ್ನದಾಗಿತ್ತು.
ಆದರೆ ಅಂದು ಅಲ್ಲಿ ಆಶ್ಚರ್ಯಪಡುವ ಸರದಿ ನನ್ನದಾಗಿತ್ತು.  ತರಗತಿಯಲ್ಲಿದ್ದ ಅಷ್ಟೂ ಮಂದಿ ತಮ್ಮ ಹಸ್ತಾಕ್ಷರಗಳನ್ನು ಹಾಕಿದ್ದ, ಒಂದು ಸುಂದರವಾದ ಶುಭಾಶಯ ಪತ್ರವನ್ನು ನನಗಾಗಿ ತಯಾರಾಗಿ ಇಟ್ಟುಕೊಂಡು ಕಾಯುತ್ತಿದ್ದರು. ನಾನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಒಕ್ಕೊರಲಿನಿಂದ "ಹ್ಯಾಪೀ ಬರ್ತ್ ಡೇ ಟು ಯೂ..." ಎಂದು ಹಾಡ ತೊಡಗಿದರು.
ಕಂಪ್ಯೂಟರ್ ತರಬೇತಿ ಕೇಂದ್ರದ ಡೀನ್‍ರಿಂದ ನನ್ನ ಜನ್ಮ ದಿನಾಂಕ ತಿಳಿದು, ಆತನೂ ಸೇರಿಕೊಂಡು, ನಾಗೇಂದ್ರ ಪ್ರಸಾದ್, ಕವಿತಾ, ಮೀನಾ ಡಿಸೋಜಾ, ಸೆಲ್ವಮ್ಮ, ಬಸವರಾಜ್, ಸುಗಂಧಿ, ಸೌರವ್, ಎನ್ನುವ ಹಲವೇ ಮಂದಿ ಸೇರಿ ಯೋಜಿಸಿದ ಕಾರ್ಯವದಾಗಿತ್ತು. ಅಂದೂ ನನಗೆ ಆದ ಸಂತಸ ಅಷ್ಟಿಷ್ಟಲ್ಲ. ಎಲ್ಲರಿಗೂ ಸಿಹಿತಿಂಡಿ ಹಂಚಿ ತುಂಬು ಮನದಿಂದ ಧನ್ಯವಾದಗಳನ್ನು ತಿಳಿಸಿದ್ದೆ.
* * * * *
ಅಲ್ಲಿಂದ ಸರಿಯಾಗಿ ಹನ್ನೊಂದು ವರುಷಗಳ ನಂತರ, ಅಂದರೆ, ಕಳೆದ ೧೬ ಜುಲಾಯಿ ೨೦೧೦ರಂದು ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಆತ್ಮೀಯರಾದ ರಾಘವೇಂದ್ರ ನಾವಡರು, ನಾನು ಕಛೇರಿಯನ್ನು ತಲುಪುವ ಮೊದಲೇ, ಹೊರನಾಡಿನಿಂದ ಕರೆಮಾಡಿ ಶುಭ ಹಾರೈಸಿದ್ದಲ್ಲದೇ, "ಹರೀಶ ಆತ್ರೇಯರು ಸಂಪದದಲ್ಲಿ ತಮ್ಮ ಬಗ್ಗೆ ಸುಂದರವಾದ ಲೇಖನ ಬರೆದು ಶುಭ ಹಾರೈಸಿದ್ದಾರೆ" ಅನ್ನುವ ಸುದ್ದಿಯನ್ನೂ ತಲುಪಿಸಿದ್ದರು. ಕಛೇರಿಗೆ ಬಂದು ಸಿರಿಗನ್ನಡ ಸಂಪದ ತೆರೆದು ನೋಡಿದರೆ ಹರೀಶ ಆತ್ರೇಯರ ಶುಭಾಶಯ ಲೇಖನ ನನ್ನನ್ನು ಮಂತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಅಷ್ಟೊಂದು ದೀರ್ಘವಾದ ಲೇಖನ, ನನ್ನ ಬಗ್ಗೆ ಅಷ್ಟೊಂದು ವಿಚಾರ ಸಂಗ್ರಹಮಾಡಿಕೊಂಡು, ಬಹುಷಃ ನನ್ನನ್ನು ನನಗಿಂತಲೂ ಚೆನ್ನಾಗಿ ಅರಿತವರಂತೆ ಬರೆದಿದ್ದ ಶೈಲಿ, ನನ್ನನ್ನು ಮೌನಕ್ಕೆ ತಳ್ಳಿ ಬಿಟ್ಟಿತ್ತು. ಅಂದಿನ ದಿನವೂ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿಯದ ದಿನವಾಗಿ ಮಾರ್ಪಟ್ಟು ಬಿಟ್ಟಿತು. ಆ ನೆನಪನ್ನು ಇನ್ನೂ ಭದ್ರಪಡಿಸಲು ನೆರವಾದದ್ದು ಆತ್ಮೆಯ ಸಂಪದಿಗರಾದ ರಾಘವೇಂದ್ರ ನಾವಡ, ಭಾಗ್ವತ ಮತ್ತು ಗೋಪಾಲ ಮಾ ಕುಲಕರ್ಣಿಯವರು ಅಂದು ನನಗಾಗಿ ಬರೆದು ಪ್ರಕಟಿಸಿದ ಕವನಗಳು ಮತ್ತು ಅಲ್ಲಿನ ಪುಟಗಳಲ್ಲಿ ಪ್ರತಿಕ್ರಿಯೆಗಳ ಮೂಲಕ ನನಗೆ ಶುಭ ಹಾರೈಸಿ ಅಭಿಮಾನ, ಪ್ರೀತಿ ವಿಶ್ವಾಸಗಳ ಮಹಾಪೂರವನ್ನೇ ಹರಿಸಿದ ಸಹೃದಯಿ ಸಂಪದಿಗರಾದ ತಾವುಗಳು.
* * * * *
ನನ್ನ ಜೀವನದಲ್ಲಿ ಬಂದು ಹೋದ ನಲವತ್ತೊಂಭತ್ತು ಜನ್ಮದಿನಗಳ ಪೈಕಿ, ಈ  ಮೂರು ಜನ್ಮದಿನಗಳ ನೆನಪು ನನ್ನ ಮನದಲ್ಲಿ ಸದಾ ಹಸಿರಾಗೇ ಇದೆ ಮತ್ತು ಇರುತ್ತದೆ.
ಜೊತೆಗೆ, ನಾನು ಹೀಗೆ, ವಿಭಿನ್ನ ರೀತಿಯಲ್ಲಿ ಜನರ ಆತ್ಮೀಯತೆ ಮತ್ತು ಅಭಿಮಾನ ಗಳಿಸುವುದಕ್ಕೆ, ಕಾರಣವಾದರೂ ಏನಿದ್ದಿರಬಹುದು ಎಂದು ನನ್ನ ಮನಸ್ಸು ಸುದೀರ್ಘ ಚಿಂತನೆಗೆ ಒಳಗಾಗುತ್ತದೆ. ನಾನು ಅದಕ್ಕೆಲ್ಲಾ ಅರ್ಹನೇ ಎನ್ನುವ ಪ್ರಶ್ನೆಯೂ ಕಾಡುತ್ತದೆ.


ಬಹುಷಃ ಇದಕ್ಕೆ ಉತ್ತರ ಹುಡುಕುವುದು ಕಷ್ಟ.


 


- ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments