ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !

ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !

ಭಾನುವಾರ ಕಛೇರಿಗೆ ಹೋಗುವ ಆತುರವಿಲ್ಲದ್ದರಿಂದ ನಿಧಾನವಾಗಿ ಎದ್ದು ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೆ. ಪೂಜೆಗಾಗಿ ಹೂ ಕೀಳುತ್ತಿದ್ದ ನನ್ನ ಪತಿರಾಯರು ’ಮಂಜು, ಬೇಗ ಬಾ’ ಎಂದು ಕೂಗಿದಾಗ ಗಾಬರಿಯಿಂದಲೇ ಹೊರಗೆ ಬಂದೆ. ಆದರೆ ನಾ ಕಂಡ ದೃಶ್ಯ ನನಗೆ ಸಂತಸ ನೀಡಿತು.ಕೂಡಲೇ ಒಳಗೆ ಬಂದು ನನ್ನ ಮೊಬೈಲ್ ಕ್ಯಾಮರದಲ್ಲಿ ಅಪರೂಪದ ಆ ಕ್ಷಣಗಳನ್ನು ಸೆರೆಹಿಡಿದೆ. ಅಂದದ ಅರಗಿಳಿಯೊಂದು ಹಾರಿ ಬಂದು ನಮ್ಮ ಮನೆಯ ಕಾಂಪೌಂಡ್ ಮೇಲೆ ಕುಳಿತಿತ್ತು.



ನಾನು ಹತ್ತಿರದಿಂದ ಒಂದೆರಡು ಫೋಟೋ ತೆಗೆದಾಗಲೂ ಅದು ಹಾರಿಹೋಗದಿದ್ದಾಗ ಆ ಪುಟ್ಟಮರಿಗೆ ಹಾರಲು ಶಕ್ತಿ ಕಡಿಮೆ ಇರಬಹುದು ಎಂದು ಮರುಗುತ್ತಾ,ಹಣ್ಣು ತಿನ್ನಿಸಿ ನೋಡೋಣವೆಂದು  ತಿನ್ನಿಸಿದರೆ ಒಂದೇ ನಿಮಿಷದಲ್ಲಿ ಹಣ್ಣನ್ನು ಪೂರ್ತಿಯಾಗಿ ತಿಂದಿತು.



 



ಈ ಹೊತ್ತಿಗಾಗಲೇ ನಮ್ಮ ಅಕ್ಕಪಕ್ಕದ ಮನೆಯವರು, ಮಕ್ಕಳು  ಸೇರಿ ಕುತೂಹಲ, ಸಂತೋಷದಿಂದ ಕಲರವ ಮಾಡಿದ್ದರಿಂದ ಪುಟ್ಟ ಗಿಣಿ ತಬ್ಬಿಬ್ಬುಗೊಂಡಿತು. ಹಾರಲಾರದೆ ಅಸಹಾಯಕವಾದ ಆ ಮರಿಯನ್ನು ಚಿಕ್ಕ ಪಂಜರದಲ್ಲಿಟ್ಟು ಹಣ್ಣು, ಮೆಣಸಿನಕಾಯಿ,ಕಾಳುಗಳನ್ನು ಹಾಕಿದೆವು.



ಒಂದೆರಡು ಗಂಟೆಯಲ್ಲಿ ಚೇತರಿಸಿಕೊಂಡ ಮರಿಯನ್ನು ಹೊರ ಬಿಡುತ್ತಿದ್ದಂತೆಯೇ  ಕ್ಷಣಮಾತ್ರದಲ್ಲಿ ಪುರ್ರನೆ ಹಾರಿ ಎತ್ತರದ ಮರವನ್ನೇರಿ ಕೀ...ಕೀ....ಎನ್ನುತ್ತಾ ತನ್ನ ಬಳಗವನ್ನು ಸೇರಿಕೊಂಡಿತು.



ಆ ಗಿಳಿಮರಿ ನಮ್ಮೊಡನೆ ಇದ್ದಷ್ಟು ಸಮಯ ನಮ್ಮ ಮನಸ್ಸಿಗೆ ಮುದ ನೀಡಿ ರಜೆಯ ಸವಿಯನ್ನು ಹೆಚ್ಚಿಸಿತು.ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !


 

Rating
No votes yet

Comments