ಅಮ್ಮಾ, ನೀವೆನಗೆ ಮಾತೆ ಕೌಸಲ್ಯೆಯಂತೆ!

ಅಮ್ಮಾ, ನೀವೆನಗೆ ಮಾತೆ ಕೌಸಲ್ಯೆಯಂತೆ!

ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದು
ಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ
 
ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದು
ಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ
 
ನನ್ನ ವನವಾಸ ಇನ್ನೂ ಮುಗಿದಿಲ್ಲ ನಾನಿನ್ನೂ ನಿಮ್ಮಿಂದ ದೂರ
ಅದರಿಂದಾಗಿ ಆತನೇ ಹೊತ್ತಿದ್ದಾನೆ ನನ್ನ ಜವಾಬ್ದಾರಿಗಳ ಭಾರ
 
ನಿಮ್ಮ ಸೇವೆಯ ಭಾಗ್ಯವಿಲ್ಲವಲ್ಲ ಅನ್ನುವುದೇ ಈ ಮನದಿ ಪಿಡುಗು
ಆತನ ಮೇಲಿನ ನಂಬಿಕೆಯಿಂದ ಕಡಿಮೆ ಆಗುವುದೆನ್ನ ಕೊರಗು
 
ನೀವು ಅಲ್ಲಿ ನಗು ನಗುತ್ತಾ ಬಾಳುತ್ತಿದ್ದರೆ ನನಗೂ ನೆಮ್ಮದಿ ಇಲ್ಲಿ
ನೀವೇ ಮನ ನೋಯಿಸಿಕೊಳ್ಳುತ್ತಿದ್ದರೆ ಏನಿದೆ ನನ್ನೀ ಬಾಳಲ್ಲಿ?
 
ರಾಮನಿಗಷ್ಟೇ ಅಲ್ಲ ಭರತನಿಗೂ ನೀವಿರಬೇಕು ಕೌಸಲ್ಯೆಯಾಗಿ
ಬಿರುಕು ಮೂಡಿಸದಿರಿ ಸಹೋದರರ ಮನದಲ್ಲಿ ಕೈಕೇಯಿಯಾಗಿ
 
ದೂರದಲಿ ಕೂತವರು ಕರೆ ಮಾಡಿ ನಿಮ್ಮ ಮನ ಮೆಚ್ಚಿಸಬಹುದು
ಅಲ್ಲಿ ಜೊತೆಯಲ್ಲಿರುವವರಿಗೆ ಜವಾಬ್ದಾರಿಯ ಎಚ್ಚರ ಸದಾ ಇಹುದು
 
ಆಡಿ ಮರೆತುಬಿಡೋ ಮಾತುಕತೆಗಳಿಗಿಂತ ಭಾವನೆಗಳೇ ಮುಖ್ಯ
ಭಾವನೆಗಳೇ ಅರ್ಥ ಆಗದಿದ್ದರೆ ಅಪ್ರಯೋಜಕ ಯಾವುದೇ ಸಖ್ಯ
***********************
 ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments