ಸಾಯಿ ಶಕ್ತಿ...
ಬರಹ

ಸಾಯಿ ಪ್ರಕಾಶ್ ಸರಿ ಸುಮಾರು ೮೦ ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ನೂರು ಚಿತ್ರಗಳನ್ನ ನಿರ್ದೇಶನ ಮಾಡಲೇಬೇಕೆಂದು ಫೈನಲ್ ಇನ್ನಿಂಗ್ಸ್ ನಲ್ಲಿ ಮತ್ತೆ ಉತ್ಸುಕರಾಗಿದ್ದಾರೆ. ಅದರ ಫಲವೇ "ಶ್ರೀನಾಗಶಕ್ತಿ" ಕಥೆ ಸಿದ್ಧವಾಗಿದೆ. ಕಥೆ ಕೇಳಿದಾಕ್ಷಣ ಚಿತ್ರ ನಿರ್ಮಿಸಲು ನಟಿ ಚಂದ್ರಿಕಾ ಮುಂದೆ ಬಂದಾಗಿದೆ. ನಾಯಕಿ ಶ್ರುತಿಯೂ ಅಷ್ಟೆ. ರಾಷ್ಟ್ರಪ್ರಶಸ್ತಿ ತಂದುಕೊಟ್ಟ ನಿರ್ದೇಶಕರ ಕರೆಗೆ ಪ್ರೀತಿಯಿಂದ ಬಂದಾಗಿದೆ. ಜೊತೆಗೆ ತಂಗಿ ಮಗಳು ಕೃತಿಯನ್ನ ಕರೆತಂದಿದ್ದಾರೆ. ನಾಯಕ ರಾಮಕುಮಾರ್ ಸಹ ಇದಕ್ಕೆ ಹೊರತಾಗಿಲ್ಲ. ಸಾಯಿಯವರಿಗೆ ಒಳ್ಳೆಯದಾಗಲೆಂದು ಮತ್ತೊಂದು ಭಕ್ತಿ ಪ್ರಧಾನ ಚಿತ್ರಕ್ಕೆ ನಾಯಕರಾಗಲು ಒಪ್ಪಿಕೊಂಡಿದ್ದಾರೆ.
"ಶ್ರೀನಾಗಶಕ್ತಿ" ಶೃದ್ಧಾ,ಭಕ್ತಿ,ನಂಬಿಕೆ, ಈ ಮೂರು ಅಂಶಗಳನ್ನ ಆಧರಿಸಿದ ಚಿತ್ರ. ಎಲ್ಲ ಕಾಲಕ್ಕೂ ಧೈವಿ ಭಕ್ತಿ ಬೇಕೆ..ಬೇಕು ಅನ್ನೊ ಸಣ್ಣದೊಂದು ನಂಬಿಕೆ ಮೇಲೆ ಸಾಯಿ ಪ್ರಕಾಶ್ ನಾಗಶಕ್ತಿ ಕಥೆ ಹೆಣೆದಿದ್ದಾರೆ. ದುಡ್ಡು ಹಾಕಿದ ಚಂದ್ರಿಕಾ ಅವರಿಗೂ ಒಂದು ಪಾತ್ರ ಕೊಟ್ಟಿದ್ದಾರೆ. ನಾಗರಾಜ..ನಾಗರಾಣಿಯ ಎರಡು ಪ್ರಮುಖ ಕ್ಯಾರೆಕ್ಟರ್ ನಲ್ಲಿ ಚಂದ್ರಿಕಾ ನಾಗರಾಣಿ, ನಾಗರಾಜನ ಪಾತ್ರವನ್ನ ನಟ ಅಭಿಜಿತ್ ಮಾಡ್ತಾಯಿದ್ದಾರೆ.
ಕುಕ್ಕೆ ಸುಬ್ರಮಣ್ಯ, ನಂದಿಗ್ರಾಮ, ಬೆಂಗಳೂರುಗಳಲ್ಲಿ "ಶ್ರೀನಾಗಶಕ್ತಿ" ಚಿತ್ರೀಕರಣಗೊಳ್ಳಿದೆ. ಈ ಮೊದಲಿನ ಚಿತ್ರಕ್ಕೆ ಬಳಸಿದ ಗ್ರಾಪಿಕಲ್ ಸ್ಪರ್ಶ ಇಲ್ಲೂ ಇರುತ್ತದೆ. ಗ್ರಾಮದೇವತೆ, ನಾಗದೇವತೆಗಳಂತಹ ಚಿತ್ರಗಳಿಗೆ ಅತೀ ಹೆಚ್ಚು ಗ್ರಾಫಿಕ್ ಉಪಯೋಗಿಸಲಾಗಿತ್ತು. ಆದ್ರೆ, "ಶ್ರೀನಾಗಶಕ್ತಿ"ಯಲ್ಲಿ ಹಾಗಿಲ್ಲ. ಎಲ್ಲಿಬೇಕೋ...ಅಲ್ಲಿ ಗ್ರಾಫಿಕ್ ಬಳಕೆ ಆಗಲಿದೆ. ಬರುವ ಮೂರುತಿಂಗಳಲ್ಲಿ ಚಿತ್ರ ಸಿದ್ಧಗೊಳ್ಳುವಂತೇನೆ ಸ್ಕೆಡ್ಯೂಲ್ ಮಾಡಲಾಗಿದೆ. ಸಾಯಿಯವರ ಈ ಹೊಸ ಶಕ್ತಿ ಹೊಸ ಚಿತ್ರ ಮಾಡಲು ಇನ್ನಷ್ಟು ಶಕ್ತಿ ನೀಡಲಿ..
- ರೇವನ್ ಪಿ.ಜೇವೂರ್