CSLC ಚರ್ಚೆಯಿಂದ ಹೊರಬಂದ ಹಿಂದುತ್ವ, ಹಿಂದೂ ಮತ್ತಿತರ ವಿಷಯಗಳು...

CSLC ಚರ್ಚೆಯಿಂದ ಹೊರಬಂದ ಹಿಂದುತ್ವ, ಹಿಂದೂ ಮತ್ತಿತರ ವಿಷಯಗಳು...

ಬೇಡಬೇಡವೆಂದರೂ ಹಿಂದುತ್ವ ಬಿಡಲ್ಲ! :) ಅದಕ್ಕೇ ಸಿ ಎಸ್ ಎಲ್ ಸಿ ಚರ್ಚೆಯನ್ನು ದಾರಿತಪ್ಪಿಸುವುದರ ಬದಲಾಗಿ ಆ ಚರ್ಚೆಯನ್ನು ಇಲ್ಲಿ ಮುಂದುವರೆಸೋಣ ಅಂತ ಈ ಹೊಸ ಲೇಖನ. ಇಲ್ಲಿ ಶ್ರೀಯುತ ಕೇಶವ ಅವರ ವಾದದೊಂದಿಗೆ ಇದನ್ನು ಪ್ರಾರಂಭಿಸುತ್ತೇನೆ. ನಂತರ ನನ್ನ ಪ್ರತಿಕ್ರಿಯೆಯೂ ಇದೆ ಅನ್ನಿ :)

 

--

 

ಈ ಪ್ರತಿಕ್ರಿಯೆ ನೀರ್ಕಜೆ ಮತ್ತು ಮೋಹನ ಅವರಿಗೆ,
<<ಸದ್ಯಕ್ಕೆ ನಾನು ಬಹುಸಂಸ್ಕೃತಿ ಪರವಾಗಿದ್ದೇನೆ ಎಂದಷ್ಟೇ ಹೇಳಬಲ್ಲೆ. ಇನ್ನು ಸಂಪದದಲ್ಲಿ ಚರ್ಚಾ ವಿಭಾಗದಲ್ಲಿ ಹಾಕಿದರೆ ಯಾರೂ ಅಷ್ಟಾಗಿ ಗಮನಿಸುವುದಿಲ್ಲ >> ಧನ್ಯವಾದಗಳು.
ಮೋಹನ: <<<ಆರ್ಯ ಸಂಸ್ಕೃತಿ ಯಾವುದು? ಆರ್ಯ ಪೂರ್ವ ಯಾವುದು? ನವರತ್ನ ರಾಜಾರಾಂ ಹೇಳುವಂತೆ ಆರ್ಯ ಎನ್ನುವುದು ಒಂದು ಗೌರವ ಸೂಚಿಸುವ ಪದವಷ್ಟೆ.>> ಈ ಭೂಭಾಗದಲ್ಲಿ ಆರ್ಯರ ಆಗಮನ ಅಥವಾ ಉಗಮವಾಗಿ ಸುಮಾರು ೫ ಸಾವಿರ ವರ್ಷಗಳೇ ಆಗಿವೆ. ಹೀಗಾಗಿ ವೈವಿಧ್ಯತೆಯ ನಡುವಿನಲ್ಲಿಯೂ ಏಕತೆಯ ರೂಪ ಹೊಂದುವಲ್ಲಿ ಸಫಲವಾಗಿದೆ. ಹೀಗೆ ವಿಕಸಿತಗೊಂಡ ಇಂದಿನ ನಮ್ಮ ಸಂಸ್ಕೃತಿಯನ್ನೇ ನಾನು ಆರ್ಯ ಸಂಸ್ಕೃತಿ ಎನ್ನುವುದು. ಸಂಸ್ಕೃತ ನಾಟಕಗಳಲ್ಲಿ "ಆರ್ಯಪುತ್ರ" ಎಂಬ ಸಂಭೋದನೆ ಇದ್ದಮಾತ್ರಕ್ಕೆ "ಆರ್ಯ" ಪದದ ಅರ್ಥವನ್ನು ಅಷ್ಟಕ್ಕೇ ಸೀಮಿತಗೊಳಿಸುವುದು ಸರಿಯಲ್ಲ.ನೀವು ನಾವು ಯಾರನ್ನು "ದ್ರಾವಿಡರು" ಎಂದು ಕರೆಯುತ್ತೀವೋ ಆ ಸಮಾಜವುಇಂದು ಬಹುತೇಕ ಹಿಂದುಳಿದ, ದುರಾದೃಷ್ಟವಶಾತ್ ಶೋಷಣೆಗಳಗಾದ ಶೂದ್ರ, ಹರಿಜನ ಇತ್ಯಾದಿ ಜನಸಮುದಾಯಗಳನ್ನೊಳಗೊಂಡ ಸಮಾಜ. ಇದು ಮೂಲತಃ ವರ್ಗಭೇದವಿರದ ಶ್ರಮಿಕ ವರ್ಗವಾಗಿತ್ತು. ನಂತರದ ಕಾಲಘಟ್ಟದಲ್ಲ ಆರ್ಯ ಸಮುದಾಯದ ಸಹಜೀವನದ ಫಲವಾಗಿ ಇದು ಕೂಡಾ ಸ್ವಲ್ಪಮಟ್ಟಿಗೆ ಶೇಣೀಕೃತ ರೂಪವನ್ನೂ, ವೃತ್ತಿಯಾಧಾರಿತ ವರ್ಗಗಳನ್ನೂ ಹೊಂದಿತು. ಇಲ್ಲಿ ಶೇಣೀಕೃತ ವೆಂದರೆ ಸಮಾಜದ ಏಣಿಯಲ್ಲಿ ಮೇಲಿನ, ಕೆಳಗಿನ ಹಂತಗಳಂತೆ. ಆದರೂ, ಈ ಸಮಾಜದಲ್ಲಿ ಉದಾಹರಣೆಗೆ ಒಬ್ಬ ಬೆಸ್ತ ಒಬ್ಬ ಅಗಸನನ್ನೋ, ಕುಂಬಾರನನ್ನೋ ಬೇರೆ ಜಾತಿಯವನೆಂದು ಪರಿಗಣಿಸುತ್ತಾನೆಯೇ ಹೊರತು ಅವನನ್ನು "ನೀಚ ಜಾತಿ" ಎಂದು ಕೀಳಾಗಿ ನೋಡುವುದಿಲ್ಲ. ಸಮಾಜದಲ್ಲಿ ಮೇಲು ಕೀಳೆಂಬ ಭಾವನೆಗಳು ಆರ್ಯ ಸಂಸ್ಕೃತಿಯ ಪ್ರಮುಖ ಲಕ್ಷಣಗಳಲ್ಲೊಂದು.
ಇನ್ನು ದ್ರಾವಿಡ ಸಮಾಜದ ದೇವರುಗಳಾಗಲೀ, ಆಚಾರಣೆಗಳಾಗಲೀ ವೇದಕಾಲೀನ ಸಾಹಿತ್ಯದಲ್ಲಿ ಇಲ್ಲ. ನಂತರದ ಪುರಾಣಗಳಲ್ಲಿ ಉಲ್ಲೇಖವಿರಬಹುದು ಅಷ್ಟೆ. ಆಹಾರ ಪದ್ಧತಿ ಸಂಸ್ಕೃತಿಯ ಒಂದು ಭಾಗವೂ ಕೂಡಾ. ಆ ಅರ್ಥದಲ್ಲಿ ಗೋಮಾಂಸ ಸೇವನೆಯನ್ನು ಪ್ರಸ್ತಾಪಿಸಿದ್ದೇನೆ. ಆ ವಾಸ್ತವವನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದಷ್ಟೇ ನನ್ನ ವಾದ.
<<<ಮಧ್ಯಪ್ರದೇಶದಲ್ಲಿ (ಇಂದಿಗೂ ಮರಗಿಡಗಳನ್ನು ಪೂಜಿಸುವ) ಬುಡಕಟ್ಟು ಜನರ ಕೊರಳಿಗೆ ಶಿಲುಬೆ ನೇತು ಹಾಕಲು ಹೊರಟವರಿಗೆ ಅದು ಬೇಡ ಅವರು ಅದೇ ಸಂಸ್ಕೃತಿಯಲ್ಲಿ ಮುಂದುವರೆಯಲಿ ಎಂದಿದ್ದಾರೆ ಅಲ್ಲವೆ? ಅವರಿಗೆ ಯಾರಾದರೂ ನೀವು ಹಿಂದೂಗಳಾಗಿ ಎಂದಿದ್ದಾರೆಯೆ?>>>> ನಿಜ ಅವರನ್ನು ಅದೇ ಸಂಸ್ಕೃತಿಯಲ್ಲಿ ಮುಂದುವರೆಯಲಿ ಎಂದಿದ್ದಾರೆ. ಆದರೆ ಸಮಾಜದಲ್ಲಿ ಒಟ್ಟಾಗಿ ಬದುಕುತ್ತಿರುವಾಗ್ಗ್ಯೂ ಸಮಾಜದ ಏಣಿಯಲ್ಲಿ ಅವರು ಆಜೀವ ಪರ್ಯಂತ ಕೆಳಗಿನ ಮೆಟ್ಟಿಲಲ್ಲೇ ಇರುವಂತೆಯೂ ನೋಡಿಕೊಳ್ಳಲಾಗಿದೆಯಲ್ಲವೇ - ಉದಾಹರಣೆಗೆ ದೇವಾಲಯ(ಇಂದಿನ ಅರ್ಥದಲ್ಲಿ)ವೇ ಇಲ್ಲದ ಈ ಸಂಸ್ಕೃತಿಯ ಜನಗಳಿಗೆ ಸಮೂಹ ಭೋಜನದಲ್ಲಿ ಪಂಕ್ತಿಭೇದ, ಪ್ರತ್ಯೇಕ ಸ್ಮಶಾನ ಇತ್ಯಾದಿ. ಮೇಲುಕೀಳೆಂಬ ಭೇದವಿಲ್ಲದ ಆ ಕಾರಣಗಳಿಂದ ಆರ್ಯ ಸಂಸ್ಕೃತಿಯೊಂದಿಗೆ ಹೊಂದಿಕೊಂಡು ಜೀವಿಸುತ್ತಿರುವ ಜನಸಮುದಾಯವನ್ನು ಕೀಳಾಗಿಯೆ ನಡೆಸಿಕೊಂಡರೆ ಅವರು ಬೇಸತ್ತು ಸಮಾನತೆಯ ಆಮಿಷ ತೋರುವ ಮಿಷನರಿಗಳ ಶಿಲುಬೆಗೆ ಕೊರಳೊಡ್ಡುವುದು ತಪ್ಪೇನೂ ಅಲ್ಲ ಅಲ್ಲವೇ? ಅಲ್ಲಿ ಅವರಿಗೆ ನಿಜವಾದ ಸಮಾನತೆ ಒಂದು ತಲೆಮಾರಿನಲ್ಲಿ ಸಿಗುವುದಿಲ್ಲವೆಂಬುದು ಬೇರೆಯ ಮಾತು! ಇದು ನಮ್ಮೊಳಗಿನ ಹುಳುಕು, ಇದನ್ನೇ ಅನ್ಯಧರ್ಮಗಳವರು ತಮ್ಮ ಮತಾಂತರಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಇದನ್ನು ಸರಿಪಡಿಸಿದಲ್ಲಿ ಮತಾಂತರದ ಪಿಡುಗು ನಿಲ್ಲುತ್ತದಲ್ಲವೇ? ಅವರನ್ನು ಅವರದೇ ಸಂಸ್ಕೃತಿಯಲ್ಲಿ ಮುಂದುವರೆಯಲಿ ಎಂದು ಬಿಟ್ಟದ್ದೇ ನಮ್ಮ ಘನಕಾರ್ಯವೆಂದೂ, ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಗೌರವದಿಂದ ಕಾಣದೇ ಕೀಳಾಗಿ ನಡೆಸಿಕೊಳ್ಳುತ್ತಾಬಂದು, ಅವರು ಮತಾಂತರಗೊಂಡರೆ ಅದಕ್ಕೆ ಹುಯಿಲೆಬ್ಬಿಸುವುದು ಉಚ್ಛಜಾತಿಗಳ ಹಿತಾಸಕ್ತಿಯಲ್ಲವೇ? ಈ ವಾಸ್ತವವನ್ನು ಕಾಣಬೇಕಾದರೆ ನೀವು ನಗರಗಳನ್ನು ಬಿಟ್ಟು ಮಧ್ಯ ಪದೇಶ, ಉತ್ತರ ಪ್ರದೇಶ ಬಿಹಾರದ ಹಳ್ಳಿಗಳಲ್ಲಿ ಹೋಗಿ ನೋಡಿ. ಅಲ್ಲಿ, ಉಚ್ಛಜಾತಿಗಳ ದೈನಂದಿನ ಜೀವನಕ್ಕೆ ನೀಚಜಾತಿಯೆಂದು ಪರಿಗಣಿಸುವ ಶ್ರಮಿಕ ವರ್ಗದ ಸೇವೆ ಬೇಕೇ ಬೇಕು. ಭಾರತೀಯ ಸಮಾಜದಲ್ಲಿ ಸುಧಾರಣೆ ಆಗಬೇಕಾಗಿರುವುದು ಇಲ್ಲಿ.
<<<ಅದೊಂದೆ ಕಾರಣವನ್ನಿಟ್ಟುಕೊಂಡು ಇಡಿ ಹಿಂದೂ ಸಮಾಜವನ್ನೆ ಹೋಳು ಮಾಡಲು ಪ್ರಯತ್ನಿಸುತ್ತಿರುವವರ ಹಿಂದಿರುವ ಹುನ್ನಾರವೆನೊ?>>> ಇದು ವಸ್ತುಸ್ಥಿತಿಯನ್ನು ಒಪ್ಪದೇ ಸಮಾಜವನ್ನು ಹೋಳುಮಾಡುವ ಪ್ರಯತ್ನವೆಂದು ನಿಮಗನಿಸಿದರೆ ನಾನು ನನ್ನ ವಿಚಾರ ಮಂಡಿಸುವಲ್ಲಿ ವಿಫಲನಾಗಿದ್ದೇನೆ ಎಂದರ್ಥ! <<< ಹಿಂದೂ ಎನ್ನುವುದೆ ವೈವಿಧ್ಯತೆಯ ಸಂಕೇತ. ಅಲ್ಲಿ ಯಾರೂ ಯಾರನ್ನೂ ಹೀಗೆ ಇರಿ ಎಂದು ಹೇಳಿಲ್ಲ ಹೇಳುವುದೂ ಇಲ್ಲ. ಅದರ ಬಗ್ಗೆ ತಮ್ಮ ಪೂರ್ವಗ್ರಹ ಬಿಡಿ ಎಂದು ನನ್ನ ಮನವಿ.>>> ಇದು ಪೂರ್ವಾಗ್ರಹವಲ್ಲ. ಅನುಭವದ ಮಾತು - ಇಂದು ನಾವು ನೀವು ನಗರವಾಸಿಗಳೆಲ್ಲ ನಮ್ಮಲ್ಲಿ ಜಾತಿಭೇದವಿಲ್ಲ, ನಾವೆಲ್ಲಾ ಒಂದೇ ಎಂಬ ತೋರಿಕೆಯ ಜೀವನ ನಡೆಸುತ್ತಿದ್ದೇವಲ್ಲವೇ?(ನಿಜವಾಗಿ ಅಂದರೆ ಆತ್ಮಸಾಕ್ಷಿಯಾಗಿ ಹಾಗಿಲ್ಲದೆ ಇರುವವರ ಕ್ಷಮೆ ಕೋರುತ್ತಾ). ಮೇಲೆಹೇಳಿದ ಪರದೇಶಗಳಲ್ಲಿ ಆರಾರು ತಿಂಗಳು ಕ್ಯಾಂಪ್ ಮಾಡಿ ಅವರೊಂದಿಗೆ ಬೆರೆತು ಜೀವಿಸಿರುವ ಅನುಭವದಿಂದ ಹೇಳುತ್ತಿರುವ ಮಾತು ಇದು. ಹಲವು ಹೋಳಾಗಿರುವ ಸಮಾಜವನ್ನು ಒಂದಾಗಿಸುವ ಕೆಲಸಕ್ಕೆ ಮುಂದಾಗಬೇಕೆನ್ನುವವನು ನಾನು.
<<<ಹಿಂದುತ್ವವೆನ್ನುವ ಏಕ ಸಂಸ್ಕೃತಿಯನ್ನು ಹೇರುತ್ತಿದ್ದಾರೆ ಎಂದು ಇವರುಗಳು ಹೆಸರು ಹೇಳದೆ ಟೀಕಿಸುತ್ತಿರುವುದು ಆರೆಸ್ಸೆಸನ್ನೆ.>>> ಇದು ತಪ್ಪು. ನಾನು ಟೀಕಿಸುತ್ತಿರುವುದು ಇವರನ್ನು - ಮನುಷ್ಯರೊಳಗೆ ಮೇಲು-ಕೀಳು ಎಂಬ ಭಾವನೆಯನ್ನಿಟ್ಟುಕೊಂಡಿರುವ ಉಚ್ಛಜಾತಿಯವರನ್ನು; ಆ ಭಾವನೆಗಳಿಗೆ ನೀರೆರೆಯುವ ರಾಜಕಾರಣಿಗಳನ್ನು ಮತ್ತು ತಮ್ಮ ಹಿತಾಸಕ್ತಿಯನ್ನಷ್ಟೇ ಗಮನಿಸುತ್ತಾ ಅಂತಹ ಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನಿಸದೇ ಇರುವ ಧಾರ್ಮಿಕ ಸಂಘಟನೆಗಳನ್ನು. ಆಹಾರ ಪದ್ಧತಿ ಸಂಸ್ಕೃತಿಯ ಒಂದು ಭಾಗವೂ ಕೂಡಾ ಆಗಿರುವುದರಿಂದ, ಅದರ ವಿರುದ್ಧ ದನಿಯೆತ್ತಿದರೆ ಅದು ಆ ಸಂಸ್ಕೃತಿಯ / ಸಮಾಜದ ವಾಸ್ತವಿಕತೆಯನ್ನು ಅಲ್ಲಗಳೆದಂತೆ. ಈ ವಿಷಯದಲ್ಲಿ ಆರ್ ಎಸ್ ಎಸ್ ಮುಂಚೂಣಿಯಲ್ಲಿರುವುದೆಂದು ನೀವು ಭಾವಿಸಿರುವುದರಿಂದ ನಾನು ಟೀಕಿಸಿದ್ದು ಆರೆಸ್ಸೆಸನ್ನೆ ಎಂಬ ನಿಮ್ಮ ನಿರ್ಧಾರಕ್ಕೆ ಕಾರಣ. ಆದರೆ ಅದು ಹಾಗಲ್ಲ ಎಂಬುದನ್ನು ನಿಮಗೆ ಅರ್ಥ ಮಾಡಿಸುವುದೇ ನನ್ನ ಈ ಪ್ರಯತ್ನ.
ಇನ್ನು "ಹಿಂದೂ" ಎಂಬ ಪದಕ್ಕೆ ಕಳೆದ ೨೦೦೦ ವರ್ಷಗಳಿಂದ ಬೆಳೆದು ಇಂದು ಜನಮನಗಳಲ್ಲಿ ತಳವೂರಿರುವ ಅರ್ಥ ಇತರ ಸೆಮೆಟಿಕ್ ಧರ್ಮಗಳಂತೆ ಅದೂ ಒಂದು :ಧರ್ಮ". ಈ ಕಾರಣದಿಂದಲೇ, ನೀವು "ಭಾರತದಲ್ಲಿ ವಾಸಿಸುತ್ತಿರುವವರೆಲ್ಲಾ ಹಿಂದೂಗಳು" ಎಂದು ಅರ್ಥೈಸಿದರೆ ಅಪಸ್ವರವೇಳುವುದು. ಅನ್ಯಧರ್ಮೀಯರ ಅಪಸ್ವರಕ್ಕೆ ಹೆದರದೇ ಇರಬೇಕು ನಿಜ. ಆದರೆ ಆ ಪದದ ನಿಜವಾದ ಅರ್ಥವನ್ನು ನಾವು ತಿಳಿಸಿಯೇ ಇಲ್ಲವಲ್ಲ? ಎಲ್ಲಕ್ಕಿಂತ ಮೇಲಾಗಿ ಆ ಪದವನ್ನು ಹುಟ್ಟುಹಾಕಿದವರೇ ಅನ್ಯಧರ್ಮೀಯರಾದದ್ದರಿಂದ ಅವರು ಆ ಪದಕ್ಕೆ ತಾವು ಕೊಟ್ಟ ಅರ್ಥವಲ್ಲದೇ ಬೇರೆಯದನ್ನು ಒಪ್ಪಲು ಅಶಕ್ತರು. ಹೀಗಾಗಿ, "ಹಿಂದೂ" ಪದದ ಅರ್ಥವನ್ನು "ಈ ದೇಶದಲ್ಲಿ ವಾಸಿಸುತ್ತಿರುವ ಸೆಮೆಟಿಕ್ ಧರ್ಮಗಳ ಅನುಯಾಯಿಗಳನ್ನು ಹೊರತುಪಡಿಸಿ ಉಳಿದೆಲ್ಲ ಬಹುಸಂಸ್ಕೃತಿಗಳ ಸಮಾಜ" ಎಂದು ಅರ್ಥೈಸಿದರೆ ಸರಿಯಲ್ಲವೇ? ಎಲ್ಲರನ್ನು ಒಳಗೊಂಡದ್ದು "ಭಾರತೀಯ ಸಮಾಜ" ಎನ್ನಬಹುದಲ್ಲವೇ?
<<ನಮ್ಮ ನಡುವಿನ ಸೆಕ್ಯುಲರಿಸ್ಟರಿಗಳಿಗೂ ಸಲ್ಲಬೇಕು. ಅಂತಹವರಲ್ಲಿ ಕೇಶವರೂ ಆಗುವುದು ಬೇಡ>> ನನಗೆ ಆ ರೀತಿಯ ಯಾವ ಬಯಕೆಗಳೂ ಇಲ್ಲ. ನಾನು "ಏನಾದರೂ ಆಗು ಎಂತಾದರೂ ಆಗು ಮೊದಲು ಮಾನವನಾಗು" ಎಂಬ ತತ್ವದಲ್ಲಿ ನಂಬಿಕೆ ಇಟ್ಟವನು.
ವಿಷಯಾಂತರವಾಗಿದ್ದರೆ ಕ್ಷಮಿಸಿ.

Rating
No votes yet

Comments