ಉಡುಪಿ: ಕೃಷ್ಣ ಮಠ/ದೇಗುಲ
ಉಡುಪಿ ಕೃಷ್ಣ ದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಕೊಡುವ ಪ್ರಸ್ತಾವ ಈ ಹಿಂದಿನಿಂದಲೇ ಬಿಜೆಪಿ ಸರಕಾರದ ಅಜೆಂಡಾದಲ್ಲಿದ್ದು, ಇತ್ತೀಚೆಗೆ ಅದಕ್ಕೆ ಅಧೀಕೃತವಾಗಿ ಕಾಲ ಕೂಡಿಬಂದಿದೆ. ಕುರುಬರು ಹಾಗೂ ಇತರ ಜನಾಂಗದವರು ಸರಕಾರದ ಈ ಆದೇಶವನ್ನು ತೀವ್ರವಾಗಿ ಪ್ರತಿಭಟಿಸಿದ್ದಾರೆ. ದೇವಾಲಯ ಆದಾಯ ಉತ್ಪಾದಿಸುವ ದೊಡ್ಡ ಮೂಲವಾಗಿದ್ದು, ಅದನ್ನು ಪೂರಾ-ಪೂರಾ ಒಂದು ಜಾತಿಯವರ ಕೈವಶಕ್ಕೊಪ್ಪಿಸುವುದು ಸಾಮಾಜಿಕ ನ್ಯಾಯವಲ್ಲ ಎಂಬ ಅವರ ವಾದದಲ್ಲೂ ಹುರುಳಿಲ್ಲದಿಲ್ಲ. ಮುಜರಾಯಿ ಇಲಾಖೆ ನೋಡಿಕೊಳ್ಳುವುದು, ದೇವಾಲಯವೊಂದರ ಅದಾಯ-ಖರ್ಚು, ಸಂಬಳ-ಸಾರಿಗೆ, ಕಾಂಟ್ರಾಕ್ಟ್ಗಳ ಮೂಲಕ ಜಾತ್ರೆ-ಪರಿಷೆ ಮುಂತಾದ ಕಲಾಪಗಳ ಲೌಕಿಕ ನಿರ್ವಹಣೆಯನ್ನು. ದೇವಸ್ಥಾನವಾಗಲೀ, ಮಠ-ಮಂದಿರ-ಆಶ್ರಮಗಳಾಗಲೀ ಬರೇ ಲೌಕಿಕ ಚಟುವಟಿಕೆಗಳ ಕೇಂದ್ರವಲ್ಲ; ಅಥವಾ ಕೇವಲ ಆದಾಯದ ಮೂಲವೂ ಅಲ್ಲ; ಅವು ಆಧ್ಯಾತ್ಮಿಕ ಕೇಂದ್ರಗಳು, ಅನುಭಾವದ ತಾಣಗಳು. ನಂಬಿದವರಿಗೆ ನೆಮ್ಮದಿ, ಸ್ಫೂರ್ತಿ, ಉತ್ಸಾಹ, ಆವೇಶಗಳನ್ನೂ ಇವು ಕೊಡಮಾಡುತ್ತವೆ. ಈ ಭಾವಾನುಬಂಧಗಳು, ತಾಶೀಲ್ದಾರರ, ಎಸಿ ಸಾಹೇಬರ ನಿರ್ದೇಶಕತ್ವಕ್ಕೆ ಮೀರಿದ್ದು ಎನ್ನುವುದೇನೊ ಮೇಲ್ನೋಟಕ್ಕೇ ಗೊತ್ತಾಗುವ ಸತ್ಯ. ದೇವಾಲಯವನ್ನು ವಹಿಸಿಕೊಳ್ಳುವ ಗುರುವರ್ಯರಾದರೋ ಅಧಿಕಾರದ ದರ್ಪ-ದಬ್ಬಾಳಿಕೆಯ ದುರ್ಗುಣಕ್ಕೆ ಮೀರಿದವರು; ವ್ರತಾನುಷ್ಠಾನ ನಿಷ್ಠೆಯಿಂದಾಗಿ ಜನಸಾಮಾನ್ಯರಿಗೆ ಅತೀತರೂ ಸಂಪ್ರದಾಯ ಶರಣತೆಯಲ್ಲೂ ಸ್ವಂತಿಕೆ, ಸ್ವಾನುಭವ, ದಯಾ-ಔದಾರ್ಯಗಳನ್ನು ಪ್ರಾಮಾಣಿಕವಾಗಿ ಹೊಂದಿದವರೂ ಆಗಿರಲೇ ಬೇಕಾಗುತ್ತದೆ. ಅದನ್ನು ಸ್ವತಃ ಭಕ್ತಜನರ ಸ್ವಾನುಭವ ದೃಢೀಕರಿಸಬೇಕೇ ಹೊರತು ಯುಪಿಎಸ್ಸಿ, ಕೆಪಿಎಸ್ಸಿ ಇತ್ಯಾದಿ ಸಂಸ್ಥೆಗಳಲ್ಲ; ಸ್ವಾಮಿಗಳು ಅಂಥವರಾಗದಿದ್ದರೆ, ಅತ್ತ ಸಿಸಿಎಸ್ಆರ್ ಮೂಗುದಾರವೂ ಇಲ್ಲದೆ, ಇತ್ತ ಯಮನಿಯಮಾದಿ ಅನುಷ್ಠಾನಸಿದ್ಧಿಯೂ ಇಲ್ಲದೆ, “ದೇವರು ವರ ಕೊಟ್ಟರೂ ಪೂಜಾರಿ ಬಿಟ್ಟುಕೊಡ”ದ ಅವಸ್ಥೆ ಉಂಟಾಗಿಬಿಡುತ್ತದೆ!