ಒಬಾಮಾಗೆ ಸುಸ್ವಾಗತ

ಒಬಾಮಾಗೆ ಸುಸ್ವಾಗತ

ಬರಹ


(ಇಂದಿನ ’ಪ್ರಜಾವಾಣಿ’ ದಿನಪತ್ರಿಕೆಯ ಮುಖಪುಟದಲ್ಲಿ ಚಂದ್ರಶೇಖರ ಕಂಬಾರರ ಕವನ ’ಒಬಾಮಾಗೆ ಸ್ವಾಗತ’ ಪ್ರಕಟಗೊಂಡಿದೆ. ಅದಕ್ಕೆ ಪ್ರತಿಯಾಗಿ ನಾನಿಲ್ಲಿ ಅದೇ ಧಾಟಿಯಲ್ಲಿ, ಆದರೆ ಭಿನ್ನ ನೆಲೆಯಲ್ಲಿ ’ಒಬಾಮಾಗೆ ಸುಸ್ವಾಗತ’ ಕೋರುತ್ತಿದ್ದೇನೆ. ಈ ಅಣಕವಾಡನ್ನು ಕಂಬಾರರು ಮನ್ನಿಸುವರೆಂದುಕೊಳ್ಳುತ್ತೇನೆ.)

ಒಬಾಮಾಗೆ ಸುಸ್ವಾಗತ

ಪಡುವಣದಲ್ಲಿ ಓಲಗಗೊಂಡವರು
ಮೂಡಲಿಗೆ ಪಯಣಿಸುವುದೇನು ಹಿರಿದಲ್ಲ,
ಪಾದ ಬೆಳೆಸಿರಿ ಸ್ವಾಮೀ, ಭೂಮಿ ಒಂದೇ

ಮೊದಮೊದಲು ಸ್ವದೇಶೀ
ಜಪ ಮಾಡಿಕೊಂಡಿದ್ದವರು,
ನೀವು ಬರುವುದು ಗೊತ್ತಾದದ್ದೆ
ಜಪ ಜಾರಿ ವ್ರತಗೆಟ್ಟೆವೆಂದುಕೊಳ್ಳದಿರಿ
ಐಡಿಯಾಗಳಿವೆ ಇಂಡಿಯಾದಲ್ಲಿ ನಮ್ಮವೇ.
ಜಾತಕ ಜನನ ನಕ್ಷತ್ರ ತಿಥಿ ನೋಡದೆ
ಶನಿವಾರ ಸಿಂಗಾರಾಗಿ
ಅಂಗಾರದಂತೆ ಬರುವ ನಿಮ್ಮನ್ನು ತಣಿಸಲು
ಮತ್ತು ನಿಮಗೇ ಉಣಿಸಲು
ಐಡಿಯಾಗಳಿವೆ ನಮ್ಮಲ್ಲಿ.
ನೀವು ಭಿಕ್ಷೆ ನೀಡುವುದೆಷ್ಟೆಂದು
ಅಂದಾಜು ಹಾಕುವ ದರಿದ್ರರಲ್ಲ ನಾವು,
ನಿಮಗೇ ದುಡಿಮೆಯ ಐಡಿಯಾ ಕೊಟ್ಟೇವು

ನೀವು ನಮಗೇನಂದರೂ ತಾಳಿಕೊಳ್ಳಲು
ನೀವೇ ನಮ್ಮ ಗತಿಯಲ್ಲ, ಕೇವಲ ಅತಿಥಿ;
ಸತ್ಕರಿಸುವುದು ನಮ್ಮ ಪದ್ಧತಿ;
ಸತ್ಕರಿಸುತ್ತೇವೆ ಬನ್ನಿ.
ನೀವು ಕಣ್ಣು ಮುಚ್ಚಿದ್ದೆ ಅಮಾವಾಸ್ಯೆ,
ತೆರೆದದ್ದೆ ಹುಣ್ಣಿಮೆ
ಅಂದುಕೊಳ್ಳದಿರಿ, ಆ ಕಾಲ ಹೋಯ್ತು.
ಮಣ್ಣು ಮುಕ್ಕಿದಿರಿ ಆರ್ಥಿಕ ಹಿಂಜರಿತದಿಂದ ನೀವು;
ಕೂದಲೂ ಕೊಂಕದೆ ಮುನ್ನಡೆದೆವು ನಾವು.
ಮಹೇಂದ್ರಜಾಲವ ಹರಡಿ ನೀವು
ಪ್ರಪಂಚದ ಮೂಲೆ ಮೂಲೆಗು ಕಣ್ಣು ನೆಟ್ಟು
ಗುರಿಯಿಟ್ಟರೂ
ಮಾಹಿತಿತಂತ್ರಜ್ಞಾನದ ಜಾಲದಲ್ಲಿ
ನಮಗೆ ಬಂಧಿ! ನಮ್ಮನ್ನು ಬಿಟ್ಟಿರಲಾರದ
ಇಬ್ಬಂದಿ ಪಾಪ ನಿಮಗೆ!

ಅದ್ಯಾವುದೋ ಕೊಚ್ಚೆ ಕೊಳೆಗೇರಿಗೆ ಹೋಗಿ
ನೀವು ಫೋಟೋ ಹಿಡಿಸಿಕೊಂಡಾಕ್ಷಣ
ಅದೇ ಕೇಂದ್ರವೆಂದುಕೊಳ್ಳಬೇಡಿ
ನಿಮ್ಮ ಕಾರಸ್ಥಾನಕ್ಕೆ; ಭಾರತದ ತಾಕತ್ತು ಅಲ್ಲುಂಟು.
ಮನದ ಕೊಳೆಗೇರಿ ನಿಮ್ಮಲ್ಲುಂಟು,
ನಮ್ಮಲ್ಲಿಲ್ಲ

ಏನ ಮಾಡಿದರೂ ಆಕಾಶದ ಸ್ಕ್ರೀನಿನ ತುಂಬ
ನಿಮ್ಮದೇ ಕಥೆ; ಆದರೆ ಇಡೀ ಜಗತ್ತಿಗೆ ಗೊತ್ತು,
ಅದು ನಿಮ್ಮ ಯುದ್ಧದಾಹದ ವ್ಯಥೆ

ನಿಮ್ಮ ಸ್ವಾಗತಕ್ಕೆಂದೇ ಸೇರಿದ್ದೇವೆ
ಕುಲ ಹದಿನೆಂಟು ಹಿರೀಕರು.
ಹಗಲ ದೀವಟಿಗೆ ಹಿಡಿದಾರು
ನಮ್ಮ ಕೊಳಕು ರಾಜಕಾರಣಿಗಳು;
ಆದರೆ ನಿಮಗೆ ಎಷ್ಟೋ ಅಷ್ಟೇ ಮರ್ಯಾದೆ
ಕೊಡುವವರು ನಾವು, ಇಲ್ಲಿನ ಪ್ರಜೆಗಳು

ಕಾಣಿಕೆ ಕೊಡಲು ನಿಮ್ಮಲ್ಲೇನಿದೆ ಅಣುಬಾಂಬು ಬಿಟ್ಟು?
ನಮ್ಮಲ್ಲಿದೆ ನೋಡಿ ಸಂಸ್ಕೃತಿ, ಮೇಧಾಶಕ್ತಿ, ಜೊತೆಗೆ
ಅಕ್ಕರೆಯೊಡನೆ ದೀವಳಿಗೆಯ ಒಬ್ಬಟ್ಟು.

ಗಾದಿಯೇರಿದಕೂಡಲೆ
ಮಹಾತ್ಮ ಗಾಂಧಿಯನ್ನು ನೆನೆದವರು ನೀವು.
ಬನ್ನಿ ಗಾಂಧೀಜಿಯ ಪುಣ್ಯಭೂಮಿಗೆ;
ತಾಗಲಿ ಈ ನೆಲದ ಮಣ್ಣು ನಿಮಗೆ;
ಪಾವನರಾಗಿರಿ,
ಬನ್ನಿ, ಸುಸ್ವಾಗತ.