ಅವರು ಎನ್.ಟಿ.ಆರ್., ಇವರು ಒಬಾಮಾ

ಅವರು ಎನ್.ಟಿ.ಆರ್., ಇವರು ಒಬಾಮಾ

  ಇದೇ ದಿನಾಂಕ ೮ರಂದು ರಾಷ್ಟ್ರಪತಿಭವನದಲ್ಲಿ ಅಮೆರಿಕಾ ಅಧ್ಯಕ್ಷ ಒಬಾಮಾ ಅವರು ಗಣ್ಯರ ಕೈಲುಕಿ ಪರಿಚಯ ಮಾಡಿಕೊಳ್ಳುತ್ತ ಸಾಗಿದ್ದಾಗ ನಾನು ಗಮನಿಸಿದ ಸಂಗತಿಯಿದು.
  ನಮ್ಮ ರಕ್ಷಣಾ ಮಂತ್ರಿ ಎ.ಕೆ. ಆಂಟೊನಿ ಅವರ ಕೈಕುಲುಕುತ್ತಿದ್ದಾಗ ಒಬಾಮಾರ ದೃಷ್ಟಿ ಆಂಟೊನಿ ಅವರ ಪಕ್ಕದಲ್ಲಿದ್ದ ಎಸ್.ಎಂ. ಕೃಷ್ಣ ಅವರಮೇಲೆ ನೆಟ್ಟಿತ್ತು. ಆಂಟೊನಿ ಅವರು ಒಬಾಮಾ ಅವರ ಕೈಕುಲುಕುತ್ತ ಏನೋ ಹೇಳುತ್ತಿದ್ದರೂ ಒಬಾಮಾ ಗಮನ ಮಾತ್ರ ಆಂಟೊನಿ ಅವರಮೇಲೆ ಇರಲಿಲ್ಲ, ಕೃಷ್ಣರಮೇಲಿತ್ತು. ಇದಕ್ಕೆ ಕಾರಣ, ಆಂಟೊನಿ ಅವರು ಬಿಳಿ ಅಡ್ಡಪಂಚೆ, ಅಂಗಿ ಧರಿಸಿದ್ದರೆ ಕೃಷ್ಣ ಅವರು ಫುಲ್ ಸೂಟಿನಲ್ಲಿದ್ದರು.
  ಈ ಸಂದರ್ಭದಲ್ಲಿ ನನಗೆ ೮೦ರ ದಶಕದ ಘಟನೆಯೊಂದು ನೆನಪಿಗೆ ಬಂತು. ನಾನಾಗ ಆಂಧ್ರಪ್ರದೇಶದಲ್ಲಿ ಬ್ಯಾಂಕೊಂದರ ಮೇನೇಜರ್ ಆಗಿದ್ದೆ. ಎನ್.ಟಿ. ರಾಮರಾವ್ ಆಗ ಆಂಧ್ರದ ಮುಖ್ಯಮಂತ್ರಿ. ಬೃಹತ್ ಸಂಖ್ಯೆಯಲ್ಲಿ ಬಡಜನರಿಗೆ ಮತ್ತು ಕೃಷಿಕರಿಗೆ ಸಾಲ ನೀಡಿದ ನಾನು ಸಾಲದ ಹಣದಿಂದ ಫಲಾನುಭವಿಗಳು ಕೊಂಡುಕೊಂಡ ಕೃಷಿ ಉಪಕರಣಾದಿಗಳ ಪ್ರದರ್ಶನ ಏರ್ಪಡಿಸಿದ್ದೆ. ಆ ಪ್ರದರ್ಶನಕ್ಕೆ ಎನ್.ಟಿ. ರಾಮರಾವ್ ಭೇಟಿ ನೀಡಿದ್ದರು. ಆಗ ನಾನು ಬಿಳಿಯ ಅಡ್ಡಪಂಚೆ ಧರಿಸಿ ಅವರನ್ನು ಎದುರುಗೊಂಡೆ. ರೈತಾಪಿ ಜನರೊಡನೆ ನಾನು ಸದಾ ಅದೇ ಉಡುಪಿನಲ್ಲಿ ಬೆರೆಯುತ್ತಿದ್ದೆ. ಕಾರ್ಯಬಾಹುಲ್ಯದಿಂದಾಗಿ ನಾನು ಅಂದು ಮುಖಕ್ಷೌರ ಕೂಡ ಮಾಡಿಕೊಂಡಿರಲಿಲ್ಲ. ನನ್ನ ಸರಳತೆಯನ್ನು ಅಂದು ಎನ್.ಟಿ.ಆರ್. ಬಹಳವಾಗಿ ಮೆಚ್ಚಿದರು. (ಆ ಸಂದರ್ಭದ ಚಿತ್ರ ಜೊತೆಗಿದೆ.)
  ಅವರು ಉಡುಪಿನಿಂದ ಮನುಷ್ಯರನ್ನು ಅಳೆಯದ ಮತ್ತು ಸ್ವಸಂಸ್ಕೃತಿಯನ್ನು/ಸ್ವನಾಗರಿಕತೆಯನ್ನು ಪ್ರೀತಿಸುವ ಸರಳಭಾವದ ಎನ್.ಟಿ.ಆರ್., ಇವರು ಉಡುಪಿನಿಂದ ಮನುಷ್ಯರನ್ನು ಅಳೆಯುವ ಮತ್ತು ತನ್ನ ಸಂಸ್ಕೃತಿಯನ್ನೇ/ತನ್ನ ನಾಗರಿಕತೆಯನ್ನೇ ಇತರರಲ್ಲೂ ಕಾಣಬಯಸುವ ಪಾಶ್ಚಾತ್ಯ ಅಹಂಭಾವದ ಒಬಾಮಾ.

Comments