ಹೀಗೊಂದು ಕಳ್ಳತನದ ಪ್ರಸಂಗ !
ಆಗ ನಾನಿನ್ನೂ ಪ್ರೈಮರಿ ಸ್ಕೂಲ್’ನಲ್ಲಿ ಇದ್ದೆ. ಚಾಮರಾಜಪೇಟೆಯ ಒಂದಾನೊಂದು ಗಲ್ಲಿಯಲ್ಲಿ ನೆಡೆದ ಘಟನೆ ಇದು.
ಮನೆಯ ವರಾಂಡದಲ್ಲಿ ಏನೋ ಮಾಡುತ್ತ ಕುಳಿತಿದ್ದೆ... ಓದುತ್ತಿರಲಿಲ್ಲ ಅನ್ನೋದು ಖರೆ ! ಧಡ ಧಡ ಅಂತ ಯಾರೋ ಓಡಿದರು.... ಅದರ ಹಿಂದೆಯೇ ಮತ್ತಿಬ್ಬರು.... ಅದೇನು ದೊಡ್ಡ ವಿಷಯ ಅಂತ ಏನೂ ತಲೆ ಕೆಡಿಸಿಕೊಳ್ಳಲಿಲ್ಲ ಬಿಡಿ. ಅದರ ಹಿಂದೆ ಇನ್ನೊಂದಷ್ಟು ಜನ ಓಡಿದರು "ಕಳ್ಳ ಕಳ್ಳ" ಅಂತ ಯಾರೋ ಹೇಳಿದ್ದು ಕೇಳಿಸಿತು. ಮಾಡುತ್ತಿದ್ದ ಕೆಲಸ ಅಲ್ಲೇ ಬಿಟ್ಟು, ನಾನೂ ಆ ಜನರಲ್ಲಿ ಒಬ್ಬನಾದೆ.
ಬೀದಿ ಕೊನೆಗೆ ಹೋಗಿ ಬಲಕ್ಕೆ ತಿರುಗಿದೊಡನೆ ಹಲವಾರು ಜನ ಗುಂಪುಗಟ್ಟಿ ನಿಂತಿದ್ದರು. ಸ್ವಲ್ಪ ಹಾಗೇ ನುಸುಳಿ ಮುಂದೆ ಹೋಗಿ ನಿಂತೆ. ಸಿಕ್ಕಾಪಟ್ಟೆ ಕುತೂಹಲ. ಕಳ್ಳ ಅಂದರೆ ಹೇಗಿರುತ್ತಾನೆ ಅಂತ !! ಸಿನಿಮಾಗಳಲ್ಲಿ ಕೇಡಿ’ಗಳನ್ನು ನೋಡಿದ್ದೆ ಆದರೆ ಎಂದೂ ಪ್ರತ್ಯಕ್ಷವಾಗಿ ಒಬ್ಬ ಕಳ್ಳನನ್ನು ನೋಡಿರಲಿಲ್ಲ ನೋಡಿ ಅದಕ್ಕೇ.
ನಿಜಕ್ಕೂ ಆಶ್ಚರ್ಯವಾಯಿತು !
ಅವನೂ ನಮ್ಮಂತೆಯೇ ಮನುಷ್ಯ ಕಣ್ರೀ!
ಟಾರ್ ಹಾಕಿದ ರಸ್ತೆಯ ಮೇಲೆ ಅವನು ಬಿದ್ದಿದ್ದ. ನಾಲ್ಕು ಜನ ಅವನನ್ನು ಸುತ್ತಿ, ಮನ ಬಂದಂತೆ ಒದೆಯುತ್ತಿದ್ದರು !! ಹೌದು ... ಹೊಡೆಯುತ್ತಿರಲಿಲ್ಲ ಬದಲಿಗೆ ಫುಟ್ ಬಾಲ್ ರೀತಿ ಒದೆಯುತ್ತಿದ್ದರು.
ಕಾಲು ತಾಕಿದರೆ ಕಣ್ಣಿಗೆ ಒತ್ತಿಕೊಳ್ಳಬೇಕು ಎಂದು ನಮ್ಮ ಮನೆಯಲ್ಲಿ ಹೇಳಿಕೊಟ್ಟಿದ್ದರು. ಆದರೆ ಇಲ್ಲಿ, ಒಬ್ಬ ಮನುಷ್ಯನನ್ನು ಇವರು ಒದೆಯುತ್ತಿದ್ದರೆ, ಅವನು ಇವರ ಕಾಲಿಗೆ ಮುಟ್ಟಿ ಕಣ್ಣಿಗೊತ್ತಿಕೊಂಡು ’ಅಯ್ಯೋಬಿಟ್ಟು ಬಿಡಿ, ಬಿಟ್ಟು ಬಿಡಿ’ ಅಂತ ಗೋಗೊರೆಯುತ್ತಿದ್ದ.
ಅಂದು ನನಗೆ ಸಂಪೂರ್ಣ ಗೊಂದಲ !!
ಮನಸ್ಸಿಗೆ ತುಂಬಾ ಹಿಂಸೆಯಾಯಿತು. ನನಗೆ ಅರ್ಥವಾಗಿದ್ದು ಇಷ್ಟೇ. ಅವನು ಕಳ್ಳತನ ಅಂದರೆ ’ಪಿಕ್ ಪಾಕೆಟ್’ ಮಾಡಿದ್ದ. ಅವನನ್ನು ಇವರು punishment ಕೊಡ್ತಿದ್ದಾರೆ.
ಅವನು ಹೊಡೆದಿದ್ದ ಪರ್ಸ್ ಅಲ್ಲೇ ಬಿದ್ದಿತ್ತು. ಒದೆಯುತ್ತಿರುವವನಲ್ಲಿ ಪರ್ಸ್ ಒಡೆಯನೂ ಒಬ್ಬ ಅಂತ ಅವನ ಮಾತಿನಲ್ಲಿ ಗೊತ್ತಾಯ್ತು. ಈ ಮಧ್ಯೆ ಯಾರೋ ಹೇಳಿದರು "ನಡೀರಿ ಪೋಲೀಸರಿಗೆ ಒಪ್ಪಿಸಿ ಲಾಕಪ್’ಗೆ ಹಾಕಿಸೋಣ. ಬುದ್ದಿ ಬರುತ್ತೆ" ಅಂತ.
ಅದೇನು ವೀರಾವೇಶ ಬಂತೋ ಜನಕ್ಕೆ ’ಹೌದು, ಹೌದು, ನೆಡೀರಿ’ ಅಂದರು. ಆ ಬಡಪಾಯಿ ’ಬೇಡ, ಬೇಡ’ ಎಂದು ಬೊಬ್ಬೆ ಹಾಕುತ್ತಿದ್ದರೂ ಯಾರ ಕಿವಿಗೂ ಬೀಳಲಿಲ್ಲ.
ಪರ್ಸ್ ಒಡೆಯ ತನ್ನ ಪರ್ಸ್ ತೆಗೆದುಕೊಂಡು, ನೋಡಿ, ಜೇಬಿನಲ್ಲಿ ಇಟ್ಟುಕೊಂಡು, ’ಕಳ್ಳ ಭಡವ, ದುಡ್ಡು ಎಗರಿಸ್ತೀಯೇನೋ’ ಎಂದು ಇನ್ನೊಮ್ಮೆ ಒದ್ದು, ನಂತರ ಕಳ್ಳನ ಜೇಬಿಗೆ ಕೈ ಹಾಕಿ, ಅಲ್ಲಿದ್ದ ದುಡ್ಡನ್ನೂ ತೆಗೆದುಕೊಂಡ !!
’ಅಯ್ಯೋ, ಅದು ನನ್ನ ದುಡ್ಡು ಸ್ವಾಮೀ ... ಮೂಟೆ ಹೊತ್ತು ಸಂಪಾದನೆ ಮಾಡಿದ್ದು’ ಅಂತ ಕಳ್ಳ ಕೂಗಿಕೊಂಡ.
’ನೋಡ್ರೀ, ಯಾವ ಮಾಯದಲ್ಲಿ ಪರ್ಸ್ ಖಾಲೀ ಮಾಡಿದ್ದಾನೆ. ಅಲ್ಲದೇ ಸುಳ್ಳು ಬೇರೇ ಬೊಗಳುತ್ತಾನೆ. ಕಳ್ಳ ಭಡವ’ ಅಂತ ಎಲ್ಲರ ಮುಂದೆ ಹೇಳುತ್ತ, ಆ ದುಡ್ಡನ್ನು ಜೇಬಿಗೆ ಬಿಟ್ಟಿದ್ದ !!!
ನಿಜಕ್ಕೂ ಅದಿಷ್ಟೂ ಅವನದೇ ದುಡ್ಡೇ?
ಎಲ್ಲ ಹೀರೋಗಳೂ ಕಳ್ಳನನ್ನು ರೋಡಿನ ಮೇಲೇ ದರ ದರ ಎಳೆದುಕೊಂಡು ಗುಟ್ಟಹಳ್ಳಿ police station’ಗೆ ಹೋದರು. ಏನಿಲ್ಲ ಅಂದರೂ ಒಂದು ಮೂವತ್ತು ಜನ, ಮೆಟ್ಟಿಲೇರಿ ಹೋದರು. ಎರಡೇ ನಿಮಿಷದಲ್ಲಿ ಪೇದೆ ಲಾಠಿ ಹಿಡಿದು, ಪ್ರಕರಣದಲ್ಲಿರುವ ಇಬ್ಬರನ್ನು ಬಿಟ್ಟು ಮಿಕ್ಕೆಲ್ಲರನ್ನೂ ಹೊರಗಟ್ಟಿದ್ದ.
ಆಮೇಲೆ ಏನಾಯ್ತು ಎಂದು ನನಗೆ ಗೊತ್ತಿಲ್ಲ.
ಇಲ್ಲಿ, ಪರ್ಸ್ ಹೊಡೆದವನು ಕಳ್ಳನೋ? ಅಥವಾ ಪರ್ಸ್ ಹೊಡೆದವನ ದುಡ್ಡು ಹೊಡೆದವ ಕಳ್ಳನೋ?
ಅಡಿಕೆ ಕದ್ದರೂ ಕಳ್ಳ. ಆನೆ ಕದ್ದರೂ ಕಳ್ಳ ಅಂತಾರೆ. ಇಷ್ಟೇ ದುಡ್ಡು ಕದ್ದದ್ದಕ್ಕೆ ಇಷ್ಟು ಆಕ್ರೋಶದಿಂದ ಜೈಲಿಗೆ ತಳ್ಳಿದ ಜನ, ಕೋಟ್ಯಾಂತರ ನುಂಗಿದವರಿಗೆ ಹೂವಿನ ಹಾರ ಹಾಕೋದ್ಯಾಕೆ?
ನಿಮಗೇನಾದ್ರೂ ಗೊತ್ತಾ?
- Log in to post comments
Comments
ಉ: ಹೀಗೊಂದು ಕಳ್ಳತನದ ಪ್ರಸಂಗ !
In reply to ಉ: ಹೀಗೊಂದು ಕಳ್ಳತನದ ಪ್ರಸಂಗ ! by kavinagaraj
ಉ: ಹೀಗೊಂದು ಕಳ್ಳತನದ ಪ್ರಸಂಗ !
ಉ: ಹೀಗೊಂದು ಕಳ್ಳತನದ ಪ್ರಸಂಗ !
ಉ: ಹೀಗೊಂದು ಕಳ್ಳತನದ ಪ್ರಸಂಗ !