ಅಂತ್ಯವೆಂಬ ಆರಂಭ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦

ಅಂತ್ಯವೆಂಬ ಆರಂಭ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦

ಅಂತ್ಯವೆಂಬ ಆರಂಭ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦

(೧೨೧)

"ಅದೇ ಹಾಡು ಕನಸಿನಲ್ಲಿ ಮತ್ತು ನನಸಿನಲ್ಲಿ. ಆದರೆ ಒಂದು ನಿಜದ ವ್ಯತ್ಯಾಸವಾಗದ ಕಾಲದಲ್ಲಿ. ಮತ್ತೊಂದು ಹೇಗೆ ಬೇಕಾದರೂ ಮಾರ್ಪಾಡುಗೊಳ್ಳುವ ಕನಸಿನಲ್ಲಿ. ಹೇಗೆ ಸಾಧ್ಯವಿದು?"

ಶೌಮಿಕನೊಂದಿಗೆ ಮಾತಿಗಿಳಿಯುವದು ಕನ್ನಡ ಸೀರಿಯಲ್ಲನ್ನು ದೂರದರ್ಶನದಲ್ಲಿ ಆನ್ ಮಾಡಿ ರಿಮೋಟ್ ಕಳೆದುಹಾಕಿದಂತೆ. "ವಾದ ಮಾಡಿದರೆ ನನ್ನಾಣೆ" ಎನ್ನುವ ಆದೇಶವಿರುತ್ತದೆ ಆತ ಮಾತನಾಡುವ ಪ್ರತಿ ವಿಷಯ ಮತ್ತು ಭಾವದಲ್ಲಿ. ಆತ ಮತ್ತು ನಾನು ಒಂದೇ ಬ್ಯಾಚಿನವರು. ನಾನು ಬೆಂಗಳೂರಿನಿಂದ ಶಾಂತಿನಿಕೇತನಕ್ಕೆ ಹೋದಾಗ ಆತ ಅಲ್ಲಿಂದ ಬರೋಡಕ್ಕೆ ಹೋಗಿದ್ದ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕೆ. "ಅಂದರೆ ನಾವಿಬ್ಬರೂ ಕಾಲ, ಸ್ಥಳ, ಮಾತೃಭಾಷೆ ಮತ್ತು ಇನ್ನೆಲ್ಲ ವಿಷಯಗಳಿಂದಷ್ಟೇ ವ್ಯತ್ಯಾಸವಿದ್ದ ಅವಳಿ-ಜವಳಿಗಳು ನಾವು" ಎಂಬುದು ನಮ್ಮಿಬ್ಬರ ಬಗ್ಗೆ ಆತನೋಬ್ಬನಿಗೇ ಇದ್ದ ಅಭಿಪ್ರಾಯ.

"ಈ ಎಲ್ಲ ಆಗುಹೋಗುಗಳು ಈಗ ನಿನ್ನ ಅನುಭವಕ್ಕೆ ಈಗಲೇ ಬರಬೇಕಿತ್ತು. ಒಂದು ವಿಷಯ ತಿಳಿದುಕೋ: ನಾವು ಬಯಸಿದ್ದು ಮಾತ್ರ ನಡೆಯುತ್ತದೆ," ಎಂದು ಮತ್ತೇನನ್ನೂ ಮಾತನಾಡುವ ಮುನ್ನವೇ ನಾನು ಮಾತನಾಡತೊಡಗಿದೆ, "ಈ ಕೂಡಲೇ ನಮ್ಮಿಬ್ಬರ ಮಾತು ಬಂದ್ ಆಗಿಬಿಟ್ಟರೆ ಅದೆಷ್ಟು ಚಂದ. ಇಬ್ಬರಾದರೂ ಕಲಾ ಇತಿಹಾಸದ ಪ್ರಾಧ್ಯಾಪಕರ ಕಾಟದಿಂದ ಒಂದು ಹದಿನೈದು ಬ್ಯಾಚ್ ಕಲಾವಿದರು ಬಚಾವಾಗುತ್ತಾರೆ," ಎಂದೆ.

ಶೌಮಿಕ್ ಹಸನ್ಮು ಖಿಯಾದ, "ನೀನು ವಾಪಸ್ ಶಾಂತಿನಿಕೇತನಕ್ಕೆ ಬರದಿದ್ದಲ್ಲಿ ಅಂದಿನ ಕಲಾಭಾವನವೇ ನಿನ್ನ ತಲೆಯಲ್ಲಿ ಇರುತ್ತಿತ್ತೆ ಹೊರತು ಇಂದಿನದಲ್ಲ, ಅಲ್ಲವೆ?"

"ಹೌದು"

"ನೀನು ಶಾಂತಿನಿಕೇತನದಲ್ಲಿ ಎಂದೂ ಓದದೆಯೇ ಇದ್ದಿದ್ದರೆ ಎಚ್.ಎಸ್.ರಾಘವೇಂದ್ರರಾವ್ ಅವರ 'ಜನ ಗಣ ಮನ' ಪುಸ್ತಕವೇ ನಿನ್ನ ಕಲ್ಪನೆಯ ಶಾಂತಿನಿಕೇತನ ಆಗಿರುತ್ತಿತ್ತು. ಅಲ್ಲವೆ?"

"ಹೌದು"

"ಇದನ್ನು ತಿರುವು ಮರುವು ಮಾಡಿ ಹೇಳು ನೋಡುವ" ಎಂದ.

"ಅದೇ, ಇಷ್ಟಪಟ್ಟು 'ಜನ ಗಣ ಮನ'ವನ್ನು ಹುಡುಕಿ ಓದಿದ್ದರಿಂದ, ಮೊದಲೇ ಇದ್ದ ಕಲಾಭಾವನದ ಆಕರ್ಷಣೆ ಉದ್ದೀಪಿತವಾಯ್ತು. ಆದ್ದರಿಂದ ಇಲ್ಲಿ ಓದಲು ಬಂದೆ. ಬಂದದ್ದರಿಂದಲೇ ಇಲ್ಲಿ ಸೀಟು ಸಿಕ್ಕಿತು."

"ಸರಿಯಾಗಿದೆ ವಿಶ್ಲೇಷಣೆ. ಭೇಷ್. ನೀನು ಕಲಾಭಾವನದ ಮಾನವನ್ನು ಇನ್ನೂ ಕೆಳಕ್ಕೆ ಹೋಗುವದನ್ನು ತಡೆಹಿಡಿದಿದ್ದಿಯ. ಏಕೆಂದರೆ ಇನ್ನೂ ಕೆಳಗೆ ಹೋಗಲು ಅವಕಾಶವೇ ಇಲ್ಲ ಅದಕ್ಕೆ", ಎಂದು ನಗತೊಡಗಿದ ಶೌಮಿಕ. ಸುತ್ತಲಿದ್ದವರೆಲ್ಲ ನಮ್ಮನ್ನೇ ನೋಡತೊಡಗಿದರು. ಕಲಾ ಇತಿಹಾಸದ ವಿದ್ಯಾರ್ಥಿನಿಯೊಬ್ಬಳು ಬೆಂಗಾಲಿಗಳು ಮಾತ್ರ ಮಾಡಬಲ್ಲ ವಯ್ಯಾರ ಮಾಡುತ್ತಾ, "ಏನಾಯ್ತು ಶೌಮಿಕ್ ದಾ, ಯಾಕೆ ನಗ್ತಾ ಇದ್ದೀರಾ?" ಎಂದು ದೀರ್ಘವಾಗಿ ಸುದೀರ್ಘ ರಾಗ ತೆಗೆಯುತ್ತ ಹತ್ತಿರ ಬಂದಳು. ಆತನಿಗೆ ಇರಿಸು ಮುರಿಸು ಆಗತೊಡಗಿತು.

"ನಂದಲಾಲ್ ಬೋಸರು ರಚಿಸಿದ ಸಿಮೆಂಟು ಗಾಂಧೀ ಚಿತ್ರ ಹುಡುಕಿ ತೆಗೆಯಿರಿ ಅಂತ ಹೇಳಿದೆ. ಪತ್ತೆಹಚ್ಚಿದರ?" ಎಂದು ಸಿಟ್ಟು ನಟಿಸಿದ. ಆತ ಸಿಟ್ಟು ನಟಿಸುತ್ತಿರುವದು ಆಕೆಗೆ ಗೊತ್ತಾದಂತಿತ್ತು. ಆದರೂ ಆಕೆ ಆತ ಸಿಟ್ಟುಗೊಂದಿದ್ದಾನೆ ಎಂಬಂತೆ ನಟಿಸುತ್ತ, ಆ ಸಿಟ್ಟಿನಿಂದಾಗಿ ತನಗೆ ಭಯವಾಗಿದೆ ಎಂದೂ ನಟಿಸುತ್ತ, ಧ್ವನಿಯನ್ನು ತೀರ ಆಳಕ್ಕಿಳಿಸಿ, "ಇಲ್ಲ ಶೌಮಿಕ್ ದಾ, ಒಂದು ತಿಂಗಳಿಂದ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಅದು ಎಲ್ಲಿದೆ ಅಂತ ಗೊತ್ತಿದ್ಧರೆ ಒಂದೇ ದಿನದಲ್ಲಿ ಹುಡುಕಿಬಿಡುತ್ತಿದ್ದೆ", ಎಂದಳು.

ಮತ್ತೆ ನಾನು ಶೌಮಿಕ್ ನಗತೊಡಗಿದೆವು. ಆಕೆ ಮತ್ತೂ ಗಾಭರಿಯಾದಳು. "ಎರಡನೇ ಸಲವೂ ನಗಬೇಡಿ. ನಿಮ್ಮಗಳ ಮೊದಲ ನಗುವಿಗೇ ಕಾರಣವಿನ್ನೂ ತಿಳಿದಿಲ್ಲ. ಎರಡನೆಯದನ್ನು ಶುರು ಮಾಡಿಕೊಂಡಿದೀರ. ಏತೊವ್ ಹಮಾಕೆ ಬಾಳು ಲಗ್ಚೆ ನಾ" ಎಂದು ಹುಸಿಮುನಿಸು ತೋರಿದಳು.

(೧೨೨)

"ಅದೆಲ್ಲ ಬಿಡಿ. ಕನಸು ಕಂಡರೆ, ಏನಾದರೂ ಬೇಕೇ ಬೇಕೆಂದು ಆಸೆಪಟ್ಟರೆ ಅದು ಸಿಕ್ಕೆಸಿಗುತ್ತದೆ ಅನ್ನುವುದು ಪ್ರಕ್ಶುಬ್ದನ ವಾದ. ನಿನ್ನ ಅಭಿಪ್ರಾಯ ಹೇಳು ಭವಿಷ್ಯದ ಕಲಾ ಇತಿಹಾಸಕಾರ್ಥಿಯೇ" ಎಂದು ನಾತಕೀಯವಾಗು ಶೌಮಿಕ್ ಆ ಹುಡುಗಿಯನ್ನು ಸತಾಯಿಸತೊಡಗಿದ.

"ಪ್ರಕ್ಷುಬ್ದ ಅಂದರೆ ಏನು ಶೌಮಿಕ್ ದಾ?" ಎಂದು ಮರುಪ್ರಶ್ನೆ ಕೇಳಿದಳು ಆಕೆ.

"ಆಹಾ, ಮಿಲಿಯನ್ ಡಾಲರ್ ಪ್ರಶ್ನೆ ಇದು. ಇದನ್ನು ಕೇಳಲು ಅನಿಲ್ ಸುಮಾರು ಇಪ್ಪತ್ತು ವರ್ಷ ವ್ಯಯ ಮಾಡಿದರೆ ನೀನು ಕಲಾಭವನ ಸೇರಿದ ಆರೇ ತಿಂಗಳಲ್ಲಿ ಪ್ರಕ್ಷುಬ್ದ ಅಂದರೇನು ಎಂದು ಕೇಳಿಬಿಟ್ಟೆಯಲ್ಲ. 

ಶಹಬ್ಬಾಸ್."

"ಹಾಗಾದರೆ ನಾನು ನಂದಲಾಲ್ ಬೋಸರ ಗಾಂಧೀ ಭಿತ್ತಿಚಿತ್ರ ಹುಡುಕುವ ಅಸಿನ್ಮೆಂಟ್ ರದ್ದಾಯಿತೆ ಶೌಮಿಕ್ ದಾ!" ಎಂದು ಉತ್ಸಾಹದಿಂದ ಕೇಳಿದಳು.

ನಾನು ಶೌಮಿ ಮುಖ ಮುಖ ನೋಡಿಕೊಂಡೆವು. ಹಾಗೂ ಹೀಗೂ ಈ ಹುಡುಗಿಯನ್ನು ಸಾಗುಹಾಕಬೇಕು ಎಂದು ಕಣ್ಣಲ್ಲೇ ಮಾತನಾಡಿಕೊಂಡೆವು.

"ಹೋಗಮ್ಮ. ಗಾಂಧಿಯ ಬಿತ್ತಿಚಿತ್ರ ಹುಡುಕು. ಪ್ರಕ್ಷುಬ್ದತೆ ಎಂಬುದು ತಾನೇತಾನಾಗಿ ಬರುತ್ತದೆ," ಎಂದ, ಆಕೆಗೆ ಏನೂ ಅರ್ಥವಾಗಲಿಲ್ಲ ಮತ್ತು ಮುಂದು ಅರ್ಥವಾಗುವುದೂ ಇಲ್ಲ ಎಂಬ ಭಾವದಲ್ಲಿ. ಆಕೆ ತಿರುಗಿಬಿದ್ದಂತೆ, ಹಠ ಹಿಡಿದಂತೆ ಮಾತನಾಡತೊಡಗಿದಳು, "ಪ್ರಕ್ಷುಬ್ದ ಒಬ್ಬ ಕ್ರಾಕ್ ಇರಬೇಕು ಶೌಮಿಕ್ ದಾ" ಎಂದುಬಿಟ್ಟಳು. ನಾವಿಬ್ಬರೂ ಕುತೂಹಲಗೊಂಡೆವು. ಇದೊಂದು ಮತ್ತೊಂದು ಹೊಸ ತಿರುವು ಅಂದುಕೊಂಡೆವು.

"ನೀನಿನ್ನೂ ನೋಡಿರದ ಪ್ರಕ್ಶುಬ್ದನ ವಾದವನ್ನು ತೆಗೆದು ಹಾಕುವುದಿರಲಿ, ಆತನನ್ನು ಕ್ರಾಕ್-ಪಾಟ್ ಅಂತ ಹೇಗೆ ನಿರ್ಧಾರ ಮಾಡಿಬಿಟ್ಟೆ?" ಎಂದು ಕೇಳಿದೆ.

"ತುಂಬಾ ಸರಳ. ನಾವು ಬಯಸಿದ್ದೆಲ್ಲ ಆಕಾರ ಪಡೆದುಕೊಂಡುಬಿಡುವಂತಿದ್ದರೆ, ಕಲಾಭವನದಲ್ಲಿ ಓದಬೇಕು ಎಂದು 'ಬಯಸಿ' ಬರುವವರಿಗೆಲ್ಲ ಏಕೆ ಸೀಟು ಸಿಗುವುದಿಲ್ಲ?! ಇದ್ಯಾವದೋ ತಿಕ್ಕಲು ಪ್ರಕ್ಶುಭ್ದ-ವಾದವೇ ಇರಬೇಕು" ಎಂದುಬಿಟ್ಟಳು.

(೧೨೩)

     ಅದೇ ಸಂಜೆ ನಾನು ಶಾಂತಿನಿಕೇತನದಿಂದ ಹೊರಡಬೇಕಿತ್ತು. ಮಧ್ಯಾಹ್ನ ಬಾಹ್ಯಾ-ಪರೀಕ್ಷಕನಾಗಿದ್ದ ನನ್ನ ಪ್ರವಾಸದ ಬಿಲ್ ತೆಗೆದುಕೊಳ್ಳಬೇಕಿತ್ತು. ಸಂಜೆ ಆರು ಗಂಟೆಗೆ ರೈಲು. ಐದು ಗಂಟೆಗೆ ರೂಮಿನಿಂದ ಹೊರಟರೆ ಸಾಕಿತ್ತು. ಎಲ್ಲ ಪರೀಕ್ಷಕರ ಅಂಕಗಳನ್ನೂ ಒಟ್ಟುಗೂಡಿಸಿ, ಸಾರಾಂಶ ತೆಗೆದು, ಸಾರಿಸಿ, ಜಾಡಿಸಿ, ಗೂಡಿಸಿ, ಸಂಸ್ಕರಿಸುವ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ನನಗೆ ಮಹಾನ್ ಬೋರಿನ ಕೆಲಸ. ಅದನ್ನು ಅತೀವ ಶ್ರದ್ದೆ ಇರಿಸಿಕೊಂಡು ಮಾಡುವ ಉಪಾಧ್ಯಾಯರು ಅಪರೂಪ. ಆದರೆ ಅಂಥಹ ಅಪರೂಪರು ಪ್ರತಿ ಕಾಲೇಜಿನಲ್ಲೂ ಒಬ್ಬೊಬ್ಬರಿರುತ್ತಾರೆ. ಮತ್ತು ಪಾಠ ಹೇಳುವದಕ್ಕಿಂತಲೂ ಸಾರಿಸಿ, ಗೂಡಿಸುವುದರಲ್ಲೇ ಅವರ ಜೀವನದ ಪರಮ ಧ್ಯೇಯ ಅಡಗಿರುತ್ತದೆ. ಕಲಾಭಾವನದ ಅಂಥಹ ಕೆಲವು ಹಿರಿಯ ಹಾಗೂ ಸ್ಥಳೀಯ ಉಪಾಧ್ಯಾಯರುಗಳನ್ನು ಆ ಅಂಗಡಿ ಬಾಗಿಲು ಮುಚ್ಹುವ ಕೆಲಸ ಹಚ್ಚಿ, ನಾನು,. ಶೌಮಿಕ್, ಪರ್ವರೆಜ್ ಮುಂತಾದ್ಹವರು ಹೊರಗೆ, ಸುಡುವ ೪೪ ಡಿಗ್ರಿಯ ಬಿಸಿಯಲ್ಲಿ ಕುಳಿತಿದ್ದೆವು.
     ಎಲ್ಲವೂ ನಿರರ್ಥಕವೆನಿಸತೊಡಗಿತ್ತು. ಈ ಕನಸಿನಿಂದ ಬೇಗ ಹೊರಗೆ ಬಂದರೆ ಸಾಕೆನಿಸುತಿತ್ತು. ಆಗಾಗ ನನ್ನನ್ನು ನಾನೇ ಚಿವುಟಿಕೊಳ್ಳುತ್ತಿದ್ದೆ , ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದಾಗ. ಲೆಕ್ಕಾಚಾರದ ಮಾಮ, ಮುಗ್ದ ಕಲಾ ಇತಿಹಾಸದ ಹುಡುಗಿ, ಕೆಲಸದ ನೀತಿ ನಿಯಮಾವಳಿಗಳಿಗೆ ಅಂಟಿಕುಳಿತ ಶೌಮಿಕ್, ಅಸ್ತಿತ್ವದಲ್ಲೇ ಇರದಿದ್ದ ಪ್ರಕ್ಷುಬ್ದ, ಅನುಶ್ರೀ ಕುಮಾರಿ ಸಾಹು, ಇಲ್ಲದ ಅಸ್ತಿತ್ವದಲ್ಲೂ ಸಂಬಂಧ ಕಲ್ಪಿಸಿ ಆಕೆಯ ತಂದೆ ನಾನು ಎಂದು ಹೇಳಿದ ಅರುಣ್ ಕುಮಾರ್ ಪಾಲ್--ಇವರೆಲ್ಲರಲ್ಲಿ ಒಂದು ಸಾಮ್ಯತೆ ಕಾಣತೊಡಗಿತು. ಎಲ್ಲರೂ ಅತ್ಯಂತ ಪ್ರೌಢವಾಗಿ ಮಾತನಾಡಿದ್ದರು. ನನಗೆ ಗೊತ್ತಿದೆ ಅಂದುಕೊಂಡಿದ್ದ ಈ ಜಗತ್ತಿನ, ಪಕ್ಕದಲ್ಲೇ ಇರುವ, ಗೊತ್ತಿರದ ಸಂದಿಗೊಂದಿಗಳನ್ನೂ ಬಗೆದು ತೋರಿಸಿದ್ದರು. 
      ಬಿಸಿಲು ನಿಜಕ್ಕೂ ೪೪ ಡಿಗ್ರಿ ಇತ್ತು. ಇಂತಹ ಬಿಸಿಲಿನ ಬಗ್ಗೆ ಕೇಳಿದ್ದೇನೆ ಹೊರತು ಅನುಭವಿಸಿರಲಿಲ್ಲ, ಅಂದರೆ ನೋಡಿರಲಿಲ್ಲ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಅದಕ್ಕೆ ಆತ್ಮೀಯವಾಗಿ ಅಂಟಿಕುಳಿತ ನನ್ನಂತಹವನಿಗೆ ಈ ಬಿಸಿಯೂ ಬೆಚ್ಚನೆಯ ಬಾವ ಮೂಡಿಸತೊಡಗಿತು. ಅಷ್ಟರಲ್ಲಿ ಸುಮ್ಮನೆ ಹೊರಬಂದ ದುಬೆ ಸಾರು "ಅನಿಲ್ ನಿನ್ನನ್ನು ಆಫ್ರಿಕಾದಲ್ಲಿ ಬಿಟ್ರೂ, ಆ ಬಿಸಿಲಲ್ಲೂ ಬದುಕಿಬಿಡುತ್ತೀಯ" ಅಂತ ತಮಾಷೆ ಮಾಡಿ ಕೂಡಲೇ ಒಳಗೋದರು. ಆ ಮಾತನ್ನು ಹೇಳಲೆಂದೇ ಅವರು ಹೊರಗೆ ಬಂದಂತಿತ್ತು. ಆದರೆ ಆಗ ಪಿತ್ತ ತಲೆನೋವು ಬಂದಾಗ ಇಡಿಯ ಜಗತ್ತಿನಲ್ಲಿ ಸುನಾಮಿಯಾಗಲಿ, ಚಂಡಮಾರುತವಿರಲಿ ಯಾವುದೂ ನಿಮ್ಮ ತಲೆಯನೋವಿಗೆ ಹೇಗೆ ಸಮನಲ್ಲವೋ ಹಾಗಾಗಿತ್ತು ನನ್ನ ಸ್ಥಿತಿ. ಅಂದರೆ ನನಗೆ ತಲೆಯ ನೋವಿತ್ತು ಎಂದಲ್ಲ. ಎರಡು ದಿನದಿಂದಲೂ ಹೀಗೆ ಭ್ರಮೆಗೂ ನಿಜಕ್ಕೂ ನಡುವಿನ ವ್ಯತ್ಯಾಸವು ಅಳಿಸಿಹೋದಂತಾದುದು ಹೀಗೆಯೇ ಜೀವನ ಪೂರ್ತಿ ಮುಂದುವರೆದುಬಿಟ್ಟರೆ ಹೇಗೆ ಎಂಬ ಚಿಂತೆಹತ್ತಿಕೊಂಡಿತು.
(೧೨೪) 
  ಸ್ವತಃ ಬಿಸಿಲೆ ನೆಲ, ಮರ, ಪಶು, ಮಾನವತೆಯ ತಾಳ್ಮೆಗೆ ಕರಗಿ ನೀರಾಗಿ ಹಪ್ಪಳವಾದಂತೆ ಅನ್ನಿಸುತ್ತಿತ್ತು. ಇಂತಹ ಕಾವ್ಯಾತ್ಮಕ ಕೊಲೆಯನ್ನು--ಬಿಸಿಲೆ ಒಣಗೆ ತರಗೆಲೆಯಂತೆ ಆಗುವುದು-ಯಾವ ಕನ್ನಡ ಸಾಹಿತಿಯೂ ಮಾಡಿರಲಾರ ಎಂದೆನಿಸಿ ಇದು ಕನ್ನಡದ ಕಲಾವಿದನೊಬ್ಬ ಕನ್ನಡ ಸಾಹಿತಿಯೊಬ್ಬನ ಯಜಮಾನಿಕೆಗೆ ಮಾಡಿದ ತೀವ್ರ ಅವಮಾನವೆನಿಸಿ, ತಮಾಷೆ ಎನ್ನಿಸಿಬಿಟ್ಟಿತು. ಶೌಮಿಕ್ ಹೇಳಿದ್ದನ್ನು ಮೆಲುಕು ಹಾಕುವದೋ ಅಥವಾ ಟಿ.ಎ, ಡಿ.ಎ ಎನಿಸಿಕೊಂಡು ಬೆಂಗಳೂರಿನ ಕಡೆಗೆ ಗಾಡಿಬಿಡುವುದೋ ಎಂಬ ಇಬ್ಬಂದಿತನ ಉಂಟಾಯಿತು. ನಾವು ಯೋಚಿಸುವಾಗಲೂ ನಿಜದಲ್ಲಿ ಬಿಡುವು ಇರಬೇಕಾಗುತ್ತದೆ. ಆದರೆ ಬೇಗ ಟಿ.ಎ. ಡಿ.ಎ. ಸಿಗದಿದ್ದಲ್ಲಿ, ರೂಮಿನಲ್ಲಿ ರೆಸ್ಟ್ ತೆಗೆದುಕೊಳ್ಳಲಾಗದು, ಹಾಗೆ ಮಾಡದಿದ್ದರೆ ಟ್ರೇನು ಪಯಣದಲ್ಲಿ ನಿದ್ರಿಸಬೇಕು. ಹಾಗೆ ಮಾಡಿದರೆ ರಾತ್ರಿ ಬೇಗ ನಿದ್ರೆ ಹತ್ತುವದಿಲ್ಲ. ಹಾಗೆ ಮಾಡಿದರೆ ಬೆಳಿಗ್ಗೆ ಬೇಗ ಏಳುವದಿಲ್ಲ. ಹಾಗೆ ಮಾಡಿದರೆ ಕೊಲ್ಕೊತ್ತದಲ್ಲಿ ಒಂದಿಡೀ ದಿನ ಏನನ್ನೂ ಸರಿಯಾಗಿ ನೋಡಿದಂತೆ ಆಗುವದಿಲ್ಲ. ಹಾಗೆ ಮಾಡಿದರೆ ಮನಸ್ಸಿಗೆ ಸಮಾದಾನ ಇರುವುದಿಲ್ಲ. ನನ್ನ ಈ ತರಲೆ ಸರಣಿ ಪ್ರತಿಕ್ರಿಯೆಗೆ ನಾನೇ ತಲೆಯಾಡಿಸುತ್ತಾ ಶೌಮಿಕ್ ಹೇಳಿದ್ದನ್ನು ಮೆಲುಕು ಹಾಕಿದೆ.//