ಜಗಳ ಡೈವೊರ್ಸ್‌ವರೆಗೆ ತಲುಪಿದೆ..

ಜಗಳ ಡೈವೊರ್ಸ್‌ವರೆಗೆ ತಲುಪಿದೆ..

"ಕಮಲೇಶ್‌ನ ಫೋನ್ ಬಂತು ಮಾರಾಯ...ಜಗಳ ಡೈವೊರ್ಸ್‌ವರೆಗೆ ತಲುಪಿದೆ. ತಾಳಿ ಕಿತ್ತು ಎಸೆದಿದ್ದಾಳಂತೆ. ಕೂಡಲೇ ಬರಬೇಕು ಎಂದು ಹೇಳಿರುವನು. ಏನು ಮಾಡಲಿ ಗೊತ್ತಾಗುತ್ತಿಲ್ಲ. ಜತೆಗೆ ನೀನೂ ಇದ್ದರೆ ಒಳ್ಳೆಯದಿತ್ತು" ನನ್ನ ಗೆಳೆಯ ಶನಿವಾರ ರಾತ್ರಿ ತೀರಾ ಟೆನ್ಷನ್‌ನಲ್ಲಿ ಫೋನ್ ಮಾಡಿದನು.


-ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ- ಥಿಯರಿಯಲ್ಲಿ ನನಗೆ ನಂಬಿಕೆ ಜಾಸ್ತಿ. "ಗಾಬರಿಯಾಗಬೇಡ. ಏನಾದರೂ ಕಾರಣ ಹೇಳಿ ಈಗ ಬರಲಾಗುವುದಿಲ್ಲ, ಅಂತ ಹೇಳು. ನಾಳೆ ಹೇಗೂ ಸಂಡೆ. ಬೆಳಗ್ಗೆ ೯ ಗಂಟೆಗೆ ಅವರ ಮನೆಗೆ ಹೋಗೋಣ" ಅಂದೆ. ರಾತ್ರಿ ಸರಿ ನಿದ್ರೆ ಬರಲಿಲ್ಲ.


೯ ಗಂಟೆ ಸಮಯ ಹೇಳಿದ್ದರೂ, ೮ ಗಂಟೆಗೇ ನಾನೂ, ಗೆಳೆಯ ಕಮಲೇಶನ ಮನೆಗೆ ಹೋದೆವು.


ಮನೆಗೆ ಬೀಗ!!


ಗೆಳೆಯನಿಂದ ನನಗೆ ಸಹಸ್ರಾರ್ಚನೆ ಶುರುವಾಯಿತು-" ನಿನ್ನೆನೇ ಬಂದಿರುತ್ತಿದ್ದರೆ ಸಾಲ್ವ್ ಮಾಡಬಹುದಿತ್ತೋ ಏನೋ..........."


ಕಮಲೇಶನ ಮೊಬೈಲ್‌ಗೆ ಫೋನ್ ಮಾಡಿದೆವು- ಸ್ವಿಚ್ ಆಫ್!


ಛೇ..ಏನಾದರೂ ಹೆಚ್ಚುಕಮ್ಮಿ...........ತಲೆಬಿಸಿಯಾಯಿತು...ಏನು ಮಾಡುವುದು? ಆಗ..


ಆವಾಗ ಅವರ ಮನೆ ಕಾಂಪೌಂಡ್‌ನಲ್ಲಿರುವ ಕೈತೋಟ ಕಂಡಿತು. ವ್ವಾ..ವ್ವಾ.. ಎಷ್ಟು ಸುಂದರ ಹೂಗಳು..


ಮಲ್ಲಿಗೆಮೊಗ್ಗು ತಾನೇ ಜಗದೇಕ ಸುಂದರಿ ಎಂದು ತಲೆಯೆತ್ತಿ ನಿಂತಿತ್ತು.


ದಾಸವಾಳ, ಅಲ್ಲ ಡಬಲ್ ದಾಸವಾಳ ಬಗ್ಗಿ, "ಇಲ್ನೋಡು ನಾನಲ್ವಾ ಇವರೆಲ್ಲರಿಗಿಂತಲೂ ಡಬಲ್ ಸುಂದರಿ.." ಅಂದಿತು.


ಗೊಂಡೆ ಹೂ ನನ್ನ ಕಡೆ ತಿರುಗದೇ ಚಲುವೆಲ್ಲಾ ನಂದೆಂದಿತು. ಹೇಳಲಿ ಬಿಡಿ..ಚಲುವಿರುವಲ್ಲಿ ಅಹಂಕಾರನೂ ಸ್ವಲ್ಪ ಇರುತ್ತದೆ.


ನನ್ನ ಪ್ಯಾಂಟು ಎಳೆದು "ನಾನು ಇಲ್ಲಿದ್ದೇನೆ, ನನ್ನದೂ ಫೋಟೋ ತೆಗಿ ಎಂದಿತು" ಈ ಚಲುವಿ.


ನನ್ನ ಫ್ರೆಂಡ್ ಏನೋ ಹೇಳುತ್ತಿದ್ದ. ನಾನು ಮಾತ್ರ ಈ ಹೂಗಳ ಲೋಕದಲ್ಲಿ ಮುಳುಗಿ ಹೋಗಿದ್ದೆ.


ಇಷ್ಟು ಸುಂದರ ಹೂತೋಟ. ಸುಂದರ ಮನೆ. ಹೇಳಿ ಮಾಡಿಸಿದಂತಹ ಜೋಡಿ. ಇಬ್ಬರೂ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಆದರೂ ಮನಸುಗಳೇಕೋ ಮುದುಡಿವೆ. ಯಾರೋ ಸಂಶಯಾತ್ಮರು ಇಬ್ಬರ ನಡುವೆ ಸಂಶಯದ ಕಿಡಿ ಹೊತ್ತಿಸಿ,ತಿದಿ ಊದಿರಬೇಕು.


ಫ್ರೆಂಡ್‌ನನ್ನ ಕರೆದು ಗಿಡ ತೋರಿಸಿ " ಬೆಳಗ್ಗೆನೇ, ಅದೂ ಸಂಡೆ ದಿನ, ಗಿಡಕ್ಕೆಲ್ಲಾ ನೀರು ಹಾಕಿ ಹೊರಹೋಗಿದ್ದಾರೆಂದರೆ, ಅವರೊಳಗಿನ ಕೋಪ ಶಮನವಾಗಿದೆ ಎಂದರ್ಥ. ನಾವು ಇಲ್ಲಿದ್ದರೆ ಪುನಃ ಹಳೆಯ ಗಾಯ ಕೆದಕಿದಂತೆ ಆಗುವುದು. ಹೊರಡೋಣ" ಎಂದೆ.


ಹೊರಬರುತ್ತಾ ಕಮಲೇಶ ದಂಪತಿಗಳು ಈ ಹೂವಿನಂತೆ ನಗುನಗುತಾ ಬಾಳಲಿ ಎಂದು ಹಾರೈಸಿದೆ.


-ಗಣೇಶ.

Rating
No votes yet

Comments