ಮುಂಬಯಿಯ ಗಣಪ

ಮುಂಬಯಿಯ ಗಣಪ

ಬರಹ
ಮುಂಬಯಿಯ ಗಣಪ
ಮುಂಬಯಿಯ ಗಣಪ

ಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್. ಗಣೇಶಾಥರ್ವಶೀರ್ಷದಲ್ಲಿ ಬರುವ ಒಂದು ಶ್ಲೋಕ. (ಏಕ ದಂತ ಉಳ್ಳವನೂ ಬಾಗಿರುವ ಸೊಂಡಿಲಿನವನೂ ಆದ ಆ ಭಗವಂತ ಬುದ್ಧಿಯನ್ನೂ ಮತ್ತು ಸ್ಫೂರ್ತಿಯನ್ನೂ ನೀಡಲಿ).

ಗಣಪತಿ ಬಾಪ್ಪಾ ಮೋರಿಯಾ
ಪುಡಚ್ಯಾ ವರ್ಷೀ ಲವಕರ್ ಯಾ

ಇದು ಮರಾಠಿಯಲ್ಲಿ ಗಣಪತಿಗಾಗಿ ಹೇಳುವ ಹಾಡು. ಇದರರ್ಥ, 'ಓ ಗಣಪತಿ ದೇವನೇ ಮುಂದಿನ ವರ್ಷ ಬೇಗ ಬಾ' ಎಂದು. ಮರಾಠಿ ಭಾಷಿಗರಿಗೆ ಮನೆಯಲ್ಲಿ ಎಂದೂ ಗಣಪತಿ ಇರಲಿ ಎಂಬ ಆಶಯ. ಆದರೇನೂ ಹಬ್ಬದ ದಿನದಿಂದ ಹತ್ತು ದಿನಗಳು ಮಾತ್ರ ಇದ್ದು ನಂತರ ಅನಂತ ಚತುರ್ದಶಿಯ ದಿನ ಆತ ಹೊರಟು ಬಿಡುವನು. ಅವನ ಮೇಲೆ ಅತಿಯಾದ ಪ್ರೇಮದಿಂದ ಭಕ್ತಾದಿಗಳು ಹಾಡಿ ಹೊಗಳುವರು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ ಎಂತಹ ಅವಘಡವಾದರೂ ಸಾರ್ವಜನಿಕ ಗಣೇಶೋತ್ಸವದ ಕಳೆ ಮಾತ್ರ ಕುಂದುವುದಿಲ್ಲ. ನಮ್ಮಲ್ಲಿ ಮನೆ ಮನೆಗಳಲ್ಲಿ ಚಿಕ್ಕ ಚಿಕ್ಕ ಗಣಪತಿಗಳನ್ನು ಪೂಜಿಸುವೆವು. ಸಾರ್ವಜನಿಕ ಗಣೇಶೋತ್ಸವ ಅಲ್ಲಲ್ಲಿ ನಡೆಯುವುದು. ಆದರಿಲ್ಲಿ ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ (೧೮೯೪) ಜನರನ್ನು ಒಗ್ಗೂಡಿಸಲು ಈ ಉತ್ಸವದ
ಆಚರಣೆಯನ್ನು ಬಾಲ ಗಂಗಾಧರ ತಿಲಕರು ಪುಣೆಯಲ್ಲಿ ಪ್ರಾರಂಭಿಸಿದರು. ಅವರ ಕಾರ್ಯದಿಂದ ರಾಷ್ಟ್ರದಲ್ಲಿ ಆ ಕಾಲಕ್ಕೆ ಅವಶ್ಯವಾದ ಜನಬಲವೆಂಬ ಒಂದು ದೊಡ್ಡ ಶಕ್ತಿಯ ನಿರ್ಮಾಣವಾಯಿತು. ಪುಣೆ ಮಹಾರಾಷ್ತ್ರದ ಸಾಂಸ್ಕೃತಿಕ ರಾಜಧಾನಿ ಎಂದು ಕರೆದರೂ ತಪ್ಪಾಗಲಾರದು. ಅಲ್ಲಿಯ ದಗಡೂ ಶೇಟ್ ಗಣಪತಿ ವಿಶ್ವ ಪ್ರಸಿದ್ಧ.

ಜುಲೈ ೨೬ರಂದು ಮುಂಬಯಿಯಲ್ಲಾದ ಜಲಪ್ರಳಯದ ಹಿಂದೆಯೇ ಸಾಂಕ್ರಾಮಿಕ ರೋಗದ ಭೀತಿ, ಅದರ ಹಿಂದೆಯೇ ಹಳೆಯ ಕಟ್ಟಡಗಳ ಕುಸಿತ ಮತ್ತು ಸಾವಿರಾರು ಜನಗಳ ಸಾವು. ಹೀಗೆ ಒಂದರ ಹಿಂದೊಂದರಂತೆ ಕೆಟ್ಟದ್ದನ್ನೇ ಎದುರಿಸುತ್ತಿರುವ ಮುಂಬಯೀಕರರು ಇವೆಲ್ಲವನ್ನೂ ಕೆಟ್ಟ ಕನಸೆಂಬಂತೆ ಮರೆತು ಗಣೇಶೋತ್ಸವವನ್ನು ಆಚರಿಸಲು ಪ್ರಯತ್ನಿಸುತ್ತಿರುವುದು ಮಾನವ ಜನಾಂಗಕ್ಕೆ ಒಂದು ದೊಡ್ಡ ನೀತಿ ಪಾಠ. ತಲೆಯ ಮೇಲೆ ಕೈ ಹೊತ್ತು ಕೂರದೇ
ಮುನ್ನಡೆಯುವುದರಲ್ಲೇ ಜೀವನ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.

ಯಾವುದೇ ದೇವರಿಗೆ ಪೂಜಿಸುವ ಮೊದಲು ಗಣಪನಿಗೆ ಪೂಜಿಸುವ ನಿಯಮವಿದೆ. ಎಲ್ಲ ವಿಘ್ನಗಳನ್ನು ನಿವಾರಿಸುವ ದೈವ ಆದ್ದರಿಂದ ಅವನಿಗೇ ಅಗ್ರ ಪೂಜೆ. ಗಣಪತಿ ತಿಳುವಳಿಕೆ ಮತ್ತು ಅದೃಷ್ಟವನ್ನು ತಂದುಕೊಡುವ ದೈವ. ಆ ಸಿದ್ಧಿ ಬುದ್ಧಿಯರನ್ನೇ ಆತನ ಪತ್ನಿಯರೆಂದೂ ತಿಳಿಯುವೆವು.

ಹತ್ತು ದಿನಗಳು ಮೂರ್ತಿಯನ್ನು ಕುಳ್ಳಿರಿಸಿ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವರು. ಹತ್ತನೆಯ ದಿನ ಅನಂತಚತುರ್ದಶಿಯೂ ಆಗಿದ್ದು, ಅಂದು ಗಜಾನನ ಮೂರ್ತಿಯನ್ನು ಹತ್ತಿರದ ಕೆರೆ ಕೋಡಿ ಅಥವಾ ಸಮುದ್ರದ ಪಾಲು ಮಾಡುವರು. ಮನೆಗಳಲ್ಲಿ ಚಿಕ್ಕ ಚಿಕ್ಕ ಮೂರ್ತಿಗಳನ್ನೂ ಸೊಸೈಟಿ ಕಾಲೋನಿಗಳಲ್ಲಿ (ಇಲ್ಲೆಲ್ಲಾ ಬಹು ಮಹಡಿ ಕಟ್ಟಡಗಳಿದ್ದು, ಎಲ್ಲರೂ ಸೊಸೈಟಿ ಮಾಡಿಕೊಂಡಿರುವರು), ದೊಡ್ಡ ದೊಡ್ಡ ಗಣಪತಿಗಳನ್ನೂ ಇಟ್ಟು
ಪೂಜಿಸುವರು. ಮೂರ್ತಿಯನ್ನು ಹಬ್ಬದ ದಿನದಂದೇ ತರುವರು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸುತ್ತಿದ್ದ ಮೂರ್ತಿಯಿಂದ ವಾತಾವರಣ ಕಲುಷಿತವಾಗುವುದೆಂದು ಈಗೀಗ ಎಲ್ಲ ಕಡೆಗಳಲ್ಲೂ ಮಣ್ಣಿನ ಮೂರ್ತಿಗೆ ಬೇಡಿಕೆ ಜಾಸ್ತಿಯಾಗಿದೆ. ಜನರು ಗಣಪತಿ ತಯಾರಿಸುವ ಸ್ಥಳಕ್ಕೆ ಬಾಜಾ ಭಜಂತ್ರಿಗಳೊಡನೆ ಗುಂಪು ಗುಂಪಾಗಿ ಹೋಗಿ ಚೌತಿಯಂದೇ (ಹಬ್ಬದ ದಿನ) ಗಣೇಶನ ಮೂರ್ತಿಯನ್ನು ಖರೀದಿಸುವರು. ಇದಕ್ಕಾಗಿ ಮುಂಗಡವಾಗಿ ಬುಕಿಂಗ್
ಮಾಡಿರುವರು. ಅಲ್ಲಿ ಸ್ವಾಮಿಯ ಮೂರ್ತಿಗೆ ಪೂಜೆ ಸಲ್ಲಿಸಿ ಆ ಮೂರ್ತಿ ನಿರ್ಮಿಸಿದವನಿಗೆ ತಾಂಬೂಲ ಸಹಿತ ಹಣ ಕೊಡುವ ಪದ್ಧತಿ ಇದೆ. ನಮ್ಮಲ್ಲಿಯ ಹಾಗೆ ಒಂದು ವಾರದ ಮೊದಲೇ ದೇವರು ಕೊಂಡರೆ ಬೆಲೆ ಕಡಿಮೆ - ಹಬ್ಬದ ದಿನ ಜಾಸ್ತಿ ಎಂಬುದು ಇಲ್ಲಿ ಇಲ್ಲವೇ ಇಲ್ಲ. ಎಲ್ಲ ದಿನಗಳಲ್ಲೂ ಒಂದೇ ಬೆಲೆ. ಮೂರ್ತಿಯನ್ನು ತರುವಾಗ ಅದರ ತಲೆಯ
ಮೇಲೆ ಒಂದು ಬಟ್ಟೆ ಹಾಕಿರುವರು ಮತ್ತು ತರುವವರು ತಲೆಗೆ ಬಿಳಿ ಟೊಪ್ಪಿಗೆಯನ್ನು ಧರಿಸಿರುವುದು ವೈಶಿಷ್ಟ್ಯ. ಮೂರ್ತಿಯ ತಲೆಯ ಮೇಲೆ ಬಟ್ಟೆ ಏಕೆ ಹಾಕುವರೆಂದು ನನಗಿನ್ನೂ ತಿಳಿಯದಾಗಿದೆ. ಕೆಲವರು ಹೇಳುತ್ತಾರೆ ದೇವ ಆಚೆ ಕಡೆಗೆ ನೋಡಬಾರದು - ನೋಡಿದ್ರೆ ಓಡಿ ಹೋಗ್ತಾನೆ ಅಂತ. ದೇವರನ್ನು ಹಿಡಿದುಡುವಷ್ಟು ಶಕ್ತಿ ನಮ್ಮಲ್ಲಿದೆಯೇ?
ಆ ದೇವರು ಯಾರು ಅನ್ನೋದೇ ತಿಳಿದುಕೊಳ್ಳಕ್ಕೆ ಇನ್ನೂ ಆಗಿಲ್ಲ. ಆದರಿದು ಇಲ್ಲಿ ನಡೆದು ಬಂದ ಪದ್ಧತಿ.

ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಸಾಂಗವಾಗಿ ಪೂಜೆ ನಡೆಯುವುದು. ಸಂಜೆಯ ಆರತಿ ನೋಡಲು ಎರಡು ಕಣ್ಣುಗಳು ಸಾಲದು. ಮರಾಠಿಯಲ್ಲಿರುವ ಭಜನೆಯನ್ನು ಬೇರಿನ್ಯಾವ ಭಾಷೆಯಲ್ಲೂ ಆನಂದಿಸಲಾಗುವುದಿಲ್ಲ. ಅದರದೇ ಆದ ವೈಶಿಷ್ಟ್ಯ. ಆರತಿ ೧೫ ನಿಮಿಷಗಳಿಂದ ಅರ್ಧ ತಾಸಿನವರೆವಿಗೂ ನಡೆಯುವುದು. ಆರತಿಯ ಸಮಯದಲ್ಲಿ ಹಾಡುವ ಭಜನೆ ತುಂಬಾ ಶ್ರಾವ್ಯವಾಗಿರುತ್ತದೆ. ಆರತಿಯಲ್ಲಿ ಹಾಡುವ ಕೆಲವು ತುಣುಕುಗಳು ಹೀಗಿವೆ -
೧) ಸುಖಕರ್ತಾ ದು:ಖಹರ್ತಾ ವಾರ್ತಾ ವಿಘ್ನಾಚೀ
ನುರವೀ ಪುರವೀ ಪ್ರೇಮ್ ಕೃಪಾ ಜಯಾಚೀ

೨) ಜಯ ಗಣೇಶ್ ಜಯ ಗಣೇಶ್ ಜಯ ಗಣೇಶ ದೇವಾ
ಮಾತಾ ಜಾಕೀ ಪಾರ್ವತೀ ಪಿತಾ ಮಹದೇವಾ

ಆರತಿ ಮಾಡುವಾಗ ದೇವಿ, ಅಂಬೆ, ಶಂಕರ, ವಿಠ್ಠಲರ ಭಜನೆಗಳನ್ನೂ ಹಾಡುವರು. ಹಾಡುತ್ತಾ ಕೇಳುತ್ತಾ ಜನ ಮಂತ್ರಮುಗ್ಧರಾಗುವರು. ತಿಲಕರು ಎಂತಹ ಘನಕಾರ್ಯ ಮಾಡಿದರು. ಇಂತಹ ಕಾರ್ಯಗಳಿಂದ ಜನರನ್ನು ಒಗ್ಗೂಡಿಸುವುದು ಸುಲಭಸಾಧ್ಯವಲ್ಲವೇ? ನಗರದಲ್ಲೇ ಹೀಗಿದ್ದ ಮೇಲೆ ಇನ್ನು ಹಳ್ಳಿಗಳಲ್ಲಿ ಈ ಹಬ್ಬದ ಸಂಭ್ರಮ ಹೇಳಲಸಾಧ್ಯ.

ಮುಂಬೈನಲ್ಲಿ ಲಾಲ್ಬಾಗ್ ಪ್ರದೇಶ ಇದಕ್ಕೆ ಬಹಳ ಪ್ರಸಿದ್ಧ. ಇಲ್ಲಿ ಬಹು ದೊಡ್ಡ ದೊಡ್ಡ ಗಣಪತಿಯ ಮೂರ್ತಿಗಳನ್ನು ನೋಡಬಹುದು. ಹಾಗೇ ವಡಾಲಾ ಮತ್ತು ಥಾಣೆ ಪ್ರದೇಶಗಳೂ ಗಣಪತಿ ಹಾಗೇ ಮಹಾರಾಷ್ಟ್ರದಲ್ಲಿ ಪುಣೆ ಮತ್ತು ಕೊಂಕಣ ಪ್ರದೇಶಗಳು ವಿಜೃಂಭಣೆಯಿಂದ ಹಬ್ಬವನ್ನಾಚರಿಸುವರು. ಮುಂಬೈ ನಗರದಲ್ಲಿ ೮೨೦೦ ಗಣಪತಿ ಮಂಡಳಿಗಳಿವೆ ಎಂದು ಸುದ್ದಿ ಪತ್ರಿಕೆಗಳು ತಿಳಿಸಿವೆ. ಗಲ್ಲಿ ಗಲ್ಲಿಗಳಲ್ಲೂ ಸಾರ್ವಜನಿಕ ಗಣೇಶನನ್ನು ಕೂರಿಸಿ ಸಂಭ್ರಮದಿಂದ ನಲಿಯುವರು. ಮೈಕ್ ಹಾಕಿಕೊಂಡು ಅಬ್ಬರ ಮಾಡುವ ಆ ನಲಿದಾಟ ಕೆಲವರಿಗೆ ಕಿರುಕುಳ ಆಗಿ ಕೋರ್ಟಿನ ಮೆಟ್ಟಲನ್ನೂ ಹತ್ತಿದ್ದಾರೆ. ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ ಹತ್ತರ ಮೇಲೆ ಮೈಕ್ ಹಾಕಬಾರದೆಂದು ನಿರ್ದೇಶಿಸಲಾಗಿದೆ. ಇನ್ನು ಮನೆಗಳಲ್ಲಿ, ಇರುವ ಸಣ್ಣ ಜಾಗದಲ್ಲಿ ಗಣಪತಿಗೆ ಪ್ರತ್ಯೇಕ ಮಂಟಪ ಮಾಡಿ ಅದರಲ್ಲಿ
ಮೂರ್ತಿಯನ್ನಿಟ್ಟು ಪೂಜಿಸುವರು.
ಯಾವಾಗಲೂ ಮನೆಯಲ್ಲಿ ಒಬ್ಬರಾದರೂ ಇದ್ದೇ ತೀರಬೇಕು. ಗಣಪನನ್ನು ಒಂಟಿಯಾಗಿ ಬಿಡಲು ತಯಾರಿಲ್ಲ. ಮೋದಕ, ಕರ್ಜಿಕಾಯಿ, ಪಂಚ ಕಜ್ಜಾಯದ ನೈವೇದ್ಯ ಮಾಡಿ ಪ್ರಸಾದವೆಂದು ಎಲ್ಲರಿಗೂ ಹಂಚುವರು. ಪುಣೆಯಲ್ಲಂತೂ ಇದು ಒಂದು ನಾಡ ಹಬ್ಬದಂತೆಯೇ. ಮೈಸೂರಿನ ದಸರಾ ಸಂಭ್ರಮವನ್ನು ನೋಡಲು ಹೇಗೆ ವಿದೇಶದಿಂದೆಲ್ಲಾ ಪ್ರವಾಸಿಗರು ಬರುವರೋ ಹಾಗೆ ಇಲ್ಲಿ ಗಣೇಶೋತ್ಸವವನ್ನು ನೋಡಲು ಬರುವರು.

ಇನ್ನು ಎಂತೆಂತಹ ಗಣಪತಿಗಳನ್ನು ನೋಡಬಹುದು ಎಂದರೆ - ಶ್ರೀಮಂತ ಗಣಪತಿ, ಎತ್ತರದ ಗಣಪತಿ, ಜಾತ್ಯಾತೀತ ಗಣಪತಿ, ಇಂದಿನ ಸಮಾಜದ ಸ್ಥಿತಿ ಬಿಂಬಿಸುವ ಎಲ್ಲ ರೀತಿಯ ಗಣಪತಿಗಳನ್ನು ನೋಡಬಹುದು. ಎತ್ತರದ ಗಣಪತಿ ೧೨ ಅಡಿ ಎತ್ತರದವರೆವಿಗೆ ಇರುವುದನ್ನು ಕಂಡಿರುವೆ. ಹಾಗೇ ಅತ್ಯಂತ ಶ್ರೀಮಂತ ಗಣಪತಿ ಕನ್ನಡಿಗರದ್ದೇ ಆದ ವಡಾಲಾದಲ್ಲಿಯ ಗೌಡ ಸಾರಸ್ವತ ಬ್ರಾಹ್ಮಣರ ಸಮಾಜದ ಗಣಪತಿಯ ಚಿನ್ನದ ಕಿರೀಟದ ತೂಕ ೨೨ ಕೆಜಿಗಳು. ಆ
ಮೂರ್ತಿಯ ಮೈ ಮೇಲೆ ೫೦ ಕೆಜಿ ಚಿನ್ನ ಮತ್ತು ೪೦೦ ಕೆಜಿಗಳ ಬೆಳ್ಳಿಯ ಆಭರಣ ತೊಡಿಸುವರು. ಆ ಮೂರ್ತಿಯ ಕೈ ಮತ್ತು ಮೋದಕದ ತೂಕ ೬ ಕಿಲೋಗ್ರಾಂ ಚಿನ್ನದ್ದಾಗಿರುತ್ತದೆ. ಸಿಂಹಾಸನವನ್ನು ೪೦೦ ಕಿಲೋಗ್ರಾಂ ಬೆಳ್ಳಿಯಿಂದ ಮಾಡಲಾಗಿದೆ. ಈ ಗಣಪತಿಯ ರಕ್ಷಣೆಗೇ ಹಗಲಿರುಳೂ ವಿಶೇಷ ಕಾವಲು ಕಾಯುವುದು.

ಇನ್ನು ಗಣಪತಿ ಮಂಡಲಿಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಪಾತ್ರವೇನೂ ಕಡಿಮೆಯದ್ದಲ್ಲ. ಕಿಂಗ್ಸ್ ಸರ್ಕಲ್ ನಲ್ಲಿರುವ ಒಂದು ಗಣಪತಿ ಮಂಡಳಿಯಲ್ಲನ್ನು ಆರಂಭಿಸಿದವರು ಕ್ರಿಶ್ಚಿಯನ್ನರು ಮತ್ತು ನಡೆಸುತ್ತಿರುವ ೧೨ ಜನಗಳಲ್ಲಿ ೪ ಜನ
ಮುಸ್ಲಿಮರು ಇದ್ದಾರೆ. ನಮ್ಮ ಕಾಲೋನಿಯಲ್ಲೂ ೫ ಅಡಿ ಎತ್ತರದ ಗಣಪತಿ ಇಟ್ಟಿದ್ದು, ಅದಕ್ಕೆ ದಿನವೂ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯುವುದು. ನಮ್ಮ ಕಾಲೋನಿಯ ವೆಲ್ಫೇರ್ ಕಮಿಟಿಯ ಕಾರ್ಯದರ್ಶಿ ಜಮೀಲ್ ಎಲ್ಲ ಕಾರ್ಯಗಳಲ್ಲೂ ಮುಂದಾಗಿರುವರು. ಪೂಜಾ ಸಮಯದಲ್ಲಿ ಅಲ್ಲೇ ಇದ್ದು ಎಲ್ಲ ಕೆಲಸಗಳಲ್ಲೂ ಪಾಲ್ಗೊಳ್ಳುವರು. ಆದರೆ ದೇವರ ಹತ್ತಿರ
ಮಾತ್ರ ಬರುವುದಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯ. ಇಷ್ಟಾದರೂ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪೂಜೆ ಮತ್ತು ಎಲ್ಲ ಕೆಲಸಗಳನ್ನು ನಾವೇ ಬ್ಯಾಂಕಿನ ಅಧಿಕಾರಿಗಳು ನಡೆಸುತ್ತಿದ್ದೇವೆ. ಬೆಳಗ್ಗೆಯ ಲಲಿತಾ ಸಹಸ್ರನಾಮಯುಕ್ತ ಪೂಜೆಗೆ ಮತ್ತು ಸಂಜೆಯ ರುದ್ರಾಭಿಷೇಕಯುಕ್ತ ಪೂಜೆಗೆ ನಮ್ಮದೇ ೫-೬ ಜನರ ತಂಡ ಮಾಡಿಕೊಂಡಿದ್ದೇವೆ. ಬೆಳಗ್ಗೆ ೭ ಘಂಟೆಯೊಳಗೆ ಪೂಜೆ ಮುಗಿಸಿದರೆ, ಸಂಜೆಯ ಪೂಜೆ ರಾತ್ರಿ ೭.೩೦ ರಿಂದ ೧೦ ರವರೆವಿಗೆ.
ಹೆಚ್ಚಿನಂಶ ಪ್ರತಿ ಮನೆಯವರೂ ದೇವರಿಗೆ ಪ್ರಸಾದವನ್ನು ತಯಾರಿಸಿಕೊಡುವರು. ಮಕ್ಕಳುಗಳಂತೂ ರಾತ್ರಿ ಮನೆಯಲ್ಲಿ ಊಟ ಮಾಡೋದೇ ಇಲ್ಲ. ಇಲ್ಲಿ ಹಂಚುವ ಪ್ರಸಾದ ತಿಂದು ಹೊಟ್ಟೆ ತುಂಬಿಸಿಕೊಳ್ಳುವರು. ಇಂಥಹ ನಿರ್ಜಾತೀವಾದಿಗಳ ಸಂಖ್ಯೆ ಹೆಚ್ಚಾಗಬೇಕಿದೆ.
ಮಹಾರಾಷ್ಟ್ರದಲ್ಲಿರುವ ಪುಣೆ - ಅಹ್ಮದನಗರಗಳ ಸುತ್ತುಮುತ್ತಲಿನಲ್ಲಿರುವ ಅಷ್ಟ ಗಣಪತಿಗಳು -
೧. ಮೋರೆಗಾಂವಿನ ಮಯೂರೇಶ್ವರ
೨. ತೇವೂರಿನ ಶ್ರೀ ಚಿಂತಾಮಣಿ
೩. ರಂಜನಗಾಂವಿನ ಶ್ರೀ ಮಹಾಗಣಪತಿ
೪. ಸಿದ್ಧಟೇಕಿನ ಸಿದ್ಧಿ ವಿನಾಯಕ
೫. ಓಝಾರಿನ ಶ್ರೀ ವಿಘ್ನೇಶ್ವರ
೬. ಲೇಣ್ಯಾದ್ರಿಯ ಶ್ರೀ ಗಿರಿಜಾತ್ಮಕ
೭. ಪಾಲಿಯ ಹತ್ತಿರದ ಶ್ರೀ ಬಲ್ಲಾರೇಶ್ವರ
೮. ಮಹಾಡಿನ ಶ್ರೀ ವರದ ವಿನಾಯಕ

ಗಣಪತಿಯನ್ನು ಹತ್ತು ದಿನಗಳು ಇಟ್ಟು ನಂತರ ಹತ್ತನೆಯ ದಿನ ಅದನ್ನು ಭಾರೀ ಮೆರವಣಿಗೆಯಲ್ಲಿ ಸಮುದ್ರ ಅಥವಾ ಹತ್ತಿರದ ಕೆರೆ ಕೋಡಿಗಳಲ್ಲಿ ಬಿಡುವರು. ಅಂದು ನಗರದಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಆಗಿ ಜನಜೀವನ ಸ್ಥಬ್ಧವಾಗುವುದು. ಎಲ್ಲ ಕಛೇರಿಗಳಿಗೂ ಅರ್ಧ ದಿನದ ರಜೆ ಘೋಷಿಸುವರು. ಸಾಮಾನ್ಯವಾಗಿ ಎಲ್ಲ ಗಣಪತಿಗಳನ್ನೂ
ಸಮುದ್ರದ ನೀರಿಗೆ ಬಿಡುವುದರಿಂದ ಸಮುದ್ರ ತೀರದಲ್ಲೀ ಭಾರೀ ಜನಸಂದಣಿ. ಪತ್ರಿಕೆಗಳ ಪ್ರಕಾರ ೩೧೦೦೦ ದೊಡ್ಡ ಗಣಪತಿಗಳನ್ನೂ ಮತ್ತು ೧.೫ ಲಕ್ಷ ಚಿಕ್ಕ ಗಣಪತಿಗಳನ್ನೂ ವಿಸರ್ಜನೆ ಮಾಡುವರು. ಅದರ ಚಿತ್ರವನ್ನು ನೀವು ನೋಡಿರಬಹುದು.

ಒಟ್ಟಿನಲ್ಲಿ ಈ ಸಾರ್ವಜನಿಕ ಗಣೇಶೋತ್ಸವ ಜಾತಿ ಮತ ಭೇದವಿಲ್ಲದೇ ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಆಚರಿಸುವ ಒಂದು ನಾಡ ಹಬ್ಬ. ಇಂತಹ ಹಬ್ಬಗಳು ಇನ್ನೂ ಹೆಚ್ಚಾಗಿ ದೇಶ ಒಂದಾಗಿರಲಿ ಎಂದು ಆಶಿಸೋಣವೇ?