ತೊರೆದು ಜೀವಿಸಬಹುದೆ

ತೊರೆದು ಜೀವಿಸಬಹುದೆ

              

         ಕೆಲವು ದಿನಗಳ ಹಿಂದೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡ್ತಾ ಇದ್ದೆ. ಮಾನಸ ಜಿ. ಪುರೋಹಿತ್ ಎಂಬ ಗಾಯಕಿ ಹಾಡುವ ಸರದಿ ಬಂತು. ಆಕೆ ಕನಕದಾಸರ " ತೊರೆದು ಜೀವಿಸಬಹುದೆ" ಎಂಬ‌ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಳು. ಯಾವುದೊ ಅಡಚಣೆಯಿಂದಾಗಿ ಮೂಲ ಗಾಯಕರು ಹಾಗು ಸಂಗೀತ ನಿರ್ದೇಶಕರು ಯಾರೆಂದು ತಿಳಿಯಲಾಗಲಿಲ್ಲ. ಸರಿ ಅಂತರ್ಜಾಲದಲ್ಲಿ ಹುಡುಕಿದರೆ ಸಾಹಿತ್ಯದ ಜೊತೆಗೆ ಹಾಡು ದೊರಕಬಹುದೆಂದು ಅಂದುಕೊಂಡು ಆ ಹುಡುಗಿ ಹಾಡನ್ನು ಕೇಳಿಸಿಕೊಳ್ಳಲು ಅನುವಾದೆ.

ಆಕೆಯ ಕ‍ಂಠ ಬಹಳ ಅದ್ಭುತವಾಗಿತ್ತು. ಒಳ್ಳೆ ಖ್ಯಾತ ಗಾಯಕಿಯ ಹಾಗೆ ಹಾಡಿದಳು. ಕೇಳಲು ಬಹಳ ಆನಂದವಾಯಿತು. ಈ ವಯಸ್ಸಿಗೆ ಇಷ್ಟು ಚೆನ್ನಾಗಿ ಹಾಡಬೇಕಾದರೆ, ಅದರ ಹಿಂದಿನ ಪರಿಶ್ರಮ ಎಷ್ಟರಮಟ್ಟಿಗೆ ಇರಬಹುದೆಂದು ಊಹಿಸುವಷ್ಟರಲ್ಲಿ ಹಾಡು ಮುಗಿಯಿತು. ಆದರೆ ನನಗೆ ಅದರ ಮೂಲ ಗಾಯಕರು ಹಾಗು ಸಂಗೀತಗಾರರನ್ನು ತಿಳಿಯುವ ಹಂಬಲ ಹೆಚ್ಚಾಯಿತು.

ಸರಿ ಕಛೇರಿಗೆ ಬಂದು, ಬಿಡುವಿನ ವೇಳೆಯಲ್ಲಿ ಹುಡುಕಲು ಶುರುಮಾಡಿದೆ. ಎಷ್ಟೇ ಹುಡುಕಿದರೂ ಸಾಹಿತ್ಯ ಸಿಗಲಿಲ್ಲ. ಬಹಳ ಪ್ರಯತ್ನಗಳ ನಂತರ ಯು‍ಟ್ಯೂಬ್ ನಲ್ಲಿ ಆ ಗಾಯಕರೆ ಹಾಡಿರುವ ಹಾಡು ದೊರಕಿತು. ಎಲ್ಲಿಲ್ಲದ ಸಂತೋಷ ನನಗೆ.

ಗಾಯಕರು ಯಾರೆಂದರೆ ಖ್ಯಾತನಾಮರಾದ ಪಂಡಿತ್. ಎಂ. ವೆಂಕಟೇಶ್ ಕುಮಾರ್ ರವರು. ಸಂಗೀತ, ವಸಂತ್ ಕನಕಾಪುರ್ ಅವರದು.

 

 

 

 

ಸಾಹಿತ್ಯ ಸಿಗಲಿಲ್ಲವಾದ್ದರಿಂದ, ನಾನೆ ಬಹಳ ಬಾರಿ ಕೇಳಿ ಸಾಹಿತ್ಯವನ್ನು ಬರೆದುಕೊಂಡೆ. ಆದ್ಭುತವಾದ ಸಾಹಿತ್ಯ.

ನಿಮಗಾಗಿ ಆ ಸಾಹಿತ್ಯವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ, ತಪ್ಪಿದ್ದರೆ ದಯವಿಟ್ಟು ತಿದ್ದಿಕೊಳ್ಳುವುದು.

 

ತೊರೆದು ಜೀವಿಸಬಹುದೆ

ಹರಿ ನಿನ್ನ ಚರಣಗಳ‌

ಬರಿದೇ ಮಾತೇಕಿನ್ನೂ

ಅರಿತು ಪೇಳುವೆನಯ್ಯ...

 

ತಾಯಿ ತಂದೆಯ ಬಿಟ್ಟು

ತಪವ ಮಾಡಲುಬಹುದು

ದಾಯಾದಿ ಬಂಧುಗಳ ಬಿಡಲುಬಹುದು

ರಾಯ ತಾ ಮುನಿದರೆ

ರಾಜ್ಯವನೆ ಬಿಡಬಹುದು

ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು...

 

ಒಡಲು ಹಸಿದರೆ ಮತ್ತೆ

ಅನ್ನವನೆ ಬಿಡಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳ ಕಡೆಗೆ

ತೊಲಗಿಸಿಯೆ ಬಿಡಬಹುದು

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...

 

ಪ್ರಾಣವನು ಪರರು

ಬೇಡಿದರೆತ್ತಿ ಕೊಡಬಹುದು

ಮಾನಾಭಿಮಾನವ ತಗ್ಗಿಸಲುಬಹುದು

ಪ್ರಾಣದಾಯಕಾನಾದ ಆದಿಕೇಶವರಾಯ‌

ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....

 

ಸಮಯವಿದ್ದಲ್ಲಿ ಈ ಕೆಳಕಂಡ ಲಿಂಕ್ ಗೆ ಭೇಟಿಕೊಡಿ, ಹಾಡನ್ನು ಗಾಯಕರ ಕಂಠದಿಂದಲೆ ಕೇಳಿ ಆನಂದಿಸಿ.

http://www.youtube.com/watch?v=P7wCQPzPB1E

 

Image courtesy: Google

Rating
No votes yet

Comments