ಸೋಸಲೆ ಮಠ; ಮುಂದೇನು...?

ಸೋಸಲೆ ಮಠ; ಮುಂದೇನು...?

      ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1 ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯ ಅಲ್ಲುಂಟಾದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೋಚು-ಕೋಚಾದ ಕಟ್ಟಡಕ್ಕೆ ಇದ್ದಿದ್ದರಲ್ಲೊಂದು ’ಷೇಪು’ ನೀಡಿದ ಪುಣ್ಯ ಶ್ರೀವಿದ್ಯಾಪಯೋನಿಧಿತೀರ್ಥ ಸ್ವಾಮಿಗಳದ್ದು. ಶ್ರೀಮಠದ ಇಂತಹ ಹತ್ತು-ಹಲವು ಕಟ್ಟಡಗಳಿಗೆ ಹೀಗೆ ಲಾಭದಾಯಕವಾಗಿ ಆಕೃತಿ-ಆಯಾಮಗಳನ್ನು ನೀಡಿದ ಕೀರ್ತಿ ಅವರದಾದರೂ ಮುಂದೆ ಮಠವೇ ’ಷೇಪೆ’ದ್ದುಹೋಗುತ್ತದೆಂಬ ಮುಂಗಾಣ್ಕೆ ಸ್ವಾಮಿಗಳಿಗಿರದೇ ಹೋದದ್ದು ಶಿಷ್ಯರ ದುರ‍್ದೈವವೆನ್ನೋಣವೇ?!
 ಶ್ರೀ ವ್ಯಾಸರಾಯರ ಕರ್ನಾಟಕ ವಿದ್ಯಾ ಸಿಂಹಾಸನದ ತರುಣ ಸ್ವಾಮೀಜಿಯ ದುಸ್ಸಾಹಸಗಳು ಈಗ ಪದರ ಬಿಚ್ಚಿಕೊಳುತ್ತಿವೆ; ಚಾತಕಪಕ್ಷಿಗಳಂತೆ ಕಾದಿರುವ ಮಾಧ್ಯಮಗಳು ಮೈಕೂ-ಮಸೂರ ಹಿಡಿಯುತ್ತಿವೆ! ತಿರುಮಲ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೊನ್ನೆ ಮೊನ್ನೆ ಆಂಧ್ರದ ಪೋಲಿಸರು, ನಂ.೧ ಗೊವಿಂದಪ್ಪ ರಸ್ತೆ ಅವರಣದಿಂದ ಸ್ವಾಮೀಜಿಯನ್ನು ಕರೆದೊಯ್ದಿದ್ದು ಶಿಷ್ಯರಲ್ಲಿ, ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿತು. ಹಿತೈಷಿಗಳ ನೆರವಿನಿಂದವರು ಮಾರನೆ ಬೆಳಿಗ್ಗೆಯೇ ಸ್ವಾಮಿಗಳು ವಾಪಸಾದರು. ಅದಾದ ಎರಡು ದಿನಕ್ಕೆ ಫಾಲ್ಗುಣ ಶುದ್ಧ ಏಕಾದಶಿ. ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನೇ ಕಾದಿದ್ದರೋ ಎಂಬಂತೆ, ಶ್ರೀಮಠದ ಶಿಷ್ಯರೆಂಬ ಹಲಕೆಲವರು, ಸ್ವಾಮಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಪಟ್ಟುಹಿಡಿದು, ‘ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು ಜೋಕೆ’ ಎಂದು ಎಚ್ಚರಿಕೆಯನ್ನೂ ಇಟ್ಟರು! ಮನೋಹರ ತೀರ್ಥರೇನೂ ಪೀಠ ಬಿಡಲಿಲ್ಲ; ಪಂಡಿತೊತ್ತಮರ ಏಕಾದಶೀ ಉಪವಾಸ ಸಾಂಗವಾಯಿತು!
ಈ ಭಂಡಾಟ-ಮೊಂಡಾಟದಲ್ಲಿ, ವಿದ್ಯಾಮನೋಹರತೀರ್ಥರೆಂಬ ತರುಣ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸುವುದು ಖಚಿತ ಎಂಬ ಖಿಚಿಞeಟಿ ಜಿoಡಿ gಡಿಚಿಟಿಣeಜ ಅಭಿಮತವನ್ನೂ ಕೆಲ ವಿಚಾರಶೀಲರು ಹೊಂದಿರುವಮತಿದೆ. ಆದರದು ಅಷ್ಟು ಸುಲಭಸಾಧ್ಯವೇ?
೪೨೦ರ ಪರಿಚ್ಛೇದದ ಕಾರ‍್ಯಚಟುವಟಿಕೆಗಳಿಗಾಗಿ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಬಹುದು; ಸರಕಾರ ಮುಂದಾಗಿ ಮಠವನ್ನು ತಾತ್ಕಾಲಿಕವಾಗಿ Suಠಿeಡಿseಜe ಮಾಡಿದರೂ ಮಾಡಬಹುದು. ಆದರೆ ನಂತರ ಮುಖ್ಯಮಂತ್ರಿಯಾಗಲೀ, ಮುಜರಾಯಿ ಮಂತ್ರಿಯಾಗಲೀ ಹೊಸ ಸ್ವಾಮೀಜಿಯೊಬ್ಬರಿಗೆ ಆಶ್ರಮ ಕೊಟ್ಟು ನೇಮಿಸಲು ಬರುತ್ತದೆಯೇ; ಅದಕ್ಕೆ ’ಕರಕಮಲ ಸಂಜಾತತ್ವ’ದ ಪಾವಿತ್ರ್ಯ ಪ್ರಾಪ್ತವಾಗುತ್ತದೆಯೇ?!
 ವ್ಯಾಸರಾಯ ಮಠಕ್ಕಾಗಲೀ, ಇಂತಹ ಇನ್ನುಳಿದ ಪ್ರಾಚೀನ ಪೀಠಪರಂಪರೆಗಾಗಲೀ ಲಾಗಾಯ್ತಿನಿಂದ ಬಂದ ಸ್ವತ್ತು-ಸಂಪತ್ತುಗಳಿರುವುದು ಸಹಜ. ಇತಿಹಾಸ ಕಾಲದ ಆಳರಸರು, ಸಾಮಂತರು, ಪಾಳೇಗಾರರು ಅಪಾರ ಪ್ರಮಾಣದ ಸ್ಥಿರಾಸ್ತಿಗಳನ್ನು ಮಠ-ಮಾನ್ಯಗಳಿಗೆ ಶಾಸನಬದ್ಧವಾಗಿ ದಾನ ಮಾಡಿರುತ್ತಾರೆ. ಸಹುಕಾರರೂ, ಶ್ರೀಮಂತರೂ, ಸಾಮಾನ್ಯರೂ ಅಂದಂದಿನ ಪೀಠಾಧಿಪತಿಗಳ ತಪಃಪ್ರಭಾವದಿಂದ ಉಪಕೃತರಾಗಿ ವಡವೆ-ವಸ್ತ್ರ, ಧನ-ಕನಕಗಳ ದೇಣಿಗೆ ನೀಡಿರುವುದೂ ಇರುತ್ತದೆ. ಅದು ಇಂದಿನ ಯುಗದಲ್ಲಿ ಸಹ ಮುಂದುವರೆದುಕೊಂಡ ಬಂದಿರುವ ವಿದ್ಯಮಾನವೇ. ಆದರೆ ಮಠ-ಸಂಸ್ಥಾನಗಳಿರುವುದು ಬರೀ ದುಡ್ಡು ಮಾಡುವುದಕ್ಕೇ ಅಲ್ಲ; ಅವುಗಳ ಮಹತಿ ದುಡ್ಡಿನಿಂದ ಅಳೆಯುವಂಥದೂ ಅಲ್ಲ. ಅನೂಚಾನ ಮಠಗಳು, ವೈಷ್ಣವವಾಗಲೀ, ಶೈವ-ವೀರಶೈವವೇ ಆಗಲಿ, ಅವುಗಳ ಅಸ್ತಿತ್ವ, ವಿಶಿಷ್ಟ ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಪರಿವ್ರಾಜಕ ಪೀಠಧಿಪತಿಗಳು ಂuಣhoಡಿiಣಥಿ ಮತ್ತು ಮೇಲ್ಪಂಕ್ತಿ ಎನ್ನುವ ಮೂಲಭೂತ ನೆಲೆಯನ್ನು ಹೊಂದಿಕೊಂಡಿರುತ್ತದೆ; ಅಸ್ತಿ-ಪಾಸ್ತಿಯೇನಿದ್ದರೂ ಅದಕ್ಕೆ ಪೂರಕವಾಗಬೇಕಾದ್ದು, ಅಷ್ಟೆ.
 ಈಗಿರುವ ಸವಾಲು, ವ್ಯಾಸರಾಜಮಠಕ್ಕಾಗಲೀ, ಅದರ ವಿದ್ಯಾಮನೋಹರತೀರ್ಥರೆಂಬ ಒಬ್ಬ ಸ್ವಾಮೀಜಿಗಾಗಲೀ ಸೀಮಿತವೆಂದು ಭಾವಿಸಬಾರದು. ಇದನ್ನು ಘಟ್ಟದ ಮೇಲಿನ ಎಲ್ಲಾ ಮಾಧ್ವ ಮಠಗಳೂ, ಯತಿಗಳೂ ಗಂಭೀರವಾಗಿ ಸ್ವೀಕರಿಸಬೇಕು. ಹಿರಿಯ ಅನುಭವೀ, ಅನುಭಾವೀ ಯತಿಗಳಾದ ವಿದ್ಯಾಸಾಗರತೀರ್ಥರು, ಶ್ರೀಲಕ್ಷ್ಮೀಂದ್ರತೀರ್ಥರಾದಿಯಾಗಿ ಇನ್ನೂ ಹಲವರು, ಅಲ್ಲದೆ ವ್ಯಸರಾಯ ಮಠಕ್ಕೆ ಸರಿ-ಮಿಗಿಲೆಂಬಂತೆ ಮಹತ್ವ ಹೊಂದಿರುವ ಉತ್ತರಾದೀ ಮಠ, ರಾಯರ ಮಠಗಳ ಪೀಠಾಧಿಪತಿಗಳೂ ನಮ್ಮ ನಡುವೆ ಇದ್ದಾರೆ. ಅವರೆಲ್ಲಾ ಒಗ್ಗೂಡಿ ಯತಿ ಸಂಹಿತೆಯನ್ನು ಪುನಾರಚಿಸಿಕೊಳ್ಳುವುದು ನಿರೀಕ್ಷಣೀಯ; ಈಗಾಗುತ್ತಿರುವ ಉಲ್ಲಂಘನೆ-ಅನಾಚಾರಗಳು ಇಡೀ ಮಾಧ್ವ ಸಮುದಾಯಕ್ಕೆ ಹೇಗೆ ಮಾರಕ ಎಂಬುದನ್ನು ಯತಿಸಮುದಾಯ ಆಲೋಡನೆ ಮಾಡಬೇಕು; ಹಾದಿ ತಪ್ಪುತ್ತಿರುವ ಯುವ ಯತಿಗೆ ಮೂಗುದಾರ ಹಾಕಿ ಪಳಗಿಸಿ ತಮ್ಮೊಂದಿಗೆ ಒಯ್ಯುವುದು ಸಾಧ್ಯವೇ ಎಂಬುದನ್ನು ಆ ಬೆಳಕಿನಲ್ಲಿ ಅವಲೋಕಿಸಬೇಕು; ಇಲ್ಲಾ ಅವರಿಗೆ ಮುಕ್ತಿ ಕೊಟ್ಟು ಇನ್ನೇನಾದರೂ ಪರ‍್ಯಾಯ ವ್ಯವಸ್ಥೆ ಮಾಡಬೇಕೇ ಎನ್ನವುದನ್ನೂ ಆ ಮಠಾಧಿಪತಿ ಸಮೂಹವೇ ನಿರ್ಧರಿಸುವುದು ಒಳ್ಳೆಯದಾಗುತ್ತದೆ!