ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್ ವಾಲಾಬಾಗ್ ಒಂದು ಚಚ್ಚೌಕವಾದ ಪ್ರದೇಶ, ಇದಕ್ಕೆ ಹೋಗಿಬರಲು ಇದ್ದ ದಾರಿಗಳು ವಿರಳ. ಎತ್ತರೆತ್ತರದ ಗೋಡೆಗಳು, ಮಧ್ಯದಲ್ಲಿ ಬಾವಿ, ಮನೆ ಕಟ್ಟಲು ಬಳಸುತ್ತಿದ್ದ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಜಾಗ.

 

ಏಪ್ರಿಲ್ ೧೩, ೧೯೧೯ ಅಂದು ವೈಶಾಖಿಯ ಸಂಭ್ರಮ. ವೈಶಾಖಿಯ ಸಂಭ್ರಮವೆಂದರೆ ಕಣಜ ತುಂಬಿಸುವ, ಸುಗ್ಗಿಯ ಸಂಭ್ರಮ. ಆದರೆ ಪ್ರತಿ ವೈಶಾಖಿಗೂ ೧೯೧೯ರ ವೈಶಾಖಿಗೂ ವ್ಯತ್ಯಾಸವಿತ್ತು. ಏಕೆಂದರೆ ಅದೇ ಸಮಯದಲ್ಲಿ ಗಾಂಧಿಜಿ ಅವರನ್ನು ಬ್ರಿಟಿಶ್ ಸರ್ಕಾರ ಬಂಧಿಸಿತ್ತು. ಅದರ ಪ್ರತೀಕಾರ ತೀರಿಸಿಕೊಳ್ಳಲು ಜನ ಹಾತೊರೆಯುತ್ತಿದ್ದರು. ಎಂದಿನಂತೆ ಹೊರವಲಯದಲ್ಲಿ ಸೇರದ ಜನ ಅಂದು ಜಲಿಯನ್ ವಾಲಾಬಾಗ್ ನಲ್ಲಿ ಸುಮಾರು ೨೦ ಸಾವಿರ ಮಂದಿ ನೆರೆದಿದ್ದರು. ಸುತ್ತಲೂ ಜನ ಮಧ್ಯದಲ್ಲಿ ವೇದಿಕೆಯಿದ್ದು ಅದರ ಮೇಲೆ ಹಂಸರಾಜ್ ಎಂಬುವವರು ಭಾಷಣ ಶುರು ಮಾಡಿದ್ದರು. ಭಾಷಣ ಶುರುವಾಗಿ ಹೆಚ್ಚು ಸಮಯವೇನು ಆಗಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ತನ್ನ ಸೈನ್ಯದೊಂದಿಗೆ ಆಗಮಿಸಿದ ಜನರಲ್ ಡಯರ್ ನೇರವಾಗಿ ಗುಂಡಿನ ಸುರಿಮಳೆಗೈಯ್ಯಲು ಆದೇಶವಿತ್ತ. ಸಂಜೆ ಐದೂವರೆಗೆ ಶುರುವಾದ ಈ ಹತ್ಯಾಕಾಂಡ ಕೆಲವೇ ಕೆಲವು ನಿಮಿಷಗಳಲ್ಲಿ ಸುಮಾರು ಎರಡು ಸಾವಿರ ಮಂದಿಯ ಪ್ರಾಣ ತೆಗೆದು ಹಾಕಿತ್ತು.

 


ಅಲ್ಲಿ ನೆರೆದಿದ್ದ ಜನರಲ್ಲಿ ಗಂಡಸರು, ಹೆಂಗಸರು, ವೃದ್ಧರು, ಪುಟ್ಟ ಪುಟ್ಟ ಮಕ್ಕಳು, ಹಸುಗೂಸುಗಳು ಎಲ್ಲರೂ ಇದ್ದರು. ಗುಂಡಿನ ಸುರಿಮಳೆ ಶುರುವಾಗುತ್ತಲೇ ತಮ್ಮ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ದಿಕ್ಕಾಪಾಲಾಗಿ ಓದಲು ಶುರು ಮಾಡಿದರು. ಕೆಲವರು ಬಾವಿಯಲ್ಲಿ ಹಾರಿದರೆ, ಮತ್ತೂ ಕೆಲವರು ಅಲ್ಲಿದ್ದ ಪೊದೆಗಳಲ್ಲಿ ಅವಿತು ಕುಳಿತರು. ಕೆಲವೇ ಕೆಲವು ನಿಮಿಷಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೧೬೫೦ ಸುತ್ತು ಗುಂಡಿನ ದಾಳಿ ನಡೆಸಿದ್ದ ಡಯರ್ ಅಂದು ಹೆಮ್ಮೆಯಿಂದ ಹೇಳಿಕೊಂಡದ್ದು ಹೀಗೆ " ಒಂದೇ ಒಂದು ಗುಂಡು ಸಹ ವ್ಯರ್ಥವಾಗಲಿಲ್ಲ". ಪಂಜಾಬಿನ ವಿಚಾರಣೆ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ರಾಂಕಿನ್ ಡಯರ್ ಗೆ, ಗಾಯಗೊಂಡವರ ಚಿಕಿತ್ಸೆಗೆ ಏನು ಏರ್ಪಾಟು ಮಾಡಲಾಗಿತ್ತು? ಎಂದು ಪ್ರಶ್ನಿಸಿದಕ್ಕಾಗಿ ಡಯರ್ ನೀಡಿದ ಉತ್ತರ "ಅದು ನನ್ನ ಕೆಲಸವಲ್ಲ, ಆಸ್ಪತ್ರೆಗಳನ್ನೇನು ಮುಚ್ಚಿರಲಿಲ್ಲವಲ್ಲ, ಬೇಕಾಗಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತು ಎಂದು ಹೇಳಿದ್ದ

 


ಅಷ್ಟೇ ಅಲ್ಲದೆ ಹಂಟರ್ ಆಯೋಗದ ಮುಂದೆ ಡಯರ್ ತನ್ನ ಪ್ರತಾಪವನ್ನು ಹೀಗೆ ಕೊಚ್ಚಿಕೊಂಡಿದ್ದಾನೆ. ನಾನು ಅಲ್ಲಿಗೆ ಹೋಗುವ ಮೊದಲೇ ನಿರ್ಧರಿಸಿದ್ದೆ. ಅಲ್ಲಿ ನೆರೆದಿರುವ ಎಲ್ಲರನ್ನೂ ಅವಸಾನಕ್ಕೀಡು ಮಾಡಬೇಕೆಂದು. ಜಲಿಯನ ವಾಲಾಬಾಗ್ ಒಳಗೆ ವಾಹನವನ್ನು ತೆಗೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ ಸಾಕಷ್ಟು ಗುಂಡುಗಳಿರಲಿಲ್ಲ . ಇನ್ನೂ ಹೆಚ್ಚು ಗುಂಡುಗಳಿದ್ದಿದ್ದರೆ ಇನ್ನಷ್ಟು ಮಂದಿಯ ಪ್ರಾಣ ತೆಗೆಯಬಹುದಾಗಿತ್ತು. ಈ ಹತ್ಯಾಕಾಂಡದ ನಂತರ ಇಂಗ್ಲೆಂಡ್ ಗೆ ಮರಳಿದ ಡಯರ್ ಗೆ ಅಲ್ಲಿನ ನಾಗರೀಕರು ಅವನನ್ನು ಸನ್ಮಾನಿಸಲು ಸಭೆಯೊಂದನ್ನು ಏರ್ಪಡಿಸಿದ್ದರು. ಅಷ್ಟೇ ಅಲ್ಲದೆ ಸ್ವಲ್ಪ ಹಣವನ್ನು ಸಂಗ್ರಹಿಸಿ ಅವನಿಗೆ ಕೊಟ್ಟಿದ್ದರು. ಎಂಥಹ ಅಮಾನವೀಯತೆ ಮೆರೆದಿದ್ದರು ಅಲ್ಲಿನ ಜನ.

ಇದಾಗಿ ವಾರದ ನಂತರ ಅಂದರೆ ಏಪ್ರಿಲ್ ೧೯ ರಂದು ಜಲಿಯನ್ ವಾಲಾಬಾಗ್ ಗೆ ಭೇಟಿ ಕೊಟ್ಟು ಅಲ್ಲಿನ ದೃಶ್ಯವನ್ನು ನೋಡಿ ದುಃಖ ತಡೆಯಲಾಗದೆ ಕಣ್ಣೀರಿಟ್ಟು, ಅಲ್ಲಿ ರಕ್ತದಲ್ಲಿ ಕಲೆತು ಹೋಗಿದ್ದ ಮಣ್ಣನ್ನು ಕಣ್ಣಿಗೆ ಒತ್ತಿಕೊಂಡು ಒಂದು ಡಬ್ಬದಲ್ಲಿ ಶೇಕರಿಸಿಕೊಂಡು ಆ ಮಾರಣಹೋಮಕ್ಕೆ ಕಾರಣರಾದ ಬ್ರಿಟಿಷರನ್ನು ಸದೆಬಡಿಯಲು ನಿರ್ಧರಿಸಿದ ಹನ್ನೆರಡು ವರ್ಷದ ಬಾಲಕನೆ ವೀರ ಕ್ರಾಂತಿಕಾರಿ ಭಗತ್ ಸಿಂಗ್.

ಇಂದಿಗೆ ಬ್ರಿಟಿಷರ ದಾಳಿಗೆ ತುತ್ತಾದ ಭಾರತೀಯರ ಮಾರಣಹೋಮಕ್ಕೆ ೯೨ ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಅವರ ಆತ್ಮಗಳಿಗೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ.

 

ಮಾಹಿತಿ : ಸಂಗ್ರಹ 

ಚಿತ್ರ ಕೃಪೆ : ಅಂತರ್ಜಾಲ 

 


 


.


 

Rating
No votes yet

Comments