‘ರಾಜಕೀಯ ಸಿನಿಕತನವೂ’ ಪ್ರಜಾಪ್ರಭುತ್ವವೂ....!
ರಾಜಕೀಯ ನಂಜಿನವರಿಂದ ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಎಲ್. ಕೆ. ಆದ್ವಾನಿ ಎಂಬ ಪ್ರಸಿದ್ಧರು ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರಂತೆ. ಹಾಗಂಥ ಪತ್ರಿಕೆಗಳಲ್ಲಿ ವರದಿಯಗಿದೆ. ಒಂದಾ ಈ “ರಾಜಕೀಯ ನಂಜು” ಎಂದರೇನೆಂದಾಗಲೀ, ಇಲ್ಲಾ “ಪ್ರಜಾಪ್ರಭುತ್ವ” ಎಂದರಾದರೂ ಏನೆಂದಾಗಲೀ ಅವರು ಎಲೆಕ್ಟ್ರಾನಿಕ್ ಓದುಗರಿಗೆ ಎಜುಕೇಷನ್ ನೀಡಿದರೆ ಇನ್ನೂ ಉಪಕಾರವಾಗಬಹುದು!
ನಿಜ ಅರ್ಥದ ಪ್ರಜಾಪ್ರಭುತ್ವವೆನ್ನುವುದು ಒಂದುವೇಳೆ ನಮ್ಮಲ್ಲಿ ಇರುತ್ತಿದ್ದದ್ದೇ ಆಗಿದ್ದರೆ, ಅಣ್ಣಾ ಹಜಾರೆಯವರಂಥವರ ಹಗಲುಗನಸಿನ ಜನಲೋಕಪಾಲರಾಗಲೀ, ನಮ್ಮಲ್ಲಿ ಹಲ್ಲಿಲ್ಲದ ಹಾವಂತೆ ಭುಸುಗುಡುತ್ತಿರುವ ಲೋಕಾಯುಕ್ತ ವ್ಯವಸ್ಥೇಯಾಗಲೀ ಬೇಕಾಗುತ್ತಲೇ ಇರುತ್ತಿರಲಿಲ್ಲ; ಅಂಥದೊಂದು ಪ್ರಜಾಧಿಕಾರದ ಅಸ್ತಿತ್ವವೇ ನಮ್ಮಲ್ಲಿಲ್ಲದಿರುವುದರಿಂದ ಲೋಕಪಾಲ, ಲೋಕಾಯುಕ್ತದಂಥಾ ಎಂಥೆಂಥಾ ಸರ್ಪ-ಕಾಳಿಂಗಗಳೇ ಬಂದರೂ ಈ ಮುಂಗುಸಿಗಳೆದುರು ಅದರಾಟ ನಡೆಯುವುದಿಲ್ಲ!
ಜಾತಿ-ಜಾತಿಯೆಂಬ ಉನ್ಮತ್ತ ರಾಜಕಾರಣ, ಸಾಮಾಜಿಕ ಅರ್ಥ-ಭಾವಗಳಿರದೆ ಗಿಟ್ಟಿಸಿಕೊಳ್ಳುವ ಬ್ಲ್ಯಾಕ್ಮೇಲ್ ಮೀಸಲಾತಿ, ಅಲ್ಪಸಂಖ್ಯಾರನ್ನು ಓಲೈಸುವ ಸುಳ್ಳು ಪ್ರಚಾರದ ಸರಮಾಲಿಕೆ.... ಕ್ಷುದ್ರ ರಾಜಕಾರಣಕ್ಕಿವು ಸಮರ್ಥ ಸ್ಯಾಂಪಲ್ ಆಗದೇ? ಮತಾಂತರ ಮತ್ತದರ ವಿರುದ್ಧ ಉತ್ಕಟ ಹೋರಾಟ; ಆ ಹೆಸರಿನಿಂದ, ಮತ್ತೊಂದು ನೆಪದಿಂದ ಅಗಿಂದಾಗ್ಗೆ ಭುಗಿಲೇಳಿಸುವ ಕೊಮು ಗಲಭೆ; ಅದರಲ್ಲಿ ಬೇಳೆ ಬೇಸಿಕೊಳ್ಳುವ ಹಿತಾಸಕ್ತಿಗಳು.... ಇವೇ ಸಹಜ ರಾಜಕೀಯವಾದಾಗ, ಹಾಗೆಂದು ಒಪ್ಪಿಕೊಳ್ಳದಿರುವುದೇ “ರಾಜಕೀಯ ಸಿನಿಕತನ” ಎನಿಸಿಕೊಂಡೀತೇ?
Rating