ಕಥೆ: ರಾಮಣ್ಣನೂ,ದೊಡ್ಡಮಾವಿನಮರವು

ಕಥೆ: ರಾಮಣ್ಣನೂ,ದೊಡ್ಡಮಾವಿನಮರವು

ರಾಮಣ್ಣ ಹುಟ್ಟುವುದಕ್ಕಿಂತ ಎಷ್ಟೋ ಮೊದಲು ಆ ದೊಡ್ಡಮಾವಿನಮರ ಅಲ್ಲಿತ್ತು.ಆ ಊರಿನಲ್ಲಿ ಬೇರೆ ಮರಗಳಿಲ್ಲ ಎಂದಲ್ಲ.ಬರಗಾಲ,ಬಿರುಗಾಳಿ,ಅತಿವೃಷ್ಟಿ,ಅನಾವೃಷ್ಟಿಗಳಾವುದ್ದಕ್ಕೂ ಜಗ್ಗದೆ ಎದೆ ಉಬ್ಬಿಸಿ ನಿಂತ ಮರಗಳು ಸಹ ಮಾನವನ ದುರಾಸೆಗೆ ಬಲಿಯಾಗಿದ್ದವು.ದೊಡ್ಡಮಾವಿನಮರವೂ ಸಹ ಅದಕ್ಕೆ ಹೊರತಾಗಿರುತ್ತಿರಲಿಲ್ಲ.ರಾಮಣ್ಣನ ತಡೆ ಇಲ್ಲದಿದ್ದರೆ ಅದು ಎಂದೋ ಧರೆಗೆ ಉರುಳುತ್ತಿತ್ತು.
ರಾಮಣ್ಣನಿಗೆ ದೊಡ್ಡಮಾವಿನಮರವೆಂದರೆ ವರ್ಣಿಸಲು ಅಸಾದ್ಯವಾದಂತಹ ಬಂಧವಿತ್ತು.ಬಿಸಿಲಿಗೆ ನೆರಳಾಗಿ,ಹಸಿವೆಗೆ ಹಣ್ಣಾಗಿ,ರಾಮಣ್ಣನ ಸರ್ವಸ್ವವೂ ಆಗಿತ್ತು ದೊಡ್ಡಮಾವಿನಮರ.ಸಂಸಾರದಲ್ಲಿನ ವಿರಸ,ದುಡಿಮೆಯಿಂದಾದ ದಣಿವುಗಳ ಮದ್ಯೆ ಬಂದು ದೊಡ್ಡಮಾವಿನಮರದ ಕೆಳಗೆ ಕುಳಿತರೆ ಏನೋ ನೆಮ್ಮದಿ!.ಜೀವನದ ಜಂಜಾಟಗಳನೆಲ್ಲ ಕೆಲಕಾಲ ಮರೆಯುತ್ತಿದ್ದ.ರಾಮಣ್ಣಹಾಗೆ ಎಷ್ಟು ಹೊತ್ತು ಕುಳಿತ್ತಿರುತ್ತಿದನ್ನೋ.ತಾಯಿಯ ಮಡಿಲಿನ ಮಗುವಿನಂತೆ ಜಗವ ಮರೆತು ವಿಶ್ರಮಿಸುತ್ತಿದ.
ರಾಮಣ್ಣ ದಿನನಿತ್ಯ ತನ್ನ ತೋಟಕ್ಕೂ ಮನೆಗೂ ಓಡಾಡುವ ದಾರಿಯ ಬದಿಯಲ್ಲೇ ದೊಡ್ಡಮಾವಿನಮರವಿದ್ದದ್ದು.ಸಂಜೆ ತೋಟದಿಂದ ಹಿಂದಿರುಗುವಾಗ ದೊಡ್ಡಮಾವಿನಮರದ ಕೆಳಗೆ ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸುತ್ತಿದ್ದ.ರಾಮಣ್ಣ ಮತ್ತು ದೊಡ್ಡ ಮಾವಿನಮರದ ಮೂಕಭಾಷೆ ಅವರಿಗಷ್ಟೇ ತಿಳಿಯುತ್ತಿತು.ರಾಮಣ್ಣನಂತೂ ಆ ಮರದ ಪ್ರತಿ ಎಲೆಯ ಅಲುಗಾಟದಲ್ಲೂ ಏನ್ನೋ ತಿಳಿದುಕೊಂಡವನಂತೇ ಮುಗುಳ್ನಗುತ್ತಿದ್ದ.ಅಂದು ಎಂದಿನಂತೆ ಆ ದಾರಿಯಲ್ಲಿ ಬಂದಾಗ ದೊಡ್ಡ ಮಾವಿನಮರದ ಕೆಳಗೆ ಇಬ್ಬರು ಕೊಡಲಿಗಳನ್ನು ಹಿಡಿದು ನಿಂತಿರುವುದು ಕಾಣಿಸಿತ್ತು.ರಾಮಣ್ಣ ಹೋಗಿ ವಿಚಾರಿಸಲಾಗಿ ರಸ್ತೆ ಅಗಲೀಕರಣದ ಕೆಲಸ ಪ್ರಾರಂಭವಾಗಿದೆಯೆಂದು,ಅದರ ಸಲುವಾಗಿ ಈ ಮರವನ್ನು ಕಡಿಯಬೇಕೆಂದು ತಿಳಿಸಿದರು.ರಾಮಣ್ಣನಿಗೆ ಅವರ ಮಾತುಗಳನ್ನು ಕೇಳಿ ಸಿಡಿಲು ಬಡಿದಂತೆ,ನಿಂತ ನೆಲ ಕುಸಿಯುತಿರುವಂತೆ,ಎದೆಗೆ ಯಾರೋ ಇರಿದಂತೆ,ತಾಯಿಯಮಡಿಲಿನಿಂದ ಮಗುವನ್ನು ಕಸಿದುಕೊಂಡಂತೆ ಎನಿಸಿ,ನೆಲಕ್ಕೆ ಕುಸಿದುಹೋದ.ಆದರೆ ರಾಮಣ್ಣ ಏನ್ನೂ ಮಾಡುವಂತಿರಲಿಲ್ಲ.ಕೊಡಲಿಗಳನ್ನು ಹಿಡಿದುನಿಂತ ಆಸಾಮಿಗಳು ಆ ಊರಿನವರೇ ಆಗಿದ್ದು,ರಾಮಣ್ಣನ ಮತ್ತು ದೊಡ್ಡಮಾವಿನಮರದ ವಿಷಯವೂ ಅವರಿಗೆ ತಿಳಿದಿತ್ತು.ಆದರೆ ಅಸಹಾಯಕರಾಗಿದ್ದರು.ಇದು ಗೊತ್ತಿದ್ದ ರಾಮಣ್ಣ ಅವರಿಗೆ ಏನೂ ಹೇಳಲು ಸಾಧ್ಯವಾಗದೆ ಅಲ್ಲೇ ನಿಂತ.ಸ್ಪಲ್ಪ ಸಮಯದ ಮೇಲೆ ಮೇಲಾದಿಕಾರಿಗಳು ರಸ್ತೆ ಅಗಲೀಕರಣದ ಕೆಲಸವನ್ನು ಪರಿಶೀಲಿಸತ್ತಾ ದೊಡ್ಡಮಾವಿನಮರದ ಬಳಿ ಬಂದರು.ರಾಮಣ್ಣನ್ನು ಕೈಮುಗಿಯುತ್ತ ಪರಿಪರಿಯಾಗಿ ದೊಡ್ಡಮಾವಿನಮರವನ್ನು ಕಡಿಯಬೇಡಿರೆಂದು ಅಂಗಲಾಚಿದ.
ಮೇಲಾಧಿಕಾರಿಯು ಈ ರಸ್ತೆ,ರಾಜ್ಯಹೆದ್ದಾರಿಯಾಗುವುದ್ದೆಂದು ಮಾವಿನಮರವಲ್ಲ,ಗುಡ್ಡವೇ ಅಡ್ಡವಿದ್ದರೂ ನೆಲಸಮಮಾಡಿ ರಸ್ತೆ ಮಾಡಬೇಕಾಗಿದೆ.ಸರ್ಕಾರದಿಂದ ನಿಮಗೆ ಸಹಾಯಧನ ಕೊಡಿಸುತ್ತೇನೆ ಎಂದು ಹೇಳಿ ಬಿರಬಿರನೆ ಕಾರುಹತ್ತಿ ಹೊರಟುಹೋದರು.
ಅಲ್ಲಿದ್ದ ಕೆಲಸಗಾರರು ರಾಮಣ್ಣನನ್ನು ಮರುಕದಿಂದ ನೋಡುತ್ತಿದರು.ರಾಮಣ್ಣನ್ನು ಅಸಹಾಯಕನಾಗಿ ಮರಕ್ಕೆ ಒರಗಿಕುಳಿತು ಏನೋ ಕಳೆದುಕೊಂಡವನಂತೇ ಬಿಟ್ಟಕಣ್ಣು ಬಿಟ್ಟಂತೇ ಒಂದೇಡೆ ದೃಷ್ಟಿ ನೆಟ್ಟು ಯೋಚಿಸತೊಡಗಿದ.ಹಾಗೆ ಅಲ್ಲಿ ಎಷ್ಟುಹೊತ್ತು ಕುಳಿತ್ತಿದನೋ.ಕೆಲಸಗಾರರು ಅಂದಿನ ಕೆಲಸ ಮುಗಿಸಿ ಈ ಮರವನ್ನು ನಾಳೆ ಬಂದು ಕೆಡವಿದಯಾಯ್ತೆಂದು ಮಾತನಾಡಿಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದರು.ಮಾರನೇಯದಿನ ದೊಡ್ಡಮಾವಿನಮರದ ಬಳಿ ಜನಸಂದಣಿ ತುಂಬಿತು.ಅಸಹಾಯಕ ರಾಮಣ್ಣನ ಹೆಣ ಮರದ ಕೆಳಗೆ ಬಿದ್ದಿತ್ತು.ರಾಮಣ್ಣ ಮತ್ತು ದೊಡ್ಡಮಾವಿನಮರದ ಶ್ರೇಷ್ಠ ಸಂಬಂಧ ಆದುನಿಕತೆಯ,ಆಡಂಭರದ ವೇಗದಲ್ಲಿ ರಸ್ತೆಯ ಡಾಂಬರಿನ ಅಂಟಿನೊಂದಿಗೆ ಮುಚ್ಚಿಹೋಯಿತು.