ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ

ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ

 

ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆ

ರೆಕ್ಕೆಯಿದ್ದರೆ ಸಾಕೇ ..? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು , ಮೇಲೆ ಹಾರೋಕೆ..

ಹಕ್ಕಿಗೆ ಇರುವುದು ಬರೀ ಎರಡು ರೆಕ್ಕೆ.. ಸ್ವಚ್ಚಂದಕ್ಕೆ ಅಷ್ಟೇ ಸಾಕು, ಎರಡೇ ರೆಕ್ಕೆಯಲ್ಲಿ ಹಾರುತ್ತೇನೆ ಎಂಬ ಹಕ್ಕಿಯನ್ನು ಬಾನಿಗೆ ಬಿಟ್ಟ ಕಾದಂಬರಿ - 'ಬರೀ ಎರಡು ರೆಕ್ಕೆ'. ಒಂದಿಪ್ಪತ್ತೈದು ಪಾತ್ರಗಳು, ದೈನಂದಿನ ಹಪಿಹಪಿಯನ್ನು ತಮಗೆ ಬಂದಂತೆ ನಿಭಾಯಿಸುತ್ತಲೇ ಸಾಮಾಜಿಕ ಬದಲಾವಣೆಯೊಂದಕ್ಕೆ ಕಾರಣವಾಗುವ ಅತೀ ಸಹಜ ಕಥೆಯಿದು. ಇಲ್ಲಿ ಯಾರಿಗೂ ತುಡಿತವಿಲ್ಲ.. ಹೊಸದೊಂದನ್ನು ಮಾಡಬೇಕೆಂಬ ಆಕಾಂಕ್ಷೆಯಿಲ್ಲ.. ತಾವಾಯಿತು ತಮ್ಮ ಬದುಕಾಯಿತು ಎಂತಿಪ್ಪ ಬದುಕುಗಳು, ತಮ್ಮ ಸ್ವಾರ್ಥಕ್ಕೆ ತಮ್ಮ ಹಿತ ಕಾಯುವುದಕ್ಕೆ ಮಾಡಬೇಕಾದುದನ್ನು ಮಾಡಿಕೊಂಡರೂ, ಅನಾಥ ಕ್ರಾಂತಿಯೊಂದು ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡಿರುತ್ತದೆ.. ಸರಳೀಕೃತ ಸಮಾಜವೂ ಸಹ ಹೇಗೆ ಕಾಲದೊಂದಿಗೆ ಬೆರೆತು, ತನ್ನ ಜನರನ್ನೂ ಮೀರಿ ಬೆಳೆಯುತ್ತದೆ ಎಂಬುದನ್ನು ಬಹು ಸಮರ್ಥವಾಗಿ ನಿಭಾಯಿಸಿದ್ದಾರೆ- ಸುನಂದಾ ಕಡಮೆ.

ಯಾವ ಕಾಲಕ್ಕೂ ಹೊಂದಿಕೊಳ್ಳುವ ಮದುವೆ, ಮಕ್ಕಳು, ಜಾತ್ರೆ, ಓಡಿ ಹೋಗುವವರು, ಮರಳಿ ಬರುವವರು ಇತ್ಯಾದಿ ಪಾತ್ರಗಳ ಪ್ರಪಂಚ ಈ ಕಾದಂಬರಿ. ಗಂಡನ ವೈಕುಂಠ ಸಮಾರಾಧನೆಯ ದಿನವೇ ಮಗಳ ಮದುವೆ ಮಾಡುವ ಬಗ್ಗೆ ಆಲೋಚಿಸುವ ಹೆಣ್ಣೊಬ್ಬಳ ಸ್ತ್ರೀ ಸಹಜ ಜಂಜಾಟದಿಂದ ಕಾದಂಬರಿ ಆರಂಭವಾಗುತ್ತದೆ. ಮೊದಲ ಅಧ್ಯಾಯದಲ್ಲಿ ಮಧ್ಯಮ ವರ್ಗದ ಕುಟುಂಬವೊಂದನ್ನು ಪರಿಚಯಿಸುತ್ತಾ, ಒಂದು ಮದುವೆಗೆ ಮುಹೂರ್ತ ಇಡಲಾಗುತ್ತದೆ. ಹದಿನೆಂಟು ವರ್ಷದ ಹಿಂದೆ ಅಕ್ಕ ಸರೋಜಿನಿಯ ಮಾಡುವೆ ಮಾಡುವ ಬಗ್ಗೆ ಅಮ್ಮನಿಗೆ ವಚನವಿತ್ತ ದಿಗಂಬರ, ಈಗ ತಾನೇ ಮದುವೆಗೆ ಸಿದ್ಧನಾಗುತ್ತಾನೆ. ಸರೋಜಿನಿ ಮದುವೆಯಾಗದೆ ದೂರದ ಊರಿನಲ್ಲಿ ಶಿಕ್ಷಕಿಯಾಗಿಯೇ ಉಳಿದುಬಿದುತ್ತಾಳೆ. ಮದುವೆಯಾಗಿ ಅತ್ತೆ-ಸೊಸೆ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಹೆಣಗಾಡುವ ದಿಗಂಬರ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುವುದನ್ನು ಜಾಸ್ತಿ ಮಾಡುತ್ತಾನೆ. ಆಗಾಗ ಭೇಟಿ ಕೊಡುವ ಅಕ್ಕ ಸರೋಜಿನಿ- ಪ್ರತಿ ಸಲ ಬಂದಾಗಲೂ ಹೊಸದೊಂದು ವಿಷಯ ಹೊತ್ತು ತರುವುದನ್ನು ಒಳ್ಳೆಯ ಬೆಳವಣಿಗೆ ಅನ್ನಬೇಕೋ, ಕೆಟ್ಟದ್ದು ಅನ್ನಬೇಕೋ ಎನ್ನುವುದನ್ನು ತಿಳಿಯದೇ ಬಾಯಲ್ಲಿ ಎಲೆ-ಅಡಿಕೆ ತುಂಬಿಕೊಂಡು ಓಡಾಡುವುದನ್ನು ಕಲಿತು ಅಸಹಾಯಕತೆಯನ್ನು ಮೆರೆಯುತ್ತಾನೆ ..

ಇನ್ನೊಂದೆಡೆಯಲ್ಲಿ ಅವರ ಮನೆಯ ಕೆಲಸದ ಸಣ್ಣಿಯ ಪ್ರಪಂಚ - ಅವಳ ನಾದಿನಿಯ ಪ್ರೇಮ ಪ್ರಸಂಗ, ಗಂಡನ ಆರ್ಭಟ , ಆಚೀಚೆ ಮನೆಯವರ ಪರಾಪರದ ಮಾತುಗಳು ಮುಂತಾದ ವಿವರಗಳಿಂದ ತುಳುಕುತ್ತಿರುತ್ತದೆ. ಜಾತ್ರೆಯ ದಿನದಂದು ಸಣ್ಣಿ ತೋರಿದ ಒಂದು ಸಣ್ಣ ನಿರ್ಲಕ್ಷ , ಅವಳ ನಾದಿನಿಯು ಯಾರೋ ಬ್ರಾಹ್ಮಣರ ಹುಡುಗನ ಜೊತೆ ಓಡಿ ಹೋಗುವುದರೊಂದಿಗೆ ಹೊಸ ರೂಪ ಪಡೆಯುತ್ತದೆ.. ಇನ್ನು ಜಾತಿ ಕಲಹ ಅದೂ ಇದೂ ಅಂತ ಕಾದಂಬರಿ ಮುಂದುವರಿಯುತ್ತದೆ ಎಂದು ಭಾವಿಸಿದವರಿಗೆ ಭಯಂಕರ ನಿರಾಸೆ ಇಟ್ಟಿದ್ದಾರೆ ಲೇಖಕಿ.. ತಂಗಿ ಓಡಿ ಹೋದ ದು:ಖದಲ್ಲಿ ಕುಡಿಯುವುದನ್ನು ಶುರುಮಾಡುವ ಸಣ್ಣಿಯ ಪತಿ ದೇವು, ದಿನಾ ರಾತ್ರಿ ಬಂದು ಹೆಂಡತಿಗೆ ಹೊಡೆಯುವುದನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾನೆ..

ಶ್ರೀಮಂತರ ಮಗಳೊಬ್ಬಳು ಮಧ್ಯಮ ವರ್ಗಕ್ಕೆ ಸೊಸೆಯಾಗಿ ಬಂದಾಗ ಏನು ಅನುಭವಿಸುತ್ತಾಳೋ ಅದನ್ನೆಲ್ಲಾ ದಿಗಂಬರನ ಹೆಂಡತಿ ಅರುಂಧತಿ ಅನುಭವಿಸುತ್ತಾಳೆ. ದಿಗಂಬರನ ನಿರ್ಲಕ್ಷ, ಅತ್ತೆಯ ಬೆಚ್ಚು-ಚುಚ್ಚು ನುಡಿಗಳು.. ಇನ್ನೂ ಮಗುವಾಗಿಲ್ಲವೆಂಬ ಮೂದಲಿಕೆಗಳು.. ಅಪ್ಪನ ಮುಂದೆ ಖುಷಿಯ ನಾಟಕಗಳು.. ಇತ್ಯಾದಿಗಳೆಲ್ಲಾ ಅತೀ ಸಹಜವೆಂಬಂತೆ ಮೂಡಿಬಂದಿದೆ, ಎಲ್ಲಾ ನಡೆಯುತ್ತಿದ್ದರೂ ಓದುಗನಿಗೆ ಆಗಬಾರದ್ದೇನೂ ಆಗಿಲ್ಲ ಎಂಬ ಸಮಾಧಾನ ಮೂಡುತ್ತದೆ.. ಅತ್ತೆ-ಸೊಸೆ ಎಂದ ಮೇಲೆ ಇಷ್ಟೂ ಇರದಿದ್ದರೆ ಹೇಗೆ ಎಂಬ ಭಾವ ಮೂಡುವ ಜಾಗದಲ್ಲೇ ಲೇಖಕಿ ಗೆದ್ದಿದ್ದು ಸ್ಪಷ್ಟವಾಗಿರುತ್ತದೆ.. ಕೋಣೆಯಲ್ಲಿ ಹಾವು ಕಂಡ ಆಘಾತದಲ್ಲಿ ಮೂಕಿಯಾಗುವ ಅರುಂಧತಿ, ಕೊನೆ ಕೊನೆಗೆ ಏನೂ ಆಗದ ಸ್ತ್ರೀ ಪಾತ್ರವಿದು ಎಂದೆನಿಸಿದ್ದೂ ಉಂಟು.. ಆಟಕ್ಕಿಲ್ಲ, ಊಟಕ್ಕುಂಟು ಎಂಬಂತಹ ಪಾತ್ರವಾಗಿ ಪರಿವರ್ತನೆಯಾಗಿ ಏನನ್ನೋ ಹೇಳಲು ಹೊರಟ- ಹೇಳಲಾಗದ ಮೂಕ ಪಾತ್ರ ಹೇಳಲು ಇನ್ನೂ ಇದೆ ಎಂಬುದರ ಪ್ರಸ್ತುತಿಯಿರಬಹುದು.

ಮಧ್ಯಮ ಆರ್ಥಿಕ ವರ್ಗದ ಕುಟುಂಬದಲ್ಲಿನ ಸ್ತ್ರೀ ವ್ಯಾಕುಲಗಳು ಅತ್ತೆ-ಸೊಸೆ ಜಗಳಗಳಲ್ಲಿ, ಸರೋಜಿನಿಯ ಆವೇಶಗಳಲ್ಲಿ, ದಿಗಂಬರನ ಅಸಹಾಯಕತೆಗಳಲ್ಲಿ ವ್ಯಕ್ತವಾದರೆ, ಬಡತನದ ಸ್ತ್ರೀ ಮುಖವು ಸಣ್ಣಿಯ ನರಳಾಟಗಳಲ್ಲಿ , ದೇವು ಬೀಸುವ ಹೊಡೆತಗಳಲ್ಲಿ, ಓಡಿಹೋದ ಮಾಲಾ ಮತ್ತು ನೆರೆಯ ಸೋಮಿ ಜಟ್ಟಮ್ಮರ ಮಾತುಗಳಲ್ಲಿ ಚಿತ್ರಿತವಾಗಿದೆ. ಯಾವಾಗ ಈ ಎರಡೂ ಪ್ರವಾಹಗಳು ಸೇರುತ್ತವೆಯೋ ಆಗ ಕಾದಂಬರಿಯ ಎಲ್ಲಾ ಪಾತ್ರಗಳಿಗೆ ಎರಡೆರಡು ರೆಕ್ಕೆ ಮೂಡುತ್ತದೆ.. ಸರೋಜಿನಿಯ ಮಾತು ಕೇಳಿ , ಸಣ್ಣಿ ತನ್ನ ಹೊಡೆತ ತಪ್ಪಿಸಿಕೊಳ್ಳಲು - ತನ್ನ ಗಂಡನ ಕುಡಿತ ತಪ್ಪಿಸಲೇ ಬೇಕೆಂಬ ನಿರ್ಧಾರ ಮಾಡಿ ಸಾರಾಯಿ ಅಂಗಡಿಗೆ ಬೆಂಕಿ ಹಚ್ಚುತ್ತಾಳೆ.. ಅದನ್ನು ತಿಳಿದ ದೇವು ಅವಳಿಗೆ ಹೊಡೆಯ ಬಂದಾಗ ಬೆಟ್ಟ ಹತ್ತಿ ಓಡಉವ ಸನ್ನಿವೇಶದಲ್ಲಿ ರೆಕ್ಕೆ ಮೂಡಿದಂತಿತ್ತು ಎಂದು ಕಾದಂಬರಿಯ ಅರ್ಥವನ್ನು ಸೂಚ್ಯವಾಗಿ ಬಿಂಬಿಸಿದ್ದಾರೆ.. ಸರೋಜಿನಿಯೂ ಸಹ ಬೆಟ್ಟ ಅಲೆಯುವಾಗೆಲ್ಲಾ ತನಗೆ ಎರಡು ರೆಕ್ಕೆ ಬಂದಂತೆ ಭ್ರಮಿಸುತ್ತಾಳೆ.. ಎರಡು ರೆಕ್ಕೆಯೆಂಬುದನ್ನು ಸ್ವತಂತ್ರದ ಸ್ವಚ್ಚಂದದ ಭಾವವಾಗಿ ಬಳಸಿ ಸುನಂದಾ ಸಾಮಾಜಿಕ ಬದಲಾವಣೆಯ ಹಾದಿಯನ್ನು ಸ್ವಚ್ಛಗೊಳಿಸುತ್ತಾರೆ.

ಸರೋಜಿನಿ ಮದುವೆಯಾಗದೇ ಮಗುವೊಂದನ್ನು ದತ್ತು ತೆಗೆದುಕೊಳ್ಳುವುದು, ಊರವರು ಅದನ್ನು ಆಡಿಕೊಳ್ಳುವುದು , ಅದನ್ನು ಕೇಳಿ ತಾಯಿಗೆ ಹುಚ್ಚು ಹಿಡಿಯುವುದು, ಸಣ್ಣಿ ಕುಡುಕರಿಗೆ ಕಾಡುವುದು, ಸಾರಾಯಿ ಅಂಗಡಿ ಇಟ್ಟಿದ್ದ ಪಚ್ಚನ ಹೆಂಡತಿಯೇ ಅವನನ್ನು ಪೋಲಿಸರಿಗೆ ಹಿಡಿದು ಕೊಡುವುದು, ಹೆಂಡ ಕುಡಿದು ಇನ್ಯಾರೋ ಸಾಯುವುದು, ಹೀಗೆ ಹಲವು ಸರಣಿ ಘಟನೆಗಳು ತಂತಾನೇ ನಡೆದು ಹೊಸ ಬದಲಾವಣೆಗೆ ಕಾರಣವಾಗುತ್ತದೆ. ನಿಧಾನವಾಗಿ ಈ ವಿಷಯಗಳೆಲ್ಲಾ ಸಾಮಾನ್ಯದ ಜೊತೆ ಬೆರೆತು ಸರ್ವಲೀನವಾಗುತ್ತವೆ. ಅಲ್ಲಿಗೆ ಕಾದಂಬರಿಗೆ ಬಿಡುಗಡೆ ಸಿಗುತ್ತದೆ, ಬರೀ ಎರಡು ರೆಕ್ಕೆ ಇರುವ ಹಕ್ಕಿ ಆಗಸದಲ್ಲಿ ಹಂಗಿಲ್ಲದೆ ಹಾರುವುದನ್ನು ಕಂಡ ಮನುಷ್ಯ, ಸ್ವಂತಿಕೆಯಿಂದ ತನ್ನ ಮನಸ್ಸಿಗೆ ಎರಡು ರೆಕ್ಕೆ ಮೂಡಿಸಿ ಹೊಸ ದಿಗಂತದಲ್ಲಿ ಸ್ವಚ್ಛಂದಿಂದ ಹಾರಲಿ ಎಂಬುದನ್ನು ಕಥಾಸಂದೇಶ ಎಂದರೆ ತಪ್ಪಿಲ್ಲ.

ಶೈಲಿಯಲ್ಲಿ ಸಹಜತೆ, ವಿವರಗಳಲ್ಲಿ ಸೂಕ್ಷ್ಮತೆ ಸುನಂದಾ ಕಥೆಗಳ ಆಕರ್ಷಣೆ. ಮೊದಲ ಕಾದಂಬರಿಯಾದರೂ ಪೂರ್ಣತೆ ಸಾಧಿಸಿದ್ದಾರೆ.. ದಿಗಂಬರನ ಮದುವೆ ವಿವರಗಳಲ್ಲಿ, ಉತ್ತರ ಕನ್ನಡದ ಸಮುದಾಯವೊಂದರ 'ಲಗ್ನ ಚಿತ್ರಣ' ಅಧ್ಬುತವಾಗಿ ಮೂಡಿಬಂದಿದೆ. ಅಂಕೋಲಾದ ಬಂಡೀಹಬ್ಬದ ಪೂರ್ಣ ವಿವರಗಳು ಇಲ್ಲದಿದ್ದರೂ ಕಥೆಗೆ ಪೂರಕವಾಗಿ ಸಿದ್ಧಪಡಿಸಿದ್ದಾರೆ. ಯಶವಂತ ಚಿತ್ತಾಲರಿಗೆ ಹಾಗೂ ಜೆ.ಎಚ್.ನಾಯಕರಿಗೆ ಅರ್ಪಿಸಿದ ಈ ಕಾದಂಬರಿಯ ಮುನ್ನುಡಿಯಲ್ಲಿ ತಾನು ಎಂಟು ತಿಂಗಳು ಈ ಕಾದಂಬರಿಗೆ ತೆಗೆದುಕೊಂಡೆ ಎನ್ನುತ್ತಾರೆ ಸುನಂದಾ.. ಕಾದಂಬರಿಯ ನನಗಿಷ್ಟವಾದ ಪರಿಚ್ಛೇದ ಕೆಳಗಿದೆ:

" ಚೂರೇ ಹೊಯ್ದಾಡುವ ದೀಪದ ಬೆಳಕಿನ ಸನ್ನಿಧಿಯಲ್ಲಿ ಕೂತ ಗಿರಿಯಮ್ಮ ದೇವಿಯ ಕಪ್ಪು ಕಲ್ಲಿನ ವಿಗ್ರಹಕ್ಕೆ ಜೀವವಿದೆ ಅನಿಸಲು ಶುರುವಾಯಿತು ಸಣ್ಣಿಗೆ. ಹಾಗನಿಸಿದ್ದೇ ತಾನಿಲ್ಲಿ ಒಂಟಿಯಾಗಿಲ್ಲ ಎಂಬ ಧೈರ್ಯ ಅವಳನ್ನು ಮುತ್ತಿಕೊಂಡಿತು. ಬಂಭಿಹಬ್ಬಗಳಲ್ಲಿ ಹೀಗೆ ದೇವಿಗೆ ಕಾಯಿ ಒಡೆಯಲು ಅಕ್ಕಪಕ್ಕದ ಸೋಮಿ ಜಟ್ಟಮ್ಮರ ಜೊತೆ ಬಂದಾಗಲೂ ಈ ಗುಡಿ ಇಷ್ಟು ದೊಡ್ಡದಾಗಿ ಕಂಡಿರಲಿಲ್ಲ. ಅಲ್ಲಲ್ಲಿ ಬಾಡಿದ ಹೂವಿನ ರಶಿ, ಮುದ್ದೆ ಮಾಡೊಗೆದ ಕಾಗದ, ಅರ್ಧ ಉರಿದುಳಿದ ಅಗರಬತ್ತಿ, ಮೇಲೆ ಕಟ್ಟಿದ ಬಳ್ಳೀಗೆ ಒಣಹಾಕಿರುವ ಸಣ್ಣ ವಸ್ತ್ರ, ಎಣ್ಣೆಯ ಜಿಗುಟಿನಿಂದ ಕಪ್ಪಾಗಿರುವ ದೀಪವಿಟ್ಟ ಜಾಗೆ, ದೇವಿಯ ಎದುರೇ ಎತ್ತರಕ್ಕೆ ನಿಂತಿರುವ ಗರುಡಗಂಬ ಏನೆಲ್ಲವೂ ಅವಳಿಗೆ ತನ್ನ ಮನೆಯ ಒಂದು ಭಾಗವಾಗಿಯೇ ಕಂಡವು. ಕಾಣೆಯಾದ ಮಾಲಿ ಆ ಕ್ಷಣ ಮರೆತೇ ಹೋಗಿದ್ದಳು."

ಯಾರೋ ಹೆಂಗಸೊಬ್ಬಳು ಬಣ್ಣ ಬಳಿದುಕೊಂಡು ಆಗಸಕ್ಕೆ ಗೋಲಗಳನ್ನು ಎಸೆಯುತ್ತಿರುವ ಅಥವಾ ಆಕಾಶದಿಂದ ಬಂದ ವರ್ತುಲಗಳನ್ನು ಸ್ವೀಕರಿಸುತ್ತಿರುವ ಮುಖಪುಟವೊಂದನ್ನು ವಿನಯ ಕುಮಾರ ಸಾಯ ಚಿತ್ರಿಸಿದ್ದಾರೆ. ಅದಕ್ಕೆ ಸರಿಯಾಗಿ ಕೈಯಲ್ಲಿ ಗೀಚಿದಂತ 'ಬರೀ ಎರಡು ರೆಕ್ಕೆ' ಎಂಬ ತಲೆಬರಹವಿದೆ.. ಕಾದಂಬರಿಯು ತನ್ನ ತೀವ್ರತೆಯ ಘಟ್ಟ ತಲುಪಿದಾಗ ಬರುವ ಎರಡು ಸಾಲುಗಳೂ ಮುಂಪುಟದಲ್ಲಿವೆ. ನೊರೈವತ್ತು ಬೆಲೆಯನ್ನು ನಿಗದಿ ಪಡಿಸಿದ ವಸುಧೇಂದ್ರರ ಛಂದ ಪುಸ್ತಕದ ಚಂದದ ಪುಸ್ತಕ ಬರೀ ಎರಡು ರೆಕ್ಕೆ... ಉತ್ತರ ಕನ್ನಡದ ಲೇಖಕರೆಲ್ಲಾ ಒಂದೇ ತರಹದ ಕಥಾಲೋಕವನ್ನು ಸೄಷ್ಟಿಸುತ್ತಾರಲ್ಲಾ ಯಾಕೆ? ಎಂಬ ಪ್ರಶ್ನೆಗೆ ಉತ್ತರ-ಕನ್ನಡ ಅಂತ ವಿವೇಕ ಶಾನುಭಾಗರು ಹೇಳಿದ್ದರು ಎಂದು ನನಗೆ ಇನ್ಯಾರೋ ಒಮ್ಮೆ ಹೇಳಿದ್ದರು. ಅಂತಹ ಉತ್ತರ ಕನ್ನಡದ ಧ್ವನಿ ಹೊರಡಿಸುವ ಕಾದಂಬರಿಯೊಂದನ್ನು ಯಾವುದರಲ್ಲೂ ಕಡಿಮೆಯಿಲ್ಲದಂತೆ ಬರೆದಿದ್ದಾರೆ ಸುನಂದಾ ಪ್ರಕಾಶ ಕಡಮೆ. ಓದಿ ಮುಗಿಸಿದ ತಕ್ಷಣ ಇದೊಂದು ಸ್ತ್ರೀ-ಕ್ರಾಂತಿಯೊಂದರ ಸಹಜ ಕಥೆ ಎಂದೆನಿಸಿದರೂ ಅದಲ್ಲ ಎನ್ನುವುದು ಮಾರನೇ ಕ್ಷಣಕ್ಕೆ ಹೊಳೆದಿರುತ್ತದೆ. ಇಲ್ಲಿ ಅವ್ಯಕ್ತ ಪಾತ್ರಗಳು ಸೃಷ್ಟಿಸುವ ಭಾವಲೋಕ ಅವರವರ ಜೀವನದಲ್ಲಿ ಪ್ರತ್ಯೇಕವಾಗಿದ್ದರೂ, ಓದುಗನಿಗೆ ಒಂದೇ ಆಗಿರುವುದು ಈ ಕೃತಿಯ ಪ್ಲಸ್ ಪಾಯಿಂಟ್..

bhatkartikeya.weebly.com

 

 

Rating
No votes yet

Comments