ಅಮರ ಮೈತ್ರಿ

ಅಮರ ಮೈತ್ರಿ

ಕವನ

 ****** ಅಮರ ಮೈತ್ರಿ *******(ಸೂಪರ್ ಮೂನ್ ಅಂತರಿಕ್ಷ ಘಟನೆಯಿಂದ ಪ್ರೇರಿತವಾದ ಕವನ)

 

 

 

 

 

 

 

 

 

 

 

 

 

 

 

ಅಚಿಂತ್ಯಾನಂತ ಬ್ರಹ್ಮಾಂಡ ಪರಿಧಿಯೊಳು

ಅಗಣಿತ ತಾರಾಪುಂಜರಾಶಿಯೊಳು,

ಅಸೀಮ ರುಂದ್ರ ಕರ್ಗತ್ತಲೆಯೊಳು,

ಚಿರ ಗಾಂಭೀರ್ಯ ಘನ ಶಿಸ್ತಿನಲಿ,

ಕ್ಷುದ್ರಸಮ ಗಾತ್ರದಲಿ,

ಚಲಿಸುತಿಹುದು ಆಕಾಶಗಂಗೆ ಪುಂಜವು

ಕೋಟಿ ಸಹ ನಕ್ಷತ್ರಪುಂಜರೊಡೆ ಅನುದಿನವು.

ಆಕಾಶಗಂಗೆಯ ಅನುಪಮ ಅಗಾಧತೆಗೆ ಚುಕ್ಕಿಯಂದದಿ,

"ಸೂರ್ಯ" ನಕ್ಷತ್ರವದು ಬಿನ್ನನೆ ದೀಪಮಣಿಯಂದದಿ

ಬೆಳಗುತಿದೆ ಉರಿಸಿ ತನ್ನ ಪ್ರಜ್ವಲ ವದನ.

ಭುವಿಯೆಂಬ ಗ್ರಹ ತದೇಕ ಚಿತ್ತದಿ

ಭ್ರಮಿಸುತೆದೆ ನಿಷ್ಠೆಯಲಿ ಸೂರ್ಯನ.

ಅತೀಂದ್ರಿಯ ಅಸಂಕಲ್ಪಿತ ವಿಶ್ವಶಕ್ತಿಯ ವಶದಲಿ

ತಿರುಗುತಿಹುದು ಧರೆ ವೈಭವದಿ ತನ್ನಕ್ಷದಲಿ.

ಸುತ್ತುತಿಹನು ಆಪ್ತಮಿತ್ರನಂದದಿ ಚಂದಿರನು

ಧರೆಯನು ನಿರಂತರ ದಿವ್ಯ ಏಕಾಗ್ರತೆಯಲಿ.

ಬಹುಕೋಟಿ ವತ್ಸರಗಳು ಅಗಮ್ಯವಾಗುರುಳಲು,

ಭೂಚಂದ್ರರು ಕೆಂಪು ಗೋಳವಾಗಿ ಭ್ರಮಿಸುತಿರಲು,

ಗಗನವಿದ್ದರೂ ಅಮಲಂಭೋದಗಳಿಲ್ಲ,

ಜೀವ ಜಂತುಗಳ ಕುರುಹುಗಳಿಲ್ಲ,

ಶಿಖರಾದ್ರಿಗಳಿದ್ದರೂ ಹಸುರಿಲ, ಹಿಮವಿಲ್ಲ,

ಕಣಿವೆ ಕಂದರಗಳಿದ್ದರೂ ಹರಿವ ನೀರಿಲ್ಲ.

ಲಾವಾರಸದ ಪ್ರಳಯ ರುದ್ರ ಹೊನಲರಿಯುತಿವೆ,

ಪರ್ವತತುಂಗಗಳು ಜ್ವಾಲಾಗ್ನಿಯನುಗುಳುತಿವೆ.

ಅಂಕೆಯಿಲ್ಲದ ಉಲ್ಕೆಗಳು ಬಂದಪ್ಪಳಿಸಿದೆ

ಧರೆಗೆ, ಮೃಗಾಂಕನಿಗೆ.

ಪ್ರಳಯಾಗ್ನಿಧೂಮವೆದ್ದಿದೆ ನೆಲದಿಂದ

ನಭಕೆ, ಬಾನೆತ್ತರಕೆ.

ಜಗವಿರಲು ಮೌನದಲಿ, ನಿಮ್ನ ನೀರವತೆಯಲಿ,

ಯುಗರಿಂಗಣವ ನೋಡಿದೆ ಕಾಲ ಏಕಾಂತ ಧ್ಯಾನದಲಿ.

  ತಂಪಾಗಿದೆ ಭುವಿಯಿಲ್ಲಿ, ತಂಪಾಗಿದೆ ಹಿಮಕರನಲ್ಲಿ,

ಕಾರ್ಮೋಡ ಕವಿದಿದೆ, ಮಳೆಹನಿಗಳು ಜನಿಸಿದೆ,

ಕೊಳಗಳು ತುಂಬಿವೆ, ನದಿಸಾಗರಗಳುದ್ಬವಿಸಿದೆ.

ಏಕಕಣ ಜಂತುಗಳಿಂದ, ತರು,ಮಿಗ,ಖಗಗಳ ವರೆಗು

ಜೀವ ಸರಪಣಿಯು ಬೆಳೆದು, ಇಳೆಗೆ ಜೀವಕಳೆ ಬಂದಿದೆ.

ಬ್ರಹ್ಮಾಂಡವ ಸೃಜಿಸಿದಾ ದಿವ್ಯ ಶಕ್ತಿಯು,

ಸೃಷ್ಟಿಕ್ರಿಯಾ ಲೀಲೆಯಲಿ ಮಗ್ನೋನ್ಮಾದವಾದಂತೆ

ಸಕಲ ಜೀವಕೋಟಿಗಳೊಂದಾದರೊಂದಂತೆ

ಸೃಜಿಸಿ ನಾಕವನೆ ಧರೆಗಿಳಿಸಿದೆ.

ರವಿಯ ಉದಯಾಸ್ತಗಳನು ಸಂಭ್ರಮಿಸಿ,

ಚಂದಿರನ ತಿಳಿಬೆಳಕನು ಸಂಮೋಹಿಸಿ

ಭೂಚರಗಳು ನಲಿದಿವೆ, ಜಲಚರಗಳು ಕುಣಿದಿವೆ,

ಖೇಚರಗಳು ಗಾನಸಿಂಧುವನೆ ಹರಿಸಿವೆ.

ಇಂತ ಸೌಂದ್ರ್ಯಾನುಭೂತಿಗಳಲಿ ಯುಗಯುಗಗಳೆ ಕಳೆದಿವೆ.

   ಎಂತ ರೂಪ, ದಿವ್ಯ ದೀಪ ಶಶಿ ಸ್ವರೂಪ ಧರಣಿಗೆ.

ದಿನದಲಿ ಮರೆಯಾಗುವನು ಇರುಳಲಿ ಉನ್ಮೀಲನ,

ಮಸಿ ಮೆತ್ತಿದ ಭುವಿ ವದನಕೆ ಶ್ವೇತಕಿರಣ ಸಿಂಚನ,

ಅಂತರಿಕ್ಷ ದ್ವಿಕಾಯಗಳಲಿ ಚಿರಬಾಂಧವ್ಯ ಬಂಧನ.

ಪರ್ವಕಾಲ ಪರಿರಂಭಿಸಿದೆ ಪೃಥ್ವಿಯ ಜಗವನು.

ಮಂಗನಿಂದ ಮಾನವನುಟ್ಟಿ ಕೋಲು,ಕಲ್ಲು, ಬೆಂಕಿ

ಹಿಡಿದು ನಾಗರಿಕತೆ ತುಳಿದಿಹನು.

ಚಂದಿರನ ಚೆಂಬೆಳಕಲಿ ವನ ಮಧ್ಯೆ ಬೇಟೆಯಾಡಿ,

ಬೆಳೆದಿಂಗಳೂಟ ಮಾಡಿ  ತೃಪ್ತಭಾವ ಬೀರಿಹನು.

ಹೀಗೆ ಕಾಲಗಳುರುಳಿ ಯುಗಯುಗಗಳು ಕಳೆದಿಹವು.

    ಕೋಟಿ ಚಂದ್ರೋದಯಾಸ್ತಗಳು ಬಾನಿನಲ್ಲಿ ಜರುಗಿದರೂ,

ಎಂದೂ ಇರದ ಭಯ ಮೌಡ್ಯಗಳು ಇಂದೇಕೆ ಕಾಡುತಿಹುದು?

ಜನರ ಜ್ನ್ಯಾನಗರ್ಭದಲ್ಲಿ ಅಜ್ನ್ಯಾನ ಮೊಳೆಯುತಿಹುದು?

ಚಿರಸುಂದರ ಸಲಿಲದೀಪ್ತ ಚಂದಿರನೇಕೆ ದೂರುತಿಹರು?

ಬೆಳೆದಿಂಗಳ ಸೌಭಾಗ್ಯವಿತ್ತ ಶಶಿಯನಳಿವುದೌಚಿತ್ಯವೆ?

ಆದಿಯಿಂದ ಕೇಡನೊಲ್ಲ ಸ್ನೇಹಪೂರ್ಣ ಶ್ವೇತಫುಲ್ಲ

ಇಂದು ಕೇಡು ಬಗೆಯುವನೆ?

ಶತ ಶತಮಾನ ಕಾಲದಿಂದ ಧರೆರೂಪಗೆಡಿಸಿ ನಿಂತ

ಮಾನವೇನು ಉತ್ತಮನೆ?

ತೇಜೋರೂಪಿ ತಣ್ಗದಿರನ ಚಿರ ಸೌಂದರ್ಯ

ಎಂದೆದೂ ಮೆರೆಯುವುದು.

ಮನಃಕುರೂಪಿ ಮಾನವನ ಕಡುಕಾಟದಿ ಧರೆಯ

ಸೊಬಗು ಕರಗುತಲೇ ಇರುವುದು.

ಏನ ಮಾಡಿದರೇನು ಎಂತು ಮಾಡಿದರೇನು ಇವರೀರ್ವರ

ಅಮರ ಮೈತ್ರಿ ಮುಗಿಯದು.

ಆಂತರಿಕ್ಷದ ಬಿತ್ತರ ಮಡಿಲಲಿ ಆಪ್ತಮಿತ್ರರ

ಅನಂತ ಚಲನೆ ನಿಲ್ಲದು.

 

- ಚಂದ್ರಹಾಸ ( ೧೭ ೦೪ ೨೦೧೧ )