ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 2

ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 2

 ಕಳೆದ ಸಂಚಿಕೆಯಿಂದ . . .

ಒಮ್ಮೆ ಕುವೆಂಪು, ಅವರ ತಂಗಿ ರಾಜಮ್ಮನವರ ಆಹ್ವಾನದ ಮೇರೆಗೆ, ಮೂಡಿಗೆರೆ ಸಮೀಪದ ’ಕೊಳ್ಳಿಬೈಲು’ ಎಂಬ ಅವರ ತೋಟಕ್ಕೆ ಹೋಗುತ್ತಾರೆ. ತಾರಿಣಿಯವರು ’ನನಗೆ ಗೊತ್ತಿರುವಂತೆ ಮೊಟ್ಟಮೊದಲ ಬಾರಿಗೆ ತಂಗಿ ಮನೆಗೆ ಮಕ್ಕಳನ್ನೆಲ್ಲ ಕರೆದುಕೊಂಡು ಕಾರಿನಲ್ಲಿ ಅಪ್ಪ ಹೊರಟರು’ ಎಂದು ಆ ಘಟನೆಯನ್ನು ದಾಖಲಿಸಿದ್ದಾರೆ. ತಂಗಿಯ ಮನೆಯಲ್ಲಿ ಕುವೆಂಪು ಅನುಭವಿಸಿದ ಸಂತೋಷವನ್ನು ಕವಿತೆಯನ್ನಾಗಿಸಿದ್ದಾರೆ. ೧೨-೨-೧೯೫೮ರಂದು ಕವಿತೆ ದಾಖಲಾಗಿದೆ. (ಕುಸಕಾ/೨ ಪುಟ ೨೮೬)

ತಂಗಿಮನೆ ! ಏನು ತಂಪು !

ಹೆಸರು ಏನೋ: ಕೊಳ್ಳಿಬೈಲು!

ಆದರೂ

ಮನಕೆ ಮೈಗೆ ಜೀವಕೆಲ್ಲ,

ನಡುಹಗಲಲಿ ಸುಡುಬಿಸಿಲಲಿ

ಹೊಂಗೆಯ ನೆರಳೆಂತೋ ಅಂತೆ,

ತಂಗಿಯ ಮನೆ - ತಂಪು!

ಅಣ್ಣನೊಬ್ಬ ತಂಗಿಯ ಮನೆಗೆ ಹೋದಾಗ, ಸುಖ, ಸಂತೋಷ, ನೆಮ್ಮದಿಯಿಂದ ಇರುವ ತಂಗಿಯ ಮನೆಯನ್ನು ಕಂಡು ಎಷ್ಟೊಂದು ಸಂತೋಷಪಡುತ್ತಾನೆ! ತಂಗಿಯ ಮನೆ - ತಂಪು ಎನ್ನುವುದರಲ್ಲೇ, ತಂಗಿ ನೆಮ್ಮದಿಯಾಗಿರುವುದು, ಅದನ್ನು ನೋಡಿ ತಾನು ಸಂತೋಷ ಪಟ್ಟಿರುವುದು ಎಲ್ಲಾ ವೇದ್ಯವಾಗುತ್ತದೆ. ಮಟಮಟ ಮಧ್ಯಾಹ್ನ, ಸುಡುಬಿಸಿಲಲ್ಲಿ ನಡೆದು ಸುಸ್ತಾಗಿ ಬಂದವನಿಗೆ, ಹೊಂಗೆಯ ತಂಪು ಎಂತಹ ಚೈತನ್ಯವನ್ನು ನೀಡುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತಾಗುವಂತದ್ದು. ತಂಗಿಯ ಒಲುಮೆಯ ತಂಪು ಅಂತಹದ್ದು. ಆದರೆ ತಂಗಿಯ ಮನೆಯಿದ್ದ ಜಾಗದ ಹೆಸರು ಮಾತ್ರ ಕೊಳ್ಳಿಬೈಲು! ಬಯಲು ಎಂಬುದೇ ಬಿಸಿ ಮತ್ತು ಸೆಖೆಯ ಸಂವೇದನೆಯನ್ನು ಮನಸ್ಸಿನಲ್ಲಿ ಸ್ಫುರಿಸುವಾಗ, ಕೊಳ್ಳಿಬೈಲು ಇನ್ನು ಹೇಗಿರಬೇಡ? ಆ ಕೊಳ್ಳಿಬೈಲಿನೊಳಗಿರುವ ತಂಗಿಯ ಮನೆ - ತಂಪು! ಎರಡನೆಯ ಸಾಲಿನಲ್ಲಿ ಕೊಳ್ಳಿಬೈಲು ಎನ್ನುವಲ್ಲಿ ಕಾಣಿಸಿಕೊಳ್ಳುವ ಸಣ್ಣ ಕಸಿವಿಸಿ ಕವಿತೆ ಮುಗಿದಾಗ ಮರತೇ ಹೋಗಿರುತ್ತದೆ. ಅಣ್ಣತಂಗಿಯರ ಬಾಂಧವ್ಯಕ್ಕೆ ಮೇರೆಯುಂಟೆ!?

ಸರ್ವೋದಯ ಸೂರ್ಯ ಶ್ರೀ ವಿನೋಬಾಜಿಯವರನ್ನು ನೋಡಿದರೆ ಯಾರಿಗೆ ತಾನೆ ಗೌರವ ಮೂಡುವುದಿಲ್ಲ. ಕುವೆಂಪು ಅವರು ವಿನೋಬಾಜಿಯವರನ್ನು ಗೌರವಿಸುತ್ತಿದ್ದರು. ಅವರನ್ನು ’ಸರ್ವೋದಯ ರವಿ’, ’ಸರ್ವೋದಯ ವಿಭೂತಿ’ ಎಂದೂ, ಅವರ ಪಾದಯಾತ್ರೆ ನಡೆಸಿದ ಮಾರ್ಗವನ್ನು ’ಅಮೃತರೇಖೆ’ ಎಂದು ಕುವೆಂಪು ಕರೆದಿದ್ದಾರೆ. ಭೂದಾನ ಚಳುವಳಿಯ ಅಂಗವಾಗಿ ಶ್ರೀ ವಿನೋಬಾಜಿಯವರು ಕೈಗೊಂಡಿದ್ದ ಪಾದಯಾತ್ರೆ ಐತಿಹಾಸಿಕ ಮಹತ್ವವುಳ್ಳದ್ದು. ಅವರ ಪಾದಯಾತ್ರೆ ಪಿರಿಯಾಪಟ್ಟಣದಿಂದ ಮೈಸೂರು ಮಾರ್ಗವಾಗಿ ಶ್ರೀರಂಗಪಟ್ಟಣದ ಮುಖಾಂತರ ಹೋಗುವ ಕಾರ್ಯಕ್ರಮವಿತ್ತು. ಪಿರಿಯಾಪಟ್ಟಣದ ಬಳಿ ಆನೆಚಾಕೂರಿನಲ್ಲಿ ಒಂದು ದಿವಸ (೧೩-೯-೧೯೫೭) ವಿನೋಬಾಜಿ ತಂಗಿದ್ದರು. ಆಗ ಅವರನ್ನು ಬೇಟಿಯಾಗಲು ಕುವೆಂಪು ಪೂರ್ವಾನುಮತಿಯೊಂದಿಗೆ ಹೋಗಿರುತ್ತಾರೆ. ಮನೆಯವರು ಸ್ನೇಹಿತರು ಜೊತೆಗೂಡಿರುತ್ತಾರೆ. ಆನೆಚಾಕೂರಿನಲ್ಲಿ ನಡೆದ ಭೇಟಿಯ ಸಮಯದಲ್ಲಿ ಕುವೆಂಪು ಅವರೊಂದಿಗೆ ನಡೆದ ಮಾತುಕತೆಯಿಂದ ವಿನೋಬಾಜಿ ಉಲ್ಲಸಿತರಾಗಿದ್ದರು. ಉದಯರವಿಗೆ ಕುವೆಂಪು ಆಹ್ವಾನವಿತ್ತಾಗ ವಿನೋಬಾಜಿ ಒಪ್ಪಿಕೊಂಡು, ೨೫-೯-೧೯೫೭ರಂದು ಉದಯರವಿಗೆ ಬಂದು ಹೋಗುತ್ತಾರೆ. ಆ ಎರಡು ದಿನಗಳ ಬಗ್ಗೆ ಕುವೆಂಪು ಅವರೇ ದಾಖಲಿಸಿದ್ದಾರೆ. ೧೩ನೇ ತಾರೀಖಿನಂದು ವಿನೋಬಾಜಿಯವರೊಂದಿಗಿನ ಪ್ರಥಮ ಭೇಟಿಯಲ್ಲಿ ವಿನೋಬಾಜಿಯವರಿಗೆ ನೀಡಿದ ’ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಪ್ರತಿಯಲ್ಲಿ ’ಅಗ್ನಿಶೀತ ಚರಣಕೆ’ ಎಂಬ ಕವಿತೆಯನ್ನು ಬರೆದಿದ್ದರಂತೆ. ಕವಿತೆಗೆ ಅಡಿ ಟಿಪ್ಪಣಿ ನೀಡಿ ಕುವೆಂಪು ಅವರೇ ಈ ವಿಷಯವನ್ನು ದಾಖಲಿಸಿದ್ದಾರೆ. (ಕುಸಕಾ/೨ ಪುಟ ೪೦೬)

ಮನುಜ ರೂಪವ ಧರಿಸಿ ಧರೆಗಿಳಿದು ಬಂದಿರುವ

ದೇವಸೂರ‍್ಯಕರುಣ;

ಕವಿದಿರುವ ಕತ್ತಲೆಯೊಳೊಂದೆ ಸಂಚರಿಸುತಿದೆ

ಅಮೃತ ಚಂದ್ರಕಿರಣ:

ಪಾದಯಾತ್ರೆಯೊಳಿರುವ ಶ್ರೀ ವಿನೋಬನ ಅಮರ

ಅಗ್ನಿಶೀತಚರಣ! -

ಇಂದು ವಾಮನನಂತೆ ಬಂದೀ ತ್ರಿವಿಕ್ರಮಗೆ

ಕವಿಯ ನಮನ ಅನೃಣ!

ಮನುಷ್ಯರೂಪ ಧರಿಸಿ ಬಂದಿರುವ ಸೂರ‍್ಯನ ಕರುಣೆಯೇ ವಿನೋಬಾಜಿಯಾಗಿ ಕವಿಗೆ ಕಂಡಿದ್ದಾರೆ. ಜಗತ್ತಿನೆಲ್ಲಡೆ ಕತ್ತಲೆ ಕವಿದಿರುವಾಗ, ವಿನೋಬಾಜಿಯವರ ಪಾದಯಾತ್ರೆ ಅಮೃತಚಂದ್ರಕಿರಣದಂತೆ ಕಂಡಿದೆ. ಅಮರ ಅಗ್ನಿಶೀತಚರಣ ಎಂಬ ಮಾತು ಅಪಾರ ಧ್ವನಿಸಂಪತ್ತನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ವಿನೋಬಾಜಿಯವರ ಉದ್ದೇಶ ಶಾಶ್ವತ ಎಂಬುದನ್ನು ಅಮರ ಎಂಬುದು ಸೂಚಿಸುತ್ತಿದ್ದರೆ, ಅಗ್ನಿ-ಶೀತ ಎಂಬ ಎರಡು ವಿರುದ್ಧಾರ್ಥಕವಾದ ಪದಗಳು, ಆ ವಾಮನ ಮೂರ್ತಿಯ ಕೃಶವಾದ ಪಾದಗಳನ್ನು, ಅದೇ ಪಾದಗಳಿಂದ ನಡೆಯುತ್ತಿರುವ ಪಾದಯಾತ್ರೆಯ ಪರಿಣಾಮವನ್ನು ಸೂಚಿಸುತ್ತಿವೆ. ಹಾಗೆ ವಾಮನನಂತೆ ಬಂದಿರುವ ತ್ರಿವಿಕ್ರಮನಿಗೆ ಕವಿ ನಮಸ್ಕರಿಸುತ್ತಾರೆ. (ಈ ಸಂದರ್ಭದಲ್ಲಿ ರಾಮಾಯಣದರ್ಶನಂ ಕಾವ್ಯದ ಕೆಲವು ಭಾಗಗಳನ್ನು ಕನ್ನಡದಲ್ಲಿಯೇ ಓದಿಸಿ ಕೇಳುತ್ತಾರೆ. ಜೊತೆಗೆ ತಾವೂ ಕನ್ನಡದಲ್ಲಿ ಕೆಲವು ಸಾಲುಗಳನ್ನು ಓದುತ್ತಾರೆ. ಸ್ವತಃ ಕುವೆಂಪು ’ಇದಕ್ಕಿಂತ ನಾನೇನು ಓದಬಲ್ಲೆ?’ ಎಂದು ಉದ್ಘರಿಸುತ್ತಾರೆ. ಅದನ್ನು ಕೇಳಿ ವಿನೋಬಾಜಿ ಚೆನ್ನಾಗಿ ನಕ್ಕರಂತೆ)

೨೫.೯.೧೯೫೭ ಬುಧವಾರ ಅವರ ಪಾದಯಾತ್ರೆ ಮೈಸೂರು ತಲಪುತ್ತದೆ. ಅವರನ್ನು ಸ್ವಾಗತಿಸಲು, ಗೋಕುಲರಸ್ತೆಯಲ್ಲಿ ಕುವೆಂಪು ಮತ್ತು ಸ್ನೇಹಿತರೆಲ್ಲ ಕಾದು ನಿಂತಿರುತ್ತಾರೆ. ವಿನೋಬಾಜಿ ಬಂದವರೆ, ’ನೀವೆಲ್ಲಾ ನೆಟ್ಟಗೆ ಹೋಗಿ ನಾನು ಪುಟ್ಟಪ್ಪನವರ ಮನೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಕುವೆಂಪು ಅವರ ಕೈ ಹಿಡಿದು ಉದಯರವಿಗೆ ಬರುತ್ತಾರೆ. ೧೫-೨೦ ನಿಮಿಷಗಳು ಅಲ್ಲಿದ್ದು ಹೊರಡುತ್ತಾರೆ.

೨೯ನೆಯ ತಾರೀಖು ಅರಸು ಗರ್ಲ್ಸ್ ಸ್ಕೂಲಿನಲ್ಲಿ ಮತ್ತೆ ಬೇಟಿಯಾಗಿ ಅವರನ್ನು ಮೈಸೂರಿನಿಂದ ಬೀಳ್ಕೊಡುತ್ತಾರೆ. ಆ ಭೇಟಿಯಲ್ಲಿ ’ಅಗ್ನಿಹಂಸ’, ’ಸ್ವಾಮಿವಿವೇಕಾನಂದ’, ’ಶ್ರೀರಾಮಕೃಷ್ಣ ಪರಮಹಂಸ’ ಎಂಬ ಮೂರು ಪುಸ್ತಕಗಳನ್ನು ಕುವೆಂಪು ನೀಡುತ್ತಾರೆ. ’ಅಗ್ನಿಹಂಸ’ ಪುಸ್ತಕದಲ್ಲಿ ೨೫ರಂದು ವಿನೋಬಾಜಿ ಉದಯರವಿಗೆ ಬಂದ ದಿನ ಬರೆದಿದ್ದ ಕವಿತೆಯನ್ನು ಬರೆದು ಕೊಟ್ಟಿರುತ್ತಾರೆ. ’ಉದಯರವಿ’ಯಲ್ಲಿ ಸರ್ವೋದಯ ರವಿ! ಎಂಬ ಶೀರ್ಷಿಕೆಯ ಕವಿತೆ (ಕುಸಕಾ/೨ ಪುಟ ೪೦೭) ಅದು ಹೀಗಿದೆ.

ಹೇ ಜಗದ್ ದೀನಬಂಧು,

ಮನೆಯೆ ಕ್ಷೇತ್ರವಾಯಿತಿಂದು

’ಉದಯರವಿ’ಗೆ ನೀನು ಬಂದು:

ಕೆರೆಯೆ ಆಯ್ತು ಮಹಾಸಿಂಧು,

ಪೂಜ್ಯ ಓ ತಪೋಧನ!

ಪಾದಯಾತ್ರೆಯಮೃತರೇಖೆ

ಮನೆಯ ಮೇಲೆ ಹಾಯ್ದುದಕ್ಕೆ

ನಿನಗನಂತ ವಂದನಾ,

ಮುಹುರನಂತ ವಂದನಾ!

ವಿನೋಬಾಜಿಯವರ ಪಾದಯಾತ್ರೆ ಅಮೃತಕಿರಣ! ಅದು ಉದಯರವಿಯ ಮೇಲೆ ಹಾಯ್ದು ಹೋಗಿದ್ದಕ್ಕೆ ಕವಿ ಸರ್ವೋದಯ ರವಿಗೆ ವಂದನೆಯನ್ನು ಸಲ್ಲಿಸುತ್ತಿದ್ದಾರೆ.