ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!

ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!

ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ '
ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಏಕೆಂದರೆ ಅವನಿಗೆ ಮನೆಯ ಸುತ್ತಲಿನ, ಉದ್ದವಾಗಿ ಚಾಚಿ ನಿಂತ ಮರದ ಬೇಲಿಗೆ ಪೈಂಟು ಬಳಿಯುವ ಕೆಲಸವಿದೆ. ಅವನು ಉದ್ದುದ್ದಕ್ಕೆ ಪೈಂಟು ಹೊಡೆಯುತ್ತಿದ್ದಂತೆ ಅವನ ಓರಗೆಯ ದಾರಿಹೋಕ ಹುಡುಗರು ಬಂದು ಅವನ ಕೆಲಸದ ಬಗ್ಗೆ ಮರುಗುತ್ತಾರೆ. ಟಾಮ್ ಗೆ ಒಳಗೊಳಗೇ ಅಸಮಾಧಾನ. ಅವನ ಕೆಲಸದಲ್ಲಿ ಸ್ವಲ್ಪ ಕೈಜೋಡಿಸಿ ಎಂದರೆ ಆ ಹುಡುಗರು ಮಾಡಲೊಲ್ಲರು!. ಆಗ ಟಾಮ್ ಒಂದು ಹೊಸ ಉಪಾಯ ಹುಡುಕುತ್ತಾನೆ. ದಾರಿ ಹೋಕ ಹುಡುಗನೊಬ್ಬನಿಗೆ ತನ್ನ ಕೆಲಸದ ಬಗ್ಗೆ ಗಿಲೀಟು ಮಾತುಗಳಿಂದ ವರ್ಣಿಸುತ್ತಾನೆ. ತಾನು ಮಾಡುತ್ತಿರುವ ಈ ಕೆಲಸವೇ ತನಗೆ ಅಲಂಕಾರ, ಈ ಪೈಂಟು ಬಳಿಯುವ ಕೆಲಸ ತನ್ನಂಥ ದೈವಾಂಶ ಸಂಭೂತನಿಂದಷ್ಟೇ ಆಗಬೇಕಷ್ಟೆ ಎನ್ನುತ್ತಾನೆ. ಟಾಮ್ ನ ಖೆಡ್ಡಾಕ್ಕೆ ಆ ಹುಡುಗ ಬೀಳುತ್ತಾನೆ. ಮೊದಲಿಗೆ ಟಾಮ್ ನನ್ನು ತಮಾಷೆ ಮಾಡಿದವ ಈಗ 'ಹೇ ನನಗೂ ಒಮ್ಮೆ ಬ್ರಶ್ಶು ಕೊಡೋ' ಎನ್ನತೊಡಗುತ್ತಾನೆ. 'ಇಲ್ಲಪ್ಪ, ಇದನ್ನು ಯಾರ್ಯಾರೋ ಮಾಡುವ ಹಾಗಿಲ್ಲ, ಸಾವಿರಕ್ಕೊಬ್ಬರು ಮಾಡಬಹುದಷ್ಟೇ' ಎಂದು ಟಾಮ್ ಸ್ವಲ್ಪ ಮಸಾಲೆ ಸೇರಿಸುತ್ತಾನೆ, ಆಮೇಲೆ, 'ಇರಲಿ ಬಿಡು, ಸ್ವಲ್ಪ ಬಳಿದುಕೋ' ಎಂದು ಬ್ರಶ್ಶು ಅವನಿಗೆ ಕೊಡುತ್ತಾನೆ. ಒಬ್ಬೊಬ್ಬರಾಗಿ ದಾರಿಹೋಕ ಹುಡುಗರೆಲ್ಲರೂ ಟಾಮ್ ನ ಬಲೆಗೆ ಬೀಳುತ್ತಾರೆ. ಟಾಮ್ ನ ರಂಗುರಂಗಿನ ಮಾತುಗಳಿಗೆ ಬಲಿ ಬಿದ್ದ ಹುಡುಗರು ಅವನಿಗೆ ಭಕ್ಷೀಸಾಗಿ ಆಟದ ಸಾಮಾನುಗಳನ್ನು ಬೇರೆ ಕೊಡುತ್ತಾರೆ!! ಟಾಮ್ ಬುದ್ಧಿವಂತಿಕೆಯಿಂದ ಕೆಲಸ ಮಾಡಿಸಿಕೊಂಡು ಅದಕ್ಕೆ ತಾನೇ ದಕ್ಷಿಣೆ ಬೇರೆ ಪಡೆದುಕೊಳ್ಳುತ್ತಾನೆ. ಇದು ಮಾರ್ಕ್ ಟ್ವೈನ್ ಅವರ 'ಟಾಮ್ ಸಾಯರ್ ಮತ್ತು ಬೇಲಿ' ಕಥೆಯ ಸಾರಾಂಶ.


ಉದ್ದಿಮೆಗಳಿಗೆ (Product & services Industries) ಅನಿವಾರ್ಯವಾಗಿ ಬೇಕಾದ 'ಮಾನವ ಶಕ್ತಿ'ಯನ್ನು ಇಂದು ಹೊಸ ಯುಗದ ಟಾಮ್ ಗಳು 'ಉದ್ಯೋಗ ಸೃಷ್ಟಿ' ಎಂದು ಕರೆಯುತ್ತಾರೆ!. ದೊಡ್ಡ ವೇದಿಕೆಗಳ ಮೇಲೆ ನಿಂತು, ರಾಜಕಾರಣಿಗಳೊಂದಿಗೆ ಕೈಗೂಡಿಸಿ ತಮ್ಮನ್ನು ತಾವು 'ನಿರುದ್ಯೋಗ' ಹೋಗಲಾಡಿಸುವ ಹರಿಕಾರರಂತೆ ಗುರುತಿಸಿಕೊಳ್ಳುವ ಇವರಿಗೆ, ನಿಜವಾಗಿ ನೋಡಿದರೆ ಮಾನವ ಶ್ರಮ ಅನಿವಾರ್ಯ ಕರ್ಮವೇ ಹೊರತು ಅವರು ಸಮಾಜಕ್ಕೆ ಮಾಡುವ ಔದಾರ್ಯವಲ್ಲ (necessarry evil). ಹೊರದೇಶದ ಎಲ್ಲ ಉದ್ದಿಮೆಗಳು ಇಂದು ಮೂರನೆಯ ಜಗತ್ತಿನ ದೇಶಗಳಿಗೆ ರವಾನಿಸಲ್ಪಡುತ್ತಿವೆ. ರಾಶಿಗಟ್ಟಲೆ ಕಚ್ಚಾ ವಸ್ತುಗಳನ್ನು ಬೇಡುವ, ಮಾನವ ಶಕ್ತಿಯನ್ನು ಬಯಸುವ, ಉತ್ಪಾದನೆಯ ಉಪ-ಉತ್ಪನ್ನವಾಗಿ ಪರಿಸರಕ್ಕೆ ಧೂಳು, ಹೊಗೆ, ಕಸ ಮತ್ತು ವಿಷಗಳನ್ನು ಉಗುಳುವ ಸಾವಿರಗಟ್ಟಲೆ ಉದ್ಯಮಗಳು ಇಂದು ಭಾರತ, ಚೀನಾ, ಬಾಂಗ್ಲದಂತಹ ಮೂರನೆಯ ಜಗತ್ತಿನ ರಾಷ್ಟ್ರಗಳಲ್ಲಿ ಸ್ಥಾಪನೆಯಾಗುತ್ತಿವೆ. ಇಲ್ಲಿ ತಯಾರಾದ ಉತ್ಪನ್ನಗಳು ಇಡಿಯ ಪ್ರಪಂಚಕ್ಕೆ ರಫ್ತಾಗುತ್ತವೆ. ಲಂಡನ್ ನ ಬೀದಿಗಳಲ್ಲಿ ಮಾರಲ್ಪಡುವ 'I Love London' ಎಂದು ಬರೆದಿರುವ ಕಪ್ಪು ಸಾಸರುಗಳ ಅಡಿಯಲ್ಲಿ 'Made in china' ಎಂದು ಬರೆದಿರುವುದು ವಿಪರ್ಯಾಸವಲ್ಲದೆ ಮತ್ತೇನು? ತಯಾರಾಗುವ ದೇಶದ ಪರಿಸರ, ಅಲ್ಲಿಯ ಜನರ ಆರೋಗ್ಯ, ಅಲ್ಲಿಯ ಸಂಸ್ಕೃತಿ, ಜನಜೀವನದ ಮೇಲಾಗುವ ಪರಿಣಾಮಗಳೊಂದಕ್ಕೂ   ಖರ್ಚಿನ ಲೆಕ್ಕ ಹಿಡಿಯದೆ ಬರಿಯ ತಯಾರಿಕೆಯ ಖರ್ಚಿನ ಆಧಾರದಲ್ಲಿ ಕಡಿಮೆ ಬೆಲೆಗೆ ಮಾರಲ್ಪಡುವ ಈ ಸಾಮಾನುಗಳ ನಿಜವಾದ ಮೌಲ್ಯ ತೆರುತ್ತಿರುವುದು ಇವುಗಳು ತಯಾರಾಗುವ ಭಾರತ ಮತ್ತು ನೆರೆಯ ದೇಶಗಳು. ಘನ ಉತ್ಪನ್ನಗಳದೊಂದು ಕಥೆಯಾದರೆ 'ಸಾಫ್ಟ್ವೇರ್' ನಂತಹ ಡಿಜಿಟಲ್ ಉತ್ಪನ್ನಗಳದ್ದು ಇನ್ನೊಂದು ಕಥೆ. ಸಂಪೂರ್ಣ ಹೊರಗುತ್ತಿಗೆಯ ಮೇಲೆ ನಡೆಯುವ ಈ ವಹಿವಾಟಿನಲ್ಲಿ ಉತ್ಪನ್ನಗಳು ಹೆಚ್ಚುಕಮ್ಮಿ ಸಂಪೂರ್ಣವಾಗಿ ಹೊರದೇಶಗಳಿಗೆ ರವಾನಿಸಲ್ಪಡುತ್ತವೆ, ಕೆಲಸ ಮಾತ್ರ ನಮ್ಮದು! (ಅಂದ ಹಾಗೆ ನಾನೂ ಒಬ್ಬ ಸಾಫ್ಟ್ವೇರಿಗ). ಅಂದರೆ ನಮಗೆ 'ಉದ್ಯೋಗ ಸೃಷ್ಟಿ' ಯೊಂದೇ ಲಾಭ ಎಂದ ಹಾಗಾಯಿತು. ಮಾನವ ಶ್ರಮವನ್ನು 'ಮಾರುವ' ಈ ಸಂಸ್ಕೃತಿಗೆ ಕೆಲವೊಮ್ಮೆ 'ಬಾಡಿ ಶಾಪಿಂಗ್' ಎಂದು ಕರೆಯುತ್ತಾರೆ. ಖರ್ಚು ಕಡಿತಗೊಳಿಸ ಬೇಕಾದ ಕಂಪನಿಗಳು ಭಾರತದ ಸೇವಾ ಗುತ್ತಿಗೆದಾರನೊಬ್ಬನನ್ನು ಆರಿಸಿ ತಮ್ಮ ಕೆಲಸವನ್ನೆಲ್ಲಇಲ್ಲಿಗೆ ರವಾನಿಸಿಬಿಡುತ್ತವೆ. ನಮಗೆ ಕೈತುಂಬಾ ಕೆಲಸ, ಸಂಬಳ. ನಾಯಿಕೊಡೆಗಳಂತೆ ಸಣ್ಣ ಸಣ್ಣ ಊರುಗಳಲ್ಲಿ ತಲೆಯೆತ್ತುತ್ತಿರುವ ಕಂಪನಿಗಳಿಗೆ ನೀರು, ವಿದ್ಯುತ್, ಬಹುಮಹಡಿ ಕಟ್ಟಡ ಸಾಮಾಗ್ರಿಗಳು, ಕಂಪ್ಯೂಟರುಗಳು ಎಲ್ಲಿಂದ ಬರುತ್ತವೆ?. ಈ ಪ್ರಕ್ರಿಯೆಯಲ್ಲಿ ನಾವು ಸೃಷ್ಟಿ ಮಾಡುವ ಹೊಸ ನಗರಗಳಿಗೆ, ನಗರ ತ್ಯಾಜ್ಯಗಳಿಗೆ ಯಾರು ಹೊಣೆ? ನಮ್ಮದೇ ರಕ್ತಮಾಂಸಗಳನ್ನು ದಹಿಸಿ ಪರವೂರನ್ನು ಉದ್ಧಾರ ಮಾಡುವ ಅಗತ್ಯ ನಮಗೇನಿದೆ? ನಮ್ಮೂರಿನ, ನಮ್ಮ ದೇಶದ ಕೆಲಸಗಳನ್ನು ಯಾರು ಮಾಡೋಣ? ನಮ್ಮ ಊಟಕ್ಕೆ ಬೆಳೆ ಯಾರು ಬೆಳೆಯೋಣ? ಮನೆ ಯಾರು ಕಟ್ಟೋಣ?
ಈಗ ನಿಮಗೆ ಮೇಲಿನ
ಕಥೆಗೂ ನಮ್ಮ ಜಾಗತೀಕೃತ ಭಾರತದ ಪರಿಸ್ಥಿತಿಗೂ ಹೋಲಿಕೆ ಕಾಣಿಸುತ್ತಿದೆಯೇ? ಒಂದೇ ವ್ಯತ್ಯಾಸವೆಂದರೆ ಟಾಮ್ ಯಾರಿಗೂ ದುಡ್ಡು ಕೊಟ್ಟಿರಲಿಲ್ಲ ಆದರೆ ನಮಗೆ ಕೈತುಂಬಾ ಹಣ ಸಿಗುತ್ತಿದೆ. ನಾವು ಕಳೆದುಕೊಳ್ಳುತ್ತಿರುವ ಸಂಪತ್ತಿಗೂ, ನಾವು ಪಡೆಯುತ್ತಿರುವ ಹಣಕ್ಕೂ ತಾಳ ಮೇಳ ಇದೆಯೇ?

ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ನಾರಾಯಣ ಮೂರ್ತಿ ಅವರು http://avadhimag.com ಗೆ ಕೊಟ್ಟ ಸಂದರ್ಶನದಲ್ಲಿ (ಆಕರ :
http://avadhimag.com/?p=30237) ಹೇಳಿರುವ ಮಾತನ್ನು ಸೂಕ್ಷ್ಮವಾಗಿ ಗಮನಿಸಿ. "ಯಾವ ಉದ್ಯಮವೇ ಆಗಲಿ ಅದರ ಮುಖ್ಯ ಉದ್ದೇಶ ಆದಷ್ಟು ಒಳ್ಳೆ ಸಂಬಳ ಕೊಡುವ ಹೆಚ್ಚಿನ ಉದ್ಯೋಗಗಳ ಸೃಷ್ಟಿ". ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿರುವ ಈ ಮಾತನ್ನು ಯೋಚನಾ ಶಕ್ತಿ ಇರುವ ಯಾರಾದರೂ ನಂಬಲು ಸಾಧ್ಯವೇ? ಕೃಷಿಯಂತಹ ಸಣ್ಣ ಮಟ್ಟಿನ ಉದ್ಯಮದಿಂದ ಮೊದಲ್ಗೊಂಡು ಕೈಗಾರಿಕೆಗಳ ವರೆಗೆ ಯಾವುದೇ ಉದ್ಯಮವಾದರೂ 'ಕಡಿಮೆ ಕೆಲಸಗಾರರನ್ನು ಬಳಸಿ, ಅಗತ್ಯವಿದ್ದಷ್ಟೇ ಸಂಬಳ ನೀಡಿ ಸಾಧ್ಯವಾದಷ್ಟು ಅಧಿಕ ಲಾಭ ಗಳಿಸಲು' ಪ್ರಯತ್ನಿಸುತ್ತವೆ ಮತ್ತು ಅದು ಸಹಜ ಕೂಡ. ಆದರೆ ನಮ್ಮ ಉದ್ಯಮಿಗಳು ಮತ್ತು ರಾಜಕಾರಣಿಗಳು ಕಥೆಯ (ಖಳ)ನಾಯಕ ಟಾಮ್ ನಂತೆ ಬಣ್ಣದ ಮಾತುಗಳನ್ನು ಹೇಳುತ್ತಾರೆ ಮತ್ತು ಅದನ್ನು ನಾವು ನಂಬಿ ಅವರಿಗಾಗಿ ದುಡಿದು ನಮ್ಮ ಅಮೂಲ್ಯ ಸಂಪತ್ತುಗಳನ್ನು ಅವರಿಗೇ ನೀಡಿ ಕೃತಾರ್ಥರಾಗುತ್ತಿದ್ದೇವೆ. ನಾನು ಕೆಲಸ ಮಾಡುತ್ತಿರುವ ಬಹುದೊಡ್ಡ ಕಂಪನಿಯ ಅತಿ ದೊಡ್ಡ ಅಧಿಕಾರಿಯೊಬ್ಬರು ಕಂಪನಿಯೊಳಗಿನ ಸಭೆಯೊಂದರಲ್ಲಿ 'ಕಡಿಮೆ ಉದ್ಯೋಗಿಗಳಿಂದ ಹೆಚ್ಚು ಲಾಭ ಗಳಿಸುವತ್ತ ನಾವು ಹೊರಟಿದ್ದೇವೆ' ಎಂದು ಸತ್ಯವನ್ನೇ ಹೇಳಿಕೊಂಡರು. ಇದು ಜನರಿಗೆ 'ಉದ್ಯೋಗ ಸೃಷ್ಟಿ'ಯ ಭಿಕ್ಷೆಗಾಗಿ ಸರಕಾರದಿಂದ ವಿದ್ಯುತ್, ನೀರು ಮತ್ತು ನೂರಾರು ಎಕರೆ ಜಮೀನುಗಳನ್ನು ಕಡಿಮೆ ಬೆಲೆಯಲ್ಲಿ ಪಡೆದ ಕಂಪನಿಗಳು ಒಳಗಿಂದೊಳಗೆ ಹೇಳುವ ಮಾತು!!.


ಭಾರತದೆಲ್ಲೆಡೆ ಇಂದು 584 SEZ ಗಳು ಅನುಮತಿಯ ಹಾದಿಯಲ್ಲಿವೆ, ಅವುಗಳಲ್ಲಿ 154 ರಷ್ಟು ಆಗಲೇ ಸಂಪೂರ್ಣ ತಾತ್ವಿಕ ಒಪ್ಪಿಗೆ ಪಡೆದಿವೆ (ಆಕರ : http://www.sezindia.nic.in/about-asi.asp). ಜಮೀನುದಾರಿ
ಪದ್ಧತಿ ಕೊನೆಗೊಂಡು ಹೊಲದೊಡೆಯರಾಗಿದ್ದ ಕೃಷಿಕರು ಇಂದು ಹೊಸದೊಂದು ಜಮೀನುಬಾಕ ಪದ್ಧತಿಗಾಗಿ ತಮ್ಮ ಭೂಮಿಯನ್ನು  ಕಳೆದುಕೊಳ್ಳುತ್ತಿದ್ದಾರೆ. 'ನನಗೆ ಕೃಷಿಯೊಂದು ಬಿಟ್ಟರೆ ಬೇರೇನೂ ಗೊತ್ತಿಲ್ಲ, ನೀವು ಪರಿಹಾರವಾಗಿ ಕೊಡುವ ನೋಟಿನ ಕಂತೆಗಳು ನನಗೆ ಬೇಕಿಲ್ಲ' ಎಂದು ದಯನೀಯವಾಗಿ ಗೋಗರೆವ ಗ್ರೆಗರಿ ಪತ್ರಾವೋರಂಥವರ ಕೂಗು ಅರಣ್ಯ(?) ರೋದನವಾಗಿದೆ. ಭೂನಾಶಕ ಯಂತ್ರಗಳು ಅವರ ಮನೆ ಮಠಗಳನ್ನು ಬಲವಂತವಾಗಿ ನೆಲಸಮ ಮಾಡಿವೆ (ದಮನ ಕಾರ್ಯದ ವಿಡಿಯೋ: http://bit.ly/dxFkHG). ಕೈಗಾರಿಕೆಗಳಿಗಾಗಿ ಕೃಷಿಭೂಮಿಯನ್ನು ವಶಪಡಿಸುವ ವ್ಯವಸ್ಥೆಯೊಂದು ನಮ್ಮಲ್ಲಿ ಇದೆ, ಕೃಷಿ ಭೂಮಿಗಾಗಿ ಕೈಗಾರಿಗಳಿಂದ ಭೂಮಿ ವಶಪಡಿಸುವ ವ್ಯವಸ್ಥೆ ನಮ್ಮಲ್ಲಿದೆಯೇ?

ಇಂದು ಪ್ರಪಂಚದ ಬಹಳಷ್ಟು ಭಾಗಕ್ಕೆ ಸೇವೆ ಪೂರೈಸುವವರು ನಾವೇ ಆದ್ದರಿಂದ ನಮ್ಮಲ್ಲಿ ದುಡ್ಡಿನ ಸಮೃದ್ಧಿ ಇದೆ. ಇದನ್ನು ಅಧುನಿಕ ಅರ್ಥಶಾಸ್ತ್ರ'ಅಭಿವೃದ್ಧಿ' ಎಂದು ಕರೆಯುತ್ತದೆ. ಹಣ ತನ್ನ ಹೆಸರಿಗೆ ತಕ್ಕಂತೆ (ಕರೆನ್ಸಿ, ಕರೆಂಟ್=ಹರಿವು, ಪ್ರವಾಹ) ನಿಂತಲ್ಲಿ ನಿಲ್ಲದೆ ಹರಿಯಲು ಬಯಸುತ್ತದೆ. ಉತ್ಪಾದಕ ವರ್ಗ, ಹಣದ ವಾರೀಸುದಾರರನ್ನು ಖರೀದಿಸಲು ಪ್ರಚೋದಿಸುತ್ತದೆ. ಇಂದು ನಾವು ಖರೀದಿಸುವ ಎಲ್ಲ ವಸ್ತುಗಳು ಬಳಸಿ ಬಿಸಾಡುವಂತೆ ವಿನ್ಯಾಸಗೊಂಡಿವೆ. ಇಡಿಯ ಆರ್ಥಿಕತೆ, ಕೊಂಡು-ಬಳಸಿ-ಬಿಸಾಡಿ, ಇನ್ನೊಂದನ್ನು ಕೊಳ್ಳಲು ಪ್ರೋತ್ಸಾಹಿಸುತ್ತದೆ. ಆದರೆ ಇವೆಲ್ಲದಕ್ಕೆ ಅಸ್ಥಿಭಾರವಾದ ಪ್ರಾಕೃತಿಕ ಸಂಪನ್ಮೂಲಗಳು ಎಷ್ಟಿದ್ದವೋ, ಅಷ್ಟೇ ಇವೆ. ಹಣವೆನ್ನುವುದು ನಮಗೊಂದು ಭ್ರಾಮಕ ಸಮೃದ್ಧಿಯನ್ನು ತಂದು ಕೊಟ್ಟಿದೆ. ಇದರಲ್ಲಿ ಮೈಮರೆತ ನಾವು ನಿಜ ಸಮೃದ್ಧಿಯ ಪ್ರತೀಕಗಳಾದ ನಮ್ಮ ನೆಲ, ಜಲ ಅರಣ್ಯಗಳನ್ನು ಎಂದೋ ಮರೆತು ಬಿಟ್ಟಿದ್ದೇವೆ. ಚಿನ್ನದ ಮೊಟ್ಟೆಯ ಆಸೆಗಾಗಿ ಕೋಳಿಯ ಹೊಟ್ಟೆ ಬಗೆಯುವ ಯತ್ನ ನಡೆದಿದೆ! ದುಡ್ಡಿನ ಝಣಝಣದ ಬಲದಿಂದ ಇಂದು ನನ್ನ ಗ್ರಾಮವೊಂದರಲ್ಲೇ ಬಹುಶ: 25 ಭೂನಾಶಕ ಯಂತ್ರಗಳು ಅನವರತ ಭೂಮಿಯನ್ನು ಅಗೆಯುತ್ತಿವೆ. ಇನ್ನು ಕೊನೆಯ ಮರ ಧರಾಶಾಹಿಯಾಗಲು ಎಷ್ಟು ಹೊತ್ತು ಉಳಿದಿದೆ?
***
ನಾವು ಮನೆಯಲ್ಲಿ ಮಸಾಲೆ ದೋಸೆ ಮಾಡಿ ತಿನ್ನಲು ಬಯಸಿದ್ದೇವೆ ಎಂದು ಇಟ್ಟುಕೊಳ್ಳೋಣ. ನಮ್ಮ ಗುರಿ ಮಸಾಲೆ ದೋಸೆ 'ತಿನ್ನುವುದು'. ದೋಸೆಗೆ ಹಿಟ್ಟು ರುಬ್ಬುವುದು, ಆಲೂಗಡ್ಡೆ ಪಲ್ಯ ಮಾಡುವುದೆಲ್ಲ ಮಸಾಲೆ ದೋಸೆ ತಿನ್ನುವುದೆಂಬ ಗುರಿ ಸಾಧನೆಗೆ ಮಾಡಲೇಬೇಕಾದ ಅನಿವಾರ್ಯ ಕೆಲಸಗಳು. ಈಗ ಯಾರಾದರೂ ಮಸಾಲೆ ದೋಸೆಯನ್ನು 'ತಯಾರಿಸುವುದೇ' ನಮ್ಮ ಗುರಿ ಹೊರತು ತಿನ್ನುವುದಲ್ಲ, 'ಉದ್ಯೋಗ ಸೃಷ್ಟಿ'ಯೇ ಗುರಿಹೊರತು 'ಅದರಿಂದ ತಯಾರಾಗುವ ಉತ್ಪನ್ನಗಳಲ್ಲ' ಎಂದರೆ ನಾವು ನಂಬೋಣವೇ?
ನಾವು ಬೆಳೆದ ಉದ್ದಿನಿಂದ ನಾವೇ ಹಿಟ್ಟು ತಯಾರಿಸಿ, ನಮ್ಮ ಕಾಡುಗಳನ್ನು ಕಡಿದು ಒಲೆ ಉರಿಸಿ ನಮ್ಮ ಕೈಯಿಂದಲೇ ದೋಸೆ ತಯಾರಿಸಿಕೊಂಡು ತಿನ್ನುತ್ತಿರುವ ಟಾಮ್ ಗಳು ಇರುವುದೂ, ಅವರುಗಳು ಸೊಕ್ಕಿ ಬೆಳೆವಂತಹ ವ್ಯವಸ್ಥೆಯೊಂದು ನಿರ್ಮಾಣವಾಗಿರುವುದೂ, ಅದರಲ್ಲಿ ನನ್ನನ್ನೂ ಸೇರಿ ಭಾರತದ ಯುವಶಕ್ತಿಯ ಮುಕ್ಕಾಲಕ್ಕೂ ಹೆಚ್ಚುಜನರು ಸೇವಕರಾಗುತ್ತಿರುವುದು ಒಂದು ದುರಂತಮಯ ಅದ್ಭುತ!

Image courtesy: Wikimedia commons Published in Prajavani on 24th July 2011

Rating
No votes yet

Comments