ಸಾವನದುರ್ಗ: ಸಾಹಸೀ ಚಾರಣಿಗರಿಗೆ-ಪ್ರಕೃತಿ ನಿರ್ಮಿತ ಹೆಬ್ಬಂಡೆಯ ಸವಾಲ್....

ಸಾವನದುರ್ಗ: ಸಾಹಸೀ ಚಾರಣಿಗರಿಗೆ-ಪ್ರಕೃತಿ ನಿರ್ಮಿತ ಹೆಬ್ಬಂಡೆಯ ಸವಾಲ್....

 ಈ ಲೇಖನದ ಜೊತೆಗಿರುವ ಚಿತ್ರವನ್ನೊಮ್ಮೆ ನೋಡಿ. ಅದನ್ನೋಡಿದಾಗ  'ದೂರದ ಬೆಟ್ಟ-ಕಣ್ಣಿಗೆ ನುಣ್ಣಗೆ' ಸತ್ಯ ಅನ್ಸುತ್ತಲ್ಲವ!

ಆಗಸ್ಟ್ ೧೫ರ ರಜಾ ದಿನವನ್ನ ಗೆಳೆಯರೊಂದಿಗೆ  ಮಜವಾಗಿ ಕಳೆಯಲು,  ಎಲ್ಲಾದರೂ ಟ್ರಿಪ್ ಹೋಗೋಣ  ಅದೂ ಹತ್ತಿರದ ಪ್ರದೇಶಕ್ಕೆ ಎಂದಾಗ  ನಮ್ಮ ಸ್ನೇಹಿತರು, ಹತ್ತಿರದ ಪ್ರದೇಶ ಎಂದರೆ  'ಮಜೆಸ್ತಿಕ್ಕಿಗೆ' ಹೋಗೋಣ ಅಲ್ಲಿ 'ತರೆಹೆತರವಾರಿ'  ವಿಧ್ಯಮಾನಗಳಿಗೆ ಸಾಕ್ಷಿಯಾಗಬಹುದು ಅಂತ ತಮಾಷೆ ಮಾಡಿದರು.

ಕೊನೆಗೆ ಬೆಂಗಳೂರಿಗೆ ಆದಸ್ತು ಹತ್ತಿರದಲ್ಲೇ ಇರುವ 'ಶಿವ ಗಂಗೆಗೆ' ಹೊರಡುವುದೆಂದು ತೀರ್ಮಾನಿಸಿದೆವು.  ನಾವು ಒಟ್ಟು ೬ ಜನ 'ಹುಡುಗಾಟದ ಹುಡುಗರು'  ಹೊರಡಲು ಅಣಿಯಾದಾಗ   ನಮ್ಮ ಸ್ನೇಹಿತನ ಬೈಕು ಕೈ ಕೊಟ್ಟು  ನಮ್ಮ ನಾಲ್ವರು ಸ್ನೇಹಿತರು ಮಾತ್ರ ೨ ಬೈಕಲ್ಲಿ  ಒಂದು ಬೈಕಲ್ಲಿ ಇಬ್ಬರಂತೆ ಹೊರಟರು. ನಾನು ಮತ್ತು ನನ್ನ ಮತ್ತೊಬ್ಬ ಸ್ನೇಹಿತ  ಯಶವಂತಪುರದಲ್ಲಿ ,  ತುಮಕೂರಿಗೆ ಹೊರಡುವ ಬಸ್ಸು ಹತ್ತಿ 'ದಾಬಸ್ ಪೇಟೆ ಗೆ 'ಮುಂಚೆಯೇ  ಶಿವಗಂಗೆಗೆ ಹೊರಡುವ ಕ್ರಾಸ್ ಹತ್ತಿರ ಇಳಿದು ನಮ್ಮ ಸ್ನೇಹಿತರ ಬೈಕಲ್ಲಿ  ಒಂದೊಂದು ಬೈಕಲ್ಲಿ ಮೂವರಂತೆ ಹೊರಟೆವು.

ಅಲ್ಲಿಂದ ಶಿವಗಂಗೆಗೆ ಹೊರಡುವ ರಸ್ತೆ ಅಲ್ಲಲ್ಲಿ ಕೆಟ್ಟು ಹೋಗಿದ್ದರೂ  ನಮ್ಮ ಹುಡುಗರು  ೮೦-೯೦-೧೦೦ರ ಸ್ಪೀಡಿನಲ್ಲಿಯೇ 'ಜೋಶ್ನಲ್ಲಿ' ಗಾಡಿ ಓಡಿಸುತ್ತಾ 'ಹೋಶ್' ನಲ್ಲೆ ಇದ್ದರು!

ಶಿವಗಂಗೆ ತಲುಪಿದಾಗ ಮಟ-ಮಟ  ನಡು ಮಧ್ಯಾನ್ಹ! ಬಿರು ಬಿಸಿಲಿಗೆ ತತ್ತರಿಸಿದ ನಾವು , ಈ ಬಿಸಿಲಲ್ಲಿ ಬೆಟ್ಟ ಹತ್ತಲು ಹೊರಟರೆ ಅಸ್ಟೇ! ಅಂತಂದುಕೊಂಡು  ಶಿವಗಂಗೆ ಬೆಟ್ಟದ ಬದಲಿಗೆ ಇಲ್ಲೇ ಹತ್ತಿರದಲ್ಲೇ ಇರುವ 'ಸಾವನದುರ್ಗಕ್ಕೆ' ಹೊರಡೋಣ ಅಂತ ತೀರ್ಮಾನಿಸಿ ಅಲ್ಲಿಗೆ ಪ್ರಯಾಣ ಬೆಳೆಸಿದೆವು.

 

'ಸಾವನದುರ್ಗದ' ಬಗ್ಗೆ  ದಿನ ಪತ್ರಿಕೆ- ಮತ್ತಿತರೆಡೆ ನಾ ಓದಿದ್ದೆನಾದರೂ  ಅದು ಏನು?  ಅಲ್ಲಿ  ಏನಿದೆ? ಅಂತ  ತಿಳಿದಿರಲಿಲ್ಲ. ಶಿವಗಂಗೆಯಿಂದ  ಸಾವನದುರ್ಗಕ್ಕೆ ಹೋಗುವ ಮೊದಲು ನಾವು, ' ಮಾಗಡಿ' ಗೆ ಮುಂಚೆಯೇ  ಬರುವ ಸಾವನ ದುರ್ಗಕ್ಕೆ ಹೊರಡುವ ಕ್ರಾಸ್  ಮೂಲಕ ಸಾವನದುರ್ಗಕ್ಕೆ ಹೊರಟೆವು.
 
ಇಲ್ಲಿಯೂ ಶಿವಗಂಗೆಯಿಂದ ಮಾಗಡಿ-ಸಾವನದುರ್ಗ ಕ್ರಾಸ್  ಮಧ್ಯೆ ಮಧ್ಯೆ  ರಸ್ತೆ ಕೆಟ್ಟಿದೆ ಆದರೂ  ಅಸ್ಟೊಂದು ವಾಹನ ಸಂಚಾರವಿಲ್ಲದ್ದರಿಂದ  ಇಲ್ಲಿಓ ನಮ್ಮ ಹುಡುಗರು ಬೈಕನ್ನು ೧೦೦ರ ವೇಗದಲ್ಲೇ ಓಡಿಸುತ್ತಿದ್ದರು!
ಸಾವನದುರ್ಗ ಕ್ರಾಸ್ನಿಂದ  ಸಾವನದುರ್ಗಕ್ಕೆ ಹೊರಟ  ನಮಗೆ ದಾರಿ ಮಧ್ಯದ ಎಡ-ಬಲದ  'ಸಂರಕ್ಷಿತ ಅರಣ್ಯ 'ದ ಮರಗಳ ದೆಸೆಯಿಂದ ಬಿರು ಬಿಸಿಲಲ್ಲೂ ಮೈ-ಮನ ತಂಪಾಯ್ತು.
 
ಸಾವನದುರ್ಗ ತಲುಪುವ ಮುಂಚೆಯೇ ದೂರದಿಂದ ಈ ಹೆಬ್ಬಂಡೆ ನೋಡಿದಾಗ ಅದು ನಾ ಈ ಮುಂಚೆ ನೋಡಿದ್ದ ಕ್ಕಿಂತ ಭಿನ್ನ  ಅನ್ನಿಸಲಿಲ್ಲ. ಆದ್ರೆ  ಒಮ್ಮೆ 'ಆರೋಹಣಕ್ಕೆ' ಸಜ್ಜಾಗಿ   ಮೇಲಕ್ಕೆ ಹತ್ತಲು ಶುರು ಮಾಡಿ ಸ್ವಲ್ಪವೇ ಮೇಲಕ್ಕೆ ಹತ್ತಿ, ಕೆಳಗಿದ್ದ ನಮ್ಮ ಸ್ನೇಹಿತನೊಬ್ಬ ಇನ್ನು ಏಕೆ ಮೇಲೆ ಬರ್ತಿಲ್ಲ ಅಂತ ಕೆಳಕ್ಕೊಮ್ಮೆ  ಕಣ್ಣು  ಹಾಯಿಸಿದಾಗಲೇ ಗೊತ್ತಾಗಿದ್ದು 'ಅಬ್ಬೋ!  ಇದು ಮಾಮೂಲಿ ಬೆಟ್ಟ ಅಲ್ಲ'!! 
 
 
 ಕೆಳಗಿದ್ದ ನಮ್ಮ ಸ್ನೇಹಿತನನ್ನು  ಮತ್ತೆ ಮೇಲಕ್ಕೆ ಹತ್ತಿಸಲು -ಹುರಿದುಂಬಿಸಲು  ನಾ ಅದ್ ಎಸ್ಟೆ ಹೆಣಗಾಡಿದರೂ  ಅವ ಮಾತ್ರ ಹತ್ತಲು ಬಿಡಿ, ಇಳಿಯಲೇ ಹಿಂದೆ-ಮುಂದೆ ನೋಡ್ತಾ, ನಂಗೆ ಹೇಳಿದ 'ಮಗಾ  ಮೇಲಕ್ಕೆ ಹತ್ತೋದ್ ಅತ್ಲಾಗಿರ್ಲಿ  , ಇಳಿಯೋಕೆ ಆಗ್ತಾ ಇಲ್ಲ, ನೀ ಹೋಗು ನಾ ಇಲ್ಲೇ  ನೀವೆಲ್ಲ  ಬರ್ವರ್ಗೆ ಕಾಯ್ತೀನಿ' ಅಂದ...
 
ನಮ್ಮಿಬ್ಬರಿಗಿಂತ ಮುಂಚೆಯೇ  ನಮ್ಮ ನಾಲ್ಕು ಸ್ನೇಹಿತರು ಅದಾಗಲೇ  ಬೆಟ್ಟವನ್ನ  ಕಾಲು ಭಾಗ  ಕ್ರಮಿಸಿಯಾಗಿತ್ತು. ಕೊನೆಗೆ ಅದೆಂಗೋ ನಮ್ಮ ಸ್ನೇಹಿತನನ್ನ  ಕೆಳಗಿಳಿಸಿ ಅವನನ್ನ ಅಲ್ಲೇ ಕುಳಿತಿರು ಅಂತೇಳಿ, ನಾ ಒಬ್ನೇ  ಮತ್ತೆ ಕೆಳಗಡೆಯಿಂದ  ಬೆಟ್ಟದ ತುದಿ ಹೋಗುವ ಸಾಹಸ ಮಾಡಿದೆ!
ಏನೇನು ಸುರಕ್ಷಾ ವ್ಯವಸ್ಥೆ  ಮಾಡಿಕೊಳ್ಳದೆ ಬರಿ ಒಂದು ಬಾಟಲಿ ನೀರನ್ನು ಬೆಟ್ಟ ಹತ್ತುವ ಮುಂಚೆ ಕುಡಿದು, ಬೆಟ್ಟ ಹತ್ತಲು ಹೋರಾಟ ನಮಗೆಲ್ಲ, ಸ್ವಲ್ಪ ಮಾತ್ರವೇ ಹತ್ತಿದ ಮೇಲೆ  ಗೊತ್ತಾಯ್ತು, ಧಾರಾಳ ನೀರು, ಚಾಕ್ ಪೌಡರ್ (ಕೈ ಬೆವರು ನಿವಾರಿಸಿ, ಬೆಟ್ಟದೊಂದಿಗೆ ನಮ್ಮ ಹತೋಟಿ ತಪ್ಪದಿರಲು), ಹಗ್ಗ , ಟಾರ್ಚು(ಹತ್ತಿದವರು-ಕೆಳಗಿಳಿಯಲೇಬೇಕು  
 ಆದ್ರೆ ಅದಾಗದಿದ್ದರೆ? ತುರ್ತು ಸ್ಥಿತಿಯಲ್ಲಿ  ಬೆಟ್ಟದ ಮೇಲೆ ಇರಬೇಕಾಗಿ ಬಂದರೆ!) 
 
ಲೈಟರ್ , ಹು ಹೂ.. ಏನೊಂದು ಇಲ್ಲದೆ ಬೆಟ್ಟ ಹತ್ತುವ ಸಾಹಸ ಮಾಡಿದ್ದಕ್ಕೆ  ಕಾಲು ಭಾಗ ಮಾತ್ರ ಕ್ರಮಿಸಿದಾಗಲೇ  ನನಗೆ ನನ್ನೇ ದೂಶಿಸಿಕೊಂಡೆ! ಆದ್ರೆ ಕೆಟ್ಟ ಮೇಲೆ ಬುದ್ದಿ ಬಂದ್ರೆ ಏನುಪಯೋಗ! ಸ್ವಲ್ಪ ಹತ್ತಿಯಾಗಿದೆ, ಏನಾದರಾಗಲಿ ಪೂರ್ತಿ ಹತ್ತಿಯೇ ಬಿಡೋಣ ಅಂತ  ಮೇಲಕ್ಕೆ ಹೊರಟೆ.
 
ಇನ್ನು ಅರ್ಧ ಬೆಟ್ಟ ತಲುಪುವ ಮೊದಲೇ  ಕೈ ಕಾಲು ನಿತ್ರಾಣವಾಗಿ ತರ್ರೋ-ಮರ್ರೋ  ಅಂದವು!! 
ಮೈ ಕೈ ಎಲ್ಲ ಬೆವರು(ಮಟ -ಮಟ ಮಧ್ಯಾನ್ಹ ದ  ಬಿಸಿಲು ಬೇರೆ !) ಉಸಿರನ್ನು ತಹಂಬದಿಗೆ  ತರಲಾಗದೆ  ಆಮ್ಲಜನಕವೇ ಇಲ್ಲವೇನೋ ಅನ್ನೋ  ಫೀಲಿಂಗ್ ನಿಂದ  ಎದೆ ಭಾರವಾದಂತಾಯ್ತು! ಸ್ವಲ್ಪ ಹೊತ್ತು ಕುಳಿತುಕೊಂಡು  ಸುಧಾರಿಸಿಕೊಂಡು  'ಮಹತ್ತರವಾದ' ತೀರ್ಮಾನವನ್ನ ನಮ್ಮ ಸ್ನೇಹಿತರಿಗೆ  ಹೇಳದೆಲೆ  ತೊಗೊಂಡೆ! ಅದು: ಇಷ್ಟು ಬೆಟ್ಟ  ಹತ್ತಿದ್ದೆ ಸಾಕು, ಮುಂದೊಮ್ಮೆ ಎಲ್ಲ ಸಕಲ ಸುರಕ್ಷಾ ಆಯುಧಗಲ್'  ಸಮೇತ ಬಂದು ಮತ್ತೊಮ್ಮೆ ಪೂರ್ತಿ ಬೆಟ್ಟ  ಹತ್ತಿ ಬಿಡುವ  ಅನ್ನೋದು!
 
ಈ ಬೆಟ್ಟವನ್ನ ಬೆಳ್  ಬೆಳಗ್ಗೆ ಇಲ್ಲ ನಾಲ್ಕು ಘಂಟೆ ಮೇಲೆ  ಮಾತ್ರ  ಅದೂ ಸಕಲ ಸುರಕ್ಷಾ  ಸಾಧನಗಳೊಂದಿಗೆ, ಗಟ್ಟಿಮುಟ್ಟಾದ  ಆರೋಗ್ಯವಂತ , ಸಾಹಸೀ ಪ್ರವೃತ್ತಿಯವರು ಮಾತ್ರ  ಹತ್ತಲು ಹೊರಡೋದು ಒಳ್ಳೇದು, ನನ್ನ ಅನಿಸಿಕೆ. ... ಸ್ಥಳೀಯರನ್ನ ವಿಚಾರಿಸಿದಾಗ  ಇಲ್ಲಿ ಹಿಂದೆ ತುಂಬಾ ಜನ  ಬೆಟ್ಟ ಹತ್ತಲು ಹೋಗಿ 'ಹುಮ್ಮಸ್ಸಿನಲ್ಲಿ'( ಎಣ್ಣೆ  ಏರಿಸಿಕೊಂಡು ಹತ್ತುವ- ಅಕ್ಕ-ಪಕ್ಕದ  ಬಂಡೆಗಳಲ್ಲಿ  ಮಾಯವಾಗಿ ರೋಮಾನ್ಸ್  ಮಾಡುವವರಿಗೂ ಇಲ್ಲಿ ಕಮ್ಮಿ ಇಲ್ಲ!) ಮೇಲಿಂದ ಕೆಳಗೆ  ಮುಗ್ಗರಿಸಿಕೊಂಡು ಬಿದ್ದು ಕೈ ಕಾಲು-ಪ್ರಾಣ ಕಳೆದುಕೊಂನ್ದಿದ್ದು  ಉಂಟಂತೆ...
 
 ನನಗಿಂತ ಮುಂಚೆ ಮೇಲೆ ಹೊರಟ ನಮ್ಮ ಸ್ನೇಹಿತರು ನಾಲ್ವರಲಿ  ಇಬ್ಬರು ಮದ್ಯದಲ್ಲಿಯೆ  ನೇರವಾಗಿ ಹತ್ತುವ ಸಾಹಸ ಮಾಡದೆ , ಬಲಗಡೆಗೆ ಹೊರಟರು. ಇನ್ನಿಬ್ಬರು ಮಾತ್ರ ನೇರವಾಗೇ ಹತ್ತುತ್ತ  ೭೫% ಬೆಟ್ಟ ಹತ್ತಿದಾಗ  ನನಗೆ ಅವರಿಬರು 'ಅಸ್ಪುಸ್ತ'ವಾಗಿ  ಕಾಣ್ತಿದ್ದರು.   ಅವರಲ್ಲಿ ಒಬ್ಬ  ಮಾತ್ರ  ತುತ್ತ-ತುದಿ ತಲುಪಿ ನಾವು ಪತ್ರಿಕೆಯ  ಚಿತ್ರದಲ್ಲಿ ನೋಡಿದ್ದ  ತುತ್ತ-ತುದಿಯ ಕಲ್ಲು ಮಂಟಪ  ನೋಡಿ, ಅಲ್ಲಿ ಒಬ್ಬನೇ ಅಡ್ಡಾಡಿ -ಮೇಲಿಂದ  ಕಣ್ಣು ಹಾಯಿಸಿ 'ಮಂಚನಬೆಲೆ' ಡ್ಯಾಮ್  ನೋಡಿ ಖುಷಿ ಪಟ್ಟು  ಸರಿ ಸುಮಾರು ಒಂದೂವರೆ ಘಂಟೆ ನಂತರ  ಕೆಳಗಿಳಿದು ಬಂದ, ಅವನ ಮುಖದಲ್ಲಿ ಯುದ್ಧ ಗೆದ್ದವನ ಹುಮ್ಮಸ್ಸು, ನಮಗೆ  ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಅನ್ನುವ 'ಫೀಲಿಂಗು'!!
 
ಇನ್ನೊಬ್ಬ ಸ್ನೇಹಿತ ೭೫% ಬೆಟ್ಟ ಕ್ರಮಿಸಿ ಅಲ್ಲಿಯೇ ಸುಸ್ತಾಗಿ ಕುಳಿತು ಪಾದಕ್ಕೆ ಗಾಯ ಮಾಡಿಕೊಂಡು,  ಮತ್ತೆ ಮತ್ತೆ ನಮಗೆ ಫೋನ್ ಮಾಡಿ  ಹೇಗಾದರೂ ಮಾಡಿ ತನ್ನನ್ನು ಕೆಳಗಿಳಿಸಿ  ಅಂತ ಅಲವತ್ತುಕೊಂಡ. ಆದ್ರೆ ಸುಸ್ತಾಗಿದ್ದ ನಾವು(ಮೂರು ಜನ ಬೆಟ್ಟವನ್ನ ಅರ್ಧವೂ ಹತ್ತಲು ಆಗದೆ ಕೈ ಚೆಲ್ಲಿ ಕುಳಿತವರು!) ಯಾರೊಬ್ಬರೂ ಅವನನ್ನ ಹುರಿದುಂಬಿಸಿ ಕೆಳಗಿಳಿಸಲು ಮಾಡಿದ ಪ್ರಯತ್ನ ವ್ಯರ್ಥವಾಗಿ, ಅವನ ಸುದೈವಕ್ಕೆ,  ಪ್ರವಾಸಕ್ಕೆ ಬಂದಿದ್ದ ಅವನ ಸಹೋದ್ಯೋಗಿಯೊಬ್ಬ  ನಮ್ಮನ್ನು ಮಾತಾಡಿಸಿ,ತನ್ನ  'ಸಹೋದ್ಯೋಗಿ' ಬೆಟ್ಟದ ಮೇಲೆ  ಒಂಟಿಯಾಗಿ ಕುಳಿತು  ಕೆಳಕ್ಕೆ ಇಳಿಸಲು ಅಂಗಲಾಚುತ್ತ್ತಿದಾನೆ  ಅಂತ ಮನವರಿಕೆಯಾಗಿ, ಅವನೇ ಮೇಲಕ್ಕೆ ಹೋಗಿ   ನಮ್ಮ ಸ್ನೇಹಿತನನ್ನ  ಕೆಳಕ್ಕೆ   ಕರೆದುಕೊಂಡು  ಬಂದ  ಅದೂ ಅರ್ಧ ಘಂಟೆ ಪ್ರಯತ್ನದ ನಂತರ!!  
 
ಮೇಲಕ್ಕೆ ಹತ್ತಲು ಹೊರಟ  ಅದೆಸ್ತೋ ಜನಕ್ಕೆ  ನಮ್ಮ ಸ್ನೇಹಿತ ಹೇಳ್ತಿದ್ದ' ಬೇಡ ಗುರೂ ಸಾಹಸ ಮಾಡಲು ಹೋಗಬೇಡಿ' ರಿಸ್ಕಿದೆ.  ಆದ್ರೆ  ಅವರ್ಯಾರು  ಅವನ ಮಾತು ಕೇಳದೆ ಬೆಟ್ಟ ಹತ್ತಲು ಹೋಗಿ,  ವಾಪಾಸ್ಸದರು!!  ಅವರಲ್ಲಿ ಒಬ್ಬ ಮಾತ್ರ  ಬೆಟ್ಟ ಹತ್ತಿ  ಇನ್ನೊಂದು ಕಡೆಯಿಂದ ಇಳಿದು ಬಂದ. ಅಲ್ಲಿಗೆ  ಅವತ್ತು ಬೆಟ್ಟ ಹತ್ತಿ 'ಸಶರೀರವಾಗಿ' ಬಂದವರು ಇಬ್ಬರೇ! ಒಬ್ಬ ನಮ್ಮ ಸ್ನೇಹಿತ ಮತ್ತೊಬ್ಬ  ಅನಾಮಿಕ.....  
ಬೆಟ್ಟ ಹತ್ತುವ ಮೊದಲು ಮೇಲಕ್ಕೆ ಒಮ್ಮೆ ಧ್ರುಸ್ತಿ  ಹಾಯಿಸಿದರೆ  ಎಲ್ಲರಿಗೂವೆ  ಇದೇನು ಸಪಾಟಾಗಿದೆ- ಅರಾಮವಾಗೆ ಹತ್ತಬಹುದು! ಅನ್ನಿಸದೆ ಇರಲ್ಲ.... ಆದ್ರೆ ಒಮ್ಮೆ ಹತ್ತಿ- ಕೆಳಗೆ ನೋಡಿ!!  ಆದ್ರೆ ಮೇಲಕ್ಕೆ ಹತ್ತಿ ಅಲ್ಲಿಂದ ಸುತ್ತ-ಮುತ್ತ ಕಣ್ಣು ಹಾಯಿಸಿದರೆ  ಆಯಾಸ ಪರಿಹಾರ, ಸಂತೃಪ್ತಿ - ಜಗ ಗೆದ್ದ ಖುಷಿ...... ಮತ್ತೆ ಅಲ್ಲದೆ ಏನು? ಸಾವನದುರ್ಗದ ಬೆಟ್ಟ  ಹತ್ತಲು ಹೊರಡುವವರಲ್ಲಿ ಪೂರ್ಣ ತುದಿ ಮುಟ್ಟುವವರು ಕಡಿಮೇನೆ.  ಈಗೀಗ  ನೆಟ್ ನಲ್ಲಿ ಸಾವನದುರ್ಗ ದ ಬಗ್ಗೆ ಬೆಟ್ಟದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿ  ಅಲ್ಲಿ ಹೋಗಿ ಬಂದವರ ವೀಡಿಯೊ (ಬೆಟ್ಟದ ತುತ್ತ ತುದಿಯಿಂದ  ತೆಗೆದ ವೀಡಿಯೊ) ನೋಡಿ  ಹೊಟ್ಟೆ ಕಿಚ್ಚು  ಪಡ್ತಿದ್ದೇನೆ!!
 
ಆದರೂ ಮುಂದೊಮ್ಮೆ  'ಸಾವನದುರ್ಗಕ್ಕೆ' ಹೋಗಲೇಬೇಕು, ಬೆಟ್ಟ ಹತ್ತಿ ಸುರಕ್ಷಿತವಾಗಿ  ಕೆಳಗಿಳಿದವರ ಸಾಲಿಗೆ  ನಾನು ಸೇರಬೇಕು. ಪ್ರಕೃತಿ ನಿರ್ಮಿತ ಈ ಬೆಟ್ಟ  ಮಾನವನ ಸಾಹಸೀ  ಪ್ರವೃತ್ತಿಗೆ  ಒಂದು ಸವಾಲೇ ಸರಿ... ಈ ತರಹದ ಅದೆಸ್ತೋ  ಪ್ರವಾಸೀ ತಾಣಗಳು ಕರುನಾಡಿನಲ್ಲಿ  ಇರುವುದು  ನಮ್ಮ  ಹಿರಿಮೆ. ನಮಗೆ ಹೆಮ್ಮೆ...... ನೀವು ಒಮ್ಮೆ ಮತ್ತೊಮ್ಮೆ -ಮಗದೊಮ್ಮೆ 'ಸಾವನದುರ್ಗಕ್ಕೆ' ಹೋಗಿ ಬೆಟ್ಟಕ್ಕೆ ಸವಾಲ್ ಹಾಕ್ತೀರಲ್ಲವ?  ಆದ್ರೆ ಸೇಫ್  ಆಗಿ ಹತ್ತಿ ಸೇಫ್ ಆಗಿ ಇಳಿಯಿರಿ... 
 
 

 

Comments