ವಸಂತ

ವಸಂತ

ಕವನ
ಹನಿ ಮಂಜಲಿ ತೊಯ್ದ ಸಸ್ಯಸಂಕುಲ
ಸಜ್ಜಾಯಿತು ಉಟ್ಟು ಹಸಿರುಡುಗೆ
ದನಿಯಾಯಿತು ಕೋಗಿಲೆ ಅರುಣೋದಯ ರಾಗಕೆ
ಸ್ವಾಗತ ಕೋರಿತು ವಸಂತಾಗಮನಕೆ

 

ಆಸರೆ ಅರಸಿ ಮರವನಪ್ಪಲು ಲತೆಯು

ಗೆಲುವ ಕಂಡಿತು ಒತ್ತಾಗಿ ಕಲೆತು

ಕಾವೇರಲು ತನುವು ಅರಳಿತು ಮನವು

ಮಿಡಿಯುವ ಆಸೆಗೆ ಬಯಸುತ ಒಲವು

 

ನಗು ಮೊಲ್ಲೆ ಮೊಗ್ಗು ಚೆಲ್ಲಲು ಸುಗಂಧವನು

ತಂಗಾಳಿ ಬೀಸಿ ಪಸರಿತು ಅನುರಾಗವನು

ಸನಿಹ ಬಳಸಿ ಭಾವ ತಿಳಿಸೆ ನಾಚಿ ನೀರಾಗಲು ನೀನು

ಆ ನೀರ್ಗೊಳದಲಿ ಮಿಂದ ಹಂಸ ನಾನು

 

ಅರಳಿದ ಹೂವ ಹರೆಯದ ಯವ್ವನ

ಮಧು ಪಕಳೆಯ ಚುಂಬಿಸಿ ಮತ್ತಾಯಿತು ಭ್ರಮರ

ನಾ ಕಳೆದು ಹೋದೆ ನಿನ್ನಳೊಂದಾಗಿ

ತುಂಬು ಒಲವಲಿ ಸವಿದೆ ಅಮೃತ ಅಮರ

 

ಹೊಳೆವ ಇರುಳಲಿ ನಲಿವ ಚೆಲುವ ನೈದಿಲೆ

ಮರೆತು ಬಿಟ್ಟಿತೆ ಬೆಳದಿಂಗಳನು?

ಪ್ರತಿವರುಷವು ಹರುಷದ ಹೊಸ ಹೊನಲು ಹರಿಯಲು

ಕಾಯುವೆ ನಿತ್ಯ ವಸಂತವನು.

 
 

Comments