ಚಲೊ ಮಲ್ಲೇಶ್ವರ...೭

ಚಲೊ ಮಲ್ಲೇಶ್ವರ...೭

ಜಯಂತ್, ಚೇತನ್ ಇಬ್ರೂ ಗಣೇಶ್ ಅವ್ರ ಜೊತೆ ಸಂಪ್ಗೆ ರಸ್ತೇಲಿ ಮುಂದಕ್ಕೆ ಹೊರ್ಟ್ಬಿಟ್ರು.

ಸರಿ ನಾನು ಈ ಕಡೆ ಸದ್ಯ ಕನ್ಸಿನಲ್ಲಿ ಆದಹಾಗೆ ಕಾರಿಗೆ ಡ್ಯಾಶ್ ಹೊಡ್ದ್ಮೇಲೆ ಇಲ್ಲಿ ಯಾರೂ ಕಿಡ್ನ್ಯಾಪ್ ಮಾಡ್ಲಿಲ್ಲವಲ್ಲ ಬುದುಕಿದೆ ಬಡ ಜೀವವೆ ಅನ್ಕೊಂಡು ಗಾಡಿ ಏರಿದೆ.

ಜೊತೆಗೆ ಒಳ್ಳೆ ಗ್ರಾಚಾರ ಆಯ್ತು, ಆರ್ ಟಿ ನಗರಕ್ಕೆ ಹೋಗೋನು ಇಲ್ಲಿಗೆ ಬಂದ್ಬಿಟ್ಟೆ, ಕುರ್ತೇಟು, ನಾನು ಕನ್ನಡಕ ಮರೆತು ಬಂದಾಗ್ಲೆ ಜೋಡಿವಾಲ್ಗ, ಮಳೆ ಬೇರೆ ಬರುತ್ತೆ (ಗಣೇಶ್ ನನ್ನ ಕನ್ನಡಕ ಕಿತ್ತಿಟ್ಟಿದ್ದಾರಲ್ಲ..?) ಅನ್ಕೊಂಡು ಕಾರ್ ಸ್ಟಾರ್ಟ್ ಮಾಡೋಣ ಅಂತ ಇಗ್ನಿಷನ್ ಕಿವಿ ಹಿಂಡ್ದೆ, ಕಿಚ್ ಕಿಚ್ ಕಿಚ್...ಕಿಚಕ್. ಕಿಚಕ್.... ಬರಿ ಸೌಂಡ್ ಬಂತೆ ಹೊರ್ತು, ಸ್ಟಾರ್ಟ್ ಆಗ್ಲೇಇಲ್ಲ. ಇದೊಳ್ಳೆ ಗ್ರಾಚಾರ ಆಯ್ತಲ್ಲ, ಏನ್ಮಾಡೋದೀಗ ಅನ್ಕೊಂಡು ಕೆಳಗಿಳಿದೆ.

ಗಣೇಶ್ ಅವ್ರನ್ನು ಕೂಗೋಣ ಅನ್ಕೊಂಡು ನೋಡಿದ್ರೆ ಅವ್ರು ಆಗ್ಲೆ ಅಲ್ಲಿ ಹೋಗ್ತಿದ್ದಾರೆ.

ಕಾರ್ ನ ಲಾಕ್ ಮಾಡಿ, ದೊಡ್ಡ ಹೆಜ್ಜೆಗಳೊಂದಿಗೆ ಓಡುತ್ತಾ ಅವರನ್ನು ಸಮೀಪಿಸಿ

‘ಏನ್ ಗಣೇಶ್ ಜಿ ಹೀಗೆ ಮಾಡೋದಾ, ನಾನು ಕೂಗ್ತಾನೆ ಇದ್ದೀನಿ ನನ್ನನ್ನು ಬಿಟ್ಟು ಬಂದ್ಬಿಟ್ರಲ್ಲ, ಈ ಏರಿಯಾ ನನಗೆ ಅಷ್ಟು ಪರಿಚಯ ಇಲ್ಲ, ಡ್ಯಾಶ್ ಹೊಡೆದ ಮೇಲೆ ಏನಾಯ್ತೊ ಗೊತ್ತಿಲ್ಲ ಗಾಡಿ ಸ್ಟಾರ್ಟ್ ಆಗ್ತಿಲ್ಲ, ನಿಮಗೆ ಪರಿಚಯಸ್ತ ಮೆಕ್ಯಾನಿಕ್ ಯಾರದ್ರೂ ಇದ್ರೆ ಹೇಳ್ರಿ‘

ಅವರು ಮೂರೂ ಜನ ಮುಖ ಮುಖ ನೋಡ್ಕೋತಾ ಇದ್ದಾರೆ, ನಾನು ಅರೆ ಇದೇನು? ಗಣೇಶ್, ಚೇತನ್ ನನ್ನ ನೋಡಿಲ್ಲ ಪರ್ಚಯ ಇಲ್ಲ ಸರಿ, ಆದ್ರೆ ಜಯಂತ್ ನನ್ನ ನೋಡಿದ್ದಾರಲ್ಲ, ಆದ್ರೂ ಯಾಕೆ ಗುರ್ತಿಲ್ಲದೋರ್ತರ ನೋಡ್ತಿದ್ದಾರೆ ಅನ್ಕೊಂಡೆ,

ಅಷ್ಟರಲ್ಲಿ ಹಿಂದಿನಿಂದ ನನ್ನ ಹೆಗಲ ಮೇಲೆ ಯಾರೊ ಕೈ ಇಟ್ರು, ಯಾರು ಅಂತ ತಿರುಗಿ ನೋಡ್ದೆ, ಸ್ವಲ್ಪ ಕತ್ತು ಬಗ್ಗಿಸಿ ಅವರ ಮುಖದ ಹತ್ರ ಹೋಗಿ ನೋಡಿದ್ರೆ ಜಯಂತ್, ಅಯ್ಯೊ ದೇವ್ರೆ ಹಾಗಾದ್ರೆ ಇಷ್ಟೊತ್ತು ನಾನು ಮಾತಾಡಿದ್ದು ಯಾರಹತ್ರ ಅಂತ ಒಂದೆರಡು ಹೆಜ್ಜೆ ಮುಂದೆ ಹೋಗಿ ನೋಡ್ದೆ, ಒಂದು ದಡೂತಿ ಹೆಂಗಸು, ಇನ್ನೊಂದಿಬ್ಬರು ಸಣ್ಣಗಿರೊ ಹೆಣ್ಣು ಮಕ್ಕಳು, ಅದೇನಾಗಿದೆ ಅಂದ್ರೆ, ಆ ಹೆಂಗಸು ಮತ್ತು ಒಬ್ಬ ಹೆಣ್ಣು ಮಗಳು ಪ್ಯಾಂಟ್ ಷರ್ಟು ಹಾಕಿದ್ದಾರೆ, ಇನ್ನೊಂದು ಹುಡುಗಿ ಲಂಗದಾವಣಿ ಹಾಕಿದೆ, ನನ್ನ ಅಂದಾಜಿನಲ್ಲಿ ದಪ್ಪಗಿರೂರು ಗಣೇಶ್, ಇನ್ನೊಂದು ಹುಡುಗಿ ಚೇತನ್ ಮತ್ತು ಲಂಗ ದಾವಣಿ ಹಾಕಿರೋದು ಜಯಂತ್ ಅಂತ, ಏಕೇಂದ್ರೆ ಈ ಜಯಂತ್ ಅವ್ರು ಮಡಿ ಪಂಚೆ ಶಲ್ಯ ಹೊದ್ದಿದ್ದಾರೆ ಅಂತ ಗಣೇಶ್ ಬರ್ದಿದ್ರಲ್ಲ, ಅದೆ ನನ್ನ ಲಾಜಿಕ್. ಅಷ್ಟರಲ್ಲಿ ಜಯಂತ್ ಅವ್ರೆ ನನ್ನ ಪರವಾಗಿ ಅವ್ರಿಗೆ ಸಾರಿ ಹೇಳಿ ‘ಏನ್ ರಾಂಮೋಹನ್ ನೀವು ಹೀಗೆ?, ಬನ್ನಿ ನನ್ನ ಜೊತೆ‘ ಅಂದ್ರು ನಾನು, ‘ಜಯಂತ್ ಅವ್ರೆಲ್ಲಿ ಅಂದೆ‘ ಅದಕ್ಕೆ ಜಯಂತ್, ‘ನಿಮ್ಮನ್ನು ಅಲ್ಲಿಂದ ನಾವು ನೋಡ್ತಿದ್ವು, ನಿಮ್ಮ ಯಡವಟ್ಟನ್ನೂ ಗಮನಿಸ್ತಾ ಇದ್ವು, ಗಣೇಶಣ್ಣನೇ ಸ್ವಲ್ಪ ಮಜ ತಗೋಳೊಣ ಸುಮ್ನಿರಿ ಅಂತ ತಡ್ದಿದ್ರು, ಆಮೇಲೆ ನಾನು ಇನ್ನು ಹೆಚ್ಚು ಕಡ್ಮೆ ಆಗೋದು ಬೇಡ ಅಂತ ಬಂದು ನಿಮ್ಮನ್ನು ತಡೆದೆ‘ ಅಂದ್ರು

‘ಜಯಂತ್ ಅವ್ರೆ ನಾನು ಗಣೇಶ್ ಮತ್ತು ಚೇತನ್ ಅವ್ರನ್ನು ಬೇಟಿ ಮಾಡ್ಲಿಕ್ಕೆ ಮುಂಚೆ ಇಲ್ಲೇಲ್ಲಾದ್ರೂ ಕನ್ನಡಕದ ಅಂಗ್ಡಿ ಇದ್ರೆ ತೋರ್ಸಿ, ಮತ್ತಿನ್ನೇನೂ ಯಡವಟ್ಟಗೋದು ಬೇಡ‘ ಅಂದೆ

ಜಯಂತ್ ಕನ್ನಡಕದ ಅಂಗ್ಡಿಗೆ ಕರ್ಕಂಡು ಹೊರಟ್ರು. 
 

Rating
No votes yet

Comments