ಕನ್ನಡದ "ಶಿಖರಸೂರ್ಯ" ಚಂದ್ರಶೇಖರ ಕಂಬಾರರಿಗೆ ಅಭಿನಂದನೆಗಳು!

ಕನ್ನಡದ "ಶಿಖರಸೂರ್ಯ" ಚಂದ್ರಶೇಖರ ಕಂಬಾರರಿಗೆ ಅಭಿನಂದನೆಗಳು!

ನಿನ್ನೆ ರಾತ್ರಿ ನಮ್ಮ ಮನೆಯಲ್ಲಿ, ಅಷ್ಟೇ ಯಾಕೆ ಇಡೀ ನಮ್ಮ ರಾಜರಾಜೇಶ್ವರಿ ನಗರ, ದಟ್ಟಗಳ್ಳಿಯಲ್ಲಿ ಕರೆಂಟಿರಲಿಲ್ಲ. ಸಂಜೆ 5:30ಕ್ಕೆ ಕೆಲಸ ಮುಗಿಸಿಕೊಂಡು ಬೆಳಗ್ಗೆ ಸರ್ವೀಸ್ ಗೆ ನೀಡಿದ್ದ ನನ್ನ ನೆಚ್ಚಿನ "ಹೀರೊ ಹೊಂಡ ಸಿಬಿಝಡ್ ಎಕ್ಸ್ಟೀಮ್ "ಅನ್ನು ಪಡೆಯಲು ಹೋದೆ. ಹೀರೊ ಹೊಂಡ ಶೋ ರೂಂನಲ್ಲಿ 6 ಗಂಟೆಗೆ ಕೊಡಬೇಕಿದ್ದ ಗಾಡಿಯನ್ನು 6:30ಕ್ಕೆ ಕೊಡುತ್ತೇವೆ ಎಂದರು. ಅದಕ್ಕೆ ದೊಡ್ಡ ಜಗಳವನ್ನೇ ಮಾಡಿ ಕಡೆಗೂ ಗಾಡಿಯನ್ನು ಪಡೆದು, ಇಬ್ಬರು ವ್ಯಕ್ತಿಗಳನ್ನು ಭೇಟಿ ಮಾಡಬೇಕಿತ್ತು. ಅವರಲ್ಲಿ ಒಬ್ಬರನ್ನು ಭೇಟಿ ಮಾಡಿಕೊಂಡು ಮನೆಗೆ ಹೋದಾಗ ಅಪರೂಪವೆಂಬಂತೆ ಕರೆಂಟು ಹೋಗಿತ್ತು. ಆಶ್ಚರ್ಯವೆಂಬಂತೆ ನನ್ನ ತಂಗಿ ನನ್ನ ಅಕ್ಕನ ಮೊಬೈಲಿಗೆ ಅಪರೂಪದ ಸಂದೇಶವೊಂದನ್ನು ಕಳಿಸಿದ್ದಳು. ಚಂದ್ರಶೇಖರ ಕಂಬಾರರರಿಗೆ ಜ್ಞಾನಪೀಠ ಬಂದಿದೆ ಎಂದು. ಆಮೇಲೆ ಅಚ್ಚರಿಗೊಂಡ ನಾನು, ಈ ವಿಷಯವನ್ನು ಖಚಿತಪಡಿಸಿಕೊಳ್ಳಲು ಅವಳಿಗೆ ಮೆಸೇಜಿಸಿದೆ. ಅವಳು ತಾನು ಟಿವಿಯಲ್ಲಿ ಈ ಬಗ್ಗೆ ನೋಡಿದ್ದಾಗಿ ನೂರಕ್ಕೆ ನೂರು ಖಚಿತ ಎಂದು ಹೇಳಿದ್ದೇ ತಡ, "ಕನ್ನಡಿಗರಿಗೆಲ್ಲ  ಹೆಮ್ಮೆಯ ಸುದ್ದಿ. ಕನ್ನಡದ ಶಿಖರಸೂರ್ಯ ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ"  ಎಂದು ನನ್ನೆಲ್ಲ ಗೆಳೆಯರು, ಪ್ರೊಫೆಸರುಗಳಿಗೆ ಮೆಸೇಜಿಸಿದೆ.  ನನ್ನ ಗೆಳೆಯನೊಬ್ಬ ಇದು ಕನ್ನಡಕ್ಕೆ ಒಂಬತ್ತನೆಯದೋ, ಹತ್ತನೆಯದೋ ಎಂದು ಕೇಳಿದ!

ಕೆಲವರು ಅಭಿನಂದನೆಗಳನ್ನು ತಿಳಿಸಿದರು. ಒಬ್ಬರು ಸಮಾಜಶಾಸ್ತ್ರದ ಹಿರಿಯ ಪ್ರೊಫೆಸರ್. ಕರಾವಳಿ ಪ್ರದೇಶದಲ್ಲಿ ಮಕ್ಕಳಿಗಾಗಿ ವಿಶಿಷ್ಟವಾದ ಶಾಲೆಯೊಂದನ್ನು ತೆರೆದು ಕನ್ನಡದಲ್ಲೇ ಶಿಕ್ಷಣ ನೀಡುವ ಮೂಲಕ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವಂತಹವರು. ಅವರು ಮಾತ್ರ "ನನಗಿದು ಹೆಮ್ಮೆಯ ಸುದ್ದಿಯಲ್ಲ. ಕಂಬಾರರು ಒಬ್ಬ ದುಷ್ಟ ಸಾಹಿತಿ. ಕಾರ್ನಾಡರು ಮತ್ತು ಅನಂತಮೂರ್ತಿಯವರ ಸಾಲಿಗೆ ಸಲ್ಲುವ ಗೋಸುಂಬೆ" ಎಂದು ಪ್ರತಿಕ್ರಿಯಿಸಿದರು. ನನಗೆ ಈ ಸಂದೇಶ ನೋಡಿ ಒಂದೇ ಕ್ಷಣಕ್ಕೆ ಅಚ್ಚರಿ ದಿಗ್ಭ್ರಮೆಗಳೆರಡೂ ಆದವು. ಇದು ಕಾರ್ನಾಡರು ಮತ್ತು ಅನಂತಮೂರ್ತಿಯವರ ಮೇಲೆ ಸಾಮಾನ್ಯವಾಗಿ ಕೇಳಿಬರುವ ಟೀಕೆ. ಅದರಲ್ಲೂ ಬಹುಮುಖ್ಯವಾಗಿ ಬಲಪಂಥೀಯರು ಮಾಡುವ ಟೀಕೆ.  ನನಗೆ ಮೊದಲನಿಸಿದ್ದು, ಈ ಪ್ರೊಫೆಸರ್ ಬಹುಶಹ ಬಲಪಂಥೀಯರಿರಬೇಕು. ಹಾಗಾಗಿ. ಹೀಗೆ ಟೀಕೆ ಮಾಡುತ್ತಿದ್ದಾರೆಂದು. ಆದರೆ, ಆನಂತರ ಅವರು ಕಳಿಸಿದ ಸಂದೇಶ:"ವಿಶ್ವಕನ್ನಡ ಸಮ್ಮೇಳನದಲ್ಲಿ ಯಡ್ಡಿಯನ್ನು ಹೇಗೆ ಹೊಗಳಿದರು ನೋಡಿ. ಮರೆತುಹೋಯಿತೇ" ಎಂದು. ಅವರು ಕೊಟ್ಟ ಕಾರಣ ಸರಿಯಾದುದೇ ಆದರೂ, ನನ್ನ ನಿಲುವು ಬೇರೆಯಾಗಿತ್ತು. ಆಗ ತಕ್ಷಣ ಪ್ರತಿಕ್ರಿಯಿಸಿದೆ. "ಹೌದು ಸರ್. ತಾತ್ವಿಕವಾಗಿ ಸರಿ. ಆದರೆ, ನನಗೆ ವ್ಯಕ್ತಿಗಿಂತ ಕನ್ನಡ ದೊಡ್ಡದು. ಆ ಕಾರಣಕ್ಕೆ ಇದು ವಿಷಯ ಅಷ್ಟೆ!" ನನ್ನ ಪ್ರತಿಕ್ರಿಯೆಯಿಂದ ಅವರಿಗೆ ಸಮಾಧಾನವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ಆದರೆ. ನಮ್ಮ ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯಗಳಿರಲಿ, "ಕನ್ನಡ"  ಎಂದಾಕ್ಷಣ ನಾವೆಲ್ಲರೂ ಒಂದಾಗಬೇಕು. ಇಲ್ಲವಾದಲ್ಲಿ, ಕನ್ನಡವನ್ನು ಒಡೆಯಲು ಪ್ರಯತ್ನಿಸುವವರಿಗೆ ನಾವೇ ದಾರಿಮಾಡಿಕೊಟ್ಟಂತಾದೀತು! ಸಧ್ಯಕ್ಕೆ ನಾವು ಮಾಡಬಹುದಾದದ್ದು: ಕನ್ನಡಕ್ಕೆ ಎಂಟನೇ ಜ್ಞಾನಪೀಠ ತಂದುಕೊಟ್ಟ ಕನ್ನಡದ "ಶಿಖರಸೂರ್ಯ " ಡಾ.ಚಂದ್ರಶೇಖರ ಕಂಬಾರರಿಗೆ ಅಭಿನಂದನೆಗಳನ್ನು ಸಲ್ಲಿಸುವದಷ್ಟೆ!

Rating
No votes yet