ಅಮಾವಾಸ್ಯೆಯ ಒಂದು ರಾತ್ರಿ - ಕಥೆ

ಅಮಾವಾಸ್ಯೆಯ ಒಂದು ರಾತ್ರಿ - ಕಥೆ

ಸುತ್ತಲೂ ಕಾರ್ಗತ್ತಲು ಜೋರಾಗಿ ಬೀಸುತ್ತಿರುವ ಗಾಳಿಗೆ ನೆಲದ ಮೇಲೆ ಬಿದ್ದಿರುವ ತರಗೆಲೆಗಳೆಲ್ಲಾ ಹಾರಿಹೋಗುತ್ತಿವೆ. ದೂರದಲ್ಲೆಲ್ಲೋ ನಾಯಿಗಳು ಊಳಿಡುತ್ತಿವೆ. ಊರ ಹೊರಗಿನ ಸ್ಮಶಾನದಲ್ಲಿ ಒಬ್ಬ ಮಂತ್ರವಾದಿ ತನ್ನ ಮುಂದೆ ಒಂದು ಶವವನ್ನು ಇಟ್ಟುಕೊಂಡು ಅದರ ಮುಂದೆ ಒಂದು ಮಂಡಲ ಮಾಡಿ ಅದರಲ್ಲಿ ತಲೆ ಬುರುಡೆಗಳು ಮೂಳೆಗಳು ನಿಂಬೆಹಣ್ಣು ಅರಿಶಿನ ಕುಂಕುಮ ಒಂದು ಬೂದುಕುಂಬಳಕಾಯಿ ಇವೆಲ್ಲವನ್ನೂ ಇಟ್ಟುಕೊಂಡು ಜೋರಾಗಿ ಮಂತ್ರಗಳನ್ನು ಹೇಳುತ್ತಿದ್ದಾನೆ. ಆಚೆ ಸ್ಮಶಾನದ ಗೇಟ್ ಬಳಿ ಒಬ್ಬ ಕಾಲಿಟ್ಟು ಒಳಗೆ ಬರುತ್ತಿದ್ದಾನೆ. ಅವನ ಕಾಲ ಕೆಳಗೆ ತರಗೆಲೆಗಳು ಸಿಕ್ಕು ವಿಚಿತ್ರ ಶಬ್ದ ಮಾಡುತ್ತಿದೆ. ದೂರದ ಮರವೊಂದರಲ್ಲಿ ಗೂಬೆ ಒಂದು ಕುಳಿತು ನೋಡುತ್ತಿದೆ. ಮಂತ್ರವಾದಿ ಮಂತ್ರಗಳನ್ನು ಜೋರಾಗಿ ಉಚ್ಚಾಟಿಸುತ್ತಿದ್ದಾನೆ ಸ್ಮಶಾನದ ಒಳಗೆ ಬಂದ ವ್ಯಕ್ತಿ ಮೆಲ್ಲನೆ ಮಂತ್ರವಾದಿಯ ಬಳಿ ಬರುತ್ತಿದ್ದಾನೆ. ಆ ವ್ಯಕ್ತಿಯ ಮುಖದಲ್ಲಿ ಎಂಥದೋ ಭಯ ಮನೆ ಮಾಡಿದೆ, ಮುಖವೆಲ್ಲ ಬೆವರ ಹನಿಯಿಂದ ತುಂಬಿದೆ. ಇನ್ನೊಂದು ಹೆಜ್ಜೆ ಆ ವ್ಯಕ್ತಿ ಇಡುವಷ್ಟರಲ್ಲಿ ಪಕ್ಕದಲ್ಲಿದ್ದ ಗೋರಿಯ ಮೇಲಿಂದ ಬೆಕ್ಕೊಂದು ಇವನ ಮೈ ಮೇಲೆ ಹಾರಿ ಬಿಟ್ಟು. ಮೊದಲೇ ಬೆವತಿದ್ದ ಆ ವ್ಯಕ್ತಿ ಆ ಅನಿರೀಕ್ಷಿತ ಘಟನೆಯಿಂದ ಬೆಚ್ಚಿ ಬಿದ್ದ. ಹಾಗೆಯೇ ಸುಧಾರಿಸಿಕೊಂಡು ಇನ್ನೊಂದೆರಡು ಹೆಜ್ಜೆ ಇಡುವಷ್ಟರಲ್ಲಿ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದರೆಂದು ಅನಿಸಿ ಹಿಂತಿರುಗಿ ನೋಡಿದ ಅಲ್ಲಿ ಯಾರೂ ಕಾಣಲಿಲ್ಲ. ಮತ್ತೆ ಮುಂದೆ ಹೆಜ್ಜೆ ಇಡುತ್ತ ಸಾಗುತ್ತಿದ್ದ. ಅವನ ಹಿಂದೆ ಇದ್ದ ಗೋರಿಗಳಿಂದ ಒಂದೊಂದೇ ಕೈಗಳು ಆಚೆ ಬರತೊಡಗಿದವು ಆ ವ್ಯಕ್ತಿ ಮುಂದೆ ಸಾಗುತ್ತಿದ್ದಾನೆ ಎಲ್ಲ ಗೋರಿಗಳಿಂದ ಪ್ರೇತಗಳು ಎದ್ದು ಆ ವ್ಯಕ್ತಿಯನ್ನು ಹಿಂಬಾಲಿಸುತ್ತಿವೆ, ಅದ್ಯಾವುದು ಅವನ ಅರಿವಿಗೆ ಬರುತ್ತಿಲ್ಲ ಸೀದಾ ಆ ಮಾಂತ್ರಿಕನ ಬಳಿ ಸಾಗುತ್ತಿದ್ದಾನೆ ಇನ್ನೇನು ಮಾಂತ್ರಿಕನಿಗೆ ಇವನಿಗೆ ಕೇವಲ ಹತ್ತು ಹೆಜ್ಜೆಗಳ ಅಂತರವಿದೆ ಎನ್ನುವಷ್ಟರಲ್ಲಿ ಹಿಂತಿರುಗಿ ನೋಡಿದ ಸುಮಾರು ನೂರು ಪ್ರೇತಗಳು ಒಟ್ಟಿಗೆ ಇವನನ್ನು ಎಳೆದು ಅನಾಮತ್ತಾಗಿ ಹರಿದು ತಿನ್ನುತ್ತಿದ್ದರೆ ಅಷ್ಟರಲ್ಲಿ ಕರೆಂಟ್ ಹೋಯಿತು. ಟಿವಿಯಲ್ಲಿ ದೆವ್ವದ ಸಿನಿಮಾ ನೋಡುತ್ತಿದ್ದ ಮಹೇಶನಿಗೆ ಕೆ ಇ ಬಿ ಯವರ ಮೇಲೆ ಕೆಟ್ಟ ಕೋಪ ಬಂದು ಥೂ ಒಳ್ಳೆ ಸಮಯದಲ್ಲಿ ಕರೆಂಟ್ ತೆಗೆಯುತ್ತಾರೆ ಇವರು. ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿತ್ತು ಸಿನೆಮಾ ಛೆ ಎಂದು ಮಲಗಿದ.

ಮಹೇಶ ಮತ್ತು ನಾನು ಚಡ್ಡಿ ಅಲ್ಲಲ್ಲ ಚಡ್ಡಿ ಹಾಕುವ ಮುಂಚೆಯಿಂದಲೂ ಸ್ನೇಹಿತರು ಒಟ್ಟಿಗೆ ಆಡಿ ಒಟ್ಟಿಗೆ ಒಂದೇ ಶಾಲೆ ಒಂದೇ ಬೆಂಚು, ಅಲ್ಲಿಂದ ಮುಂದೆ ಒಂದೇ ಕಾಲೇಜ್ ಮುಂದೆ ಒಂದೇ ಕಂಪನಿ ಯಲ್ಲಿ ಪಕ್ಕ ಪಕ್ಕದಲ್ಲೇ ಕೆಲಸ. ನಮ್ಮಿಬ್ಬರ ನಡುವೆ ಯಾವುದೇ ರಹಸ್ಯ ವಿಷಯಗಳಿರುತ್ತಿರಲಿಲ್ಲ ಕೆಲವು ಬಾರಿ ಮನೆಯಲ್ಲಿ ಹೇಳದ ವಿಷಯಗಳನ್ನು ನಾವಿಬ್ಬರೂ ಹಂಚಿಕೊಳ್ಳುತ್ತಿದ್ದವು. ಆಚೆ ಹೋಗಬೇಕಾದರೂ ಒಟ್ಟಿಗೆ ಹೋಗುತ್ತಿದ್ದೆವು. ಒಂದು ವಿಧದಲ್ಲಿ ಹೇಳಬೇಕೆಂದರೆ ಅವನ ಬಿಟ್ಟು ನಾನು, ನನ್ನ ಬಿಟ್ಟು ಅವನು ಇರುತ್ತಿರಲಿಲ್ಲ. ಆದರೆ ನಮ್ಮಿಬ್ಬರ ನಡುವೆ ಒಂದು ವಿಷಯಕ್ಕೆ ಮಾತ್ರ ಯಾವಾಗಲೂ ಜಗಳ ನಡೆಯುತ್ತಿತ್ತು. ಅದೇನೆಂದರೆ ನನಗೆ ದೇವರು, ದೆವ್ವ ಎರಡರಲ್ಲೂ ನಂಬಿಕೆ ಇತ್ತು. ಅವನಿಗೆ ಎರಡರಲ್ಲೂ ನಂಬಿಕೆ ಇರಲಿಲ್ಲ. ಅದೆಲ್ಲ ಬರೀ ಮೂಡ ನಂಬಿಕೆ ಎನ್ನುತ್ತಿದ್ದನು. ಎಲ್ಲಾದರೂ ದೇವಸ್ಥಾನಕ್ಕೆ ಹೋಗೋಣ ಎಂದರೆ ಜೊತೆಯಲ್ಲಿ ಬರುತ್ತಿದ್ದನು ಆದರೆ ಒಳಗೆ ಬರುತ್ತಿರಲಿಲ್ಲ. ಇವೆಲ್ಲ ಮನುಷ್ಯರು ಸೃಷ್ಟಿಸಿಕೊಂಡಿರುವುದು ಅಷ್ಟೇ. ನಮ್ಮ ಮಾನಸಿಕ ಸ್ಥೈರ್ಯದ ಮೇಲೆ ಅವಲಂಬಿಸಿರುತ್ತದೆ ಅಷ್ಟೇ ಎನ್ನುತ್ತಿದ್ದನು. ಇನ್ನು ದೆವ್ವದ ವಿಷಯ ಬಂದರೆ ಜೋರಾಗಿ ನಕ್ಕುಬಿಡುತ್ತಿದ್ದನು. ಎಷ್ಟೋ ಸಲ ಸ್ನೇಹಿತರ ಜೊತೆ ಸವಾಲು ಹಾಕಿ ಒಬ್ಬೊಬ್ಬನೇ ಸ್ಮಶಾನಕ್ಕೆ ರಾತ್ರಿಯ ಹೊತ್ತು ಹೋಗಿ ಬರುತ್ತಿದ್ದನು. ಒಂದು ಸಲ ಅಮಾವಾಸ್ಯೆಯ ದಿನ ಒಂದಿಡೀ ದಿನ ಸ್ಮಶಾನದಲ್ಲಿ ಮಲಗಿ ಬರುತ್ತಿದ್ದನು. ಅದನ್ನು ನಂಬಿಸಲು ತನ್ನ ಜೊತೆಯಲ್ಲಿ ಒಂದು ಹ್ಯಾಂಡಿ ಕ್ಯಾಮ್ ಅನ್ನು ತೆಗೆದುಕೊಂಡು ಹೋಗಿ ಅಲ್ಲಿರುವ ಅಷ್ಟು ಹೊತ್ತು ಅದನ್ನು ಚಿತ್ರೀಕರಿಸಿ ತರುತ್ತಿದ್ದನು. ಅಷ್ಟೊಂದು ಧೈರ್ಯ ಅವನಿಗೆ. ಅವನಿಗೆ ದೆವ್ವದ ಸಿನೆಮಾಗಳನ್ನು ರಾತ್ರಿ ಹೊತ್ತು ನೋಡುವ ಖಯಾಲಿ. ನೀನು ದೆವ್ವಗಳನ್ನು ನಂಬುವುದಿಲ್ಲವಲ್ಲ ಮತ್ತೆ ಸಿನೆಮಾ ಯಾಕೆ ನೋಡುತ್ತೀಯ ಎಂದರೆ ಅಲ್ಲ ನೀವೆಲ್ಲ ದೆವ್ವದ ಸಿನೆಮಾ ನೋಡಿದರೆ ಭಯ ಆಗತ್ತೆ ಎನ್ನುತ್ತೀರಲ್ಲ ಅದಕ್ಕೆ ನೋಡುತ್ತೀನಿ ಆದರೆ ಇದುವರೆಗೂ ನನಗೆ ಯಾವುದೇ ಸಿನೆಮಾ ನೋಡಿ ಭಯ ಆಗಿಲ್ಲ. ನೀವೆಲ್ಲ ಆ ಸಿನೆಮಾಗಳಲ್ಲಿ ಕೊಡುವ ಸೌಂಡ್ ಎಫೆಕ್ಟ್ ಗೆ ಭಯ ಪಡುತ್ತೀರ ಅಷ್ಟೇ ಹೊರತು ಅಲ್ಲಿ ನಿಜವಾಗಿಯೂ ಭಯ ಪಡುವಂಥದ್ದು ಏನೂ ಇರುವುದಿಲ್ಲ ಎನ್ನುತ್ತಿದ್ದನು. ಅವನ ವಿಷಯ ಅವರ ಮನೆಯವರಿಗೂ ತಿಳಿದಿತ್ತು. ಆದರೆ ಎಷ್ಟು ಹೇಳಿದರೂ ಅವನು ಬದಲಾಗುವುದಿಲ್ಲ ಎಂದು ತಿಳಿದು ಸುಮ್ಮನಾಗಿದ್ದರು.

ಇನ್ನೊಮ್ಮೆ ನಾವಿಬ್ಬರೂ ವಾರಾಂತ್ಯದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಬಂದು ಮನೆಯ ಬಳಿ ಹೋಗುತ್ತಿದ್ದೆವು. ನಮ್ಮಿಬ್ಬರ ಮನೆ ಇರುವುದು ಮೂರು ರಸ್ತೆ ಕೂಡುವ ಜಾಗದಲ್ಲಿ ಅಕ್ಕಪಕ್ಕದ ಮನೆ. ಇನ್ನೇನು ಮನೆ ಬಳಿ ಹೋಗುತ್ತಿದ್ದಾಗ ನಾನು ಇದ್ದಕ್ಕಿದ್ದಂತೆ ಅವನ ಕೈ ಹಿಡಿದು ಪಕ್ಕಕ್ಕೆ ಎಳೆದು ಈ ಕಡೆ ಕರೆದೆ. ಅದಕ್ಕವನು ಯಾಕೋ ಏನಾಯಿತು ಎಂದು ಕೇಳಿದ್ದಕ್ಕೆ ಅಲ್ಲಿ ನೋಡು ಯಾರೋ ಮಂತ್ರ ಮಾಡಿಸಿ ಹಾಕಿದ್ದರೆ. ಅದನ್ನು ತುಳಿದರೆ ಒಳ್ಳೆಯದಲ್ಲ ಎಂದೇ. ಅಲ್ಲಿ ಒಂದು ಮೊಟ್ಟೆ ಒಡೆದು ಅದರ ಸುತ್ತ ಅರಿಸಿನ ಕುಂಕುಮ ಹಾಕಿದ್ದರು. ನನ್ನ ಮಾತು ಕೇಳಿ ಅವನು ಜೋರಾಗಿ ನಕ್ಕು ಅದನ್ನೆಲ್ಲ ಕಾಲಿಂದ ಒದ್ದುಬಿಟ್ಟ. ಈಗ ಏನಾಗತ್ತೋ ಆಗಲಿ ನೋಡೋಣ ಎಂದ. ಅದಾದ ಮಾರನೆ ದಿನದಿಂದ ಮೂರು ದಿನ ಜ್ವರ ಎಂದು ಮಲಗಿಬಿಟ್ಟ . ನಾನು ಅವನ ಮನೆಗೆ ಹೋಗಿ ಅವನಿಗೆ ನೀನು ಅದನ್ನು ತುಳಿದಿದ್ದಕ್ಕೆ ಹೀಗೆ ಆಗಿದ್ದು ಎಂದಿದ್ದಕ್ಕೆ ಲೋ ನಾವು ಊರಿನಲ್ಲಿ ಸಿಕ್ಕ ಸಿಕ್ಕ ನೀರೆಲ್ಲ ಕುಡಿದೆವಲ್ಲ ಅದರ ಪ್ರಭಾವ ಅಷ್ಟೇ ಎಂದು ನಕ್ಕು ಬಿಟ್ಟ. ನಾನು ನಿನ್ನ ಜೊತೆ ಕುಡಿದೆನಲ್ಲ ಮತ್ತೆ ನನಗ್ಯಾಕೆ ಆಗಿಲ್ಲ ಎಂದು ಕೇಳಿದ್ದಕ್ಕೆ ನನಗೇನು ಗೊತ್ತು ಎಂದು ಸುಮ್ಮನಾಗಿಬಿಟ್ಟ.

ಅದಾಗಿ ಒಂದೆರಡು ತಿಂಗಳು ಕಳೆದಿರಬಹುದು ಒಂದು ದಿನ ಆಫೀಸಿನಿಂದ ಮನೆಗೆ ಹೋಗುತ್ತಿದ್ದಾಗ ಈ ಬಾರಿ ವಾರಾಂತ್ಯ ಮೂರು ದಿನ ರಜೆ ಇದೆ. ನನ್ನ ಜೊತೆ ಕೇರಳಕ್ಕೆ ಬರುತ್ತೀಯ ಎಂದ. ಏನಪ್ಪಾ ಈ ಬಾರಿ ಅಷ್ಟು ದೂರ ಎಂದೆ. ಏನಿಲ್ಲ ಸುಮ್ಮನೆ ಕೇರಳ ಎಂದರೆ ಪೂರ್ತಿ ಕೇರಳ ಅಲ್ಲ. ಕರ್ನಾಟಕ - ಕೇರಳ ಗಡಿಯಲ್ಲಿ ಒಂದು ಹಳ್ಳಿ ಇದೆ. ಅಲ್ಲಿ ಒಂದು ಪುರಾತನ ಕೋಟೆ ಇದೆಯಂತೆ ಅದನ್ನು ನೋಡಿಕೊಂಡು ಹಾಗೆಯೇ ಕೇರಳ ನೂ ನೋಡಿಕೊಂಡು ಬರೋಣ. ನಾನು ಆಗಲೇ ಎಲ್ಲ ಸಿದ್ಧ ಮಾಡಿದ್ದೇನೆ ಅಂದರೆ ಅಲ್ಲಿ ಉಳಿದುಕೊಳ್ಳಲು ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಶುಕ್ರವಾರ ರಾತ್ರಿ ಹೊರಡುವುದು ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟ. ಸರಿ ನದಿ ಹೊರಡೋಣ ಎಂದು ನಾನು ಹಸಿರು ನಿಶಾನೆ ತೋರಿಸಿದೆ.

ಶುಕ್ರವಾರ ರಾತ್ರಿ ಇಲ್ಲಿಂದ ಹೊರಟು ಅಲ್ಲಿಗೆ ಸೇರುವಷ್ಟರಲ್ಲಿ ಬೆಳಗಿನ ಜಾವ ಆಗಿತ್ತು. ಸುತ್ತಲೂ ಹಸಿರು ಮಳೆ ಹನಿ ಜಿನುಗುತ್ತಿತ್ತು. ಅದ್ಭುತ ವಾತಾವರಣ ಇತ್ತು. ಬಸ್ ಇಳಿದು ಅಲ್ಲಿಂದ ಹಳ್ಳಿಗೆ ಖಾಸಗಿ ಜೀಪಿನಲ್ಲಿ ತೆರಳಿ ಅಲ್ಲಿ ಅರಣ್ಯಾಧಿಕಾರಿಗಳ ತಂಗುದಾಣಕ್ಕೆ ಬರುವಷ್ಟರಲ್ಲಿ ಬೆಳಿಗ್ಗೆ ಎಂಟಾಗಿತ್ತು. ನಾವು ಉಳಿದುಕೊಳ್ಳುವ ಸ್ಥಳ ಆ ತಂಗುದಾಣ ವಾಗಿತ್ತು. ಅಲ್ಲಿ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿ ರೂಮಿನ ಕೀ ಪಡೆದುಕೊಂಡು ರೂಮಿಗೆ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ತಿಂಡಿ ತಿನ್ನಲು ಆಚೆ ಬಂದೆವು. ಅಲ್ಲೆಲ್ಲೂ ಹೋಟೆಲ್ ಇರುವಿನ ಬಗ್ಗೆ ಸುಳಿವೇ ಇರಲಿಲ್ಲ. ಅಲ್ಲಿ ಅಧಿಕಾರಿಯ ಬಳಿ ವಿಚಾರಿಸಿದಾಗ ಆತನೇ ಜೀಪ್ ಕಳುಹಿಸಿಕೊಟ್ಟು ಅಲ್ಲಿಗೆ ತಿಂಡಿ ತರೆಸಿದ. ಅವನಿಗೆ ಧನ್ಯವಾದಗಳನ್ನು ತಿಳಿಸಿ ಮತ್ತೆ ರೂಮಿಗೆ ಬಂದು ತಿಂಡಿ ತಿಂದು ಮತ್ತೆ ಆಚೆ ಬಂದು ಕೋಟೆಯ ಬಗ್ಗೆ ಮಾಹಿತಿ ಪಡೆದುಕೊಂಡು ಅಲ್ಲಿಗೆ ಹೋದೆವು. ನಿಜಕ್ಕೂ ಕೋಟೆ ಅದ್ಭುತವಾಗಿತ್ತು. ಬಹಳ ಪುರಾತನವಾದದ್ದು. ಎಷ್ಟು ನೋಡಿದರೂ ನೋಡಲೆಬೇಕೆನ್ನಿಸುವ ಹಾಗಿತ್ತು.  ಸುಮಾರು ಹೊತ್ತು ಅಲ್ಲಿ ಕಳೆದು ಮತ್ತೆ ರೂಮಿಗೆ ಬರುವಷ್ಟರಲ್ಲಿ ಸಂಜೆ ಏಳಾಗಿತ್ತು. ಬರುವಾಗಲೇ ಊಟ ಪಾರ್ಸೆಲ್ ಮಾಡಿಕೊಂಡು ಬಂದೆವು. ಊಟ ಮಾಡುತ್ತಾ ಮಹೇಶ ಮಾತು ಶುರು ಮಾಡಿದ. ರವಿ ನಾವು ಇಲ್ಲಿಗೆ ಬಂದದ್ದು ಏನಕ್ಕೆ ಹೇಳು ಎಂದ. ಇದೇನೋ ವಿಚಿತ್ರವಾಗಿ ಹೇಳುತ್ತಿದ್ದೀಯ ನೀನೆ ಅಲ್ಲವಾ ಹೇಳಿದ್ದು ಕೋಟೆ ನೋಡಿಕೊಂಡು ಕೇರಳ ನೋಡಿಕೊಂಡು ಹೋಗೋಣ ಎಂದು ಎಂದಿದ್ದಕ್ಕೆ. ಅದು ಸರಿ ಆದರೆ ಅಸಲಿ ವಿಷಯ ಅದಲ್ಲ. ನಾನು ಮೊನ್ನೆ ಟಿವಿ ನೋಡುತ್ತಿದ್ದಾಗ ಅದರಲ್ಲಿ ಒಂದು ಸಂಗತಿ ತೋರಿಸಿದರು. ಈ ಹಳ್ಳಿಯ ಪಕ್ಕದಲ್ಲಿರುವ ಸ್ಮಶಾನದಲ್ಲಿ ಬಹಳಷ್ಟು ದೆವ್ವಗಳಿವೆಯಂತೆ ಅವುಗಳು ಅವಾಗವಾಗ ಕಾಣಿಸಿಕೊಳ್ಳುತ್ತವೆ ಅಂತೆ. ಇಲ್ಲಿನ ಸುಮಾರು ಜನ ಅದನ್ನು ನೋಡಿದ್ದಾರಂತೆ. ಅದಕ್ಕೆ ನಾನೂ ಸಹ ಒಮ್ಮೆ ನೋಡೋಣ ಎಂದು ಇಲ್ಲಿಗೆ ಬಂದದ್ದು. ಅಲ್ಲೇ ನಿನಗೆ ಹೇಳಿದ್ದರೆ ನೀನೆಲ್ಲಿ ಬರುತ್ತಿದ್ದೆ. ಅದಕ್ಕೆ ಹೇಳಲಿಲ್ಲ. ಇಂದು ರಾತ್ರಿಯೇ ಅಲ್ಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಅವನು ಹೇಳುತ್ತಿದ್ದಂತೆ ನನಗೆ ನಖಶಿಖಾಂತ ಕೋಪ ಉಕ್ಕಿ ಅವನ ಮೇಲೆ ಸಿಕ್ಕಾಪಟ್ಟೆ ಕೂಗಾಡಿದೆ. ಆದರೂ ಏನೂ ಪ್ರಯೋಜನವಾಗಲಿಲ್ಲ. ನೀನು ಇಲ್ಲೇ ಮಲಗಿರು ನಾನು ಹೋಗಿ ಆ ದೆವ್ವಗಳನ್ನು ನನ್ನ ಕ್ಯಾಮೆರಾದಲ್ಲಿ ಬಂಧಿಸಿ ಬರುತ್ತೇನೆ ಎಂದು ವಿಚಿತ್ರವಾಗಿ ನಕ್ಕ. ಮಹೇಶ ಇಂದು ಅಮಾವಾಸ್ಯೆ ಬೇರೆ ಬೇಡ ಕಣೋ ನಮಗೆ ತಿಳಿಯದ ಶಕ್ತಿಗಳ ಜೊತೆ ಆಟ ಬೇಡ ಎಂದು ಎಷ್ಟೇ ಹೇಳಿದರೂ, ಇಂದು ಅಮಾವಾಸ್ಯೆ ಅಂತಲೇ ಇಲ್ಲಿಗೆ ಬಂದದ್ದು ಎಂದು ಹೇಳಿ ಹೊರಟೆ ಬಿಟ್ಟ. ಹೇಗೆ ಹೋಗುತ್ತೀಯ ಅಲ್ಲಿಗೆ ಎಂದಿದ್ದಕ್ಕೆ ನಡೆದುಕೊಂಡು ಹೋಗುತ್ತೇನೆ ಅಪ್ಪಿ ತಪ್ಪಿಯೂ ಅರಣ್ಯ ಅಧಿಕಾರಿಗಳಿಗೆ ಹೇಳಬೇಡ. ನಾನು ಆದಷ್ಟು ಬೇಗ ಬಂದು ಬಿಡುತ್ತೇನೆ ಎಂದು ಹೊರಟುಬಿಟ್ಟ.

ಅವನು ಹೋಗಿ ಸುಮಾರು ಎರಡು ಗಂಟೆಗಳಾಗಿರಬಹುದು ನನಗಿನ್ನೂ ನಿದ್ದೆ ಹತ್ತಿರಲಿಲ್ಲ. ಇನ್ನು ಎಷ್ಟು ಹೊತ್ತಾಗತ್ತೋ ಅವನು ಬರುವುದು ಎಂದು ನನ್ನ ಪಾಡಿಗೆ ನಿದ್ದೆಗೆ ಹೋಗಿಬಿಟ್ಟೆ.ಅದ್ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ ಕಣ್ಣು ಬಿಟ್ಟಾಗ ಕಿಟಕಿಯಿಂದ ಸೂರ್ಯನ ಕಿರಣಗಳು ಕಣ್ಣನ್ನು ಚುಚ್ಚುತ್ತಿದ್ದವು. ತಕ್ಷಣ ಮಹೇಶನ ನೆನಪು ಬಂತು ಅರೆ ಇವನು ಇನ್ನು ಬಂದಿಲ್ಲವಲ್ಲ ಎಲ್ಲಿ ಹೋದನೋ ಏನೋ ಎಂದುಕೊಂಡು ಆಚೆ ಬಂದೆ. ಅರಣ್ಯ ಅಧಿಕಾರಿಗಳ ಕಚೇರಿಗೆ ಹೋದರೆ ಅಲ್ಲಿ ಒಬ್ಬ ಆಳು ಮಾತ್ರ ಇದ್ದ ಎಲ್ಲಪ್ಪ ಆಫೀಸೆರ್ ಎಂದು ಕೇಳಿದ್ದಕ್ಕೆ ಸ್ವಾಮಿ ಇಲ್ಲೇ ಪಕ್ಕದ ಹಳ್ಳಿಯ ಸ್ಮಶಾನದ ಹತ್ತಿರ ಯಾವುದೋ ಹೆಣ ಬಿದ್ದಿದೆಯಂತೆ ಅಲ್ಲಿಗೆ ಹೋಗಿದ್ದಾರೆ ಎಂದ. ನನಗೆ ನಿಂತಿದ್ದ ನೆಲ ಕುಸಿದಂತಾಯಿತು. ಕೂಡಲೇ ಅಲ್ಲಿಗೆ ಹೋಗುವುದು ಹೇಗೆ ಎಂದು ಕೇಳಿಕೊಂಡು ಒಂದೇ ಉಸಿರಿನಲ್ಲಿ ಅಲ್ಲಿಗೆ ಓಟ ಕಿತ್ತೆ. ಎಷ್ಟು ಜೋರಾಗಿ ಓದಿದರೂ ಮುಂದೆಯೇ ಹೋಗುತ್ತಿಲ್ಲವೆನಿಸುತ್ತಿತ್ತು. ಇನ್ನೂ ಜೋರಾಗಿ ಓಡಲು ಶುರು ಮಾಡಿದೆ. ಅಂತೂ ಇಂತೂ ಸತತ ಓಟದಿಂದ ಸ್ಮಶಾನದ ಬಳಿ ಬಂದೆ. ಅಷ್ಟರಲ್ಲೇ ಅಲ್ಲಿ ಜನ ಜಮಾಯಿಸಿದ್ದರು. ದಾರಿ ಮಾಡಿಕೊಂಡು ಒಳಗೆ ಹೋದೆ. ಅಲ್ಲಿ ಮಧ್ಯದಲ್ಲಿ ಒಂದು ಶವ ಇದೆ ಅದರ ಮೇಲೊಂದು ಬಿಳಿ ಬಟ್ಟೆ ಹೊಡೆಸಿದ್ದರು. ಪಕ್ಕದಲ್ಲಿ ಮೂರ್ನಾಲ್ಕು ಜನ ಪೋಲಿಸ್ ಅಧಿಕಾರಿಗಳು ನಿಂತಿದ್ದರು. ಒಬ್ಬರ ಕೈಯಲ್ಲಿ ಹ್ಯಾಂಡಿ ಕ್ಯಾಮ್ ಇತ್ತು. ಅದು ಮಹೇಶನದೆ ಇಂದು ಖಚಿತವಾಗಿತ್ತು. ನನಗೆ ದುಖ ತಡೆಯಲಾಗದೆ ಅಲ್ಲೇ ಒಂದು ಕಡೆ ಕುಳಿತು ಜೋರಾಗಿ ಅಳಲು ಶುರುಮಾಡಿದೆ. ಅಕ್ಕಪಕ್ಕದಲ್ಲಿದ್ದವರೆಲ್ಲ ನನ್ನನ್ನೇ ನೋಡುತ್ತಿದ್ದರು. ನಾನು ಪರಿಸ್ಥಿತಿಯ ಅರ್ಥ ಮಾಡಿಕೊಂಡು ನಿಧಾನಕ್ಕೆ ಎದ್ದು ಆ ಶವದ ಬಳಿ ಬಂದು ಅಲ್ಲಿ ನಿಂತಿದ್ದ ಪೋಲಿಸ್ ಒಬ್ಬನಿಗೆ ಮುಖ ನೋಡಬೇಕು ಬಟ್ಟೆ ತೆಗೆಯುತ್ತೀರ ಎಂದು ಕೇಳಿದ್ದಕ್ಕೆ ಆತ ಇವರು ನಿಮ್ಮ ಕಡೆಯವರ ಎಂದ ನಾನು ಅಳುತ್ತಾ ಹೌದು ಎಂದೆ ಆತ ಪಕ್ಕದಲ್ಲಿದ್ದ ಪೇದೆಗೆ ಬಟ್ಟೆ ಸರಿಸಲು ಹೇಳಿದ ಪೇದೆ ಬಟ್ಟೆ ತೆಗೆಯುತ್ತಾನೆ ತಕ್ಷಣ ನನ್ನ ಹೆಗಲಿನ ಮೇಲೆ ಕೈಯೊಂದು ಬಿತ್ತು ಹಿಂದಕ್ಕೆ ತಿರುಗಿದರೆ ಮಹೇಶ ನಿಂತಿದ್ದಾನೆ. ಮುಂದೆ ನೋಡಿದರೆ ಯಾವುದೋ ಹೆಣ್ಣಿನ ಶವ. ಪೋಲಿಸ್ ಕೇಳುತ್ತಲೇ ಇದ್ದಾನೆ ಇವರು ನಿಮ್ಮ ಹೆಂಡತಿಯ, ಅಕ್ಕನ, ತಾಯಿಯ ಎಂದು...ನನಗೆ ಒಂದು ಮಾತುಗಳು ಕೇಳಿಸುತ್ತಲೇ ಇಲ್ಲ. ನನಗೆ ಏನಾಗುತ್ತಿದೆ ಎಂದು ಗೊತ್ತೇ ಆಗುತ್ತಿಲ್ಲ. ಕೂಡಲೇ ಮಹೇಶನೆ ಪೋಲಿಸ್ ಅಧಿಕಾರಿಗೆ ಉತ್ತರಿಸಿ ಅವರ ಬಳಿ ಇದ್ದ ಹ್ಯಾಂಡಿ ಕ್ಯಾಮ್ ತೆಗೆದುಕೊಂಡು ಅದರಲ್ಲಿದ್ದ ಕ್ಯಾಸೆಟ್ ಅನ್ನು ಅವರ ಕೈಗೆ ಕೊಟ್ಟು ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಬಂದ.

ನಾನು ಏನೋ ಮಹೇಶ ಇದೆಲ್ಲ ಎಂದಿದ್ದಕ್ಕೆ ಮೊದಲು ನಡಿ ರೂಂ ಗೆ ಹೋಗೋಣ ಎಂದು ಅರಣ್ಯ ಅಧಿಕಾರಿಗಳ ಜೊತೆ ಅವರದೇ ಜೀಪಿನಲ್ಲಿ ರೂಮಿಗೆ ಬಂದೆವು. ರೂಮಿಗೆ ಬಂದ ಮೇಲೆ ಮಹೇಶ ಶುರುಮಾಡಿದ. ಲೋ ರಾತ್ರಿ ಇಲ್ಲಿಂದ ಸೀದಾ ಸ್ಮಶಾನದ ಬಳಿ ಹೋದೆ. ಕ್ಯಾಮೆರ ಆನ್ ಮಾಡಿಕೊಂಡು ನಿಧಾನಕ್ಕೆ ಸ್ಮಶಾನದಲ್ಲೆಲ್ಲ ಹುಡುಕಾಡಿದೆ ಏನೂ ಕಾಣಿಸಲಿಲ್ಲ. ಇನ್ನೇನು ಆಚೆ ಬರಬೇಕು ಎನ್ನುವಷ್ಟರಲ್ಲಿ ಸ್ಮಾಶಾನದ ಮೂಲೆಯಲ್ಲಿ ಬೆಂಕಿ ಉರಿಯುತ್ತಿರುವುದು ಕಂಡಿತು. ಕುತೂಹಲದಿಂದ ಮೆಲ್ಲನೆ ಹತ್ತಿರ ಹೋದೆ ಅಲ್ಲಿ ಒಂದಿಬ್ಬರು ಗಂಡಸರು ಒಂದು ಹೆಂಗಸನ್ನು ಹಿಡಿದುಕೊಂಡು ನಿಂತಿದ್ದರು. ಆ ಹೆಂಗಸು ನಿಂತಿದ್ದ ರೀತಿ ನೋಡಿದರೆ ಆಕೆ ಆಗಲೇ ಸತ್ತು ಹೋಗಿದ್ದಾಳೆ ಎಂದು ಗೊತ್ತಾಯಿತು. ಕೆಳಗೆ ಒಬ್ಬ ಮಂತ್ರವಾದಿ ಕೂತು ಏನೇನೋ ಮಂತ್ರಗಳನ್ನು ಹೇಳುತ್ತಿದ್ದ. ನಾನು ಇದೆಲ್ಲವನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಮಾಡುತ್ತಿದ್ದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ನನ್ನ ಕಾಲಿಗೆ ಮುಳ್ಲೊಂದು ಚುಚ್ಚಿ ಸ್ವಲ್ಪ ಕಿರುಚಿದೆ. ಆ ಶಬ್ದ ಅವರಿಗೆ ಕೆಳಿಸಿಬಿಟ್ಟಿತು ಕೂಡಲೇ ಆ ಹೆಣ್ಣನ್ನು ಅಲ್ಲೇ ಕೆಳಗೆ ಮಲಗಿಸಿ ನನ್ನನ್ನು ಹಿಡಿಯಲು ಓಡಿ ಬಂದರು ನಾನು ದಿಕ್ಕಾಪಾಲಾಗಿ ಓಡುತ್ತಾ ಸೀದಾ ಹಳ್ಳಿಗೆ ಬಂದು ಓಡುತ್ತಾ ಓಡುತ್ತಾ ಇದ್ದಾಗ ಪೋಲಿಸ್ ಸ್ಟೇಷನ್ ಕಂಡಿತು. ತಕ್ಷಣ ಅಲ್ಲಿ ಹೋದೆ ನಾನು ಅಲ್ಲಿಗೆ ಹೋಗಿದ್ದನ್ನು ನೋಡಿ ಅವರಿಬ್ಬರೂ ಓಡಿ ಹೋದರು. ಅಲ್ಲಿ ನಡೆದ ವಿಷಯವನ್ನೆಲ್ಲ ತಿಳಿಸಿ ಅವರನ್ನು ಇಲ್ಲಿಗೆ ಕರೆದುಕೊಂಡು ಬರುವಷ್ಟರಲ್ಲಿ ಬೆಳಗಿನ ಜಾವ ಆಗಿತ್ತು. ಇವಿಷ್ಟು ನಡೆದ ವಿಷಯ ಎಂದು ಹೇಳಿ ನನಗೆ ನಿದ್ದೆ ಬರುತ್ತಿದೆ ಮೊದಲು ನಿದ್ದೆ ಮಾಡಬೇಕು ಎಂದು ಹೇಳಿ ಆರಾಮಾಗಿ ನಿದ್ರೆಗೆ ಜಾರಿಬಿಟ್ಟ

 

ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು,ಹೆಸರುಗಳು ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿ ಅಥವಾ ವಿಷಯಕ್ಕೆ ಸಂಭಂಧಿಸಿದ್ದಲ್ಲ.
Rating
No votes yet

Comments