ಬೀchi ಜೋಕುಗಳು - ೫: ಬಿ.ಟಿ.ಎಸ್. ಬಸ್ಸು

ಬೀchi ಜೋಕುಗಳು - ೫: ಬಿ.ಟಿ.ಎಸ್. ಬಸ್ಸು

                                                                    ಶಾಪ ವಿಮೋಚನೆ....ಯಾವಾಗ?

    ಒಮ್ಮೆ ದೂರ್ವಾಸ ಮುನಿಗಳು ನಮ್ಮ ಸುಂದರ ಬೆಂದಕಾಳೂರನ್ನು ಕಣ್ಣಾರೆ ಕಂಡು ಅದರ ಆನಂದವನ್ನು ಸವಿಯ ಬೇಕೆಂದು ಭೂಲೋಕಕ್ಕೆ ಬಂದರು. ಇಲ್ಲಿಯ ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುತ್ತಾ ಅಲ್ಲಿಯ ಗಗನ ಚುಂಬಿ ಕಟ್ಟಡಗಳನ್ನು ತಲೆಯೆತ್ತಿ ನೋಡುತ್ತಾ ಮುಂದೆ ಸಾಗುತ್ತಿದ್ದರು. ಅಷ್ಟರಲ್ಲಿ ಎಲ್ಲಿಂದಲೋ ಬ್ರೇಕಿಲ್ಲದ ಸೈಕಲ್ಲಿನಲ್ಲಿ ಬಂದ ಪಡ್ಡೆ ಹುಡುಗನೊಬ್ಬ ಇವರಿಗೆ ಡಿಕ್ಕಿ ಹೊಡೆದು ಕೆಡವಿಬಿಟ್ಟ. ಮೊದಲೇ ಹೇಳಿ ಕೇಳಿ ದೂರ್ವಾಸ ಮುನಿಗಳು, ಇನ್ನು ಕೋಪ ಬಾರದೆ ಇರುತ್ತದೆಯೇ? ಥಟ್ಟನೆ ಅವನಿಗೆ, ಈಗಿಂದೀಗಲೇ ಬ್ರಹ್ಮ ಪಿಶಾಚಿಯಾಗಿ ಸಂಪಿಗೆ ರಸ್ತೆಯಲ್ಲಿರುವ ಹುಣಿಸೇಮರದ ಮೇಲೆ ನೇತಾಡೆಂದು ಶಾಪವಿತ್ತರು. ಆಗ ಆ ಹುಡುಗ ತನ್ನದೇನೂ ತಪ್ಪಿಲ್ಲವೆಂದೂ, ತನ್ನ ಸೈಕಲ್ಲಿಗೆ ಬ್ರೇಕಿಲ್ಲದ್ದರಿಂದ ಅಪಘಾತವಯಿತೆಂದು ತಿಳಿಸಿ ತನ್ನನ್ನು ಶಾಪ ವಿಮುಕ್ತನಾಗಿ ಮಾಡಬೇಕೆಂದು ಪರಿಪರಿಯಾಗಿ ಬೇಡಿಕೊಂಡ. ಕೊನೆಗೆ ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಳ್ಳಲಾಗದೇ ಇರುವುದರಿಂದ ಅವನ ಶಾಪ ವಿಮೋಚನೆಗಾಗಿ ದೂರ್ವಾಸ ಮುನಿಗಳು ಪರಿಹಾರೋಪಾಯವನ್ನು ತಿಳಿಸಿದರು. "ಯಾವ ದಿವಸ ಈ ರಸ್ತೆಯಲ್ಲಿ ಮೆಜೆಸ್ಟಿಕ್‍ಗೆ ಹೋಗುವ  ಬಿ.ಟಿ.ಎಸ್. ಬಸ್ಸು ಖಾಲಿಯಾಗಿ ಬರುವುದೋ ಆ ದಿವಸ ನಿನಗೆ ಶಾಪ ವಿಮೋಚನೆಯಾಗುವುದು!"

(ಬಹುಶಃ ಈಗಾಗಿದ್ದರೆ ಬೆಂಗಳೂರಿನಲ್ಲಿ ಯಾವ ದಿವಸ ರಸ್ತೆ ಅಗೆಯುವುದಿಲ್ಲವೋ ಅಥವಾ ಬೆಂಗಳೂರಿನಲ್ಲಿ ಯಾವ ದಿನ ಆಕ್ಸಿಡೆಂಟ್ ಆಗುವುದಿಲ್ಲವೋ, ಆ ದಿನ ನಿನಗೆ ಶಾಪ ವಿಮೋಚನೆಯಾಗುವುದೆಂದು ತಿಳಿಸುತ್ತಿದ್ದರೋ ಏನೋ?)
                                                                               

                                                                          *****
                                                                

                                                        ಕಷ್ಟಗಳು ಮತ್ತು ಬಿ.ಟಿ.ಎಸ್. ಬಸ್ಸು

ಕಷ್ಟಗಳು ಬಂದರೆ ಬಿ.ಟಿ.ಎಸ್. (ಬೆಂಗಳೂರಿನ ಸಿಟಿ ಬಸ್) ಬಸ್ಸಿನಂತೆ, ಬಂದರೆ ಒಂದರ ಹಿಂದೆ ಒಂದು ಬರುತ್ತವೆ ಇಲ್ಲದೇ ಇದ್ದರೆ ಬರೋದೆ ಇಲ್ಲಾ....?!!!
 

Comments