ಸೂರಪ್ಪನ ಮಾನವೀಯತೆ

ಸೂರಪ್ಪನ ಮಾನವೀಯತೆ

     ಬೆಳ್ಳಂಬೆಳಿಗ್ಗೆ ಬಡಾವಣೆಯ ಹತ್ತಿರವಿದ್ದ ಪೊದೆಯ ಬಳಿ ಹಲವು ನಾಯಿಗಳು ಸೇರಿ ಯಾವುದೋ ವಸ್ತುವೊಂದನ್ನು ಎಳೆದಾಡುತ್ತಾ ತಮ್ಮೊಳಗೆ ಕಚ್ಚಾಡುತ್ತಿದ್ದವು. ಆ ಗಲಾಟೆಗೆ ಸುತ್ತಮುತ್ತಲಿನ ದೊಡ್ಡವರು, ಸಣ್ಣವರು ಎಲ್ಲಾ ಸೇರಿ ಅದೇನಿರಬಹುದೆಂದು ಕುತೂಹಲದಿಂದ ಅತ್ತ ಹೋಗಿ ನೋಡಿದರೆ ನವಜಾತ ಶಿಶುವೊಂದು ಆ ಪೊದೆಯಲ್ಲಿ ಬಿದ್ದಿತ್ತು. ಯಾವುದೋ ತಾಯಿ ಕುಂತಿಯಂತೆ ಆ ಮಗುವನ್ನು ಅನಾಥ ಮಾಡಿ ಅಲ್ಲಿ ಬಿಟ್ಟುಹೋಗಿದ್ದಳು. ಸೇರಿದ ಜನವೆಲ್ಲಾ ತಮಗೆ ತಿಳಿದಂತೆ ತಲೆಗೊಂದು ಮಾತನಾಡುವವರೇ ಹೊರತೂ, ಯಾರೊಬ್ಬರೂ ಆ ಮಗುವಿನ ಉಸಾಬರಿಗೆ ಹೋಗಲಿಲ್ಲ. ಒಬ್ಬೊಬ್ಬರದು ಒಂದೊಂದು ಸಲಹೆ, ಒಬ್ಬರು ಆ ಮಗುವನ್ನು ಅನಾಥಾಶ್ರಮಕ್ಕೆ ಕೊಡಬೇಕೆಂದರೆ, ಇನ್ನೊಬ್ಬರು ಅದರ ತಂದೆ-ತಾಯಿಗಳನ್ನು ಪತ್ತೆ ಹಚ್ಚಿ ಅವರನ್ನು ಊರ ಜನರ ಮುಂದೆ ಛೀಮಾರಿ ಹಾಕಬೇಕೆಂದುಕೊಂಡರೆ, ಮತ್ತೊಬ್ಬರು ಆ ಮಗುವನ್ನು ಪೋಲೀಸರ ಕೈಗೆ ಒಪ್ಪಿಸೋಣವೆಂದು ಮಾತನಾಡುತ್ತಿದ್ದರು, ಈ ಗದ್ದಲದ ನಡುವೆ ಮಗುವಿನ ಅಳುವನ್ನು ಯಾರೂ ಗಮನಿಸುವ ಗೋಜಿಗೇ ಹೋಗಲಿಲ್ಲ. ಅಷ್ಟರಲ್ಲಿ ಚಹಾದಂಗಡಿ ನಡೆಸುತ್ತಿದ್ದ ಸೂರಪ್ಪ ಅಲ್ಲಿಗೆ ಬಂದ, ಅವನೇನು ಅಷ್ಟು ಅನುಕೂಲಸ್ಥನಲ್ಲದ್ದರಿಂದ ಜನರಿಗೆಲ್ಲಾ ಅವನ ಬಗ್ಗೆ ಒಂದು ರೀತಿಯ ತಾತ್ಸಾರ, ಇವನೇಕೆ ಇಲ್ಲಿ ಬಂದನೆಂದು ಅವರೆಲ್ಲಾ ಮೂಗು ಮುರಿದರು. ಆದರೆ ಸೂರಪ್ಪ ಏನೂ ಮಾತನಾಡದೆ ಆ ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ತೆಗೆದುಕೊಂಡು ಹೋಗಲು ತಯಾರಾದ. ಅಷ್ಟರಲ್ಲಿ ಒಬ್ಬರು ಪ್ರಶ್ನಿಸಿದರು, ಆ ಮಗುವನ್ನೇನು ಮಾಡುತ್ತೀಯ? ಅವನು ಹಿಂದು ಮುಂದು ಆಲೋಚಿಸದೆ ಆ ಮಗುವನ್ನು ಸಾಕಿಕೊಳ್ಳುತ್ತೇನೆಂದ. ಆಗ ಮತ್ತೊಬ್ಬರು ಕೇಳಿದರು ಅಲ್ಲಯ್ಯಾ ನಿನಗಾಗಲೇ ಆರು ಜನ ಮಕ್ಕಳಿದ್ದಾರೆ ಅವರ ಭಾರವನ್ನು ಹೊರುವುದೇ ಕಷ್ಟ ಅಂಥಾದ್ದರಲ್ಲಿ ಇನ್ನೊಂದು ಮಗುವಿನ ಭಾರ ಹೊರುತ್ತೀನಂತೀಯಲ್ಲ....?!!! ಸೂರಪ್ಪನ ಉತ್ತರ ಸಿದ್ದವಿತ್ತು, "ಆರು ಜನರ ಭಾರ ಹೊತ್ತವನಿಗೆ ಏಳನೆಯದೇನು ಭಾರವೇ?" ಅವನ ಮಾನವೀಯತೆಯ ಮುಂದೆ ಅಲ್ಲಿ ಜಮಾಯಿಸಿದ್ದ ಜನರಿಗೆ ತಮ್ಮ ಸಣ್ಣತನದ ಅರಿವಾಗಿ ಮಾತು ಹೊರಡದೆ ಮೌನವಾದರು.
 

(ನೈಜ ಘಟನೆಯೊಂದನ್ನು ಆಧರಿಸಿ ಬರೆದದ್ದು)

Comments