ಅಹಂಕಾರದ ಸೋಲು
ಇದೊಂದು ನೀತಿ ಕಥೆ. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ತಂದಿದ್ದೇನೆ.ನನ್ನ ಅಕ್ಕನ ಮಗಳು ’ಅಂಜು’ಳ ಶಾಲಾ ಪಠ್ಯದಲ್ಲಿ ಪಾಠವಾಗಿತ್ತು ಈ ಕಥೆ.
ಅದೊಂದು ಅತಿಚಳಿಯ ಚಳಿಗಾಲ. ಒಂದು ಗುಂಪು ಹಂಸಗಳು ಅತಿಯಾದ ಹಿಮಾಲಯದ ಚಳಿ ತಡೆಯಲಾರದಾಯಿತು. ಆದುದರಿಂದ ಅವೆಲ್ಲವೂ ಬೆಚ್ಚಗಿನ ಪ್ರದೇಶವನ್ನು ಹುಡುಕುತ್ತಾ ಕೇರಳದ ಮಲಬಾರ್ ಸಮುದ್ರತೀರಕ್ಕೆ ಬಂದವು.ಹತ್ತಿರದ ಅರಣ್ಯ ಪ್ರದೇಶದಲ್ಲಿ ಒಂದು ಗುಂಪು ಕಾಗೆಗಳು ವಾಸವಾಗಿದ್ದವು. ಅವುಗಳಿಗೆಲ್ಲಾ ಒಂದು ನಾಯಕ ಕಾಗೆಯಿತ್ತು. ಅದಕ್ಕೆ ತನ್ನ ಹಾರಾಟದ ಶಕ್ತಿ-ಯುಕ್ತಿಯ ಬಗ್ಗೆ ಅಪಾರ ಅಹಂಕಾರವಿತ್ತು.
ಒಂದು ದಿನ ಕಾಗೆಯ ನಾಯಕ ಹಂಸಗಳ ಬಳಿ ಹೋಗಿ " ನಾನು ಯಾರೆಂದು ನಿಮಗೆ ಗೊತ್ತೇ? ನಾನು ಈ ಮಲಬಾರಿನ ಹಾರಾಟದ ರಾಜ!,ಯಾರೊಬ್ಬರೂ ನನ್ನೊಂದಿಗೆ ಹಾರಟದಲ್ಲಿ ಸ್ಪರ್ಧಿಸಲಾರರು.ನೀವಾದರೂ ನನ್ನೊಂದಿಗೆ ಸ್ಪರ್ಧಿಸುವಿರಾ?" ಎಂದು ದರ್ಪದಿಂದ ಕೇಳಿದನು. ಹಂಸಗಳ ನಾಯಕ ಏನನ್ನೂ ಹೇಳಲಿಲ್ಲ. ಕಾಗೆಗಳ ನಾಯಕ ಹಂಸಗಳನ್ನು ಬೈದುಕೊಳ್ಳುತ್ತಾ ಆಕಾಶಕ್ಕೆ ಹಾರಿತು. ತನ್ನ ಹಾರಾಟದ ಶಕ್ತಿಯನ್ನು ಎಲ್ಲರಿಗೂ ತೋರಿಸುವುದಕ್ಕೆ ಅಕಾಶದಲ್ಲಿ ಜಿಗಿತ,ನೆಗೆತ,ರೆಕ್ಕೆಗಳನ್ನು ಮುಚ್ಚುವುದು,ರೆಕ್ಕೆಗಳನ್ನು ಛತ್ರಿಯಂತೆ ಮಾಡಿ ಹಲವು ಭಂಗಿಗಳಲ್ಲಿ ಹಾರಾಟಮಾಡಿತು. ಬೇರೆಯ ಕಾಗೆಗಳು ಅದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದವು. ಅದೇ ಕ್ಷಣದಲ್ಲಿ ನಾಯಕ ಕಾಗೆಯು ಹಂಸಗಳಿಗೆ ಸ್ಪರ್ಧೆಗೆ ಬರುವಂತೆ ತಾಕೀತು ಮಾಡಿತು. ಹಂಸವು ನಗುತ್ತಾ ಹೇಳಿತು"ನಾಯಕ ಕಾಗೆಯೇ ನಾನು ನೇರವಾಗಿ ಮಾತ್ರ ಹಾರಬಲ್ಲೆ,ಅದನ್ನು ಮಾತ್ರ ನಿನ್ನೊಂದಿಗೆ ಪ್ರಯತ್ನ ಪಡುತ್ತೇನೆ". ಎಂದು ಹೇಳುತ್ತಲೇ ಹಂಸವು ಆಕಾಶಕ್ಕೆ ಹಾರಿತು ಮತ್ತು ಕಾಗೆಯ ನಾಯಕ ಹಂಸವನ್ನು ಹಿಂಬಾಲಿಸಿತು.ಹಲವು ಗಂಟೆಗಳ ಕಾಲ ಸತತವಾಗಿ ಎರಡು ಜೊತೆಜೊತೆಯಾಗಿ ಹಾರಾಡಿದವು.ಪಶ್ಚಿಮದಲ್ಲಿ ಸೂರ್ಯ ದಿನಕ್ಕೆ ತೆರೆಯೆಳೆಯುತ್ತಿದ್ದಂತೆಯೇ ಕಾಗೆಯ ನಾಯಕನಿಗೆ ದಣಿವಾಗತೊಡಗಿತು.ಹಂಸದೊಂದಿಗೆ ಹಾರಾಟ ಮುಂದುವರೆಸಲು ನಾಯಕ ಕಾಗೆಗೆ ಅಸಾಧ್ಯವಾಯಿತು. ನಾಯಕ ಕಾಗೆಯು ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಹುಡುಕತೊಡಗಿತು,ಆದರೆ ಎಲ್ಲಿಯೊ ಮಣ್ಣಿನ,ಮರದ ಜಾಗ ಸಿಗಲೇಯಿಲ್ಲ.ಅದು ಎತ್ತರದಿಂದ ಜಾರತೊಡಗಿತು ಹಾಗು ಸಮುದ್ರಕ್ಕೆ ಬೀಳತೊಡಗಿತು. ಹಂಸವು ನಾಯಕ ಕಾಗೆಯ ಕಡೆ ನೋಡಿತು ಹಾಗು ಹೇಳಿತು"ಸಹೋದರನೇ ಏಕೆ ಅಲೆಗಳೊಡನೆ ಆಟವಾಡುತ್ತಿರುವೆ?" ತನ್ನನ್ನು ಬದುಕಿಸಿಕೊಳ್ಳುವ ಸಂಘರ್ಷದಲ್ಲಿ ನಾಯಕ ಕಾಗೆಯು ಹೇಳಿತು"ಸಹೋದರನೇ! ನನ್ನ ಮೇಲೆ ಕರುಣೆತೋರಿಸು, ನನ್ನನ್ನು ರಕ್ಷಿಸು ಇಲ್ಲವಾದರೆ ನಾನು ಸಮುದ್ರದಲ್ಲಿ ಮುಳುಗಿಸಾಯುತ್ತೇನೆ". ಹಂಸವು ಕಾಗೆಯ ಮೇಲೆ ಕರುಣೆತೋರಿ ಅದನ್ನು ಸಮುದ್ರದ ತೀರಕ್ಕೆ ಕರೆದೊಯ್ಯಿತು.ನಾಯಕ ಕಾಗೆಗೆ ನಾಚಿಕೆಯಾಯಿತು. ಅವನ ಗರ್ವಭಂಗವಾಗಿತ್ತು.
ಕಥೆಯ ನೀತಿ: "ಅಹಂಕಾರ ಯಾವಾಗಲೂ ಸೋಲುತ್ತದೆ".
Comments
ಉ: ಅಹಂಕಾರದ ಸೋಲು
In reply to ಉ: ಅಹಂಕಾರದ ಸೋಲು by santhosh_87
ಉ: ಅಹಂಕಾರದ ಸೋಲು