ತುಂತುರು ಇಲ್ಲಿ ಪುಸ್ತಕ ರಾಗ.. ಪುಸ್ತಕ ಪರಿಷೆಯ ಝಲಕ್ ...

ತುಂತುರು ಇಲ್ಲಿ ಪುಸ್ತಕ ರಾಗ.. ಪುಸ್ತಕ ಪರಿಷೆಯ ಝಲಕ್ ...

ತುಂತುರು ಇಲ್ಲಿ ಪುಸ್ತಕ ರಾಗ..

ನಿನ್ನೆ ಬಾನುವಾರ ೩೦-೧೦-೨೦೧೧ ರಂದು ಪುಸ್ತಕ ಪರಿಷೆ ನಡೆಯಿತು, ನಾನು ಹಿಂದೆಲ್ಲ  ಈ ರೀತಿ ಕಾರ್ಯಕ್ರಮ ಹೋಗಿರುವುದು ಅಪರೂಪವೆ ಆದರೆ ಈ ಬಾರಿ ಪೂರ್ತಿ ಸಮಯ ಅಲ್ಲೆ ಇರುವ ಅವಕಾಶ ಒದಗಿ ಬಂತು. ಅದು ವಾಕ್ಪಥಿಕರ ಸಹವಾಸದಿಂದಾಗಿ (!). ಹೊರಡುವಾಗಲೆ ಮೋಡ ಮೋಡ, ನಿನ್ನೆ ಬಿದ್ದಿದ್ದ ಮಳೆಯ ಪ್ರಭಾವ ಪೂರ್ತಿ ಕಡಿಮೆಯಾಗಿರಲಿಲ್ಲ. ತುಂತುರು ಮಳೆ ತನ್ನ ತುಂಟಾಟ ಮುಂದುವರೆಸಿತ್ತು . ಹೇಗು ಇರಲಿ ಎಂದು ರೈನ್ ಕೋಟನ್ನು ಜೊತೆಯಲ್ಲಿ ಇಟ್ಟುಕೊಂಡೆ 'ಸೃಷ್ಟಿ' ತಲುಪಿದೆವು ನಾನು ಮತ್ತು ರಾಮಮೋಹನ . ಅಲ್ಲಿಯೆ ಗಾಡಿ ನಿಲ್ಲಿಸಿ ನಡೆಯುತ್ತ ಪರಿಷೆಯ ಸ್ಥಳ ವಾಲಿಬಾಲ್ ಮೈದಾನ ತಲುಪುವಾಗಲೆ ಮಳೆಯ ತುಂತುರು, ಮನದಲ್ಲಿ ಎಂತದೊ ಆತಂಕ ಈ ಮಳೆರಾಯ ಪುಸ್ತಕ ಪರಿಷೆ ನಡೆಯಲು ಬಿಡುವನೆ!!
..............................................................................-----------------------------------------------------...

ಅಲ್ಲಿ ತಲುಪುವಾಗಲೆ ಬಹಳಷ್ಟು ಸಂಪದಿಗರ ಮುಖ ನೋಡುತ್ತ ಮನದಲ್ಲಿ ಹರುಷ ತುಂಬಿತು. ಮಂಜು, ರಘು , ಹರೀಶ್ , ಜಯಂತ್ , ಪ್ರಭು , ಕಿರಣ್ ಮತ್ತೆ ಒಂದಿಬ್ಬರು ಅಲ್ಲದೆ ಸೃಷ್ಟಿ ಕಲಾಲಯದ ಕೆಲವು ಮಂದಿ, ಅಲ್ಲದೆ ಜಂಬೆಹಾಡಿನ ಗುಂಪು. ನಮ್ಮವರನ್ನೆಲ್ಲ ಕಾಣುತ್ತ ಹತ್ತಿರ ಹೋಗಲು, ಒಬ್ಬೊಬ್ಬರನ್ನೆ ವಂದಿಸುತ್ತ ಹೋಗುತ್ತಿರುವಂತೆ, ಮದ್ಯೆ 'ಬುದ್ದಿಜೀವಿ'ಯ ಗಡ್ಡ ಬಿಟ್ಟಿದ್ದ ಯುವಕರೊಬ್ಬರು ಕೈ ನೀಡಿದರು, ಯಾರು ಎಂದು ತಿಳಿಯದಿದ್ದರು, ನಾನು ನನ್ನ ಪರಿಚಯ ಹೇಳಿ ಕೈ ನೀಡಿದೆ, ಎಲ್ಲರನ್ನು ಮಾತನಾಡಿಸುತ್ತಿದ್ದಂತೆ, ನಗುತ್ತ ಆ ಯುವಕ ನುಡಿದರು, 'ನಾನು ಸತ್ಯ ಚರಣ್'  ಮುಖ ನೋಡುತ್ತಿರುವಂತೆ ಅಂದರು  'ಯಾಕೆ ಶಾಕ್ ಆಯಿತ?"
----------------------------------------------------------------------------------------------------------

 


 

 

 

 

ನಿಜವೆ ನಾನು ಸ್ವಲ್ಪ ಮಾತ್ರ ಶಾಕ್ ಆಗಿದ್ದೆ ಕಾರಣವಿತ್ತು, ಸಂಪದದ ಪ್ರೊಫೈಲ್ ನಲ್ಲಿ ಅವರ ಚಿತ್ರ ನೋಡಿ ನಾನು ಸ್ವಲ್ಪ ಕಪ್ಪನೆಯ ಗುಂಡು ಗುಂಡಾದ ವ್ಯಕ್ತಿಯೊಬ್ಬರನ್ನು ಕಲ್ಪಿಸಿಕೊಂಡಿದ್ದೆ, ಇಲ್ಲಿ ಸತ್ಯಚರಣ್ ಅದಕ್ಕೆ ವಿರುದ್ದವಿದ್ದರು, ಸ್ವಲ್ಪ ಗಡ್ಡಬಿಟ್ಟ ಕೆಂಪನೆಯ ಸುಂದರ ಯುವಕ ಅವರು. ಬಹುಷ: ಬರಹದ ಮೂಲಕ ಅವರ ರೂಪವನ್ನು ಗುರುತಿಸುವುದು ಕಷ್ಟವೇನೊ. ಶ್ರೀಹರ್ಷ ಸಾಲಿಮಠರು ಸಹ ನನ್ನ ನಿರೀಕ್ಷೆಗೆ ವಿರುದ್ದವಾಗಿದ್ದರು, ಅವರ ಬರಹ ಗಮನಿಸಿ ನಾನು ಸ್ವಲ್ಪ ಖಡಕ್ ಆದ ಎಂತದೊ ಸ್ವರೂಪ ನನ್ನ ಮನದಲ್ಲಿತ್ತು ಆದರೆ ಎದುರಿಗೆ ನೋಡುವಾಗ ತುಂಬಾ ಸೌಮ್ಯ ಮುಖಭಾವದವರು.

ವರ್ಣಚಿತ್ರ:  ಸತ್ಯಚರಣರ ಪ್ರೋಪೈಲ್ ಹಾಗು ಗೋಪಿನಾಥರಾಯರ ಚಿತ್ರಗಳಿಂದ ತೆಗೆದಿರುವುದು
--------------------------------------------------------------------------------------------------------
 ಅಷ್ಟರಲ್ಲಿ ರಘು ಮುಳಿಯರು ಬಂದರು.ಹಾಗೆ ಆಸುರವರ ಆಗಮನವಾದಂತೆ ಎಲ್ಲ ವಾಕ್ಪಥಿಕರು ಎದ್ದು ಸಂಭ್ರಮದಿಂದ ಸ್ವಾಗತಿಸಿದರು. ಕಾರ್ಯಕ್ರಮ ನಡೆದಿರುವಂತೆ ಶ್ಯಾಮಲ ಜನಾರ್ದನನ್ ರವರ ಆಗಮನವಾಯಿತು.
ಮಳೆಯ ಲಕ್ಷಣಗಳೆಲ್ಲ ಕರಗಿಹೋಗಿ, ಲಕ್ಷಣವಾಗಿ ಬಿಸಿಲು ತುಂಬಿತು. ನನಗೆ ಮನದಲ್ಲಿ ಸಂತಸ ಎನಿಸಿತು, ಅಂದು ಕೊಂಡೆ ಮಳೆರಾಯ ದ್ವೇಷಿಸಲು ಪುಸ್ತಕ ಪರಿಷೆಯೇನು ಕ್ರಿಕೇಟ್ ಆಟವೆ !! ಮೂರ್ಖರ ಆಟ ಹಾಗಾಗಿ ಮಳೆರಾಯನಿಗೆ ಆಗಲ್ಲ ಅಂದುಕೊಂಡೆ ನೋಡಿ! ಎಡಕಿವಿಯ ಮೇಲೆ ಏನೊ ಅಪ್ಪಳಿಸಿತು, ದೇಹವೆಲ್ಲ ಜೂಂ ಎಂದಿತು, ಕಿವಿ ಮುಖವೇಕೊ ಕೆಂಪೇರಿತು, ಏನಾಯಿತು ಅಂತ ಆರ್ಥವಾಗಿತ್ತು, ಪರಿಷೆಯ ಪಕ್ಕದ ಮೈದಾನದಲ್ಲಿ ಕ್ರಿಕೇಟ್ ಆಡುತ್ತಿದ್ದ ಹುಡುಗರಲ್ಲಿ ಯಾರೊ ಒಬ್ಬ ಸಿಕ್ಸರ್ ಎತ್ತಿದ್ದ , ಆ ಚೆಂಡು ನೇರವಾಗಿ ಬಂದು ನನ್ನ ಎಡಕಿವಿಯನ್ನು ಅಪ್ಪಳಿಸಿತು, ನನಗೆ ಕೋಪ ಬಂದಿತು, ತಕ್ಷಣ ಬಗ್ಗಿ ಚೆಂಡನು ಹಿಡಿದು ಕುಳಿತು ಬಿಟ್ಟೆ, ಚೆಂಡು ಹಿಂದಿರುಗಿಸಿದರೆ ಆವರ ಆಟ ನಿಲ್ಲಿಸುವುದಿಲ್ಲ ಮಾತ್ಯಾರಾದರು ಆ ಹೊಡೆತಕ್ಕೆ ಬಲಿಯಾದರೆ ಎಂದು. ಬಹುಷಃ ನಾನು ಕ್ರಿಕೇಟನ್ನು ಮೂರ್ಖರ ಆಟ ಅಂದಿದ್ದು ಕ್ರಿಕೇಟ್ ದೇವತೆಗೆ ಕೇಳಿಸಿತ್ತೇನೊ.
---------------------------------------------------------------




 

  ರಘು ಮುಳಿಯರೊಂದಿಗೆ ಒಂದು ಸುತ್ತು ಹೊರಗೆ ಹೋಗಿ ಹೀಗೆ ಒಳಗೆ ಬಂದೆ, ಮತ್ತೆ ಒಂದು ತುರ್ತು ಏರ್ಪಟ್ಟಿತ್ತು, ಏನು ಕಾರಣವೊ ಮಂಜುರವರು ಯಾವುದೊ ಕರೆಯ ಮೇರೆಗೆ ಮನೆಗೆ ಹೊರಟು ಹೋಗಿದ್ದರು, ಹಾಗಾಗಿ ವಾಕ್ಪಥ ಎಂಟರ ವಿಮರ್ಷಕನ ಪಾತ್ರ ನಾನು ವಹಿಸ ಬೇಕಾಯಿತು, ಸಿದ್ದವಿಲ್ಲದೆ ಮಾಡಿದ ಪಾತ್ರ ಹೇಗೆ ಬಂತೊ ತಿಳಿಯಲಿಲ್ಲ, ತಪ್ಪಾಗಿದ್ದಲ್ಲಿ 'ಹರೀಶ್ ಆತ್ರೇಯರು' ಮನ್ನಿಸಬೇಕು.

-------------------------------------------------------------------------------------------------------
 
  ಹೀಗೆ ಆಸುರವರ ಪಕ್ಕ ಕುಳಿತು ಕಾರ್ಯಕ್ರಮ ನೋಡುತ್ತ , ಎಡಗಡೆ ಒಳಗೆ ಬರುತ್ತಿರುವ ಜನರನ್ನು ಗಮನಿಸುತ್ತಿದ್ದೆ, ಸಂತೋಷ ಎನಿಸುತ್ತಿತ್ತು, ಬೆಳಗ್ಗೆ ಸುಮಾರು ೧೦ ಘಂಟೆಗೆ ಪ್ರಾರಂಬವಾದ ಜನರ ಒಳಹರಿವು,ಸ್ವಲ್ಪವು ಕಡಿಮೆಯಾಗದೆ, ಒಂದೆ ಸಮ ಬರುತ್ತಲೆ ಇದ್ದರು, ಅಲ್ಲಿ ಶಾರುಕ್ ಖಾನ್ ಇಲ್ಲ, ಯಾವುದೆ ಚಿತ್ರ ನಟಿಯರಾಗಲಿ, ರಾಜಕೀಯದವರಾಗಲಿ ಇಲ್ಲ ಆದರು ಜನ ಬರುತ್ತಿರುವುದು ಬರಿ 'ಪುಸ್ತಕ' ಗಳನ್ನು ನೋಡಲು, ನಿಜಕ್ಕು ಸಂತೋಷ ಕೊಡುವ ಸಂಗತಿ ಅಲ್ಲವೆ !!!, , ಛೇ! ಯಾರಾತ ನನಗೆ ಅವನನ್ನು ಆರು ಏಳು ಸಾರಿ ನೋಡಿದಂತೆ ಅನ್ನಿಸುತ್ತಿದೆ, ಹೀಗೆ ಒಳಗೆ ಬರುತ್ತ  ಮೊದಲ ಸಲ ನೋಡಿದಾಗ ಕೈಯಲ್ಲಿ ಕಡಿಮೆ ಎಂದರು ಆರು ಏಳು ಪುಸ್ತಕ ಹಿಡಿದು ಹೊರನಡೆದಿದ್ದ ಅನ್ನಿಸಿತು, ಒಬ್ಬರಿಗೆ ಒಂದೆ ಪುಸ್ತಕ ಅಂತ ನಿಯಮವಿದ್ದರು ಸಹ. ಆದರೆ ಅನುಮಾನ ಎನಿಸಿದ್ದು ಆತನನ್ನು ನೋಡುವಾಗ ಪುಸ್ತಕ ಓದುವನು , ಓದುವದಕ್ಕಾಗಿ ಪುಸ್ತಕ ತೆಗೆದು ಕೊಂಡು ಹೋಗುತ್ತಿದ್ದಾನೆ ಅನ್ನಿಸುತ್ತಿಲ್ಲವಲ್ಲ ಪಕ್ಕದಲ್ಲಿ ಆಸುರವರಿಗೆ ತಿಳಿಸಿದೆ.

------------------------------------------------------------------------------------------------------------

ಸ್ವಲ್ಪ ಗಮನಿಸಿದರೆ ಅವನು ಪುಸ್ತಕಗಳನ್ನು ಅವನು ತನ್ನ ಪ್ಯಾಂಟಿನ ಜೋಭಿನಲ್ಲಿ, ಶರ್ಟಿನ ಒಳಗೆ ಹೊಟ್ಟೆಯಲ್ಲಿ ಸೇರಿಸುತ್ತಿದ್ದ, ಅವನ ಪಕ್ಕ ನಿಂತು, ಆಸುರವರೆ 'ಒಬ್ಬರಿಗೆ ಒಂದೆ ಪುಸ್ತಕ' ಎಂದರು, ಅದಕ್ಕವನು 'ಒಂದೆ ನೋಡಿ ' ಎಂದು ಕೈ ತೋರಿಸಿದ, ಅವನ ಪ್ಯಾಂಟಿನ ಜೇಬನ್ನು ಬಡಿದು, ಇದೇನು ಎಂದರು. ಅವನು ಸ್ವಲ್ಪ ಕನ್ಫೂಸ ಆದ 'ಜೇಬಿನಿಂದ ಇನ್ನೊಂದು ಪುಸ್ತಕ ಹೊರತೆರೆದ 'ಹಸುಗಳನ್ನು ಸಾಕುವ ಬಗೆ'. ಸಾರ್ ಹಸುಗಳನ್ನು ಸಾಕುವ ವಿಷಯ ಅದಕ್ಕೆ ಇಟ್ಟಿದ್ದೆ ಎಂದ. ನಮಗೆ ನಗು. ಸರಿ ಹೇಗೆ ಆ ಕಡೆ ಸರಿದು ಹೊರಟು ಹೋದ. ಮತ್ತೆ ಅವನು ಬಂದಿದ್ದು ಕಾಣಲಿಲ್ಲ. ನನಗೆ ಆನಿಸಿದ್ದು 'ಗಾಂಧಿ ಭಜಾರಿನ ರಸ್ತೆ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕ' ಸಂಗ್ರಹಕಾರರಿಗೆ ಇಲ್ಲಿಂದ ಕೆಲವರಾದರು ಪುಸ್ತಕಗಳನ್ನು ಕೊಂಡೋಯ್ದು ತಲುಪಿಸುತ್ತಿದ್ದಾರ ಎಂದು.

-------------------------------------------------------------------------------------------------------

  
ಸರಿ ಹೇಗೊ ಅಂತು ಪರಿಷೆಯ ಕಡೆಯ ಹಂತಕ್ಕೆ ಬಂದು, ಎಲ್ಲ ಕಾರ್ಯಕ್ರಮಗಳೆಲ್ಲ ಮುಗಿದವು. ವಂದನಾರ್ಪಣೆಗಳೆಲ್ಲ ಮುಗಿದು ಎಲ್ಲರು ಹೊರಡುತ್ತೇವೆ ಅನ್ನುವಾಗ ಒಂದು ಕಾಫಿ ಜೊತೆ ಏಕೆ ದಿನವನ್ನು ಮುಗಿಸಬಾರದು ಅಂದವರು 'ರಘು ಎಸ್.ಪಿ.' ಸರಿ ಎಲ್ಲ ಕಪ್ಪೆಗಳನ್ನು ಒಟ್ಟುಗೂಡಿಸಿ, ಪುಳಿಯೋಗರೆ ಪಾಯಿಂಟ್ ತಲುಪಿದೆವು. ಕಾಫಿ ಎಂದವರು ಜೊತೆಗು ಪಕೋಡವನ್ನು ಹೇಳಿದರು, ಎಲ್ಲರು ನಗುತ್ತ, ಹರಟುತ್ತ ಮುಗಿಸಿದರು.
ಒಬ್ಬರಿಗೊಬ್ಬರು ವಿದಾಯ ಹೇಳುತ್ತ ಹೊರಡುವಾಗ, ಬೆಳಗಿನಿಂದ ವಿರಾಮಕೊಟ್ಟಿದ್ದ 'ಮಳೆರಾಯ' ತನ್ನ ಆರ್ಭಟ ಪ್ರಾರಂಬಿಸಿದ
-----------------------------------------------------------------------------------------------------------

 ಕೋರಿಕೆ :  ಈ ಬರಹದಲ್ಲಿರುವ ಎಲ್ಲವನ್ನು ಲಘು ಹಾಸ್ಯದಲ್ಲಿ ಬರೆದಿದೆ, ಯಾರು ಗಂಭೀರವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿ
 

Rating
No votes yet

Comments