ಯಾರಿಗೆ ಬೇಕು ಸರ್ಕಾರಿ ಶಾಲೆಗಳು ?

ಯಾರಿಗೆ ಬೇಕು ಸರ್ಕಾರಿ ಶಾಲೆಗಳು ?

 

ಸರ್ಕಾರಿ ಶಾಲೆಗಳನ್ನುಮುಚ್ಚಬಾರದು ಎನ್ನುವ ಎಲ್ಲರಿಗೆ ಒಂದು ಅವಲೋಕನ.
ಕಡಿಮೆ   ಮಕ್ಕಳಿರುವ ಶಾಲೆಗಳನ್ನುಮುಚ್ಚುವ ನಿರ್ದಾರಕ್ಕೆ ಯಾರ ಪ್ರತಿ ಕ್ರಿಯೆ ನೀಡ ಬೇಕೋ ಅವರಾರು ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಅಂದರೆ ನಿಜವಾದ ಭಾಗೀದಾರರಾದ ಪೋಷಕರು ಸರ್ಕಾರಿ ಶಾಲೆಯನ್ನುಮುಚ್ಚಬೇಡಿ, ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತೇವೆ  ಎನ್ನವ ನಿಲುವನ್ನು ಎಲ್ಲೂ ವ್ಯಕ್ತಪಡಿಸಿಲ್ಲ, ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ವೃಂದವೂ ಈ ವಿಚಾರವಾಗಿ ಪ್ರತಿಕ್ರಿಯಿಸಿಲ್ಲ. ಯಾರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿ ಅಂತರಾಷ್ಟ್ರೀಯ ಭಾಷೆ ಎನ್ನುವ ಮುಖವಾಡದ ಭಾಷೆಯನ್ನು ಕಲಿಸುವ ಪ್ರತಿನಿಧಿಗಳು ಪ್ರತಿಕ್ರಿಯೆಯನ್ನು ನೀಡುತ್ತದ್ದಾರೆ, ಅಲ್ಲವೇ? ಅದೇ ದುರಂತ!
ಇಲ್ಲಿರುವ ಪ್ರಮುಖ ಪ್ರಶ್ನೆಗಳು: ನಿಜವಾಗಿ ಹೇಳಬೇಕೆಂದರೆ,
ಯಾಕೆ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು? ( ಸರ್ಕಾರಕ್ಕೆ ಕನಿಷ್ಟ ಪ್ರತಿ ವರ್ಷಕ್ಕೆ (ಹೊಸದಾಗಿ ನೇಮಕ ಹೊಂದುವ ಶಿಕ್ಷಕರ ಸಂಬಳ ಕನಿಷ್ಟ  ಎಂದರೆ ರೂ 12000) 2ಶಿಕ್ಷಕರಿರುವ ಶಾಲೆಗೆ 288000 ಸಂಬಳ, ಪಠ್ಯ ಪುಸ್ತಕ, ಟಿಎಂಎಲ್, ಶಾಲೆಗೆ ನಿರ್ವಹಣಾ ವ್ಯಚ್ಚಗಳು ಇತ್ಯಾದಿ ಸೇರಿ 350000 ಖರ್ಚಾಗುತ್ತದೆ) ಸರಾಸರಿ 10 ಮಕ್ಕಳಿಗಿಂತ ಕಡಿಮೆ ಇವುವ ಶಾಲೆಗಳನ್ನು ಮುಂದುವರಿಸಬಹುದೇ ? ನೀವೇ ತೀರ್ಮಾನಿಸಿ.
ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ನಡವಳಿಕೆಗಳು ಸರಿಯಾಗಿವೆಯೇ? ( ಸರ್ಕಾರಿ ಕೆಲಸ ಮಾತ್ರ ಬೇಕು ಆದರೆ ತಾವೇ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನೇ ಸೇರಿಸುವುದಿಲ್ಲ, ಯಾವ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದ್ದಾರೆ ಅವರನ್ನು ಹೊರತು ಪಡಿಸಿ)  ತಾವು ಕೆಲಸ ನಿರ್ವಹಿಸುತ್ತಿರುವ ಶಾಲೆಗಳು ಚನ್ನಾಗಿ ಕೆಲಸ ನಿರ್ವಹಿಸುತ್ತಿಲ್ಲವೇ? ನಿರ್ವಹಿಸುತ್ತದ್ದರೆ, ಯಾಕೆ ಸರ್ಕಾರಿ ಶಾಲೆಗಳಿಗೆ ಯಾವ ಕಾರಣಕ್ಕಾಗಿ ದಾಖಲು ಮಾಡುತ್ತಿಲ್ಲ?  ಸರ್ಕಾರಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕ ದೃಷ್ಟಿಕೋನದ ಕೊರತೆ,
ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎನ್ನುವ ಹೋರಾಟಗಾರರ ನಿಲುವು? ( ತಮ್ಮ, ಬಂದುಗಳ, ಸ್ನೇಹಿತರು, ನೆರೆಹೊರೆಯವರ ಮಕ್ಕಳು ಯಾವ ಶಾಲೆಗಳಿಗೆ ಹೋಗುತ್ತಿದ್ದಾರೆ? ಅವರೆಲ್ಲರೂ ಸರ್ಕಾರಿ ಶಾಲೆಗೆ ಹೋಗುತ್ತದ್ದರೆ ನಿಮ್ಮ ಪ್ರಶ್ನೆಗಳು ಉತ್ತಮವಾಗಿದೆ ಎನಿಸುತ್ತದೆ, ಇಲ್ಲವಾದರೆ ಮೊದಲು ನೀವು ನಿಮ್ಮ, ಬಂದುಗಳ, ಸ್ನೇಹಿತರು, ನೆರೆ ಹೊರೆಯವರ ಮೊದಲು ಮನಹೊಲಿಸಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿ ನಂತರ ಹೋರಾಟ ಮುಂದುವರಿಸಿ,)
ಇಲ್ಲನ ತನಕ ಸರ್ಕಾರ ನಡೆಸಿರುವ ರಾಜಕೀಯ ಪಕ್ಷದ ನೀತಿಗಳು  ಜನಪರವಾಗಿವೆಯೇ? 1980 -2010 ತನಕ ಸರ್ಕಾರಿ ಹಾಗೂ ಅನುದಾನ , ಅನುದಾನ ರಹಿತ ಶಾಲೆಗಳ ಪ್ರಾರಂಭದಲ್ಲಿ ಹೋಲಿಸಿದರೆ ಭಾರಿ ಪ್ರಮಾಣದ ವ್ಯತ್ಯಾಸ ಕಾಣಸಿಗುತ್ತದೆ, ಅಂದರೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜನಪರ ಹಿತಾಸಕ್ತಿ ಕೊರತೆ ಎದ್ದು ಕಾಣುತ್ತದೆ, ಶಾಲೆ ಮುಚ್ಚಬಾರದು ಎನ್ನವ ರಾಜಕಾರಣಿಗಳು, ಸಾಹಿತಿಗಳು, ತಂತ್ರಜ್ಞರು ಈವಿಚಾರವಾಗಿ ಎಲ್ಲೂ ಹೋರಾಟಗಳನ್ನೇ ಮಾಡಿಲ್ಲ ಯಾಕೆ?
ಭಾಷಾ ನೀತಿಯ ತೊಡಕುಗಳು?
ಕನ್ನಡ ಬಾಷೆಗೆ ಹೋಲಿಸಿದರೆ ತೆಲಗು, ತಮಿಳು ಹಿಂದಿ ಭಾಷೆಗಳಲ್ಲಿ ಸರಿಯಾದ ಯೂನಿ ಕೋಡ್ ರಚಿಸಿ ಅದನ್ನು ಎಲ್ಲ ಕಂಪ್ಯೂಟರ್ ಗಳಲ್ಲಿ ಬಳಕೆಗೆ ಅನುಕೂಲವಾಗಿಲ್ಲ,  ಅದೇ ರೀತಿಯಲ್ಲಿ ಇತರೆ ಬಾಷೆಗಳ ದೂರದರ್ಶನದ ಚಾನಲ್ ಸಂಖ್ಯೆ ನೋಡಿದರೆ ತಿಳಿಯುತ್ತದೆ, ಉದಯ (ಸನ್ ನೆಟ್ ವರ್ಕ) ಈ ಟಿವಿ( ರಾಮೋಜಿ ಗ್ರೂಪ್) ಜಿ ಟಿವಿ( ಜಿ ಗ್ರೂಪ್) ಸುವರ್ಣ ( ಏಷ್ಯ ನೆಟ್) ಬೇರೆ ಬಾಷೆಯವರು ನೆಡೆಸುವ  ಉಸ್ತುವಾರಿಯಲ್ಲಿ ಇರುವ ಚಾನಲ್ಗಳು, ಕಸ್ತೂರಿ ಟಿವಿ, ಹಾಗೂ ಸಮಯ, ಜನಶ್ರೀ ಮಾತ್ರ ಕನ್ನಡದವರ ಉಸ್ತುವಾರಿ ಚಾನಲ್ಗಳು, ಅವುಗಳೂ ಪೂರ್ಣ ಪ್ರಮಾಣದ ಪೇ ಚಾನಲ್ ಗಳು,  ( ತೆಲುಗು ಭಾಷೆಯಲ್ಲಿ, 5 ಉಚಿತ ಸಿಗುವ ಪ್ರಸಾರ ಭಾರತಿ ಚಾನಲ್ಗಳು, ತಮಿಳು 6, ಮಲೆಯಾಳಂ, 3, ಹಿಂದಿ 15ಕ್ಕಿಂತ ಹೆಚ್ಚು, ಕನ್ನಡ ಮಾತ್ರ ಕೇವಲ ಒಂದು ಅದು ಚಂದನ ಮಾತ್ರ)
ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ: ಗ್ರಾಮ ಮಟ್ಟದ ಅಧಿಕಾರಿಗಳಿಂದ ಪ್ರಾರಂಭಿಸಿ ರಾಜ್ಯ ಸರ್ಕಾರದ ಕಾರ್ಯದರ್ಶಿಗಳವರಗೆ ಹೇಳುವುದಾದರೆ ಯಾವುದೇ ಕನ್ನಡ ಪರವಾದ ಹಿತಾಸಕ್ತಿಗಳಿಲ್ಲ , ಅಂದರೆ ಕರ್ನಾಟಕ ಸರ್ಕಾರ ಕನ್ನಡದಲ್ಲಿ ನಾಮಪಲಕಗಳನ್ನು ಕಡ್ಡಾಯ ಗೊಳಿಸುವ ಸುಮಾರು 20ಕ್ಕಿಂತ ಹೆಚ್ಚು ಸಾರಿ ಸುಗ್ರೀವಾಗ್ನೆ ಜಾಗಿಗೊಳಿಸಿದ್ದಾರೆ, ನಾಚಿಕೆಯಾಗುವುದಿಲ್ಲವೇ ಈ ವಿಚಾರಕ್ಕೆ, ಕಾರಣ ಇಷ್ಟೆ, ಪಕ್ಕದ ತಮಿಳು ನಾಡಿನಲ್ಲಿ ಅಧಿಕಾರಿಗಳು ಹೇಗಿದ್ದಾರೆ  ಎಂದರೆ ಯಾವುದೇ ಅಂಗಡಿ ಅಥವಾ ಉದ್ದಿಮೆಗಳನ್ನು ಸ್ಥಾಪಿಸಲು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದರೆ ಯಾವುದು ಹೇಗಿರಲಿ ಬಿಡಲಿ,  ಅಲ್ಲಿ ನಾಮ ಪಲಕಗಳು ಯಾವ ರೀತಿ ಇರುತ್ತವೆ ಎನ್ನುವುದನ್ನು ಮೊದಲು ಗಮನಿಸುತ್ತಾರೆ, ಮೊದಲು ತಮಿಳಿನಲ್ಲಿ ದೊಡ್ಡ ಅಕ್ಷರಗಳಲ್ಲಿ ಹೆಸರನ್ನು ಬರೆದಿದ್ದರೆ ಮಾತ್ರ ಅಂಗೀಕರಿಸುತ್ತಾರೆ ಇಲ್ಲವಾದಲ್ಲಿ ನಯವಾಗಿಯೇ ತಿರಸ್ಕರಿಸುತ್ತಾರೆ, ಅದರಿಂದಲೇ ತಮಿಳುನಾಡಿನಲ್ಲಿ ತಮಿಳಿನ ನಾಮಪಲಕಗಳಿರಬೇಕು ಎನ್ನುವುದನ್ನು ಸುಗ್ರಿವಾಗ್ನೆಯನ್ನು ಹೊರಡಿಸಿಲ್ಲ. ದುರಂತ ಈಗಿದೆ ನೋಡಿ, ಬೆಂಗಳೂರಿನ ಕನ್ನಡ ಅಭಿಮಾನಿಯೊಬ್ಬರು ಕನ್ನಡದಲ್ಲಿ ಅವರ ವಾಹನ ಸಂಖ್ಯೆಯನ್ನು ಕನ್ನಡದಲ್ಲಿ ಬರೆಸಿದರೆ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಕನ್ನಡಿಗ ಪೋಲೀಸರೇ ಅವರಿಗೆ ಕಿರಿಕಿರಿ ನೀಡುತ್ತಾರೆ, ಅಥವಾ ದಂಡವನ್ನು ಹಾಕುತ್ತಾರೆ ಈಗಿದೆ ಕರ್ನಾಟಕ,
ಮಾದ್ಯಮ ಮಿತ್ರರ ದೋರಣೆ: ಎಲೆಕ್ಟಾನಿಕ್ ಮಾದ್ಯಮವನ್ನು ಹೊರತು ಪಡಿಸಿ ಹೇಳುವುದಾದರೆ (ಯೂನಿವರ್ಸಲ್ ಕೋಡ್) ಯೂನಿಕೋಡ್ ಬಳಕೆಯ ವಿಚಾರದಲ್ಲಿ ಎಲ್ಲಾ ಪತ್ರಿಕೆವರೂ ಯೂನಿಕೋಡ್ ಬಳಕೆ ಮಾಡುವುದಿಲ್ಲ. ಎಷ್ಟೋ ಈ ಪತ್ರಿಕೆಗಳು ಎಲ್ಲಾ  ಕಂಪ್ಯೂಟರ್ ಗಳಲ್ಲಿ ಸರಿಯಾಗಿ ತೆರೆದುಕೊಳ್ಳುವುದೇ ಇಲ್ಲ, ಹಾಗಾಗಿ ಯಾವುದೇ ಈ ಪತ್ರಿಕೆಗಳನ್ನು ನೋಡುವ ನೋಡುಗರು ಬೇರೆಕಡೆ ವಲಸೆ ಹೋಗುತ್ತಾರೆ, ಯೂನಿಕೋಡ್ ರಚಿಸುವ ಕುರಿತು ಈಗಾಗಲೇ ದಿವಂಗತ ಪೂರ್ಣ ಚಂದ್ರ ತೇಜಸ್ವಿ ಯವರು ಈ ಬಗ್ಗೆ ಯಾವಾಗಲು ಚರ್ಚಿಸುತ್ತದ್ದರು,   ಅದನ್ನು ಉಳಿದು ಕನ್ನಡ ವಿಶ್ವವಿದ್ಯಾನಿಲಯ ಕುವೆಂಪು ಯೂನಿಕೋಡ್ ಬಿಡುಗಡೆ ಮಾಡಿದೆ, ಆದರೆ ಸರಿಯಾಗಿ ಬಳಕೆ ಮಾಡಲು ಸಾದ್ಯವಿಲ್ಲ, ಆ ಯೂನಿಕೋಡ್ ಸಹಾ ಸಮರ್ಪಕವಾಗಿ ರೂಪಿಸಿಲ್ಲ.
ಇಡೀ ಭಾರತ ಏಕೆ ಪ್ರಪಂಚಕ್ಕೆ  ಸಿಲಿಕಾನ್ ಕಣಿವೆ ಎಂದೇ ಪರಿಚಿತವಾಗಿರುವ ಬೆಂಗಳೂರು ತತ್ರಜ್ಞರಿಗೆ ಏನೂ ಕೊರತೆ ಇಲ್ಲ, ಇನ್ ಪೋಸಿಸ್, ವಿಪ್ರೋ, ಬಯೋ ಟೆಕ್ ಅಂತಹಾ ಅತಿರಥ ಸಂಸ್ಥೆಗಳಿದ್ದರೂ ಕನ್ನಡ ಯೂನಿಕೋಡ್ ರಚನೆಯಲ್ಲಿ ಅವರ ಸೇವೆ ನಗಣ್ಯ,   ಇವರಿಗೆಲ್ಲಾ ಸರ್ಕಾರ ನೀಡುವ ರಿಯಾಯಿತಿ ಬೇಕಾಗಿದೆ, ಈ ನಾಡಿಗೆ ಅಗತ್ಯವಾಗಿರುವ ಪ್ರಪಂಚದಲ್ಲಿ ಎಲ್ಲಿ ಯಾವ ಸಿಸ್ಟಮ್ನಲ್ಲಿ ನೋಡಿದರೂ ಕನ್ನಡ ಸಲೀಸಾಗಿ ಓಪನ್ ಆಗಲು ಸುಲಭವಾದ ಒಂದು ಫಾಂಟ್ ಕಂಡು ಹಿಡಿಯಲು ಪ್ರಯತ್ನಗಳು ಮಾತ್ರ  ಇಲ್ಲ.
ಇನ್ನು ಸಾಹಿತಿಗಳ ವಿಚಾರಕ್ಕೆ ಬರೋಣ, ಸಾಹಿತಿಗಳ ಸಾಧನೆಯನ್ನು ಯಾರೇನು ಅಲ್ಲಗಳೆಯಬೇಕಾಗಿಲ್ಲ, ಈಗಿರುವ ಸಾಹಿತಿಗಳು ಕೇವಲ ಇಂತಹಾ ಸಮಯದಲ್ಲಿ ಮಾತನಾಡಲು ವೇದಿಕೆಗೆ ಬರುತ್ತಾರೆ ಆದರೆ ಕನ್ನಡ ಶಾಲೆಗಳ ಬೆಳವಣಿಗೆ ಸಂಬಂಧಿಸಿದಂತೆ ಯಾವುದೇ ಇಂತಹದೇ ನಿಯಮಾವಳಿಗಳನ್ನು ರೂಪಿಸಲು ಮುಂದೆ ಬರುವುದೇ ಇಲ್ಲ. ಜೊತೆಗೆ ಅವರ ಮಕ್ಕಳು, ಅಥವಾ ಮೊಮ್ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತದ್ದಾರೆ ಅವರಿಗೆ ಕೇಳಿ ನೋಡಿ ತಿಳಿಯುತ್ತದೆ, ಅವರ ಕನ್ನಡ ಪ್ರೇಮ, ಇದೇ ರೀತಿ ಮಾದ್ಯಮ ಮಿತ್ರರೂ ಸಹಾ ?
ಈಗ ಪೋಷಕರ ವಿಚಾರಕ್ಕೆ ಬರೋಣ; ನಿಜವಾಗಿ ಹೇಳಬೇಕೆಂದರೆ ಪೋಷಕರಿಗೆ ನಿಗದಿತವಾಗಿ ಇಂತಹಾ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು ಎಂಬ ನಿಯಮವನ್ನು ಇಟ್ಟುಕೊಂಡು ಶಾಲೆಗೆ ಕಳುಹಿಸುವುದಿಲ್ಲ, ಪೋಷಕರಿಗೆ ಮಾಹಿತಿಯ ಕೊರತೆಯಿಂದಾಗಿ ಸ್ಥಳೀಯವಾಗಿ ಸಿಗುವ ಸರ್ಕಾರಿ ಅಥವಾ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಾರೆ, ಕೆಲಸವೊಂದು ಪೋಷಕರಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದರೆ ಮಕ್ಕಳ ಭವಿಷ್ಯ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದುಬಿಡುತ್ತಾರೆ, ಸಹಜವಾಗಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಕೆಲವು ವ್ಯತ್ಯಾಸವಿರುತ್ತವೆ, ಮುಖ್ಯವಾಗಿ ಇಂಗ್ಲೀಷ್ ಮಾದ್ಯಮದ ಶಾಲೆಗಳಾಗಿರುತ್ತವೆ, ಸಮರ್ಪಕವಾದ ಸಮವಸ್ತ್ರಗಳನ್ನು ಗೊತ್ತುಪಡಿಸಿರುತ್ತಾರೆ, ನಿಗದಿತವಾಗಿ ಸರಿಯಾದ ಸಮಯಕ್ಕೆ ಶಾಲೆಗಳನ್ನು ತೆರೆಯುತ್ತಾರೆ, ವಿನಾ ಕಾರಣ ರಜೆಗಳನ್ನು ನೀಡುವುದಿಲ್ಲ, (ಸರ್ಕಾರಿ ಶಾಲೆಗಳಾದರೆ, ಶಿಕ್ಷಕರ ಸಭೆಗಳು, ಕ್ಲಸ್ಟರ್ ಹಂತದ ಸಭೆಗಳು, ಚುನಾವಣಾ ಸಿದ್ದತಾ ಕೆಲಸಗಳು, ಕೆಲವು ಸರ್ಕಾರಿ ಕೆಲಸಗಳು ಎಂದು ಇಲಾಖೆಯೇ ಗೊತ್ತುಪಡಿಸುತ್ತಾರೆ) ಅವ್ಯಾವುಗಳು ಖಾಸಗಿ ಶಾಲೆಗಳಿಗೆ ಇರುವುದಿಲ್ಲ.  ಕೆಲವು ಖಾಸಗಿ ಶಾಲೆಗಳಲ್ಲಿ ನಿಗದಿತ ರೀತಿಯಲ್ಲಿ ಮನೆಕೆಲಸ( home work) ನೀಡುತ್ತಾರೆ, ಅದೇ ರೀತಿ ಪೋಷಕರು ಆ ವ್ಯವಸ್ಥೇಗೆ ಹೊಂದಿಕೊಂಡಿರುತ್ತಾರೆ. ಆದರೆ ಸರ್ಕಾರಿ ಶಾಲೆಗಳು ಇದಕ್ಕೆಲ್ಲ ಹೊರತಾಗಿವೆ ಎನ್ನುವ ವಿಚಾರ ಪೋಷಕರಲ್ಲಿ ಊಹಾ ಪೋಹಗಳು ಇದ್ದದ್ದರ ಫಲವಾಗಿ ಗೊಂದಲಕ್ಕೆ ಎಡೆಮಾಡಿಕೊಡುವ ಸಂಗತಿಗಳು ಇರುತ್ತವೆ.
ಉಪಸಂಹಾರ:
ಏನೇ ಹೇಳಿದರೂ ಸರ್ಕಾರಿ ಶಾಲೆಗೆ ನೇಮಕ ಹೊಂದುವ ಶಿಕ್ಷಕರು ನಿಗಧಿತ ವಿದ್ಯಾಬ್ಯಾಸ ಪೂರೈಸಿರುತ್ತಾರೆ, (ಪಿಯುಸಿ, ಟಿಸಿಹೆಚ್ ಅಥವಾ ಡಿ,ಎಡ್)  ಸರಿಯಾದ ಸಮಯಕ್ಕೆ ತರಬೇತಿಗಳು ನೆಡೆದಿರುತ್ತವೆ, ಆದರೆ ಖಾಸಗಿ ಶಾಲೆಗೆ ನೇಮಕ ಮಾಡಿರುವ ಶಿಕ್ಷಕರು ಪಿಯುಸಿ, ಬಿಎ, ಬಿಕಾಂ, ಎಂಎ, ಅಥವಾ ಯಾವುದಾದರೂ ಪದವಿ ಪಡೆದಿದ್ದು ಇಂಗ್ಲೀಷ್ ಮಾತನಾಡುವ ಸಾಮರ್ಥ್ಯವನ್ನು  ಪಡೆದಿರಬಹುದು, ಹಾಗಾಗಿ ಖಾಸಗಿ ಶಾಲೆಗಳು ಇಂಗ್ಲೀಷ್ ಮಾದ್ಯಮ ಶಾಲೆಗಳು  ನಿಗಧಿತ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತವೆ, ಆದರೆ ಎಲ್ಲಾ ಶಾಲೆಗಳಲ್ಲೂ  ಪರಿಕ್ಷಾ ವಿಧಾನ ಮಾತ್ರ ಒಂದೇ ಆಗಿರುತ್ತವೆ, ಖಾಸಗಿ ಶಾಲೆಗೆ ಕಳಿಸುವ ಬಹುತೇಕ 100ಕ್ಕೆ 60ಕಿಂತ ಹೆಚ್ಚು ಜನ ಖಾಸಗಿ ಶಾಲೆಗೆ ನಿಗಧಿಪಡಿಸುವ ಶುಲ್ಕವನ್ನು, ಅವರು  ಮಕ್ಕಳಿಗೆ ಕೊಡುವ ಮನೆಕೆಲಸ(home work, assignment)  ನೋಡುತ್ತಾರೆ, ಅಥವಾ ಇತರೆ ಮನೆ ಪಾಠಗಳಿಂದ ಮಾಡಿಸುತ್ತಾರೆ.
ಆಗಬೇಕಾಗಿರು ಕೆಲಸಗಳು:
10ಕ್ಕಿಂತ ಕಡಿಮೆ ಇರುವ ಮುಚ್ಚುವುದು, ಅಥವಾ 10ಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ದಾಖಲಾತಿಗಳನ್ನು ಹೆಚ್ಚಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲೀಶ್ ಮಾದ್ಯಮವನ್ನು ಪ್ರಾರಂಭಿಸುವುದು, ಆ ರೀತಿ ತೆರೆದ ಶಾಲೆಗಳಲ್ಲಿ ಸಮರ್ಪಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು, ಅಥವಾ ಗ್ರಾಮ ಪಂಚಾಯಿತಿಗೆ ಒಂದರಂತೆ ಅತ್ಯತ್ತಮ ಎನ್ನಬಹುದಾದ ಶಾಲೆಗಳನ್ನು ಅಭಿವೃದ್ಛಿ ಪಡಿಸುವುದು. ಇದು ಬರೀ ಶಿಕ್ಷಣ ಇಲಾಖೆಯ ಕೆಲಸವಾಗಿಲ್ಲ, ಪೋಷಕರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಪ್ರತಿನಿಧಿಗಳು ಸೇರಿ ಉತ್ತಮ ಎನ್ನಬಹುದಾದ ಕೆಲಸವನ್ನು ಮಾಡುವುದು, ಈಗಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಬಲವರ್ದನೆಗೊಳಿಸುವುದು(ಅಂದರೆ ತರಬೇತಿ ನೀಡುವುದು ಮಾತ್ರ ಅಲ್ಲ) ಕೆಲವು ಶಾಲೆಗಳ ಎಸ್ ಡಿ ಎಂ ಸಿಗಳು ಅತ್ಯತ್ತಮ ಎನ್ನಬಹುದಾದ ಕೆಲಸಗಳನ್ನು ಮಾಡಿರುತ್ತಾರೆ, ಅದು ಕೇವಲ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿರುವ ಕೆಲಸಗಳಾಗಿವೆ. ಆದರೆ ಕಲಿಕೆ ಸಂಬಂಧಿಸಿದಂತೆ ಎಸ್ ಡಿ ಎಂ ಸಿ ಯನ್ನು ಬಳಸಿಕೊಂಡು ಉತ್ತಮ ಪೋಷಕ ಸ್ನೇಹಿ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಎಸ್ ಡಿ ಎಂ ಸಿ ಎಂದರೆ ಕೇವಲ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಮಾತ್ರ ಒದಗಿಸಿದರೆ ಸಾಕು, ಯಾವ ಪ್ರಶ್ನೆಗಳನ್ನು ಕೇಳಬಾರದು ಎನ್ನುವ ಶಿಕ್ಷಕರ ಉಢಾಪೆ ನೀತಿಯನ್ನು ಬದಲಾವಣೆ ಮಾಡಬೇಕಿದೆ, ಆಗಾಗದಿದ್ದರೆ ಸರ್ಕಾರಿ ಶಾಲೆಗಳು ಮುಚ್ಚುತ್ತವೆ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಯಾವುದೇ ಕೆಲಸವು ಇರುವುದಿಲ್ಲ.
ರಮೇಶ್ ಹೆಚ್ ಎನ್, ಮೈಸೂರು.

 

Comments