"ಸಂಯುಕ್ತ ಕರ್ನಾಟಕ"ದಲ್ಲೊಂದು ಸಾರ್ಥಕ ಲೇಖನ

"ಸಂಯುಕ್ತ ಕರ್ನಾಟಕ"ದಲ್ಲೊಂದು ಸಾರ್ಥಕ ಲೇಖನ

ನ. 12ರ ಸಂ. ಕ. ಭಿನ್ನ-ವಿಭಿನ್ನ ದಲ್ಲಿನ ’ಕನಕನ ಕಣ್ಣಿನಿಂದ’ ಎಂಬ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಲೇಖನ, ಸಾರ್ಥಕ ಪ್ರಕಟಣೆಯಾಗಿದೆ.
 ಫಿಲಾಸಫಿಯನ್ನು ’ಹೇಳು’ವುದಲ್ಲ, ’ಬದುಕ’ಬೇಕು ಎನ್ನುವ ಅವರ ದೃಷ್ಟಿಯೇ ಸ್ವಾಗತಾರ್ಹ ಮತ್ತು ಔಚಿತ್ಯಪೂರ್ಣ. ಜನಸಮಾನ್ಯರು ಹಾಗೆ ಬದುಕಿದ್ದರೆ, ’ಸ್ವರ್ಗಕ್ಕೇ ಕಿಚ್ಚು ಹಚ್ಚಿಬಿಡಬಹುದಗಿತ್ತು’ ಎಂದ್ದಾರೆ, ಸ್ವಾಮಿಗಳು. ಆದರೆ ಈಗಿನ ಸುಳ್ಳು, ತಟವಟ, ನಯವಂಚಕ ’ರಾಜಕೀಯ’ ಸ್ವರ್ಗದ ಪರಿಕಲ್ಪನೆಗೇ ಕಿಚ್ಚು ಹಚ್ಚಿ ಬೂದಿಮಾಡಿಬಿಟ್ಟಿದೆಯಲ್ಲಾ, ಅದಕ್ಕೇನನ್ನೋಣ?!
 ಶಿವ ಶರಣರಾಗಲೀ, ಪುರಂದರರ ಕಾಲದ ಹರಿದಾಸರಗಲೀ ಬದುಕಿ ತೋರಿಸಿದ್ದು ಮತ್ತು ಬದುಕಹೇಳಿದ್ದು ’ಫಿಲಾಸಫಿ’ಯನ್ನೇ. ’ಫಿಲಾಸಫಿ’ ಎಂದರೆ ಬುರುಡೆ, ಬೊಗಳೆ ’ಬ್ರಹ್ಮಜ್ಞಾನ’ವಲ್ಲ, ಸಹಜ, ಸಾಧ್ಯ, ಸಾಮಾಜಿಕ ಬದುಕು ಎಂದು ತೋರಿಸಿಕೊಟ್ಟಿದ್ದೇ ಈ ಮಹಾನ್ ಜೀವರುಗಳ ಬೃಹತ್ ಉಪಲಬ್ಧಿ. ಆದರೆ ’ಬ್ರಹ್ಮಜ್ಞಾನದ ಪಟ್ಟಭದ್ರರು’ ಅದನ್ನು ವ್ಯವಸ್ಥಿತವಾಗಿ ಹಲಾಲು ಮಾಡಿದರು, ಮಾಡುತ್ತಿದ್ದಾರೆ ಎನ್ನುವುದು ಕಣ್ಣಮುಂದಿನ ಧಾರುಣ ಸತ್ಯ.
 ಕನಕದಾಸರ ’ಕದಳೀಫಲ ಪ್ರಸಂಗ’ದಿಂದ ವ್ಯಾಸರಯರ ಶಿಷ್ಯರು ಕೆಲಮಟ್ಟಿಗಾದರೂ ’ಸಹಜ’ಗೊಂಡರು ಎಂದು ಸ್ವಾಮಿಜಿ ಬರೆದಿದ್ದಾರೆ. ಆದರೆ ವ್ಯಾಸಗುರುಗಳೂ ಸೇರಿದಂತೆ ಅವರ ದ್ವೈತ ಸಿದ್ಧಾಂತ ದಿಗ್ಗಜ ಶಿಷ್ಯೋತ್ತಮರ‍್ಯಾರೂ ಪೂರ್ಣವಾಗಿ ಸಹಜಗೊಂಡದ್ದು ಅನುಮಾನವೇ!
 ಕನಕದಾಸರ ತತ್ಕಾಲೀನ ಹಿರಿಯರೂ, ಸಮಕಾಲೀನರೂ ಆದ ಶ್ರೀಪಾದರಾಜರೂ, ವ್ಯಾಸರಾಯರೂ, ವಾದಿರಾಜರೂ ಕನ್ನಡದಲ್ಲಿ ಹಾಡುಗಳನ್ನೇನೋ ಮಾಡಿದರಾದರೂ ಪುರಂದರದಾಸರಂತೆ, ಕನಕದಾಸರಂತೆ ಅನುಭಾವ ಮತ್ತು ದೈವಾನುಭೂತಿಯನ್ನು ಸಮಾನ್ಯ ಕೇಳುಗರೊಂದಿಗೆ ಮುಕ್ತವಾಗಿ ಹಂಚಿಕೊಂಡಂತೆ ಕಂಡುಬುರುವುದಿಲ್ಲ.
 ವಿಜಯದಾಸೋತ್ತರ ದಾಸಸಹಿತ್ಯದಲ್ಲಂತೂ ಅನುಭೂತಿಗಿಂತಾ ಆಚಾರ (ಕಂದಾಚಾರ)ಕ್ಕೇ ಮಣೆಹಾಕಿರುವುದು ಹೆಚ್ಚು.
 ಶರಣ ಶಿವಾನಂದ ಸ್ವಾಮಿಗಳು, ಕನಕದಾಸರನ್ನು ’ಶರಣರ ಕಣ್ಣಿ’ನಿಂದ ನೋಡಿರುವುದು ಚಿಕಿತ್ಸಕವಾಗಿದೆ; ಉಚಿತವಾಗಿದೆ ಎಂದು ನನಗನ್ನಿಸಿದೆ. ವಿವಾದವಿದ್ದರೆ ಸಂಪದಿಗರು ದಯವಿಟ್ಟು ಪರಾಂಬರಿಸಲಿ! 
 

Rating
No votes yet