ಮೆಡಿಕಲ್ ಕಾಲೇಜುಗಳಲ್ಲಿ ಇವನ್ನು ಕಲಿಯಲಿಕ್ಕಾಗದು!

ಮೆಡಿಕಲ್ ಕಾಲೇಜುಗಳಲ್ಲಿ ಇವನ್ನು ಕಲಿಯಲಿಕ್ಕಾಗದು!

"ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿ ಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು ಉಳಿಸಿದ್ದು ಆಲೋಪತಿ ಚಿಕಿತ್ಸಾ ವಿಧಾನ ಅಲ್ಲ. ಈಗಿನ ಹೈಟೆಕ್ ಚಿಕಿತ್ಸಾ ವಿಧಾನಗಳಂತೂ ಕಳೆದ ೫೦ ವರುಷಗಳ ಬೆಳವಣಿಗೆ. ಇದರಿಂದಾಗಿಯೇ ಮನುಷ್ಯನ ಉಳಿವು ಎನ್ನುವುದು ಸರಿಯಲ್ಲ. ಮನುಷ್ಯನನ್ನು ೫೦,೦೦೦ ತಲೆಮಾರುಗಳಲ್ಲಿ ಉಳಿಸಿದ ಆರೋಗ್ಯ ಹಾಗೂ ಚಿಕಿತ್ಸೆಯ ತತ್ವಗಳನ್ನು ಪುನಃ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮ ಮುಂದಿನ ತಲೆಮಾರುಗಳು ಉಳಿಯುತ್ತವೆ."

"ಈಗ ರೋಗಿಯ ಸ್ಥಿತಿಯಲ್ಲಿ ಸ್ವಲ್ಪ ಏರುಪೇರಾದರೆ ಐಸಿಯುಗೆ ರೋಗಿಯನ್ನು ಹಾಕುತ್ತಾರೆ. ಇದರಿಂದ ರೋಗಿಯ ಆರೋಗ್ಯ ಸುಧಾರಣೆಗೆ ಯಾವ ಪ್ರಯೋಜನವೂ ಇಲ್ಲ. ಐಸಿಯುನಲ್ಲಿ ಏನು ಮಾಡ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಅಲ್ಲಿ ಯಾವ್ಯಾವ ಔಷಧಿ ಕೊಟ್ಟರು ಮತ್ತು ಚಿಕಿತ್ಸೆ ಮಾಡಿದರು ಎಂಬ ಸಮಗ್ರ ವರದಿಯನ್ನು ಯಾವ ರೋಗಿಗಾದರೂ ಕೊಡುತ್ತಾರೆಯೇ? ಸತ್ತು ಹೋದ ರೋಗಿಗಳನ್ನು ಐಸಿಯುನಲ್ಲಿ ದಿನಗಟ್ಟಲೆ ಇಟ್ಟಿದ್ದಾರೆ ಎಂಬ ಹಲವು ಆಪಾದನೆಗಳು ಕೇಳಿಬಂದಿವೆ."


"ಹೃದಯದ ಎಕ್ಸ್ ರೇ ಚಿತ್ರದಲ್ಲಿ ಬ್ಲಾಕ್ಸ್ (ಅಡೆತಡೆ) ಕಂಡು ಬಂದ ಕೂಡಲೇ ಬೈಪಾಸ್ ಅಥವಾ ಎಂಜಿಯೋಪ್ಲಾಸ್ಟಿ ಬೇಕೆಂದು ಈಗಿನ ವೈದ್ಯರು ಒತ್ತಾಯಿಸುತ್ತಾರೆ. ಇದು ಸರಿಯಲ್ಲ. ಯಾಕೆಂದರೆ ಮನುಷ್ಯನ ಕೊರೊನರಿ ರಕ್ತನಾಳವು ಪ್ರಾಣಿಗಳ ರಕ್ತನಾಳಗಳಂತೆ ಇಲ್ಲ. ಈ ರಕ್ತನಾಳ ಎಷ್ಟೇ ಚಿಕ್ಕದಾದರೂ ಹೃದಯದ ಸ್ನಾಯುಗಳಿಗೆ ರಕ್ತ ಚಲಾವಣೆಯು ಮನುಷ್ಯನು ಆರಾಮವಾಗಿರುವಷ್ಟು ಕಾಲ ಕಡಿಮೆ ಆಗುವುದಿಲ್ಲ. ಇದರ ಅರ್ಥ ಏನೆಂದರೆ, ಮನುಷ್ಯನ ಕೊರೊನರಿಗಳು ಚಿಕ್ಕದಾದಂತೆ ಅವನ ಹೃದಯದ ಸ್ನಾಯುಗಳು ರಕ್ತದ ಕೊರತೆಯಿಂದ ಬಳಲುವುದಿಲ್ಲ. ಇದಕ್ಕೆ ಕಾರಣ ಮನುಷ್ಯನ ದೇಹದಲ್ಲಿ ಹಲವಾರು ಚಿಕ್ಕ ರಕ್ತನಾಳಗಳನ್ನು ಸೃಷ್ಟಿಸಿ, ಕೊರೊನರಿಯ ಅಡೆತಡೆಗಳನ್ನು "ಬೈಪಾಸ್" ಮಾಡುವ ವ್ಯವಸ್ಥೆ ಜನ್ಮದತ್ತವಾಗಿದೆ. ಆದ್ದರಿಂದ, ಹೃದಯಾಘಾತಕ್ಕೂ ಎಕ್ಸ್ ರೇ ಚಿತ್ರಕ್ಕೂ ಸಂಬಂಧ ಬಹಳ ಕಡಿಮೆ. ಎಕ್ಸ್ ರೇ ಚಿತ್ರದಲ್ಲಿ ಬ್ಲಾಕ್ಸ್ ಕಂಡು ಬಂದಿದೆ ಎಂಬ ಒಂದೇ ಕಾರಣಕ್ಕಾಗಿ ಬೈಪಾಸ್ ಸರ್ಜರಿ ಬೇಡ. ಹೃದಯದ ತೊಂದರೆಯಿಂದಾಗಿ ತಡೆಯಲಾಗದ ಎದೆನೋವು ಇದ್ದವರಿಗೆ ಮತ್ತು ಹಾಸಿಗೆಯಿಂದ ಎದ್ದು ಕೂರಲೂ ಆಗದವರಿಗೆ ಮಾತ್ರ ಬೈಪಾಸ್ ಸರ್ಜರಿ ಅಗತ್ಯ."

"ಹೃದಯದ ತೊಂದರೆ ಇದ್ದವರಿಗೆ ಕೊಡುವ ಕೆಲವು ಔಷಧಿಗಳು ರೋಗಿಯ ಆರೋಗ್ಯ ಸುಧಾರಿಸುವ ಬದಲು ಆತನ ಸ್ಥಿತಿಯನ್ನು ಬಿಗಡಾಯಿಸುತ್ತವೆ. ಅನಂತರ ರೋಗಿಗೆ ಪೇಸ್‍ಮೇಕರ್ ಹಾಕಲೇ ಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಯಾರಿಗೆ ಲಾಭ? ರೋಗಿಗಂತೂ ಲಾಭವಿಲ್ಲ. ಯಾಕೆಂದರೆ ಪೇಸ್‍ಮೇಕರ್ ಹಾಕುವ ಸರ್ಜರಿ ಚಿಕಿತ್ಸೆಗೆ ಮೂರ್ನಾಲ್ಕು ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಷ್ಟೆಲ್ಲ ಖರ್ಚು ಮಾಡಿದ ನಂತರ, ಪೇಸ್‍ಮೇಕರ್ ಹಾಕಿದ ನೂರು ರೋಗಿಗಳಲ್ಲಿ ಕೆಲವರೇ ಬದುಕಿ ಉಳಿಯುತ್ತಾರೆ."

"ಮನುಷ್ಯನ ದೇಹ ಚೈತನ್ಯದ ಸಂಪುಟ (ಬಂಡಲ್ ಆಫ್ ಎನರ್ಜಿ). ಈ ದೇಹದಲ್ಲಿ ಎನರ್ಜಿಯ ಮಟ್ಟದಲ್ಲಿ ಏರುಪೇರಾದಾಗ ಅನಾರೋಗ್ಯ ಉಂಟಾಗುತ್ತದೆ. ಆಗ ಮಾತ್ರೆಗಳನ್ನು ಕೊಟ್ಟು ಎನರ್ಜಿಯ ಮಟ್ಟವನ್ನು ಸರಿಪಡಿಸೋದು ಆಲೋಪತಿಯ ವಿಧಾನ. ಆದರೆ ಈ ಎಲ್ಲ ಮಾತ್ರೆಗಳೂ ರಾಸಾಯನಿಕಗಳು. ಇವುಗಳಿಂದ ತೊಂದರೆಯೇ ಜಾಸ್ತಿ. ದೀರ್ಘಕಾಲ ಯಾವುದೇ ಮಾತ್ರೆ ತಿಂದರೂ ಅಡ್ಡಪರಿಣಾಮಗಳು ಖಂಡಿತ."

"ಈ ರೀತಿಯಲ್ಲಿ ಅರ್ಥ ಮಾಡಿಕೊಂಡಾಗ ನಮ್ಮ ಪಾರಂಪರಿಕ ವಿಧಾನಗಳು ಅತ್ಯುತ್ತಮ ಎಂಬ ವಿಚಾರ ಮನದಟ್ಟಾಗುತ್ತದೆ. ಆಯುರ್ವೇದ ಮತ್ತು ರೇಕಿ ಇಂಥವು ಪ್ರಕೃತಿಮೂಲದ ಹಾಗೂ ಸಹಜ ವಿಧಾನಗಳನ್ನು ಅನುಸರಿಸುತ್ತವೆ. ಉದಾಹರಣೆಗೆ ರೇಕಿಯಲ್ಲಿ ಎನರ್ಜಿ ಅಸಮತೋಲನ ಇರುವ ಭಾಗಕ್ಕೆ ನೇರವಾಗಿ ಎನರ್ಜಿ ನೀಡುತ್ತಾರೆ. ಹಾಗಾಗಿ ಅದು ಬೇಗನೇ ಪರಿಣಾಮ ಬೀರುತ್ತದೆ ಮತ್ತು ಇವುಗಳಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಆಲೋಪತಿಯ ಮಾತ್ರೆ ಹೊಟ್ಟೆಯಲ್ಲಿ ಕರಗಿ ರಕ್ತಕ್ಕೆ ಸೇರಲು ಐದು ನಿಮಿಷ ಬೇಕು. ಅನಂತರ ಅದು ರಕ್ತಪ್ರವಾಹದಲ್ಲಿ ನಿಧಾನವಾಗಿ ತೊಂದರೆ ಇರುವ ಜಾಗಕ್ಕೆ ತಲಪಿ, ಪರಿಣಾಮ ಬೀರುವಾಗ ಕೆಲವು ಗಂಟೆಗಳಾಗುತ್ತದೆ."

"ನಾವು ಮಕ್ಕಳ ಹಾಗೂ ಮನುಷ್ಯರ ದೇಹಗಳ ಇಮ್ಯುನಿಟಿ (ಪ್ರತಿರೋಧ ಶಕ್ತಿ) ಹೆಚ್ಚಿಸಬೇಕು. ಆದರೆ ನಾವೇನು ಮಾಡುತ್ತಿದ್ದೇವೆ? ಮಕ್ಕಳನ್ನು ಇನ್ನಷ್ಟು ನಾಜೂಕಾಗಿ ಬೆಳೆಸುತ್ತಿದ್ದೇವೆ. ದಿನನಿತ್ಯ ದೈಹಿಕ ಚಟುವಟಿಕೆ ಮಾಡಿಸುವುದಿಲ್ಲ. "ಓದು ಓದು" ಎನ್ನುತ್ತಾ ಒಂದೇ ಕಡೆ ಕೂರಿಸುತ್ತೇವೆ. ಕಾಲೇಜಿನ ಡಿಗ್ರಿ ಮುಗಿಯುವಾಗ ಅಂತಹ ವ್ಯಕ್ತಿಯ ಇಮ್ಯುನಿಟಿ ತೀರಾ ದುರ್ಬಲ ಆಗಿರುತ್ತದೆ. ನಮ್ಮ ಸುತ್ತಲೂ ಇರುವ ಲಕ್ಷಗಟ್ಟಲೆ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ಧಾಳಿ ಎದುರಿಸುವ ತಾಕತ್ತು ಅವರ ದೇಹದಲ್ಲಿ ಬೆಳೆದಿರುವುದೇ ಇಲ್ಲ."

ನಮ್ಮ ಆಹಾರ ಪದ್ಧತಿಯಂತೂ ದೇಹದ ಇಮ್ಯುನಿಟಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಉದಾಹರಣೆಗೆ ನಾವೆಲ್ಲ ಸಣ್ಣವರಿದ್ದಾಗ ಉಣ್ಣುತ್ತಿದ್ದದ್ದು ಕೆಂಪಕ್ಕಿ ಅನ್ನ. ಈಗ ಆ ಅಭ್ಯಾಸವೇ ಬಿಟ್ಟುಹೋಗಿದೆ. ಕೆಂಪಕ್ಕಿಯ ತೌಡಿನಲ್ಲಿ ಉಪಯುಕ್ತ ಆಂಟಿಬಯಾಟಿಕ್ ಇದೆ ಎಂದು ಇತ್ತೀಚೆಗೆ ಸಂಶೋಧನೆಯಿಂದ ತಿಳಿದು ಬಂದಿದೆ. ಅದಕ್ಕಾಗಿ ಈಗ ಅಮೆರಿಕದಲ್ಲಿ ಕೆಂಪಕ್ಕಿ ತೌಡಿನ ಸಾರದಿಂದ ಮಾಡಿದ ಮಾತ್ರೆಗಳನ್ನು ಔಷಧಿಯಾಗಿ ಕೊಡುತ್ತಿದ್ದಾರೆ."

"ಐವತ್ತು ವರುಷಗಳ ಮುಂಚೆ ಫರ್ಟಿಲೈಸರ್ ಮತ್ತು ಪೆಸ್ಟಿಸೈಡ್ ಎಲ್ಲಿತ್ತು? ಕೃಷಿಯಲ್ಲಿ ಇವುಗಳ ಬಳಕೆ ಇರಲೇ ಇಲ್ಲ. ಈಗ ಎಲ್ಲ ಬೆಳೆಗಳನ್ನೂ ಬೆಳೆಸುವಾಗಲೂ ಇವನ್ನು ಸುರಿಯುತ್ತಾರೆ. ಅವು ಧಾನ್ಯ, ತರಕಾರಿ, ಹಣ್ಣುಗಳ ಮೂಲಕ ನಮ್ಮ ದೇಹ ಪ್ರವೇಶಿಸುತ್ತವೆ. ಆದ್ದರಿಂದ ರಾಸಾಯನಿಕಗಳಿಂದಾಗಿ ಉಂಟಾಗುವ ರೋಗಗಳು ಜಾಸ್ತಿ ಆಗುತ್ತಿವೆ. ಮಂಗಳೂರಿನಂತಹ ಊರಿನಲ್ಲಿಯೂ ವಾರಕ್ಕೆ ಏಳೆಂಟು ಅಂತಹ ಪ್ರಕರಣಗಳು ಪತ್ತೆ ಆಗುತ್ತಿವೆ. ಆದರೂ ಸಮಸ್ಯೆಯ ಅಗಾಧತೆ ನಮಗೆ ಅರ್ಥವಾಗಿಲ್ಲ."

"ಹೊಸಹೊಸ ಆರೋಗ್ಯ ಸಮಸ್ಯೆಗಳನ್ನು ನಾವೇ ಹುಟ್ಟಿಸಿಕೊಳ್ಳುತ್ತಿದ್ದೇವೆ. ಹಲವಾರು ಮಕ್ಕಳು ಗಂಟೆಗಟ್ಟಲೆ ಮೊಬೈಲ್ ಫೋನಿನಲ್ಲಿ ಮಾತಾಡುತ್ತಾರೆ. ಅದರಿಂದ ಪ್ರಬಲ ಶಕ್ತಿಯ ಎಲೆಕ್ಟ್ರೋ-ಮ್ಯಾಗ್ನೆಟಿಕ್ ತರಂಗಗಳು ಹೊಮ್ಮುತ್ತಲೇ ಇರುತ್ತವೆ. ಮಕ್ಕಳ ಮೆದುಳಿನ ಮೇಲೆ ಇದರಿಂದಾಗುವ ದುಷ್ಪರಿಣಾಮಗಳು ಇನ್ನು ಐದಾರು ವರುಷಗಳಲ್ಲಿ ನಮಗೆ ಗೊತ್ತಾಗುತ್ತವೆ. ಮುಂದುವರಿದ ದೇಶಗಳಲ್ಲಿ ಕಳೆದ ಹತ್ತಾರು ವರುಷಗಳಲ್ಲಿ ವಿಪರೀತ ಮೊಬೈಲ್ ಬಳಸಿದ ಮಕ್ಕಳ ಮೇಲಾದ ದುಷ್ಪರಿಣಾಮಗಳಿಂದ ನಾವು ಇನ್ನಾದರೂ ಪಾಠ ಕಲಿಯಬೇಕು."

ಮೆಡಿಕಲ್ ಕಾಲೇಜುಗಳಲ್ಲಿ ಕಲಿಯಲಿಕ್ಕಾಗದ ಈ ಎಲ್ಲ ವಿಷಯಗಳನ್ನು ನನಗೆ ತಿಳಿಸಿದವರು ಪ್ರಸಿದ್ಧ ವೈದ್ಯರಾದ ಡಾ. ಬಿ. ಎಂ. ಹೆಗ್ಡೆ - ೨೨ ಅಕ್ಟೋಬರ್ ೨೦೧೧ರಂದು ಅವರನ್ನು  ಮಂಗಳೂರಿನ ಅವರ ಮನೆಯಲ್ಲಿ ಭೇಟಿಯಾದಾಗ. ಡಾ. ಹೆಗ್ಡೆ ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಪಡೆದ ವೈದ್ಯರು. ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಉಪಕುಲಪತಿ ಆಗಿದ್ದವರು. ಆರೋಗ್ಯದ ಬಗ್ಗೆ ಇಪ್ಪತ್ತಕ್ಕಿಂತ ಜಾಸ್ತಿ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಜಗತ್ತಿನ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ನಡೆಸಿದ ವೈದ್ಯಕೀಯ ಸಂಶೋಧನೆಗಳ ಫಲಿತಾಂಶಗಳ ಆಧಾರದಿಂದ ಇವನ್ನು ಬರೆದಿದ್ದಾರೆ. ಈ ಪುಸ್ತಕಗಳನ್ನು ಓದಿ, ನಮ್ಮ ಆರೋಗ್ಯ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಅನುಸರಿಸುವುದು ನಮ್ಮ ಕೈಯಲ್ಲಿದೆ.  

 

Comments