ಕಾಡುತ್ತಿರುವ ಒ೦ದು ವಚನ

ಕಾಡುತ್ತಿರುವ ಒ೦ದು ವಚನ

ಬರಹ

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ ಅಂದರೆ ನೆಗೆಟಿವ್ ಅನ್ನಿಸಬಹುದಾದ ಭಾವಗಳ ಮೂಲಕ ಮತ್ತೊ೦ದು ನೆಲೆಗೆ ಜಿಗಿಯುವ ಶಕ್ತಿ ಕಾಣುವುದರಿ೦ದ. ಹೊಸ ನೆಲೆಗೆ ಜಿಗಿದಾಗಿಯೂ ಬಿಟ್ಟ ನೇತ್ಯಾತ್ಮಕ ನೆಲೆ ತನ್ನ ಅರ್ಥವನ್ನು ಬಿಟ್ಟುಕೊಡದೆ ನಮ್ಮ ಜತೆ ಆಟವಾಡುತ್ತಲೇ ಇರುವ ಗುಣವಿರುವುದರಿ೦ದ.

ಕಲ್ಯಾಣದಲ್ಲಿ ಕ್ರಾ೦ತಿ ಘಟಿಸಿದ ನ೦ತರ ವಚನಕಾರರೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೂರಾಬಟ್ಟೆ ಹಿಡಿದುಹೋದ ಮೇಲೆ ಅವರುಗಳು ಬರೆದಿರಬಹುದಾದ ವಚನಗಳಿಗಾಗಿ ತಡಕಾಡುತ್ತಿದ್ದೆ. ಕ್ರಾ೦ತಿಯ ಸಮಯದ ಹಿಂಸಾಚಾರ, ದ್ರೋಹ, ಕೊಲೆ ಇವುಗಳ ಅನುಭವ ಸಾ೦ದ್ರತೆ, ನಿರಾಶೆ ಅವರ ವಚನಗಳಲ್ಲಿ ಯಾವ ಧ್ವನಿ ಪಡೆಯುತ್ತದೆ ಎ೦ದು ನನ್ನ ಕುತೂಹಲ. ಆಗ ಕಣ್ಣಿಗೆ ಬಿದ್ದ ವಚನವಿದು. ನನ್ನ ಹುಡುಕಾಟಕ್ಕೆ ಇದು ಪೂರಕವಾಗಿಲ್ಲವಾದರೂ, ನನ್ನನ್ನು ಈ ವಚನ ಬೇರೆಯೇ ಕಾರಣಕ್ಕೆ ಹಿಡಿದು ನಿಲ್ಲಿಸಿತು. ಇದನ್ನು ಮತ್ತೆ ಮತ್ತೆ ಓದಿದ ಹಾಗೆ ಹೊಸ ಹೊಸ ಅರ್ಥಗಳು, ನಿಗೂಢ ವಿಚಾರಗಳು ಸ್ಪುರಿಸುತ್ತಾ ಹೋಯಿತು.

ಈ ವಚನದ ಕವಿಯ ಮತ್ತೊ೦ದು ಮುಖ್ಯ ಹಿನ್ನೆಲೆ ಆಕೆ ಬಸವಣ್ಣನ ಹೆ೦ಡತಿಯೆನ್ನುವುದು. ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಣ್ಣನಿಗೆ ಅಗ್ರಮಾನ್ಯ ಸ್ಥಾನ ಅನ್ನುವುದು ಎಲ್ಲರಿಗೂ ಗೊತ್ತಿರುವ ಮಾತು. ಆದರೆ ಆತನ ಹೆ೦ಡತಿ ಇಷ್ಟೊಂದು ಪರಿಣಾಮಕಾರಿ ಕವಿಯೆನ್ನುವುದು ಗೊತ್ತಿರಲಿಲ್ಲ. ಅವಳ ಕವಿತ್ವವನ್ನು ವಚನದ ಮೂಲಕ ಹೀಗೆ ಎದುರುಗೊ೦ಡಿರಲಿಲ್ಲ. ಮೊದಲ ಮೂರು ಸಾಲುಗಳು ಒ೦ದೇ ರೀತಿಯ ಭಾವವನ್ನು ತೆರೆದಿಡುವ ಮೂರು ಚಿತ್ರಗಳು.

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-

ಕಾಮನ್ ಸೆನ್ಸ್ ಅನ್ನಿಸಬಹುದಾದ೦ಥ ವಿಚಾರಗಳು. ಆದರೆ ಕವಿ ಅದರತ್ತ ನಮ್ಮ ಗಮನವನ್ನು ಸೆಳೆಯುವುದೇಕೆ? ಆ ಚಿತ್ರಗಳು ಒ೦ದು ಸಾಮಾನ್ಯ ನೆಲೆಯಿ೦ದ ಮತ್ತೊ೦ದು ಗಹನವಾದ ನೆಲೆಗೆ ಜಿಗಿಯಲು ಮಾಡುತ್ತಿರುವ ತಯಾರಿ ಅನಿಸುತ್ತದೆ. ಇಲ್ಲಿ ಆ ತಯಾರಿ ಕಾಣುವುದು ಅರಸದೇ ಇರುವ ಸ್ಥಿತಿಯಲ್ಲಿ. ಎಲೆ ಉದುರಿಹೋದ ಮರದಿ೦ದ ನೆರಳನ್ನು ಯಾರು ತಾನೆ ಅಪೇಕ್ಷಿಸುತ್ತಾರೆ? ಹಾಗೆ ಕುಗ್ಗಿದ ದೀಪಕ್ಕೆ ಬೆಳಕು ನೀಡುವ ಶಕ್ತಿಯಿರುವುದಿಲ್ಲ ಅದನ್ನು ತಾನು ಅರಸಲೂ ಇಲ್ಲ, ಸವೆದು ಹೋದ ವಿಗ್ರಹದಲ್ಲಿ ರೂಪ ಅರಸುವುದು ಕಷ್ಟ ತಾನು ಅರಸಲೂ ಇಲ್ಲ ಎ೦ದು ಕವಿ ಮೊದಲಿಗೆ ಹೇಳಿಬಿಡುತ್ತಾರೆ. ಈ ಮೂರೂ ಚಿತ್ರಗಳನ್ನು ನಮ್ಮ ಮು೦ದಿಡುವಾಗ ನೆರಳು, ಬೆಳಕು ಹಾಗು ರೂಪದ ಆಕಾಂಕ್ಷೆಯತ್ತ ಕವಿ ನಮ್ಮ ಗಮನ ಸೆಳೆಯುತ್ತಲೇ ಅದು ನಿಷ್ಪಲವಾದುದು ಎ೦ದೂ ಸೂಚಿಸುತ್ತಿರುವುದು ಗಮನಿಸಬೇಕಾದ ಅ೦ಶ.

ಈ ಮೂರೂ ಚಿತ್ರಗಳೂ ನನ್ನ ಗಮನ ಸೆಳೆದಿದ್ದಕ್ಕೆ ಮತ್ತೊ೦ದು ಕಾರಣವೂ ಇದೆ. ಅದು ಈ ಚಿತ್ರಗಳ ಜತೆ ಮಾನವನಿಗಿರುವ ಸಂಬಂಧವನ್ನು ಕುರಿತಾದದ್ದು. ಮೊದಲನೆಯ ಚಿತ್ರ-ಎಲೆಗಳೆದ ಮರ-ನೈಜವಾದುದು. ಮಾನವನ ಯಾವುದೇ ಕೈವಾಡವಿಲ್ಲದೆಯೇ ನಿಲ್ಲುವ ನೈಸರ್ಗಿಕ ಚಿತ್ರ.
ಎರಡನೆಯದು-ಕಳೆಯರೆತ ದೀಪ- ಸೀಮಿತವಾದ ಮಾನವನ ಪಾತ್ರವಿರುವ ಸಂದರ್ಭ. ಅಂದರೆ ದೀಪ ಹಚ್ಚುವಷ್ಟಕ್ಕೇ ಸೀಮಿತವಾದ ಪಾತ್ರವನ್ನು ಮನುಷ್ಯ ವಹಿಸಿದರೂ, ಉರಿಯುವ ದೀಪ ತನ್ನಷ್ಟಕ್ಕೇ ನಿಸರ್ಗದ ನೈಜ ಚಿತ್ರ. ಈ ಸಂದರ್ಭದಲ್ಲಿ ಮಾನವ ಹಾಗು ಪ್ರಕೃತಿಯ ಸಮ್ಮೇಳದ ಭಾವವೂ ಇದೆ ಎ೦ಬುದು ವಿಶೇಷ. ಮೂರನೆಯದು ಮತ್ತೂ ವಿಶೇಷವಾದುದು-ಕುರುಹಳಿದ ಮೂರ್ತಿ-ನೈಸರ್ಗಿಕ ಬಂಡೆಗಲ್ಲಿನಲಿ ಮಾನವ ಕ್ರಿಯೆಯ ಫಲ. ಮಾನವನ ಕೈವಾಡದ ಮೂಲಕ ರೂಪಪಡೆಯುವ ಸ್ವತಂತ್ರ ಆಕೃತಿ. ಇದು ಮಾನವ-ಪ್ರಕೃತಿಯ ಸಂಬಂಧದ ಮತ್ತೊ೦ದು ಘಟ್ಟವನ್ನು ಸೂಚಿಸುವುದಷ್ಟೇ ಅಲ್ಲ, ವೀರಶೈವ ಸಿದ್ಧಾ೦ತದ ಒ೦ದು ಮೂಲ ಹೊಳಹನ್ನು ನಮಗೆ ನೀಡುತ್ತದೆ. ಯಾಕೆ೦ದರೆ ವೈದಿಕ ಸಂಪ್ರದಾಯದ ವಿಗ್ರಹಾರಾಧನೆಯನ್ನು ಟೀಕಿಸುತ್ತಾ ಬ೦ದ ವಚನಕಾರರ ಧ್ವನಿಯೂ ಇಲ್ಲಿದೆ. ಸ್ಥಾವರ-ಜಂಗಮ ಸಿದ್ಧಾ೦ತ ಹೇಳುವ- ಸ್ಥಾವರಕ್ಕೆ ಅಳಿವು೦ಟು, ಜ೦ಗಮಕ್ಕಳಿವಿಲ್ಲ ಎ೦ಬ ಮಾತು ನೆನಪಿಗೆ ತರುವ ತಾತ್ವಿಕ ಹಿನ್ನೆಲೆಯೂ ಈ ಮಾತಿನಲ್ಲಿ ಕ೦ಡಾಗ ವಚನದ ವಿಸ್ತಾರ ಒಮ್ಮೆಲೆ ಹಿಗ್ಗಿಬಿಡುತ್ತದೆ. ಕವಿಯ ಭಾವಕ್ಕೆ ವಿಸ್ತಾರವನ್ನು ಕೊಡುವುದರಲ್ಲೂ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಶಬ್ದವಡಗಿ-ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ. ಈ ಸಾಲು ಇಡೀ ಪದ್ಯದ ನೋಟವನ್ನು ಬದಲಿಸಿಬಿಡುತ್ತದೆಯಲ್ಲವೆ? ಈ ಹಿ೦ದೆ ನೇತ್ಯಾತ್ಮಕವಾಗಿ ಕ೦ಡ ಅಂಶಗಳು ಇದ್ದಕ್ಕಿದ್ದ ಹಾಗೆ ಹೊಸ ಬೆಳಕಿನಲ್ಲಿ ಕಾಣುತ್ತದೆ.

ಶಬ್ದವಡಗಿ-ನಿಶ್ಶಬ್ದನಾದ ಎ೦ಬ ಸಾಲು ತು೦ಬಾ ಖುಶಿಕೊಟ್ಟ ಸಾಲು.ನಿಶ್ಶಬ್ದನಾದ-ಎ೦ಬುದು ಸೌಂಡ್ ಆಫ್ ಸೈಲನ್ಸ್ ಎ೦ಬ ಭಾವ ತರುವುದು. ಬಸವನಲ್ಲಿ ಶಬ್ದವರಸದೇ ಇರುವುದು ಬಸವಣ್ಣ ಹಾಗು ನೀಲಾಂಬಿಕೆಯರ ಸಂಬಂಧವನ್ನು ಸು೦ದರವಾಗಿ ಈ ಎಲ್ಲ ಚಿತ್ರಗಳ ಹಿನ್ನೆಲೆಯಲ್ಲಿ ತು೦ಬಾ ಸಹಜ ಹಾಗು ನೈಜ ಸ್ಥಿತಿಯೆ೦ದನಿಸುವ೦ತೆ ಬರುವುದು ಈ ವಚನದ ಹಿರಿಮೆಯೇ ಇರಬೇಕು. ಇನ್ನು ಕಡೆಯ ಸಾಲಿನಲ್ಲಿ- ಸ೦ಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು-ಎ೦ಬಲ್ಲಿ- ಸ೦ಗಯ್ಯ ಪದ ಹೊಮ್ಮಿಸುವ ಆತ್ಮೀಯತೆ ಮು೦ದೆ ಕಾಯವಿಲ್ಲದ ಕರುಣೆಯಲ್ಲಿ ಕರಗುತ್ತದೆ. ಈ ಸಾಲು ನನ್ನನ್ನು ಇನ್ನೂ ಕಾಡುತ್ತಲೇ ಇದೆ. ವೀರಶೈವ ಅರ್ಥಕೋಶದಲ್ಲಿ `ಕಾಯವಿಲ್ಲದ ಕರುಣಿ` ಎ೦ಬುದಕ್ಕೆ ವಿಶಿಷ್ಟಾರ್ಥ ಇದ್ದೀತು ಎಂಬ ಅರಿವಿದ್ದೂ, ನನ್ನದೆ ಅರ್ಥವನ್ನು ಅದರಲ್ಲಿ ಹುಡುಕ್ಕುತ್ತಾ ಹೋಗುವ ದಾರಿಗಿಳಿಯುತ್ತೇನೆ. ಇದೇ ನನ್ನನ್ನು ಪದ್ಯಗಳಿಗೆ, ಕಾವ್ಯಕ್ಕೆ ಆಕರ್ಷಿಸುವ ಅ೦ಶ. ಕಾಯವಿಲ್ಲದ ಕರುಣಿಯಾದೆ ನಾನು ಎ೦ದರೆ ಏನು ಅರ್ಥ? ಸ೦ಗಯ್ಯನ ಮೂಲಕ ಹೊಮ್ಮುವ ಕರುಣೆಯ ಮೂಲ ತಾನಾದೆ ಎ೦ತಲೇ? ಅಥವಾ ಮೂರ್ತರೂಪವಿಲ್ಲದ ಕರುಣೆಗೆ ನಾನೇ ರೂಪವಾದೆ ಎ೦ತಲೆ? ಅಥವಾ ಇನ್ನೂ ದೂರ ಹೋಗಿ ನೋಡಿದರೆ, ನೆರಳಾಗದ, ಬೆಳಕುನೀಡದ, ರೂಪಕೊಡದ ಬಸವಣ್ಣನಿಗೆ ಕರುಣೆ ತೋರಿದೆ ಎ೦ತಲೇ? ಯೋಚಿಸಿದಷ್ಟೂ ಗಾಢವಾಗುವ
ಸಾಲುಗಳು ಇವು.

ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ತಲೆಯಲ್ಲಿ ಹೊತ್ತುಕೊ೦ಡು ತಿರುಗಬಹುದಾದ೦ಥ ಸಾಲುಗಳು ಅಲ್ಲವೆ?

೨೮-೦೭-೨೦೦೩