ಅಣ್ಣಾ ಹಜಾರೆ- ಏನಾಗಿದೆ ನಿಮಗೆ?

ಅಣ್ಣಾ ಹಜಾರೆ- ಏನಾಗಿದೆ ನಿಮಗೆ?

          ಶರದ್ ಪವಾರ್‌ರ ಕಪಾಳ ಮೋಕ್ಷದ ಪ್ರಸಂಗದ ಬಗ್ಗೆ ನನಗೆ ತಿಳಿದದ್ದು ಬಹಳ ತಡವಾಗಿ...ಇದು ಒಂದು ಶಾಕಿಂಗ್ ನ್ಯೂಸ್ ಆಗಿರಲಿಲ್ಲ..ಯಾಕೆಂದರೆ ಪಾದುಕ ಪೂಜೆಯ ಪ್ರಸಂಗಳು ನಮ್ಮಲ್ಲಿ ಈಗ ಸಾಮನ್ಯವಾಗಿದೆ. ಆದರೂ ಇದೊಂದು ಗಂಭೀರವಾದ ಘಟನೆ...ಪವರ್‌ಫುಲ್ ಪವಾರ್‌ರಿಗೆ ತಪರಾಕಿ ಕೊಡುವುದೆಂದರೆ...ಅದರಲ್ಲೂ  ಜಡ್    ಸೆಕ್ಯುರಿಟಿಯಿರುವ ರಾಜಕಾರಣಿಗೆ!  ಹೀಗೆಲ್ಲಾ ಮಾಡುವುದರಿಂದ ಹರವಿಂದ್ ಸಿಂಗ್‌ನಂತವರು ತಾವು ಬಹಳ ಘನ ಕಾರ್ಯ ಮಾಡಿದೇವೆಂದು ಹಿಗ್ಗಿದರೆ ಅದು ಅವರ ಮೂರ್ಖತನ....ದೇವರು ಕೊಟ್ಟ ಶಿಕ್ಷೆಯಿಂದ ಬುದ್ಧಿ ಕಲಿತಿಲ್ಲ ಪವಾರ್! ಆಧುನಿಕ ವೈದ್ಯಕೀಯ ಸವಲತ್ತುಗಳಿದ್ದರೂ ಸೊಟ್ಟಗಾದ ಮುಖ ಸರಿಪಡಿಸಲಾಗಲಿಲ್ಲ....ಆದರೂ ಸುಟ್ಟ ಮುಖವೆತ್ತಿ ತಿರುಗುತ್ತಿದ್ದಾರೆ....ಆದರೆ ಅಣ್ಣಾಹಜಾರೆಯ ಹೇಳಿಕೆ ಖಂಡಿತ ಒಂದು ಶಾಕಿಂಗ್ ನ್ಯೂಸ್! ಕೆಲವೊಂದು ಸಮಯದಿಂದ ಅಣ್ಣಾ ಹಜಾರೆ ಮತ್ತವರ ಸಂಗಡಿಗರು ಒಂದಲ್ಲ ಒಂದು ಹೇಳಿಕೆ ಕೊಟ್ಟು ತಮ್ಮ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲ...ಗಾಂಧೀಜಿಯ ಸತ್ಯಾಗ್ರಹದ ಮಾದರಿಯಲ್ಲಿ ನಡೆದವರು ಇದೇ ಹಜಾರೆಯೇ? ಅಹಿಂಸಾ ಮಾರ್ಗದ ನೇಕಾರನೆಂದು ಸಾರಿಕೊಂಡವರು ಇವರೇ ತಾನೇ? ಈಗಾಗಲೇ ನಮ್ಮ ಇತಿಹಾಸದಿಂದ ನಾವೆಲ್ಲ ಪಾಠಕಲಿತಿಲ್ವಾ? ಕತ್ತಿ, ಈಟಿ, ಬಂದೂಕು, ಬಾಂಬ್‌ಗಳಿಂದ ಏನು ಸಾಧನೆಯಾಗಿದೆ..ಬರೇ ರಕ್ತಪಾತ, ಜೀವಹಾನಿ ಹೊರತು ಮತ್ತೇನು ಪಡೆದಿಲ್ಲ ಮನುಜ ಕುಲ. ಇದೆಲ್ಲಾ ಗೊತ್ತಿದ್ದರೂ ಮತ್ತೂ ಹಿಂಸೆಗೆ ಕೈಯೆತ್ತಿ ಬಲ ಕೊಡುತ್ತಿದ್ದಾರೆ..ಯಾಕೆ??ಅಣ್ಣಾಹಜಾರೆ..ಯಾಕೆ ಹೀಗೆ ಬದಲಾಗುತ್ತಾ ಬಂದಿದಿರಿ? ನೀವು ಯಾವ ಆಮಿಷಕ್ಕೆ ನಿಮ್ಮನ್ನು ಒಡ್ಡಿದಿರಾ? ದೇಶದ ಜನತೆ ನಿಮ್ಮನ್ನು ದೇವರೆಂದು ಆರಾಧಿಸಿದಕ್ಕೆ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದಿರಾ? 
 
    ಈಗೀಗ ನನಗೆ ಮಹಾತ್ಮಾ ಗಾಂಧೀಜಿಯವರ ನಿಲುವು ಅರ್ಥವಾಗುತ್ತಿದೆ...ಗಾಂಧಿಜೀಯವರನ್ನು, ಅವರ ತತ್ವಗಳನ್ನು ಮೆಚ್ಚಿದ್ದರೂ ಅವರು ತಮ್ಮ ಮಕ್ಕಳಿಗೆ ಬಹಳ ಅನ್ಯಾಯ ಮಾಡಿದ್ದರೆಂದೆನಿಸಿತ್ತು. ಹರಿಲಾಲ್‌ರ ಜೀವನ ಹಾಳು ಬೀಳುವುದಕ್ಕೆ ಗಾಂಧಿಯವರ ನಿಲುವೇ ಕಾರಣವೆಂದು ವಾದಿಸುತ್ತಿದ್ದೆ. ತಾವು ವಿದೇಶಕ್ಕೆ ಹೋಗಿ ಕಲಿತಿದ್ದರೂ ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರೆಂದು ದೂರುತ್ತಿದ್ದೆ.. ಬಹುಶಃ ಅವರಿಗೆ ಖಂಡಿತವಾಗಿ ಗೊತ್ತಿತ್ತು..ಅವರು ತಾವು ನಂಬಿದ ತತ್ವವನ್ನು ಮೊದಲು ಮನೆಯವರ ಮೇಲೆ ಪ್ರಯೋಗ ಮಾಡಿದರು...ಮಾದರಿಯಾದರು..ಸ್ವಾರ್ಥವನ್ನು ಎಂದೂ ತೋರಲಿಲ್ಲ..ಬೇಧಭಾವ ಮಾಡಲಿಲ್ಲ...ಈ ಗುಣಗಳಿಂದಲೇ ಅವರು ಪ್ರಥ್ವಿಯ ಜನರ ಮನದಲ್ಲಿ ಸ್ಥಾನ ಪಡೆದರು...ಆದರೆ ಅಕಟಕಾ..ತಮ್ಮದೇ ನೆಲದ ಜನರ ಮನದಿಂದ ದೂರವಾಗಿದ್ದಾರೆ...ಗಾಂಧೀಜಿ ಎಂದೂ ಖ್ಯಾತಿಗೆ, ಕಾಸಿಗೆ ಮರುಳಾಗಲಿಲ್ಲ...ಆದರೂ ಅವರು ಪಾಕಿಸ್ಥಾನದ ವಿಷಯದಲ್ಲಿ ಸೋತರು...ಕೆಲವೊಂದು ಹಿತಾಸಕ್ತಿಗೆ ಬಲಿಯಾದರು.. ಅವರಿಗೆ ತಿಳಿದಿತ್ತು...ಎಲ್ಲಿಯಾದರು ತಾವು ಸಂಸಾರದ ಬಗ್ಗೆ ಅತೀ ಗಮನ ಹರಿಸಿದರೆ ಅಥವಾ ಖ್ಯಾತಿಯ ಕಡೆ ಗಮನ ಕೊಟ್ಟರೆ ತಮ್ಮ ಗುರಿ, ತತ್ವ ಎರಡೂ ತಪ್ಪುವುದು.      ಮೋಹವು ನಮ್ಮ ಮೂಲ ಸ್ವಭಾವವನ್ನು ಬದಲಿಸುತ್ತದೆ. ಗಾಂಧಿಯವರು ವ್ಯಾಮೋಹವನ್ನು ಜಯಿಸಿದ್ದರು...ಅದರಿಂದಲೇ ಅವರ ವ್ಯಕ್ತಿತ್ವವು ಮೇರು ಪರ್ವತದೆತ್ತರಕ್ಕೆ ಬೆಳೆಯಿತು..ಜಗತ್ತಿನ ಉದ್ದಗಲಕ್ಕೂ ಹರಡಿತು. ಹಜಾರೆಯವರೆ, ನೀವೀಗ ಖ್ಯಾತಿಯ ಮೋಹ ಪಾಶಕ್ಕೆ ಸಿಲುಕಿದ್ದಿರಿ...ನಿಮ್ಮ ನಡೆಗಳೆಲ್ಲಾ ಸರಿಯೆಂಬ ಭ್ರಮೆಗೆ ಸಿಲುಕಿ ನಿಮ್ಮನ್ನು ಪೂಜಿಸುತ್ತಿರುವ ಯುವವರ್ಗವನ್ನು ಹಿಂಸೆಯ ದಾರಿಗೆಳೆಯುತ್ತಿದ್ದಿರಾ! ದಯವಿಟ್ಟು ಗಮನಿಸಿ .ಗಾಂಧಿಯವರಂತೆ ನಿಮ್ಮ ಹೋರಾಟ ಹೊರಗಿನ ಶತ್ರುಗಳೊಂದಿಗಲ್ಲ..ನಮ್ಮವರೇ ಆದ ಹಿತ ಶತ್ರುಗಳೊಂದಿಗೆ!  ಮುಳ್ಳಿನ ಮೇಲೆ ಹರಡಿರುವ ವಸ್ತ್ರವನ್ನು ಜಾಗರೂಕತೆಯಿಂದ ಬಿಡಿಸುವಂತೆ ನಿಮ್ಮ ನಡೆಯಾಗಬೇಕು ಹೊರತು, ಇಂತಹ ಒರಟು ಹೇಳಿಕೆ ನಿಮಗೆ ಶೋಭೆಯಲ್ಲ.                                      
        ಇಲ್ಲೇ ಹಜಾರೆ ಎಡವಿದ್ದಾರೆನಿಸುವುದು.  ...ಸಂಸಾರವಿಲ್ಲವಿದ್ದರೇನಾಯಿತು! ಖ್ಯಾತಿಗೆ ಮರುಳಾಗಿದ್ದಾರೆ! ಸರಿಯಾಗಿ ಆಲೋಚಿಸದೆ ಹೇಳಿಕೆ ನೀಡುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಓಟುಹಾಕಬಾರದೆಂದು ಕರೆಕೊಟ್ಟಾಗಲೇ..ಎಲ್ಲಿಯೋ ಶೃತಿ ತಪ್ಪುತಿದೆ ಅನ್ನಿಸಿತ್ತು..ಭ್ರಷ್ಟಾಚಾರಕ್ಕಿಂತ ಲೋಕಪಾಲಕ ಮಸೂದೆಯ ಪ್ರತಿಷ್ಟೆ ಹೆಚ್ಚಾಗುತ್ತಿದೆಯೇ ಎಂದೆನಿಸಿತ್ತು ಕೂಡ. ಸಂತೋಷ್ ಹೆಗ್ಡೆ, ಅಗ್ನಿವೇಶ್‌ನವರ ಹೇಳಿಕೆಗಳು ನನ್ನ ಮನಸ್ಸಿನ ಅನಿಸಿಕೆಯನ್ನು ಧೃಡಪಡಿಸಿತ್ತು...ಅಲ್ಲದೆ ಕಾಶ್ಮೀರದ ಬಗ್ಗೆ ಹೇಳಿಕೆ, ಬೇಡಿಯವರ ಹಗರಣವೆಲ್ಲವೂ ಕೂಡಿ ಜನರಿಗೆ ಒಂದಷ್ಟು ನಿರಾಸೆಯಾದದ್ದು ಖಂಡಿತ ಸತ್ಯ. ಅಂತೂ ಹಜಾರೆಯವರು ಇಂತಹ ಹೇಳಿಕೆಗಳಿಂದ ರಾಮ್‌ದೇವ ಬಾಬಾನವರಂತೆ ತಮ್ಮ ಕೈಯಿಂದಲೇ ತಮ್ಮ ಘನತೆಗೆ ಕಳಂಕ ಹಚ್ಚುವ ಕೆಲಸ ಮಾಡುತ್ತಿದ್ದಾರೆ...ನನ್ನ ಮಾತಿಗೆ ನೀವೆಲ್ಲಾ ಸಹಮತಿ ಕೊಡದಿರಬಹುದು...ಹೆಚ್ಚಿನವರು ಹಜಾರೆಯನ್ನು ಕುರುಡರಂತೆ ಹಿಂಬಾಲಿಸುತ್ತಿದ್ದಾರೆ..ನಮ್ಮದುರಾದೃಷ್ಟ...ಭಾರತೀಯರು ಬಲು ಬೇಗ ಅನುನಾಯಿಗಳಾಗುತ್ತಾರೆ, ಮತ್ತು ಕಣ್ಣು ಮುಚ್ಚಿ, ವಿವೇಚನೆಯಿಲ್ಲದೆ ದೇವರ ಪೀಠದಲ್ಲಿಟ್ಟು ಪೂಜೆ ಮಾಡುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ನೆಹರೂ ಮನೆತನದ ನಿಷ್ಠ ಹಿಂಬಾಲಕರು. ಆದ್ದರಿಂದ ಸೋನಿಯಾ ಅವರಿಗೆ ಯೋಗ್ಯತೆ ಇಲ್ಲದಿದ್ದರೂ ಅಧಿಕಾರ ದೊರೆತಿರುವುದು.
 
      ಇನ್ನು  ಮೀಡಿಯಾಗಳು ಇಂತಹ ಪ್ರಸಂಗಳನ್ನು ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತವೆ....ತಮ್ಮ ಟಿ ಆರ್ ಪಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬಳಸಿಕೊಳ್ಳುತ್ತವೆ. ಮತ್ತೆ ಹೊಸ ಪ್ರಸಂಗ ಹೊಸ ವಿಷಯ ಸಿಕ್ಕಿದ ಕೂಡಲೆ ಇದನ್ನು ಮರೆತು ಬಿಡುತ್ತವೆ. ಆದರೆ ನಮ್ಮ ಜನರು ಸಾಮೂಹಿಕ ಸನ್ನಿಗೆ ಒಳಗಾದವರಂತೆ ವಿವೇಚನೆ ಕಳೆದು ಕೊಂಡವರಂತೆ ವರ್ತಿಸುವುದನ್ನು ನೋಡಿ ಬೇಸರವಾಗುತ್ತದೆ...ದಿನಕ್ಕೊಂದು ಹಗರಣ, ಬೆಲೆಯೇರಿಕೆ, ಭ್ರಷ್ಟಾಚಾರ...ಮೊದಲಾದವುಗಳಿಂದ ಜನಸಾಮಾನ್ಯರು ರೊಚ್ಚಿಹೋಗಿದ್ದಾರೆ ನಿಜ...ಅದಕ್ಕಾಗಿ ಹಿಂಸೆಗಿಳಿಯುವುದು ಸರಿಯಲ್ಲ..ಮಾತ್ರವಲ್ಲದೆ ಇದನ್ನು ಸಮರ್ಥಿಸಿ ಬುದ್ಧಿಜೀವಿಗಳು ಹೇಳಿಕೆ ನೀಡುವುದು ಸಮಂಜಸವಲ್ಲ. ಇಂತಹ ವಿಷಯಗಳ ಮೇಲೆ ಲೇಖನ ಬರೆಯುವುದೆಂದರೆ  ಅದಕ್ಕೆ     ಮಿತಿಯೇ ಇರುವುದಿಲ್ಲ..ಏನೋ ರಾಜಕಾರಣದ ಒಳಗಿನ ಹೂರಣ ಬೇರೆಯೇ ಇರುತ್ತದೆ..ಅದರ ಬಗ್ಗೆ ಹೇಳಿದಷ್ಟು ಕಮ್ಮಿಯೇ!


 

Rating
No votes yet

Comments