ಮಸಣದ ಜಾಡು ಹಿಡಿದು ಹೊರಟವರು....

ಮಸಣದ ಜಾಡು ಹಿಡಿದು ಹೊರಟವರು....

ಕವನ

 


ಗರ್ಭದಿಂದುದ್ಭವಿಪಿ ಭುವಿಯ 
ಸ್ಪರ್ಷಿಸೋ ದಿನದಿ ಶುರು ನಮ್ಮ
ಪಯಣವದು ಮಸಣದೆಡೆಗೆ 
ದಾರಿಯಲಿ ಕಲ್ಲಿಹವು, ಹೂವಿಹವು
ಮುಳ್ಳಿಹವು, ಪನ್ನೀರ, ಕಣ್ಣೀರ ಹೊಳೆಗಳಿಹವು


ಯಾತ್ರೆಯಾರಂಭದಲಿ, ನಿಷ್ಕಪಟ 
ಮುಗ್ಧತೆಯ ದೇವ ನಿನ್ನಲಿ ತುಂಬಿ ಕಳಿಸಿರುವನು
ನಡೆಯುತ್ತ ನಡೆಯುತ್ತ, ನಡತೆಯದು
ಕೆಡುಕಾಯ್ತು, ಜಾಡಿಸದು ಒದ್ದೆ 
ನೀ ಸದ್ಗುಣವನು


ದಾರಿಯಾ ಮಧ್ಯದಲಿ 
ಮಾವಿನಾ ಮರ ನೆಟ್ಟು ಹಣ್ಣೆಲ್ಲ
ತನದೆಂದು ಬಚ್ಚಿಟ್ಟೆ ನೀ 
ಮರವದುವೆ ತನ್ನಾಸ್ತಿ ಬಿಡಲಾರೆ 
ಎಂಬಂತೆ ನಿನ್ನಯಾ ಹೆಸರನ್ನು
ಬರೆದಿಟ್ಟೆ ನೀ 


ಕಾಲವದು ನಿನ್ನನ್ನು ತಳ್ಳುತ್ತ ನಡೆದಿಹುದು
ದೇಹವದು ಹಣ್ಣಾಗಿ ಹೋಗುತಿರಲು
ನಿನ್ನ ಯಾತ್ರೆಯು ಅದುವು
ಎಲ್ಲೆಂದು ಮರೆತೆ ನೀ
ಶಾಶ್ವತವು ಎಂಬಂತೆ ಮೆರೆಯುತಿರುವೆ 


ಇಲ್ಲೇನು ನಮದಲ್ಲ, ಸ್ವಾರ್ಥದಲಿ ಹುರುಳಿಲ್ಲ 
ಅಲ್ಲೊಬ್ಬ ನಮ್ಮನ್ನು ಕುಣಿಸುತಿರುವ
ಇಂದಿಲ್ಲಿ ಬದುಕುತ್ತ, ನಾಳೆಯಾ ಅರಿವಿರದೆ 
ಮಸಣದಾ ಜಾಡ್ಹಿಡಿದು ಹೊರಟವರು............

Comments