ಕಥೆ : ಶ್ರೀಗಂಧದ ಧೂಪ - ( ದತ್ತ )
ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ. ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ
"ಇದೇನು ಇಷ್ಟುಬೇಗ ಹೊರಟಿದ್ದಿ , ಟೂರ?". ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶೇಷ ಜಿಲ್ಲಾದಿಕಾರಿ ಆಕೆ.
"ದತ್ತ, ಆಗಲೆ ಮರೆತು ಹೋಯಿತ?, ನೆನ್ನೆಯೆ ಹೇಳಿದ್ದೆನಲ್ಲ, ಗ್ರಾಮೀಣ ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಿಸಲಾಗಿದೆ, ಬರಿ ಧಾವಂತ, ಇವರದು ಇದೇ ಆಗಿಹೋಯ್ತು, ಬೇಗ ಹೋಗಬೇಕು" ಅಂದಳು,
ಅದಕ್ಕೆ ದತ್ತ "ಸರಿ ನಾನು ಮರೆತ್ತಿದ್ದೆ " ಎಂದ.
ಅವಳು ಪುನಃ ಹೊರಬಾಗಿಲಿನತ್ತ ನಡೆಯುತ್ತಿದ್ದಂತೆ , ಗಮನಿಸಿದ, ಎಡಕಾಲು ಸ್ವಲ್ಪ ಎಳೆದು ಹಾಕುತ್ತಿದ್ದಳು, ಎಳೆಯ ವಯಸಿನಲ್ಲಿ ಕಾಡಿದ ಪೋಲಿಯೊ ಪರಿಣಾಮ, ನಡೆಯುವಾಗ ಸ್ವಲ್ಪ ಎಳೆಯುತ್ತಾಳಾದರು ಮಾತು, ಮನಸ್ಸು ಎಲ್ಲ ನೇರ ಅನ್ನಿಸಿ ನಗು ಬಂತು, ಅವನಿಗೆ ಅರಿವಿಲ್ಲದೆ ಮುಖದಲ್ಲಿ ನಗುವು ಹರಡಿತು. ಅವಳು ಅದನ್ನು ಗಮನಿಸಿ ಪುನಃ ನಿ೦ತಳು.
"ಏನು ರಾಯರು ಬೆಳಗ್ಗೆ ಬೆಳಗ್ಗೆ ಹಸನ್ಮುಖರಾಗಿದ್ದೀರಿ, ಸಂತೋಷಕ್ಕೆ ಕಾರಣ ನಾನು ತಿಳಿದುಕೊಳ್ಳಬಹುದೆ? ಅಂದಹಾಗೆ ಏನು ನೀವು ಇನ್ನು ವಿರಾಮವಾಗಿ ಕುಳಿತ್ತಿದ್ದೀರಿ, ಆಫೀಸ್ ಕಡೆ ಹೋಗುವ ಚಿಂತೆಯಿಲ್ಲವ. ನಗರದಲ್ಲಿ ಎಲ್ಲ ಕ್ರೈಮ್ ಗಳು ಇಲ್ಲವಾಗಿ ಒಮ್ಮೆಲೆ ಶಾಂತಿ ನೆಲಸಿದಂತೆ ಕಾಣುತ್ತೆ " ಕೆಣಕಿದಳು,
ಅವನು ಸಂಕೋಚದಿಂದ ಹೇಳಿದ "ಇಲ್ಲ ಈ ದಿನ ಆಫೀಸ್ ಗೆ ಹೋಗುತ್ತಿಲ್ಲ, ನಾನು ಕಳೆದವಾರ ತಿಳಿಸಿದ್ದೆನಲ್ಲ, ನಾನು ಓದಿದ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ , ಈದಿನ ಹಳೆಯ ವಿಧ್ಯಾರ್ಥಿಗಳ ಸಮ್ಮಿಲನ ಅಂತ ಮಾಡ್ತೀದ್ದಾರೆ, ಕಾಲೇಜಿನ ಪ್ರಿನ್ಸಿಪಾಲ್ ಏತಕ್ಕೊ ಬಂದವರು, ನಮ್ಮ ಆಫೀಸಿನವರೆಗು ಬಂದು ಅಹ್ವಾನಿಸಿದರು, ಬರಲ್ಲ ಅಂತ ಹೇಳಲಾಗಲಿಲ್ಲ ಒಪ್ಪಿಬಿಟ್ಟೆ" . ಆಕೆ ನಕ್ಕಳು
"ಸರಿ ರಾಯರೆ ಅದಕ್ಕೇಕೆ ಅಷ್ಟು ಸಂಕೋಚ, ಪಾಠ ಹೇಳಿದ ಮಾಸ್ಟರೆ ಬಂದು ಕರೆಯುವಾಗ ಆಗಲ್ಲ ಅನ್ನಲ್ಲಿಕಾಗುತ್ಯೆ, ತಿಳಿಯಿತು ಬಿಡಿ ನಿಮ್ಮ ಸಂತೋಷಕ್ಕೆ ಕಾರಣ, ಯಾರೊ ನಿಮ್ಮ ಕಾಲೇಜಿನ ಹಳೆ ಸ್ನೇಹಿತೆಯರು ಬರುತ್ತಿದ್ದಾರೆ ಅನ್ನಿಸುತ್ತೆ, ಎಷ್ಟಾದರು ಟೀನ್ ಏಜಿನಲ್ಲಿದ್ದಾಗ ಮನಸೋತ ಲವರ್ಸ್ ಅಲ್ಲವೆ, ಅದಕ್ಕೆ ನಿಮ್ಮ ಮನ ಸಂತೋಷದಿಂದ ತುಂಬಿ ಮುಖವೆಲ್ಲ ನಗುವಿನಿಂದ ತುಂಬಿದೆ" ಎನ್ನುತ್ತ , ನಾಚಿಕೆಯಿಂದ ಕೆಂಪಾದ ಇವನ ಮುಖ ನೋಡಿ ಜೋರಾಗಿ ನಗುತ್ತ , ಇವನ ಉತ್ತರಕ್ಕು ಕಾಯದೆ, ಆಲ್ ದ ಬೆಷ್ಟ್ ಹೇಳುತ್ತ, ನಿಮ್ಮ ಹಳೆ ಲವರ್ ಯಾರದರು ಇದ್ದರೆ ಸಿಗಲಿ ಎಂದು ಹಾರೈಸಿ ಹೊರಹೋದಳು. ಸ್ವಲ ಸಮಯದಲ್ಲಿಯೆ ಅವಳು ಕುಳಿತ ಕಾರು ಹೊರಟ ಶಬ್ದ ಕೇಳಿಸಿತು.
ದತ್ತರಾಜ ಅದು ತಂದೆ ತಾಯಿ ಇಟ್ಟ ಹೆಸರಲ್ಲ, ಅಸಲಿಗೆ ಅವನಿಗೆ ತಾಯಿ ತಂದೆ ಯಾರೊ ತಿಳಿದೆ ಇಲ್ಲ. ಅವನಿಗೆ ಸ್ವಲ್ಪ ಸುತ್ತ ಮುತ್ತಲಿನದು ಅರ್ಥವಾಗುವ ವಯಸ್ಸು ಬರುವಾಗಲೆ ಅವನು ಅನಾಥಾಶ್ರಮದಲ್ಲಿದ್ದ. ಯಾರೊ ರಸ್ತೆಯ ಬದಿಯಲ್ಲಿ ತೊರೆದು ಹೋಗಿ, ಮತ್ಯಾರದೊ ಮೂಲಕ ಅನಾಥಾಶ್ರಮ ಸೇರಿದ ಹುಡುಗ ಅವನು. ದತ್ತರಾಜ ಎಂದು ಅವನಿಗೆ ಹೆಸರಿಟ್ಟವರು ಅನಾಥಾಶ್ರಮದ ಮುಖ್ಯಸ್ಥ ರಘುರವರು. ಅವನು ಎಸ್ ಎಸ್ ಎಲ್ ಸಿ ಗೆ ಬರುವ ಹೊತ್ತಿಗೆ ನೀನು ಬೇರೆ ಆಶ್ರಯ ಹುಡುಕು ಎಂದರು ಅನಾಥಶ್ರಮದವರು, ಅಲ್ಲಿಯ ಕಾನೂನೆ ಹಾಗಿತ್ತು, ಅದು ಹದಿನೈದು ವರುಷಕ್ಕಿಂತ ಚಿಕ್ಕಮಕ್ಕಳಿಗೆ ಇದ್ದ ಆಶ್ರಯಧಾಮ. ದಾರಿ ತೋರದೆ ನಿಂತ ಅವನಿಗೆ ಸಹಾಯಮಾಡಿದವರು ಅಲ್ಲಿನ ಮುಖ್ಯಸ್ಥ ರಘುರವರೆ. ಅವರು ಹೇಳಿದರು
"ದತ್ತ , ನನಗೆ ನಿನ್ನನ್ನು ಕಂಡರೆ ಮಗನನ್ನು ಕಂಡಂತೆ , ಆದರೆ ನನ್ನ ಪರಿಸ್ಥಿಥಿ ಬೇರೆ, ನಿನ್ನನ್ನು ಮನೆಯಲ್ಲಿ ಇಟ್ಟುಕೊಳ್ಳೂವ ಅನುಕೂಲವಿಲ್ಲ, ಆದರೆ ನಿನಗೆ ಬೇರೆ ಸಹಾಯ ಮಾಡುತ್ತೇನೆ. ನಿನ್ನ ಊಟ ಆಶ್ರಯ, ಓದಿಗೆ ನನ್ನ ಕೆಲವು ಮಿತ್ರರ ದೊಡ್ಡವರ ಸಹಾಯ ಕೋರಿದ್ದೇನೆ, ನೀನು ಈ ಬೆಂಗಳೂರಿನಿಂದ ತುಮಕೂರಿಗೆ ಹೊರಡು ಎಲ್ಲ ಅನುಕೂಲವಾಗುತ್ತದೆ" ಎಂದು ಕಳಿಸಿದರು.
ದತ್ತನಿಗೆ ಅಲ್ಲಿ ರಷುರವರ ಮಿತ್ರರಿಂದ ಎಲ್ಲ ಸಹಕಾರವು ದೊರೆತಿತು. ಇರಲು ಬಾಡಿಗೆ ಇಲ್ಲದ ರೂಮು ಸಿಕ್ಕಿತ್ತು, ಓದು ಮುಂದುವರೆದು ಆ ಸಮಸ್ಯೆ ಪರಿಹಾರವಾಗಿತ್ತು. ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ, ರೂಮನ್ನು ಕೊಟ್ಟಿದ್ದ ಮನೆಯಾಕೆ ಒಳ್ಳೆಯವಳು ಹಾಗಾಗಿ ಕೆಲವೊಮ್ಮೆ ಅವರ ಮನೆಯ ಊಟವು ಸಿಗುತ್ತಿದ್ದು, ಎಲ್ಲ ಅನುಕೂಲವಾಗಿದ್ದು, ಡಿಗ್ರಿವರೆಗು ಬಂದಿದ್ದ. ಅವನಿಗೆ ಚಿಕ್ಕ ವಯಸಿನಿಂದಲು ಇದ್ದ ಆಸೆಯೆಂದರೆ ಏನಾದರು ಮಾಡಿ I.P.S ಮಾಡಿ ಪೋಲಿಸ ಅಧಿಕಾರಿಯಾಗಬೇಕು ಎಂಬುದು , ಆ ಉದ್ದೇಶಕ್ಕಾಗಿ ತನ್ನ ಗಮನವನ್ನೆಲ್ಲ ಹರಿಸಿದ್ದ.
ಓದಿನ ಜೊತೆಜೊತೆಗೆ ತನ ಖರ್ಚಿಗೆ ಸಾಲುವಷ್ಟು ದುಡಿಮೆಯು ಇತ್ತು, ಸುತ್ತ ಮುತ್ತಲ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ವಿಧ್ಯಾರ್ಥಿಗಳಿಗೆ ಮನೆ ಪಾಠ ಹೇಳುವದರಲ್ಲಿ ಅವನ ಹೆಸರು ಸಾಕಷ್ಟು ಮಿಂಚಿತ್ತು. ಆದರೆ ಸಮಯಾವಕಾಶವಿಲ್ಲದ ಅವನು ಎಲ್ಲವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಕಾಲೇಜಿನಲ್ಲಿ ಇವನು ಹಲವರಿಗೆ ಅಚ್ಚುಮೆಚ್ಚು. ಪ್ರಾಧ್ಯಾಪಕರೆಲ್ಲ ಇವನನ್ನು ಗೌರವ ಹಾಗು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಕಾಲೇಜಿನ ವಿಧ್ಯಾರ್ಥಿಗಳ ಗುಂಪಿನಲ್ಲಿ ಹಲವು ಒಳಸುಳಿಗಳಿದ್ದವು. ಪ್ರತಿಷ್ಟಿತ ಕುಟುಂಬದ ಕೆಲವು ಸಹಪಾಠಿಗಳಿಗೆ ಇವನನ್ನು ಕಂಡರೆ ಅಸೂಯೆ. ಅದಕ್ಕೆ ಕಾರಣ ಇವನ ಪ್ರಖ್ಯಾತಿ ಹಾಗು ಕಾಲೇಜಿನ ಹುಡುಗಿಯರೆಲ್ಲ ಇವನೊಡನೆ ಬೆರೆಯುತ್ತಿದ್ದ ರೀತಿ.
"ರೀ ದತ್ತ " ಎಂದು ಕೂಗುತ್ತ ಬರುತ್ತಿದ್ದ ಅವರೆಲ್ಲ , ತಮ್ಮ ಪಾಠ ಪ್ರವಚನಗಳಲ್ಲಿನ ಸಮಸ್ಯೆಗಳನ್ನು ವಿಷಯಗಳನ್ನು ಇವನೊಡನೆ ಚರ್ಚಿಸುವ ಮಟ್ಟಿಗೆ ಇವನೊಡನೆ ಎಲ್ಲರ ಸಲುಗೆ. ಹಿನ್ನಲೆಯಲ್ಲಿ 'ಪಾಪ ಅನಾಥ' ಎನ್ನುವ ಭಾವವು ಇತ್ತೇನೊ ಎಂದು ದತ್ತ ಕೆಲವೊಮ್ಮೆ ಯೋಚಿಸುತ್ತಿದ್ದ.
ಕಾಲೇಜಿನಲ್ಲಿ ಹುಡುಗಿಯರು ಸಾಮಾನ್ಯವಾಗಿ ತಮ್ಮದೆ ಆದ ಗುಂಪುಗಳನ್ನು ಮಾಡಿಕೊಂಡು ಇರುತ್ತಿದ್ದರು, ಅದರಲ್ಲಿ ಪ್ರಸಿದ್ದ ಹುಡುಗರೆಲ್ಲ 'ಪಂಚ ಕನ್ಯೆಯರು' ಎಂದು ಹೆಸರಿಟ್ಟಿದ್ದ ಜಾನಕಿ ನಾಯಕತ್ವದ ಗುಂಪು, ಉಳಿದ ಸದಸ್ಯರು ಭಾರತಿ, ಕಲ್ಪನ, ಸರೋಜ ಹಾಗು ಅರುಣ. ಓದುವದರಲ್ಲಿ ಸದಾ ಮುಂದಿದ್ದ ಗುಂಪು, ಇವರನ್ನು ನೇರವಾಗಿ ರೇಗಿಸಲು ಹುಡುಗರು ಭಯ ಪಡುತ್ತಿದ್ದ ಕಾರಣ ಅವರಲ್ಲಿದ್ದ ಗಂಭೀರ ನಡೆ ನುಡಿ. ದತ್ತನನ್ನು ಕಂಡರೆ ಅವರಿಗೆ ಅಚ್ಚುಮೆಚ್ಚು ಅನ್ನಲು ಕಾರಣ ಇವನು ಅವರಿಗೆ ಕಷ್ಟವಾಗಿದ್ದ , ಕ್ಲಾಸ್ ರೂಮಿನಲ್ಲು ಅರ್ಥವಾಗದ ಕೆಲವು ಗಣಿತದ ವಿಜ್ಞಾನದ ಸಮಸ್ಯೆಗಳು ಇವನು ಅರ್ಥವಾಗುವಂತೆ ವಿವರಿಸುತ್ತಿದ್ದ ರೀತಿ. ಹಲವು ಹುಡುಗರು ಇವನ ಮೂಲಕ ಈ ಹುಡುಗಿಯರಿಗೆ ಹತ್ತಿರವಾಗಲು ಪ್ರಯತ್ನ ಪಟ್ಟರು, ಆದರೆ ಅದು ದತ್ತನ ನೇರ ಸ್ವಭಾವದಿಂದ ಸಾದ್ಯವಾಗುತ್ತಿರಲಿಲ್ಲ ಹಾಗಾಗಿ ಸದಾ ಅವನನ್ನು ಕಣ್ಣ ಅಂಚಿನಲ್ಲೆ ಕಾಯುತ್ತಿದ್ದರು ಹೇಗಾದರು ಸರಿ ಇವನನ್ನು ಮಟ್ಟಹಾಕಲು.
ಹೊರಗಿನ ಮಾತು ನಡೆ ನುಡಿ ಎಷ್ಟೆ ಗಂಭೀರವಾಗಿದ್ದರು, ದತ್ತ ಹಾಗು ಅರುಣರ ನಡುವಿನ ಭಾಂದವ್ಯ ಸ್ನೇಹವನ್ನು ಮೀರಿ ಪ್ರೇಮಕ್ಕೆ ತಿರುಗುತ್ತಿರಬಹುದೆಂದು ಮೊದಲು ಅರ್ಥಮಾಡಿಕೊಂಡವರು ಆಕೆಯ ನಾಲ್ವರು ಸ್ನೇಹಿತೆಯರು. ಜಾನಕಿ ಒಂದೆರಡು ಬಾರಿ ಅರುಣಳನ್ನು ವಿಚಾರಿಸಿದಳು ಆದರೆ ಅರುಣ ಹಾರಿಕೆಯ ಉತ್ತರ ಕೊಟ್ಟರು ಸಹ ಅವಳ ಕಣ್ಣ ಕೊನೆಯ ಮಿಂಚು ಮಾತಿನಲ್ಲಿಯ ದ್ವನಿಯ ಏರಿಳತದಲ್ಲೆ ಅರ್ಥಮಾಡಿಕೊಂಡು ಎಚ್ಚರಿಸಿದಳು. ಆದರೆ ವಯಸಿನ ಸಹಜ ಆಕರ್ಷಣೆ, ಅವರಿಬ್ಬರ ನಡುವಿನ ಸಹಜ ಸ್ವಭಾವಗಳು ಎಲ್ಲ ಪರಿಸ್ಥಿಥಿಯನ್ನು ಮೀರಿ ಅವರ ಮನಗಳನ್ನು ಒಂದುಗೂಡಿಸಿತ್ತು. ಆದರೆ ವಿಚಿತ್ರವೆಂದರೆ ಒಮ್ಮೆಯಾದರು ಇಬ್ಬರು ಒಬ್ಬರಿಗೊಬ್ಬರು ಹೇಳಲಿಲ್ಲ ತಮ್ಮ ಪರಸ್ಪರ ಪ್ರೀತಿಯನ್ನು.
ಎಲ್ಲಕ್ಕಿಂತ ಹೆಚ್ಚಾಗಿ ದತ್ತನಲ್ಲಿದ್ದ ಓದುವ ಗುರಿ ಮತ್ತು ಅವನಲ್ಲಿ ಬೆಳೆದು ಬಂದ ಸುಸಂಸ್ಕೃತ ಸ್ವಭಾವ ಎಂದು ಅವನ ನಡತೆಯನ್ನು ಮೇರೆ ಮೀರಲು ಬಿಡಲಿಲ್ಲ. ಅವನ ಗುರಿ ಒಂದೆ ಇತ್ತು ತಾನು ಹೇಗಾದರು ಸರಿಯೆ I.P.S ಪರೀಕ್ಷೆ ತೆಗೆದುಕೊಂಡು ಪೋಲಿಸ್ ಅಧಿಕಾರಿಯಾಗಬೇಕು. ಅಲ್ಲದೆ ಅರುಣ ನಗರದಲ್ಲಿಯೆ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದವಳು. ದತ್ತನ ನಡೆನುಡಿಯಲ್ಲು ಸ್ವಲ್ಪ ವೆತ್ಯಾಸವಾದರು ಕಾಲೇಜಿನಲ್ಲಿ ಅರುಣಳ ಹೆಸರಿಗೆ ಕಳಂಕ ಬರುವದೆಂದು ಅವನು ಅರಿತ್ತಿದ್ದನು. ಅಲ್ಲದೆ ಅದು ಯಾವ ರೀತಿಯೊ ತಿರುಗಿ ತನ್ನ ಓದಿಗೆ ಅಡ್ಡಬರಬಾರೆದೆಂದೆ ಅವನ ಇಚ್ಚೆ. ಅರುಣ ಸಹ ಇದನ್ನೆಲ್ಲ ಸರಿಯಾಗಿಯೆ ಅರ್ಥಮಾಡಿಕೊಂಡಿದ್ದಳು.
ಪದವಿಯ ಕಡೆಯ ವರ್ಷಕ್ಕೆ ಬಂದಂತೆ ಪರೀಕ್ಷೆಯ ಮುಂಚಿನ ದಿನಗಳಲ್ಲಿ ಹೇಗೊ ಒಮ್ಮೆ ಇಬ್ಬರೆ ಇದ್ದಾಗ ಅವರಿಬ್ಬರ ನಡುವೆ ಎಲ್ಲ ಭಾವವನ್ನು ಮೀರಿ ಈ ಪ್ರೀತಿಯ ಮಾತುಗಳು ಹೊರಟವು. ದತ್ತನು ವಿಹ್ವಲನಾದ ಅವನಿಗೆ ಅಸಹಾಯಕತೆ ತನ್ನವರು ಅನ್ನುವರು ಯಾರು ಇಲ್ಲ ಅವನಿಗೆ ಸಹಾಯ ಮಾಡಲು. ತಾನೊಮ್ಮೆ ಈ ಬಲೆಯಲ್ಲಿ ಸಿಕ್ಕಿದರೆ ತನ್ನನ್ನು ಚಿಕ್ಕವಯಸಿನಿಂದ ಬೆಳೆಸಿದ್ದ ರಘುರವರಿಗೆ ಏನೆಂದು ಹೇಳುವುದು. ಅವರಲ್ಲಿ ಈ ವಿಷಯ ಸದ್ಯಕ್ಕೆ ಪ್ರಸ್ತಾಪ ಮಾಡಲು ಸಾದ್ಯವೆ ಇಲ್ಲ. ತನ್ನ ಓದು ಮುಗಿದು, ತನ್ನ ಗುರಿಯನ್ನು ಸೇರುವ ಮುಂಚೆ ಈ ಪ್ರೀತಿಯ ವಿಷಯ ತಿಳಿದರೆ ತಾನು ಎಲ್ಲರಿಂದಲು ಅಪಹಾಸ್ಯಕ್ಕೆ ಒಳಗಾಗುವೆ.
ಅರುಣ ತನ್ನ ವಯಸಿಗೆ ಮೀರಿ ಪ್ರೌಡವಾಗಿ ಚಿಂತಿಸಿದಳು ಅವಳು ಎಂದಳು 'ದತ್ತ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅನುವದಂತು ಸತ್ಯ, ಆದರೆ ಈಗ ವಿಷಯ ಮನೆಯಲ್ಲಿ ಪ್ರಸ್ತಾಪ ಮಾಡಿದರೆ ಖಂಡೀತ ಯಾರು ಅರ್ಥ ಮಾಡಿಕೊಳ್ಳಲ್ಲ ಬದಲಿಗೆ ಮಾನಸಿಕ ಹಿಂಸೆಗಳು, ಅಪನಂಭಿಕೆ, ಅಪಹಾಸ್ಯ ಎಲ್ಲವು ಎದುರು ನಿಲ್ಲುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಭವಿಷ್ಯ ತೊಂದರೆಗೆ ಸಿಕ್ಕುತ್ತದೆ, ಒಮ್ಮೆ ನಾವು ಎಲ್ಲರನ್ನು ಎದುರಿಸಿ ಓಡಿಹೋದರು ಅಷ್ಟೆ, ಬದಲಿಗೆ ನಾವು ಸಹನೆಯಿಂದ ಕಾಯೋಣ. ನೀವು ನಿಮ್ಮ ಡಿಗ್ರಿ ಮುಗಿಸಿ ಮುಂದಿನ ನಿಮ್ಮ ಗುರಿಯತ್ತ ಗಮನ ನೀಡಿ. ನಿಮ್ಮ ಬದುಕು ನೀವು ರೂಪಿಸಿಕೊಂಡನಂತರ ನಾವು ನಮ್ಮ ಪ್ರೀತಿಯ ಬಗ್ಗೆ ಯೋಚಿಸೋಣ. ಹಾಗೆಂದು ನಾನು ನಿಮ್ಮನ್ನು ಪ್ರೀತಿಸುತ್ತಿಲ್ಲ ಅಂತ ಅರ್ಥವಲ್ಲ ನನ್ನ ಮನಸ್ಸು ನಿಮಗೆ ತೋರಿಸಲಾರೆ. ಆದರೆ ಹಾಗೆ ನಾನು ನಿಮ್ಮ ಬದುಕಿನ ಹಾದಿಗೆ ವಿಷವಾಗಲಾರೆ. ನಾನು ನಿಮ್ಮನ್ನು ಕಾಯುತ್ತೇನೆ , ನೀವು ಬರುವವರೆಗು ಕಾಯುತ್ತೇನೆ. ಹಾಗೆಂದು ನೀವೇನು ನಿಮ್ಮ ಬದುಕು ನನಗಾಗಿ ಮುಡುಪಿಡಬೇಕಿಲ್ಲ, ನೀವು I.PS ಮಾಡುವ ಆಸೆಗಾಗಿ ಶ್ರಮಿಸಿ, ಹಾದಿಯಲ್ಲಿ ನಿಮಗೆ ಮತ್ಯಾರದರು ಹುಡುಗಿ ಸಿಕ್ಕಲ್ಲಿ ನೀವು ಅತ್ತ ವಾಲಿದರು ನನಗೇನು ಬೇಸರವಿಲ್ಲ. ನಾವು ಪರಸ್ಪರ ಕಾಯುವ ಅಗತ್ಯವು ಇಲ್ಲ. ಬದುಕೆ ಹಾಗೆ ಅಲ್ಲವೆ. ಆದರೆ ನನಗಾಗಿ ನಿಮ್ಮ ಹೆಸರು ಬದುಕು ಹಾಳಾಗುವುದು ನನಗೆ ಇಷ್ಟವಿಲ್ಲ"
ಅರುಣಳ ಸ್ನೇಹಿತೆಯರಿಗು ಇವರಿಬ್ಬರ ಪ್ರೀತಿಯ ಸುಳಿವಿತ್ತು, ಹಾಗೆಯೆ ನಡೆತ ಮೀರದ ಇವರಿಬ್ಬರ ಬಗ್ಗೆ ನಂಬಿಕೆ ಸಹ ಇದ್ದು ಕಾಲೇಜಿನಲ್ಲಿ ಎಲ್ಲಿಯು ಈ ವಿಷಯದ ಬಗ್ಗೆ ಸುಳಿವು ದೊರೆಯದಂತೆ ಎಚ್ಚರ ವಹಿಸಿದರು. ಪದವಿಯ ಕಡೆಯ ವರ್ಷವು ಮುಗಿದು ಅವರರವರ ಹಾದಿಗಳಲ್ಲಿ ಚದುರಿದರು. ಹಾಗೆ ದತ್ತ ಪುನಃ ಬೆಂಗಳೂರಿಗೆ ಬಂದು ರಘು ರವರ ಸಹಾಯದಿಂದೆ ಕೆಲಸವೊಂದನ್ನು ದೊರಕಿಸಿಕೊಂಡ. ಅವನು ಕಾಯುತ್ತಿರುವಂತೆ U.P.S.C ಪ್ರಕಟಿಸಿದ ಪರೀಕ್ಷೆಯನ್ನು ಬರೆದು.ಮೌಕಿಕ ಪರೀಕ್ಷೆಯನ್ನು ಪಾಸುಮಾಡಿ, ಅವನ ಜೀವನದ ಗುರಿಯಾದ I.P.S ಗೆ ಆಯ್ಕುಯಾಗಿ ಹೈದರಾಭಾದನಲ್ಲಿಯ ಟ್ರೈನಿಂಗ್ ಸೆಂಟರ್ ಗೆ ಸೇರಲು ಹೊರಟು ನಿಂತು ರಘುರವರಿಗೆ ನಮಸ್ಕರಿಸಿ ಆಶೀರ್ವಾದ ಕೋರಿದಾಗ ಅವರು ಸಂತೋಷದಿಂದ ಅತ್ತುಬಿಟ್ಟರು.
ದತ್ತ ಟ್ರೈನಿಂಗ್ ಮುಗಿಸಿ ಕರ್ನಾಟಕಕ್ಕೆ ಬಂದು ಬೆಂಗಳೂರಿಗೆ ಬಂದು , ಅಧಿಕಾರ ವಹಿಸಿಕೊಂಡಾಗ ತಮ್ಮ ಮಗನೆ ಇವನು ಎಂಬಂತೆ ಸಂತೋಷಪಟ್ಟರು. ಉಗ್ರಗಾಮಿಗಳ ಹಾವಳಿ ವಿಪರೀತ ವೆನಿಸಿ, ಸೈಭರ್ ಅಪರಾದಗಳು ವಿಪರೀತವಾದಗ ಪೋಲಿಸ ಇಲಾಖೆಯಲ್ಲಿ ಅದಕ್ಕೆ ಕೆಲವರನ್ನು ಪ್ರತೇಕವಾಗಿ ತರಬೇತಿಗೊಳಿಸಬೇಕೆಂದಾಗ ಆಗಿನ್ನು ಇಲಾಖೆಯನ್ನು ಸೇರಿ ಕಿರಿಯನಾದ ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದ ದತ್ತನ ಹೆಸರು ಸಹಜವಾಗಿ ಸೂಚಿಸಲ್ಪಟ್ಟಿತ್ತು. ಒಂದು ತಿಂಗಳು ಅದಕ್ಕಾಗಿ ಅಮೇರಿಕಾಗೆ ಹಾರಿದ ಅವನು ಮತ್ತೆ ಆರು ತಿಂಗಳು ದೆಹಲಿಯಲ್ಲಿ ಇರುವ ಪ್ರತ್ಯೇಕ ತರಬೇತಿಗೆ ನೇಮಿಸಲ್ಪಟ್ಟ. ಆ ಸಮಯದಲ್ಲಿ ಅಲ್ಲಿಯೆ ಇಲಾಖೆ ತರಬೇತಿಯಲ್ಲಿದ್ದ ಧಾಮಿನಿಯನ್ನು ಇವನು ಬೇಟಿ ಮಾಡಬೇಕಾಯಿತು, ಅದು ಸಹ ರಘುರವರ ಸೂಚನೆಯಂತೆ.
ಧಾಮಿನಿ ಸಾಕಷ್ಟು ಸ್ಥಿಥಿವಂತಳಾದರು ತಂದೆ ತಾಯಿಯಿಲ್ಲದೆ ಸೋದರ ಮಾವ ಶಂಕರಮೂರ್ತಿ , , ಸೋದರ ಅತ್ತೆ ಕಮಲಮ್ಮ ಆಶ್ರಯದಲ್ಲಿಯೆ ಬೆಳೆದವಳು, ಚಿಕ್ಕಂದಿನಲ್ಲಿ ಕಾಡಿದ ಪೋಲಿಯೊದಿಂದ ತನ್ನ ಎಡಗಾಲನ್ನು ಎಳೆದು ಹಾಕುತ್ತಿದ್ದ ಅವಳು ಓದಿನಲ್ಲಿ ತನ್ನ ಗುರಿ ಸಾದಿಸುವದರಲ್ಲಿ ಎಂದಿಗೂ ಮುಂದೆ. ಛಲವೆ ತಾನೆಂಬಂತೆ ಬೆಳೆದ ಅವಳು ಸೋದರ ಮಾವನ ಆಸೆಯಂತೆ I.A.S ನಲ್ಲಿ ಆಯ್ಕೆಯಾಗಿ, ಮಸೂರಿಯಲ್ಲಿ ತರಬೇತಿಯಲ್ಲಿದ್ದವಳು ಕೆಲವು ವಿಷೇಶ ಅಧ್ಯಯನಕ್ಕಾಗಿ ದೆಹಲಿಗೆ ಬಂದು ಇದ್ದವಳು. ಧಾಮಿನಿಯ ಸೋದರ ಮಾವ ಶಂಕರಮೂರ್ತಿ ಹಾಗು ರಘು ಇಬ್ಬರು ಗಳಸ್ಯ ಕಂಠಸ್ಯ. ಅವರಿಬ್ಬರಿಗು ಧಾಮಿನಿ ಹಾಗು ದತ್ತ ಮದುವೆಯಾದರೆ ಉತ್ತಮ ಜೊತೆ ಎಂಬ ಭಾವವಿತ್ತು.
ಧಾಮಿನಿ ಬೇಟಿಯಾದ ನಂತರ ಅವಳ ಅಭಿಪ್ರಾಯ ತಿಳಿದ ದತ್ತ ಯಾವ ಉತ್ತರ ಕೊಡಲು ಹಿಂದೇಟು ಹಾಕಿದ, ಅವನ ಮನಸಿನಲ್ಲಿ ಕಾಲೇಜು ದಿನಗಳಲ್ಲಿ ಪ್ರೀತಿರೂಪದಲ್ಲಿದ್ದ ಅರುಣ ಕಾಡಿದಳು, ತುಮಕೂರಿನ ಕೆಲವು ಗೆಳೆಯರನ್ನು ಸಂಪರ್ಕಿಸಲು ಪ್ರಯತ್ನಿಸಿದ. ಎಂಟು ವರ್ಷಗಳಿದಂದಲು ಅಲ್ಲಿನ ಸಂಪರ್ಕವಿಲ್ಲ ಅರುಣ ಈಗ ಎಲ್ಲಿದ್ದಾಳೊ ಹೇಗಿದ್ದಾಳೊ ಅಥವ ಮದುವೆ ಆಗಿದೆಯೊ ಏನು ತಿಳಿದಿಲ್ಲ. ಅಲ್ಲದೆ ತನ್ನ ಜೀವನವನ್ನು ರೂಪಿಸಿದ ರಘುರವರ ಮಾತು ವಿರೋದಿಸಲು ಅವನಲ್ಲಿನ್ನ ಆತ್ಮಸಾಕ್ಷಿ ಅವನನ್ನು ಬಿಡಲಿಲ್ಲ. ಅಲ್ಲದೆ ಧಾಮಿನಿಯನ್ನು ನಿರಾಕರಿಸಲು ಅವನಿಗೆ ಯಾವ ಕಾರಣಗಳು ಇರಲಿಲ್ಲ. ಹಾಗಾಗಿ ಅವರ ಮದುವೆ ನಡೆದು ಹೋಯಿತು. ಮದುವೆಯ ನಂತರವು ಅವರಿಬ್ಬರ ಸಂಭಂದ ಸುಮದುರವಾಗಿತ್ತು. ಪೋಲಿಸ್ ಕೆಲಸದಲ್ಲಿಯೆ ಇದ್ದ ಅವನಿಗೆ ಅರುಣಳ ಪತ್ತೆ ಹಚ್ಚುವದೇನೊ ಸುಲುಭದ ಕೆಲಸವಾಗಿಯೆ ಇತ್ತು ಆದರೆ ಅವನಲ್ಲಿದ್ದ ಸಂಸ್ಕಾರ ಅವನನ್ನು ಎಚ್ಚರಿಸಿತು. ತನ್ನ ಮದುವೆ ಆಗಿ ಹೋಗಿದೆ ಈಗ ಅರುಣಳನ್ನು ಹುಡುಕುವದರಲ್ಲಿ ಸಂಪರ್ಕಿಸುವದರಲ್ಲಿ ಯಾವ ಅರ್ಥವು ಇಲ್ಲ , ಅದು ಅಪಾರ್ಥಕ್ಕೆ ಅನರ್ಥಕ್ಕೆ ದಾರಿ ಮಾಡಬಹುದಷ್ಟೆ. ಹೀಗಾಗಿ ಸುಮ್ಮನಾದ.
ತುಮಕೂರಿನ ಕಾಲೇಜಿನಲ್ಲಿ ನಡೆಯುತ್ತಿರುವ ಹಳೆಯ ವಿಧಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಪ್ರಿನ್ಸಿಪಾಲ್ ಬಳಿ ಒಪ್ಪಿಕೊಳ್ಳುವಾಗ ಅವನಿಗೆ ಅದೊಂದು ದೂರದ ಆಸೆಯು ಇತ್ತು. ಒಮ್ಮೆ ಕಾರ್ಯಕ್ರಮದಲ್ಲಿ ಅರುಣಳನ್ನು ನೋಡಲು ಸಾದ್ಯವಾದರೆ....ಅವನು ಅವರ ಬಳಿ ಒಪ್ಪಿಕೊಳ್ಳುವಾಗ ಹೇಳಿದ ನಾನು ಅಲ್ಲಿಗೆ ಬರುತ್ತೇನೆ, ಕಾರ್ಯಕ್ರಮದಲ್ಲಿ ಬಾಗವಹಿಸುತ್ತೇನೆ, ಆದರೆ ಸ್ಟೇಜ್ ಮೇಲೆ ಅತಿಥಿಯಾಗಿ ಅಥವ ಬೇರೆ ರೂಪದಲ್ಲಿ ಬರಲಾರೆ ಎಂದು. ಅದಕ್ಕೆ ಪ್ರಿನ್ಸಿಪಾಲರು ಸಹ ನಗುತ್ತ ಒಪ್ಪಿಕೊ೦ಡಿದ್ದರು.
ಡ್ರೈವರನ್ನು ಬರಬೇಡವೆಂದು ತಿಳಿಸಿ ತಾನೆ ಕಾರನ್ನು ಡ್ರೈವ್ ಮಾಡುತ್ತ ಹೊರಟು, ತುಮಕೂರು ತಲಪುವಾಗ ಒಂಬತ್ತು ಗಂಟೆಯ ಆಸುಪಾಸು. ಈಗ ರಸ್ತೆ ಮೊದಲಿನಂತಿಲ್ಲ ಎಲ್ಲವು ಬದಲಾಗಿದೆ ಎನ್ನುಕೊಳ್ಳುತ್ತ, ಊರು ಪ್ರವೇಶಿಸುವಾಗಲೆ ನೆನಪಿಗೆ ಬಂದಿತು, ಕಾಲೇಜು ದೂರವೇನಿಲ್ಲ, ಇದೆ ಮುಖ್ಯರಸ್ತೆಯ ಬಲಬದಿಯಲ್ಲಿ, ಮೊದಲು ಸರ್ಕಾರಿ ಪಾಲಿಟೆಕ್ನಿಕ್ ನಂತರ ತಾನು ಓದಿದ ಸೈನ್ಸ್ ಕಾಲೇಜು. ಕಾಲೇಜಿನ ಹತ್ತಿರ ಬಂದು ಗೇಟಿನ ಹತ್ತಿರ ತಿರುಗಿಸುವಾಗಲೆ ಮುಖ್ಯದ್ವಾರಕ್ಕೆ ಮಾಡಿದ್ದ ಅಲಂಕಾರಗಳು, ಕಟ್ಟಿದ್ದ ಸ್ವಾಗತದ ಬ್ಯಾನರುಗಳು ಎಲ್ಲ ಕಾಣಿಸಿದವು. ಇರುವುದು ಪೋಲಿಸ್ ಇಲಾಖೆಯಾದರು ಅವನ ಹೃದಯದಲ್ಲಿ ಎಂತದೊ ಸಣ್ಣ ಕಂಪನ ಎನಿಸಿತು. ಇಷ್ಟು ವರ್ಷಗಳ ನಂತರ ತಾನು ಓದಿದ ಕಾಲೇಜಿನೊಳಗೆ ಪ್ರವೇಶಿಸುತ್ತಿರುವೆ.
.........
ಮುಕ್ತಾಯ - ಮುಂದಿನ ಬಾಗದಲ್ಲಿ ಶ್ರೀಗಂಧದ ಧೂಪ - ( ಅರುಣ )
Comments
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by venkatb83
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by makara
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by prasannakulkarni
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by H A Patil
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by santhosh_87
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by partha1059
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by venkatesh
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by bhalle
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by kavinagaraj
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by Premashri
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by kavinagaraj
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by partha1059
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by bhargavarao
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )
In reply to ಉ: ಕಥೆ : ಶ್ರೀಗಂಧದ ಧೂಪ - ( ದತ್ತ ) by Chikku123
ಉ: ಕಥೆ : ಶ್ರೀಗಂಧದ ಧೂಪ - ( ದತ್ತ )