ಶವ ಪಂಚನಾಮಿ ಪುಸ್ತಕ ( ಕವನ )

ಶವ ಪಂಚನಾಮಿ ಪುಸ್ತಕ ( ಕವನ )

ಕವನ

 


ಶವ ಪಂಚನಾಮಿ ಪುಸ್ತಕ ದಪ್ಪ ರಟ್ಟನ್ಯಾಗ


ಗಟ್ಟಿ ಮುಟ್ಟಾಗಿ ಐತಿ ಏಸ ವರ್ಸಾತು


ನಾನೂ ನೋಡಿಕೋಂತನ ಬಂದೀನಿ ಇನ್ನೂ


ಮುಗಿವಲ್ದು ಚಿತ್ರಗುಪ್ತನ ದಪ್ತರನ್ಹಾಂಗ ಬೆಳೀತಾನ  ಐತಿ


 


ಸತ್ತ ಹೋದವರು ಸುಟ್ಟು ಕರಕಾಗಿ ಬೂದ್ಯಾಗಿ


ಮಣ್ಣಾಗ ಮಣ್ಣಾಗಿ ಹ್ವಾದರೂ ಇನ್ನೂ ಮುಗಿವಲ್ದು


ಏನಿದರ ಕಥಿ? ಒಂದೂ ತಿಳಿವಲ್ದು ಇನ್ನೂ ಎಷ್ಟ ಜನಾನರ


ನುಂಗಿ ನೀರ ಕುಡಿಬೇಕು ಅಂತೈತಿ? ಕೇಳೋಣಂದ್ರ


ಮಾತಾಡಾಕ ತಯಾರಿಲ್ಲ ಗುಳಕವ್ವನ್ಹಾಂಗ


ಮಾರಿ ಮಾಡ್ಕೊಂಡು ಅದ ಮೂಲ್ಯಾಗ ಕುಂತೈತಿ ನಾ


ಬಂದಾಗನಿಂದನೂ ಅಲ್ಲೆ ಐತಿ ನಾ ಇಲ್ಲಿಂದ ಹ್ವಾದ ಮ್ಯಾಗೂ


ಅಲ್ಲೆ ಇರತೈತೋ ಏನೋ ? ಇದರ ಕಥೀನ ತಿಳಿವಲ್ದು


 


ಹೇಳೀದ್ರ ಏಸೊಂದು ಕಥಿ ಅದಾವ ಉರ್ಲು ಹಕ್ಕೊಂಡವ್ರವು


ವಿಷ ಕುಡದವ್ರವು ಕೆರಿ ಭಾವಿ ಮುಳುಗಿ ಸತ್ತವ್ರವು ಹಾವು ಕಚ್ಚಿ


ಸತ್ತವ್ರವು, ಇಷ್ಟ ಅಲ್ರೆಪಾ ಕೊಲೆ ಮಾಡಿಸಿಕೊಂಡಸತ್ತವ್ರವು


ಅಪಘಾತದಾಗ ಸತ್ತವ್ರವು ಒಟ್ಟ ಇವು ಮುಗಿಯೋ ಕಥಿ ಅಲ್ಲ


ಇದರಾಗ ಎಷ್ಟು ಖರೆ ಅದಾವೋ ಎಷ್ಟು ಸುಳ್ಳ ಅದಾವೋ


ಆ ದೇವರಿಗೇ ಗೊತ್ತು!


 


ಅದೇನೋ ಈಗೀಗ ಸರ್ಕಾರದವರು ಹಾವ ಕಡದು ಸತ್ತರ


ಶಿಡ್ಲು ಹೊಡದು ಸತ್ತರ ಶೇತ್ಕರಿ ಮಾಡೋವಾಗ ಸತ್ತರ


ಸವ್ರ ಸಾವ್ರಗಟ್ಲೆ ರೊಕ್ಕಾ ಕೊಡ್ತಾರಂತ ಹೀಂಗಾಗಿ ಈಗೀಗ


ಕೆಲವರು ಹ್ಯಾಂಗ ಸತ್ತರೂ ಹೆಣಾ ಒಯ್ದು ಹೊಲ್ದಾಗ ಹಾಕಿ


ವ್ಯವಸಾಯ ಮಾಡೋವಾಗ ಸತ್ತ ಅನ್ನೋದು


ವಿಷ ಕುಡದು ಸತ್ತರ ಹಾವು ಕಡದು ಸತ್ತ ಅನ್ನೋದು


ಎದಿ ಒಡದು ಸತ್ತರೂ ಶಿಡ್ಲು ಹೊಡದು ಸತ್ತ ಅನ್ನೋದು


ಕೆರ್ಯಾಗ ಮುಳಗಿ ಸತ್ತರೂ ಎತ್ತು ಮೈತೊಳಿಯಾಕ ಹೋಗಿ


ಸತ್ತ ಅನ್ನೋದು ಸರ್ಕಾರಪ್ಪ ತಗೀರೆಪಾ ರೊಕ್ಕಾ


ಅನ್ನೋ ದಂಧೆ ಸುರುವಾಗೈತಂತ


 


ಸುಳ್ಳ ಹೇಳಬ್ಯಾಡ್ರಪಾ ಅಂದರ ನಿಮ್ಮನೀದು ಕೊಡ್ತಿರೇನ್ಲೆ ?


ಸರ್ಕಾರದ ರೊಕ್ಕ ನಮಗಷ್ಟು ದಕ್ಕಲಿ ಅಂತಾರ


ಸುಮ್ಮನ ಹೇಳಬ್ಯಾಡ್ರಪಾ ಆ ಶಿವಾ ಮೆಚ್ಚಾಕಿಲ್ಲ ಅಂದರ


ಆ ಶಿವನ ಸುದ್ದಿ ನಿಮಗ್ಯಾಕ ಅಂತಾರ ಇನ್ನೂ ಹೆಚಗಿ


ಹೇಳಾಕ ಹ್ವಾದರ ಸುಮ್ಮನ ಕೊಡವ್ರೋ ಇಲ್ಲೋ ಬರ್ಲಿ ಸರ್ಕಾರ


ಬರ್ಲಿ ಡೀಸಿ ಅಂತ್ಹೇಳಿ ಧರಣಿ ಕುಂತ ಬಿಡ್ತಾರ ಚಳವಳಿ ಅನ್ನೋದು


ಇಂಥವರ ಕೈಯಾಗ ಸಿಕ್ಕು ನುಗ್ಯಾಗಿ ಹೋಗೈತಿ


 


ಇಂಥವರ ಜೊತಿ ಏನ್ ಮಾತಾಡ್ತೀರೆಪಾ ಇವ್ರ್ನ ಬಿಟ್ಟ ಬಿಡ್ರಿ


ಸುಧಾರಣಿ ಆಗೋ ಕೇಸ್ ಅಲ್ಲ ಇವು


ಏನೂ ತಿಳೀದ ಸಣ್ಣ ವಯಸಿನ್ವು ಸತ್ತು ಹೋಗ್ಯಾವ


ಬ್ಯಾಸರಾಗತೈತಿ ವರದಕ್ಷಣಿ ತರಲಿಲ್ಲಾಂತ ಸುಟ್ಟಾರ


ಉರ್ಲು ಹಾಕ್ಯಾರ ಕುತಿಗಿ ಹಿಚಗ್ಯಾರ ಹರೇದ ಮಬ್ದನ್ಯಾಗ


ಎಡವಿ ಜೀವ ತಕ್ಕೊಂಡವ್ರು ಅದಾರ ಒಬ್ಬೊಬ್ಬರದೂ


ಒಂದೊಂದ ಕಥೀನ ಅದಾವ


 


ನಿನಗೂ ಸೈತ ಇವನೆಲ್ಲ ನೋಡಿ ನೋಡಿ ಇವೆಲ್ಲ


ಬಗೆಹರಿಯೋ ಕೇಸ್ ಅಲ್ಲ ಅನ್ಸಿರಬೇಕು


ಅದಕ ಸುಮ್ನ ಮೂಲ್ಯಾಗ ಸುಮ್ನ ಕುಂತಬಿಟ್ಟಿ ಏನೋ


ಯಾರ ಹತ್ರ ಹೇಳಿದರ ಏನ ಉಪಯೋಗ ಸುಟ್ಟಹೋದ


ಜೀವಾ ಉಳಸ್ತಾರೇನು ಮಣ್ಣಾದ ಜೀವ ಮತ್ತ ತರ್ತಾರೇನು ?


ಅಂತ ಸತ್ತವರ ಪಂಚನಾಮಾಕ ಸಾಕ್ಷಿ ಆಗಿ


ಪಂಚರ ಸಹಿ ನಿನ್ನ ಒಡ್ಲಾಗ ಇಟಗೊಂಡು ಮಣ್ಣಾದವ್ರ್ನ


ಸುಟ್ಟ ಹೋದವ್ರ್ನ ನೋಡಕೋಂತ ಇನ್ನೂ ಯಾವ್ಯಾವಾಗ


ಯಾರ್ಯಾರು ಬರ್ತಾರೋ ಅಂತ ರುದ್ರ ಭೂಮಿ ಕಾಯೋ


ರುದ್ರನ್ಹಾಂಗ ಕಾಯಕೋಂತ ಕುಂತಿ ಏನೋ ? ನಿಂದೂ


ಮುಗಿಲಾರ್ದ ಹಾದಿ ತೀರಲಾರದ ಬದುಕು


 


ಈ ದುರಂತಾನೆಲ್ಲ ನೋಡಿ ನೋಡಿ ನಿನ್ನ ಕಣ್ಣಿರು


ಬತ್ತಿ ಹೋಗಿರ್ಬೇಕು ನಾಲಿಗಿ ಮಾತ ನಿಲ್ಸಿರ್ಬೇಕು


ಆದ್ರ ನಿನ್ನ ಎದಿ ಯಾವಾಗೂ ಮಿಡಿತಿರತೈತಿ ಹೌದಲ್ಲೊ?


ಅದನ್ನ ಯಾರ ಕೇಳ್ತಾರ ಹೇಳು ? ಏನ ಆದರೂ ನೀ


ಇರಾಕ ಬೇಕು ಇರತಿ ಈ ಭೂಮಿ ಮುಗಲು ಜಗತ್ತು 


ಸೂರ್ಯ ಚಂದ್ರ ನಕ್ಷತ್ರ ಇರೋ ತನಕ ನೀನೂ


ಒಂಥರಾ ಚಿರಂಜೀವಿ ಇದ್ಹಾಂಗ


 


ನಮ್ಮಂಥವರು ಎಷ್ಟೋ ಜನ ಬಂದಾರ ಹೋಗ್ಯಾರ


ನಿನ್ನ ಮೈಮ್ಯಾಗ ಸಾವಿನ ಲೆಖ್ಖಾಚಾರ ಬರದಾರ


ನಾವೂ ಬಂದೇವಿ ಹೊಕ್ಕೇವಿ ಮುಂದೂ ಬರೋವ್ರು ಬರ್ತಾರ


ಹೋಕ್ಕಾರ ಆದ್ರ ನೀ ಮಾತ್ರ ಕಣ್ಣು ಕಿವಿ ತಕ್ಕೊಂಡು


ಬಾಯಿ ಮುಚ್ಕೊಂಡು ಎಲ್ಲಾ ನೋವು ಸಂಕಟಾ


ಎದ್ಯಾಗ ತುಂಬ್ಕೊಂಡು ದಪ್ಪ ರಟ್ಟನ್ಯಾಗ ಗಟ್ಟಿ ಮುಟ್ಟಾಗಿ


ಅದ ಮೂಲ್ಯಾಗ ಕುಂತಿರ್ತಿ ಏನೋ


ನಿರುಮ್ಮಳಾಗಿ ಸತ್ತ ಹೋದವ್ರ ಲೆಖ್ಖಾ ಬರಕೋಂತ

Comments