ಸಾವೆಂಬ ಬದುಕಿನ ಚರಮಗೀತೆಯ ಸುತ್ತ ( ಲೇಖನ )

ಸಾವೆಂಬ ಬದುಕಿನ ಚರಮಗೀತೆಯ ಸುತ್ತ ( ಲೇಖನ )

ಹುಟ್ಟು ಸಾವುಗಳು ಈ ಜಗದ ಜೀವಶಾಶಿಗಳ ಎರಡು ಮುಖಗಳು, ಮನುಷ್ಯ ಜೀವಿಯೂ ಇದಕ್ಕೆ ಹೊರತಲ್ಲ. ಈ ಸಾವಿನ ಛಾಯೆ ಮತ್ತು ಅದರ ಭಯ ಪ್ರತಿಯೊಬ್ಬನಲ್ಲೂ ಅವ್ಯಕ್ತವಾಗಿ ಮನೆ ಮಾಡಿರುತ್ತದೆ. ಹುಟ್ಟು ಅಕಸ್ಮಿಕ ಆದರೆ ಸಾವು ನಿಶ್ಚಿತ. ಆದರೂ ನಾವು ಅಮರರೆನ್ನುವ ಭ್ರಮೆಯಲ್ಲಿ ಬದುಕಿನ ಅಮೂಲ್ಯ ಕಾಲವನ್ನು ಕಳೆದು ಬಿಟ್ಟಿರುತ್ತೇವೆ. ಸುಖದ ಬದುಕಿಗೆ ನನಗೆ ನನ್ನ ಸಂತತಿಗೆ ಮತ್ತು ಕುಟುಂಬಕ್ಕೆ ಎಂದು ಕೂಡಿಡುವ ಹಂಬಲದಲ್ಲಿ ಮತ್ತೊಬ್ಬರ ಅನ್ನ ಮತ್ತು ಅವಶ್ಯಕತೆಗಳನ್ನು ಕಸಿದುಕೊಂಡು ಬಿಟ್ಟಿರುತ್ತೇವೆ. ಎಲ್ಲವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಡುವ ಆದಮ್ಯ ಆಕಾಂಕ್ಷೆ ಮನುಷ್ಯನದು, ಆದರೆ ಆತ ಹೆದರುವುದು ಸಾವಿಗೆ ಮಾತ್ರ. ಎಷ್ಟೇ ವೈಜ್ಞಾನಿಕ ಆವಿಷ್ಕಾರಗಳಾಗಿದ್ದರೂ ಈ ವರೆಗೂ ಮನುಷ್ಯ ಸಾವನ್ನು ಗೆಲ್ಲಲಾಗಿಲ್ಲ. ಎಂತಹ ಠೇಂಕಾರದ ಮನುಷ್ಯನಾದರೂ ಆತನಿಗೆ ಸಾವಿನ ಮುನ್ಸೂಚನೆ ಬಂದರೆ ಸಾಕು ಆತ ಭೂಮಿಗಿಳಿದು ಹೋಗುತ್ತಾನೆ. ಮನುಷ್ಯ ವೃದ್ಧಾಪ್ಯದಂಚಿಗೆ ಸರಿಯುತ್ತಸಾಗಿದಂತೆ ಆತನ ಗತಜೀವನ ಫ್ಲಾಶ್ಬ್ ಬ್ಯಾಕ್ ಗೆ ಹೋಗುತ್ತದೆ. ಬಾಲ್ಯದ ಸುಂದರ ದಿನಗಳು ಹುಟ್ಟೂರು ಸಂಬಂಧಿಕರು ಗೆಳೆಯರು, ತಾನು ಮಾಡಿದ ಕೆಡಕುಗಳು ಅಂತರಾಲದಲ್ಲಿ ಅಂಕುರಗೊಳ್ಳುತ್ತ ಬೃಹತ್ತಾಗಿ ಬೆಳೆದು ಅಪರಾಧಿ ಪ್ರಜ್ಞೆ ಆತನನ್ನು ಕಾಡ ತೊಡಗುತ್ತದೆ. ಬದುಕು ಒಂದು ಹಿಂಸೆ ಮತ್ತು ನರಕವಾಗಿ ಪರಿಣಮಿಸುತ್ತದೆ. ಇದು ಹೀಗೇಕೆ ಆಗುತ್ತದೆ ಎಂದರೆ ಅದಕ್ಕೆ ನಮ್ಮ ಸ್ವಾರ್ಥಬುದ್ಧಿ ಕಾರಣ ವೆನ್ನಬಹುದು.

     ಮನುಷ್ಯ ಜೀವಿಗಳೆಲ್ಲರೂ ಬಹುತೇಕ ಸಾವಿಗೆ ಅಂಜುವವರು ಎನ್ನುವುದು ಕಟು ಸತ್ಯವಾದರೂ ಬೆರಳೆಣಿಕೆಯ ಕೆಲವರಾದರೂ ಸಾವನ್ನು ಧೀಮಂತ ತನದಿಂದ ಎದುರಿಸುತ್ತಾರೆ, ಸಾವಿಗಾಗಿ ತಯಾರಿ ಮಾಡಿಕೊಂಡಿರುತ್ತಾರೆ. ಅಂತಹ ಅನೇಕ ಋಷಿ ಮುನಿಗಳು ಪೌರಾಣಿಕ ವ್ಯಕ್ತಿಗಳ ನಿದರ್ಶನಗಳು ನಮ್ಮ ಮುಂದೆ ಇವೆ. ಅವರು ಸಾವಿನ ಭಯವನ್ನು ಹೇಗೆ ಮೆಟ್ಟಿ ನಿಂತರು, ಅಷ್ಟು ಕಠೋರತೆ ಅವರಿಗೆ ಹೇಗೆ ಸಾಧ್ಯವಾಯಿತು, ಸಾವಿನ ಭಯ ಅವರನ್ನು ಕಾಡಲಿಲ್ಲವೆ ? ಎನ್ನುವ ಸಂಶಯ ನಮ್ಮನ್ನು ಬಾಧಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಮಹಾಭಾರತದ ಇಚ್ಛಾ ಮರಣಿ ಭೀಷ್ಮನ ಪಾತ್ರ ನಮ್ಮ ಕಣ್ಮುಂದೆ ಬರುತ್ತದೆ. ಕಾಳಿದಾಸ ಮತ್ತು ಭೋಜರಾಜನ ಸ್ನೇಹ, ಆತನ ಕವಿತ್ವಕ್ಕೆ ಮಾರುಹೋದ ಭೋಜ ತನ್ನ ಸಾವಿನ ಕುರಿತು ಒಂದು ಚರಮ ಗೀತೆಯನ್ನು ರಚಿಸಿ ಹಾಡಲು ಕೋರುತ್ತಾನೆ, ಆದರೆ ಇದಕ್ಕೆ ಒಪ್ಪದ ಕಾಳಿದಾಸ ನಿಲುವಿನಿಂದ ಭೋಜನಿಗೆ ನಿರಾಶೆ ಯಾಗುತ್ತದೆ. ಆತನಲ್ಲಿ ತನ್ನ ಸಾವಿನ ಚರಮಗೀತೆ ಯನ್ನು ಕಾಳಿದಾಸನ ಬಾಯಿಯಿಂದ ಕೇಳುವ ಆಕಾಂಕ್ಷೆ ಬೃಹತ್ತಾಗಿ ಬೆಳೆಯುತ್ತ ಹೋಗುತ್ತದೆ. ಅದು ಎಲ್ಲಿಯ ವರೆಗೆ ಹೋಗುತ್ತದೆಂದರೆ ಭೋಜ ತಾನು ಸತ್ತಂತೆ ಮಲಗಿ ಆ ಸುದ್ದಿ ಕಾಳಿದಾಸನಿಗೆ ತಲುಪುವಂತೆ ನೋಡಿ ಕೊಳ್ಳುತ್ತಾನೆ. ಇದನ್ನು ನಿಜವೆಂದು ನಂಬಿ ಬಂದ ಕಾಳಿದಾಸ ಭೋಜ ನಿಜವಾಗಿ ಸತ್ತಿರುವನೆಂದು ದುಃಖ ತಪ್ತನಾಗು ತ್ತಾನೆ. ಆತನ ಅಂತರರಾಳದಿಂದ ಬಂದ ಚರಮ ಗೀತೆಯನ್ನು ಕೇಳಿ ಭೋಜ ತನ್ನ ಬಾಳು ಈಗ ಸಾರ್ಥಕ ಎಂದು ಹರ್ಷಿಸುತ್ತಾನೆ. ಕಾಳಿದಾಸನನ್ನು ಅಪ್ಪಿಕೊಳ್ಳುತ್ತಾನೆ. ಇದು ಕವಿ ಸಮಯದ ಕಲ್ಪನೆಯೆಂದು ಕಲ್ಪಿಸಿಕೊಂಡರೂ, ಎಂತಹ ಸುಂದರ ಕಲ್ಪನೆ !

     ಬರಿ ಋಷಿ ಮುನಿಗಳ ಮಾತ್ರವಲ್ಲ ವರ್ತಮಾನದಲ್ಲಿಯೂ ಸಹ ಅಂತಹ ನಿರ್ಲಿಪ್ತ ಬದುಕಿನ ಜನ ನಮ್ಮ ಮಧ್ಯೆ ಆಗಿ ಹೋಗಿದ್ದಾರೆ. ಉದಾಹರಣೆಗೆ ನಮ್ಮಲ್ಲಿಯ ಘನತೆವೆತ್ತ ಕುಟುಂಬದ ಹಿರಿಯರೊಬ್ಬರು ಸುಮಾರು ಎರಡು ವರ್ಷಗಳ ಹಿಂದೆ ತೀರಿಕೊಂಡರು ಅವರು ಸರಿ ಸುಮಾರು 70 ವರ್ಷಗಳ ಹಿಂದೆ ತಮ್ಮ ಬದುಕನ್ನರಸಿ ಕರಾವಳಿಯಿಂದ ಇಲ್ಲಿಗೆ ಬಂದವರು. ಹೋಟೆಲ್ ಉದ್ಯಮವನ್ನು ಪ್ರಾರಂಭಿಸುವ ಮೂಲಕ ತಮ್ಮ ಬದುಕು ಕಟ್ಟಿ ಕೊಂಡರು, ದೂರದ ಸಂಬಂಧಿಕರಿಗೂ ನೆಲೆಯೊದಗಿಸಿದರು. ಋಜು ಮಾರ್ಗದಲ್ಲಿ ನಡೆದರು ತಮ್ಮ ಶ್ರಮದ ದುಡಿಮೆಯ ಮೂಲಕ ಮನೆ ಜಮೀನು ತೋಟ ಮಾಡಿದರು. ಮಕ್ಕಳನ್ನು ಉದ್ಯೋಗಕ್ಕೆ ಹಚ್ಚಿದರು. ಇದಷ್ಟೆ ಆಗಿದ್ದರೆ ಅವರ ಪ್ರಸ್ತಾಪ ಇಲ್ಲಿ ಅಗತ್ಯವಿರಲಿಲ್ಲ. ಅವರು ತಮ್ಮ ಬೆರಳೆಣಿಕೆಯ ಸ್ನೇಹಿತರ ಜೊತೆಗೂಡಿ ತಮ್ಮ ಗ್ರಾಮಕ್ಕೆ ಅಗತ್ಯವಾದ ಮಾಧ್ಯಮಿಕ ಶಾಲೆ ಸಕರ್ಾರಿ ಕಛೇರಿ ಮುಂತಾದ ಅಗತ್ಯ ಕಾರ್ಯಗಳನ್ನು ಸಹ ಮಾಡುತ್ತಾರೆ. ಅವರ ವಿದ್ಯಾಭ್ಯಾಸ ಪ್ರಾಥಮಿಕ ಶಾಲಾ ಮಟ್ಟದ್ದಾದರೂ ಅವರಲ್ಲಿ ಸಾಹಿತ್ಯ ಪ್ರೇಮ ಅಪಾರವಾಗಿರುತ್ತದೆ. ಆ ಕಾಲದಲ್ಲಿಯೇ ಅವರು ಕುವೆಂಪು ಕಾರಂತ ಗೋಕಾಕ ಅನಕೃ ತರಾಸು ಚದುರಂಗ ವ್ಯಾಸರಾಯ ಬಲ್ಲಾಳ  ಮುಂತಾದ ಗದ್ಯ ಲೇಖಕರ ಕೃತಿಗಳನ್ನು ಕೊಂಡು ತಂದು ತಾವು ಓದುವುದಲ್ಲದೆ ತಮ್ಮ ಕುಟುಂಬದ ಸದಸ್ಯರಿಗೂ ಓದಿ ಹೇಳಿದ್ದಾರೆ. ನೋಡುವುದಕ್ಕೆ ಹೊರ ಜಗತ್ತಿಗೆ ಕಠೋರರೆಂದು ಕಂಡು ಬಂದರೂ ಆಂತರ್ಯದಲ್ಲಿ ಬಹಳ ಮಾನವೀಯ ಪ್ರಜ್ಞೆ ಯುಳ್ಳವರಾಗಿದ್ದರು. ವೃದ್ಧಾಪ್ಯದಂಚಿಗೆ ಸಾಗಿದ ಅವರಿಗೆ ತಮ್ಮ ಅವಸಾನದ ಸೂಚನೆ ಸಿಗುತ್ತದೆ. ಬಿಪಿ ಬಿಟ್ಟರೆ ಅವರಿಗೆ ಬೇರೆ ಯಾವುದೇ ಕಾಯಿಲೆ ಇರುವುದಿಲ್ಲ. ಮಕ್ಕಳು ಅವರನ್ನು ಚಿಕಿತ್ಸೆಗೆ ಒತ್ತಾಯಿಸಿದರೂ ಅವರು ಒಪ್ಪದೆ ಮಕ್ಕಳ ಕೋರಿಕೆಯನ್ನು ನಿರಾಕರಿಸಿ ಬಿಡುತ್ತಾರೆ. ಸಾವಿನ ಭಯ ಅವರನ್ನು ಅಂತಿಮ ಕ್ಷಣದ ವರೆಗೂ ಕಾಡಲೇ ಇಲ್ಲ.ಸಾವಿಗೆ ಕೆಲವು ದಿನಗಳ ಮುಂಚೆ ಅನಾರೋಗ್ಯ ಕಾಡುತ್ತಿದ್ದಾಗ ಯಾವುದೇ ಕಾರಣಕ್ಕೂ ವೈದ್ಯರ ತಪಾಸಣೆಗೆ ಒಡ್ಡಿಕೊಳ್ಳಲು ನಿಷ್ಟುರವಾಗಿ ನಿರಾಕರಿಸಿದರು. ಅವರು ಬದುಕಿದ್ದಾಗಲೆ ಅಮ್ಮ ಜಮೀನಿನಲ್ಲಿ ತಮ್ಮನ್ನು ಚಿತೆಗೇರಿಸಬೇಕಾದ ಜಾಗ, ಸೌದೆ ಮುಂತಾದ ಪರಿಕರ ಗಳ ಸವ್ಯವಸ್ಥೆಯನ್ನು ತಾವೆ ಮಾಡಿಟ್ಟು ಮಕ್ಕಳಿಗೆ ತಿಳಿಸಿರುತ್ತಾರೆ. ಇವರೆಂತಹ ವ್ಯಕ್ತಿತ್ವದ ಜನ? ಸಾವಿಗೆ ಅಂಜದೆ ಅದನ್ನು ಸ್ವೀಕರಿಸಿದ ಪರಿ ನಿಜಕ್ಕೂ ಬೆರಗು ಹುಟ್ಟಿಸುವಂತಹುದು.

     ಇಂತಹ ಉದಾಹರಣೆಗಳು ಸಾಹಿತ್ಯ ಲೋಕಗಳಲ್ಲೂ ಘಟಿಸಿವೆ. ಜರ್ಮನ್ ಕವಿ ರೈನರ ಮಾರಿಸ್ ರಿಲ್ಕ್
( 1875  1926 ) ತನ್ನ ಸಮಾಧಿಯ ಹತ್ತಿರ ಒಂದು ಸಾಮಾನ್ಯ ಕಲ್ಲಿನ ಮೇಲೆ ಆತನೆ ಬರೆದ ಚರಮಗೀತೆಯಿದೆ. ಅದು ಜರ್ಮನ್ ಭಾಷೆಯಲ್ಲಿದ್ದು ಹಾಯ್ಕಿನ ರೂಪದ ಪದ್ಯ ಅದು.

                     ರೋಸ್, ಓಹ್ ರೀನರ್ ವೈದೆರ್ ಸ್ಟ್ರಾಚ್, ಲಸ್ಟ್
                     ನೀಮಾನ್ ಡೆಸ್, ಸ್ಕ್ಲಾಫ್ ಝಸೀಯೇನ್ ಉಂಟರ್ ಸೊವಿಯೆಲ್
                     ಲಿನ್ ಡನರ್

     ಇದರ ಇಂಗ್ಲೀಷ್ ಅನುವಾದವನ್ನು ಆಂಗ್ಲ ಕವಿ  ಸ್ಟೀಫನ್ ಮಿಚೆಲ್  ಈ ರೀತಿ ಮಾಡಿದ್ದಾನೆ.

                     Rose,Oh pure contradiction,joy

                     Of being No one's Sleep under so many

                     Lids     

      ರಿಲ್ಕ್ ಈ ಚರಮಗೀತೆಯನ್ನು ಯಾಕೆ ಬರೆದುಕೊಂಡ , ಅವನ ಇಷ್ಟದ ಗುಲಾಬಿ ಹೂವನ್ನು ಕುರಿತು ಬರೆದದ್ದೆ, ಇಲ್ಲ ಆತನ ಸ್ವಗತ ಕವನವೆ? ಇದು ಕವಿ ತನ್ನ ಸಮಾಧಿಯಿಂದ ಕೇಳುತ್ತಿರುವ ಮಾತೆ? ಗುಲಾಬಿ ಹೂವು ಎನ್ನುವುದರ ಜೊತೆಗೆ ಮತ್ತೇನನ್ನು ಸೂಚಿಸುತ್ತದೆ ? ಗುಲಾಬಿಯನ್ನು ಇಷ್ಟ ಪಡುತ್ತಿದ್ದ ರಿಲ್ಕ್ ಅದರ ಪೊಕಳೆಗಳನ್ನು ತನ್ನ ಡೈರಿಯ ಪುಟಗಳ ಮಧ್ಯೆ ಇಟ್ಟುಕೊಳ್ಳುತ್ತಿದ್ದನಂತೆ. ರಿಲ್ಕ್ ಈ ಮನುಷ್ಯ ಜೀವನ ವ್ಯರ್ಥವೆಂದು ನಂಬಿದ್ದ, ಜೊತೆಗೆ ಈ ಜೀವನ ಜಾತ್ರೆಗೆ ಕೊನೆ ಇದೆ ಎನ್ನುವುದನ್ನು ತಿಳಿದಿದ್ದ ಗುಲಾಬಿಯನ್ನು ಜೀವನದ ರೂಪಕ ಮತ್ತು ಸಂಕೇತವೆಂದು ಗ್ರಹಿಸಿದ್ದ. ಆತ ಗುಲಾಬಿಯನ್ನು ಕುರಿತು ಹೇಳುವ ಮಾತು ತನ್ನನ್ನೆ ಕುರಿತು ಹೇಳಿ ಕೊಂಡಿರಲೂ ಬಹುದು ಆತ ಗುಲಾಬಿ ಕುರಿತು ಬರೆದ ಕವನವೇ ಆತನ ಬಾಳಿನ ವ್ಯಾಖ್ಯಾನ ಮತ್ತು ಜೀವನದ ಚರಮ ಗೀತೆ. ಗುಲಾಬಿ ಆತನ ಸಾಹಿತ್ಯ ಜೀವನದ ಅಸ್ತಿತ್ವವಾಗಿತ್ತು ಕೂಡ. ರಿಲ್ಕ್ನ ಈ ಕವಿತೆ ಐರಿಷ್ ಕವಿ ಏಟ್ಸ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು ಮತ್ತು ಅದರ ಪ್ರೇರಣೆಯಿಂದಲೇ ಏಟ್ಸ್  ಅಂಡರ್ ಬೆನ್ ಬುಲ್ಬೆನ್  ರಚಿಸಿದನೆಂದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

     ಅದೇ ರೀತಿ ಕ್ರಿ.ಶ.1616 ರ ಎಪ್ರೀಲ್ 23 ರಂದು ಮೃತಪಟ್ಟ ಶೇಕ್ಸ ಪಿಯರ್ ನ ದೇಹವನ್ನು   ಪಾರಿಸ್ ಚರ್ಚನ  ಆವರಣದಲ್ಲಿ ಸಮಾದಿ ಮಾಡಲಾಯಿತು. ಅದು ಈಗ ಯಾತ್ರಿಗಳ ಮತ್ತು ಸಾಹಿತ್ಯಾಸಕ್ತರ ಯಾತ್ರಾಸ್ಥಳ ವಾಗಿದೆ. ಸಮಾಧಿಯ ಹತ್ತಿರ ನೆಟ್ಟ ಕಲ್ಲಿನ ಮೇಲೆ ನಾಲ್ಕು ಸಾಲುಗಳಲ್ಲಿ ಆತನ ಮಹತಿಯನ್ನು ಕೆತ್ತಲಾಗಿದೆ. ವಿಟ್ಟೋರಿಯನ್ ಯುಗ ಪ್ರಸಿದ್ಧ ಗದ್ಯ ಲೇಖಕರಲ್ಲೊಬ್ಬನಾದ  ಥಾಮಸ್ ಕಾರ್ ಲೈಲ್ ಕುರಿತು ಈ ರೀತಿ ಉದ್ಗಾರ ತೆಗೆದಿದ್ದಾನೆ.  ಇಂಗ್ಲೀಷ್ ಜನರು ಎಲ್ಲಿಯೇ ಇರಲಿ ಒಬ್ಬರಿಗೊಬ್ಬರು ಆತ ನಮ್ಮವನು ನಾವು ಆತನನ್ನು ಜಗತ್ತಿಗೆ ಕೊಟ್ಟೆವುನಾವು ಅವನಿಂದ ಮಾತನಾಡುವುದನ್ನು ಕಲಿತೆವು  ಎನ್ನುತ್ತಾನೆ.

                                                                       *****


 

Comments