" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ

'ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ ಚಿಟ್ಟಾಣಿ ಎಂಬುದಿದು ನಾನು ಹಿಂದೊಮ್ಮೆ ಸಂಪದದಲ್ಲಿ ಪ್ರಕಟಿಸಿದ ಲೇಖನ. ಅಂದು ಹೆಚ್ಚು ಜನ ಇದನ್ನು ಓದಿದಂತಿಲ್ಲ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಬಂದಿದೆ. ಈ ಸುಸಂದರ್ಭದಲ್ಲಿ ಮತ್ತದೇ ಲೇಖನವನ್ನು ಬ್ಲಾಗ್ ಬರೆಹಗಳಲ್ಲಿ ಪ್ರಕಟಿಸುತ್ತಿದ್ದೇನೆ.
 ಈ ಸಾಧಕರ ಕುರಿತಾಗಿ ಬಲ್ಲವರು ತಮ್ಮ ಅನಿಸಿಕೆಯನ್ನು ಸೇರಿಸಿ.      - ಸದಾನಂದ  27 /01 /2012  

ಸಾವಿರಾರು ಸನ್ಮಾನಗಳ ಸರದಾರ

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ "
 
ಚಿಟ್ಟಾಣಿ ರಾಮಚಂದ್ರ ಹೆಗಡೆ 


                   ನಾಡು ನುಡಿಗಾಗಿ ದುಡಿದ ಮಹನೀಯರನ್ನು ಅಭಿಮಾನದಿಂದ ಗೌರವಿಸಿ ಸಂಭ್ರಮಿಸುವ ಸಂಸ್ಥೆಗಳೆಷ್ಟು. ಎಷ್ಟೊಂದು ಪ್ರಶಸ್ತಿಗಳು, ಬಿರುದುಗಳು, ಬಗೆ ಬಗೆಯ ಸನ್ಮಾನಗಳು ಅವನ್ನು ಪಡೆಯಲೆಂದೇ ನಡೆಸುವ ಹೋರಾಟಗಳೇನು. ಹೀಗೆ ಯೋಚಿಸಿದರೆ ಅದು ಮುಗಿಯದ ಕಥೆ. ಆದರೆ ಕನ್ನಡ ಜನ ಮಾನಸದಲ್ಲಿ ಬಹುಪ್ರಿಯರಾಗಿ ಜನ ಮನ್ನಣೆಯ ಸನ್ಮಾನಗಳನ್ನು ಅತಿ ಹೆಚ್ಚು ಪಡೆದವರು ಯಾರಿರಬಹುದು. ಎಂಬ ಕುತೂಹಲದ ಪ್ರಶ್ನೆಯೊಂದು ನನ್ನಲ್ಲಿತ್ತು. ಸಿನಿಮಾ ಮಂದಿ, ರಾಜಕಾರಣಿಗಳು, ಕಲಾವಿದರು, ಕವಿಗಳು, ಜಾನಪದರು ಹೀಗೆ ಪಟ್ಟಿ ಮಾಡುತ್ತಾ ಹೋದಂತೆ ನನ್ನಲ್ಲಿ ಹುಡುಕಿಕೊಂಡ ಉತ್ತರ ಇದು. ಯಕ್ಷಗಾನ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಸತತ ತಾರಾ ಪಟ್ಟವನ್ನು ಕಾಯ್ದು ಕೊಂಡಿರುವ ಕನ್ನಡ ಸಿನಿಮಾ ರಂಗದ ಮೇರು ಕಲಾವಿದರಾಗಿದ್ದ ಡಾ|| ರಾಜಕುಮಾರ್, ಉದಯ ಕುಮಾರ್ ಮೊದಲಾದ ಮಹಾನೀಯರಿಂದ ಹೃದಯ ಸ್ಪರ್ಶಿ ಸನ್ಮಾನಗಳನ್ನು ಸ್ವೀಕರಿಸಿದ, ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ, ದೇಶ ವಿದೇಶಗಳಲ್ಲಿ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ನಿರಂತರ ಐವತ್ತು ಅರವತ್ತು  ವರ್ಷಗಳಿಂದ ಜನರಿಂದ ಸತತ ಸನ್ಮಾನಗಳನ್ನು ಪಡೆಯುತ್ತಲೇ ಇರುವ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೇ ಈ ವ್ಯಕ್ತಿ. 
               ಇದೀಗ ಎಪ್ಪತ್ತೇಳರ ಹರಯದಲ್ಲೂ ಕೀಚಕನಾಗಿ, ಬಸ್ಮಾಸುರನಾಗಿ, ಕೌರವನಾಗಿ, ದುಷ್ಟಬುದ್ಧಿಯಾಗಿ, ರುದ್ರಕೋಪನಾಗಿ, ಹೆಚ್ಚೇನು ಕಾಳಿದಾಸದ ಕಲಾಧರನಾಗಿ ರಂಗಸ್ಥಳಕ್ಕೆ ಬಂದರೆ ಸಹಸ್ರ ಸಹಸ್ರ ಸಂಖ್ಯೆಯ ಪ್ರೇಕ್ಷಕ ಸಮುದಾಯ ಬೆಕ್ಕಸ ಬೆರಗಾಗುತ್ತದೆ. ನಾಟ್ಯ, ಅಭಿನಯ, ವೇಷ ಎಂಥವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಕರಾವಳಿ, ಮಲೆನಾಡಿನ ಜನರ ಮೇಲಷ್ಟೇ ಈ ಪರಿಣಾಮವಲ್ಲ. ಇಡೀ ದೇಶದ ಯಾವುದೇ ಭಾಗದಲ್ಲೂ, ವಿದೇಶಗಳಲ್ಲೂ ತನ್ನ ಹಿರಿಮೆಯನ್ನು ಪ್ರಕಟಿಸಿ ಮೆರೆದ ಮಹಾನ್ ಕಲಾವಿದ ಚಿಟ್ಟಾಣಿ. ಬಾಲ್ಯದಲ್ಲೇ ವೇಷ ಕಟ್ಟಿ ರಂಗ ಪ್ರವೇಶಿಸಿದ ಚಿಟ್ಟಾಣಿ ಆಯಾ ಕಾಲದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸೂಕ್ತ ಎಚ್ಚರದಿಂದ ತನ್ನ ತಾರಾ ಪಟ್ಟವನ್ನು ಕಾದುಕೊಂಡಿದ್ದಾರೆಂಬುದು ಅತಿಶಯವಲ್ಲ. " ಮೊದಲು ಪ್ರೇಕ್ಷಕನಿಗೆ ಸಹನೆಯಿತ್ತು. ಇಂದು ವಿಮರ್ಶಾಪ್ರವೃತ್ತಿಯಿದೆ." ಎಂದು ತಾವು ಸಾಗಿದ ದಾರಿಯ ಅನುಭವಗಳನ್ನು ಸಂಕೋಚವಿಲ್ಲದೆ ಹಂಚಿಕೊಳ್ಳುವ ಸಹೃದಯತೆ ಅವರಲ್ಲಿದೆ. ಸ್ವಯಂ ಸಾಧಿಸಿದ ಖಚಿತ ಅಭಿಪ್ರಾಯವಿದೆ. ಅದು ಸುದೀರ್ಘ ಬದುಕಿನ ಅನುಭವಗಳ ಸಮ್ಮಿಶ್ರಣದಿಂದ ರೂಪಿತವಾಗಿದೆ.
                         ಚಿಟ್ಟಾಣಿಯವರು ಯಕ್ಷಗಾನ ಪ್ರವೇಶಿಸಿದ್ದು ಅವರ ಹದಿನಾಲ್ಕರ ಪ್ರಾಯದಲ್ಲಿ. ಅಂದರೆ ಸರಿ ಸುಮಾರು ಅರವತ್ಮೂರು ವರ್ಷಗಳಿಂದ ಈ ರಂಗದಲ್ಲಿ ಅನುಭವ ಹೊಂದಿದ್ದಾರೆ. ಆರಂಭದಲ್ಲಿ ಒಂದೆರಡು ವರ್ಷ ಮಾತ್ರಾ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿರಬಹುದಾದರು ನಂತರ ಗುರ್ತಿಸಲ್ಪಡುವ ಸ್ಥಾನವನ್ನು ಗಳಿಸಿಕೊಂಡರು. ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಬಹುಪ್ರಿಯರಾದರು. ಮೇಳಗಳ ಅತಿಮುಖ್ಯ ಅನಿವಾರ್ಯ ಕಲಾವಿದರಾದರು. ಅಪಾರ ಅಭಿಮಾನಿಗಳ ಹೃನ್ಮನ ಸೂರೆಗೊಂಡರು. ಒಮ್ಮೆ ಈ ಕ್ಷೇತ್ರವನ್ನು ಆಯ್ದುಕೊಂಡಮೇಲೆ  ಏರಿಳಿತಗಳನ್ನು ಕಂಡಿರಬಹುದಾದರೂ ಕ್ಷೇತ್ರದಿಂದ ವಿಮುಖರಾಗಲಿಲ್ಲ. ಮತ್ತೊಂದರತ್ತ  ಯೋಚಿಸಲಿಲ್ಲ ಎಂಬುದು ಜೀವನ ತಪಸ್ಸಿನಂತೆ ಗೋಚರಿಸುತ್ತದೆ. ವ್ಯಾವಾಹಾರಿಕವಾಗಿ ತುಂಬಾ ವ್ಯವಸ್ಥಿತವಾಗಿ ಅವಕಾಶಗಳನ್ನು ಬಳಸಿಕೊಂಡಿರುತ್ತಿದ್ದರೆ ಚಿಟ್ಟಾಣಿಯವರು ಇಂದು ಅತ್ಯಂತ ಶ್ರೀಮಂತ ಜೀವನ ಸಾಗಿಸಬಹುದಿತ್ತೇನೋ. ಆದರೆ ಕೃತಕತೆಯ ಸೊಂಕಿಲ್ಲದೆ ಇಂದಿಗೂ ಸುದ್ರುಡ ಸುಖೀಸಂಸಾರ ಸಾಗಿಸುತ್ತಿರುವುದು ನೆಮ್ಮದಿಯ ಸಂಗತಿ. 
                ಇನ್ನು ಸನ್ಮಾನಗಳ ಬಗ್ಗೆ ಯೋಚಿಸಿದರೆ ಚಿಟ್ಟಾಣಿಯವರು ತಮ್ಮ ಇಪ್ಪತ್ತರ ಹರಯದಲ್ಲಿ ಮೊದಲ ಸನ್ಮಾನವನ್ನು ಉತ್ತರ ಕನ್ನಡ ಜಿಲ್ಲೆಯ ಬಾಳೆಗದ್ದೆಯಲ್ಲಿ. ನಂತರ ಅರೆ ಅಂಗಡಿ ಎಂಬಲ್ಲಿ ಅಂದಿನ ಮಹೋನ್ನತ ಕಲಾವಿದರಾದ ದಿ|| ಕೆರೆಮನೆ  ಶಿವರಾಮ ಹೆಗಡೆಯವರಿಂದ ಐದು ಸಾವಿರ ರುಪಾಯಿ ನಿಧಿಯೊಂದಿಗೆ ಪಡೆದ ಸನ್ಮಾನ ಅವಿಸ್ಮರಣೀಯವೆನ್ನುತ್ತಾರೆ. ಕೆಲವು ಊರುಗಳಲ್ಲಿ ಮುಂಬೈ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರು, ಶಿವಮೊಗ್ಗ ಮುಂತಾದ ನಗರಗಳಲ್ಲಿ ಪಡೆದ ಸನ್ಮಾನಗಳು ಲೆಕ್ಕವಿಲ್ಲದಷ್ಟು.  ದಕ್ಷಿಣ - ಉತ್ತರ ಕರ್ನಾಟಕ, ಹೊರರಾಜ್ಯಗಳಲ್ಲಿ ಕೂಡಾ ಇವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅಲ್ಲೆಲ್ಲಾ ಸನ್ಮಾನಗಳಾಗಿವೆ. ಕಳೆದ ಐವತ್ತೇಳು ವರ್ಷಗಳಲ್ಲಿ ( ಮೊದಲ ಸಂಮಾನದಿಂದ ) ಅವರು ಪಡೆದ ಸನ್ಮಾನಗಳ ಖಚಿತ ವಿವರಗಳು ಸಿಕ್ಕಲಾರವು. ಮನೆಯ ಗೋಡೆಗಳೆಲ್ಲಾ ಪ್ರಶಸ್ತಿ ಪತ್ರಗಳಿಂದ ತುಂಬಿ ಹೋಗಿದೆ. ನೂರಾರು ಸನ್ಮಾನ ಪತ್ರಗಳು ಗೆದ್ದಲಿನಿಂದ ಹಾಲಾದುದನ್ನು  ಪತ್ನಿ ಸುಶೀಲ ಮತ್ತು ಮನೆಯವರು ಸ್ಮರಿಸುತ್ತಾರೆ. ಚಿಟ್ಟಾಣಿಯವರು ಶೇಣಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಜಾನಪದ ಶ್ರೀ , ಉಡುಪಿಯ ಆಸ್ಥಾನ ಕಲಾವಿದ, ರಾಮಕೃಷ್ಣ ಹೆಗಡೆಯವರಿಂದ ಪುರಸ್ಕಾರ, ರಾಜ್ಯಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮಹೆಗಡೆ ವಾರ್ಷಿಕ ಪುರಸ್ಕಾರ, ಅನೇಕ ಮಠ  ಮಾನ್ಯಗಳಿಂದ ಪುರಸ್ಕಾರ, ಅನೇಕ ಸಂಘಸಂಸ್ಥೆಗಳು ಮಾಡಿದ ಸನ್ಮಾನಗಳು, ಕಾರ್ಯಕ್ರಮ ಸಂಘಟಕರು ನಡೆಸಿದ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಜಯಶಾಲಿಯಾಗಿ ಪಡೆದ ಸನ್ಮಾನಗಳು ಪ್ರಶಸ್ತಿಗಳು ಹೊರನಾಡು , ಹೊರದೇಶಗಳಲ್ಲಿ ಹೃದಯಸ್ಪರ್ಶೀ ಸನ್ಮಾನಪಡೆದ ಭಾಗ್ಯಶಾಲಿ. ನೂರಾರು ಬಿರುದು ಹೊತ್ತ ಸಾಮರ್ಥ್ಯಶಾಲಿ. ಚಲನ ಚಿತ್ರದ ಮೇರು ನಟ ದಿ|| ಡಾ|| ರಾಜ್ ಕುಮಾರ್ ಒಮ್ಮೆ ಬೆಳ್ಳಿ ಕಿರೀಟವಿತ್ತು ಸನ್ಮಾನಿಸಿದ್ದರು. ಹೊನ್ನಾವರದಲ್ಲಿ ಆಟ ನೋಡಲು ಬಂದಿದ್ದ ಉದಯ ಕುಮಾರ್ ಇವರ ದುಷ್ಟ ಬುದ್ಧಿಯ ಪಾತ್ರವನ್ನು ನೋಡಿ ವೇದಿಕೆಗೆ ಬಂದು ಪಾದಮುಟ್ಟಿ ನಮಸ್ಕರಿಸಿದ್ದನ್ನು  ನೆನಪಿಸಿಕೊಂಡು ಮುಗುಳ್ನಗುತ್ತಾರೆ. ಯಾವುದೇ ಕಲಾವಿದರನ್ನು ಮೆಚ್ಚಿಸುವ ಬೆಚ್ಚಿಸುವ ಕಲಾತ್ಮಕತೆ ಇವರಲ್ಲಿದೆ. ಹಲವಾರು ಸಿನಿಮಾ ತಾರೆಯರು, ಅನೇಕ ವಿದೇಶೀಯರೂ ಇವರ ನರ್ತನ ಕೌಶಲವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕಲಾಧರನ ಪಾತ್ರದಲ್ಲಿ ತರುಣರನ್ನು ಬೆರಗಾಗಿಸುವಂತೆ ನರ್ತಿಸಿ ರಂಜಿಸಿದ್ದಾರೆ.
                ಇಬ್ಬರು ಸಂಶೋಧಕರು ಚಿಟ್ಟಾಣಿಯವರ ಕುರಿತಾಗಿ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿದ್ದಾರಾದರು ಯಾವುದೇ ವಿಶ್ವ ವಿದ್ಯಾನಿಲಯವು ಇವರನ್ನು ಗುರ್ತಿಸಿ ಗೌರವ ದಕ್ತರೆತ್ ಕೊಟ್ಟಿಲ್ಲ. ಮನೆತುಂಬಾ ಸಾವಿರಾರು ಸಂಮಾನಪತ್ರಗಳ ರಾಶಿ ರಾಶಿ ಬಿದ್ದಿದ್ದರೂ ವಶೀಲಿಗಳಿಂದ ಪಡೆಯ ಬೇಕಾದ ಯಾವ ಪ್ರಶಸ್ತಿಯ ಗೋಜಿಗೂ ಇವರು ಹೋಗಿಲ್ಲ. ಲಕ್ಷಗಟ್ಟಲೆ ನಿಧಿ ಸಮರ್ಪಿಸಿ ಅಭಿಮಾನೀ ಕಲಾರಸಿಕರು ನೀಡಿದ ಸನ್ಮಾನಗಳು ಇವರ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಕೇವಲ ನಾಲ್ಕು ದಿನಗಳಿಗೆಂದು ಅಮೆರಿಕಾಕ್ಕೆ ಹೋದವರು ಅಲ್ಲಿ ಒಂದೂವರೆ ತಿಂಗಳು ಕಾಲ ಉಳಿದು ಹದಿನೈದು ಪ್ರದರ್ಶನಗಳನ್ನು ನೀಡಿ ಅಲ್ಲಿನ ಕನ್ನಡಿಗರನ್ನಷ್ಟೇ ಅಲ್ಲ ಅಮೆರಿಕನ್ನರನ್ನೂ ಮೆಚ್ಚಿಸಿದರು.
               ಅಭಿಮಾನಿಗಳ ಪ್ರೀತಿಯೇ  ತನ್ನ ಯಶಸ್ಸಿನ ಗುಟ್ಟೆನ್ನುವ ಇವರು ಅವರಿಗೊದಗಿಸುವ ರಂಜನೆಯೇ ಕೃತಜ್ಞತೆಯೆನ್ನುತ್ತಾರೆ. ಅವರು ಮೆಚ್ಚಿ ಆಡುವ ಒಂದೊಂದು ಮಾತು ಬದುಕಿನ ಸನ್ಮಾನಗಳೆನ್ನುತ್ತಾರೆ. ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ಸತತ ಜನಪ್ರೀಯತೆ ಕಾಯ್ದು ಕೊಂಡ ವ್ಯಕ್ತಿಗಳೆಷ್ಟು ಮಂದಿಯಿದ್ದಾರೆ ನಮ್ಮಲ್ಲಿ ? ನಿರಂತರ ಕಾಯಕದಲ್ಲಿ ಅದೆಷ್ಟು ಏರಿಳಿತಗಳನ್ನು ಚಿಟ್ಟಾಣಿ ಕಂಡಿರಬಹುದಾದರು ಮುಗ್ಧ ಮಗುವಿನಂಥಹ ಮನೋಭಿತ್ತಿ ಅವರದ್ದು. ಅಲ್ಲಿ ಕಲೆಯ ಹೊರತಾಗಿ ಮತ್ತೇನಕ್ಕು ಆಸ್ಪದವಿಲ್ಲ. ಕೃತಕವಿಲ್ಲ. ಪಾತ್ರ ತನ್ಮಯತೆ ಅವರ ಸಹಜ ಗುಣದಂತಾಗಿದೆ. ಪ್ರವೇಶ ಮಾಡಿದ ಕ್ಷಣದಲ್ಲೇ ಮಿಂಚಿನ ಸಂಚಾರವನ್ನು ಮೂಡಿಸುವ ಅಸಾಧಾರಣ ಪ್ರತಿಭೆಯಿದೆ. ಈ ಮಹಾ ಪ್ರತಿಭೆಯಲ್ಲಿ ಅನೇಕ ಗುಣ ವಿಶೇಷಗಳು ಸ್ವಾರಸ್ಯಗಳು ಇವೆ.

  • ವಿದ್ಯಾಭ್ಯಾಸವೆಂಬುದು ಕೇವಲ ಎರಡನೇ ತರಗತಿಯಷ್ಟೇ. ಯಕ್ಷಗಾನಕ್ಕೆ ಮಾರು ಹೋಗಿ ಶಾಲೆಗೆ ತಪ್ಪಿಸಿ ಗುಡ್ದವೇರಿ ಮರದ ಕೆಳಗೆ ತಾ ಗುಡ್ತಾಗ ಧೀಂ, ತಾ ಗುಡ್ತಾಗ ಧೀಂ, ತೊಂ,    ತೊಂ ,   ತೊಂ ಎಂದು ಕುಣಿಯುವುದು. ಚಿಕ್ಕಪ್ಪನೊಂದಿಗೆ ಆಟ ಕಲಿಯಲು ಹೋಗಿ ರಾಮಕೃಷ್ಣ ಭಟ್ಟರೆಮ್ಬವರಲ್ಲಿ ಅಲ್ಪ ಸ್ವಲ್ಪ ಕಲಿತು ಸ್ಥಳೀಯ ಮೇಳದಲ್ಲಿ ಸಣ್ಣಪುಟ್ಟ ವೇಷದೊಂದಿಗೆ ಕ್ಷೇತ್ರಕ್ಕೆ ಪಾದಾರ್ಪಣ ಮಾಡಿದರು.
  • ಶ್ರೀಕೃಷ್ಣ ಪಾರಿಜಾತ ಯಕ್ಷಗಾನದಲ್ಲಿ ಎರಡು ಪದ್ಯದ ಅಗ್ನಿಯ ಪಾತ್ರವೇ ಚಿಟ್ಟಾಣಿ ಮಾಡಿದ ಮೊದಲ ವೇಷ.
  • ಕೇಳಿದ ಸಂಗತಿಗಳೇ ಸಾಹಿತ್ಯವಾಗಿದ್ದಾಗ ಮುದ್ರಿತ ಅಕ್ಷರಗಳನ್ನು ಓದಲು ಕಲಿತು, ಅ.ನಾ.ಕೃ.   ತ.ರಾ.ಸು.  ಕಾದಂಬರಿಗಳನ್ನು ಓದಿ ಅರ್ಥ ಮಾಡಿಕೊಂಡು ಮಾತಿನಲ್ಲಿ ಜೋಡಿಸಿದರು.
  • ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿದಿನ ಕನಿಷ್ಠ ಮೂರು ಬಾರಿಯಾದರೂ ಕೊಬ್ಬರಿ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದೆ ತನ್ನ ಗಟ್ಟಿತನಕ್ಕೆ ಕಾರಣವಿರಬೇಕೆನ್ನುತ್ತಾರೆ.
  • ಮೊದಲು ವಿಭೂತಿ, ಮಣ್ಣು, ಬೆಣಚುಕಲ್ಲುಗಳನ್ನು ತಿನ್ನುವ ಅಭ್ಯಾಸವಿತ್ತು. ಆಟಗಳಿಗೆ ಹೋಗುವಾಗ ಚೀಲದಲ್ಲಿ ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದರೆಂದು ಮನೆಯವರು ನೆನಪಿಸಿಕೊಂಡು ನಗುತ್ತಾರೆ.
  • ಮುಂಬಯಿಯಲ್ಲೊಮ್ಮೆ ಆಟ ನೋಡಲು ಬಂದ ಮರಾಟಿಗರೊಬ್ಬರು ಚೌಕಿಗೆ  ( ಬಣ್ಣದ ಮನೆ )  ಬಂದರು. ಅಂದು ಬಸ್ಮಾಸುರನ ಪಾತ್ರ ಮಾಡುವವರಾರೆಂದು ವಿಚಾರಿಸಿ ಚಿಟ್ಟಾಣಿಯವರ ಸಾಮಾನ್ಯ ಶರೀರವನ್ನು ನೋಡಿ ತಿರಸ್ಕಾರ ಭಾವದಿಂದ ಹೋಗಿ ಆಟ ನೋಡಲು ಕುಳಿತರು. ಅಟ ಪ್ರಾರಂಭವಾಯಿತು. ಬಸ್ಮಾಸುರನ ಪ್ರವೇಶವಾಗುತ್ತಲೇ ಬೆಚ್ಚಿ ಕುಳಿತರು. ಆಟ ಮುಗಿಯುತ್ತಲೇ ಮತ್ತೆ ಚೌಕಿಗೆ ಬಂದು ಚಿಟ್ಟಾಣಿಯವರು ಇಳಿದು ಕೊಂಡಿದ್ದ ಹೋಟೆಲ್ಲಿನ ವಿಳಾಸ ಹಾಗೂ ಅವರು ಮುಂಜಾನೆ ಏಳುವ ಸಮಯಗಳನ್ನು ತಿಳಿದುಕೊಂಡು ಹೋದವರು, ಮಾರನೆ ದಿನ ಚಿಟ್ಟಾಣಿಯವರು ಏಳುವ ಹೊತ್ತಿಗೆ ಬಾಗಿಲ ಬಳಿ ಚಹಾದೊಂದಿಗೆ ಹಾಜರ್. ಅ ವರ್ಷ ಚಿಟ್ಟಾಣಿಯವರು ಮುಂಬಯಿಯಲ್ಲಿದ್ದಷ್ಟು ದಿನವು ಮುಂಜಾನೆಯ ಚಹಾವನ್ನು ಅವರೇ ತಂದು ಕೊಡುತ್ತಿದ್ದರು.
  • ಕುಮಟಾದಲ್ಲಿ ಕೀಚಕ-ಕೀಚಕ- ಕೀಚಕ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ತನ್ನ ಹಳೆಯ ನೃತ್ಯ ಕೌಶಲವನ್ನು ಪ್ರದರ್ಶಿಸಿ ಪ್ರಥಮ ಬಹುಮಾನವನ್ನು ದೊಡ್ಡ ಮೊತ್ತದೊಂದಿಗೆ ಗಳಿಸಿದರು.
  • ಈಗಲೂ ತನಗೆ ವೃದ್ದಾಪ್ಯದ ಅನುಭವಕ್ಕಿಂತಲೂ ಹದಿನಾರರ ಹುಡುಗನಾಗಿರಬೇಕಿತ್ತೆಂಬ ಆಸೆಯಾಗುತ್ತದೆನ್ನುತ್ತಾರೆ.
  • ಪ್ರೇಕ್ಷಕನ ನಿರೀಕ್ಷೆಗಳು ಕಾಲ ಕಾಲಕ್ಕೆ ಬದಲಾದಂತೆ ತಾನು ಕುಣಿತ ಅಭಿನಯಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತ ಬಂದೆ. ಅದೇ ಜನರು ತನ್ನನ್ನು ಇಷ್ಟ ಪಡಲು ಕಾರಣವಿರಬೇಕೆನ್ನುತ್ತಾರೆ.
  • ಒಂದು ಕಾಲದಲ್ಲಿ ಇವರ ನೃತ್ಯ, ಅಭಿನಯಗಳನ್ನು ಆಕ್ಷೇಪಿಸಿದ್ದವರು ಇಂದು ಇವರನ್ನು ಒಪ್ಪಿಕೊಳ್ಳುತ್ತಿದ್ದಾರೆ.
  • ಅನೇಕ ಮೇಳಗಳಲ್ಲಿ ಭಿನ್ನ ಭಿನ್ನ ಕಲಾವಿದರುಗಳೊಂದಿಗೆ ಸಾಕಷ್ಟು ಕಲಿತು, ಕಿರಿಯರಿಗೆ ಕಲಿಸಿ ಅನುಭವ ಹೊಂದಿದ್ದಾರೆ.
  • ಕೆಲವು ಅಭಿಮಾನಿಗಳು ಐದಾರು ವರ್ಷಗಳಿಂದ ಪ್ರತಿ ತಿಂಗಳು ಮಾಸಿಕ ಗೌರವಧನ ನೀಡುತ್ತಿದ್ದಾರೆ.
  • ಆರು ದಶಕಗಳಿಂದ ಕನ್ನಡದ ಹೆಮ್ಮೆಯ ಕಲೆಯಲ್ಲಿ ದುಡಿದು ಹೆಮ್ಮರವಾಗಿ ಬೆಳೆದ ಇವರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಗೌರವ ಧನವಾಗಲೀ, ರಾಜಧಾನಿಯಲ್ಲಿ ನಿವೇಶನವಾಗಲೀ, ಇನ್ನಾವುದೇ ವಿಶೇಷ ಸವಲತ್ತುಗಳಾಗಲೀ ದೊರೆಯದಿರುವುದು ಒಂದು ವಿಶೇಷವೇ ಹೌದು.
  • ಇದೀಗ ಚಿಟ್ಟಾಣಿಯವರ ಕುಟುಂಬದಲ್ಲಿ ಅವರ ಇಬ್ಬರು ಮಕ್ಕಳು ಸುಬ್ರಹ್ಮಣ್ಯ ಚಿಟ್ಟಾಣಿ, ಮತ್ತು ನರಸಿಂಹ ಚಿಟ್ಟಾಣಿಯವರಲ್ಲದೆ  ಮೊಮ್ಮಕ್ಕಳು ಈ ಕ್ಷೇತ್ರಕ್ಕೆ ಬಂದು ಬರವಸೆಯ ಕಲಾವಿದರಾಗುತ್ತಿದ್ದಾರೆ.

ಚಿಟ್ಟಾಣಿಯವರಿಗೆ ಎಲ್ಲ ಸಂಪದಗಳು ದೊರೆಯಲೆನ್ನುತ್ತ, ಶತಾಯುಷಿಗಳಾಗಿ ಬಾಳಲೆಂದು ಹಾರೈಸೋಣ.



ಲೇಖನ : ಸದಾನಂದ ಶರ್ಮ ಬಿ.

ಪ್ರಜ್ಞಾ ಭಾರತಿ ವಿದ್ಯಾಮಂದಿರ (ರಿ.)
ಶಿವಪ್ಪ ನಾಯಕ ನಗರ-ಸಾಗರ

 

 

Rating
No votes yet