ಗಾಂಧಿ ಮತ್ತು ಹಿಟ್ಲರ್: ಒಂದು ವಿವಾದಾತ್ಮಕ ಹೋಲಿಕೆ (ಓಷೋ ರಜನೀಶ್ ಚಿಂತನೆಗಳು)
ಇತ್ತೀಚಿನ ಒಂದು ಸಂದರ್ಶನದಲ್ಲಿ ನೀವು “ನಾನು ಹಿಟ್ಲರನ ಹುಚ್ಚುತನದ ಅಭಿಮಾನಿ” ಎಂದಿದ್ದಿರಿ. “ಅವನೊಬ್ಬ ಸಂತನಂತೆ ಬದುಕಿದ” ಎಂದು ಹೇಳುವುದರ ಜೊತೆಗೆ “ಆತ ಗಾಂಧಿಯಷ್ಟೇ ನೀತಿವಂತ” ಎಂದಿರಿ. ನಿಮ್ಮ ಮಾತುಗಳು ಇಂದು ಎಲ್ಲ ಜರ್ಮನರನ್ನೂ ತಳಮಳಕ್ಕೀಡು ಮಾಡಿದೆ. ನಿಜಕ್ಕೂ ನೀವು ಹಿಟ್ಲರನನ್ನು ಹೇಗೆ ಪರಿಭಾವಿಸುವಿರಿ?
ನನ್ನನ್ನು ಅಪಾರ್ಥ ಮಾಡಿಕೊಳ್ಳುವುದು ಬಹಳ ಸುಲಭ.
ನಾನು ಅಡಾಲ್ಫ್ ಹಿಟ್ಲರ್ನನ್ನು ಗಾಂಧಿಗೆ ಹೋಲಿಸುವುದು ವಿಪರೀತವೆಂಬಂತೆ ತೋರಬಹುದು. ಆದರೆ ಎಲ್ಲ ವಿಪರೀತಗಳೂ ಬರೀ ತೋರಿಕೆಯ ವಿಪರೀತಗಳಾಗಿರುತ್ತವೆ. ಗಾಂಧೀ ಎಂತಹ ನಿರ್ದಯಿ ಎಂದು ಅವರನ್ನು ಹತ್ತಿರದಿಂದ ಕಂಡವರೆಲ್ಲ ಬಲ್ಲರು. ಗಾಂಧಿಯ ಅಹಿಂಸಾತತ್ವ ತನ್ನ ಸ್ವಭಾವದಲ್ಲೇ ತುಂಬ ಹಿಂಸಾತ್ಮಕವಾದುದು. ಆ ಹಿಂಸೆಯನ್ನು ಸಹಿಸದೆ ಅವರ ಮಗ ಹರಿಲಾಲ್ ಮದ್ಯ ಮಾಂಸಾದಿಗಳ ಮೊರೆ ಹೋದ, ಮುಸಲ್ಮಾನನಾಗಿ ಮತಾಂತರ ಹೊಂದಿದ. ಮಗನಿಗೆ ಸರಿಯಾದ ತಂದೆಯಾಗಲಾರದವನು ’ರಾಷ್ಟ್ರಪಿತ’ನಾಗುವನೇ? ದೇಶದ ತಂದೆಯಾಗುವುದು ಸುಲಭ, ಆದರೆ ಒಬ್ಬ ಮಗನಿಗೆ ಸರಿಯಾದ ತಂದೆಯಾಗುವುದೇ ಮಹಾಕಷ್ಟ. ಗಾಂಧೀ ಎಂತಹ ನಿರ್ದಯಿ ಎಂದು ಅವರ ಪತ್ನಿ ಕಸ್ತೂರ್ ಬಾ ಬಲ್ಲರು. ಗಾಂಧೀ ಜೀವನಚರಿತ್ರೆ ಬರೆಯುವವರು ಅವರ ದಾಂಪತ್ಯವನ್ನು ’ಆದರ್ಶ ದಾಂಪತ್ಯ’ ಎಂದು ಬರೆದು ಸುಳ್ಳು ಹೇಳುತ್ತಾರೆ. ಅವರಿಬ್ಬರ ನಡುವೆ ಕೊನೆಯ ತನಕವೂ ಘರ್ಷಣೆ ಇದ್ದೇ ಇತ್ತು. ನಮ್ಮ ಬೋಧನೆಗೂ ಸ್ವಭಾವಕ್ಕೂ ಸಂಬಂಧವಿರಬೇಕೆಂದೇನೂ ಇಲ್ಲ. ಕೆಲವು ಸಲ ಅಹಿಂಸೆ ನಮ್ಮ ಸ್ವಭಾವದಲ್ಲಿರದ ಕಾರಣದಿಂದಲೇ ಅಹಿಂಸಾ ಬೋಧನೆಗೆ ಹೆಚ್ಚು ಮಹತ್ವ ನೀಡುತ್ತೇವೆ. ಇದಕ್ಕೆ ನಾನು ಹಲವು ಉದಾಹರಣೆಗಳನ್ನು ನೀಡಬಲ್ಲೆ.
ಗಾಂಧಿ ದಕ್ಷಿಣ ಆಫ್ರಿಕಾದ ತಮ್ಮ ಫೀನಿಕ್ಸ್ ಆಶ್ರಮದಲ್ಲಿ ತನ್ನ ಹೆಂಡತಿ ಶೌಚಪಾತ್ರೆಯನ್ನು ಶುಚಿಗೊಳಿಸುತ್ತಿರಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಒಂದೇ ಸಮನೆ ಕಿರುಕುಳ ನೀಡುತ್ತಿದ್ದರು. ಸಾಂಪ್ರದಾಯಿಕ ಮನೆತನದ ಆಕೆ ಅಂಥದಕ್ಕೆಲ್ಲ ಒಪ್ಪುತ್ತಿರಲಿಲ್ಲ. ಆಗ ಗಾಂಧಿ ಆಕೆ ಗರ್ಭಿಣಿ ಎಂದೂ ಲೆಕ್ಕಿಸದೆ ಆಕೆಯನ್ನು ಬೀದಿಯಲ್ಲಿ ನಿಲ್ಲಿಸಿ ಬಾಗಿಲುಗಳನ್ನು ಹಾಕಿಕೊಳ್ಳುತ್ತಿದ್ದರು. “ಶೌಚ ಪಾತ್ರೆಯನ್ನು ತೊಳೆಯದೇ ನೀನು ಪಾಪಕಾರ್ಯ ಮಾಡುತ್ತಿದ್ದೀಯೆ ಎಂದು ನಿನಗೆ ಮನವರಿಕೆಯಾಗುವವರೆಗೂ ನಿನಗೆ ಒಳಗೆ ಪ್ರವೇಶವಿಲ್ಲ” ಎನ್ನುತ್ತಿದ್ದರು. ಆಕೆ ಅಲ್ಲಿನ ಭಾಷೆ ತಿಳಿಯಳು, ಅಲ್ಲಿನ ಜನ ಎಂಥವರೆಂದು ತಿಳಿಯಳು, ಆ ವಾತಾವರಣದ ಚಳಿ ಎಂಥದೆಂದೂ ಆಕೆಗೆ ತಿಳಿಯದು. ಕೊನೆಗೆ ಶೌಚಪಾತ್ರೆಯನ್ನು ಶುಚಿಗೊಳಿಸಲು ಒಪ್ಪಿಸಿಯೇ ಆಕೆಯನ್ನು ಒಳಗೆ ಸೇರಿಸಿದ್ದು. ನನಗಂತೂ ಗಾಂಧಿಯಲ್ಲಿ ಯಾವ ಅಹಿಂಸೆಯೂ ಕಾಣಿಸುವುದಿಲ್ಲ. ಗಾಂಧಿಗೆ ಶೌಚಾಲಯವನ್ನು ತೊಳೆಯುವುದೇ ಪುಣ್ಯದ ಕೆಲಸವೆನಿಸಿದರೆ ಧಾರಾಳವಾಗಿ ತೊಳೆದುಕೊಳ್ಳಲಿ, ಅದಕ್ಕೆ ಹೆಂಡತಿಯನ್ನೂ ಪೀಡಿಸಬೇಕೇಕೆ? ಇದು ಇನ್ನೊಬ್ಬರ ಸ್ವಾತಂತ್ರ್ಯವನ್ನು ಅತಿಕ್ರಮಿಸಿದಂತಲ್ಲವೇ? ಆಕೆ ಕಣ್ಣೀರಿಡುತ್ತ ಕೆಲಸ ಮಾಡುತ್ತಿದ್ದರೆ “ಹಾಗೆಲ್ಲ ಕಣ್ಣೀರಿಡಬಾರದು. ಸೇವೆ ಮಾಡುವಾಗ ನಗುಮುಖವಿರಬೇಕು” ಎಂದು ಹೇಳುತ್ತಿದ್ದರಂತೆ. ಆಕೆ ಇಂಥ ಕೆಲಸ ಮಾಡುತ್ತಿದ್ದುದು ತನ್ನ ಹೆದರಿಕೆಯಿಂದಲೇ ವಿನಃ ಸೇವಾಭಾವದಿಂದಲ್ಲ ಎಂಬ ಸಾಮಾನ್ಯ ತಿಳುವಳಿಕೆಯೂ ಅವರಿಗೆ ಇರಲಿಲ್ಲವೇ? ಅಲ್ಲದೆ ಗಾಂಧಿ ತನ್ನ ಆಶ್ರಮದಲ್ಲಿ ಯಾವ ಪದಾರ್ಥವನ್ನೂ ವ್ಯರ್ಥಮಾಡುವಂತಿಲ್ಲ ಎಂದು ಕಟ್ಟುಪಾಡು ಮಾಡಿದ್ದರು. ಮಲವನ್ನೂ ಕೂಡ ಎಸೆಯದೇ ಮುಂದಿನ ವರ್ಷಕ್ಕೆ ಗೊಬ್ಬರವಾಗುವುದೆಂದು ಫೀನಿಕ್ಸ್ ಆಶ್ರಮದ ಒಂದು ಮೂಲೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಇಂಥ ಜಿಪುಣ ವ್ಯಕ್ತಿಯನ್ನು ನಾನು ಇನ್ನೆಲ್ಲೂ ಕಂಡಿಲ್ಲ. ಗಾಂಧಿ ಜೀವನವಿಡೀ ಮಲಬದ್ಧತೆಯಿಂದ ನರಳುತ್ತಿದ್ದುದಕ್ಕೆ ಕಾರಣ ಇಲ್ಲದೇ ಇಲ್ಲ. ಯಾವುದೂ ವ್ಯರ್ಥವಾಗಬಾರದೆಂದು ಹೋದಲ್ಲೆಲ್ಲ ಶೌಚ ಸಂಗ್ರಹ ಪಾತ್ರೆಯನ್ನು ಹೊತ್ತೊಯ್ಯುತ್ತಿದ್ದರು. ಗಾಂಧಿಯ ಬಗ್ಗೆ ಸಿನೆಮಾ ತೆಗೆಯುವ ರಿಚರ್ಡ್ ಅಟೆನ್ಬರೋರಂಥವರಿಗೂ ಇದೆಲ್ಲ ಏಕೆ ಕಾಣಿಸುವುದಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ. ಅಹಿಂಸೆಯನ್ನೇ ತನ್ನ ಪರಮೋಚ್ಚ ಆದರ್ಶವೆಂದು ಪ್ರಾಮಾಣಿಕತೆಯಿಂದ ಘೋಷಿಸಿಕೊಂಡಿದ್ದರಿಂದ ಈತನ ಆಂತರ್ಯವನ್ನು ಬೆದಕಿ ನೋಡಬೇಕೆಂದು ಯಾರಿಗೂ ಅನ್ನಿಸುವುದಿಲ್ಲ.
ಗಾಂಧಿಗೆ ಒಟ್ಟು ಐವರು ಗಂಡು ಮಕ್ಕಳು. ಹಾಗೆ ನೋಡಿದರೆ ಗಾಂಧಿಯ ತಿಳುವಳಿಕೆಯೆಲ್ಲ ಆಧುನಿಕ ಶಿಕ್ಷಣದಿಂದಲೇ ಬಂದದ್ದು. ಅವರು ಇಂಗ್ಲೇಂಡಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಬ್ರಿಟಿಷ್ ಶಿಕ್ಷಣ ಗಾಂಧಿಯ ಧಾರ್ಮಿಕತೆಯನ್ನು ಹಾಳುಗೆಡವಲಿಲ್ಲವೆಂದಾದರೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವರು ಹೆದರಬೇಕೇಕೆ? ಅವರ ಮಗ ಹರಿಲಾಲ್ ನನ್ನ ಬಾಲ್ಯ ಸ್ನೇಹಿತ. ಆತ ಗಾಂಧಿಗಿಂತ ಎಷ್ಟೋ ಪಾಲು ಉತ್ತಮ ಎಂದು ನನಗನ್ನಿಸಿದೆ. ಹೊಸ ಶಿಕ್ಷಣ ಪದ್ಧತಿ ಜನರನ್ನು ಹಾಳು ಮಾಡುತ್ತದೆ ಎಂದು ಗಾಂಧಿ ಅವನನ್ನು ಶಾಲೆಗೇ ಸೇರಿಸಲಿಲ್ಲ. ಶಾಲಾಶಿಕ್ಷಣದಲ್ಲಿ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನಗಳನ್ನು ಕಲಿಸಿದರೆ ಅದು ಅವರ ಧಾರ್ಮಿಕ ನಂಬಿಕೆಗಳನ್ನು ನಾಶ ಮಾಡಿ ಬಿಡುತ್ತದೆ ಎಂಬುದು ಅವರ ಹೆದರಿಕೆ. ಅತ್ಯಂತ ಸರಳವಾದ ಹಾಗು ಅಗತ್ಯವಾದ ತಂತ್ರಜ್ಞಾನಗಳನ್ನೂ ಅವರು ಬಹಿಷ್ಕರಿಸಿದ್ದರು. ಒಬ್ಬ ವ್ಯಕ್ತಿ ಅಣುವಿಜ್ಞಾನವನ್ನು ಬಹಿಷ್ಕರಿಸಿದರೆ ಅರ್ಥವಾಗುತ್ತದೆ. ಇಂದಿನ ಕಾಲಮಾನದಲ್ಲಿ “ನಾನು ಟೆಲಿಫೋನನ್ನು ವಿರೋಧಿಸುತ್ತೇನೆ” ಎಂದು ಹೇಳಿದರೆ ಏನೆಂದು ಹೇಳುವುದು? ಬರೀ ಧರ್ಮಗ್ರಂಥಗಳನ್ನು ಓದುವ ಮಟ್ಟಿಗೆ ಅವರು ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದ್ದರು. ಹರಿಲಾಲ್ ತಾನು ಶಾಲೆಗೆ ಹೋಗಲೇ ಬೇಕು ಎಂದು ಹಟ ಹಿಡಿದಾಗ “ನೀನು ಶಾಲೆಯ ಮೆಟ್ಟಿಲು ಏರಿದರೆ ನನ್ನ ಮನೆಯಲ್ಲಿ ನಿನಗೆ ಪ್ರವೇಶವಿಲ್ಲ” ಎಂದು ಹೆದರಿಸಿದ್ದರು. ಇದೇನು ಅಹಿಂಸೆಯ ನಡೆಯೇ? ಕೊಲ್ಲುವುದೊಂದೇ ಹಿಂಸೆಯಲ್ಲ, ಹಿಂಸೆ ಎಂಬುದು ನಮ್ಮ ವರ್ತನೆಯಿಂದ ಪ್ರತೀತವಾಗುತ್ತದೆ. ಶಾಲೆಗೆ ಹೋಗಬೇಕು ಎನ್ನುವುದು ಅಪರಾಧವೇ, ಆ ಹುಡುಗನೇನು ’ಸೂಳೆಗಾರಿಕೆ’ಗೆ ಹೋಗಬೇಕು ಎಂದು ಕೇಳಿದನೇ? “ನೀನೂ ಶಾಲೆಯ ಮೆಟ್ಟಿಲು ಏರಿದ್ದವನು, ನೀನೇನು ಕೆಟ್ಟು ಹೋಗಿರುವೆಯಾ? ನನ್ನ ಬಗ್ಗೆ ಏಕೆ ನಿನಗೆ ನಂಬಿಕೆ ಇಲ್ಲ?” ಎಂದು ಕೇಳಿದ. ಆದರೆ ಗಾಂಧಿ ತಮ್ಮ ನಿರ್ಧಾರವನ್ನು ಕಿಂಚಿತ್ತೂ ಬದಲಿಸಲಿಲ್ಲ. ನಮ್ಮ ಸಿದ್ಧಾಂತಗಳನ್ನು ಇನ್ನೊಬ್ಬರ ಮೇಲೆ ಹೇರುವುದೇ ನಿಜವಾದ ಹಿಂಸೆ. ಅದರಲ್ಲೂ ಚಿಕ್ಕ ಮಕ್ಕಳಿಗೆ “ನನ್ನ ಸಿದ್ಧಾಂತದಂತೆ ನಡೆ ಇಲ್ಲವಾದರೆ ಮನೆಬಿಟ್ಟು ಹೊರಡು” ಎನ್ನುವುದು ಹಿಂಸೆಯಷ್ಟೇ ಅಲ್ಲ. ಅದು ಒರಟುತನ, ಅದೊಂದು ವಿಕೃತಿ. ತನ್ನನ್ನು ಉಲ್ಲಂಘಿಸಿ ಹೊರನಡೆದ ಹರಿಲಾಲ್ನನ್ನು ಗಾಂಧಿ ಕೊನೆಯವರೆಗೂ ಕ್ಷಮಿಸಲಿಲ್ಲ, ಮಗನೆಂದು ಒಪ್ಪಿಕೊಳ್ಳಲಿಲ್ಲ. ಇದನ್ನು ಅಹಿಂಸೆ ಎನ್ನುವುದೋ ಪ್ರತೀಕಾರವೆನ್ನುವುದೋ? ನಾನು ಹರಿಲಾಲ್ನ ಧೈರ್ಯವನ್ನು ಮೆಚ್ಚುತ್ತೇನೆ. ಹರಿಲಾಲ್ ಕೂಡಲೆ ತಂದೆಯ ಆಶೀರ್ವಾದವನ್ನು ಬಯಸಿ (ಆ ಆಶೀರ್ವಾದ ಅವನಿಗೇನೂ ಸಿಗಲಿಲ್ಲ) ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಮನೆಯಿಂದ ಹೊರನಡೆದನಂತೆ. ಅಪ್ಪ ಅಮ್ಮನಿದ್ದೂ ಹರಿಲಾಲ್ ತನ್ನನ್ನು ಮೆಟ್ರಿಕ್ಯುಲೇಷನ್ ತನಕವಾದರೂ ಓದಿಸಿ ಎಂದು ಅವರಿವರ ಬಳಿ ಅಂಗಲಾಚಿದ. ಕೊನೆಗೆ ಬೇರೆಯ ಊರಿನಲ್ಲಿದ್ದ ತನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ. ನನಗೆ ಗಾಂಧಿಯಲ್ಲಿ ಯಾವ ಅಹಿಂಸೆ, ಪ್ರೀತಿಯೂ ಕಾಣಿಸುವುದಿಲ್ಲ. ದೊಡ್ಡ ದೊಡ್ಡ ಭಾಷಣಗಳು, ಸಾರ್ವಜನಿಕ ಚಳವಳಿಗಳು ಬೇರೆಯ ಮಾತು. ಇಂತಹ ಸಣ್ಣ ಪುಟ್ಟ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯ ನಿಜವಾದ ಮುಖದ ದರ್ಶನವಾಗುತ್ತದೆ.
ಗಾಂಧಿಯ ಹಿಂದೂ-ಮುಸ್ಲಿಮ್ ಐಕ್ಯತೆಯ ಸಂದೇಶ ಬರೀ ಲೊಳಲೊಟ್ಟೆ, ಅವೆಲ್ಲ ಹಸಿ ಸುಳ್ಳುಗಳು ಎಂದು ಈಗ ರುಜುವಾತಾಗಿದೆ. ಎಲ್ಲ ಧರ್ಮಗಳೂ ಒಂದೇ ಎಂದು ಹೇಳುತ್ತಿದ್ದ ಗಾಂಧಿ ಬೇರೆಯವರ ಕಣ್ಣಿಗೆ ಸರ್ವಧರ್ಮ ಸಮನ್ವಯಕಾರನಂತೆ ಕಾಣಿಸಬಹುದು. ಆದರೆ ಅದು ಗಾಂಧಿ ತಾತ್ವಿಕ ಗ್ರಹಿಕೆಯೇನಲ್ಲ ಅದು ಕೇವಲ ಒಂದು ರಾಜಕೀಯ ತಂತ್ರವಾಗಿತ್ತು. “ಹಿಂದೂ ಮುಸ್ಲಿಮರು ಪರಸ್ಪರ ಸಹೋದರರು” ಎಂಬ ಅವರ ಮಾತುಗಳಿಗೆ ಯಾವ ಅರ್ಥವೂ ಇರಲಿಲ್ಲ. ಏಕೆಂದರೆ ತನ್ನ ಸ್ವಂತ ಮಗ ಮುಸಲ್ಮಾನನಾದಾಗ ಗಾಂಧಿ ಸಹಿಸಲಿಲ್ಲ. ಹಿಂದೂ, ಇಸ್ಲಾಂ ಹಾಗು ಕ್ರಿಶ್ಚಿಯನ್ ಧರ್ಮಗಳ ಪ್ರಜೆಗಳು ಒಗ್ಗೂಡಿ ಬ್ರಿಟಿಷರ ವಿರುದ್ಧ ಹೋರಾಡಬೇಕೆಂಬುದಷ್ಟೇ ಗಾಂಧಿಯ ಆಶಯವಾಗಿತ್ತು. ಹರಿಲಾಲ್ ತಂದೆಯ ಆಶಯವನ್ನು ಸಾಕಾರಗೊಳಿಸಲೆತ್ನಿಸಿದ. ಪದವೀಧರನಾದ ಮೇಲೆ ಗಾಂಧಿ ಎಷ್ಟರ ಮಟ್ಟಿಗೆ ಹಿಂದೂ ಮುಸ್ಲಿಮ್ ಭಾಯಿ ಭಾಯಿ ಎಂಬ ಮಾತುಗಳನ್ನು ನಂಬಿರುವರೋ ಎಂದು ಪರೀಕ್ಷಿಸಲು ಇಸ್ಲಾಂಗೆ ಮತಾಂತರ ಹೊಂದಿದ, ಅಬ್ದುಲ್ಲಾ ಗಾಂಧಿ ಎಂದು ಹೆಸರು ಬದಲಾಯಿಸಿಕೊಂಡ. ತಾತ್ವಿಕವಾಗಿ ಯೋಚಿಸುವುದಾದಲ್ಲಿ ಇಂಥ ಮತಾಂತರವನ್ನು ಗಾಂಧೀ ಮುಕ್ತವಾಗಿ ಸ್ವಾಗತಿಸಬೇಕಿತ್ತು. ಆದರೆ ಆ ಕ್ಷಣ ಗಾಂಧಿಯ ಮುಖವಾಡ ಕಳಚಿ ಬಿದ್ದಿತು, ಆಗ ಅವರೊಳಗಿದ್ದ ನಿಜವಾದ ಹಿಂದೂ ಜಾಗೃತನಾಗಿದ್ದ. ಗಾಂಧಿ ಕೆಂಡಾಮಂಡಲರಾಗಿ “ಇದೇನು ತಮಾಷೆಯೇ, ನನ್ನ ಆಸ್ತಿಯ ಚಿಕ್ಕಾಸೂ ಅವನಿಗೆ ಸಿಗುವುದಿಲ್ಲ, ಅವನು ನನ್ನ ಮಗನೇ ಅಲ್ಲ, ಇನ್ನು ನಾನು ಅವನ ಮುಖ ನೋಡುವುದಿಲ್ಲ” ಎಂದು ರೇಗಾಡಿದರಂತೆ. ತಮ್ಮ ವಿಲ್ನಲ್ಲೂ ಅವನು ನನ್ನ ಚಿತೆಗೆ ಬೆಂಕಿ ಇಡಬಾರದು ಎಂದು ಬರೆದಿದ್ದರಂತೆ. ಇದಂತೂ ಹಿಂಸೆಯ ಪರಮಾವಧಿಯಾಗಿದೆ. ಬದುಕಿರುವಾಗಷ್ಟೇ ಅಲ್ಲ ಸತ್ತ ಮೇಲೂ ತನ್ನ ದಬ್ಬಾಳಿಕೆಯೇ ಮುಂದುವರೆಯಬೇಕೆಂಬ ಧೋರಣೆ ಇದಾಗಿದೆ. ಒಮ್ಮೆ ಮಧ್ಯ ಪ್ರದೇಶದ ಕಟ್ನಿ ಎಂಬಲ್ಲಿ ಹರಿಲಾಲ್ ಪ್ರಯಾಣಿಸುತ್ತಿದ್ದ ರೈಲು ಹಾಗು ಗಾಂಧಿ ಪ್ರಯಾಣಿಸುತ್ತಿದ್ದ ರೈಲು ಎರಡೂ ಒಂದೇ ಜಂಕ್ಷನ್ನಲ್ಲಿ ಸಂಧಿಸಿದವು. ಆಗ ತಾಯಿಯನ್ನು ನೋಡಲು ಹರಿಲಾಲ್ ಧಾವಿಸಿದನಂತೆ. ಅವನನ್ನು ದೂರದಿಂದಲೇ ಗುರುತಿಸಿದ ಗಾಂಧಿ ತಮ್ಮ ಬೋಗಿಯ ಎಲ್ಲ ಕಿಟಕಿಗಳನ್ನೂ ಮುಚ್ಚಿ “ನೀನೇನಾದರೂ ಅವನನ್ನು ಮಾತನಾಡಿಸಲು ಪ್ರಯತ್ನಿಸಿದರೆ ನೀನೂ ಅವನ ಹಿಂದೆಯೇ ಹೊರಡಬಹುದು” ಎಂದು ಕಸ್ತೂರ್ಬಾಗೆ ಎಚ್ಚರಿಕೆ ನೀಡಿದರಂತೆ. ಕಸ್ತೂರ್ಬಾರ ಕಣ್ಣೀರು, ಗೋಳಾಟಗಳು ಅವರ ಮನಸ್ಸನ್ನು ಕಿಂಚಿತ್ತೂ ಕರಗಿಸಲಿಲ್ಲ.
ಒಮ್ಮೆ ಅಮೆರಿಕಾದ ಪತ್ರಕರ್ತ ಲ್ಯೂಯಿ ಫಿಷರ್ ಗಾಂಧಿಯನ್ನು “ನೀವೇನೋ ಅಹಿಂಸಾವಾದಿಗಳು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಭಾರತೀಯ ಸೈನ್ಯದ ಗತಿಯೇನು?” ಎಂದು ಕೇಳಿದಾಗ “ಸೈನ್ಯವನ್ನು ವಿಲೀನಗೊಳಿಸಲಾಗುವುದು, ಸೈನಿಕರನ್ನು ಹೊಲ ಗದ್ದೆಗಳಿಗೆ ಕಳುಹಿಸಲಾಗುವುದು” ಎಂದಿದ್ದರು. ಆದರೆ ಸ್ವಾತಂತ್ರ್ಯ ಬಂದ ಮೇಲೆ ಸೈನ್ಯವೇನೂ ವಿಸರ್ಜನೆಯಾಗಲಿಲ್ಲ, ಆ ಪ್ರಶ್ನೆಯೂ ಮತ್ತೆ ತಲೆಯೆತ್ತಲಿಲ್ಲ. ಬದಲಿಗೆ ಸ್ವಾತಂತ್ರ್ಯಾನಂತರದ ಮೊದಲ ಭಾರತ ಪಾಕೀಸ್ಥಾನ ಯುದ್ಧಕ್ಕೆ ಗಾಂಧಿಯವರ ಆಶೀರ್ವಾದವಿತ್ತು. ವಾಯು ಸೇನೆಯ ಮೂರು ಯುದ್ಧ ವಿಮಾನಗಳು ಗಾಂಧಿ ಇದ್ದ ಜಾಗದಲ್ಲಿ ಇಳಿದು ಅವರ ಆಶೀರ್ವಾದ ಪಡೆದು ಹೊರಟವು. ಇದೆಂಥ ಅಹಿಂಸೆ? ಭಾರತವು ಬ್ರಿಟಿಷರ ಅಧೀನದಲ್ಲಿದ್ದಾಗ ಅಹಿಂಸಾ ಹೋರಾಟವೇ ನಮಗುಳಿದಿದ್ದ ಏಕಮೇವ ದಾರಿಯಾಗಿತ್ತು. ಅವರ ವಿರುದ್ಧ ಸಶಸ್ತ್ರ ಹೋರಾಟವಂತೂ ನಮ್ಮಿಂದ ಸಾಧ್ಯವೇ ಇರಲಿಲ್ಲ. ಹಾಗಾಗಿ ಗಾಂಧಿ ಜೈಲುಗಳನ್ನು ತುಂಬಲು ಕರೆ ನೀಡಿದರು. ಭಾರತದಂತಹ ಬೃಹತ್ ಜನಸಂಖ್ಯೆಯ ದೇಶದಲ್ಲಿ ಎಷ್ಟು ಜನರನ್ನು ಜೈಲಿನಲ್ಲಿ ತುಂಬಿಸಲಾದೀತು? “ಬ್ರಿಟಿಷರನ್ನು ಕೆರಳಿಸುವಂತಹ ಯಾವ ಚಟುವಟಿಕೆಗಳಲ್ಲೂ ತೊಡಗಕೂಡದು, ಕಲ್ಲು ತೂರಾಟ, ರೈಲಿಗೆ ಬೆಂಕಿ, ಸೇತುವೆಗಳ ಸ್ಫೋಟ ಹೀಗೆ ಯಾವುದೊಂದೂ ಸಂಭವಿಸಕೂಡದು. ಹಾಗೇನಾದರೂ ಆದರೆ ಬ್ರಿಟಿಷರು ನಿರ್ದಾಕ್ಷಿಣ್ಯವಾಗಿ ಸಾವಿರಾರು ಜನಗಳ ಮೇಲೆ ಗುಂಡಿನ ಮಳೆ ಕರೆಯುತ್ತಾರೆ. ಇದರಿಂದ ನಮ್ಮ ಅಹಿಂಸಾ ಹೋರಾಟಕ್ಕೇ ಕಳಂಕ ತಗುಲುತ್ತದೆ” ಎಂದು ಗಾಂಧಿ ಹೋರಾಟಗಾರರಿಗೆ ಸೂಚಿಸಿದ್ದರು. ಇದು ಅತ್ಯಂತ ಚಾಲಾಕಿತನದ ತಂತ್ರ, ಇದು ಬ್ರಿಟಿಷರ ಮೇಲೆ ಒತ್ತಡ ಹೇರುವ ಕೆಲಸ. ಆದರೆ ಈ ತಂತ್ರ ಫಲಿಸಿತು. ಹಿಂಸಾಚಾರಕ್ಕಿಳಿಯದವರ ಮೇಲೆ ಹೇಗೆ ಗುಂಡು ಹಾರಿಸುವುದೆಂದು ತಿಳಿಯದೆ ತಬ್ಬಿಬ್ಬಾದ ಬ್ರಿಟಿಷರು ಭಾರತವನ್ನು ಬಿಟ್ಟು ಹೊರನಡೆದರು.
ಅವರು ಹೊರನಡೆಯಲು ಗಾಂಧಿಯ ಅಹಿಂಸಾ ಹೋರಾಟ ಖಂಡಿತ ಕಾರಣವಲ್ಲ. ಗಾಂಧಿಯ ಕ್ವಿಟ್ ಇಂಡಿಯಾ ಹೋರಾಟ ಪ್ರಾರಂಭವಾದುದು ೧೯೪೨ರಲ್ಲಿ, ಆದರೆ ಸ್ವಾತಂತ್ರ್ಯ ಘೋಷಣೆಯಾದದ್ದು ೧೯೪೭ರಲ್ಲಿ. ಕ್ರಾಂತಿ ಎಂದಿಗೂ ತುರ್ತು ಪರಿಣಾಮವನ್ನು ಉಂಟು ಮಾಡುತ್ತದೆ. ಕ್ರಾಂತಿಯಲ್ಲಿ ಕಾರ್ಯಕಾರಣ ಸಂಬಂಧಗಳು ಎಂದಿಗೂ ಜೊತೆಯಾಗೇ ಇರುತ್ತವೆ. ಅವೆರಡರ ನಡುವೆ ಹೀಗೆ ಐದು ವರ್ಷಗಳ ಅಂತರ ಇರುವುದಿಲ್ಲ. ನಿಜವೇನೆಂದರೆ ೧೯೪೨ರಲ್ಲಿ ಪ್ರಾರಂಭವಾದ ಕ್ರಾಂತಿಯನ್ನು ಬ್ರಿಟಿಷರು ಒಂಬತ್ತೇ ದಿನಗಳಲ್ಲಿ ಹತ್ತಿಕ್ಕಿದರು. ಇತಿಹಾಸದಲ್ಲೆಲ್ಲೂ ಇಷ್ಟೊಂದು ದುರ್ಬಲವಾದ ಕ್ರಾಂತಿಯು ನಮಗೆ ಕಾಣಸಿಗದು. ಒಂಬತ್ತೇ ದಿನಗಳಲ್ಲಿ ಕ್ರಾಂತಿಯ ಸದ್ದಡಗಿತು. ಬ್ರಿಟಿಷರಿಗೆ ಇವರ ಹೋರಾಟಕ್ಕೆ ಹೆದರಿ ಸ್ವಾತಂತ್ರ್ಯ ನೀಡಬೇಕಾದ ಅಗತ್ಯವಿರಲಿಲ್ಲ. ಅವರು ಭಾರತವನ್ನು ಬಿಟ್ಟು ತೊಲಗಲು ಬೇರೆಯದೇ ಕಾರಣವಿತ್ತು. ಕ್ರಮೇಣ ಭಾರತ ಅವರಿಗೆ ಆರ್ಥಿಕವಾಗಿ ಒಂದು ಹೊರೆಯಾಗಿ ಪರಿಣಮಿಸಿತ್ತು. ಬೇಕಾದ್ದನ್ನೆಲ್ಲ ಈಗಾಗಲೇ ಶೋಷಣೆ ಮಾಡಿ ಆಗಿತ್ತು. ಒಂದು ಸಾಮ್ರಾಜ್ಯ ಆರ್ಥಿಕ ಹೊರೆಯಾಗಿ ಪರಿಣಮಿಸಿದೊಡನೆ ಅದಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡುವುದೇ ಜಾಣತನ. ಅದರಲ್ಲೂ ಹೋರಾಟ ಗಲಾಟೆ ಯಾವುದೂ ಇಲ್ಲದಿದ್ದಾಗ ಸದ್ದಿಲ್ಲದೆ ಕಾಲ್ತೆಗೆಯುವುದಂತೂ ಇನ್ನೂ ಸರಿಯಾದ ಕ್ರಮ. ಆಗ ನಮ್ಮನ್ನು ಯಾರೂ ಆಚೆಗೆ ತಳ್ಳಿದಂತಾಗುವುದಿಲ್ಲ, ಬದಲಿಗೆ ನಾವೇ ಅವರಿಗೆ ಸ್ವಾತಂತ್ರ್ಯ ನೀಡಿ ಉಪಕಾರ ಮಾಡಿದಂತಾಗುವುದು, ಅವರ ಸ್ನೇಹವನ್ನೂ ಉಳಿಸಿಕೊಂಡಂತಾಗುವುದು.
ಇನ್ನು ಗಾಂಧಿಯ ಅಹಿಂಸೆಗೆ ಬರುವುದಾದರೆ, ವ್ಯಾಪಾರಿಗಳು ರಾಜೀ ಮನೋಧರ್ಮದವರಾಗಿರುತ್ತಾರೆ. ಒಬ್ಬ ವ್ಯಾಪಾರಿಗೆ ಸಹಜವಾಗಿಯೇ ಹಿಂಸೆ, ಗದ್ದಲಗಳು ಹಿಡಿಸುವುದಿಲ್ಲ. “ನಾವು ಹಸುಗಳಂತಿದ್ದರೆ ಅವರೂ ನಮ್ಮನ್ನು ಹಸುಗಳಂತೆ ನಡೆಸಿಕೊಳ್ಳುತ್ತಾರೆ” ಎಂಬ ಲೆಕ್ಕಾಚಾರ ಅಹಿಂಸಾ ಸಿದ್ಧಾಂತದ ಹಿಂದೆ ಕೆಲಸ ಮಾಡುತ್ತಿದೆ. ಇಷ್ಟೇ ಗಾಂಧಿಯ ಅಹಿಂಸಾ ತತ್ವದ ಹಿಂದಿರುವ ತಾತ್ವಿಕ ಮೌಲ್ಯ. ಈ ಮೂರು ಕಾಸಿನ ಸಿದ್ಧಾಂತವನ್ನು ನಂಬಿ ನಾವು ಭಾರಿ ದೊಡ್ಡ ಬೆಲೆಯನ್ನು ತೆತ್ತೆವು. ಬ್ರಿಟಿಷರ ವಿರುದ್ಧದ ಭಾರತೀಯರ ಸಾತ್ವಿಕ ಸಿಟ್ಟನ್ನು ಹಾಗು ಸಹಜ ಕ್ರೌರ್ಯವನ್ನು ಗಾಂಧೀ ವ್ಯವಸ್ಥಿತವಾಗಿ ದಮನ ಮಾಡಿದರು. ಆದರೆ ಸ್ವಾತಂತ್ರ್ಯಾನಂತರ ಗಾಂಧಿಯ ಅಹಿಂಸೆಯೂ ಬ್ರಿಟಿಷರೊಂದಿಗೇ ಭಾರತದಿಂದ ಕಣ್ಮರೆಯಾಯಿತು. ಗಾಂಧಿ ನಲವತ್ತು ವರ್ಷಗಳ ಕಾಲ ಭಾರತೀಯರ ಹಿಂಸಾರಭಸ ಮತಿಯನ್ನು ನಿಗ್ರಹಿಸಿದರೇ ವಿನಃ ಆ ಹಿಂಸಾ ಪ್ರವೃತ್ತಿಯನ್ನು ಪರಿವರ್ತಿಸಿಕೊಳ್ಳುವ ಯಾವ ವಿಧಾನಗಳೂ ಅವರ ಬಳಿ ಇರಲಿಲ್ಲ. ಹಿಂಸಾಚಾರವೆಂಬುದು ಹೊರಗೆ ಸಂಭವಿಸುವ ಘಟನೆಯಲ್ಲ, ಅದು ನಮ್ಮೊಳಗೆ ನೆಲೆಸಿರುತ್ತದೆ. ಮನುಷ್ಯನು ಸಾವಿರಾರು ವರ್ಷಗಳಿಂದ ಸಂಪಾದಿಸಿಕೊಂಡು ಬಂದಿರುವ ಪ್ರವೃತ್ತಿ ಅದು. ಗಾಂಧಿಯಾದರೂ “ಸುಮ್ಮನಿದ್ದುಬಿಡಿ, ಹಿಂಸಾಚಾರದ ತಂಟೆಗೆ ಹೋಗಬೇಡಿ” ಎನ್ನುತ್ತಿದ್ದರು. ಅವರು ನೀಡುತ್ತಿದ್ದ ವಿವರಣೆಯೂ ಹಾಸ್ಯಾಸ್ಪದವಾದುದು “ನೀವು ಹಿಂಸಾಚಾರಕ್ಕಿಳಿದರೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದಿಲ್ಲ. ನೀವು ಅಹಿಂಸಾವಾದಿಗಳಾದರೆ ಅವರಿಗೇ ಮುಖಭಂಗವಾಗಿ ಹೊರಟುಹೋಗುವರು” ಎನ್ನುತ್ತಿದ್ದರು. ಗಾಂಧಿಯ ಮಾತನ್ನೇ ನಿಜವೆಂದು ನಂಬಿ ನಮ್ಮ ಜನರೂ ನಲವತ್ತು ವರ್ಷಗಳ ತನಕ ಕಾದರು. ಬ್ರಿಟಿಷರು ತಮ್ಮ ಎಲ್ಲ ಸೈನ್ಯದೊಡನೆ ತೊಲಗುತ್ತಿದ್ದಂತೆಯೇ ಅದುಮಿಟ್ಟುಕೊಂಡಿದ್ದ ಜ್ವಾಲಾಮುಖಿ ಒಮ್ಮೆಲೆ ಭುಗಿಲೇಳುವಂತೆ ಭಾರತೀಯರಲ್ಲಿ ಹಿಂಸೆ ಆಸ್ಫೋಟಿಸಿತು. ಹಿಂದೂ-ಮುಸಲ್ಮಾನರು ಸ್ವಾತಂತ್ರ್ಯಾನಂತರ ಕಾಡು ಮನುಷ್ಯರಂತೆ ಹತ್ಯಾಕಾಂಡಕ್ಕಿಳಿದರು. ಮುನ್ನೂರು ವರ್ಷಗಳ ಬ್ರಿಟಿಷ್ ಅಳ್ವಿಕೆಯಿಂದ ಬೇಸತ್ತಿದ್ದ ಭಾರತೀಯರ ಮನದಾಳದ ಸಿಟ್ಟು, ಕ್ರೌರ್ಯ, ಅವಮಾನಗಳು ಗಾಂಧಿಯ ಅಹಿಂಸಾ ತತ್ವಕ್ಕೆ ಮಣಿಯದೆ ಬ್ರಿಟಿಷರ ಕಡೆಗೇ ತಿರುಗಿದ್ದರೆ ನಮ್ಮ ದೇಶ ಇಂದು ಹೀಗೆ ಹಿಂದೂ-ಮುಸಲ್ಮಾನರ ರಣಭೂಮಿಯಾಗುತ್ತಿರಲಿಲ್ಲ. ರಾಜಕೀಯ ದಾಳಿ, ಹಿಂಸೆಗಳಿಗೂ ಇದಕ್ಕೂ ಸಂಬಂಧವಿಲ್ಲ. ಈ ನಾಡಿನಲ್ಲಿ ಎಲ್ಲ ಧರ್ಮದ, ಎಲ್ಲ ಪಂಥದ ರಾಜ ಮಹಾರಾಜರುಗಳೂ ಪರಸ್ಪರ ಕಿತ್ತಾಡಿಕೊಂಡೇ ಬಂದಿದ್ದಾರೆ. ಆದರೆ ಸಾವಿರದ ನಾಲ್ಕು ನೂರು ವರ್ಷಗಳಿಂದ ಸಹಬಾಳ್ವೆ ಮಾಡಿದ ಎರಡು ಕೋಮುಗಳು ಗಾಂಧೀಯುಗದಲ್ಲೇ ಏಕೆ ಕಿತ್ತಾಡಿದವು? ಗಾಂಧೀ ಹಿಂದೂ-ಮುಸ್ಲಿಂ ಸೌಹಾರ್ದಕ್ಕಾಗಿ ಶ್ರಮಿಸಿದರು ಎಂದು ಎಲ್ಲೆಡೆ ಪ್ರಚಾರ ನಡೆಯುತ್ತಿದೆ. ಆದರೆ ಹಿಂದೂ-ಮುಸ್ಲಿಂ ನಡುವಣ ದ್ವೇಷಕ್ಕೆ ಗಾಂಧೀಯೇ ನೇರ ಹೊಣೆ ಎಂದು ನಾನು ಹೇಳುತ್ತೇನೆ. ನಾನು ಹೇಳುತ್ತಿರುವುದು ಆಧುನಿಕ ಮನೋವಿಜ್ಞಾನದ ಅತ್ಯಂತ ಪ್ರಾಥಮಿಕ ಪರಿಕಲ್ಪನೆಗಳನ್ನು: ನಿಗ್ರಹಿಸಲಾದ ಸಹಜ ಪ್ರವೃತ್ತಿಗಳು ಕ್ರಮೇಣ ನಿಗ್ರಹಿಸಿದವನ ಮೇಲೆ ಸೇಡು ತೀರಿಸಿಕೊಳ್ಳುತ್ತದೆ. ಮನುಷ್ಯನ ಸಹಜ ಪ್ರವೃತ್ತಿಗಳ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇಲ್ಲದೆ ಗಾಂಧಿ ಭಾರತೀಯರ ಸಹಜವಾದ ಕ್ರೌರ್ಯ, ಸಿಟ್ಟುಗಳ ದಾರಿ ತಪ್ಪಿಸಿದರು. ಭಾರತೀಯರ ಕ್ರೌರ್ಯ ಬ್ರಿಟಿಷರ ವಿರುದ್ಧ ತಿರುಗಿದ್ದಿದ್ದರೆ ಅದು ನಿಜಕ್ಕೂ ಮಾನವೀಯವೂ ಸಾರ್ಥಕವೂ ಆಗುತ್ತಿತ್ತು. ಆಗ ಕೋಮುಗಲಭೆ ಎಂಬ ಹೆಸರೇ ಈ ನಾಡಿನಲ್ಲಿ ಇರುತ್ತಿರಲಿಲ್ಲ. ಮಾತ್ರವಲ್ಲ ಅಂತಹ ಹೋರಾಟ ನಮಗೆ ನಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿ ಇಡೀ ವಿಶ್ವದೆದುರು ನಮ್ಮ ಘನತೆಯನ್ನು ಹೆಚ್ಚಿಸುತ್ತಿತ್ತು. ಹೀಗೆ ಭಿಕ್ಷೆಯ ರೂಪದಲ್ಲಿ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ನಮ್ಮ ಕೋಮುಗಲಭೆಗೆ ಜಿನ್ನಾ ಕಾರಣನೆಂದೋ ಅಥವ ಬ್ರಿಟಿಷರ ಒಡೆದು ಆಳುವ ನೀತಿಯೇ ಮೂಲಕಾರಣ ಎಂದೋ ಹೇಳುವ ಯಾವ ಗಾಂಧೀವಾದಿಯೂ ಪ್ರಾಮಾಣಿಕನಲ್ಲ. ನಾವು ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ಗಳಿಸಲಿಲ್ಲ. ಸ್ವಾತಂತ್ರ್ಯದ ಭಿಕ್ಷೆ ಪಡೆಯಲು ಗಾಂಧಿಯನ್ನು ನಂಬಿಕೊಂಡು ಹತ್ತುಲಕ್ಷ ಜನ ಹಿಂದೂಗಳ ಹಾಗು ಮುಸ್ಲಿಮರ ಪ್ರಾಣದ ಬೆಲೆ ತೆತ್ತೆವು. ಇಷ್ಟೊಂದು ಜನ ಕತ್ತಿ ಹಿಡಿದು ಒಮ್ಮೆಲೆ ದಾಳಿ ಮಾಡಿದ್ದರೆ ಬ್ರಿಟಿಷರು ಎಂದೋ ಓಡಿಹೋಗುತ್ತಿದ್ದರು. ಹಿಂಸಾಚಾರದಲ್ಲಿ ಒಟ್ಟು ಒಂದು ಮಿಲಿಯನ್ ಹಿಂದೂಗಳು ಮತ್ತು ಮುಸ್ಲಿಮರು ಕೊಲೆಯಾದರು. ಹಿಟ್ಲರ್ನ ಆಡಳಿತದಲ್ಲಿ ಜರ್ಮನಿಯಲ್ಲೂ ಅಷ್ಟೇ ಸಂಖ್ಯೆಯ ಪ್ರಜೆಗಳು ಕೊಲೆಯಾಗಿದ್ದರು.
ಸ್ವಾತಂತ್ರ್ಯಾನಂತರದ ಈ ಹತ್ಯಾಕಾಂಡಕ್ಕೆ ಯಾರು ಹೊಣೆ? ನಲವತ್ತು ವರ್ಷಗಳ ಕಾಲ ನಿಗ್ರಹ ಹೇರಿದ ಗಾಂಧಿಯೇ ಈ ಹೊಣೆಯನ್ನು ಹೊರಬೇಕು. ಹಿಟ್ಲರನ ಕೊಲೆಯ ವಿಧಾನವಾದರೂ ಎಷ್ಟೋ ಶಾಂತಿಯುತವಾದುದು. ಕ್ಷಣಾರ್ಧದಲ್ಲೇ ಜನ ಗ್ಯಾಸ್ ಛೇಂಬರುಗಳಲ್ಲಿ ಸುಟ್ಟು ಭಸ್ಮವಾಗುತ್ತಿದ್ದರು. ಫ್ಯಾಕ್ಟರಿಯ ಚಿಮಣಿಗಳು ಹೊಗೆಯ ರೂಪದಲ್ಲಿ ಜನರನ್ನು ನೇರವಾಗಿ ದೇವರ ಬಳಿ ಕಳಿಸುತ್ತಿತ್ತು. ಆದರೆ ಭಾರತದಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಕ್ಕಳು, ಮುದುಕರೆನ್ನದೆ ಲಕ್ಷಾಂತರ ಜನ ಕ್ರೂರವಾಗಿ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಲೆಯಾದರು. ಬಸ್ಸು ರೈಲುಗಳಿಗೆ, ಮನೆ ಮಠಗಳಿಗೆ ಬೆಂಕಿ ಬಿದ್ದಿತು. ದೇಶದೆಲ್ಲೆಡೆ ಕೊಲ್ಲುವ ಸ್ವಾತಂತ್ರ್ಯ ವ್ಯಾಪಿಸಿಕೊಂಡಿತು. ಆದರೆ ಇದೆಲ್ಲ ಯಾವ ಮನೋವಿಜ್ಞಾನಿಯ ಕಣ್ಣಿಗೂ ಕಾಣಿಸುವುದಿಲ್ಲ. ಅದಕ್ಕೇ ನಾನು ಗಾಂಧಿಯನ್ನು ಹಿಟ್ಲರನಿಗೆ ಹೋಲಿಸಿದ್ದು. ಮೇಲ್ನೋಟಕ್ಕೆ ಈ ಹೋಲಿಕೆ ಅಸಂಗತವೆನಿಸಬಹುದು ಆದರೆ ವಾಸ್ತವವಾಗಿ ಇಲ್ಲಿ ಯಾವ ಅಸಂಗತಿಯೂ ಇಲ್ಲ.
ಇನ್ನು ನಾನು ಹಿಟ್ಲರ್ನನ್ನು ಸಾಧು ಸಂತರುಗಳಿಗೆ ಹೋಲಿಸಿದ್ದೂ ನಿಜ. ಆದರೆ ಹಿಟ್ಲರ್ನನ್ನು ಹೊಗಳುವ ಉದ್ದೇಶದಿಂದ ಹಾಗೆ ಹೋಲಿಸಿದ್ದಲ್ಲ. ಜರ್ಮನರು ಅಪಾರ್ಥ ಮಾಡಿಕೊಳ್ಳುವುದರಲ್ಲಿ ಮಹಾ ನಿಸ್ಸೀಮರು. ಅವರು ಎಂದೂ ಯಾವುದನ್ನೂ ಈತನಕ ಸರಿಯಾಗಿ ಅರ್ಥ ಮಾಡಿಕೊಂಡವರಲ್ಲ. ಸಾಧು ಸಂತರುಗಳನ್ನು ಟೀಕೆ ಮಾಡಲು ನಾನು ಹಾಗೆ ಹೋಲಿಕೆ ಮಾಡಿದ್ದೆ. ಹಿಟ್ಲರನೂ ಎಲ್ಲ ಸಾಧು ಸಂತರಂತೆಯೇ ಬಾಳಿ ಬದುಕಿದವನು. ಹಿಟ್ಲರ್ ಸಹ ಸಾಧು ಸಂತರಂತೆಯೇ ಹೊತ್ತಿಗೆ ಮುನ್ನ ಮಲಗುತ್ತಿದ್ದ, ಹೊತ್ತಿಗೆ ಸರಿಯಾಗಿ ಏಳುತ್ತಿದ್ದ. ಜೀವನವಿಡೀ ಶುದ್ಧ ಸಸ್ಯಾಹಾರಿಯಾಗಿದ್ದ. ಭಾರತದಲ್ಲಿ ಸಸ್ಯಾಹಾರ ಸುಲಭ. ಆದರೆ ಜರ್ಮನಿಯಂತಹ ದೇಶದಲ್ಲಿ ಶಾಖಾಹಾರದ ಸೇವನೆ ನಿಜಕ್ಕೂ ಒಂದು ಮಹಾವ್ರತ. ಸಾಧು ಸಂತರು ಗುಹೆಗಳಲ್ಲಿ ಬದುಕುವಂತೆಯೇ ಅವನೂ ಸದಾ ನೆಲಮಾಳಿಗೆಯಲ್ಲೇ ಅಡಗಿಕೊಂಡು ಒಂಟಿಯಾಗಿ ಇರುತ್ತಿದ್ದ. ಜೀವನವಿಡೀ ಬ್ರಹ್ಮಚರ್ಯವನ್ನು ಪಾಲಿಸಿದ್ದ ಅವನು ಸಾಯುವ ಮೂರು ಗಂಟೆಗಳ ಹಿಂದಷ್ಟೇ ಮದುವೆಯಾದ. ಹಿಟ್ಲರ್ ತನ್ನ ಮಂಚದ ಮೇಲೆ ಮಲಗಲು ಯಾವ ಹೆಣ್ಣಿಗೂ ಅವಕಾಶ ನೀಡಲಿಲ್ಲ. ಕೊನೆಯವರೆಗೂ ಸಾಧು ಸಂತರಂತೆಯೇ ಯಾರ ಸಹವಾಸವನ್ನೂ ಮಾಡಲಿಲ್ಲ. ಪ್ರತಿಯೊಬ್ಬರನ್ನೂ ಅನುಮಾನದಿಂದ ನೋಡುತ್ತಿದ್ದ ಅವನಿಗೆ ಸ್ನೇಹಿತರು, ಬಂಧು ಮಿತ್ರರು ಯಾರೂ ಇರಲಿಲ್ಲ. ಹಿಟ್ಲರ್ ಎಂದೂ ಮದ್ಯಪಾನ ಮಾಡಿದವನಲ್ಲ. ಈ ವಿಷಯದಲ್ಲಿ ಅವನು ಎಲ್ಲ ಸಾಧುಸಂತರಿಗಿಂತ ಅದರಲ್ಲೂ ಕ್ರಿಶ್ಚಿಯನ್ ಪಾದ್ರಿಗಳಿಗಿಂತ ಒಂದು ಕೈ ಮೇಲಾಗಿದ್ದಾನೆ. ಏಕೆಂದರೆ ಕ್ರಿಶ್ಚಿಯನ್ ಪಾದ್ರಿಗಳು ವೈನ್ ಸೇವನೆಯನ್ನು ನಿಷೇಧಿಸುವುದಿಲ್ಲ. ಜಗತ್ತಿನ ಅತ್ಯಂತ ಶ್ರೇಷ್ಠ ವೈನ್ ತಯಾರಿಕಾ ಘಟಕಗಳು ಕ್ರಿಶ್ಚಿಯನ್ ಮಠಗಳಲ್ಲೇ ಇವೆ ಎಂದರೆ ನೀವು ನಂಬಲಾರಿರಿ.
ನಾನು ಗಾಂಧಿಯನ್ನು ಟೀಕಿಸುವ ಉದ್ದೇಶದಿಂದ ಈ ಹೋಲಿಕೆ ಮಾಡುವೆನೇ ವಿನಃ ಹಿಟ್ಲರ್ನನ್ನು ಹೊಗಳುವ ಉದ್ದೇಶದಿಂದಲ್ಲ. ನಾವು ಯಾವೆಲ್ಲ ಕಾರಣಗಳಿಗಾಗಿ ಗಾಂಧಿಯನ್ನು ಪೂಜಿಸುವೆವೋ ಆ ಕಾರಣಗಳು ಹಿಟ್ಲರ್ನಲ್ಲೂ ಕಾಣಸಿಗುತ್ತವೆ. ಆದರೂ ಹಿಟ್ಲರ್ ಮನುಷ್ಯ ಇತಿಹಾಸ ಕಂಡರಿಯದ ರಾಕ್ಷಸನಾಗಿ ಪರಿಣಮಿಸಿದ ಏಕೆ? ಕೊನೆಗೆ ಶಿಸ್ತಿನ ಜೀವನ, ಸಸ್ಯಾಹಾರ, ಬ್ರಹ್ಮಚರ್ಯ ಇದಾವುದೂ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಇದರಿಂದ ತಿಳಿಯುತ್ತದೆ. ಶಿಸ್ತು, ಅನುಶಾಸನಗಳಿಂದ ಹಿಟ್ಲರನೂ ಬದಲಾಗಲಿಲ್ಲ, ಗಾಂಧಿಯೂ ಬದಲಾಗಲಿಲ್ಲ. ಅಂತರಂಗದ ಬದಲಾವಣೆಗೂ ಹೇರಿಕೊಂಡ ಅನುಶಾಸನಗಳಿಗೂ ಅರ್ಥಾರ್ಥ ಸಂಬಂಧವಿಲ್ಲ.
ಎರಡು ಸಾವಿರ ವರ್ಷಗಳ ಮನುಷ್ಯ ಇತಿಹಾಸದಲ್ಲಿ ಕ್ರಿಶ್ಚಿಯನ್ನರಷ್ಟು ಹಿಂಸಾಚಾರ ನಡೆಸಿದ ಧರ್ಮ ಬೇರೆ ಮತ್ತೊಂದಿಲ್ಲ. ಅವರು ಎಷ್ಟು ಲಕ್ಷ ಯಹೂದಿಗಳನ್ನು, ಎಷ್ಟು ಲಕ್ಷ ಮುಸ್ಲಿಮರನ್ನು ಕೊಂದಿದ್ದಾರೆ ಎಂಬುದರ ಲೆಕ್ಕವೇ ಸಿಗುವುದಿಲ್ಲ. ಒಂದು ಲಕ್ಷ ಜನ ಯಹೂದಿಗಳನ್ನು ಅತ್ಯಂತ ವೈಜ್ಞಾನಿಕ ವಿಧಾನದಲ್ಲಿ ಕೊಂದ ಹಿಟ್ಲರನಿಗೂ, ಕ್ರಿಶ್ಚಿಯನ್ನರ ಬರ್ಬರ ಹತ್ಯಾಕಾಂಡಕ್ಕೂ ಏನು ವ್ಯತ್ಯಾಸ? ಒಂದಲ್ಲ ಒಂದು ದಿನ ಭುಗಿಲೇಳಲೇ ಬೇಕಾದ ಹಿಂಸಾಚಾರವನ್ನು ಗಾಂಧಿ ನಲವತ್ತು ವರ್ಷಗಳ ಕಾಲ ನಿಗ್ರಹಿಸಿದರು. ಅದು ಒಮ್ಮೆಲೆ ಭುಗಿಲೆದ್ದಾಗ ತಾನೂ ಅದಕ್ಕೆ ಬಲಿಯಾದರು. ಜೀವನವಿಡೀ ಅಹಿಂಸೆಯ ಬೋಧನೆ ಮಾಡಿದ ವ್ಯಕ್ತಿ ತಾನೇ ಕೊಲೆಯಾಗಿ ಹೋಗುವುದೆಂದರೇನು? ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ ಮತ್ತು ಗಾಂಧಿ ಹತ್ಯೆಯಾಗಿ ಹೋದರು. ನನಗೆ ಇಬ್ಬರ ಸಾವಿನಲ್ಲೂ ಯಾವ ವ್ಯತ್ಯಾಸವೂ ಕಾಣಿಸದು. ಇಬ್ಬರೂ ಕೂಡ ಅಸಹಜವಾಗಿ ಸತ್ತರು.
ಹತ್ಯೆಯಾಗುವ ಮುನ್ನ ಗಾಂಧಿ ತಮ್ಮ ಡೈರಿಯಲ್ಲಿ “ಇನ್ನು ಭಗವಂತನ್ನು ನನ್ನನ್ನು ಕರೆಸಿಕೊಳ್ಳಲಿ” ಎಂದು ಹಲವು ಸಲ ಬರೆದುಕೊಂಡಿದ್ದರು. ಸ್ವಾತಂತ್ರ್ಯ ಸಿಕ್ಕ ಮೇಲೆ ಗಾಂಧಿವಾದಿಗಳ ನಿಜವಾದ ಬಣ್ಣ ಬಯಲಾಯಿತು. ಒಮ್ಮೆ ಅಧಿಕಾರ ಸಿಕ್ಕ ಮೇಲೆ ಗಾಂಧಿಯ ಯಾವ ಅನುಯಾಯಿಯೂ ಅವರನ್ನು ಲೆಕ್ಕಕ್ಕಿಡಲಿಲ್ಲ. ಆಗ ಗಾಂಧಿ “ನನಗಿಲ್ಲಿ ಖೋಟಾ ನಾಣ್ಯದ ಬೆಲೆಯೂ ಇಲ್ಲ, ದೇವರು ಇನ್ನಾದರೂ ನನ್ನನ್ನು ಕರೆಸಿಕೊಳ್ಳಲಿ, ಇನ್ನು ನೂರ ಇಪ್ಪತ್ತೈದು ವರ್ಷಗಳ ಕಾಲ ಬದುಕಿರುವ ಆಸೆ ನನ್ನಲ್ಲಿ ಉಳಿದಿಲ್ಲ” ಎಂದು ಒಳಗೇ ಮರುಗಿಕೊಂಡರು. ದೇವರನ್ನು “ಇನ್ನು ನನ್ನನ್ನು ಕರೆಸಿಕೋ” ಎಂದು ಪ್ರಾರ್ಥಿಸುವುದೂ ಆತ್ಮಹತ್ಯಾ ಸಂಕಲ್ಪದ ಇನ್ನೊಂದು ಲಕ್ಷಣವಾಗಿದೆ. ಗಾಂಧಿ ತಾವು ಸ್ವತಃ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ, ಹಾಗೆ ಮಾಡಿಕೊಂಡರೆ ತಾವು ನಂಬಿದ್ದ ಸಿದ್ಧಾಂತಕ್ಕೆ ವಿರೋಧವಾಗಿ ನಡೆದಂತಾಗುತ್ತದೆ. ಆ ಹೊಲಸು ಕೆಲಸವನ್ನು ತನಗಾಗಿ ಇನ್ನಾರಾದರೂ ನೆರವೇರಿಸಲಿ ಎಂದು ಕಾಯುತ್ತಿದ್ದರು. ನಾಥೋರಾಮ್ ಗೋಡ್ಸೆ ಆ ಕೆಲಸವನ್ನು ಮಾಡಿ ಮುಗಿಸಿದ.
ಸಾಯುವಾಗ ಗಾಂಧಿಯ ಬಾಯಲ್ಲಿ ’ಹೇರಾಮ್’ ಎಂಬ ಮಾತುಗಳು ಹೊರಬಂದವಂತೆ. ಕೊನೆಗೂ ಬಿಡುಗಡೆಯಾಯಿತಲ್ಲ ಎಂಬ ಸಮಾಧಾನದಿಂದ ಅವರು ಹಾಗೆ ಉದ್ಗರಿಸಿರಬಹುದು. ಅವರು ಸ್ವಾತಂತ್ರ್ಯ ಸಿಕ್ಕ ಬಳಿಕ ಒಂದೇ ಸಮನೆ ಒಳಗೇ ಹಿಂಸೆ ಅನುಭವಿಸುತ್ತಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಇಲ್ಲಿ ರಾಮರಾಜ್ಯ ಸ್ಥಾಪನೆಯಾಗುತ್ತದೆ ಎಂದು ಕನಸು ಕಾಣುತ್ತಿದ್ದ ಅವರ ಕಣ್ಣೆದುರು ಲಕ್ಷಾಂತರ ಜನ ಹತ್ಯೆಯಾಗಿ ಹೋದರು, ನಿರಾಶ್ರಿತರಾದರು. ಗಾಂಧಿಯ ಉದ್ದೇಶಗಳನ್ನು ನಾನು ಅನುಮಾನಿಸುವುದಿಲ್ಲ ಆದರೆ ಅದನ್ನು ನೆರವೇರಿಸಿಕೊಳ್ಳಲು ಅವರು ನಂಬಿದ್ದ ದಾರಿಗಳು ಸರಿಯಾದುದಾಗಿರಲಿಲ್ಲ. ಗಾಂಧಿಗೆ ಧ್ಯಾನದ ಬಗ್ಗೆ ಕಲ್ಪನೆ ಇರಲಿಲ್ಲ. ಅವರು ಪ್ರತಿದಿನ ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಪ್ರಾರ್ಥನೆಗೂ ಧ್ಯಾನಕ್ಕೂ ಸಂಬಂಧವಿಲ್ಲ. ಪ್ರಾರ್ಥನೆ ಒಂದು ಸುಳ್ಳಿನಿಂದ ಮೊದಲಾಗುತ್ತದೆ. ದೇವರಿದ್ದಾನೋ, ಇಲ್ಲವೋ ಎಂದು ನಮಗೆ ಗೊತ್ತಿರುವುದಿಲ್ಲ, ಒಂದು ವೇಳೆ ಇದ್ದರೂ ನಮ್ಮ ಪ್ರಾರ್ಥನೆಗಳು ಅವನ ಕಿವಿಗೆ ಬೀಳುವುದೋ ಇಲ್ಲವೋ ಎಂದು ತಿಳಿದಿರುವುದಿಲ್ಲ. ತಿಳುವಳಿಕೆಯಿಲ್ಲದ ಸಮೂಹದ ಧರ್ಮವೇ ತನ್ನ ಧರ್ಮ ಎಂದು ಗಾಂಧಿ ನಂಬಿದ್ದರು. ಹಾಗಾಗಿ ಗಾಂಧಿಯ ನಲವತ್ತು ವರ್ಷಗಳ ಸತತವಾದ ಪ್ರಾರ್ಥನೆಯ ಫಲವಾಗಿ ದೇಶದಾದ್ಯಂತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಯಿತು. ಹಿಟ್ಲರ್ ಹಾಗು ಗಾಂಧಿ ಇಬ್ಬರೂ ಒಂದೇ ರೀತಿಯಲ್ಲಿ ಕೊನೆಯಾದರು. ಇಬ್ಬರೂ ತಮ್ಮ ತಮ್ಮ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಿ ಹೋದರು.
ನಾನು ಹಿಟ್ಲರ್ನ ಹುಚ್ಚುತನದ ಅಭಿಮಾನಿ ಎಂದದ್ದೂ ನಿಜ. ಇದರರ್ಥ ಹಿಟ್ಲರ್ ಕೊನೆಯ ಪಕ್ಷ ಪ್ರಾಮಾಣಿಕನಾಗಿದ್ದ, ತಾನೇನು ನಂಬಿದ್ದನೋ, ಏನನ್ನು ಮಾಡುತ್ತಿದ್ದನೋ ಅದನ್ನು ನೇರವಾಗಿ ಹೇಳಿಕೊಳ್ಳುತ್ತಿದ್ದ. ಈ ಅರ್ಥದಲ್ಲಿ ಗಾಂಧಿ ಪ್ರಾಮಾಣಿಕನೂ ಅಲ್ಲ. ನಾನೆಂದೂ ಗಾಂಧಿಯ ಅಭಿಮಾನಿ ಆಗಲಾರೆ. ಏಕೆಂದರೆ ಗಾಂಧಿ ಒಬ್ಬ ವೇಷಧಾರಿ, ಒಬ್ಬ ಕುತಂತ್ರ ರಾಜಕಾರಿಣಿ. ಮುಖವಾಡ ಧರಿಸುವವರನ್ನು ನಾನೆಂದೂ ಪ್ರೀತಿಸಲಾರೆ. ಮುಖವಾಡ ಧರಿಸುವವರು ಬೇರೆಯವರಿಗೆ ಹಾದಿ ತಪ್ಪಿಸುವುದರೊಂದಿಗೆ ತಾವೂ ಆತ್ಮವಂಚನೆ ಮಾಡಿಕೊಳ್ಳುತ್ತಿರುತ್ತಾರೆ. ಇತಿಹಾಸ ಹಿಟ್ಲರ್ನನ್ನು ತೆಗಳಬಹುದು, ಗಾಂಧಿಯನ್ನು ಹೊಗಳಬಹುದು. ಆದರೆ ಹಿಟ್ಲರ್ ಗಾಂಧಿಗಿಂತ ಹೆಚ್ಚು ಪ್ರಾಮಾಣಿಕ ಎಂದು ನಾನು ಹೇಳಬಯಸುತ್ತೇನೆ. ಇದಕ್ಕೆ ಸಾಕಷ್ಟು ಪ್ರಸಂಗಗಳನ್ನು ನಾನು ಉದಾಹರಿಸಬಲ್ಲೆ:
ಗಾಂಧಿ “ನನ್ನ ಅನುಯಾಯಿಗಳನ್ನೆಲ್ಲ ನಾನು ಸಮಾನವಾಗಿ ಪ್ರೀತಿಸುತ್ತೇನೆ” ಎಂದು ಹೇಳಿಕೊಳ್ಳುತ್ತಿದ್ದರು. ಇಡೀ ಕಾಂಗ್ರೆಸ್ ಗಾಂಧಿಯ ಹಿಡಿತದಲ್ಲಿದ್ದುದರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡೆಸುತ್ತಿದ್ದ ಚುನಾವಣೆಗಳಲ್ಲಿ ಪ್ರತಿವರ್ಷವೂ ಗಾಂಧಿ ಬಯಸಿದವರೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಆದರೆ ಸುಭಾಷ್ ಚಂದ್ರ ಬೋಸರು ಮಾತ್ರ ಕಾಂಗ್ರೆಸ್ಸಿನ ಸದಸ್ಯರಾಗಿದ್ದರೂ ಗಾಂಧಿಯ ಅಹಿಂಸಾ ಹೋರಾಟವನ್ನು ನಂಬುತ್ತಿರಲಿಲ್ಲ. ಒಮ್ಮೆ ಅವರು ಅಧ್ಯಕ್ಷ ಚುನಾವಣೆಗೆ ನಿಂತರು. ಆಗಿನ್ನೂ ನಾನು ಒಂಬತ್ತು ವರ್ಷದ ಹುಡುಗ. ೧೯೩೯ರಲ್ಲಿ ನಡೆದ ಕಾಂಗ್ರೇಸ್ ಅಧಿವೇಶನಕ್ಕೆ ಒಮ್ಮೆ ಮಾತ್ರ ನಾನೂ ಹೋಗಿದ್ದೆ. ಏಕೆಂದರೆ ನನ್ನ ಊರಾದ ಜಾಬಲ್ಪುರದ ಸಮೀಪದ ಒಂದು ಕ್ಷೇತ್ರದಲ್ಲಿ ಅಖಿಲ ಭಾರತ ಕಾಂಗ್ರೇಸ್ನ ಚುನಾವಣೆ ನಡೆಯಿತು. ಆಗ ಗಾಂಧಿಯ ಅಹಿಂಸಾತ್ಮಕ ಹೋರಾಟ ತಂತ್ರವನ್ನು ಒಪ್ಪದಿದ್ದ ಸುಭಾಷ್ ಚಂದ್ರ ಬೋಸ್ ಅಲ್ಲಿ ಚುನಾವಣೆಗೆ ನಿಂತಿದ್ದರು. ತನ್ನ ಆಶೀರ್ವಾದ ಅನುಮತಿಗಳಿಲ್ಲದೆ ಈತ ಹೇಗೆ ಚುನಾವಣೆಗೆ ನಿಂತ ಎಂದು ಗಾಂಧಿ ಸಿಡಿಮಿಡಿಗೊಂಡಿದ್ದರಂತೆ. ಅವರ ವಿರುದ್ಧ ನೆಹರೂರನ್ನು ನಿಲ್ಲಿಸಿ ಎಂದು ಅವರ ಆಪ್ತರು ಸಲಹೆ ನೀಡಿದಾಗ ಗಾಂಧಿ ಒಪ್ಪಲಿಲ್ಲ. ನನ್ನ ದೃಷ್ಟಿಯಲ್ಲಿ ಗಾಂಧಿ ಇಟಲಿಯ ರಾಜನೀತಿ ನಿಪುಣನಾದ ಮೈಕಿಯವಲ್ಲಿಗಿಂತ ಮಹಾ ಚಾಣಾಕ್ಷ. ನೆಹರೂ ಗೆದ್ದರೆ ಗಾಂಧಿಯ ಬೆಂಬಲದಿಂದ ಗೆದ್ದ ಎಂದಾಗುತ್ತದೆ. ಒಂದು ವೇಳೆ ನೆಹರೂರಷ್ಟೇ ಪ್ರಭಾವಿಯಾದ ಸುಭಾಷ್ ಚಂದ್ರ ಬೋಸ್ ಗೆದ್ದರೆ ಅದು ನಿಜಕ್ಕೂ ಹೀನಾಯವಾಗಿ ಸೋತಂತಾಗುತ್ತದೆ. ಅಲ್ಲದೆ ನೆಹರೂರ ರಾಜಕೀಯ ಭವಿಷ್ಯವೇ ಮಣ್ಣುಪಾಲಾಗುತ್ತದೆ ಎಂದು ಯೋಚಿಸಿದ ಗಾಂಧಿ ಯಾರೂ ಅರಿಯದ ’ಪಟ್ಟಾಭಿ ಸೀತಾರಾಮಯ್ಯ’ ಎಂಬ ಒಬ್ಬ ಅಭ್ಯರ್ಥಿಯನ್ನು ಸುಭಾಷ್ ಚಂದ್ರ ಬೋಸರ ವಿರುದ್ಧ ಕಣಕ್ಕಿಳಿಸಿದರು. ಅಲ್ಲದೆ “ಪಟ್ಟಾಭಿ ಸೀತಾರಾಮಯ್ಯ ಸೋತರೆ ನಾನು ಸೋತಂತೆ” ಎಂದು ಪ್ರಚಾರ ಮಾಡಲಾರಂಭಿಸಿದರು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಿಜಕ್ಕೂ ಬೆದರಿಕೆಯ ತಂತ್ರವಾಗಿದೆ. ಆದರೆ ಆ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸರು ಬಹುಮತದಿಂದ ಗೆದ್ದು ಕಾಂಗ್ರೇಸ್ನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಲೂ ಹೋಗಲಿಲ್ಲ. ಆ ವರ್ಷ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೇಸ್ನ ವಾರ್ಷಿಕ ಅಧಿವೇಶನಕ್ಕೂ ಹಾಜರಾಗದೇ ಕಾಯಿಲೆಯ ನೆಪವನ್ನೊಡ್ಡಿ ರಾಜ್ಕೋಟ್ನಲ್ಲೇ ಉಳಿದುಕೊಂಡರು. ಗಾಂಧಿಯ ಈ ವರ್ತನೆಯಿಂದ ಬೇಸರಗೊಂಡ ಸುಭಾಷ್ ಚಂದ್ರ ಬೋಸರು ತಮ್ಮ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದರು. ಗಾಂಧಿಯ ಜೀವನ ಚರಿತ್ರೆಗಳನ್ನು ಇತಿಹಾಸಕಾರರು ಬರೆಯುವುದನ್ನು ನಿಲ್ಲಿಸಿ ಮನೋವಿಜ್ಞಾನಿಗಳು, ಮನೋ ವಿಶ್ಲೇಷಕರು ಗಾಂಧಿಯನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಬೇಕು ಎಂದು ನನಗನ್ನಿಸುತ್ತದೆ. ಆಗ ಗಾಂಧಿಯ ಕುತಂತ್ರ, ಗಾಂಧಿಯ ಚಾಣಾಕ್ಷತನ, ಗಾಂಧಿಯ ಸುಳ್ಳುಗಳು ಎಲ್ಲವೂ ಬಯಲಾಗುತ್ತವೆ.
ಲೋಕದಲ್ಲಿ ಹಿಟ್ಲರ್ನಂಥವರು ಹುಟ್ಟಿ ಬರಬೇಕು ಎಂದು ನಾನೆಂದೂ ಹೇಳುವುದಿಲ್ಲ. ಪ್ರತಿಯೊಂದನ್ನೂ ಕದ್ದು ಮುಚ್ಚಿ ನಡೆಸುವವರನ್ನು ಪೂಜಿಸುವ ಹಾಗು ಎಲ್ಲವನ್ನೂ ಬಹಿರಂಗವಾಗಿಯೇ ಮಾಡುವವರನ್ನು ನಿಂದಿಸುವ ವಿಚಿತ್ರ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ಈ ಇಬ್ಬರೂ ಸಮಾನವಾಗಿ ನಿಂದಾರ್ಹರು. ನಾನು ಹಿಟ್ಲರನ ಅಭಿಮಾನಿ ಎಂದರೆ ನಾನು ಪ್ರಾಮಾಣಿಕತೆಯನ್ನು, ನೇರ ನಡೆನುಡಿಯನ್ನು, ಧೈರ್ಯವನ್ನು, ಮೆಚ್ಚುತ್ತೇನೆ ಎಂದರ್ಥ. ಈ ಎಲ್ಲ ಗುಣಗಳೂ ಆತನಲ್ಲಿದ್ದವು. ಆತ ಆ ಗುಣಗಳನ್ನು ದುರ್ಬಳಕೆ ಮಾಡಿಕೊಂಡ ಎಂಬುದು ಬೇರೆಯ ಮಾತು. ಆ ಗುಣಗಳನ್ನು ಅವನು ಬಳಸಿಕೊಂಡ ವಿಧಾನವನ್ನು ನಾನು ನಿಂದಿಸುತ್ತೇನೆ ಆದರೆ ಗುಣಕ್ಕೆ ಮತ್ಸರ ಪಡಲಾರೆ.
ಹಿಟ್ಲರ್ ಮನುಷ್ಯ ಜಾತಿಗೆ ತುಂಬ ಅನ್ಯಾಯ ಮಾಡಿದ್ದಾನೆ ನಿಜ; ಅದು ಅವನ ವ್ಯಕ್ತಿತ್ವದ ಒಂದು ಮುಖ. ಆದರೆ ಅವನೆಸಗಿದ ಅನರ್ಥಗಳಿಗೆಲ್ಲ ಅವನೇ ಸಂಪೂರ್ಣ ಹೊಣೆಗಾರ ಎನ್ನಲಾರೆ. ನಾನು ಅವನ ಬದುಕನ್ನು ತುಂಬ ಆಳವಾಗಿಯೇ ಅಧ್ಯಯನ ಮಾಡಿದ್ದೇನೆ. ಅವನಿಗೆ ಒಬ್ಬ ಕಲಾವಿದನಾಗಬೇಕೆಂಬ ಬಯಕೆ ಇತ್ತಂತೆ. ಆದರೆ ಜರ್ಮನಿಯ ಯಾವ ಕಲಾಶಾಲೆಯೂ ಅವನಿಗೆ ಪ್ರವೇಶ ನೀಡಲಿಲ್ಲ. ಪ್ರತಿ ಸಲ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಿದ್ದ, ಅವನೇನೂ ಅಂಥ ಪ್ರತಿಭಾವಂತನೂ ಅಲ್ಲ. ಆದರೆ ಕಲಾವಿದನಾಗಬೇಕು ಎಂಬ ಹಂಬಲ ಅವನಿಗಿತ್ತು. ಬಳಿಕ ವಾಸ್ತುಶಿಲ್ಪಿಯಾಗಬೇಕು ಎಂದು ಕೊಂಡ. ಅದೂ ಅವನಿಂದಾಗಲಿಲ್ಲ. ಕೊನೆಗೆ ಅವನು ಪ್ರೀತಿಸಿದ ಹೆಣ್ಣೂ ಅವನಿಗೆ ಒಲಿಯಲಿಲ್ಲ. ನಿರುದ್ಯೋಗಿ ಎಂಬ ಕಾರಣಕ್ಕೆ ತಿರಸ್ಕರಿಸಿದಳು. ನೀವೆಲ್ಲ ಅವನ ಚಿತ್ರ ನೋಡಿರಬಹುದು. ಆ ಮುಖವನ್ನು ಯಾರು ತಾನೇ ಮೆಚ್ಚಬಲ್ಲರು? ಆ ಸಣ್ಣ ಮೀಸೆಯಲ್ಲಿ ಅವನು ಚಾರ್ಲಿ ಚಾಪ್ಲಿನ್ಗಿಂತ ಹಾಸ್ಯಾಸ್ಪದನಾಗಿ ಕಾಣಿಸುತ್ತಾನೆ. ಹಾಗಾಗಿ ಒಂದು ಹೆಣ್ಣು ಅವನನ್ನು ನಿರಾಕರಿಸಿದಳೆಂದು ನಾವು ಅವಳನ್ನು ನಿಂದಿಸಬಾರದು. ಆದರೆ ಸಮಾಜದಿಂದ ಅವನು ಹಂತ ಹಂತವಾಗಿ ಪರಿತ್ಯಕ್ತನಾದ. ಸಮಾಜ ಅವನಿಗೆ ಬೇಕಾದ ಪ್ರೀತಿ, ಪೋಷಣೆಗಳನ್ನು ನೀಡಲಿಲ್ಲ. ಅವನ ತಂದೆ ಮಹಾನ್ ಶಿಸ್ತಿನ ಮನುಷ್ಯ, ಅವನನ್ನು ಸದಾ ನಿಂದನೆ ಮಾಡುತ್ತಿದ್ದ. ಅಕ್ಕ ಪಕ್ಕದವರನ್ನು ಕರೆದು ಅವರೆದುರು ಅವನ ತೇಜೋವಧೆ ಮಾಡುತ್ತಿದ್ದ. ಇದೆಲ್ಲದರ ಫಲವಾಗಿ ಅವನೊಳಗೆ ಕೀಳರಿಮೆ ಹುಟ್ಟಿಕೊಂಡಿತು. ಇದೆಲ್ಲ ಕಾರಣದಿಂದ ಅವನು ಅಡಾಲ್ಫ್ ಹಿಟ್ಲರ್ ಆದ. ಸೇನೆಗೆ ಸೇರಿದ. ಇಂಥವರಿಗೆ ಸೇನೆಯಲ್ಲಿ ಮಾತ್ರ ಅವಕಾಶ ಇರುತ್ತದೆ. ಏಕೆಂದರೆ ಸೈನ್ಯದಲ್ಲಿ ವಿವೇಕ, ಮುಖಲಕ್ಷಣಗಳು ಮುಖ್ಯವಲ್ಲ, ಸೈನ್ಯಕ್ಕೆ ಸಿನೆಮಾ ತಾರೆಯರು ಬೇಕಿಲ್ಲ; ಅದು ರಾಕ್ಷಸರನ್ನು ಬಯಸುತ್ತದೆ. ಆವರೆಗೆ ಸಿಗದ ಮನ್ನಣೆ ಅವನಿಗೆ ಸೈನ್ಯದಲ್ಲಿ ಸಿಕ್ಕಿತು. ಕೊಲೆಗಳನ್ನು ಮಾಡುವುದರಿಂದ ಮಾತ್ರ ತನ್ನ ಘನತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅವನು ಭಾವಿಸಿದ. ಕ್ರಮೇಣ ಅವನು ರಾಜಕೀಯ ಪ್ರವೇಶ ಮಾಡಿದ. ಅವನ ರಾಜಕೀಯ ಪಕ್ಷ ನ್ಯಾಷನಲ್ ಸೋಶಿಯಲಿಸ್ಟ್ ಪಾರ್ಟಿ ಹನ್ನೊಂದು ಜನ ಸದಸ್ಯರಿಂದ ಪ್ರಾರಂಭವಾಯಿತು. ಮೊದಲ ಮಹಾಯುದ್ಧದಲ್ಲಿ ಜರ್ಮನಿ ಸೋತದ್ದರಿಂದ ತುಂಬ ಜನ ಸೈನಿಕರು ನಿರುದ್ಯೋಗಿಗಳಾಗಿದ್ದರು. ಹಿಟ್ಲರ್ ಸಮೇತ ಆ ಹನ್ನೊಂದು ಜನ ಸೈನಿಕರೂ ನಿರುದ್ಯೋಗಿ ಸೈನಿಕರೇ ಆಗಿದ್ದರು. ಈ ಹತ್ತೊಂಬತ್ತು ಜನ ಸೇರಿ ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಲ್ಲದೆ ಹತ್ತೇ ವರ್ಷಗಳಲ್ಲಿ ಆ ಪಕ್ಷ ಅಧಿಕಾರ ವಹಿಸಿಕೊಳ್ಳುವಂತೆ ಮಾಡಿದುದು ನಿಜಕ್ಕೂ ಒಂದು ಪವಾಡವಾಗಿದೆ.
ಇವನಿಗೆ ಯಾವುದಾದರೂ ಒಂದು ಕಲಾಶಾಲೆ ಪ್ರವೇಶ ನೀಡಿದ್ದರೆ, ಇವನು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ. ಅಥವ ಯಾವುದಾದರೂ ಹೆಣ್ಣಿನ ಪ್ರೀತಿಯ ಸುಳಿಗೆ ಸಿಕ್ಕಿದ್ದರೆ ಎರಡನೆಯ ಮಹಾಯುದ್ಧವೇ ಸಂಭವಿಸುತ್ತಿರಲಿಲ್ಲ. ಇವನ ಬದುಕು ’ಯಾರನ್ನೂ ಹಗುರವಾಗಿ ಕಾಣಬಾರದು’ ಎಂಬ ನೀತಿಪಾಠವನ್ನು ನಮಗೆ ಕಲಿಸುತ್ತದೆ. ಇನ್ನೊಬ್ಬರಲ್ಲಿ ಕೀಳರಿಮೆ ಹುಟ್ಟಿಸುವುದನ್ನು ನಿಲ್ಲಿಸಿದಾಗ ಮಾತ್ರ ಲೋಕದಲ್ಲಿ ಹಿಟ್ಲರ್ನಂಥವರು ಹುಟ್ಟದಂತೆ ತಡೆಯಲು ಸಾಧ್ಯವಾಗುವುದು. ಆದರೆ ನಮ್ಮ ಇಂದಿನ ಶಿಕ್ಷಣ ಪದ್ಧತಿ ಪ್ರತಿಯೊಂದು ಮಗುವಿನಲ್ಲೂ ಕೀಳರಿಮೆ ಹುಟ್ಟಿಸುವಲ್ಲಿ ಪ್ರವೃತ್ತವಾಗಿದೆ. ಪ್ರತಿಯೊಬ್ಬ ತಂದೆ ತಾಯಿಯೂ ಹಿಟ್ಲರ್ನ ತಂದೆ ತಾಯಿಯಂತೆಯೇ ವರ್ತಿಸುತ್ತಿದ್ದಾರೆ. ಎಲ್ಲ ಪುರೋಹಿತಶಾಯಿಯೂ ಮನುಷ್ಯರಲ್ಲಿ ಕೀಳರಿಮೆಯನ್ನು ಉಂಟು ಮಾಡುವಲ್ಲಿ ನಿರತವಾಗಿವೆ. ಈ ಕೀಳರಿಮೆ ಎಲ್ಲ ರಾಜಕೀಯ ಚಟುವಟಿಕೆಗಳಿಗೆ, ಮಹತ್ವಾಕಾಂಕ್ಷೆಗಳಿಗೆ, ಹಿಂಸೆ ಕೊಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕೀಳರಿಮೆಯನ್ನು ಇಲ್ಲವಾಗಿಸದೇ ವಿಶ್ವಶಾಂತಿಯನ್ನು ತರಲಾಗದು. ಇಂದು ಜಗತ್ತಿನಲ್ಲಿ ಯಾವ ಗಳಿಗೆಯಲ್ಲಾದರೂ ಮೂರನೆಯ ಮಹಾಯುದ್ಧ ಸಂಭವಿಸುವ ಅಪಾಯವಿದೆ. ಅಮೆರಿಕಾ ಹಾಗು ರಷ್ಯಾಗಳು ಮಾತ್ರ ಅಣುಶಕ್ತಿಯನ್ನು ಹೊಂದಿರುವುದಾದರೆ ಚಿಂತೆಯಿಲ್ಲ, ಏಕೆಂದರೆ ಆಗ ಒಂದು ಸಮತೋಲನ ಏರ್ಪಡುತ್ತದೆ. ’ಒಂದು ವೇಳೆ ಬಾಂಬ್ ದಾಳಿ ನಡೆದರೆ ಇಬ್ಬರಲ್ಲಿ ಯಾರೊಬ್ಬರೂ ಉಳಿಯಲಾರೆವು’ ಎಂಬ ಭಯ ಇಬ್ಬರಿಗೂ ಇರುತ್ತದೆ. ಆದರೆ ಇಂದು ಪ್ರತಿಯೊಂದು ಚಿಲ್ಲರೆ ದೇಶವೂ ಅಣ್ವಸ್ತ್ರಗಳನ್ನು ಸಂಗ್ರಹಿಸುವುದರಲ್ಲಿ ತೊಡಗಿದೆ. ಇಂದು ಮಧ್ಯಪೂರ್ವದ ತೈಲರಾಷ್ಟ್ರಗಳು ತಮ್ಮ ಬಳಿ ಹಣವಿದೆ ಎಂದು ಅಣ್ವಸ್ತ್ರಗಳನ್ನು ಖರೀದಿಸತೊಡಗಿವೆ. ಇವರನ್ನು ತಡೆಯುವವರಾರು? ಇಂದು ಭಾರತದಂತಹ ಬಡದೇಶಗಳೂ ಅಣುಶಕ್ತಿಯ ಸಂಗ್ರಹಕ್ಕೆ ಯೋಚಿಸುತ್ತಿವೆ. ತಿನ್ನಲು ಅನ್ನವಿಲ್ಲದಿದ್ದರೂ ಇಲ್ಲಿ ಬೆಳೆದ ಗೋಧಿಯನ್ನು ರಫ್ತು ಮಾಡಿ ಅಣುಶಕ್ತಿಯನ್ನು ಕೊಳ್ಳಲಾರಂಭಿಸಿದ್ದೇವೆ. ಇಂದು ಕೀಳರಿಮೆ ಇಲ್ಲದ, ಮಹತ್ವಾಕಾಂಕ್ಷೆಯಿಲ್ಲದ ಹೊಸ ಮನುಷ್ಯಕುಲ ಜನ್ಮ ತಳೆಯಬೇಕಾಗಿದೆ. ಧ್ಯಾನ ಪದ್ಧತಿಯಿಂದ ಮಾತ್ರ ಅದು ನೆರವೇರಬಲ್ಲದು.