ಪ್ರಸವ

ಪ್ರಸವ

ಪ್ರಸವ ವೇದನೆ ಶುರುವಾಗುತ್ತಿದ್ದ ಹಾಗೆ ರಾಘವ್ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದ, ಜಾಸ್ತಿ ತಡ ಮಾಡದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಎಲ್ಲ ನೋವಿಗೆ ತಡೆ ಎನ್ನುವ ಅವನ ಸಾಂತ್ವನದ ಮಾತುಗಳು ನನ್ನ ಕಿವಿಯತ್ತ ತಲುಪುತ್ತಲೇ ಇರಲಿಲ್ಲ. ನಾನು ಕೂಡ ಮೊದ ಮೊದಲು ಎಷ್ಟು ಧೈರ್ಯ ತಂದುಕೊಂಡಿದ್ದೆ, ನಾನೇ ಏನೂ ಮೊದಲಲ್ಲ... ಈ ಪ್ರಪಂಚದಲ್ಲಿ ಮಗುವನ್ನು ಹೆರುವವಳು. ಎಲ್ಲರು ಅನುಭವಿಸುವ ನೋವು ನನಗೊಬ್ಬಳಿಗೆ ಮಹಾ ಎಷ್ಟು ಕಷ್ಟವಾಗಬಹುದೆಂದು. ಮೊದಲ ನಾಲ್ಕು ತಿಂಗಳಲ್ಲಿಯೇ ಹೈರಾಣಾಗಿ ಹೋಗಿದ್ದೆ...ಏನನ್ನೂ ಸರಿಯಾಗಿ ತಿನ್ನುವ ಹಾಗಿಲ್ಲ..ದಿನದ ಅರ್ಧ ಸಮಯ ತಿಂದದ್ದು ಹೊರ ಹಾಕುವುದರಲ್ಲೇ ಹೋಗುತ್ತಿತ್ತು. ಏನನ್ನೂ ತಿನ್ನಲ್ಲು ಮನಸ್ಸಾಗುತ್ತಿರಲಿಲ್ಲ..ಕೆಲವೊಮ್ಮೆ ವಾಸನೆ ನೋಡಿಯೇ ವಾಂತಿಯಾಗುತ್ತಿತ್ತು..ಅದರ ಮೇಲೆ ರಾಘವನ ಕಿರಿಕಿರಿ...ನಿನ್ನ ಹೊಟ್ಟೆಯಲ್ಲಿ ಮಗು ಬೇರೆ ಇದೆ.. ಸರಿಯಾಗಿ ತಿನ್ನು ತಿನ್ನು ಎಂದು..ಮಗುವಿರುದು ನನಗೆ ಮರೆತೇ ಹೋಗಿರುವಂತೆ..ಅದರ ಮೇಲೆ ಕಿತ್ತು ತಿನ್ನುವ ತಲೆ ನೋವು..ಸುಸ್ತು..ಮೊದಲ ವಾರ ಹೇಗೋ ಕಷ್ಟ ಪಟ್ಟು ತಡೆದುಕೊಂಡಿದ್ದೆ...ಆದರದು ಪ್ರತಿದಿನದ ಗೋಳಾದಾಗ, ಯಾಕಪ್ಪಾ ನನಗೀ ಕಷ್ಟ ಅನ್ನಿಸತೊಡಗಿತ್ತು...

 

ಇನ್ನು ಕೆಲವೇ ಸಮಯದಲ್ಲಿ ನಾನು ಅಮ್ಮನಾಗಲಿದ್ದೇನೆ..ಎಣಿಸಿದಾಗ ನೋವಿನಲ್ಲೂ ಏನೋ ಒಂತರ ನಲಿವು..ಬೇರೆಯವರಿಗೆ ಬಿಡಿಸಿ ಹೇಳಲಾಗದ ಭಾವನೆ..ಮೊದಲ ತಾಯ್ತನದಲ್ಲಿ ಮಾತ್ರಾ ಇಂತಹ ವಿಶೇಷ ಅನುಭೂತಿ ಸಾಧ್ಯವಂತೆ.. ಹಾಗಿದ್ದರೆ..ಅವಳೇಕೆ ನನಗಾಗಿ ನಾಲ್ಕನೇ ಬಾರಿ ಬಸುರಾದಳು..ಮೊದಲ ಮೂರು ಮಕ್ಕಳೂ ಗಂಡಾದಾಗ ಅಪ್ಪ ಸಹ ಮಗಳ ಆಶೆಯನ್ನು ಬಿಟ್ಟು ಬಿಟ್ಟಿದ್ದರನ್ತಲ್ಲ...ಮನೆಯಲ್ಲಿ ಉಳಿದ ಹಿರಿಯರಿಗಂತೂ ಹೆಣ್ಣು ಮಗು ಬೇಕಿರಲಿಲ್ಲ...ಅವರಿಗದು ಹೆಚ್ಚಿನ ಖರ್ಚು ಮಾತ್ರ...ಅಮ್ಮ ಮಾತ್ರ ಯಾರ ಮಾತು ಕೇಳದೆ, ಅಪ್ಪನನ್ನು ಕಾಡಿ ಬೇಡಿ ಒಪ್ಪಿಸಿ ನಾಲ್ಕನೇ ಬಾರಿ ಗರ್ಭ ದರಿಸಿದ್ದಳಂತೆ..ಅವಳು ಯಾವತ್ತೂ ಹೇಳುತ್ತಿದ್ದಳಲ್ಲ, ನನಗಾಗಿ ಹಾಕದ ಹರಿಕೆಯಿಲ್ಲ, ಹೋಗದೇ ಇದ್ದ ದೇವಸ್ಥಾನನವಿಲ್ಲವೆಂಬುದಾಗಿ..

 

ಮೊದಲ ನಾಲ್ಕು ತಿಂಗಳ ನಂತರ ಆಯಾಸ ಹಾಗೂ ತಲೆನೋವು ಸ್ವಲ್ಪ ಕಡಿಮೆಯಾಗುತ್ತ ಬಂದಿತ್ತು, ಆದರೂ ಅದು ಆರಾಮದ ಸಮಯವಾಗಿರಲಿಲ್ಲ. ಸರಿಯಾಗಿ ನಿದ್ದೆ ಬರುವುದೇ ಅಪರೂಪವಾಗಿತ್ತು..ಆದರೂ ಇಂದಿನ ನೋವು ಕಳೆದ ಒಂಭತ್ತು ತಿಂಗಳ ಕಷ್ಟಗಳನ್ನು ಕೂಡಿಸಿದರೂ ಕಡಿಮೆಯೆಂದೇ ಹೇಳಬೇಕು..ವಿಪರೀತವಾದ ನೋವು..ಈ ತರ ಕೂಡ ನೋವು ಇರಬಹುದೆಂಬ ಕಲ್ಪನೆ ಕೂಡಾ ನನಗಿರಲಿಲ್ಲ. ನಾನು ಪಡುತ್ತಿರುವ ಕಷ್ಟ ನೋಡಲಾರದೆ ರಾಘವನೂ ಒಳಗೊಳಗೇ ಒದ್ದಾಡುತ್ತಿದ್ದ.. ಬಹುಶ ಎಪಿಡ್ಯುರಲ್ ತೆಗೆದು ಕೊಂಡಿದ್ದರೆ ನೋವು ಕಡಿಮೆಯಾಗುತ್ತಿತ್ತು..ಆದರೆ ಅದರ ಬಗ್ಗೆ ನಾವು ಮೊದಲೇ  ನಿರ್ಧರಿಸಿದ್ದಾಗಿತ್ತು..ಅದರಿಂದ ಮುಂದೆ ಬೆನ್ನು ನೋವಿನ ತೊಂದರೆ ಬರುವುದಾಗಿ ಎಲ್ಲೋ ಓದಿದ್ದೆ..ಹಾಗೆ ಏನೋ ಹೇಳಿ ರಾಘವನನ್ನೂ ಒಪ್ಪಿಸಿದ್ದೆ.. ಕಾರಣ ಅದಲ್ಲ ಎಂಬುದು ನನಗೆ ಮಾತ್ರ ತಿಳಿದ ವಿಷಯ..ಬೆನ್ನು ನೋವಿನ ಪಾರ್ಶ್ವ ಪರಿಣಾಮಕಿಂತ, ನನಗೆ ಆ ನೋವನ್ನು ಅನುಭವಿಸಬೇಕಿತ್ತು..ಅಮ್ಮನ ಹಾಗೆ..ಅಮ್ಮನ ಮಾತುಗಳನ್ನು ಮರೆಯುವುದು ನನಗೆ ಸಾಧ್ಯವಿರಲಿಲ್ಲ..

 

'ನೀನು ಹುಟ್ಟುವಾಗ ಈಗಿನ ಹಾಗೆ ಒಳ್ಳೆ ಆಸ್ಪತ್ರೆಗಳು ಇರಲಿಲ್ಲ..ಆ ಒಂಭತ್ತು ತಿಂಗಳು ನಿನ್ನನ್ನು ಹೊಟ್ಟೆಯಲ್ಲಿಟ್ಟು ನಾ ಪಟ್ಟ  ಕಷ್ಟ ನನಗೊಬ್ಬಳಿಗೆ ಗೊತ್ತು, ದೇವರನ್ನು ಬಿಟ್ಟರೆ..ನಿನಗೆಲ್ಲಿ ಅರ್ಥವಾಗುತ್ತದೆ ಅವೆಲ್ಲ..ನೀ ಹುಟ್ಟುವ ದಿನ ಒಂಭತ್ತು ಘಂಟೆ ಕಾಲ ಹೆರಿಗೆ ನೋವಿನಲ್ಲಿ ನರಳಿದವಳು ನಾನು..ನಿನ್ನಜ್ಜಿ ಹೇಳಿದ್ದು ಸುಳ್ಳಲ್ಲ..ಹೆಣ್ಣು ಮಕ್ಕಳು ಹುಟ್ಟುವಾಗ ಗಂಡಿಗಿಂತ ಎರಡರಷ್ಟು ಕಷ್ಟ ಕೊಟ್ಟರೆ, ಮುಂದೆ ಬೆಳೆದ ಮೇಲೆ ನಾಲ್ಕರಷ್ಟು ಕೊಡುತ್ತಾರಂಥ..ಅವರ ಮಾತು ಕೇಳಿ ನಾನು ಅಂದೇ ನನ್ನ ಹಠ ಬಿಡಬೇಕಿತ್ತು..ನನ್ನ ಕರ್ಮ..ಒಂದು ಹೆಣ್ಣು, ಒಂದು ಹೆಣ್ಣು ಅನ್ನೋ ಆಸೆಯಲ್ಲಿ ಯಾರ ಮಾತಿಗೂ ಸೊಪ್ಪು ಹಾಕಲಿಲ್ಲ..ಇದು ತನಕ ನೀನು ಹೇಳಿದ್ದಕ್ಕೆಲ್ಲ ಪ್ರಶ್ನೆ ಮಾಡದೆ ತಲೆ ಅಲ್ಲಾಡಿಸುತ್ತ ಬಂದೆ, ಈಗ ಅನುಭವಿಸ ಬೇಕಾಗಿದೆ'...ಕೇಳಿ ಕೇಳಿ ನನಗೂ ಸಿಟ್ಟು ನೆತ್ತಿಗೇರಿ ಬಂದಿತ್ತು...ಸಿಟ್ಟಿನಿಂದ ಗದರಿಸಿದ್ದೆ..'ಒಂಬತ್ತು ತಿಂಗಳು ಹೆತ್ತ ಕಥೆಯನ್ನು ಕಳೆದ ಇಪ್ಪತ್ತನಾಲ್ಕು ವರ್ಷದಿಂದಲೂ ಹೇಳ್ತಾನೆ ಇದ್ದೀಯ..ನೀನೊಬ್ಬಳೆ ಅಲ್ಲ, ಈ ಪ್ರಪಂಚದಲ್ಲಿ ಹೆತ್ತವಳಿರೋದು..ಯಾರೂ ಪಡದ ಕಷ್ಟವೇನೂ ನೀನು ಪಟ್ಟಿಲ್ಲ..ಮುಂದೊಮ್ಮೆ ನಾನು ಕೂಡ ಮಗುವಿನ ತಾಯಿಯಾಗುವವಳು..ಮತ್ತೆ ಮತ್ತೆ ಅದನ್ನೇ ದೊಡ್ಡ ಕಷ್ಟ ಅಂತ ಹೇಳಬೇಡ..ನಿನ್ನ ರಾಗ ಕೇಳಿ ಕೇಳಿ ನನಗೂ ಸಾಕಾಗಿದೆ..' . ಅಮ್ಮ ಮುಂದೆ ಮಾತಾಡಲಿಲ್ಲ..ಧಾರೆ ಧಾರೆಯಾಗಿ ಹರಿಯುತ್ತಿದ್ದ ಅವಳ ಕಣ್ಣೀರು ಕಂಡೂ ಕಾಣದೆ ತೆರಳಿದ್ದೆ...

 

ನೋವು ಕಡಿಮೆಯಾಗುವ ಸೂಚನೆ ಕಾಣಲಿಲ್ಲ, ಹಾಗೆಯೇ ಮಗು ಹೊರ ಬರುವ ಸೂಚನೆ ಸಹ. ಇನ್ನು ನನ್ನ ಕೈಯಲ್ಲಿ ತಡೆಯುವುದು ಸಾಧ್ಯವೇ ಇಲ್ಲವೆನಿಸಿತು..ಹಿಂದೆಂದೂ ಅನುಭವಿಸದ ನೋವು..ಅದು ಯಾವ ತರಹದ ನೋವು ಎಂದು ಬೇರೆಯವಿರಿಗೆ ಹೇಳಲೂ ಸಾಧ್ಯವಿರಲಿಲ್ಲ, ಅನುಭವಿಸಿಯೇ ಅರಿವಾಗಬೇಕದು..ಅಯ್ಯೋ ದೇವರೇ ಅನ್ನುವ ನನ್ನ ಕೂಗಿಗೆ ಯಾರೂ ಕರಗಿದ ಹಾಗೆ ಕಾಣಲಿಲ್ಲ..ಅವರಿಗಿದು ಪ್ರತಿದಿನದ ಪ್ರದರ್ಶನ...ಆ ನೋವಿನಲ್ಲೂ ಆಶ್ಚರ್ಯವಾಯಿತು...ಅಷ್ಟು ಹೊತ್ತು ನೋವಿನಲ್ಲಿ ನರಳಿದರೂ, ಒಮ್ಮೆಯೂ ಅಮ್ಮಾ ಅಂದು ಕೂಗಿರಲಿಲ್ಲ..ಅಯಾಚಿತವಾಗಿ ನನ್ನ ತುಟಿಗಳು ಅಮ್ಮಾ ಅನ್ನಲೂ ಹೋದರೂ, ತಡೆದು ಅದನ್ನು ಬದಲಿಸುತ್ತಿದ್ದೆ...ಅಮ್ಮನ ಮೇಲಿನ ಕೋಪ ಇನ್ನು ಹೊಗಿರಲಿಲ್ಲವೇ..ಅಥವಾ ನನ್ನೊಳಗವಿತಿದ್ದ ಪಾಪ ಪ್ರಜ್ಞೆ ಅಮ್ಮಾ ಅನಲು ತಡೆಯುತ್ತಿತ್ತೆ.. ಸರಿಯಾಗಿ ಅರ್ಥವಾಗಲಿಲ್ಲ.

 

ಆ ದಿನದ ವರೆಗೆ ಅವಳು ನನಗೆ ತಾಯಿ ಮಾತ್ರಾ ಆಗಿರಲಿಲ್ಲ..ಪ್ರಾಣ ಸ್ನೇಹಿತೆ ಕೂಡ ಆಗಿದ್ದಳು.. ನನ್ನ ಪ್ರತಿಯೊಂದು ಆಸೆಗಳಿಗೆ ಅಪ್ಪನಿಂದ ಎಷ್ಟು ಬಾರಿ ಗದರಿಸಿಕೊಂಡಿದ್ದರು, ಎಷ್ಟು ಬಾರಿ ಮಾತು ಬಿಟ್ಟಿದ್ದರು ಅನ್ನುವುದು ಬಹುಶಹ ನನಗೂ ಪೂರ್ತಿಯಾಗಿ ಗೊತ್ತಿರಲಿಲ್ಲ..ನನ್ನ ಮೇಲೆ ಅಮ್ಮನಿಗೆ ಎಷ್ಟು ಅದಮ್ಯ ಪ್ರೀತಿಯಿತ್ತೋ ಅದಕ್ಕಿಂತ ಹೆಚ್ಚು ನಂಬಿಕೆಯಿತ್ತು..ಅವಳ ನಂಬಿಕೆಯಂತೆಯೇ ನಾನೂ ನಡೆದುಕೊಂಡಿದ್ದೆ..ಯಾವ ತರಗತಿಯಲ್ಲಿ ಸಹ ಮೊದಲ ಸ್ಥಾನ ಬೇರೆಯವರಿಗೆ ಬಿಟ್ಟು ಕೊಟ್ಟವಳಲ್ಲ..ಪಿಯುಸಿಯಲ್ಲಿ ಒಳ್ಳೆಯ ಅಂಕ ಗಳಿಸಿ ದೂರದ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಸೀಟು ದೊರಕಿಸಿಕೊಂಡಾಗ ಮನೆಯ ಎಲ್ಲರು ನನ್ನ ವಿರುಧ್ಧವೆ ಇದ್ದರು..ಹೆಣ್ಣು ಮಗಳು ಒಬ್ಬಳೇ ಅಷ್ಟು ದೂರ ಇರುವುದು ಯಾರಿಗೂ ಸರಿ ಬಂದಿರಲಿಲ್ಲ, ಯಾರ ಮಾತು ಕೇಳದೆ ಎರಡು ದಿನ ಊಟ ಬಿಟ್ಟಿದ್ದೆ.. ನಾನಷ್ಟು ದೂರ ಹೋಗುವುದು ಅಮ್ಮನಿಗೂ ಇಷ್ಟ ಇರಲಿಲ್ಲವೆಂದು ಅವಳ ಕಣ್ಣುಗಳೇ ಹೇಳುತ್ತಿದ್ದವು..ಆದರೂ ಅದನ್ನು ತೋರಗೊಡದೆ ಎಲ್ಲರನ್ನು ಎದುರು ಹಾಕಿಕೊಂಡು ನನ್ನ ಜೊತೆ ಉಪವಾಸ ಕುಳಿತ್ತಿದ್ದಳು..ಕೊನೆಗೂ ನಾನೇ ಗೆದ್ದಿದ್ದೆ..ದೂರದ ಬೆಂಗಳೂರಿಗೆ ನಾಲ್ಕು ವರ್ಷಗಳ ಕಾಲೇಜು ಜೀವನಕ್ಕೆ ಹೊರಟ್ಟಿದ್ದೆ..ಆ ದಿನ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ಇಳಿಯುವ ನೀರನ್ನು ಮೊದಲ ಬಾರಿ ಕಂಡಿದ್ದೆ..

 

'ಅಯ್ಯೋ ಅಮ್ಮಾ', ತಡೆಯಲಾಗಿರಲ್ಲ...ಜೋರಾಗಿ ಕಿರಿಚಿಕೊಂಡಿದ್ದೆ..ಹೆಚ್ಚು ಸಮಯ ತುಟಿಗಳನ್ನು ತಡೆ ಹಿಡಿಯುವುದು ನನ್ನಿಂದ ಸಾಧ್ಯವಾಗಿರಲಿಲ್ಲ..ಹೆರಿಗೆ ನೋವಿನೊಂದಿಗೆ ಅಮ್ಮನ ನೆನೆಪು ಸೇರಿ ನೋವು ಇಮ್ಮಡಿಯಾಗಿತ್ತು...ನೋವಿನಲ್ಲಿ ಅಮ್ಮನಿಗೆಸೆದ ಸವಾಲು ಅರ್ಥ ಕಳೆದುಕೊಂಡಿತ್ತು..ಡಾಕ್ಟರ್, ಪ್ಲೀಸ್ ನನಗೆ ಎಪಿಡ್ಯುರಲ್ ಕೊಡಿ, ನೋವು ತಡೆಯಲಾಗುತ್ತಿಲ್ಲ, ಪ್ಲೀಸ್..ನನ್ನ ಕಿರುಚಾಟ ಜಾಸ್ತಿಯಾಗತೊಡಗಿತ್ತು..ರಾಘವಗೂ ಆಶ್ಚರ್ಯವಾಗಿತ್ತನಿಸುತ್ತದೆ..ಅಷ್ಟು ದಿನ ಬೇಡವೇ ಬೇಡವೆಂದು ಅವನೆದುರು ವಾದಿಸಿದವಳು ಹೇಗೆ ಮನಸ್ಸು ಬದಲಾಯಿಸಿದೆ ಎಂದು..ಅವನಿಗೂ ಅಪರೂಪದ ಅನುಭವ..ಕೆಲವೇ ನಿಮಿಷಗಳಲ್ಲಿ ಡಾಕ್ಟರ್ ಎಪಿಡ್ಯುರಲ್ ಹಾಕಿಸಿದರು, ನೋವು ಮೊದಲಿಗಿಂತ ಸ್ವಲ್ಪ ಕಡಿಮೆಯಾಯಿತು.

 

ದೂರದ ಬೆಂಗಳೂರಿನ ಜೀವನ ಮೊದಮೊದಲು ತುಂಬಾ ಕಷ್ಟವಾಗಿತ್ತು...ಯಾವಾಗಲೂ ಮನೆಯದ್ದೆ ನೆನಪು..ಒಮ್ಮೊಮ್ಮೆ ಎಲ್ಲ ಬಿಟ್ಟು ಮನೆಗೋಡೋಣ ಎನ್ನಿಸುತ್ತಿತ್ತು...ಕಾಲಕ್ರಮೇಣ ಎಲ್ಲ ಸರಿಯಾಗಿತ್ತು..ಹೊಸ ಗೆಳೆತನ..ಹೊಸ ಜಾಗ..ಹೊಸ ವಿಷಯಗಳು ನನ್ನಲ್ಲೂ ಹೊಸತನವನ್ನು ತಂದಿತ್ತು..ಮನೆಯಿಂದ ದೂರ ಹೋದವರು ಮನಸ್ಸಿಂದಲೂ ದೂರ ಹೋಗುತ್ತಾರಂತೆ..ನಿದಾನವಾಗಿ ಅಮ್ಮನ ಪ್ರೀತಿಯ ಬಂಧನದಿಂದ ನನ್ನನ್ನು ಬಿಚ್ಚಿಕೊಂಡಿದ್ದೆ...ಹೆಚ್ಚು ಸಮಯ ಬಂಧನದಿಂದ ಹೊರಗಿದ್ದು ತಿಳಿಯದ ನಾನು ನನಗರಿವಿಲ್ಲದೆ ರಾಘವನ ಬಂಧನದಲ್ಲಿ ಸಿಲುಕ್ಕಿದ್ದೆ..ಅಮ್ಮನ ಬಂಧನಕ್ಕಿನ್ತಲೂ ತುಂಬಾ ಆಪ್ಯಾಯಮಾನವೆನಿಸಿತ್ತು..ಅದೇ ಬಂಧನದಲ್ಲಿ ಕೊನೆ ತನಕ ಇರಲೂ ನಿರ್ಧರಿಸಿದ್ದೆ..ಕಾಲೇಜು ಮುಗಿಯುವ ಮೊದಲೇ ಇಬ್ಬರಿಗೂ ಬೆಂಗಳೂರಿನ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸ ದೊರೆತಿತ್ತು..ಕೈ ತುಂಬಾ ಸಂಬಳ ಬೇರೆ..ಕಾಲೇಜು ಮುಗಿದು ಮನೆಗೆ ಹೋದಾಗ ಯಾರಿಂದಲೂ ಮೊದಲಿನ ತರ ವಿರೋಧ ವ್ಯಕ್ತವಾಗಿರಲಿಲ್ಲ..ಸಂಬಳ ಜಾಸ್ತಿಯೆಂದೋ, ನಮ್ಮ ಮಾತು ಇವಳು ಕೆಳುವವಳಲ್ಲ ಎಂದೋ ತಿಳಿದಿರಲಿಲ್ಲ..ಆದರೂ ರಾಘವನ ವಿಚಾರ ಎತ್ತುವುದು ನನ್ನಿಂದ ಸಾಧ್ಯವಾಗಿರಲಿಲ್ಲ..ನಮ್ಮದೋ ಮಡಿವಂತರ ಕುಟುಂಬ..ಅಪ್ಪ ಊರ ದೇವಸ್ತಾನದ ಪುರೋಹಿತರು ಬೇರೆ..ಪ್ರೀತಿಯ ಅಮಲಿನಲ್ಲಿ ತೇಲುವಾಗ ನನಗೆ ರಾಘವನ ಜಾತಿ ಬೇಕಿರಲಿಲ್ಲ..ಅವನು ಕೆಳಜಾತಿಯವನು ಎಂದು ತಿಳಿಯುವ ಹೊತ್ತಿಗೆ ಮೇಲೆ ಬರಲಾರದಷ್ಟು ಆಳದಲ್ಲಿ ಮುಳುಗಿದ್ದೆ...

 

ಎಪಿಡ್ಯುರಲ್ ಪ್ರಭಾವವೋ ಏನು, ಜಾಸ್ತಿ ನೋವು ತಿಳಿಯುತ್ತಿರಲಿಲ್ಲ..ಗರ್ಭಕೋಶದ ಸ್ನಾಯುಗಳು ಸಂಕುಚಿಸುವುದು ಅನುಭವಕ್ಕೆ ಬರುತ್ತಿತ್ತು..ಆದರೂ ಮಗು ಹೊರಗಡೆ ಬರಲು ಅದು ಸಾಲದು ಎಂದು ದಾದಿಯರು ಸುಮ್ಮನಿದ್ದರು..ಕೆಲವು ಹೊತ್ತುಗಳ ಬಳಿಕ ರಕ್ತದೊತ್ತಡ ವಿಪರೀತ ಏರು ಪೇರಾಗತೊಡಗಿತು..ಮೂರು ಘಂಟೆಗಳ ಕಾಲ ನನ್ನನ್ನು ನೋವಿನಲ್ಲಿ ನೂಕಿದವರು ಆವಾಗ ಎಚ್ಚೆತ್ತು ಅಪರೇಷನ್ ತಿಯೇಟರತ್ತ ನನ್ನನ್ನು ಕೊಂಡೊಯ್ಯಲು ಅಣಿವಾದರು..

 

ಕೆಲಸಕ್ಕೆ ಸೇರಿ ಒಂದು ವರ್ಷವಾಗುತ್ತಿಂದತ್ತೆ ಮನೆಯಲ್ಲಿ ನನ್ನ ಮದುವೆಗೆ ಹುಡುಗ ಹುಡುಕಲು ಆರಂಭಿಸಿದ್ದರು..ಇನ್ನು ತಡ ಮಾಡುವುದು ಸರಿಯಲ್ಲ ಎಂದು ನನಗೂ ಅನ್ನಿಸಿತ್ತು..ಯಾರು ವಿರೋಧಿಸಿದರೂ ಅಮ್ಮ ನನ್ನ ಕೈಯನ್ನು ಬಿಡಲಾರಳುಎಂಬ ಧ್ರಿಢ ನಂಬಿಕೆ ನನ್ನಲ್ಲಿತ್ತು..ನನ್ನ ಎಲ್ಲ ನಿರ್ಧಾರಗಳಲ್ಲು ಅವಳು ನನ್ನೊಂದಿಗೆ ನಡೆದವಳು..ಮನೆಯಲ್ಲಿ ಯಾರು  ವಿರೋದಿಸಿದರೂ ಎಲ್ಲರನ್ನು ಒಪ್ಪಿಸುತ್ತಾಳೆ ಎನ್ನುವ ಅಚಲವಾದ ವಿಶ್ವಾಸ..ಜಾತಿ ಒಂದು ಬಿಟ್ಟರೆ ಬೇರೆ ಯಾವುದರಲ್ಲೂ ರಾಘವ ಕಡಿಮೆ ಇರಲಿಲ್ಲ..ಊರಿಗೆ ಹೋದವಳು ಯಾರೂ ಇಲ್ಲದ ಸಮಯ ನೋಡಿ ಅಮ್ಮನಲ್ಲಿ ವಿಷಯ ಪ್ರಸ್ತಾಪಿಸಿದ್ದೆ..ಆದರೆ ನಾನು ಅಂದು ಕೊಂಡಂತೆ ಆಗಲಿಲ್ಲ..ಅಮ್ಮ ಬದಲಾಗಿದ್ದಳು..ವಿಷಯ ಕೇಳುತ್ತಿದ್ದಂತೆಯೇ ಕೋಪದಿಂದ ಅಮ್ಮನ ಮುಖ ಕೆಂಪಗಾಗಿತ್ತು..ಅವತ್ತೇ ಮೊದಲು, ಅಮ್ಮನನ್ನು ಆ ರೀತಿ ನೋಡಿದ್ದು..ಮೊದ ಮೊದಲು ಗದರಿಸಿದಳು..ಮತ್ತೆ ಗೋಗರೆದಳು..ಕೊನೆಗೆ ಅತ್ತಳು..ನನ್ನ ಮನಸ್ಸು ಕಲ್ಲಾಗಿತ್ತು..ಸಂಜೆಯ ತನಕ ಅಮ್ಮ ಯಾರೊಂದಿಗೂ ಮಾತನಾಡಲಿಲ್ಲ..ನನ್ನ ಮನಸ್ಸೂ ವ್ಯಗ್ರವಾಗಿತ್ತು..ನನಗೆ ಪ್ರಿಯವೆನಿಸಿದ ಎಲ್ಲ ವಸ್ತುಗಳನ್ನು ತುಂಬಿ ಸಂಜೆ ವೇಳೆಗೆ ಬೆಂಗಳೂರಿನ ಬಸ್ಸನ್ನು ಏರಿದ್ದೆ..ಹಿಂದಿರುಗುವ ಆಲೋಚನೆ ನನ್ನಲ್ಲಿ ಇರಲಿಲ್ಲ..ಅಮ್ಮನೂ ಬಂದಿದ್ದಳು..ಬಸ್ಸು ಹತ್ತುವ ಮುಂಚೆ ನೀರು ತುಂಬಿದ ಕಂಗಳಲ್ಲಿ ಹೇಳಿದ್ದಳು..'ಮಗಳೇ, ನಾನೀಗ ಅನುಭವಿಸುತ್ತಿರುವ ನೋವು ನಿನಗೂ ಒಂದು ದಿನ ಅರ್ಥವಾಗುತ್ತದೆ, ಆದರೆ ಆ ನೋವನ್ನು ಹಂಚಿಕೊಳ್ಳಲು ಆವಾಗ ನಾನಿರುವುದಿಲ್ಲ್ಲ'..ಅಮ್ಮನ ಮಾತುಗಳು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ..ಅಮ್ಮನ ಕಣ್ಣುಗಳಲ್ಲಿ ಸುರಿಯುತ್ತಿರುವ ನೀರಿಗೆ ನನ್ನ ಪ್ರೇಮದ ಬಿಸಿಯೊಡನೆ ಸೆಣೆಸುವ ಶಕ್ತಿಯೂ ಇರಲಿಲ್ಲ..

 

ಆಪರೇಶನ್ ಅವಾಗಲೇ ಶುರುವಾಗಿತ್ತು..ಅರಿವಳಿಕೆ ಇಂಜೆಕ್ಷನ್ ನಿಂದಾಗಿ ನನಗೆ ಏನೂ ಸರಿಯಾಗಿ ತಿಳಿಯುತ್ತಿರಲಿಲ್ಲ..ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಹೊಟ್ಟೆಯನ್ನು ಬಗೆದು ಹೊಸ ಜೀವವೊಂದು ಹೊರಬರಲಿದೆ..ಏನೋ ವಿಚಿತ್ರವಾದ ಅನುಭವ..ಅಪರೇಷನ್ ಕತ್ತರಿ ಹೊಟ್ಟೆಯನ್ನು ಕತ್ತರಿಸಲು ಆರಂಬಿಸಿದೆ ಅನಿಸುತ್ತಿತ್ತು..ನನಗೆ ನೋಡಲು ಸಾಧ್ಯವಿರಲಿಲ್ಲ..ಆದರೆ ಅನುಭವವಾಗುತ್ತಿತ್ತು.. ರಾಘವ ಪಕ್ಕದಲ್ಲೇ ನಿಂತು ನನಗೆ ದೈರ್ಯ ತುಂಬುತ್ತಿದ್ದ..ಅಂದಿನಂತೆ...

 

ವಾಪಾಸು ಬಂದವಳಿಗೆ ಅಮ್ಮನದೇ ಚಿಂತೆ..ಅಮ್ಮನ ಕೊನೆಯ ಮಾತುಗಳು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ..ಅಮ್ಮ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ..ರಾಘವನಿಗೆ ಅದೇನು ದೊಡ್ಡ ವಿಷಯವೆನಿಸಲಿಲ್ಲ..'ಅಂತರ್ಜಾತಿ ವಿವಾಹ ಎಂದರೆ ಎಲ್ಲ ಹೆತ್ತವರೂ ಹೀಗೆಯೇ ಮಾಡುತ್ತಾರೆ..ಮಕ್ಕಳ ಮನಸ್ಸು ಬದಲಾಗಲಿ ಎಂದು'..ಹಾಗೆಯೇ ಕೇಳಿದ್ದ..'ನನ್ನನ್ನು ಬಿಟ್ಟು ಬೇರೆಯವರನು ಮದುವೆಯಾಗಿ ನೀನು ಬದುಕಿರಬಲ್ಲೆಯ' ಎಂದು...ಅವನನ್ನು ಬಿಟ್ಟಿರುವ ಆಲೋಚನೆಯೇ ನನ್ನಲ್ಲಿ ಇದುವರೆಗೆ ಬಂದಿರಲಿಲ್ಲ..ಅವನನ್ನು ಬಿಟ್ಟು ನಾನು ಸುಖವಾಗಿರಬಲ್ಲೆನೆ..ಇಲ್ಲ..ಕನಿಷ್ಠ ಬದುಕಿರಬಲ್ಲೆನೆ..ಹೃದಯ ಇಲ್ಲ ಇಲ್ಲ ಎಂದು ಬಡಿದುಕೊಳ್ಳತೊಡಗಿತು..ಮುಂದಿನ ತಿಂಗಳಲ್ಲಿಯೇ ರಾಘವನ ಊರಿನಲ್ಲಿ ಸರಳವಾಗಿ ಮದುವೆಯಾದೆವು..ನಮ್ಮ ಮನೆಯಲ್ಲಿ ಹೇಳುವ ಧೈರ್ಯವಿರಲಿಲ್ಲ..ನಾನೇ ತಿಳಿಸುವ ಅನಿವಾರ್ಯತೆಯೂ ಇರಲಿಲ್ಲ...ವಿಷಯ ನಮ್ಮ ಊರಿಗೂ ಹೋಗಿತ್ತು..ರಾಘವ ಹೇಳಿದಂತೆ ಅಮ್ಮ ಸಾಯಲಿಲ್ಲ..ಮಗಳು ತಮ್ಮ ಪಾಲಿಗೆ ಸತ್ತಳೆಂದು ಎಲ್ಲರೂ ಸೇರಿ ನಾನು ಬದುಕಿರುವಾಗಲೇ ನನ್ನ ಪುಣ್ಯ ಕ್ರಿಯೆಗಳನ್ನು ಮಾಡಿ ಉಂಡು ಕೈ ತೊಳೆದುಕೊಂಡರು..

 

ಹೊಟ್ಟೆಯ ಒಳಗೆ ಎರಡು ಮೂರು ಕೈಗಳು ಓಡಾಡಿದ ಅನುಭವ..ಬಹುಶಹ ಮಗುವನ್ನು ಹೊರ ತೆಗೆಯುತ್ತಿದ್ದಾರೆ..ಇನ್ನೇನು ಒಂಭತ್ತು ತಿಂಗಳ ಯಮಯಾತನೆಯ ಸಿಹಿ ಫಲವನ್ನು ನೋಡುವ ಸಮಯ..ಎದೆ ಜೋರಾಗಿ ಬಡಿದುಕೊಳ್ಳತೊಡಗಿತು..ಹೊಟ್ಟೆಯೊಳಗಿನ ಭಾರವೆಲ್ಲ ಒಮ್ಮೆಲೇ ಹೋದ ಅನುಭವ..ನನ್ನ ಮಗು ನನ್ನನ್ನು ನೋಡಲು ಬಂತೆನಿಸುತ್ತದೆ..ಮಗುವಿನ ಕೂಗು ಕೇಳಿಸಿತು..ಮನಸ್ಸಲ್ಲಿ ಏನೇನೋ ವಿಚಿತ್ರ ಭಾವನೆಗಳು..ಸಾವಿರ ವರ್ಷಗಳ ಕನಸು ನನಸಾದ ಹಾಗೆ..ಕೆಲಕ್ಷಣಗಳಲ್ಲಿ ಮಗುವನ್ನು ನನ್ನ ಸಮೀಪ ತಂದರು..ಸುಂದರವಾದ ಹೆಣ್ಣುಮಗು..ಕಣ್ಣಲ್ಲಿ ನೀರು ತುಂಬಿ ಬಂದಿತು..ರಾಘವ ಹೇಳುತ್ತಿದ್ದ..'ಮಗಳು ನಿನ್ನ ತದ್ರೂಪ' ಎಂದು..ಇನ್ನೊಮ್ಮೆ ನೋಡಿದೆ....ನನ್ನಂತೆಯೇ ಇದ್ದಾಳೆಯೇ.. ಇಲ್ಲ ಎನಿಸಿತು..ಮತ್ತೊಮ್ಮೆ ನೋಡಿದೆ..ಸಂದೇಹವೇ ಇಲ್ಲ..ನನ್ನ ಮಗಳು ನನ್ನಮ್ಮನ ತದ್ರೂಪ..ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು...

 

ರಾಘವನೆಂದಂತೆ ನಮ್ಮ ಮದುವೆ ಸುದ್ದಿ ಕೇಳಿದೊಡನೆ ಅಮ್ಮ ಸಾಯಲಿಲ್ಲ...ಆದರೆ..ಅವಳು ಬದುಕಲೂ ಇಲ್ಲ..ಅವಳ ಪಾಲಿಗೆ ನಾನು ಸತ್ತ ಒಂಭತ್ತು ತಿಂಗಳಲ್ಲಿ ಅಮ್ಮನೂ ವಿಧಿವಶಳಾಗಿದ್ದಳು..ಬಹುಶ ಆ ಒಂಭತ್ತು ತಿಂಗಳು ಅವಳು ಮತ್ತೆ ನನ್ನ ಹೆರಿಗೆಯ ನೋವನ್ನು ಅನುಭವಿಸಿರಬೇಕು..ಅಮ್ಮ ಸತ್ತು ನನ್ನ ಮಗಳಾಗಿ ಹುಟ್ಟಿದಳೇ...ಅಳು ತಡೆಯಲಾಗಲಿಲ್ಲ..ಮತ್ತೆ ಹೆರಿಗೆಯ ನೋವು  ಶುರುವಾದ ಹಾಗಾಯಿತು..ಇಲ್ಲ..ಅದಕ್ಕಿಂತ ತೀವ್ರವಾಗಿದೆ...ತಡೆಯಲಾಗಲಿಲ್ಲ...ನನ್ನ ನೋವನ್ನು ತಡೆಯುವ ಶಕ್ತಿ ಈಗ ಯಾವ ಅರಿವಳಿಕೆಗೂ ಇರಲಿಲ್ಲ...  

 

 

Comments