ದೆವ್ವದ ಮನೆಯಲ್ಲಿ

ದೆವ್ವದ ಮನೆಯಲ್ಲಿ

ತಂಡಕ್ಕೆ ಹೊಸದಾಗಿ ಆಗಮಿಸಿದ್ದ ಡ್ಯಾನಿಯನ್ನು ತಂಡದ ಉಳಿದ ಸದಸ್ಯರು ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಟ್ಟುತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಈಗ ಡ್ಯಾನಿಯ ಪರಿಚಯವನ್ನು ಕೇಳುತ್ತಿದ್ದರು. ಡ್ಯಾನಿ ದೀರ್ಘವಾಗಿ ಒಂದು ಉಸಿರು ಎಳೆದುಕೊಂಡು ನಾನು ಮುಂಚೆ ಚಾನೆಲ್  ನ್ನುವ ಒಂದು ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದೆ. ಮೊದಲು ಕ್ರೈಂ ರಿಪೋರ್ಟರ್ ಆಗಿದ್ದ ನನ್ನನ್ನು ನಂತರ ದೇಗುಲ ದರ್ಶನ ಎಂಬ ಆಧ್ಯಾತ್ಮ ಕಾರ್ಯಕ್ರಮ ನಡೆಸಿಕೊಡುವ ಕಾರ್ಯಕ್ರಮಕ್ಕೆ ಹಾಕಿದ್ದರು.

ಮೊದ ಮೊದಲು ಎಲ್ಲ ಚೆನ್ನಾಗಿತ್ತು. ಆಮೇಲೆ ಬೇರೆ ಬೇರೆ ಊರುಗಳಿಗೆ ಹೋಗಲು ಹೇಳಿದರು ಸರಿ ಎಂದು ಸ್ವಲ್ಪ ದಿವಸ ಅದೂ ಮಾಡಿದೆ. ಆದರೆ ಬರ ಬರುತ್ತಾ ಅದ್ಯಾಕೋ ತುಂಬಾ ತೊಂದರೆ ಆಗುತ್ತಿತ್ತು. ಪ್ರತಿ ದಿನ ಒಂದೊಂದು ಊರು ಸುತ್ತುವುದುಹಗಲು ರಾತ್ರಿ ಎಲ್ಲ ಬರೀ ಪ್ರಯಾಣದಲ್ಲೇ ಕಳೆದು ಬಿಡುತ್ತಿದ್ದೆ. ಸರಿಯಾಗಿ ನಿದ್ದೆಯೇ ಇಲ್ಲದಂತಾಗಿತ್ತು. ಹಾಗಾಗಿ ಚಾನೆಲ್  ಕ್ರಿಯೇಟಿವ್ ಹೆಡ್ ಬಳಿ ಹೋಗಿ ಸರ್ ನಾನು ಇನ್ನು ಮುಂದೆ ಈ ಕಾರ್ಯಕ್ರಮ ಮಾಡಲು ಇಷ್ಟ ಪಡುವುದಿಲ್ಲ. ದಯವಿಟ್ಟು ಯಾವುದಾದರೂ ಹೊಸ ವಿಭಿನ್ನ ಕಾರ್ಯಕ್ರಮ ಇದ್ದರೆ ಹೇಳಿ ಸರ್ ಎಂದಿದ್ದಕ್ಕೆ ಅವರು ಸರಿ ಹೊಸದೊಂದು ಕಾರ್ಯಕ್ರಮದ ಆಲೋಚನೆಯಲ್ಲಿದ್ದೇವೆ ನಾನು ಒಂದು ಸಲ ಚಾನೆಲ್ ನ ಮುಖ್ಯಸ್ಥನ ಬಳಿ ಮಾತನಾಡಿ ನೋಡುತ್ತೇನೆ ಎಂದು ಹೇಳಿ, ಮುಂಚೆ ನೀವು ಯಾವ ಕಾರ್ಯಕ್ರಮ ಮಾಡುತ್ತಿದ್ದೆ ಎಂದು ಕೇಳಿದಾಗ ಕ್ರೈಂ ರಿಪೋರ್ಟರ್ ಆಗಿದ್ದೆ ಎಂದು ಹೇಳಿದ್ದಕ್ಕೆ ಓಹ್ ವೆರಿ ಗುಡ್ ಹಾಗಿದ್ದರೆ  ಕಾರ್ಯಕ್ರಮಕ್ಕೆ ನೀವೇ ಸರಿಯಾದವರು ಎಂದು ಹೇಳಿ ನಾನು ನಿಮಗೆ ನಾಳೆಯೇ ತಿಳಿಸುತ್ತೇನೆ ಎಂದು ಹೇಳಿದರು.

ಅವರಂದಂತೆ ಮರುದಿನವೇ ನನ್ನನ್ನು ದೇಗುಲ ದರ್ಶನ ಕಾರ್ಯಕ್ರಮದಿಂದ ತೆಗೆದು ಹಾಕಿ ಹೊಸ ಕಾರ್ಯಕ್ರಮದ ಬಗ್ಗೆ ತಿಳಿಸಲು ಚಾನೆಲ್ ನ ಮುಖ್ಯಸ್ಥನ ಕೊಠಡಿಗೆ ಕರೆದರು. ಒಳಗೆ ಹೋದ ನನಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು.  ನೋಡಿ ಡ್ಯಾನಿ ನಾವೊಂದು ಹೊಸ ರಿಯಾಲಿಟಿ ಷೋ ನಡೆಸಲು ನಿರ್ಧರಿಸಿದ್ದೇವೆ. ಇದುವರೆಗೂ ಯಾವ ಚಾನೆಲ್ ನವರು ಈ ರೀತಿಯ ಷೋ ಮಾಡಿಲ್ಲ, ಇನ್ನು ಮುಂದೆ ಮಾಡಬಾರದು ಆ ರೀತಿಯ ಕಾರ್ಯಕ್ರಮ ಇದಾಗಬೇಕು. ಈ ಕಾರ್ಯಕ್ರಮದ ಹೆಸರು "ದೆವ್ವದ ಮನೆಯಲ್ಲಿ" ಎಂದರು. ತಕ್ಷಣ ನನಗೆ ವೌ ಎನಿಸಿದರೂ ಆಮೇಲೆ ಪೂರ್ತಿ ಕೇಳಿದ ಮೇಲೆ ವ್ಯಾಕ್ ಎನಿಸಿತು.

ನಿಮಗೆ ಬಿಗ್ ಬಾಸ್ ಕಾರ್ಯಕ್ರಮ ಗೊತ್ತಿರಬಹುದು ಒಂದು ಮನೆಯಲ್ಲಿ ಒಂದಷ್ಟು ಜನ ಸ್ಪರ್ಧಿಗಳನ್ನು ಕೂಡಿ ಹಾಕಿ ಅವರಲ್ಲಿ ಯಾರು ಕೊನೆಯವರೆಗೂ ಉಳಿಯುತ್ತಾರೋ ಅವರು ಜಯಶಾಲಿ ಆಗುತ್ತಾರೆ. ಅದೇ ರೀತಿ ನಾವು ಇಲ್ಲಿ ಒಂದಷ್ಟು ಸ್ಪರ್ಧಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕುತ್ತೇವೆ. ಕೊನೆಯವರೆಗೂ ಯಾರು ಅದರಲ್ಲಿ ಉಳಿಯುತ್ತಾರೋ ಅವರೇ ಜಯಶಾಲಿಗಳು. ಆದರೆ ಇಲ್ಲೊಂದು ಟ್ವಿಸ್ಟ್ ಅದೇನೆಂದರೆ ಅದು ಮಾಮೂಲಿ ಮನೆಯಲ್ಲ. ಅದು ಊರಾಚೆ ಇರುವ ಒಂದು ಪಾಳು ಬಿದ್ದ ಬಂಗಲೆ. ಅಸಲಿಗೆ ಅಲ್ಲಿ ದೆವ್ವವೂ ಇಲ್ಲ ಏನೂ ಇಲ್ಲ ಆದರೆ ಜನ ನೋಡಬೇಕಲ್ಲ ಅದಕ್ಕೆ ನಾವು ಮುಂಚೆಯೇ ಒಂದಷ್ಟು ಸೆಟಪ್ ಗಳನ್ನೂ ಮಾಡಿರುತ್ತೇವೆ. ಅದೇನಂದರೆ ಒಂದಷ್ಟು ಕೆಟ್ಟ ಕೆಟ್ಟ ಶಭ್ದಗಳನ್ನು ಹಾಕುವುದು ಹಾಗೆ ಲೈಟಿಂಗ್ ಕೂಡ ಅಷ್ಟೇ ಅವಾಗವಾಗ ಹೆದರಿಕೆ ಆಗುವ ಹಾಗೆ ಲೈಟ್ ಬಿಡುವುದು ಇವಿಷ್ಟು ಮಾಡಬೇಕು. ಇನ್ನೊಂದು ವಿಷಯ, ಇದೆಲ್ಲ ನಮ್ಮ ಸ್ಪರ್ಧಿಗಳಿಗೂ ಗೊತ್ತಿರುವುದಿಲ್ಲ. ಬರೀ ನಿಮಗೆ ಹಾಗೂ ನಮಗೆ ಗೊತ್ತಿರುತ್ತದೆ.

ಇನ್ನು ಎರಡು ತಿಂಗಳಲ್ಲಿ ಆ ಶೋ ಟಿವಿಯಲ್ಲಿ ಶುರುವಾಗುತ್ತದೆ. ನಾಳೆಯಿಂದಲೇ ಚಾನೆಲ್ ನಲ್ಲಿ ಆ ಶೋ ದ ಜಾಹೀರಾತು ಬಿತ್ತರಗೊಳ್ಳುತ್ತದೆ. ಆಸಕ್ತಿ ಉಳ್ಳವರು ಆ ಜಾಹೀರಾತಿಗೆ ಪ್ರತಿಕ್ರಿಯಿಸುತ್ತಾರೆ. ಅವರಲ್ಲಿ ನೋಡಲು ಚೆನ್ನಾಗಿರುವ ಐದು ಜನ ಹುಡುಗರು ಐದು ಜನ ಹುಡುಗಿಯರನ್ನು ಆಯ್ಕೆ ಮಾಡೋಣ. ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಮಾಡೋಣ.ನಾಳೆಯಿಂದಲೇ ನೀವು ಆ ಸ್ಥಳಕ್ಕೆ ಹೋಗಿ ಷೋ ಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದರು. ನಾನು ನಮ್ಮ ತಾಂತ್ರಿಕ ತಂಡದವರೊಂದಿಗೆ ಆ ಸ್ಥಳಕ್ಕೆ ಬಂದು ಆ ಬಂಗಲೆಯನ್ನು ನೋಡಿದೆ. ಅದೊಂದು ದೊಡ್ಡ ಬಂಗಲೆ ಅದೆಷ್ಟು ವರ್ಷ ಆಗಿತ್ತೋ ಗೊತ್ತಿಲ್ಲ ಪಾಳು ಬಿದ್ದು ಬಂಗಲೆಯ ಸುತ್ತೆಲ್ಲ ಮುಳ್ಳಿನ ಗಿಡಗಳು ಬಳ್ಳಿಗಳು ಎಲ್ಲ ಬೆಳೆದುಕೊಂಡಿದ್ದವು ಆ ಬಂಗಲೆಯ ಪಕ್ಕದಲ್ಲೇ ಬೃಹದಾಕಾರದ ಒಂದು ಹುಣಸೆ ಮರವಿತ್ತು. ನಿಜಕ್ಕೂ ಆ ಬಂಗಲೆ ನೋಡಿದ ತಕ್ಷಣ ಭಯ ಹುಟ್ಟಿಸುವಂತಿತ್ತು. ಹಗಲು ಹೊತ್ತಿನಲ್ಲೇ ಈ ಪಾಟಿ ಭಯ ಆಗುತ್ತದೆ ಇನ್ನು ರಾತ್ರಿ ಅಷ್ಟೇ ಎಂದುಕೊಂಡು ಬಂಗಲೆಯ ಒಳಗೆ ಹೋಗಿ ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ cc ಕ್ಯಾಮೆರಾಗಳನ್ನು ಅಳವಡಿಸಿ ಸ್ಪರ್ಧಿಗಳಿಗೆ ಕಾಣುವಂತೆ ಒಂದೇ ಒಂದು ಕ್ಯಾಮೆರಾವನ್ನು ಇಟ್ಟು, ನಾವು ಮುಂಚೆಯೇ ನಿರ್ಧರಿಸಿದ ಹಾಗೆ ವಿಶೇಷ ಶಬ್ಧಗಳು, ವಿಶೇಷ ಬೆಳಕಿನ ವ್ಯವಸ್ಥೆ ಎಲ್ಲ ಮುಗಿಸುವ ಹೊತ್ತಿಗೆ ಎರಡು ವಾರವಾಯ್ತು. ಮುಂಚೆಯೇ ನಮ್ಮ ಚಾನೆಲ್ ನ ಮುಖ್ಯಸ್ಥ ಅಲ್ಲಿ ಶೂಟಿಂಗ್ ನಡೆಸಲು ಬೇಕಿದ್ದ ಎಲ್ಲ ಅನುಮತಿಗಳನ್ನು ಪಡೆದಿದ್ದೆ ಎಂದು ಹೇಳಿದ್ದರಿಂದ ನಾವು ಅದರ ಬಗ್ಗೆ ಏನೂ ತಲೆ ಕೆಡಿಸಿಕೊಂಡಿರಲಿಲ್ಲ.

ಎರಡು ವಾರದ ನಂತರ ಜಾಹೀರಾತಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿ ಅದರಲ್ಲಿ ಆಯ್ಕೆ ಪ್ರತಿಕ್ರಿಯೆ ಪೂರ್ಣಗೊಳ್ಳುವುದರಲ್ಲಿ ಒಂದು ವಾರ ಪೂರ್ಣಗೊಂಡು ಶೂಟಿಂಗ್ ಶುರು ಮಾಡಲು ಒಂದು ವಾರ ಉಳಿದಿತ್ತು ಅಷ್ಟೇ. ನಾನು ಆಯ್ಕೆಯಾದ ಸ್ಪರ್ಧಿಗಳ ಜೊತೆ ತಾಂತ್ರಿಕ ತಂಡವನ್ನು ಕರೆದುಕೊಂಡು ಬಂಗಲೆಗೆ ಬಂದೆವು. ಅಲ್ಲಿಯವರೆಗೂ ಎಲ್ಲ ಪೂರ್ವ ನಿಯೋಜಿತವಾದಂತೆ ನಡೆಯುತ್ತಿತ್ತು. ಅಂದು ನಮ್ಮ ಶೂಟಿಂಗ್ ಶುರುವಾಗಬೇಕಿತ್ತು. ಮೊದಲ ದಿನ ಹಗಲಿನಲ್ಲೇ ಶೂಟಿಂಗ್ ಶುರು. ಆದಿನ ಪೂರ್ತಿ ಬಂಗಲೆಯ ಚಿತ್ರೀಕರಣ, ಸ್ಪರ್ಧಿಗಳ ವೈಯಕ್ತಿಕ ಪರಿಚಯ ಬರೀ ಇವುಗಳ ಸುತ್ತಲೇ ನಡೆದು ಪೂರ್ಣಗೊಂಡಿತು. ಸ್ಪರ್ಧಿಗಳು ಬಹಳ ಉತ್ಸುಕತೆಯಿಂದ ಕೂಡಿದ್ದರು. ಅಂದು ಶೂಟಿಂಗ್ ನಂತರ ಎಲ್ಲರೂ ನಮ್ಮ ಶೆಡ್ ನಲ್ಲೆ ಊಟ ಮಾಡಿ ಎಲ್ಲರೂ ಅಲ್ಲೇ ಮಲಗಿದ್ದೆವು. ಮಾರನೆ ದಿವಸ ಸ್ಪರ್ಧಿಗಳು ಬಂಗಲೆಯೊಳಗೆ ಹೋಗುವ ದಿನ ಎಲ್ಲರೂ ಕಾತುರದಿಂದ ಬಂಗಲೆಯ ಒಳಗೆ ಹೋದರು. ನಾವು ಆಚೆ ಇಂದ ಒಳಗೆ ನಡೆಯುವ ಎಲ್ಲ ವಿದ್ಯಮಾನಗಳನ್ನೂ ಕ್ಯಾಮೆರಾ ಮೂಲಕ ನೋಡುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಮೊದಲೇ ನಿರ್ಧರಿತವಾದಂತೆ ವಿಶೇಷ ಶಬ್ಧಗಳನ್ನು ಕೊಡಲು ನಮ್ಮ ಸೌಂಡ್ ಇಂಜಿನಿಯರ್ ಗೆ ಹೇಳಿದರೆ ಅವನು ಸರಿ ಎಂದು ಶಭ್ದ ಕೊಡಲು ಮುಂದಾದ.

ಆದರೆ ಆ ಯಂತ್ರ ಕೆಲಸ ಮಾಡಲಿಲ್ಲ. ಸುಮಾರು ಅರ್ಧ ಗಂಟೆ ಏನೇನೋ ಪರೀಕ್ಷಿಸಿದ ಎಲ್ಲ ವೈರುಗಳು ಸರಿಯಾಗೇ ಇದೆ ಎಲ್ಲ ಕನೆಕ್ಷನ್ ಗಳೂ ಸರಿಯಾಗೇ ಇದೆ. ಆದರೆ ಯಂತ್ರ ಮಾತ್ರ ಕೆಲಸ ಮಾಡುತ್ತಿಲ್ಲ. ಅಷ್ಟರಲ್ಲಿ ನಮಗೊಂದು ಆಘಾತ ಕಾದಿತ್ತು. ಇದ್ದಕ್ಕಿದ್ದಂತೆ ಬಂಗಲೆಯ ಒಳಗೆ ಚಿತ್ರ ವಿಚಿತ್ರ ಶಬ್ಧಗಳು ಕೇಳಲು ಶುರುವಾಯಿತು. ತಕ್ಷಣ ನಾನು ಎಚ್ಚೆತ್ತು ಕ್ಯಾಮೆರಾ ಮೂಲಕ ನೋಡುತ್ತಿದ್ದರೆ ಒಳಗೆ ಸ್ಪರ್ಧಿಗಳು ಕಂಗಾಲಾದಂತೆ ಕಂಡು ಬರುತ್ತಿದ್ದರು. ಹುಡುಗಿಯರಂತೂ ಕ್ಯಾಮೆರಾ ಮುಂದೆ ಬಂದು ಅಳುತ್ತಿದ್ದರು. ನನಗೆ ಕೂಡಲೇ ಭಯವಾಯಿತು ಇದೇನಪ್ಪ ನಮ್ಮ ಯಂತ್ರ ಕೆಲಸಾನೆ ಮಾಡುತ್ತಿಲ್ಲ ಆದರೆ ಶಬ್ಧಗಳು ಹೇಗೆ ಬರುತ್ತಿದೆ ಎಂದುಕೊಂಡು ಮೈಕ್ ನ ಮೂಲಕ ಸ್ಪರ್ಧಿಗಳಿಗೆ ಹೇಳಿದೆ. ನೋಡಿ ನೀವು ಹೀಗೆ ಹೆದರಿಕೊಂದರೆ ೨೫ ಲಕ್ಷ ಗೆಲ್ಲುವ ಅವಕಾಶ ಕಳೆದು ಕೊಳ್ಳುತ್ತೀರ. ಯೋಚನೆ ಮಾಡಿ ೨೫ ಲಕ್ಷಾನ ಅಥವಾ ಏನೂ ಇಲ್ಲದೆ ಹೇಡಿಗಳಂತೆ ಮನೆಗೆ ಹೋಗುತ್ತೀರಾ ಎಂದೆ. ಅಷ್ಟರಲ್ಲಿ ಒಳಗೆ ಕೇಳುತ್ತಿದ್ದ ಶಭ್ದಗಳು ನಿಂತವು. ನಂತರ ಸ್ಪರ್ಧಿಗಳು ಸಮಾಧಾನಗೊಂಡರು. ನಂತರ ಯಾವುದೇ ಸಮಸ್ಯೆ ಆಗಲಿಲ್ಲ. ಬೆಳಿಗ್ಗೆ ಎದ್ದು ಬಂಗಲೆಯ ಒಳಗೆ ಹೋಗಿ ಏನಾಯ್ತು ಎಂದು ಕೇಳಿದ್ದಕ್ಕೆ ವಿಕಾಸ್ ಎಂಬ ಸ್ಪರ್ಧಿ ಮುಂದೆ ಬಂದು ಉಳಿದ ಸ್ಪರ್ಧಿಗಳನ್ನು ಹೆದರಿಸಲು ನಾನೇ ಹಾಗೆ ಶಬ್ಧಗಳನ್ನು ಮಾಡಿದೆ ಎಂದ. ಆಗ ನನಗೆ ಸಮಾಧಾನವಾದರೂ ಅದನ್ನು ತೋರಗೊಡದೆ ನೋಡಿ ಸ್ಪರ್ಧಿಗಳೇ ನೀವು ಈ ಶೋನಲ್ಲಿ ಗೆಲ್ಲಬೇಕಾದರೆ ಈ ರೀತಿ ಏನೂ ಬೇಕಾದರೂ ಮಾಡಿ ಇನ್ನೊಬ್ಬ ಸ್ಪರ್ಧಿಯನ್ನು ಆಚೆ ಕಳುಹಿಸಬಹುದು. ಆದರೆ ಒಬ್ಬರೊನ್ನಬ್ಬರು ಮುಟ್ಟದೆ ಯಾವ ರೀತಿ ಹೆದರಿಸಬೇಕು ಎಂದು ಆಚೆ ಬಂದೆ. ಮುಂಚೆಯೇ ಬಂಗಲೆಯಲ್ಲಿ ಒಂದು ಕೊಠಡಿಯಲ್ಲಿ ಸ್ಪರ್ಧಿಗಳಿಗೆ ಬೇಕಾದ ಅಡಿಗೆ ಸಾಮಗ್ರಿಗಳನ್ನು ಎಲ್ಲಾ ಇಟ್ಟಿದ್ದೆವು. ಆದ್ದರಿಂದ ಅವರು ಯಾವುದಕ್ಕೂ ಆಚೆ ಬರುವ ಪ್ರಮೇಯವೇ ಇರಲಿಲ್ಲ.

ಮಾರನೆ ದಿನ ಯಥಾಪ್ರಕಾರ ರಾತ್ರಿಯಾಯಿತು. ಇದ್ದಕ್ಕಿದ್ದಂತೆ ನಮ್ಮ ಯಂತ್ರ ಸರಿ ಹೋಯಿತು ಒಂದೆರಡು ಬಾರಿ ವಿಚಿತ್ರ ಸದ್ದುಗಳನ್ನು ಮಾಡಿ, ಸ್ವಲ್ಪ ಹೊತ್ತು ಬೆಳಕಿನ ಆಟವಾಡಿಸಿದಾಗ ಮಾಮೂಲಿನಂತೆ ಹೆಣ್ಣು ಮಕ್ಕಳು ಸ್ವಲ್ಪ ಹೆದರಿಕೊಂಡರು ಆದರೆ ಹುಡುಗರು ಮಾತ್ರ ಯಾರೋ ಇನ್ನೊಬ್ಬರು ಮಾಡಿರುತ್ತಾರೆ ಎಂದು ಸುಮ್ಮನಿದ್ದರು. ನಂತರದಲ್ಲಿ ನಮ್ಮ ಯಂತ್ರ ಶಭ್ಧ ನಿಲ್ಲಿಸಿದರೂ ಒಳಗಡೆಯಿಂದ ನಮ್ಮ ಯಂತ್ರಕ್ಕಿಂತ ಚಿತ್ರ ವಿಚಿತ್ರ ಸದ್ದುಗಳು ಬರುತ್ತಿದ್ದವು. ನಾವು ಆಚೆ ಪರವಾಗಿಲ್ಲ ಶೋ ಚೆನ್ನಾಗಿ ಬರುತ್ತಿದೆ ಎಂದುಕೊಂಡೆವು. ಒಂದೆರೆಡು ದಿನ ಹೀಗೆ ಸಾಗಿ ಐದನೇ ದಿನಕ್ಕೆ ಕಾಲಿಟ್ಟಿತ್ತು ನಮ್ಮ ಶೋ. ಅಂದು ಅಮಾವಾಸ್ಯೆ. ರಾತ್ರಿ ಶೂಟಿಂಗ್ ನಡೆಯುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಆ ವಿಕಾಸ್ ಎನ್ನುವ ಸ್ಪರ್ಧಿ ಸ್ವಲ್ಪ ಹೊತ್ತು ಹುಚ್ಚುಚ್ಚಾಗಿ ಕಿರುಚಾಡಿ ಹೇಗೆಂದರೆ ಹಾಗೆ ಒಳ್ಳೆ ಮೈಮೇಲೆ ನಿಜವಾದ ದೆವ್ವವೇ ಬಂದವನ ಹಾಗಿ ಆಡುತ್ತಿದ್ದ. ನಾನು ಪರವಾಗಿಲ್ಲ ಒಳ್ಳೆ ಸ್ಪರ್ಧಿ ಸಿಕ್ಕಿದ್ದಾನೆ ಬಹುಶಃ ಇವನೇ ಗೆಲ್ಲಬಹುದು ಈ ಕಾರ್ಯಕ್ರಮದಲ್ಲಿ ಎಂದುಕೊಳ್ಳುತ್ತಿದ್ದಾಗಲೇ ಇದ್ದಕ್ಕಿದ್ದಂತೆ ನಮ್ಮ ಕ್ಯಾಮೆರಾಗಳು ಆಫ್ ಆದವು. ಒಂದೈದು ನಿಮಿಷ ಏನು ನಡೆಯುತ್ತಿದೆ ಎಂದು ಗೊತ್ತೇ ಆಗಲಿಲ್ಲ. ಐದು ನಿಮಿಷದ ನಂತರ ಕ್ಯಾಮೆರಾಗಳು ಆನ್ ಆದವು. ಬಂಗಲೆಯೊಳಗೆ ಎಲ್ಲರೂ ವಿಪರೀತ ಭಯಭೀತರಾಗಿದ್ದರು. ಎಲ್ಲರಿಗೂ ಯಾರೋ ಹೊಡೆದಂತೆ ಎಲ್ಲರ ಮುಖದ ಮೇಲೆ ಬೆರಳುಗಳು ಚಿಹ್ನೆ ಮೂಡಿದ್ದವು. ಆದರೆ ವಿಕಾಸ್ ಮಾತ್ರ ಕಾಣುತ್ತಿರಲಿಲ್ಲ. ಕೂಡಲೇ ಕ್ಯಾಮೆರಾ ಮುಂದೆ ಬಂದ ಉಳಿದ ಸ್ಪರ್ಧಿಗಳು ಸರ್ ದಯವಿಟ್ಟು ಬಾಗಿಲು ತೆಗೆಯಿರಿ ನಮಗೆ ಈ ಶೋ ನು ಬೇಡ ದುಡ್ಡೂ ಬೇಡ ಎಂದು ಕಿರುಚಿದಾಗ ನನಗೇಕೋ ವಿಪರೀತ ಭಯವಾಗಿ ಕೂಡಲೇ ಹೋಗಿ ಬಾಗಿಲು ತೆಗೆದ ತಕ್ಷಣ ಎಲ್ಲರೂ ಆಚೆ ಓಡಿ ಬಂದರು. ಅವರ ಅವಸ್ಥೆ ನೋಡಿದರೆ ಯಾವುದೋ ನಿಜವಾದ ದೆವ್ವವೇ ಅಟಾಕ್ ಮಾಡಿದ ಹಾಗಿತ್ತು. ನಾನು ತಂಡದವರಿಗೆ ಇವರನ್ನು ಸಮಾಧಾನ ಮಾಡಿ ನಾನು ಹೋಗಿ ಆ ವಿಕಾಸ್ ನನ್ನು ವಿಚಾರಿಸಿ ಬರುತ್ತೇನೆ. ಅವನದು ಯಾಕೋ ವಿಪರೀತ ಆಯ್ತು ಮೊದಲು ಅವನನ್ನು ಶೋ ಇಂದ ಆಚೆ ಕಳುಹಿಸೋಣ ಎಂದು ಬಂಗಲೆಯ ಒಳ ಹೋದೆ.

ಸ್ವಲ್ಪ ಹೊತ್ತು ಎಲ್ಲ ಕಡೆ ಹುಡುಕಾಡಿದೆ. ಆದರೆ ಎಲ್ಲೂ ವಿಕಾಸ್ ಕಾಣಲಿಲ್ಲ. ವಿಕಾಸ್ ವಿಕಾಸ್ ಎಂದು ಎಷ್ಟೇ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಅಷ್ಟರಲ್ಲಿ ಚಿತ್ರ ವಿಚಿತ್ರ ಶಬ್ಧಗಳು ಬರಲು ಶುರುವಾದವು ನನಗ್ಯಾಕೋ ಇಲ್ಲಿ ನಿಜವಾಗಿಯೂ ದೆವ್ವ ಇದೆ ಎಂದುಕೊಂಡು ಆಚೆ ಬರಲು ಬಾಗಿಲ ಬಳಿ ಬಂದರೆ ಬಾಗಿಲು ಮುಚ್ಚಿಕೊಂಡಿತ್ತು ಎಷ್ಟೇ ಪ್ರಯತ್ನ ಮಾಡಿದರೂ ಬಾಗಿಲು ತೆರೆಯಲಿಲ್ಲ. ಹಿಂದಿನ ಬಾಗಿಲಿನಿಂದ ಆಚೆ ಬರೋಣ ಎಂದು ಹಿಂತಿರುಗಿದೆ. ಅಷ್ಟರಲ್ಲಿ....

ಸಾಕು ಮಾಡು ಮುಂದಿನದು ಎಲ್ಲ ನಮಗೆ ಗೊತ್ತು ಎಂದು ತಂಡದ ಸದಸ್ಯರು ಎಲ್ಲರೂ ಅವರವರ ಕೊಂಬೆಗೆ ನೇತಾಡಲು ಹೋದರು. ನಾನೂ ಮತ್ತು ವಿಕಾಸ್ ನಮ್ಮ ಕೊಂಬೆಗೆ ನೇತಾಡಲು ಬಂದು ಆ ಬಂಗಲೆಯ ಕಡೆ ನೋಡುತ್ತಿದ್ದೆವು.....

 


Rating
No votes yet

Comments