"ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೧)

"ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೧)

 ಈ ಸರಣಿಯ ಹಿಂದಿನ ಲೇಖನ "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೩) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AC-%E0%B3%A9/20/04/2012/36459
==================================================================================

ಪರಿಚಯ

    ಹಿಂದೂ ತತ್ವಶಾಸ್ತ್ರದಲ್ಲಿ ಯಾವುದಾದರೂ ಪದ್ದತಿಯಲ್ಲಿ ಗ್ರಂಥ ಕರ್ತೃವಿಗಿಂತ ಆ ಗ್ರಂಥವೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ಅದು 'ಮೀಮಾಂಸಾ' ದರ್ಶನ ಮಾತ್ರವೇ. ಇದನ್ನು 'ಪೂರ್ವಮೀಮಾಂಸ ದರ್ಶನ'ವೆಂದೂ ಕರೆದಿದ್ದಾರೆ; ಇದು ಪ್ರಾಥಮಿಕವಾಗಿ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಕ್ಲಿಷ್ಟವಾದ ಯಜ್ಞ-ಯಾಗಾದಿಗಳ ವಿಧಿ-ವಿಧಾನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದನ್ನು ಕ್ರಮಬದ್ಧವಾಗಿ ತಿಳಿಸಿಕೊಡುತ್ತದೆ.

ವೈದಿಕ ವಿಧಿ-ವಿಧಾನಗಳು ನಂಬುವುದೇನೆಂದರೆ:
(೧) 'ಆತ್ಮ' ಎನ್ನುವ ವಸ್ತುವೊಂದು ಇದ್ದು; ಅದು ದೇಹದ ಮರಣವನ್ನು ಅಧಿಗಮಿಸಿ ನಾವು ಮಾಡಿದ ಯಜ್ಞಯಾಗಾದಿಗಳ ಫಲವನ್ನು ಸ್ವರ್ಗದಲ್ಲಿ ಅನುಭವಿಸುತ್ತದೆ.
(೨) ಅಗೋಚರ ಶಕ್ತಿಯೆನ್ನುವುದೊಂದಿದ್ದು ಅದು ಯಜ್ಞಯಾಗಾದಿಗಳ ಪರಿಣಾಮವನ್ನು ಜೋಪಾನವಾಗಿ ಭದ್ರಪಡಿಸುತ್ತದೆ.
(೩) ವೇದಗಳು 'ಅಸತ್ಯ'ವಲ್ಲ
(೪) ಈ ಪ್ರಪಂಚವು ನಿಜವಾದುದು;
(೫) ನಮ್ಮ ಜೀವನ ಮತ್ತು ನಾವು ಇಲ್ಲಿ ಕೈಗೊಂಡ ಕಾರ್ಯಗಳು ನಿಜ ಅವು ಕೇವಲ ಸ್ವಪ್ನದಂತಲ್ಲ.

ಮೂಲ ಕೃತಿಗಳು

    ಜೈಮಿನಿ (ಕ್ರಿ.ಶ. ೨೦೦) ವಿರಚಿತ 'ಮೀಮಾಂಸಾಸೂತ್ರಾ' ಗ್ರಂಥವೇ ಈ ಪದ್ಧತಿಗೆ ಮೂಲ ಗ್ರಂಥ. ಅದು ಒಂದು ಬೃಹದ್ಗ್ರಂಥವಾಗಿದ್ದು ಅದರಲ್ಲಿ ೨೫೦೦ ಸೂತ್ರಗಳನ್ನೊಳಗೊಂಡ ೧೨ ಅಧ್ಯಾಯಗಳು ಮತ್ತು ೬೦ ಉಪವಿಭಾಗಗಳು ಇವೆ. ಶಬರ ಸ್ವಾಮಿನ್ (ಕ್ರಿ.ಶ.೪೦೦) ಬರೆದ 'ಭಾಷ್ಯ'ವೇ ಮೀಮಾಂಸ ಸೂತ್ರಗಳಿಗೆ ಅಧಿಕೃತ ವ್ಯಾಖ್ಯಾನವನ್ನು ಕೊಡುತ್ತದೆ. ಶಬರ ಭಾಷ್ಯಕ್ಕೆ ಎರಡು ಟೀಕಾಗ್ರಂಥಗಳಿವೆ. ಪ್ರಭಾಕರ(ಕ್ರಿ.ಶ. ೬೫೦) ವಿರಚಿತ ಇನ್ನೂ ಕೈಬರಹದ ರೂಪದಲ್ಲಿ ಲಭ್ಯವಿರುವ 'ಬೃಹತಿ' ಗ್ರಂಥವು ಮೊದಲನೆಯದು. ಕುಮಾರಿಲ ಭಟ್ಟ(ಕ್ರಿ.ಶ. ೭೦೦)ನು ಮೂರು ಭಾಗಗಳಲ್ಲಿ ಬರೆದ; 'ಶ್ಲೋಕವಾರ್ತಿಕ', 'ತಂತ್ರವಾರ್ತಿಕ' ಮತ್ತು 'ಟಪ್ಟೀಕಾ' ಎರಡೆನೆಯದು. ಶಾಲಿಕನಾಥ(ಪ್ರಭಾಕರನ ಶಿಷ್ಯ)ನ 'ಪ್ರಕರಣಪಂಚಿಕ', ಪಾರ್ಥಸಾರಥಿ(ಕ್ರಿ.ಶ. ೯೦೦)ಯ 'ಶಾಸ್ತ್ರದೀಪಿಕ', ಮಾಧ್ವ ವಿದ್ಯಾರಣ್ಯ(ಕ್ರಿ.ಶ. ೧೩೫೦) ವಿರಚಿತ 'ನ್ಯಾಯಮಾಲಾವಿಸ್ತಾರ' ಮತ್ತು ಲೌಗಾಕ್ಷಿ ಭಾಸ್ಕರ(೧೭ನೇ ಶತಮಾನ)ನ  'ಅರ್ಥಸಂಗ್ರಹ' ಈ ದರ್ಶನದ ಬಗ್ಗೆ ಲಭ್ಯವಿರುವ ಇತರೇ ಕೃತಿಗಳು.
   
ಜ್ಞಾನದ ಬಗೆಗಿನ ಸಿದ್ಧಾಂತ

    ವೇದಗಳ ಅಂತಿಮ ಪ್ರಭುತ್ವವನ್ನು ಸ್ಥಾಪಿಸಲು 'ಮೀಮಾಂಸ ದರ್ಶನ'ವು ಒಂದು ವಿವರವಾದ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದೆ ಮತ್ತು ಇದನ್ನು ಇತರೇ ದರ್ಶನಗಳ ಪ್ರತಿಪಾದಕರು; ಅದರಲ್ಲೂ ವಿಶೇಷವಾಗಿ 'ವೇದಾಂತ ದರ್ಶನ'ಕಾರರು ಕೂಡ ಒಪ್ಪಿಕೊಂಡಿದ್ದಾರೆ.

    ಯಾವುದೇ ಒಂದು ಜ್ಞಾನವು ಮಾನ್ಯತೆಯನ್ನು ಗಳಿಸಬೇಕಾದರೆ ಅದು ಮೂರು ನಿಯಮಗಳನ್ನು ಪೂರೈಸಬೇಕಾಗುತ್ತದೆ. ಅವೆಂದರೆ:
೧) ಅದು ಪೂರ್ವದಲ್ಲಿ ಗೊತ್ತಿಲ್ಲದ ಹೊಸದೊಂದು ಮಾಹಿತಿಯನ್ನು ಹೊರಹಾಕಬೇಕು.
೨) ಅದು ಪ್ರಚಲಿತವಿರುವ ಯಾವುದಾದರೂ ಜ್ಞಾನದಿಂದ ಸುಳ್ಳೆಂದು ನಿರೂಪಿತವಾಗಬಾರದು.
೩) ಆ ಜ್ಞಾನವನ್ನು ಉಂಟು ಮಾಡುವ ಪರಿಸ್ಥಿತಿಗಳು ದೋಷಮುಕ್ತವಾಗಿರಬೇಕು.  

    'ಮೀಮಾಂಸ'ವು ಎರಡು ವಿಧವಾದ ಜ್ಞಾನವನ್ನು ಒಪ್ಪಿಕೊಳ್ಳುತ್ತವೆ: 'ಪ್ರತ್ಯಕ್ಷ' (ತಕ್ಷಣದ್ದು) ಮತ್ತು 'ಪರೋಕ್ಷ'(ತದನಂತರದ್ದು). 'ಪರೋಕ್ಷ ಜ್ಞಾನ'ವು ಐದು ಬಗೆಯದಾಗಿರುತ್ತದೆ; 'ಅನುಮಾನ'(ನಿಷ್ಕರ್ಷೆ/ಕ್ರಮಬದ್ಧ ಜ್ಞಾನ), 'ಉಪಮಾನ'(ಹೋಲಿಕೆ), 'ಶಬ್ದ'(ನುಡಿ ಪ್ರಮಾಣ) - ಇದನ್ನು 'ಆಪ್ತವಾಕ್ಯ'(ನಂಬಲರ್ಹ ವ್ಯಕ್ತಿಯ ಹೇಳಿಕೆ)ವೆಂದೂ ಕರೆದಿದ್ದಾರೆ, 'ಅರ್ಥಾಪತ್ತಿ' (ಸಮರ್ಥನೆ ಅಥವಾ ಅನಿಸಿಕೆ) ಮತ್ತು 'ಅನುಪಲಬ್ಧಿ'(ಮನಗಾಣದೇ ಇರುವುದು/ಗ್ರಹಿಸಲಾಗದ್ದು). ಇವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು:

    'ಪ್ರತ್ಯಕ್ಷ' (ನೇರವಾದ ಅಥವಾ ತಕ್ಷಣದ ಗ್ರಹಿಕೆ/ತಿಳಿವು/ಅನುಭವ)ವು ಎರಡು ವಿಧವಾದ ಹಂತಗಳಲ್ಲಿ ಅಭಿವೃದ್ಧಿಯಾಗುತ್ತದೆ. ಜ್ಞಾನೇಂದ್ರಿಯವೊಂದು ಯಾವುದಾದರೂ ಒಂದು ವಸ್ತುವಿನ ಸಂಪರ್ಕಕ್ಕೆ ಬಂದ ಕೂಡಲೇ, ಏನೋ ಇದೆ ಎನ್ನುವುದರ ಬಗ್ಗೆ ಸಾಮಾನ್ಯ ತಿಳುವಳಿಕೆ ಉಂಟಾಗುತ್ತದೆ. ಇದನ್ನು 'ನಿರ್ವಿಕಲ್ಪಪಕ-ಪ್ರತ್ಯಕ್ಷ' ಎಂದು ಕರೆಯುತ್ತಾರೆ. ಮುಂದಿನ ಹಂತದಲ್ಲಿ, ಆ ವಸ್ತುವಿನ ಎಲ್ಲಾ ವಿವರಗಳು ಪೂರ್ವಾನುಭವದ ಜ್ಞಾನದಿಂದ ತಿಳಿಯಲ್ಪಡುತ್ತದೆ. ಇದನ್ನು 'ಸವಿಕಲ್ಪಕ-ಪ್ರತ್ಯಕ್ಷ' ಎನ್ನುತ್ತಾರೆ.

    ನಾವು ಮೂಲ ವಸ್ತುವಿಗೆ ಸಂಭಂದಿಸಿದ 'ಲಿಂಗ' ಅಥವಾ 'ಸಂಕೇತ'ವನ್ನು ನೋಡಿದಾಗ, 'ಅನುಮಾನ'(ಕ್ರಮಬದ್ಧ ಜ್ಞಾನ)ವು ಆ ವಸ್ತುವಿನ ತಿಳುವಳಿಕೆಯನ್ನು ಪರೋಕ್ಷವಾಗಿ ಒದಗಿಸುತ್ತದೆ. ಉದಾಹರಣೆಗೆ, ದೂರದ ಬೆಟ್ಟದ ಮೇಲೆ ಹೊಗೆಯನ್ನು ನೋಡಿ ಅಲ್ಲಿ ಬೆಂಕಿಯಿದೆಯೆಂದು ತೀರ್ಮಾನಿಸುತ್ತೇವೆ (ಬೆಂಕಿಯನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಕೂಡ); ಏಕೆಂದರೆ ನಮ್ಮ ಪೂರ್ವ ಅನುಭವದಲ್ಲಿ ಹೊಗೆಯು ಅವಿನಾಭಾವವಾಗಿ ಬೆಂಕಿಯ ಜೊತೆಯಲ್ಲಿರುವುದನ್ನು ಗಮನಿಸಿರುತ್ತೇವಾದ್ದರಿಂದ.

    'ಉಪಮಾನ'(ಹೋಲಿಕೆ)ವು ಇನ್ನೊಂದು ಜ್ಞಾನದ ಮೂಲ. ಒಂದು ಮೂಗಿಲಿಯನ್ನು ನೋಡಿದ ನಂತರ ಅದು ತಾನು ಹಿಂದೆ ನೋಡಿದ ಇಲಿಯಂತೆ ಇರುವುದನ್ನು ನೆನೆಪಿಸಿಕೊಳ್ಳುತ್ತಾನೆ. ಅಗ ಅವನ ಅರಿವಿಗೆ ತಾನು ಗ್ರಹಿಸಿದ ಮೂಗಿಲಿಯು, ಇಲಿಯಂತಿರುವುದು ಕಂಡುಬರುವುದು. ಈ ರೀತಿಯ ಜ್ಞಾನವು ನಮಗೆ ಉಪಮಾನದಿಂದ ಲಭ್ಯವಾಗುತ್ತದೆ.

    ’ಶಬ್ದ'(ನುಡಿ/ವಾಕ್ಯ ಸಾಕ್ಷಿ)ವು ಮುಂದಿನ ಜ್ಞಾನದ ಮೂಲ. 'ಮೀಮಾಂಸ ದರ್ಶನ'ವು ವೇದಗಳ ನಿರ್ವಿವಾದಿತ ಪ್ರಾಮಾಣ್ಯವನ್ನು ನಿರೂಪಿಸ ಬೇಕಾದುದರಿಂದ; ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದೆ.

    ನಂಬಲರ್ಹ ವ್ಯಕ್ತಿಯ ನುಡಿಗಳು ಸತ್ಯವೆಂದು ಗಣಿಸಲ್ಪಡುತ್ತವೆ, ಇದನ್ನೇ 'ಆಪ್ತವಾಕ್ಯ'ವೆಂದಿದ್ದಾರೆ.

    'ಶಬ್ದ' ಪ್ರಮಾಣವು ಎರಡು ರೀತಿಯದಾಗಿರುತ್ತದೆ; ಪೌರುಷೇಯ (ವ್ಯಕ್ತಿಗತ ಅಥವಾ ಆಪ್ತವಾಕ್ಯ) ಮತ್ತು ಅಪೌರುಷೇಯ (ಮಾನವಾತೀತ). ಎರಡನೆಯದು  ವೇದಗಳನ್ನು ಸೂಚಿಸುತ್ತದೆ ಏಕೆಂದರೆ ಅವು ಮಾನವ  ಮಾತ್ರರಿಂದ ಸೃಷ್ಟಿಸಲ್ಪಟ್ಟಿಲ್ಲ. ವೇದಗಳು ಅಂತಿಮ ಪ್ರಮಾಣಗಳಾಗಿದ್ದು ಅವು ಕಟ್ಟಳೆಗಳನ್ನು ನಿರ್ದೇಶಿಸುವ ಗ್ರಂಥಗಳಾಗಿವೆ ಮತ್ತು ಅವು ನಮಗೆ ಮನಸ್ಸು ಹಾಗು ಇಂದ್ರಿಯಗಳಿಗೆ ಗೋಚರವಾಗದ ವಿಷಯಗಳನ್ನು ತಿಳಿಸುತ್ತವೆ ಮತ್ತು ಅಜ್ಞಾನವನ್ನು ಪರಿಹರಿಸುತ್ತವೆ. ಮತ್ತು ಅವುಗಳ ಮೂಲ ಉದ್ದೇಶ ಹಾಗು ಗುರಿ ಯಜ್ಞಯಾಗಾದಿಗಳ ಕ್ರಿಯೆಯನ್ನು ಪ್ರಚುರಪಡಿಸುವುದೇ ಆಗಿದೆ.

    ವೇದಗಳು ನಿತ್ಯವಾಗಿದ್ದು, ಮುದ್ರಿತ ಪುಸ್ತಕ ಅಥವಾ ಬಾಯಿಂದ ಬಾಯಿಗೆ ಹರಿದ ಮಂತ್ರಗಳಾಗಿರದೆ ಅವುಗಳಲ್ಲಿ ನಿತ್ಯ ಸತ್ಯವಾದ ಬೋಧನೆಗಳಿವೆ. ಈ ಬೋಧನೆಗಳನ್ನು ಋಷಿ ಮುನಿಗಳು ಪ್ರತಿ ಯುಗದಲ್ಲಿಯೂ ನಮಗೆ ತಿಳಿಸಿ ಕೊಡುತ್ತಾರೆ.

    ವೇದಗಳು ಮುಖ್ಯವಾಗಿ ಯಜ್ಞ-ಯಾಗಾದಿಗಳು ಮತ್ತು ಅವಕ್ಕೆ ಸಂಭಂದಪಟ್ಟ ವಿಧಾನಗಳನ್ನು ಆದೇಶಿಸುವುದರಿಂದ ('ವಿಧಿ'ಸುವುದರಿಂದ); ಯಾವ ವಾಕ್ಯಗಳಲ್ಲಿ ಆದೇಶಾತ್ಮಕ ಕ್ರಿಯಾಪದಗಳು - 'ವಿಧಿಲಿನ್' ಅಡಕವಾಗಿಯೋ (ಉದಾಹರಣೆಗೆ; "ಸ್ವರ್ಗಕಾಮೋ ಯಜೇತ" - ಸ್ವರ್ಗವನ್ನು ಭಯಸುವವನು ಯಾಗವನ್ನು ಮಾಡಬೇಕು ಎನ್ನುವ ಆದೇಶಾತ್ಮಕ ಭಾವನೆ) ಅಂತಹವುಗಳನ್ನು ಮಾತ್ರ 'ವಿಧಿ'ಗಳೆಂದು ಅಥವಾ 'ಅಧಿಕಾರಯುತ'ವಾದವುಗಳೆಂದು ಪರಿಗಣಿಸಿ ಉಳಿದವುಗಳನ್ನು ಅವಕ್ಕೆ ಪೂರಕವಾಗಿರುವ ವಾಕ್ಯಗಳೆಂದು ಪರಿಗಣಿಸ ಬೇಕು. ಈ ರೀತಿಯ ಕ್ರಿಯಾಪದಗಳು ಕೇಳುಗರಲ್ಲಿ ತಾವು ಯಾಗವನ್ನು ಮಾಡಬೇಕು ಎನ್ನುವ  ಬಯಕೆಯನ್ನುಂಟು ಮಾಡುವ ಅಂತಃಶಕ್ತಿಯಿಂದ ಕೂಡಿರುತ್ತವೆ. ಇದನ್ನೇ 'ಭಾವನಾ' ಎಂದು ಹೇಳುತ್ತಾರೆ. ಬಯಕೆಯನ್ನು ಅಡಕವಾಗಿಸಿಕೊಂಡ ವೇದದ ನುಡಿಗಳನ್ನು 'ಶಬ್ದಿಭಾವನ' (ಶಬ್ದ=ನುಡಿ) ಎನ್ನುತ್ತಾರೆ. ಈ ರೀತಿಯ ನುಡಿಗಳನ್ನು ಕೇಳಿದಾಕ್ಷಣ, ಕೇಳಿದವನಿಗೆ ಅದರಿಂದ ಪ್ರಯೋಜನವನ್ನು ಪಡೆಯುವ ಉತ್ಕಟ ಬಯಕೆಯೂ ಉಂಟಾಗುತ್ತದೆ. ಈ ರೀತಿಯ ಬಯಕೆಯುಂಟಾದಾಗ ಅದನ್ನು 'ಅರ್ಥಿಭಾವನ' (ಅರ್ಥಿ=ಉಪಯೋಗ/ಪ್ರಯೋಜನ) ಎಂದು ಕರೆಯಲಾಗಿದೆ.

    ಮೇಲೆ ಹೇಳಿರುವ ವಿಷಯವನ್ನು ಸ್ಪಷ್ಟವಾಗಿ ಅರಿಯಬೇಕೆಂದರೆ ವೇದದಲ್ಲಿನ ವಾಕ್ಯಗಳನ್ನು ಸರಿಯಾದ ಅರ್ಥ ಮತ್ತು ವಿಶ್ಲೇಷಣೆಗಳ ಮೂಲಕ ತಿಳಿದುಕೊಳ್ಳಬೇಕು. ಇದಕ್ಕಾಗಿ ಮೀಮಾಂಸವು ಆರು ಹಂತಗಳನ್ನು ಸೂಚಿಸುತ್ತದೆ; 1) ಉಪಾಕರ್ಮ(ಪ್ರಾರಂಭ), 2) ಉಪಸಂಹಾರ(ತೀರ್ಮಾನ), 3) ಅಭ್ಯಾಸ(ಒತ್ತುಕೊಡುವುದಕ್ಕಾಗಿ ಪುನರುಚ್ಛಾರ), 4) ಅಪೂರ್ವತ (ಹಿಂದೆ ಬೇರೆ ಯಾವುದೇ ರೀತಿಯಿಂದ ತಿಳಿಯಲಾಗದ್ದು), 5) ಫಲ (ಪ್ರಯೋಜನ)  ಅಥವಾ ಅರ್ಥವಾದ (ಕೇವಲ ಪ್ರಶಂಸೆ) 6)  ಮತ್ತು ಉಪಪತ್ತಿ (ತರ್ಕ ಮತ್ತು ಕಾರಣ).
   
    ಒಮ್ಮೆ ಸರಿಯಾದ ಅರ್ಥವು ಸ್ಥಿರವಾದಲ್ಲಿ, ವಿಧಿಗಳನ್ನು ಕೈಗೊಳ್ಳಬಹುದು.

    'ಅರ್ಥಾಪತ್ತಿ'(ಸಮರ್ಥನೆ ಅಥವಾ ಅನಿಸಿಕೆ)ಯು, ಸಾಮಾನ್ಯವಾಗಿ ಅಸಮಂಜಸವೆನಿಸುವ ಒಂದು ಅರ್ಥೈಸಲಾಗದ ಸಂಗತಿಯನ್ನು ವಿವರಿಸಲು ಅನಿವಾರ್ಯ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಹಗಲಿನಲ್ಲಿ ಏನನ್ನೂ ತಿನ್ನದೇ ಇದ್ದರೂ ಕೂಡ ದಪ್ಪನಾಗುತ್ತಿರುವುದು ಕಂಡುಬಂದರೆ, ನಾವು ಅವನು ರಾತ್ರಿಯಲ್ಲಿ ರಹಸ್ಯವಾಗಿ ತಿನ್ನುತ್ತಿರಬೇಕೆಂದು ಊಹಿಸಿ ನಿರ್ಭಯವಾಗಿ ಸಮರ್ಥಿಸಬಹುದು. 'ಅರ್ಥಾಪತ್ತಿ'ಯಿಂದ ಲಭ್ಯವಾದ ಜ್ಞಾನವು ಪ್ರತ್ಯೇಕವಾಗಿರುವುದು ಏಕೆಂದರೆ ಈ ರೀತಿಯ ತಿಳುವಳಿಕೆಯು ನಮಗೆ ಬೇರೆ ಯಾವುದೇ ವಿಧಾನದಿಂದ ಉಂಟಾಗುವುದಿಲ್ಲ.

    'ಅನುಪಲಬ್ಧಿ'(ಗ್ರಹಿಸಲಾಗದ್ದು) ಕೂಡ ಜ್ಞಾನವನ್ನು ಪಡೆಯುವ ಮೂಲವೆಂದು ಒಪ್ಪಲಾಗಿದೆ; ಏಕೆಂದರೆ ಅದು ತಕ್ಷಣವೇ ನಮಗೆ ಇಲ್ಲದಿರುವ ವಸ್ತುವಿನ ಬಗ್ಗೆ ತಿಳುವಳಿಕೆಯನ್ನುಂಟು ಮಾಡುತ್ತದೆ. ಮೇಜಿನ ಮೇಲೆ ಈ ಮುಂಚೆ ಇದ್ದ ಒಂದು ಜಾಡಿಯ ಇಲ್ಲದಿರುವುದು ಕಂಡು ಬಂದರೆ; ಅದರ ಇಲ್ಲದಿರುವಿಕೆಯು ಗೋಚರವಾಗುತ್ತದೆ.

    ಪ್ರಾಸಂಗಿಕವಾಗಿ, ಮೀಮಾಂಸ ದರ್ಶನಕಾರರು ದೋಷಗಳು ಹೇಗೆ ಒಳನುಸುಳತ್ತವೆಂದು ತಮ್ಮದೇ ಆದ ವಿವರಣೆಗಳನ್ನು ಮತ್ತು ಸಿದ್ಧಾಂತಗಳನ್ನು ಕೊಡುತ್ತಾರೆ. ಇದು ಎರಡು ರೀತಿಯ ಅಭಿಪ್ರಾಯಗಳಿಗೆ ಎಡೆ ಮಾಡಿ ಕೊಟ್ಟಿದೆ.

    ಮಸುಕಾದ ಬೆಳಕಿನಲ್ಲಿ ಹಗ್ಗವನ್ನು ಹಾವೆಂದು ಗ್ರಹಿಸಿದಾಗ; ಈಗ ನೋಡುತ್ತಿರುವ ಹಗ್ಗ ಮತ್ತು ಈ ಹಿಂದೆ ನೋಡಿದ ಹಾವು ಎರಡೂ ನಿಜವಾದವು; ಇಲ್ಲಿ  ನೆನಪಿನ ಶಕ್ತಿಯ ಅಚಾತುರ್ಯದಿಂದ (ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ) ಎರಡು ವಸ್ತುಗಳ ಬಗೆಗಿನ ಜ್ಞಾನದ ಮಿಶ್ರಣವಾಗಿ ಅದು ಭಯದ ಪ್ರಕ್ರಿಯೆಗೆ ಕಾರಣವಾಯಿತು. ಇದನ್ನು 'ಅಖ್ಯಾತಿವಾದ'(ಮಿಥ್ಯಾ ಜ್ಞಾನದ ಅಲ್ಲಗಳೆಯುವಿಕೆ ಅಥವಾ ಭ್ರಮೆಯಿಂದುಂಟಾದ ತಿಳುವಳಿಕೆಯನ್ನು ನಿರಾಕರಿಸುವುದು) ಎಂದು ಕರೆಯುತ್ತಾರೆ.

    ಎರಡನೆಯದಾದ 'ವಿಪರೀತಖ್ಯಾತಿವಾದ'ವು, ದೋಷವು ಎರಡು ನಿಜವಾದ ಆದರೆ ಪ್ರತ್ಯೇಕವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು ಕಲ್ಪಿಸುವುದರಲ್ಲಿದೆ ಎಂದು ಪ್ರತಿಪಾದಿಸುತ್ತದೆ. (ಎರಡು ಬೇರೆ ಬೇರೆಯಾದ ಆದರೆ ನಿಜವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು ಕಲ್ಪಿಸುವುದರಲ್ಲಿ ದೋಷವು ಅಡಗಿದೆ ಎಂದು ಎರಡನೆಯದಾದ 'ವಿಪರೀತಖ್ಯಾತಿ'ವಾದವು ಪ್ರತಿಪಾದಿಸುತ್ತದೆ.)

                                                                                                                             ಮುಂದುವರಿಯುವುದು............
============================================================================
    ವಿ.ಸೂ.: ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Mimamsa Darshanaನದ ೫೯ ರಿಂದ ೬೬ನೆಯ ಪುಟದ ಅನುವಾದದ ಭಾಗ.
        ಚಿತ್ರಕೃಪೆ: ಗೂಗಲ್

       ಈ ಸರಣಿಯ ಮುಂದಿನ ಲೇಖನ "ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ: http://sampada.net/blog/%E0%B2%AE%E0%B3%80%E0%B2%AE%E0%B2%BE%E0%B2%82%E0%B2%B8-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AD-%E0%B3%A8/30/04/2012/36541

=============================================================================

Rating
No votes yet

Comments