ನಾ ನಿನ್ನೊಳನ್ಯ ಬೇಡುವುದಿಲ್ಲ
ನಿನ್ನಡಿಗಳಲೆ ಮನವು ನಿಂತಿಹು
-ದಿನ್ನು ಕೊಂಡಾಡಿಹುದು ನಾಲಗೆ
ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ;
ನಿನ್ನ ಪೂಜೆಯ ಮಾಳ್ಪ ಕೈಗಳು
ನಿನ್ನ ನೆನಹಲೆ ಬುದ್ಧಿ ಕಣ್ಣಿರ-
ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶಿವನೇ!
ಸಂಸ್ಕೃತ ಮೂಲ (ಆದಿ ಶಂಕರರ ಶಿವಾನಂದ ಲಹರಿ, ಶ್ಲೋಕ ೭):
ಮನಸ್ತೇ ಪಾದಾಬ್ಜೇ ನಿವಸತು ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ |
ತವ ಧ್ಯಾನೇ ಬುದ್ಧಿರ್ನಯನಯುಗಲಂ ಮೂರ್ತಿವಿಭವೇ
ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ ||
ಈ ಹಿಂದೆ ನಾನು ಮಾಡಿರುವ ಶಂಕರಾಚಾರ್ಯರ ಕೆಲವು ಶ್ಲೋಕಗಳ ಅನುವಾದಗಳನ್ನು ಇಲ್ಲಿ ಚಿಟಕಿಸಿ ಓಡಬಹುದು
-ಹಂಸಾನಂದಿ
ಕೊ: ಇವತ್ತು ವೈಶಾಖ ಶುದ್ಧ ಪಂಚಮಿ - ಶಂಕರ ಜಯಂತಿ ; ಕ್ರಿ.ಶ:೭೮೮ ರಲ್ಲಿ ಆದಿಶಂಕರರು ಹುಟ್ಟಿದ ದಿವಸ. ಹಾಗಾಗಿ ಅವರ ಒಂದು ಪದ್ಯವನ್ನು ಹೊಸದಾಗಿ ಅನುವಾದಿಸಬೇಕೆನ್ನಿಸಿತು. ಅದಕ್ಕಾಗಿ ಈ ಷಟ್ಪದಿ.
ಕೊ.ಕೊ: ನಾ ನಿನ್ನೊಳನ್ಯ ಬೇಡುವುದಿಲ್ಲ (ನಾ ನಿನಗೇನು ಬೇಡುವುದಿಲ್ಲ ಅನ್ನುವ ಪಾಠಾಂತರವೂ ಇದೆ) ಅನ್ನುವುದು ಶ್ರೀಪಾದರಾಯರ ಒಂದು ಪ್ರಸಿದ್ಧ ರಚನೆ. ಅದರ ಚರಣಗಳಲ್ಲಿ ಬರುವ ಭಾವಕ್ಕೂ, ಈ ಪದ್ಯದ ಭಾವಕ್ಕೂ ಬಹಳ ಹೋಲಿಕೆ ಕಂಡಿದ್ದರಿಂದ ಆ ತಲೆಬರಹ ಕೊಟ್ಟಿರುವೆ.
ಕೊ.ಕೊ.ಕೊ: ಈ ಬಾರಿ ಚಿತ್ರ ಎಲ್ಲಿಂದ ತೆಗೆದುಕೊಂಡಿದ್ದು ಎಂಬ ಮಾಹಿತಿ ಮರೆತಿದ್ದೇನೆ. ಕ್ಷಮೆ ಇರಲಿ.
Rating
Comments
ಉ: ನಾ ನಿನ್ನೊಳನ್ಯ ಬೇಡುವುದಿಲ್ಲ