ಮನುಜನ ಕಾಡುತ್ತಿರುವ ರಕ್ಕಸರು!

ಮನುಜನ ಕಾಡುತ್ತಿರುವ ರಕ್ಕಸರು!

ಹಲವಾರು ಯುಗಗಳಿಂದ ಭೂಮಿಯಲ್ಲಿ ರಕ್ಕಸರ ಅಥವಾ ರಕ್ಕಸನಂಥವರ ಕಾಟ ಹೇಳತೀರದು. ಮೊದಲಿಗೆ ಹಲವು ಸನ್ನಿವೇಶಗಳನ್ನು ನೋಡಿ ಬರೋಣ. ಆ ನಂತರ ಈ ಲೇಖನದ ಉದ್ದೇಶವನ್ನು ಹೇಳುತ್ತೇನೆ. ನಾ ಹೊಸೆದಿರುವ ಸಂಬಂಧ ಕೇವಲ ಕಾಲ್ಪನಿಕ.

 

=====

ಕಂಸ ಮಹಾರಾಜ, ಅಶರೀರವಾಣಿಯಲ್ಲಿ ತನ್ನ ಸಾವಿನ ಬಗ್ಗೆ ಕೇಳಿದಾಗಿನಿಂದ ಸದಾ ಸಾವನ್ನು ಗೆಲ್ಲಲೇ ಯೋಚಿಸುತ್ತಿದ್ದ. ಅದಕ್ಕಾಗಿ ಹೂಡಿದ ತಂತ್ರಗಳೆಷ್ಟೋ? ಬಾಲಕೃಷ್ಣನನ್ನು ಕೊಲ್ಲಲು ಬಳಸಿಕೊಂಡ ಪ್ರಮುಖ ಅಸ್ತ್ರಗಳಲ್ಲಿ ಶಕಟಾಸುರ ಮತ್ತು ಪೂತನಿ ಎದ್ದು ಕಾಣುತ್ತಾರೆ. 

 

ಕಂಸ ಆಜ್ಞ್ನೆಯಂತೆ ಬಂಡಿಯ ರೂಪದ ಶಕಟಾಸುರ ಆಟವಾಡುತ್ತಿದ್ದ ಬಾಲನ ಬಳಿ ಧಾವಿಸಿ ಬರುತ್ತಿದ್ದಂತೆ, ಬಾಲಕೃಷ್ಣನು ಬಂಡಿಯನ್ನು ಒದ್ದು ಪುಡಿ ಪುಡಿ ಮಾಡುತ್ತಾನೆ. ಶಕಟಾಸುರ ಸತ್ತು ಬೀಳುತ್ತಾನೆ. ಸತ್ತವನನ್ನು ಹೊತ್ತೊಯ್ದು ತರುತ್ತೇನೆಂದು ವಚನಕೊಟ್ಟು, ಕಳೆದುಕೊಂಡವರ ಪರಿವಾರದಲ್ಲಿ ದು:ಖ ಮೂಡಿಸಬೇಕೆಂದಿದ್ದವನ ಉದ್ದೇಶ ನೆರವೇರಲಿಲ್ಲ. ಶಕಟಾಸುರನ ಅತೃಪ್ತ ದುರಾತ್ಮದ ಛಾಯೆಯೊಂದು ಅಲದಾಡುತ್ತಿತ್ತು.

 

ಶಕಟನಿಂದ ನೆರವೇರದ ಕೆಲಸಕ್ಕೆ ಪೂತನಿಯನ್ನು ನೇಮಿಸುತ್ತಾನೆ ಕಂಸ. ಪೂತನಿಯು ಹಾಲುಣುವ ಕೂಸಿಗೆ ವಿಷದ ಹಾಲನ್ನುಣಿಸಿ ಕೊಲ್ಲಲು ಯತ್ನಿಸುತ್ತಾಳೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದಂತೆ. ಪುಟಾನಿಯ ಮೇಲೆ ಪೂತನಿ !! ಆದರೆ ಲೆಕ್ಕಾಚಾರವೇ ಬೇರೆ ಆಯಿತು. ನೆಡೆದದ್ದೇ ಬೇರೆ. ಆ ಕೂಸ ಸಾಮಾನ್ಯದ್ದಲ್ಲ. ಹಾಲು ಕುಡಿವ ನೆಪದಲ್ಲಿ, ಪೂತನಿಯನ್ನೇ ಕಡಿದು ಕೊಲ್ಲುತ್ತದೆ ಕೂಸು. ಸ್ತನ್ಯಪಾನವ ಮಾಡಿಸಿ ಕೊಲ್ಲಬೇಕೆಂಬ ಅವಳ ಹಂಬಲ ಈಡೇರಲಿಲ್ಲ. ಪೂತನಿಯ ಅತೃಪ್ತ ದುರಾತ್ಮದ ಛಾಯೆಯೊಂದು ಅವಕಾಶಕ್ಕಾಗಿ ಅಲೆದಾಡುತ್ತಿತ್ತು.

 

ಮಗುವಾಗಿ ಕೊಲ್ಲಲಾಗುದದ್ದನ್ನು, ಬಾಲಕನಾಗಿದ್ದಾಗ ಕೊಲ್ಲಲು ನೆಡೆಸಿದ ಪ್ರಯತ್ನದಲ್ಲಿ, ಚಾಣೂರ, ಮುಷ್ಟಿಕರೂ ಸೋತು ಸತ್ತಿದ್ದರು. ಕೃಷ್ಣನು ಜವರಾಯನ ರೂಪದಲ್ಲಿ ತನ್ನ ಮಾವನನ್ನು ಯಮಪುರಿಗೆ ಅಟ್ಟಿದ್ದ. ಜಗತ್ತು ಒಬ್ಬ ಕ್ರೂರಿಯಿಂದ ಮುಕ್ತವಾಯಿತು. ಜನತೆಗೆ ಉಗ್ರಸೇನನಂತಹ ಮಹಾರಾಜ ಮತ್ತೊಮ್ಮೆ ದೊರಕಿದ್ದ. ಆದರೆ ಹಲವಾರು ವರ್ಷಗಳ ಕಾಲ ಭಯಭೀತನಾಗೇ ಬದುಕಿ, ಹಲವಾರು ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದು, ಕೊನೆಗೂ ಸಾವನ್ನು ಗೆಲ್ಲದೆ ಸೋತ ಕಂಸನ ಅತೃಪ್ತ ದುರಾತ್ಮದ ಛಾಯೆಯೊಂದು ಅವಕಾಶಕ್ಕಾಗಿ ಅಲೆದಾಡುತ್ತಿತ್ತು.

 

ಇದಿಷ್ಟೂ ಭಾಗವತ’ವಾದರೆ ಈಗ ಮಹಾಭಾರತ. 

 

ಸೈರಂಧ್ರಿಯ ಅದ್ಬುತ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಮೋಹಿಸುತ್ತಾನೆ ಕೀಚಕ. ಸೈರಂಧ್ರಿಯ ಕೈಯಲ್ಲಿ ಮದಿರೆಯನ್ನು ತರಿಸಿ ಅವಳನ್ನು ಅಡ್ಡಗಟ್ಟುತ್ತಾನೆ. ಸೈರಂಧ್ರಿ ತಪ್ಪಿಸಿಕೊಳ್ಳುತ್ತಾಳೆ. ಒಮ್ಮೆ ಸಭೆಯಲ್ಲೇ ವಿರಾಟ ಮಹಾರಾಜನ ಮುಂದೆ ಅವಳ ಮೇಲೆ ಆಕ್ರಮನ ಮಾಡಲು ಮುಂದಾಗುತ್ತಾನೆ. ಅವನೆಷ್ಟು ಪ್ರಬಲನೆಂದರೆ, ಇದೆಲ್ಲವೂ ಸಭೆಯಲ್ಲೇ ನೆಡೆದರೂ ಯಾರೂ ಸೊಲ್ಲೆತ್ತಲಿಲ್ಲ. ಪ್ರತೀ ಬಾರಿಯೂ ಸೈರಂಧ್ರಿಯು ಅವನಿಂದ ತಪ್ಪಿಸಿಕೊಳ್ಳುವಾಗ, ಅವಳನ್ನು ಪಡೆದೇ ತೀರಬೇಕೆಂದ ಅದಮ್ಯ ಹಂಬಲ ಹೆಚ್ಚುತ್ತಾ ಹೋಗುತ್ತದೆ. ತನ್ನ ಪತಿಗಳು ಗಂಧರ್ವ ಪುರುಷರೆಂದು ಎಚ್ಚರಕೊಟ್ಟರೂ ಲೆಕ್ಕಿಸದೆ ದ್ರೌಪದಿಯ ಹಿಂದೆ ಬೀಳುತ್ತಾನೆ. ಭೀಮನಲ್ಲಿ ದು:ಖ ತೋಡಿಕೊಂಡ ಸೈರಂಧ್ರಿ, ಅವನ ಉಪಾಯದಂತೆ, ಕೀಚಕನನ್ನು ನೃತ್ಯಶಾಲೆಗೆ ಆಹ್ವಾನಿಸುತ್ತಾಳೆ. ಬೃಹನ್ನಳೆಯು ಜೋರಾಗಿ ನೆಡೆಸಿದ್ದ ಮೃದಂಗದ ಅಭ್ಯಾಸದ ಸದ್ದಿನ ನಡುವೆ, ಕಿಚಕನ ಸದ್ದಡಗಿತು. ಉಸಿರು ನಿಂತಿತು. ದ್ರೌಪದಿಯನ್ನು ಮೋಹಿಸಬೇಕೆಂಬ ಆಸೆ ಹೊತ್ತು ಸತ್ತ ಕೀಚಕನ ಅತೃಪ್ತ ಆತ್ಮ ಒಂದು ಅವಕಾಶಕ್ಕಾಗಿ ಕಾದಿತ್ತು.

 

ಬಕಾಸುರ ... ಬಂಡಿ ಅನ್ನವ ತಿನ್ನಬಲ್ಲ ಬಕಾಸುರನನ್ನು ಭೀಕರ ಯುದ್ದದಲ್ಲಿ ಕೊಂದನಾ ಭೀಮಸೇನ. ಹುಲು ಮಾನವರನ್ನು ಹೆದರಿಸಿ ಬೆದರಿಸಿ ಅಂಕೆಯಲ್ಲಿಟ್ಟುಕೊಂಡು, ತನ್ನ ಹೊಟ್ಟೆ ತುಂಬಿಕೊಳ್ಳುತ್ತಿದ್ದ ರಕ್ಕಸನಿಗೆ ಸರಿಯಾದ ಪಾಠ ಕಲಿಸಿದ್ದ ಭೀಮ. ಅವನಿಗೆಂದೇ ತಂದಿದ್ದ ಬಂಡಿ ಅನ್ನವನ್ನು ಅವನ ಮುಂದೆಯೇ ಕೂತು ಉಂಡ ಭೀಮನನ್ನು ಎದುರಿಸಿ ಸೋತಿದ್ದ, ಸತ್ತಿದ್ದ ಆ ಬಕಾಸುರ.  ತನ್ನೂಟವನ್ನು ತನ್ನ ಮುಂದೆಯೇ ತಿಂದು ತೇಗಿದ್ದನ್ನು ಸಹಿಸದ ಬಕಾಸುರನ ಅತೃಪ್ತ ಆತ್ಮ ಒಂದು ಅವಕಾಶಕ್ಕಾಗಿ ಕಾದಿತ್ತು.

 

ರಾಮಾಯಣ ಕಥಾನಕದಲ್ಲಿ ರಾಮ-ಲಕ್ಷ್ಮಣರ ಬಾಣಗಳಿಗೆ ಉತ್ತರವಿಲ್ಲದೆ ಪ್ರಾಣ ನೀಗಿದ ರಕ್ಕಸರು ಹಲವಾರು ...

 

ದೇವಿ ಕಥೆಗಳಲ್ಲಿ ಹಲವಾರು ರಕ್ಕಸರ ಕಥಾನಕಗಳು ಬರುತ್ತದೆ ... ಅದರಲ್ಲಿ ಒಬ್ಬ ರಕ್ತಬೀಜಾಸುರ 

 

ತನ್ನ ದೇಹದಿಂದ ಒಂದು ಹನಿ ರಕ್ತ ನೆಲಕ್ಕೆ ಬಿದ್ದಲ್ಲಿ ಅಲ್ಲೇ ಅವನ ಪ್ರತಿರೂಪದ ಮತ್ತೊಬ್ಬ ಅಸುರ ಹುಟ್ಟುತ್ತಾನೆ. ಇಂತಹ ಅಪರೂಪದ ವರ ಪಡೆದು ಪ್ರಜಾಪೀಡನೆಯಲ್ಲೇ ತೊಡಗಿದ ಅಸುರನಿಗೆ ತಕ್ಕ ಪಾಠ ಕಲಿಸುತ್ತಾಳೆ ಕಾಳಿ ಮಾತೆ. ತನ್ನ ನಾಲಿಗೆಯನ್ನು ಭೂಮಿಯುದ್ದಕ್ಕೂ ಚಾಚಿ ಹನಿ ರಕ್ತವೂ ನೆಲದ ಮೇಲೆ ಬೀಳದಂತೆ ತನ್ನ ನಾಲಿಗೆಯ ಮೇಲೆ ಉದುರಿಸಿಕೊಂಡು ರಕ್ತಬೀಜಾಸುರನನ್ನು ಕೊಂದು ಭೂಮಿಗೆ ನೆಮ್ಮದಿ ತಂದಳಾ ತಾಯಿ. ತಾನು ಪಡೆದ ವರದಿಂದ ಸ್ವೇಚ್ಚೆ ಅನುಭವಿಸಲಾಗದೆ ಪ್ರಾಣ ತೆತ್ತ ಅಸುರನ ಅತೃಪ್ತ ದುರಾತ್ಮದ ಛಾಯೆಯೊಂದು ಅಲೆದಾಡುತ್ತಿತ್ತು.

 

ಸದ್ಯಕ್ಕೆ ರಕ್ಕಸರ ಸಾವಿನ ವೃತ್ತಾಂತ ನಿಲ್ಲಿಸಿ ಆತ್ಮಗಳನ್ನು ಒಮ್ಮೆ ನೋಡಿ ಬರೋಣ.

 

ಬುಸುಗುಡುತ್ತ ಎಲ್ಲೆಲ್ಲೋ ಅಲೆದಾಡುತ್ತಿದ್ದ ಆತ್ಮಗಳು ಯುಗಗಳ ನಂತರ ಒಂದಾಗಿ, ತಮ್ಮ ತಮ್ಮಲ್ಲೇ ಚರ್ಚಿಸಿದವು. ತಮ್ಮಾಸೆಗಳನ್ನು ಬೂದಿ ಮಾಡಿದ  ದೈವದ ಮೇಲೆ ಹೋರಾಡುವುದೇ? ಇಲ್ಲ ಏನೇ ಬಂದರೂ ದೈವದ ಮೊರೆ ಹೋಗುವ ಮನುಜನನ್ನು ಹಿಂಸಿಸುವುದೇ? ಎಲ್ಲ ಆತ್ಮಗಳಿಗೆ ಮನುಜನನ್ನು ಹಿಂಸಿಸುವುದೇ ಉತ್ತಮ ಎನ್ನಿಸಿತು. ಎಲ್ಲರೂ ಮೊರೆ ಹೊಕ್ಕಾಗ ದೇವನಿಗೆ ಕೆಲಸ ಜಾಸ್ತಿಯಾಗುತ್ತದೆ. ಅಲ್ಲದೇ ತಮ್ಮ ಕೈ ಮೇಲಾದಾಗ ನಂಬಿದ್ದ ದೇವನನ್ನೇ ಮನುಜ ಬೈದುಕೊಳ್ಳುತ್ತಾನೆ. ಇದೇ ಸರಿಯಾದ ಉಪಾಯ ಎನ್ನಿಸಿ ಮುಂದಿನ ಕಾರ್ಯಾಚರಣೆಗೆ ಮುಂದಾದವು. 

 

ಅಂದಿನ ಆ ನಿರ್ಧಾರವೇ ಇಂದಿನ ಯುಗದಲ್ಲಿ ಮನುಜನನ್ನು ಕಾಡುತ್ತಿರುವ ನಾನಾ ರೀತಿಯ ಕಾಯಿಲೆಗಳು ... ತಾವು ಅನುಭವಿಸಿದ ಅಥವಾ ತಾವು ಅನುಭವಿಸಲಾರದ ವೇದನೆಗಳನ್ನು ರೋಗದ ರೂಪದಲ್ಲಿ ಬಂದು ಮನುಜ ಲೋಕವನ್ನು ಕಾಡುತ್ತಿರುವವರೆಲ್ಲ ರಕ್ಕಸರೇ ... 

 

ಕಂಸ’ನ ಸಾವಿನ ಕುರಿತಾದ ಭಯವೇ Thanatophobia; 

 

ಪೂತನಿಯು ಸ್ಥನದ ಕ್ಯಾನ್ಸರ್ ಅರ್ಥಾತ್ Breast Cancer; 

 

ಕೀಚಕ AIDS ಆಗಿ ಮೆರೆದಿದ್ದರೆ; 

 

ಬಕಾಸುರನು ಅನ್ನವೇ ಕಂಟಕವಾಗುವ Diabetes; 

 

ರಾವಣನು ತಲೆಶೂಲೆ ಅಥವಾ ಮೈಗ್ರೇನ್; 

 

ತನ್ನಪಾಡಿಗೆ ಮಲಗಿದ್ದವನನ್ನು ಎಬ್ಬಿಸಿ ಕೊನೆಗೆ ಸಾಯುವಂತೆ ಮಾಡಿದವರ ವಿರುದ್ದ ಕುಂಭಕರ್ಣ ನಿದ್ರಾಹೀನತೆ’ಯಾಗಿ ಕಾಡುತ್ತಿದ್ದಾನೆ;

 

ತನಗಿಲ್ಲದ ರಕ್ತ ಮತ್ತೊಬ್ಬರಿಗೇಕೆ ಎಂದು ರಕ್ತ ಬೀಜಾಸುರ Anemia ಆಗಿದ್ದಾನೆ;

 

ಎಷ್ಟು ಬಗೆದರೂ ಮತ್ತೆ ಒಂದಾಗಿ ಮನುಜನನ್ನು ಕೊಲ್ಲುವ ಕ್ಯಾನ್ಸರ್ ಕಣಗಳೇ ಜರಾಸಂಧ; 

 

=====

ದೇವಿ ಕಥೆಗಳಲ್ಲಿ ಕಂಡು ಬರುವ ಪ್ರಮುಖ ಅಂಶವೆಂದರೆ, ದೇವಿಯು ದುಷ್ಟ ಶಿಕ್ಷಣಕ್ಕಾಗಿ ರಕ್ಕಸ ಸಂಹಾರಕ್ಕೆಂದು ಅವತರಿಸುತ್ತಾಳೆ. ಹಳ್ಳಿಗಾಡಿನಲ್ಲಿ ರೋಗ ನಿರ್ಮೂಲವಾಗಲೆಂದು ಆ ರೋಗದ ಹೆಸರಲ್ಲಿ ದೇವಿಗುಡಿ ಕಟ್ಟಿ ಪೂಜಿಸುತ್ತಾರೆ. ಈ ಸಂಬಂಧ ನೋಡಿದಾಗ ರೋಗಗಳೇ ರಕ್ಕಸರು ಎಂದು ಅನ್ನಿಸುವುದಿಲ್ಲವೇ?

 

 

ಇರಲಿ, ನಾ ಹೇಳಿರುವ ಪಟ್ಟಿ ಒಂದು ಉದಾಹರಣೆ ಮಾತ್ರ. ಪಟ್ಟಿಗೆ ನಿಮಗೆ ತೋಚಿದ್ದನ್ನೂ ಸೇರಿಸಬಹುದು ...

 

ಒಂದಂತೂ ನಿಜ, ಯಾವ ರೋಗ ಬಂದರೂ, ಬಾರದಿದ್ದರೂ ಶಕಟನನ್ನು ಹತ್ತಿ ಹೋಗಬೇಕಾದ್ದು ಮಾತ್ರ ತಪ್ಪುವುದಿಲ್ಲ. ಏನಂತೀರಿ ?

 

Comments